Friday 15 March 2013

ಪ್ರಾದೇಶಿಕತೆಯ ಅನಿವಾರ್ಯತೆಯಲ್ಲಿ ದೈವಶಾಸ್ತ್ರದ ಅಧ್ಯಯನ!


ಈ ದಿನಗಳಲ್ಲಿ ಪ್ರಾದೇಶಿಕ ದೈವಶಾಸ್ತ್ರದ ಸಾಧ್ಯತೆ ಮತ್ತು ಅಗತ್ಯತೆಯ ಬಗ್ಗೆ ವಸ್ತುನಿಷ್ಠತೆಯಿಂದ ಅವಲೋಕಿಸುವುದಕ್ಕಿಂತ ಅಪನಂಬಿಕೆಯ ಕಾಮಾಲೆ ಕಣ್ಣುಗಳಿಂದ ನೋಡುವವರೇ ಹೆಚ್ಚು. ಅದಕ್ಕೆ ಕಾರಣಗಳಿಲ್ಲ ಅಂತಲ್ಲ. ಆ ಕಾರಣಗಳ ಪ್ರಸ್ತಾಪ ಇಲ್ಲಿ ಮುಖ್ಯವೆನ್ನಿಸುವುದಿಲ್ಲ. ಆ ಉದ್ದೇಶ ಕೂಡ ಈ ಲೇಖನಕ್ಕಿಲ್ಲ. ಪ್ರಾದೇಶಿಕತೆಯೆಂಬುವುದು ಹೇಗೆ ದೈವಶಾಸ್ತ್ರದ ಅಧ್ಯಯನವನ್ನು ಶ್ರಿಮಂತಗೊಳಿಸಬಹುದೆಂಬ ಅಂಶವನ್ನು ಬಯಲಿಗೆಳೆಯುವ ಸಣ್ಣ ಪ್ರಯತ್ನವಿದು.

ಕ್ರೈಸ್ತ ಯಾಜಕ ಒಬ್ಬ ದೇವರ ವಕ್ತಾರ. ದೇವರ ಮತ್ತು ಜನರ ಮಧ್ಯ ನಿಂತಿರುವ ಅಧಿಕೃತ ಸೇತುಬಂಧು (ಕೊಂಡಿ). ಜನರ ಅಶೋತ್ತರಗಳನ್ನು ದೇವರಿಗೆ ಅರ್ಪಿಸಿ ದೇವರ ಚಿತ್ತವನ್ನು ಜನರಿಗೆ ತಿಳಿ ಹೇಳುವ ಪ್ರವಾದಿ, ಒಬ್ಬ ಧರ್ಮಗುರು. ಜನರನ್ನು ಮುನ್ನೆಡೆಸುವ ಒಬ್ಬ ಕುರಿಗಾಹಿ. ಆದ್ದರಿಂದ ಯಾಜಕನ ಜವಬ್ದಾರಿ ಸಾಮಾನ್ಯವಾದುದಲ್ಲ. ಕಟ್ಟುವ ಕೆಡುವ ಕಾರ್ಯ ಅವನದು. ತೆಗಳುವ ಹುರಿದುಂಬಿಸುವ ಮಾತು ಅವನು. ಪ್ರಜ್ಞೆಹೀನ ಸಮಾಜದಲ್ಲಿ ಅವನೊಬ್ಬ ದೇವಪಜ್ಞೆ. ಜನರ ಕೈಗಳಿಗೆ ಒಂದು ಊರುಗೋಲು ದನಿರಹಿತ ಜನರ ದನಿ ಅವನು. ಹತ್ತಾಶರಿಗೆ ಒಂದು ಆಶಾದನಿ ಅವನು. ಆದ್ದರಿಂದ ಯಾಜಕನಾಗಲು ಕರೆಯಲ್ಪಟ್ಟವನು ಸುಮಾರು ಹತ್ತರಿಂದ ಹದಿನೈದು ವರ್ಷಗಳ ತರಬೇತಿಯನ್ನು ಪಡೆಯುತ್ತಾನೆ. ಐಹಿಕ ವಿಷಯಗಳ ಜತೆ ಜತೆಗೆ ತತ್ವಶಾಸ್ತ್ರ ಮತ್ತು ದೈವಶಾಸ್ತ್ರ ವಿಷಯಗಳನ್ನು ಅಳವಾಗಿ ಅಧ್ಯಯನ ಮಾಡುತ್ತಾನೆ. ಅವನು ಹೊತ್ತುಕೊಳ್ಳುವ ಜವಬ್ದಾರಿಗೆ ಈ ರೀತಿಯ ತರಬೇತಿ ಬೇಕಾಗಿದ್ದೆ.

ಕ್ರೈಸ್ತ ಯಾಜಕನಾಗಲು ಬಯಸುವ ವ್ಯಕ್ತಿಗೆ, ದೈವಶಾಸ್ತ್ರದ ಅಧ್ಯಯನ ತರಬೇತಿಯ ಪ್ರಮುಖವಾದ ಮತ್ತು ಅಂತಿಮ ಘಟ್ಟ. ಅದು, ಕ್ರೈಸ್ತ ವಿಶ್ವಾಸವನ್ನು ಅರ್ಥಮಾಡಿಸುವ ಮತ್ತು ಗ್ರಹಿಕೆಯ ತೆಕ್ಕೆಗೆ ಬರಮಾಡಿಸುವ ಒಂದು ಶಾಸ್ತ್ರ. ಈ ಒಂದು ಘಟ್ಟದಲ್ಲಿ ಕ್ರೈಸ್ತ ವಿಶ್ವಾಸದ ಒಳಹು ಮತ್ತು ದೇವರ ಪರಮಾಭಿವ್ಯಕ್ತಿಗಳಾದ ದೈವ ಪ್ರಕಟನೆ, ದೇವರರಕ್ಷಣಾಕಾರ್ಯ, ಸಂಸ್ಕಾರಗಳು, ವಿಶ್ವಾಸ ಪ್ರಮಾಣ ಇತ್ಯಾದಿಗಳನ್ನು ಹಿಡಿ ಹಿಡಿಯಾಗಿ ಅಭ್ಯಾಸಿಸುತ್ತಾನೆ. ಜತೆಗೆ ಆದಿಕ್ರೈಸ್ತರ ವಿಶ್ವಾಸದ ಅಭಿವ್ಯಕ್ತಿಯೇ ಎನ್ನಬಹುದಾದ, ದೇವರ ರಕ್ಷಣಾ ಇತಿಹಾಸದ ಶ್ರೀಗ್ರಂಥ ಬೈಬಲ್‍ನ್ನು ಅದರಲ್ಲಿರುವ ಹಲವಾರು ಪುಸ್ತಕಗಳನ್ನು, ಅವುಗಳ ಚಾರಿತ್ರಿಕ ಹಿನ್ನಲೆ, ಉದ್ದೇಶ ಇತ್ಯಾದಿಗಳನ್ನು ರೂಪ, ಐತಿಹಾಸಿಕ, ಸಂಪಾದನೀಯ ಹಾಗು ಪಠ್ಯ ವಿಮರ್ಶೆಗಳಿಂದ ಅಳವಾಗಿ ತಿಳಿದುಕೊಳ್ಳುತ್ತಾನೆ. ಆದ್ದರಿಂದ ಕ್ರೈಸ್ತ ಧರ್ಮದ ಸಾರವನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಅಲ್ಪಸ್ವಲ್ಪ ಕರಗತ ಮಾಡಿಸುವುದು ಒಂದು ಭಾಗ ದೈವಶಾಸ್ತ್ರದು. ಜತೆಗೆ ಕೈಸ್ತ ಧರ್ಮದ ಮೂಲ ವಿಶ್ವಾಸವನ್ನು ಪರಿಚಿಯಿಸಿ ಅವನಿಗೆ ಅರ್ಥಮಾಡಿಸುತ್ತಲೇ ಅವನಲ್ಲಿ ಒಂದು ರೀತಿಯ ಮನಸ್ಥಿತಿ, ಜಾಗೃತಿ ಮತ್ತು ಸೂಕ್ಷ್ಮತೆಯನ್ನು ಕಟ್ಟಿಕೊಡುವ ಒಂದು ಪಕ್ವತೆಯ ಕಾಲವು ಹೌದು. ಈ ಕಾರಣದಿಂದಾಗಿ ದೈವಶಾಸ್ತ್ರವೆಂಬುವುದು ದೇವರ ಬಗೆಗಿನ ನಮ್ಮ ಜನರ ಅಸಮರ್ಪಕ ಮಾತು ಅಥವಾ ಹೇಳಿಕೆಗಳನ್ನು ಗ್ರಹಿಕೆಗೆ ಒಳಪಡಿಸುವುದು; ನಮ್ಮ ಜನರ ಜೀವನ ಸನ್ನಿವೇಶವನ್ನು ಆಗುಹೋಗುಗಳನ್ನು ಬೈಬಲ್ ಮೌಲ್ಯಗಳ ಕಣ್ಣುಗಳಲ್ಲಿ ಕಾಣುವ ವಿಮರ್ಶಾತ್ಮಕ ಪ್ರಕ್ರಿಯೆಯೂ ಹೌದು. ಆದ್ದರಿಂದ ದೈವಶಾಸ್ತ್ರವೆಂಬುವುದು ನಾಲ್ಕುಗೋಡೆಗಳ ಮಧ್ಯೆ ಕೈಗೊಂಡು ಮೂರು ಅಥವಾ ನಾಲ್ಕು ವರ್ಷಗಳ ಅವಧಿಯಲ್ಲಿ ಮುಗಿಸಿಬಿಡುವ ಒಂದು ಅಧ್ಯಯನವಲ್ಲ, ಉರುಹಚ್ಚಿ ಪರೀಕ್ಷೆ ಬರೆದು ಪಾಸ್‍ಮಾಡಿಬಿಡುವಂತ ಅಭ್ಯಾಸವಲ್ಲ. ಈ ಘಟ್ಟದಲ್ಲಿ ಅವನು ಪಡೆದುಕೊಂಡ ಗ್ರಹಿಕೆ, ವಿಧಾನ, ಕ್ರಮವನ್ನು ಪ್ರತಿದಿನದ ವಾಸ್ತವಕ್ಕೆ ಅಳವಡಿಸಿ ವಿಶ್ವಾಸಕ್ಕೆ ಪ್ರಸ್ತುತತೆಯನ್ನು ತಂದುಕೊಳ್ಳುವ ಒಂದು ನಿರಂತರ ಪ್ರಕ್ರಿಯೆ, ಕ್ರಮ, ದೃಷ್ಟಿ ಮತ್ತು ಸೃಷ್ಟಿ.

ಈ ಒಂದು ಹಿನ್ನಲೆಯಲ್ಲಿ ಪ್ರಾದೇಶಿಕತೆ ನಮ್ಮ ದೇವಶಾಸ್ತ್ರೀಯ ಅಭ್ಯಾಸಕ್ಕೆ, ಅಧ್ಯಯನಕ್ಕೆ ಮತ್ತು ನಿರಂತರ ಕ್ರಿಯೆಗೆ ಹೇಗೆ ಉಪಯುಕ್ತವಾಗಬಹುದು? ಎಂಬ ಪ್ರಶ್ನೆಗೆ ಉತ್ತರದ ಸುರುಳಿಯನ್ನು ಬಿಚ್ಚಿಡುವುದೇ ನನ್ನ ಮುಂದಿನ ಕೆಲಸ.

೧.ಪ್ರಾದೇಶಿಕತೆ ಅಧ್ಯಾಯನಕ್ಕೆ ಬಹು ಮುಖ್ಯವಾಗಿ ಬೇಕಾಗಿರುವುದು ಸ್ಥಳೀಯ ಭಾಷೆ, ಸಂಸ್ಕೃತಿಗಳ ಗ್ರಹಿಕೆ ಮತ್ತು ಅವುಗಳೊಡನೆ ಬೆಳೆಸಿಕೊಳ್ಳಬೇಕಾದ ಆತ್ಮೀಯತೆ. ಇದು ಜನರ ನಾಡುಮಿಡಿತವನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ನುಡಿಗಟ್ಟುಗಳನ್ನು, ರೂಪಕಗಳನ್ನು ಹಿಡಿಯಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುವುದಲ್ಲದೇ ನಮ್ಮ ವಿಶ್ವಾಸದ ಅಭಿವ್ಯಕ್ತಿಯನ್ನು ಸರಳೀಕರಿಸಿ ನಮ್ಮನ್ನು ಸ್ಥಳೀಕರಣಗೊಳಿಸುಬಿಡುತ್ತದೆ. ಆಗ ನಮ್ಮ ಮಾತು, ಬೋಧನೆಗಳು ಕೃತಕ ಬಟ್ಟೆಯನ್ನು ಕಳಚಿ ಚಿಗರೊಡೆಯುವ ಬೀಜಗಳಾಗಿಬಿಡುತ್ತವೆ.  ಅನ್ಯನೆಂಬ ಆಪಾದನೆಗೆ ನೆಲೆ ಇಲ್ಲದಂತಾಗುತ್ತದೆ.  ಈ ಒಂದು ಕ್ರಿಯೆಯಲ್ಲಿ ಸಾಹಿತ್ಯವು ಕೂಡ ಯಥ್ಛೇಚವಾಗಿ ಬೆಳೆಯುತ್ತದೆ. ಈ ದಿನಗಳಲ್ಲಿ ಆನೇಕ ಭಾರತೀಯ ಸಿನಿಮಾಗಳು ಹಾಲಿವುಡ್ ಸಿನಿಮಗಳ ಕಥೆಯನ್ನು ಪಡೆದು, ಆ ಕಥೆಗಳನ್ನು ನಮ್ಮ ಜನರ ಸಂಸ್ಕೃತಿಗೆ ಅಳವಡಿಸಿ, ನಮ್ಮ ಜನರ ಭಾಷೆಯಲ್ಲಿ ಸಾದರಪಾಡಿಸಿ, ಯಶಸ್ಸುಗಳಿಸುತ್ತಿರುವುದು ಜನಜನಿತ. ಈ ರೀತಿಯ ಪ್ರವೃತ್ತಿ ವ್ಯಾಪಾರ ಪ್ರಪಂಚದಲೂ ಕಾಣಬಹುದು. ತಾವು ಉತ್ಪಾದಿಸುವ ವಸ್ತುಗಳ ರೂಪ ಲಕ್ಷಣಗಳನ್ನು ಸ್ಥಳೀಯ ಸಂಸ್ಕೃತಿಗೆ, ಜನರ ಆಸೆ ಅಭಿಲಾಸೆಗೆ ಅನುಗುಣವಾಗಿ ಉತ್ಪಾದಿಸಿ, ಉತ್ಪಾದನೆಯ ಬೇಡಿಕೆ ಹೆಚ್ಚಿಸಿಕೊಳ್ಳುತಾರೆ. ಲೌಕಿಕತೆಯಲ್ಲಿ ಈ ರೀತಿಯ ಪ್ರವೃತಿ, ಧಾರ್ಮಿಕತೆಯಲ್ಲೂ ಕಾಣಬೇಕಾಗಿದೆ. ನಮ್ಮ ಧರ್ಮದ ಮೂಲತತ್ವಗಳನ್ನು ಮತ್ತು ಸಂಪ್ರದಾಯವನ್ನು ನಮ್ಮ ಜನರಿಗೆ ತಿಳಿಸಲು ಮತ್ತು ಕ್ರಿಸ್ತನ ಮೌಲ್ಯಗಳನ್ನು ಇತರರಿಗೂ ದತ್ತಿಯಾಗಿಸಲು ನಮ್ಮ ಜನರ ಸಂಸ್ಕೃತಿಯನ್ನು ತಿಳಿಯಬೇಕಾಗಿದೆ. ಅವರು ಅಭಿವ್ಯಕ್ತಿಗೊಳ್ಳಿಸುವ ರೀತಿ, ಅವರ ಯೋಚನಾ ಕ್ರಮವನ್ನು, ಅಲೋಚನೆಗಳನ್ನು ತಿಳಿಯಬೇಕಾದ ಅನಿವಾರ್ಯತೆ ನಮ್ಮ ಹೆಗಲಿಗಿದೆ. ಇದ್ದಾದಾಗ ಮಾತ್ರ ನಾವು ಕ್ರಿಸ್ತನ ಪರಿಣಾಮಕಾರಿ ರಾಯಭಾರಿಗಳಾಗಬಹುದು. ಇಂತಹ ನಿಕಟ ಪರಿಚಯ ಪ್ರಾದೇಶಿಕ ದೈವಶಾಸ್ತ್ರದಿಂದ ಮಾತ್ರ ಸಾಧ್ಯವೆಂಬುದು ಅನುಭವದ ಮಾತು. ಈ ನಿಟ್ಟಿನಲ್ಲಿ ಕ್ರಿಸ್ತ ನಮಗೆ ಉತ್ತಮ ಉದಾಹರಣೆಯಾಗಿ ನಿಲ್ಲುತ್ತಾನೆ. ಭಗವಂತನ ಬಗ್ಗೆ ತಿಳಿಸಲು, ಸ್ವರ್ಗರಾಜ್ಯವನ್ನು ವರ್ಣಿಸಲು ತನ್ನ ಜನರು ಬಳಸುತ್ತಿದ್ದ ರೂಪಕಗಳೇ ಅವನ ಸಾಮತಿಯ ಕಥಾವಸ್ತುಗಳಾದವು. ಅವನ ಬೋಧನೆಯಲ್ಲಿ ಸೃಜನಾತ್ಮಕತೆ ಇತ್ತು, ಸಾಮಾನ್ಯ ಜನರಿಗೆ ಬಹುಬೇಗ ತಲುಪುವ ಸರಳತೆ ಮತ್ತು ಮಣ್ಣಿನವಾಸನೆ ಅವುಗಳಲ್ಲಿತ್ತು, ಜನರ ನೋವಿತ್ತು, ಮೌಲ್ಯಗಳ ದೃಷ್ಟಿಯಲ್ಲಿ ವಿಮರ್ಶಿಸಿದ ತಪ್ಪುಒಪ್ಪುಗಳ ಪಾಠವಿತ್ತು. ಜನರ ನಿಕಟ ಪರಿಚಯ, ಬದುಕಿನ ವಾಸ್ತವದ ಅರಿವು ಕ್ರಿಸ್ತನನ್ನು ಒಬ್ಬ ಮಹಾನ್ ದೇವರ ವಕ್ತಾರನನ್ನಾಗಿ ಮಾಡಿತ್ತು. ಅವನ ದೈವಶಾಸ್ತ್ರ ಎಂದೂ ಸಿದ್ಧವಸ್ತುವಾಗಿರಲಿಲ್ಲ. ಬದಲಾಗಿ ದೈವಾನುಭವದ ಆಧಾರದ ಮೇರೆಗೆ ದೈನಂದಿನ ಜೀವನದ ಚಿಂತನಾಪ್ರಕ್ರಿಯೆಯಿಂದ ಉಗಮವಾದ ದಿವ್ಯ ಚೇತನವಾಗಿತ್ತು. ಅವನ ದೈವಶಾಸ್ತ್ರ ಚಿಂತನಾಕ್ರಮವು ಎಂದೂ ಜೀವನ ಸನ್ನಿವೇಶವನ್ನು ಹೊರಗಿಡಲಿಲ್ಲ. ಆದ್ದರಿಂದ ಅವನ ದೇವರ ಬಗೆಗಿನ ಮಾತುಗಳು ಪ್ರಾಮುಖ್ಯತೆಯನ್ನು ಪ್ರಾಶಸ್ತ್ಯವನ್ನು ಕಳೆದುಕೊಳ್ಳದ ಕಾಲಾತೀತ ಸತ್ಯಗಳಾದವು.

೨. ದೇವರು ತಮ್ಮನ್ನು ಪ್ರಕಟಿಸಲು ಉಪಯೋಗಿಸಿಕೊಳ್ಳದ ಸಂದರ್ಭ ಸಾಧನಗಳಿಲ್ಲ, ಕೈಬಿಟ್ಟ ವ್ಯಕ್ತಿಗಳಿಲ್ಲ. ಐತಿಹಾಸಿಕವಾಗಿ ನಮ್ಮ ಬದುಕಿನ ಪ್ರತಿದಿನದ ಹಾಗುಹೋಗುವುಗಳಲ್ಲಿ ತನ್ನನ್ನೇ ತಿಳಿಯಪಡಿಸಿ, ಪ್ರಕಟಿಸಿದ್ದ ಸತ್ಯಗಳನ್ನು ಗಟ್ಟಿಮಾಡಲು ದೇವರು ನಮ್ಮ ಬದುಕಗಳನ್ನು ಹಾಸುಹೊಕ್ಕಿ ಅವನ ಅನುಭವಕ್ಕೆ ಅಣಿಮಾಡಿಕೊಡುತ್ತಾನೆ. ಇಂತಹ ಆಧ್ಯಾತ್ಮಿಕ ಅನುಭವಗಳು ಮಾತಿನ ಕೈಹಿಡಿದು ನಮ್ಮ ಮಾತುಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತವೆಯಾದರೂ ಅವು ನಮ್ಮ ಅಸಮರ್ಪಕ ಮಾತುಗಳೇ. ಏಕೆಂದರೆ ಮಾತೆಂಬುವುದು ಅನುಭಗಳನ್ನು ಸಂಪೂರ್ಣವಾಗಿ ಹಿಡಿದಿಡಲಾಗದ ಒಂದು ಅಶಕ್ತ ಸಂಜ್ಞೆ. ಅವು ಅಗಾಧ ಅನುಭವಗಳ ಅಭಿವ್ಯಕ್ತಾ ಕಿಂಡಿಗಳಷ್ಟೇ. ಈ ನಿಟ್ಟಿನಲ್ಲಿ, ದೈವಶಾಸ್ತ್ರವೆನ್ನುವುದು ದೇವರ ಬಗೆಗಿನ ನಮ್ಮ ಜನರ ಅಸಮರ್ಪಕ ಮಾತು ಅಥವಾ ಹೇಳಿಕೆಗಳನ್ನು ಗ್ರಹಿಕೆಗೆ ಒಳಪಡಿಸುವ ಒಂದು ಕ್ರಿಯೆ. ಜನರ ವಿಭಿನ್ನ ಅನುಭವಗಳ ಪ್ರಕ್ರಿಯೆಯಿಂದಾಗಿ ದೇವರ ಬಗೆಗಿನ ಜನರ ಮಾತುಗಳು, ನಂಬಿಕೆಗಳು, ನಿಲುವುಗಳು ಸಹ ಭಿನ್ನವಾಗಿರುತ್ತವೆ. ಈ ರೀತಿಯ ವಿಭಿನ್ನತೆ ಸಹಜ ಮತ್ತು ಅತ್ಯವಶ್ಯಕ ಕೂಡ. ಈ ನಿಟ್ಟಿನಲ್ಲಿ ನಮ್ಮ ಜನರ ದೇವರ ಬಗೆಗಿನ ಅಸಮರ್ಪಕ ಮಾತುಗಳ ಭಿನ್ನತೆ ಮತ್ತು ಸಾಮ್ಯತೆಗಳನ್ನು ಕಾಣಲು ಅವುಗಳ ಹುಟ್ಟುಗಳನ್ನು, ಅನುಭವಗಳ ಹಿನ್ನಲೆಗಳನ್ನು ಅಳವಾಗಿ ಪರಿಶೋಧಿಸಲು ಪ್ರಾದೇಶಿಕ ದೈವಶಾಸ್ತ್ರ ಒಂದು ವೇದಿಕೆಯನ್ನು ಸೃಷ್ಟಿಸಿಕೊಡುತ್ತದೆ ಎಂದರೆ ಅತ್ಯುಕ್ತಿಯಾಗಾಲಾರದು. ಬಹುಧರ್ಮಗಳ ನಾಡಿನಲ್ಲಿ ಇಂಥದೊಂದು ಅರಿವು ಅಭ್ಯಾಸ, ಪರಿಶೋಧನೆ ಅತ್ಯಗತ್ಯ. ಇದು ಅಂತರ್ ಧರ್ಮೀಯ ಅಧ್ಯಯನಕ್ಕೆ ಮತ್ತು ಸಂವಾದಕ್ಕೆ ಅತ್ಯಂತ ಸೂಕ್ತವಾದ ಪ್ರಕ್ರಿಯೆ ಕೂಡ. ಇಲ್ಲವಾದಲ್ಲಿ ನಮ್ಮ ದೈವಶಾಸ್ತ್ರವು ಜನರ ಅಗತ್ಯ ಪರಿಸ್ಥಿತಿಗೆ ಸ್ವಂದಿಸದೆ, ಹಳಸಿದ, ಕೆಲಸಕ್ಕೆ ಬಾರದ ಬೌದ್ಧಿಕ ಕಾರ್ಯವಾಗಿ ಜನರಿಂದ ದೂರವಾಗುವುದರಲ್ಲಿ ಅನುಮಾನವೇ ಇಲ್ಲ. ಇಂತಹ ಒಂದು ಕ್ರಿಯೆಗೆ ಪ್ರಾದೇಶಿಕ ದೈವಶಾಸ್ತ್ರ ಬಹು ಮುಖ್ಯವೆನ್ನಿಸುತ್ತದೆ ಮತ್ತು ಇಂತಹ ಕ್ರಿಯೆಯನ್ನು ಪರಿಣಾಮಕಾರಿಯಾಗಿಸುವುದೇ ಪ್ರಾದೇಶಿಕ ದೈವಶಾಸ್ತ್ರ.

೩.ಇನ್ನೊಂದು ಕಡೆ, ದೈವಶಾಸ್ತ್ರವೆನ್ನುವುದು ನಮ್ಮ ಜನರ ಜೀವನ ಸನ್ನಿವೇಶವನ್ನು ಬೈಬಲ್ ಮೌಲ್ಯಗಳ ದೃಷ್ಟಿಯಲ್ಲಿ ಕಾಣುವ ವಿಮರ್ಶಾತ್ಮಕ ಪ್ರಕ್ರಿಯೆ. ಈ ಒಂದು ಪ್ರಕ್ರಿಯೆ ಪರಿಸ್ಥಿತಿಯ ತಪ್ಪುಒಪ್ಪುಗಳನ್ನು ತೋರಿಸುತ್ತಾ ತಪ್ಪುಗಳನ್ನು ಸರಿಪಡಿಸುವ ಹೋರಾಟಕ್ಕೆ ಅಣಿಮಾಡಿಕೊಡುತ್ತದೆ.  ಅದ್ದರಿಂದ ಜನರ ಪರಿಸ್ಥಿತಿಯ ಜ್ಞಾನ, ವಾಸ್ತವದ ತಿಳುವಳಿಕೆ ದೈವಶಾಸ್ತ್ರೀಯ ಚಿಂತನಾಪ್ರಕ್ರಿಯೆಗೆ ಮುಖ್ಯವಾಗಿ ಬೇಕಾದಂತ ಅಂಶ. ಈ ರೀತಿಯ ಗ್ರಹಿಗೆಯನ್ನು ಪ್ರಾದೇಶಿಕ ದೈವಶಾಸ್ತ್ರದ ತರಬೇತಿ ಸಮರ್ಪಕವಾಗಿ ಒದಗಿಸಬಲ್ಲದು ಎಂದು ನಿರ್ಭಯದಿಂದ ಹೇಳಬಹುದು. ಈ ಅರಿವು ಮತ್ತು ಅನುಭವದಿಂದ ರೂಪಿತಗೊಳ್ಳುವ ದೈವಶಾಸ್ತ್ರವು ಜೀವನಕ್ಕೆ ಹೊಸ ಅರ್ಥವನ್ನು ಮತ್ತು ಧರ್ಮಕ್ಕೆ ಪ್ರಸ್ತುತತೆಯನ್ನು ನೀಡುವುದರಲ್ಲಿ ಎರಡು ಮಾತಿಲ್ಲ. ಇಂತಹ ದೈವಶಾಸ್ತ್ರದಲ್ಲಿ ಖಾಲಿಮಾತುಗಳಿರುವುದಿಲ್ಲ. ಜನರ ವಿಶ್ವಾಸ, ದೈವಾನುಭವ ಮತ್ತು ಜೀವನ ಸನ್ನಿವೇಶಗಳ ಪರಸ್ವರ ಸಂವಾದಿಂದ ಮೂಡಿಬರುವ ಅರ್ಥಗರ್ಭಿತ ಮಾತುಗಳಿರುತ್ತವೆ.

ಹೌದು ಕ್ರೈಸ್ತ ವಿಶ್ವಾಸವು ನಮ್ಮ ಮಣ್ಣಿನಲ್ಲಿ ಮಿಂದು ಅರಳುತ್ತಾ ಅಭಿವ್ಯಕ್ತವಾಗಬೇಕಾಗಿದೆ. ಅದು ನಮ್ಮ ಧರ್ಮಸಭೆಯ ಅಭಿಲಾಸೆಯೂ ಹೌದು. ಕ್ರೈಸ್ತ ವಿಶ್ವಾಸವನ್ನು ಸ್ಥಳೀಯ ಸಂಸ್ಕೃತಿ ಅಥವಾ ಸಂಸ್ಕೃತಿಗಳಲ್ಲಿ ಕರಗತವಾಗಿಸಬೇಕು, ವಿಲೀನಗೊಳಿಸಬೇಕು, ಅದು ನಮ್ಮದೇ ರೂಪಕಗಳಲ್ಲಿ ಅಭಿವ್ಯಕ್ತಗೊಳಬೇಕು ಈ ಹಿನ್ನಲೆಯಲ್ಲಿ ಎರಡನೆಯ ಅರಳಪ್ಪ ಚಿನ್ನಪ್ಪರು ಈ ರೀತಿ ಹೇಳುತ್ತಾರೆ “ಸಂಸ್ಕೃತಿಯ ಅಂಗವಾಗದ ಶ್ರದ್ಧೆ ಅಥವಾ ವಿಶ್ವಾಸ ಪರಿಪೂರ್ಣ ವಿಶ್ವಾಸವಲ್ಲ”. ಇಂತಹ ಕ್ರಿಯೆ ಪ್ರಕ್ರಿಯೆಗೆ ಪ್ರಾದೇಶಿಕ ದೈವಶಾಸ್ತ್ರ ಭೂಮಿಕೆ, ನೆಲೆ ಮತ್ತು ಪ್ರಜ್ಞೆಯನ್ನು ರೂಪಿಸುತ್ತದೆ ಎಂಬುವುದು ಅನುಭವದ ಮಾತು.

ದೈವಶಾಸ್ತ್ರೀಯ ಅಧ್ಯಯನ ಕೇವಲ ನಾಲ್ಕುಗೋಡೆಗಳ ಮಧ್ಯೆ ಮಾಡುವ ಅಧ್ಯಯನವಾದರೂ ಜನರ ಜೀವನದ ಸನ್ನಿವೇಶಗಳು, ಭಾಷೆ, ಸಂಸ್ಕೃತಿ, ದೈನಂದಿನದ ಆಗುಹೋಗುಗಳು, ರೂಪಕಗಳು ದೈವಶಾಸ್ತ್ರೀಯ ಅಧ್ಯಯನದ ಭಾಗಗಳಾಗಿರಬೇಕು. ಆಗ ಮಾತ್ರ ದೈವಶಾಸ್ತ್ರದ ಅಧ್ಯಯನಕ್ಕೆ ಅರ್ಥವಿರುತ್ತದೆ. ಪ್ರವಾದಿಯ ಬದುಕಿಗೆ ದಾರಿಮಾಡಿಕೊಡುತ್ತದೆ. ಧರ್ಮವು ಪ್ರಸ್ತುತತೆಯನ್ನು ಕಳೆದುಕೊಳ್ಳದೆ ಬದುಕನ್ನು ರೂಪಾಂತರಿಸುವ ಸಾಧನವಾಗುತ್ತದೆ. ಯಾಜಕ ಮತ್ತೊಬ್ಬ ಕ್ರಿಸ್ತನಾಗುತ್ತಾನೆ. ಈ ರೀತಿಯ ಕ್ರಿಯೆಯಲ್ಲಿ ಧರ್ಮದ ಪವಿತ್ರತೆಯನ್ನು ಕಾಪಾಡಿಕೊಳ್ಳುವುದು ಹಾಗು ಧರ್ಮದ ಮೂಲಭೂತ ತತ್ವಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಜತೆಗೆ ಪ್ರಾದೇಶಿಕ ದೈವಶಾಸ್ತ್ರವನ್ನು ಕಲಿಸುವ ಬೋಧಕರ ತಂಡದ ತಯಾರಿ ಕೂಡ ಅಷ್ಟೇ ಮುಖ್ಯವೆನ್ನಿಸುತ್ತದೆ.

ಈ ನಿಟ್ಟಿನಲ್ಲಿ ಜೆಸ್ವಿಟ್ಸ್‌ರ ಕೊಡುಗೆ ಅಪಾರ. ತಮ್ಮ ಸಭೆಯ ಯಾಜಕ ಅಭ್ಯರ್ಥಿಗಳ ತರಬೇತಿಯ ಪ್ರಯುಕ್ತ ಪ್ರಾದೇಶಿಕ ದೈವಶಾಸ್ತ್ರೀಯ ಕೇಂದ್ರವನ್ನು ಸ್ಥಾಪಿಸಿ, ಅರ್ಥಗರ್ಭಿತ ದೈವಶಾಸ್ತ್ರಿಯ ಅಧ್ಯಯನಕ್ಕೆ ಅಣೆಮಾಡಿಕೊಟ್ಟಿದೆ. ಈ ಯಶಸ್ಸಿನ ಪ್ರಯೋಗ ನಮ್ಮ ಕರ್ನಾಟಕದ ಮಹಾಧರ್ಮಕ್ಷೇತ್ರಗಳಲ್ಲಿ ಮೊಳಕೆಯೊಡೆಯಲಿ. ಸ್ಥಳದ ಸಾಂಸ್ಕೃತಿಕ ಹಾಗು ಜನರ ಜೀವನ ಸನ್ನಿವೇಶಗಳನ್ನು ಆಧರಿಸಿ ಅರ್ಥಗರ್ಭಿತವಾದ ದೈವಶಾಸ್ತ್ರೀಯ ಅಧ್ಯಯನಕ್ಕೆ ನಾಂದಿ ಹಾಡಲಿ.
ಜೋವಿ ಯೇ.ಸ
Read more!

ಪ್ರೀತಿಯ ಅನು..
ದಡೂತಿಯಾಗಿ ಕಾಣುತ್ತಿದ್ದ ಗಿಡ್ಡನೆಯ ಮನುಷ್ಯ ಪಾಧರ್ ವಿಲ್ಫ಼್ರೆಡ್ ಬರಿಗೈಯಲ್ಲಿ ಬಂದಿರಲಿಲ್ಲ. ಮಾರ್ಕೆಟ್‍ನಲ್ಲಿ ಕಣ್ಣು ಕೈಗಳಿಗೆ ಸಿಕ್ಕದ್ನೆಲ್ಲಾ ಬಾಚಿಕೊಂಡು ಬಂದಂತೆ ಕಂಡುಬಂದರು. ಹಾಲು, ಹಣ್ಣು, ಮಾಂಸ, ಸಾಪ್ಟ್‍ಡ್ರಿಂಗ್ಸ್, ಬ್ರೆಡ್, ತರ್ಕಾರಿ ತರತರವಾದ ತಿಂಡಿತಿನಿಸುಗಳ ತಂದು ರುಚಿಯನ್ನು ಮರೆತಿದ್ದ ನಮ್ಮ ನಾಲಿಗೆ ಬಾಯಿಗಳಿಗೆ ರುಚಿಯನ್ನು ಮರುಕಳಿಸುವ ಪ್ರಯತ್ನ ಮಾಡಿದ್ದರು. “ಬಂದ್‍ನಿಂದ ಏನು ತರ್ಲಿಕೆ ಆಗ್ಲಿಲ್ಲ… ಅಂಗ್ಡಿಗಳೆಲ್ಲಾ ಮುಚ್ಚಿದವು” ಎಂದು ನಿಮಿಷಕ್ಕೊಮ್ಮೆ ಹೇಳಿ ಹೇಳಿ ಮರುಗುತ್ತಿದ್ದ ಪಾಧರ್‍ ವಿಲ್ಫ಼್ರೆಡ್‍ಗೆ “ಸಾಕಪ್ಪ ನೀನು ಇಷ್ಟೇಲಾ ತಂದು ನಮ್ ಮುಂದೆ ಗುಡ್ಡೆ ಆಕಿದ್ಯಲ್ಲ ಅಷ್ಟೇ ಸಾಕು, ನೀನು ತಂದಿರುವ ತಿಂಡಿತಿನಿಸುಗಳಿಗಿಂತಲೂ ನಿನ್ನ ಹೃದಯದ ಉದಾರತೆಯೇ ನಾನು ಮೆಚ್ಚಿದ್ದು” ಎಂದು ಹೇಳಿಬಿಡಬೇಕೆಂದುಕೊಂಡರು ಹೇಳಲಿಲ್ಲ.
ಅರಳು ಹುರಿದಂತೆ ಪಟ ಪಟ ಎಂದು ಮಾತಾನಾಡುತ್ತಿದ್ದ ವಿಲ್ಫ಼್ರೆಡ್ ಆಗಾಗ ತಾನು ಮಾಡಲಾಗದನ್ನು ನೆನೆಸಿಕೊಂದು ನಿಟ್ಟುಸಿರು ಬಿಡುತ್ತಿದ್ದರು.  ಬಡಜನರ ಉದ್ಧಾರಕ್ಕೆ ಮಾಡಿದ್ದನ್ನು ಲೆಕ್ಕ ಮಾಡದೆ, ತನ್ನ ಕೈಯಲ್ಲಿ ಮಾಡಲಾಗದನ್ನು ಕೆದಕಿ ಕೆದಕಿ ನೆನಪಿಗೆ ತಂದು ಲೆಕ್ಕ ಒಪ್ಪಿಸುತ್ತಿದ್ದನ್ನು ಕೇಳಿ ನನಗೆ ಸ್ವಲ್ಪ ಕೋಪವು ಬಂತು. ಹೌದು ಜೀವಪೂರಕ ಕಾರ್ಯಗಳಲ್ಲಿ ತೊಡಗಿರುವ ಜನರ ಮನಸ್ಥಿತಿಯೇ ಹೀಗೆ ಏನೋ. ಮಾಡಿದಷ್ಟರಲ್ಲಿ ತೃಪ್ತಿ ಇರುವುದಿಲ್ಲ, ಮಾಡಬೇಕಾದನ್ನು ಹಿಡಿ ಹಿಡಿಯಾಗಿ ಲೆಕ್ಕ ಮಾಡುವುದನ್ನು ಬಿಡುವುದಿಲ್ಲ. ಇದೇ ಮನಸ್ಥಿತಿಯ ವಿಲ್ಫ಼್ರೆಡ್ ನಾನು ಬೀಡು ಬಿಟ್ಟಿರುವ ಮವೈತ್ ಎಂಬ ಬೆಂಗಾಡಿನಲ್ಲಿ ಸುಮಾರು ಹತ್ತುವರ್ಷಗಳ ಕಾಲ ಅವಿರತವಾಗಿ ದುಡಿದ್ದು, ಪರಿವರ್ತನೆಗೆ ಕಾರಣಕರ್ತರಾಗಿದ್ದರು. ಅದ್ವಿತೀಯ ಸಾಧನೆಗೆ ಭಾಜನರಾದರು. ೧೨ ವರ್ಷಗಳ ಹಿಂದೆ ಯಾರೋ ಪ್ರಾರಂಭಿಸಿದ್ದ ಶಾಲೆ ಇವರ ಕೈಸೇರಿ ಬೆಳೆದು ಈವತ್ತು ಸುಮಾರು ೬೦೦ ಹುಡುಗ ಹುಡುಗಿಯರಿಗೆ ಜ್ಞಾನದೇಗುಲವಾಗಿದೆ.  ಎಷ್ಟೂ ಹುಡುಗ ಹುಡುಗಿಯರು ಈ ಶಾಲೆಯಿಂದ ಶಿಕ್ಷಣ ಪಡೆದು ಜೀವನಾಧಾರವನ್ನು ಕಂಡುಕೊಂಡಿದ್ದಾರೆ. ಕೊಲ್ ಮೈನ್ಸ್‍ಗಳಲ್ಲಿ ದುಡಿಯುತ್ತಿದ್ದ ಹುಡುಗರನ್ನು ಕರೆತಂದ ಪಾಧರ್, ಅವರನ್ನು ಶಾಲೆಗೆ ಹಚ್ಚಿ ಶಿಕ್ಷಣಕೊಟ್ಟದರಿಂದ ಇವತ್ತು ಅದೇ ಹುಡುಗರು ಅರಿವು ನೀಡುವ ಶಿಕ್ಷಕರಾಗಿದ್ದಾರೆ.
ಮೊನ್ನೆ ಪಾಧರ್ ವಿಲ್ಫ಼್ರೆಡ್ ನಮ್ಮ ಮನೆಗೆ ಬಂದಾಗ ಅನೇಕ ಯುವಕ ಯುವಕಿಯರು, ವಿದ್ಯಾರ್ಥಿಗಳು, ಮಹಿಳೆಯರು ಅವರನ್ನು ಭೇಟಿ ಮಾಡಲು ಸಾಲು ಸಾಲಾಗಿ ಬರುತ್ತಿದ್ದರು. ಬಂದವರನ್ನು ಪ್ರೀತಿಯಿಂದ, ಆದರದಿಂದ ಮಾತನಾಡಿಸಿ ಕಳುಹಿಸಿಕೊಡುತ್ತಿದ್ದ ಪಾಧರ್ ವಿಲ್ಫ಼್ರೆಡ್ ನನಗೆ ತಿಳಿಯದಂತೆ ಮಾನವತ್ವದ ಹಾಗು ಉದಾರತೆಯ ರೂಪಕವಾಗಿ ಮೆಲ್ಲನೆ ನನ್ನ ಮನ ಸೇರಿಬಿಟ್ಟಿದ್ದರು.
ಜೋವಿ ಯೇ.ಸ
Read more!

ಹಾರೋಬೆಲೆಗೆ ಈ ಹೆಸರು ಹೇಗೆ ಬಂದಿರಬಹುದು?????


ಹಾರೋಬೆಲೆ, ಇದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿರುವ ಎಂಬ ಒಂದು ಚಿಕ್ಕ ಗ್ರಾಮ. ಕೆಲವೇ ವರ್ಷಗಳ ಹಿಂದಿನವರೆಗೂ ಒಂದು ಗ್ರಾಮಕ್ಕೆ ಇರಬಹುದಾದ ಸುಂದರವಾದ ಪರಿಸರ ಇಲ್ಲೂ ಕಾಣಬಹುದಿತ್ತು. ಪೂರ್ವದಲ್ಲಿ ಬಳುಕುತ್ತಾ ಸಾಗುತ್ತಿದ್ದ ಅರ್ಕಾವತಿ ನದಿ, ಪಶ್ಚಿಮದಲ್ಲಿ ಪ್ರಶಾಂತವಾದ ಪಾದ್ರಿ ಕೆರೆ, ಗಂಭೀರವಾಗಿ ನಿಂತ ಸುತ್ತಮುತ್ತಲಿನ ಬೆಟ್ಟಗಳು, ದಕ್ಷಿಣದಲ್ಲಿ  ತಂಪಾಗಿ ಹರಿಯುತ್ತಿದ್ದ ಹೊಂಗೆ ಹಳ್ಳ ಇವೆಲ್ಲವೂ ಗ್ರಾಮದ ಪ್ರತೀಕವಾಗಿ ನಿಂತಿದ್ದವು. ಆದರೆ ಇಂದು ಬತ್ತುತ್ತಿರುವ ಅರ್ಕಾವತಿಗೆ ಬೆಂಗಳೂರಿನ ಕಲುಷಿತ ನೀರೂ ಸೇರಿಕೊಂಡಿದೆ. ದಡದಲ್ಲಿನ ಸುಂದರ ಮರಳು ಮಾಯವಾಗಿವೆ. ಹಳ್ಳದಲ್ಲಿನ ನೀರಿಗೆ ಹಿಂದಿನ ಜುಳು ಜುಳುವೂ ಇಲ್ಲ, ಶುಭ್ರತೆಯಂತೂ ಇಲ್ಲವೇ ಇಲ್ಲ.  ಕೆರೆ, ಇದ್ದರೂ ಇಲ್ಲದಂತೆ ಜನ ಸಾಮನ್ಯರ ಆಸಕ್ತಿ, ಕುತೂಹಲ ಉಳಿಸಿಕೊಳ್ಳಲು ಪರದಾಡುತ್ತಿದೆ. ಇನ್ನೂ, ಕರಗುತ್ತಿರುವ ಇತರ ಬೆಟ್ಟಗಳ ನಡುವೆ ಕಪಾಲ ಬೆಟ್ಟವೊಂದೇ ಇಂದಿಗೂ ಅಸ್ತಿತ್ವ ಉಳಿಸಿಕೊಂಡರೆ, ಇತ್ತೀಚೆಗೆ ತಲೆ ಎತ್ತಿರುವ ಅರ್ಕಾವತಿ ಡ್ಯಾಂ ಮಾತ್ರ ಇನ್ನಷ್ಟು ಅಭಿವೃದ್ಧಿಯ ಭರವಸೆಯನ್ನು ಮೂಡಿಸಿದೆ. 

ಇಷ್ಟಾದರೂ ಬಹುತೇಕ ಕ್ರೈಸ್ತರೇ ತುಂಬಿರುವ ಈ ಗ್ರಾಮ ಇಂದಿಗೂ ತನ್ನದೇ ಆದ ವೈಶಿಷ್ಠತೆಯಿಂದಾಗಿ ಗಮನ ಸೆಳೆಯುತ್ತದೆ. ಭಿನ್ನವಾದ ದೃಷ್ಠಿಕೋನ ಹೊಂದಿದ ಜನರ ನಡುವೆಯೂ ಬಲವಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೊಂಡಿಯಿಂದಾಗಿ ಗ್ರಾಮ ಇಂದಿಗೂ ತನ್ನತನವನ್ನು ಉಳಿಸಿಕೊಂಡಿದೆ. ಯೇಸುಕ್ರಿಸ್ತನ ಜೀವನ, ಬೋಧನೆ, ವಿಶೇಷವಾಗಿ ಆತನ ಶಿಲುಬೆ ಮರಣದ ಸನಿಹದ ಯಾತನಾಮಯ ಘಟನೆಗಳು ಹಾಗೂ ನಂತರದ ಪುನರುತ್ಥಾನದ ಬಗೆಗಿನ ಬೈಬಲ್ಲಿನ ವೃತ್ತಾಂತವನ್ನು ಮೂಲ ಕಥಾವಸ್ತುವಾಗಿಸಿಕೊಂಡು ನಡೆಯುವ ಇಲ್ಲಿನ ನಾಟಕಕ್ಕೆ ಒಂದು ಶತಮಾನದಷ್ಟು ಇತಿಹಾಸವಿದೆ. 1906ರಲ್ಲಿ ಆರಂಭಗೊಂಡ ಈ ನಾಟಕವು ಪ್ರತಿವರ್ಷ ಶುಭಶುಕ್ರವಾರದಂದು ನಡೆದು ಬಂದು, ಇಂದಿಗೆ 107 ಪ್ರದರ್ಶನಗಳನ್ನು ಪೂರೈಸಿದೆ ಎಂದರೆ ಅದು ಕನ್ನಡ ರಂಗಭೂಮಿಯ ಹಾಗೂ ಜನಪದದ ಮಟ್ಟಿಗೆ ನಿಜಕ್ಕೂ ಹೆಮ್ಮೆಯ ಸಂಗತಿ. ಜನರ ಬಾಯಲ್ಲಿ ಮಹಿಮೆ ನಾಟಕ ಎಂದೇ ಕರೆಸಿಕೊಳ್ಳುವ ಈ ನಾಟಕದಿಂದಾಗಿಯೇ ಗ್ರಾಮವು ಕರ್ನಾಟಕದ ಜೆರುಸಲೇಮ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 

ಅಂತೆಯೇ ಈ ಗ್ರಾಮಕ್ಕೆ ಹಾರೋಬೆಲೆ ಎಂಬ ನಾಮ ಹೇಗೆ ಬಂತು ಎಂದು ಹುಡುಕುತ್ತಾ ಹೋದಾಗ ಸ್ಪಷ್ಟವಾದ ಉತ್ತರಗಳು ದೊರಕುವುದಿಲ್ಲವಾದರೂ ಅನೇಕ ಆಸಕ್ತಿಕರ ಸಂಗತಿಗಳು ಕಾಣಸಿಗುತ್ತವೆ.  ಇವುಗಳಲ್ಲಿ ಐತಿಹಾಸಿಕ, ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಂಶಗಳು ತಳಕುಗೊಂಡಿರುವುದನ್ನು ಕಾಣಬಹುದು. ಗ್ರಾಮಕ್ಕೆ  ಹಾರೋಬೆಲೆ ಎಂಬ ನಾಮಕ್ಕೆ ಇಂಗ್ಲೀಷಿನ 'Horrible' ಪದವೇ ಮೂಲ ಎಂಬುದು ತಮಾಷೆಯಾಗಿ ಕಂಡರೂ, ಅದೇ ಹೆಚ್ಚಾಗಿ ಪ್ರಚಲಿತವಾಗಿದೆ. 16ನೇ ಶತಮಾನದಲ್ಲಿ ಇಟಲಿ ಮೂಲದ ಜೆಸ್ವಿಟ್ ಕ್ರೈಸ್ತ ಮಿಷಿನರಿಗಳು  ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಈ ಊರಿಗೆ ಬಂದರು ಎಂಬ ಐತಿಹಾಸಿಕ ಮಾಹಿತಿಗಳಿವೆ. ಗುಡ್ಡ ಬೆಟ್ಟ ಕಾಡಿನಿಂದ ತುಂಬಿದ ಊರು ಹಾಗೂ ಊರಿನ ದಾರಿ ದುರ್ಗಮವಾಗಿದ್ದೂ, ಅದರಿಂದಾಗಿ ಈ ಊರಿನ ಪ್ರಯಾಣ ಬಹಳ ಪ್ರಯಾಸದಾಯಕವಾಗಿತ್ತು. ಈ ಕಷ್ಟವಾದ ಪ್ರಯಾಣ, ಅನುಭವ, ಊರಿನ ಪರಿಸರವನ್ನು ಆ ವಿದೇಶಿ ಗುರುಗಳು ತಮ್ಮದೇ ಭಾಷೆಯಲ್ಲಿ  orrible ಅಥವಾ ಇಂಗ್ಲೀಷಿನ Horrible ಎಂದು ಕರೆಯುತ್ತಿದ್ದರಿಂದ ಊರಿಗೆ ಅದೇ ಹೆಸರಾಯಿತು ಎಂಬುದು ಸಾಮಾನ್ಯವಾಗಿ ಕೇಳಿ ಬರುವ ಮಾತು.

ಇನ್ನೂ ಈ ಊರಿನ ಹೆಸರಿನ ಬಗೆಗಿನ ಇತರ ಲೇಖಕರ, ಸಂಶೋಧಕರ ವ್ಯಾಖ್ಯಾನಗಳು ಮತ್ತಷ್ಟು ಕುತೂಹಲ ಕೆರಳಿಸುತ್ತದೆ. ಇತಿಹಾಸ ತಜ್ಞರು, "ಹಾರುವರು" (ಬ್ರಾಹ್ಮಣರು) ಹೆಚ್ಚಾಗಿ ವಾಸವಾಗಿದ್ದ ಕಾರಣ "ಹಾರು" ಬಂದಿರಬಹುದೆಂದೂ, ಊರುಗಳನ್ನು "ಬೆಲೆ" (ಹುಲಿಬೆಲೆ, ಅತ್ತಿಬೆಲೆ)  ಎಂದು ಕರೆಯುವ ರೂಢಿಯಲ್ಲೇ "ಬೆಲೆ" ಸೇರಿಕೊಂಡು "ಹಾರುಬೆಲೆ" ಅಗಿರಬಹುದೆಂದು ಅಭಿಪ್ರಾಯಪಡುತ್ತಾರೆ. ಅದರಲ್ಲೂ ಈ ಸ್ಥಳವನ್ನು ಇಲ್ಲಿಯವರು ವಿಜಯನಗರದ ರಾಜ ಪ್ರತಿನಿಧಿಗಳಿಂದ ಬಳುವಳಿಯಾಗಿ ಪಡೆದರು ಎಂಬ ಮಾಹಿತಿಯಿಂದಾಗಿ ಸ್ಥಳಕ್ಕೆ ಐತಿಹಾಸಿಕ ಮಹತ್ವವೂ ದೊರೆಯುತ್ತದೆ. ಇನ್ನೂ ಈ ಊರಿನ ಬಗ್ಗೆ ಹಲವಾರು ಲೇಖನಗಳನ್ನೂ, ಇಲ್ಲಿನ ದೇವಾಲಯದಲ್ಲಿನ ಪ್ರತಿಮೆಯೊಂದರ ಬಗ್ಗೆ ಸಂಶೋಧನಾತ್ಮಕ ಪುಸ್ತಕವನ್ನೂ ಬರೆದಿರುವ ಪತ್ರಕರ್ತ ಎಫ್.ಎಂ.ನಂದಗಾವ್ ರವರು ಊರಿಗೆ ಈ ಹೆಸರು ಬರಲು ಕಾರಣವಾದ ಅನೇಕ ಸಾಧ್ಯತೆಗಳನ್ನು ಪಟ್ಟಿ ಮಾಡುತ್ತಾರೆ. ದಟ್ಟವಾದ ಪೊದೆ, ಮೆಳೆಗಳನ್ನೂ ’ಬಲ್ಲೆ’ ಎಂದು ಕರೆಯಲಾಗುತ್ತಿತ್ತು. ಊರಿನ ತುಂಬಾ ಇಂತಹ ಬಲ್ಲೆಗಳು ತುಂಬಿರುವಾಗ ಅದನು ದಾಟಿ ಸಾಗಲು ಅವನ್ನು ಹಾರುತ್ತಲೋ,  ಇಲ್ಲವೆ ಸವರಿಕೊಂಡೊ ಹೋಗಬೇಕಾದರಿಂದ, ಇಲ್ಲಿ ನೆಲಸಲು ಬಂದವರು ಅಂತಹ ಬಲ್ಲೆಗಳನ್ನು ಹಾರಿದವರೂ ಆದರಿಂದ, ಬಲ್ಲೆ ಹಾರುವವರ ಊರು, ಹಾಗೆಯೇ ಪದಗಳು ಅದಲು ಬದಲಾಗಿ ಹಾರುಬಲೆ, ಹಾರೋಬೆಲೆ ಆಗಿರಬಹುದೆಂದೂ ಹೇಳುತ್ತಾರೆ. ಅಂತೆಯೇ  ಆರು ಎಂಬ ಪದಕ್ಕೆ ಕೃಷಿ, ಉಳುಮೆ ಎಂಬ ಅರ್ಥವೂ ಇದ್ದೂ ಆದೂ ಸಹಾ ಆರುಬೆಲೆ ಗೆ ಮೂಲವಾಗಿ ಕ್ರಮೇಣ ಹಾರೋಬೆಲೆ ಆಗಿರಬಹುದೆಂಬ ಮಾತಿದ್ದರೂ, ಕೃಷಿಯೇ ಪ್ರಧಾನವಾದ ಅನೇಕ ಇತರ ಊರುಗಳಿಗೆ ಈ ಹೆಸರು ಏಕೆ ಬರಲಿಲ್ಲವೆಂಬ ಪ್ರಶ್ನೆಯೂ ಮೂಡಬಹುದು. ಇನ್ನೂ, ಕಾಡುಮಯ ಪ್ರದೇಶವಾದ್ದರಿಂದ ಕೃಷಿಯ ಜೊತೆಗೆ ಪ್ರಾಣಿ ಪಕ್ಷಿಗಳ ಬೇಟೆ ಉಪವೃತ್ತಿಯಾಗಿದ್ದೂ ಅ ಸಮಯದಲ್ಲಿ  ಬಳಸುವ  ಹಾರುವ ಬಲೆಯಿಂದಲೂ ಈ ಹೆಸರು ಬಂದಿರಬಹುದೆಂಬ ವಾದವನ್ನೂ ಅವರು ತೆರೆದಿಡುತ್ತಾರೆ. ಇನ್ನೂ ಊರಿನಲ್ಲಿರುವ ದೇವಮಾತೆಯ ವಿಗ್ರಹಕ್ಕೆ ವಿವಿಧ ಹಾರಗಳನ್ನು ಹಾಕಲಾಗಿ ಅದು ಹಾರಗಳ ಬಲೆಯಂತೆ ಗೋಚರವಾಗುತ್ತಿದ್ದು, ಅದರಿಂದಲೇ ಹಾರಗಳಬಲೆಗಳ  ಊರು, ಹಾರಬಲೆ, ಮುಂದೆ ಅದು ಹಾರೋಬೆಲೆ ಆಗಿರಬಹುದೆಂಬ ಅನಿಸಿಕೆಯೂ ಇದೆ.

ಇದರಲ್ಲಿ ಯಾವುದು ನಿಜವೋ, ಯಾವುದು ಮೂಲವೋ, ಯಾವುದು ಅಂತಿಮವೋ ನಿರ್ಧರಿಸುವುದು ಕಷ್ಟದ ಮಾತೇ ಸರಿ. ಅದರೂ ಮೂಲದ ಜಾಡು ಹಿಡಿದು ಹೊರಟಾಗ ಸಿಗುವ, ಗೋಚರವಾಗುವ ಅಂಶಗಳಂತೂ  ನಿಜಕ್ಕೂ ರೋಚಕ ಹಾಗೂ ಮುಂದಿನ ಸಂಶೋಧನೆಗೆ ಪೂರಕ, ಸ್ಪೂರ್ತಿದಾಯಕ. ಒಂದು ಊರಿನ ಹೆಸರೇ ಎಷ್ಟೊಂದು ಇತಿಹಾಸ, ಸ್ವಾರಸ್ಯವನ್ನು ಹೊಂದಿರುವಾಗ ಇನ್ನೂ ಇಡೀ ಊರು, ಅದರ ಜನರಲ್ಲಿ, ಇನ್ನೆಷ್ಟು ವಿಷಯಗಳು, ವಿಚಾರಗಳು ಅಡಗಿರುತ್ತವೆಯೋ. ಅವುಗಳನ್ನು ಸ್ವಲ್ಪವಾದರೂ ಹೆಕ್ಕಿ ತೆಗೆಯುವ ಪ್ರಯತ್ನವಾದರೆ, ನಮ್ಮ  ಸಾಂಸ್ಕೃತಿಕ, ಜನಪದ ಬೇರುಗಳು ಇನ್ನಷ್ಟು ಗಟ್ಟಿಯಾಗಬಹುದು. 

-ಪ್ರಶಾಂತ್ ಇಗ್ನೇಷಿಯಸ್

Wednesday 13 March 2013

ಅಂದರ್ ಬಾಹರ್ - ಮಳೆಯಲ್ಲಿ ಮಿಂದ ಹೂವಿನಂಥ ಹಾಡುಗಳು

"ಮಳೆಯಲಿ ಮಿಂದ ಹೂವಿನ ಹಾಗೆ"  ಎನ್ನುವ ಸಾಲುಗಳೊಂದಿಗೆ ಪ್ರಾರಂಭವಾಗುತ್ತದೆ ಅಂದರ್ ಬಾಹರ್ ಚಿತ್ರದ ಒಂದು ಹಾಡು. ಶ್ರೇಯಾ ಘೋಷಲ್ ಹಾಗೂ ವಿಜಯ್ ಪ್ರಕಾಶ್ ರವರು ಹಾಡಿರುವ ಈ ಗೀತೆಯನ್ನು ಕೇಳುತ್ತಿದ್ದಂತೆ ಅಹ್ಲಾದಕರವಾದ ತಣ್ಣನೆಯ ಗಾಳಿ ಸೋಕಿದಂತಾಗಿ ನಿಜಕ್ಕೂ ಮಳೆಯಲ್ಲಿ ಮಿಂದ ಹೂವಿನಂತಾಗುತ್ತದೆ ಮನಸ್ಸು. ಇದು ಈ ಚಿತ್ರದ ಬಹುತೇಕ ಹಾಡುಗಳ ಬಗ್ಗೆಯೂ ಹೇಳಬಹುದಾದ ಮಾತು.

ಹರಿಕೃಷ್ಣರ ಸಂಗೀತದ ಗುಂಗಿನಲ್ಲೇ ಇದ್ದ ಕನ್ನಡ ಚಿತ್ರ ರಸಿಕರಿಗೆ ಇಂಪಾದ ಅಚ್ಚರಿ ಅಂದರ್ ಬಾಹರ್ ಚಿತ್ರದ ಹಾಡುಗಳು.  ಹೊಸ ನಿರ್ಮಾಪಕ, ನಿರ್ದೇಶಕರ ತಂಡ ಎಂಬ ಕಾರಣದಿಂದಲೋ, ಶಿವಣ್ಣನ ವಿಭಿನ್ನವಾದ ಸ್ಟಿಲ್ಸ್ ದಿಂದಾಗಿಯೋ, ಶಿವಣ್ಣ ಪಾರ್ವತಿಯ ಸಂಗಮದಿಂದಲೋ, ಜೈ ಹೋ ಖ್ಯಾತಿಯ ವಿಜಯ ಪ್ರಕಾಶ್ ಸಂಗೀತ ನೀಡುತ್ತಿರುವ ಚೊಚ್ಚಲ ಚಿತ್ರವೆಂದೋ ಏನೋ, ಮೊದಲ ದಿನದಿಂದಲೂ ಚಿತ್ರದ ಬಗ್ಗೆ ನಿರೀಕ್ಷೆ ಖಂಡಿತ ಇತ್ತು. ಈಗ ಚಿತ್ರದ ಸುಮಧುರ ಗೀತೆಗಳು ಯಶಸ್ವಿಯಾಗುವುದರೊಂದಿಗೆ ಚಿತ್ರದ ಮೇಲಿನ ನಿರೀಕ್ಷೆಯ ಭಾರ ಮತ್ತಷ್ಟು ಹೆಚ್ಚಾಗಿದೆ.  ಹೊಸ ರೀತಿಯ ವಾದ್ಯಗಳ ಬಳಕೆ ಹಾಗೂ ಸಂಯೋಜನೆ ಮನ ಸೆಳೆಯುತ್ತದೆ. ಅಲ್ಲಿಗೆ ವಿಜಯ್ ಪ್ರಕಾಶ್ ತಮ್ಮ ಕೆಲಸದಲ್ಲಿ ಗೆದ್ದಿದ್ದಾರೆ ಎನ್ನಲು ಅಡ್ಡಿಯಿಲ್ಲ.  

ವಿಶಾಲ್ ದದ್ಲಾನಿ ಹಾಡಿರುವ  ಅಂದರ್ ಬಾಹರ್ ಎಂಬ ಶೀರ್ಷಿಕೆ ಗೀತೆ ಒಂದು ಜಲಪಾತದಂಥ ಜೀವ ಕಳೆ ತುಂಬಿರುವ ಗೀತೆ.  ಬಳುಕುತ್ತಾ ಹರಿಯುತ್ತಾ, ಅಲ್ಲಲ್ಲಿ ವೇಗ ಹೆಚ್ಚಿಸಿಕೊಳ್ಳುತ್ತಾ, ಅಡ್ಡ ಬರುವ ಕಲ್ಲುಗಳ ನಡುವೆ ನುಸುಳುತ್ತಾ,  ತಣ್ಣಗೆ ಕೊರೆಯುತ್ತಾ ಸಾಗಿ, ಭೋರ್ಗರೆಯುತ್ತಾ ಧುಮ್ಮಿಕ್ಕುವ ನದಿಯಂತೆ ಕೇಳುಗರನ್ನು ಆವರಿಸಿಕೊಳ್ಳುತ್ತದೆ ಈ ಗೀತೆ. ಗೀತೆಗೆ ತಕ್ಕಂತೆ ಬಳಕುವ ವಿಶಾಲ್ ರ ಧ್ವನಿ ನಿಜಕ್ಕೂ ಹೊಸ ಅನುಭವ ನೀಡುತ್ತದೆ. ಕೋರಸ್ ನಲ್ಲಿ ಬರುವ ಧ್ವನಿ ಕೂಡ ಸುಂದರವಾಗಿ ಮಿಶ್ರಿತವಾಗಿದೆ. ಅರ್ಜುನ್ ರ ಸಾಹಿತ್ಯ ನಂಟು ಗೀತೆಗೆ ಸಿಕ್ಕಿದೆ. 

ಕಾರ್ತಿಕ್ ಹಾಗೂ ಅನುರಾಧ ಭಟ್ ಹಾಡಿರುವ "ಆಸೆ" ಗೀತೆ, ಧ್ವನಿಸುರಳಿಯ ಅತ್ತ್ಯುತ್ತಮ ಗೀತೆ ಯಾವುದು ಎನ್ನುವ ಸ್ಪರ್ಧೆಯಲ್ಲಿ ಪ್ರಬಲ ಸ್ಪರ್ಧಿ. ಕವಿರಾಜ್ ಮತ್ತೊಮ್ಮೆ ತಮ್ಮ ಕವಿಚಳಕ ತೋರಿದರೆ, ಗಾಯಕರು ಸ್ಪರ್ಧೆಗೆ ಬಿದ್ದವರಂತೆ ಉತ್ತಮವಾಗಿ ಹಾಡಿದಾರೆ. ಕೊನೆಗೆ ಗೆದ್ದಿರುವುದು ಸಂಗೀತ ನಿರ್ದೇಶಕ  ವಿಜಯ್ ಪ್ರಕಾಶ್ ರ ಮಾಂತ್ರಿಕ ಸ್ಪರ್ಶ. ಸಾಧಾರಣವಾಗಿರಬಹುದಾದ ಗೀತೆಗೆ ಬೇರೆಯಾದ ಆದ ಲಹರಿ ದೊರಕಿಸಿ ಕೊಡುವಲ್ಲಿ ವಿಜಯ್ ಸಂಪೂರ್ಣವಾಗಿ ಗೆದ್ದಿದ್ದಾರೆ. ಸುಂದರವಾದ ಆಲಾಪನೆಯೊಂದಿಗೆ ಪ್ರಾರಂಭವಾಗುವ ಗೀತೆ ತನ್ನದೇ ಆದ ತಿರುವನ್ನು ಪಡೆಯುವ ಪರಿಯನ್ನು ಕೇಳಿಯೇ ಆನಂದಿಸಬೇಕು. 

ಇನ್ನೂ ಶಂಕರ್ ಮಹಾದೇವನ್ ಹಾಡಿರುವ ಕೊನೆಯೇ ಇರದ ಮೊದಲ ಪದವೇ ಎಲ್ಲಿ ನೀನು?  ಗೀತೆ, ಶಂಕರ್ ಹಾಡಿರುವ ಧಾಟಿಯಿಂದಲೇ ಇಷ್ಟವಾಗುತ್ತಾ ಹೋಗುತ್ತಿದ್ದಂತೆ, ಜಯಂತ್ ಕಾಯ್ಕಣಿ ತಮ್ಮ ಇರುವಿಕೆಯನ್ನು ಸ್ಪಷ್ಟವಾಗಿ ನೆನಪಿಸುತ್ತಾರೆ. ಸಾಹಿತ್ಯದಿಂದಾಗಿ ಈ ಗೀತೆ ಏರುವ ಎತ್ತರಕ್ಕೆ ಜಯಂತ್ ನಿಜಕ್ಕೂ ಅಭಿನಂದನಾರ್ಹರು. ಕೊನೆಯಲ್ಲಿ, ಶಂಕರ್ ಮಹಾದೇವನ್, ಜಯಂತ್ ಕಾಯ್ಕಿಣಿ, ವಿಜಯ್ ಪ್ರಕಾಶ್ ಈ ಮೂವರಲ್ಲಿ ಯಾರು ಹೆಚ್ಚು ಅಭಿನಂದನಾರ್ಹರು ಎಂಬ ಗೊಂದಲ ನಿಮ್ಮದಾಗುತ್ತದೆ.

ನಡುವೆ ಬಂದೋಗುವ ಚೇತನ್ ಹಾಗೂ ಶಮಿತಾ  ಹಾಡಿರುವ ’ ನೀನು ನನ್ನ ಒನ್ಲಿ ವೈಫು ’ ಗೀತೆಗೆ ಯೋಗ್ ರಾಜ್ ಭಟ್ ಸಾಹಿತ್ಯದ  ಟಚ್ ಇದೆ. ಲವಲವಿಕೆಯ ವಾದ್ಯ ಸಂಯೋಜನೆ ಇದ್ದರೂ ಇನ್ನಿತರ ಗೀತೆಗಳಿಗೆ ಹೋಲಿಸಿದಾಗ ಸಾಹಿತ್ಯ ತುಸು ಕಳೆಗುಂದಿದಂತೆ ಕಾಣುತ್ತದೆ. ಆದರೂ ಭಟ್ಟರ ಸಾಹಿತ್ಯ, ಯುವಕರ ಮೋಡಿ ಮಾಡಿದರೂ ಮಾಡೀತು. ಶಮಿತಾ ಹಾಗೂ ವಿಶೇಷವಾಗಿ ಚೇತನ್ ತಮ್ಮ ಕಂಠದಿಂದ ಗಮನ ಸೆಳೆಯುತ್ತಾರೆ.

ಕೊನೆಗೆ, "ಮಳೆಯಲ್ಲಿ ಮಿಂದ ಹೂವಿನ ಹಾಗೆ"" ಹಾಡು ನೀಡುವ ಅನುಭವ ಅಪೂರ್ವವಾದದು. ಕನ್ನಡದ ಇತರ ಕ್ಲಾಸಿಕ್ ಮಳೆ ಗೀತೆಗಳಿಗೆ ಹೊಸ ಸೇರ್ಪಡೆ ಈ ಗೀತೆ. ಇಂಥಾ ಗೀತೆಗಳಲ್ಲಿ ಸ್ಪೆಷಲಿಸ್ಟ್ ಆಗಿ ಹೋಗಿರುವ ಶ್ರೇಯಾ ಘೋಷಲ್ ಮತ್ತೊಮ್ಮೆ ಮೋಡಿ ಮಾಡಿದರೆ ಹಾಗೂ ವಿಜಯ್  ರ ತನ್ಮಯತೆ ಅದ್ಭುತ. ಹಾಡಿನ ನಡುವೆ ಬರುವ ರಾಗ, ಆಲಾಪನೆ ಹಾಗೂ ಮತ್ತಾವುದೋ ಭಾಷೆಯ ತುಣುಕು ಮನ ಸೆಳೆಯುತ್ತದೆ. ಜಯಂತ್ ಕಾಯ್ಕಿಣಿ ರವರ ಸಾಹಿತ್ಯದ ಬಗ್ಗೆ ಹೇಳುವುದೇನಿದೆ? ಬಹುಕಾಲ ನೆನಪಿನಲ್ಲಿ ಉಳಿಯುಂಥ ಗೀತೆ ಇದು.

ಒಟ್ಟಾರೆ ಹಾಡುಗಳನ್ನು ಕೇಳುತ್ತಿದ್ದಂತೆ ವಿಜಯ್ ಪ್ರಕಾಶ್ ರವರಿಗೆ ಸಣ್ಣದೊಂದು ಕಂಗ್ರಾಟ್ಸ್ ಹೇಳುತ್ತದೆ ಮನಸ್ಸು.

ಚಿತ್ರದ ಟ್ರೈಲರ್  ಅನ್ನು ಒಮ್ಮೆ ನೋಡಿ!!!  


  -ಪ್ರಶಾಂತ್ ಇಗ್ನೇಷಿಯಸ್

Friday 8 March 2013

ಬೇಕಾಗಿದ್ದಾರೆ ಆಧುನಿಕ ಭಗೀರಥರು!!!!!!!

ತನ್ನ ಪೂರ್ವಜರ ಮೋಕ್ಷ ಪ್ರಾಪ್ತಿ ಹಾಗೂ ತನ್ನ ನಾಡಿನ ಒಳತಿಗಾಗಿ ಬೇಕಾದ ನೀರಿಗಾಗಿ ಕಠಿಣ ತಪ್ಪಸ್ಸನ್ನು ಮಾಡಿ ಕೈಲಾಸದಿಂದ ಗಂಗೆಯನ್ನು ಹರಿಸಿದ ಭಗೀರಥನ ಕಥೆ ಭಾರತದ ಪುರಾಣದಲ್ಲಿದೆ. ಕೈಲಾಸದಲ್ಲಿದ್ದ ನದಿಯನ್ನು ಭೂಮಿಗಿಳಿಸಲು ಆತ ಕೈಗೊಂಡ ತಪ್ಪಸು, ಎದುರಿಸಿದ ಅಡೆ ತಡೆಗಳು,ಅದನ್ನು ಆತ ಯಶಸ್ವಿಯಾಗಿ ನಿಭಾಯಿಸಿದ ರೀತಿ, ತನ್ನ ಗುರಿಯೆಡೆಗಿನ ಶ್ರದ್ಧೆ, ನಿರಂತರ ಪ್ರಯತ್ನ ಹಾಗೂ ಆತನ ನಿಶ್ಚಲ ಪ್ರಯತ್ನವೆಲ್ಲವೂ ಆ ಕಥೆಯಲ್ಲಿ ಮೂಡಿ ಬಂದಿರುವ ರೀತಿ ಅದ್ಭುತ. ಇಂದಿಗೂ ಸತತ ಪ್ರಯತ್ನವನ್ನುಭಗೀರಥ ಪ್ರಯತ್ನವೆಂದೇ ಕರೆಯಲಾಗುತ್ತದೆ ಹಾಗೂ ಯಾವುದೇ ಒಂದು ನೀರಿಗಾಗಿನ ಹೋರಾಟ, ಶ್ರಮ, ಕೆಲಸದಲ್ಲಿ ಬೇಡವೆಂದರೂ ಭಗೀರಥನ ಹೆಸರು ನುಸುಳುತ್ತದೆ. ಇಂದು ಇಡೀ ವಿಶ್ವದಲ್ಲಿ ತಲೆದೋರಿರುವ ನೀರಿನ ಅಭಾವ, ನೀರಿಗಾಗಿ ಏಳುತ್ತಿರುವ ಹಾಹಾಕಾರವನ್ನು, ಬರಿದಾಗುತ್ತಿರುವ ಅಂತರ್ಜಲದ ಮಟ್ಟವನ್ನು ಕಂಡರೆ ಮತ್ತೊಂದು ಭಗೀರಥ ಪ್ರಸಂಗ ನಡೆಯಬೇಕೇನೋ ಅನಿಸದಿರಲಾರದು.  

ಭೂಮಿಯ ಮೇಲಿನ ನೀರಿನ ಅಂಕಿ ಅಂಶಗಳು ಬಹಳ ತೂಹಲಕಾರಿಯಾಗಿರುವಂಥದು. ಭೂಮಿಯ ಮೇಲಿನ ಸುಮಾರು 70ರಷ್ಟು ಪ್ರದೇಶ ನೀರಿನಿಂದಲೇ ತುಂಬಿದ್ದು, ಅದರಲ್ಲಿ ಶೇಕಡ 95 ಕ್ಕೂ  ಹೆಚ್ಚಿನಷ್ಟು ನೀರು ಸಮುದ್ರ, ಸಾಗರದಲ್ಲಿದೆ. ಎಲ್ಲವನ್ನು ತೂಗಿ ಕಳೆದ ಮೇಲೆ ನಮ್ಮ ಭೂಮಿ ಮೇಲಿನ ಒಟ್ಟು ಇರುವ ನೀರಿನಲ್ಲಿ ಕೇವಲ ನೂರಕ್ಕೆ 2.5 ರಷ್ಟು ಮಾತ್ರ ಸಿಹಿ ನೀರು ಅಥವಾ ಬಳಸ ತಕ್ಕ ನೀರು ಎಂದೇಳುತ್ತದೆ ಮಾಹಿತಿಗಳು. ಅದರಲ್ಲೂ ಬಹುಪಾಲು ನೀರು ಇರುವುದು ಮಂಜು ಗಡ್ಡೆ ಹಾಗೂ ಭೂಮಿ ಆಳದ ಅಂತರ್ಜಲದ ರೂಪದಲ್ಲಿ. ಅಂದರೆ ನೀರೆನ್ನುವುದು ಮೊದಲಿನಿಂದಲೂ ದುಬಾರಿಯಾದುದೇ. ಸುಲಭದಲ್ಲಿ ಸಿಗುತ್ತಿದ್ದದ್ದೇನಲ್ಲ. ನೀರು ಸುಲ್ಭದಲ್ಲಿ ಸಿಗದಿದ್ದ ಕಾಲದಲ್ಲೂ ಅದು ಅಭಾವ ಎನಿಸಿರಲಿಲ್ಲ, ಶ್ರಮದಾಯಕ ಮಾತ್ರವಾಗಿತ್ತು. ಆದರೆ ಬದಲಾದ ಪರಿಸರ, ವಾತವರಣ ಹಾಗೂ ಪ್ರಾಕೃತಿಕ ಅಸಮಲೋತನದಿಂದಾಗಿ ನೀರಿನ ಅಭಾವ,ದಾರಿದ್ರ್ಯದ ಸ್ವರೂಪ ಇಂದು ಬದಲಾಗುತ್ತಿದೆ. ಕೆಲವೇ ವರ್ಷಗಳ ಹಿಂದಿನವರೆಗೂ ನೀರಿನ  ಸಮಸ್ಯೆಯೆಂದರೆ ನೀರಿನ ಕೊರತೆ ಎಂಬುದಾಗಿತ್ತು. ಆದರೆ ಇಂದು ನೀರಿನ ಸಮಸ್ಯೆ ಎಂದರೆ ಕೊರತೆ ಮಾತ್ರವಲ್ಲ ಅದಕ್ಕೆ ನೀರಿನ ಒತ್ತಡ, ನೀರಿನ ಮುಗ್ಗಟ್ಟು ಎಂಬುದೆಲ್ಲವೂ ಸೇರಿಕೊಂಡಿವೆ. 

ನಾವು ಕಂಡ ಹಾಗೆ ಒಂದು ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ನೀರಿನ ಅಭಾವದ ಸ್ವರೂಪವೇ ಬೇರೆಯದೇ ರೀತಿಯದ್ದಾಗಿತ್ತು. ಈಗಿನಂತೆ ಮನೆ ಮನೆಗೆ ನೀರು ಬರುವುದು ಕನಸಿನ ಮಾತೇ.ಎಷ್ಟೋ ನಗರ, ಬಡಾವಣೆಗಳಲ್ಲಿ ಈಗಲೂ ಆ ಪರಿಸ್ಥಿತಿ ಇದೆಯಾದರೆ, ಹಿಂದೆ ಅದು ಸಾಮಾನ್ಯದ ಮಾತೇ. ಮನೆಯಲ್ಲೇ ಬಾವಿ ಇದ್ದವರು ಇಲ್ಲವೇ ಬೋರ್ ವೆಲ್ ತೆಗೆಸಿಕೊಂಡವರು ಬಿಟ್ಟರೆ, ಬೇರೆಲ್ಲರಿಗೂ ಬೀದಿಯ ನಲ್ಲಿಯೇ ಗತಿ. ಬೀದಿಗೆ ಒಂದು ಎರಡೋ ಇದ್ದ ನಲ್ಲಿಯಲ್ಲಿ ಹೋಗಿ ನೀರು ತುಂಬಿಕೊಂಡು ಬರುವುದೇ ಒಂದು ದೊಡ್ಡ ಸಾಹಸ. ಒಂದು ನದಿ ಇದ್ದ ಕಡೆ ಇದ್ದ ಒಂದು ಸಂಸ್ಕೃತಿ, ನಾಗರೀಕತೆಯೇ ಅನಾವರಣಗೊಳ್ಳುತ್ತದೆ ಎಂಬ ಮಾತಿದೆ. ನಮ್ಮ ಅಂದಿನ  ಬೀದಿ ಬದಿಯ ನಲ್ಲಿಯೂ ಒಂದು ರೀತಿಯ ಸಾಂಸ್ಕೃತಿಕ ಚಟುವಟಿಕೆಗೆ ವೇದಿಕೆಯೇ, ಅದು ಬೇರೆಯ ಮಾತು. ಆಗದ ನೀರಿನ ಪೈಪುಗಳ ಜೋಡಣೆ, ಅಸಮರ್ಪಕವಾದ ನೀರಿನ ಹಂಚಿಕೆ ಹಾಗೂ ನಿರ್ವಹಣೆಯಿಂದಾಗಿ ನದಿಗಳಲ್ಲಿ ನೀರಿದ್ದರೂ ಅದು ಜನರನ್ನು ತಲಪುವ ಸಾಧನಗಳು, ವಿಧಾನಗಳು ಬಾಲ್ಯಾವಸ್ಥೆಯಲ್ಲಿದ್ದವು. 

ಇದು ನಗರದ ಮಾತಾದರೇ, ಹಳ್ಳಿಗಳಲ್ಲಿ ಇತ್ತೀಚಿನವರೆಗೂ ಬಾವಿ, ಕೆರೆ, ನದಿ, ಹಳ್ಳ, ಝರಿ,ಬೋರ್ ವೆಲ್ ಗಳೇ ನೀರಿನ ಮೂಲಗಳಾಗಿದ್ದವು. ಅಂದರೆ ಅದು ಮೂಲಭೂತ ಸೌಕರ್ಯದ ಕೊರತೆಯಾಗಿದ್ದು ಸರ್ಕಾರಗಳ, ಸಂಬಂಧಪಟ್ಟ ಸಂಸ್ಥೆಗಳ ವೈಫಲ್ಯವನ್ನು ಎತ್ತಿ ತೋರಿಸುತ್ತಿದ್ದವು. ಹಲವು ಸಂದರ್ಭಗಳಲ್ಲಿ ಸರ್ಕಾರ, ಸಂಸ್ಥೆಗಳು ಕಾರ್ಯಪ್ರವತರಾಗಿದ್ದರೂ ಹಣಕಾಸಿನ ತೊಂದರೆ ಇಲ್ಲವೇ ಸೌಲಭ್ಯದ ಅಡೆತಡೆಗಳು ಅವುಗಳ ಕೈ ಕಟ್ಟಿಹಾಕುತ್ತಿದ್ದವು. ಇವೆಲ್ಲಾ ಕಾರಣಗಳಿಂದಾಗಿ ನೀರೆನ್ನುವುದು ಒಂದು ದುಬಾರಿ ನೈಸರ್ಗಿಕ ಸಂಪತ್ತಾಗಿತ್ತು. ಅಂದರೆ ನೀರು ಇದ್ದರೂ ಅದನ್ನು ಸಮರ್ಪಕವಾಗಿ ಹಂಚುವ ಪರಿಕರಗಳು, ಸೌಲಭ್ಯಗಳು ಇಲ್ಲದೆ ಅದೇ ಒಂದು ರೀತಿಯ ಸಮಸ್ಯೆಯಾಗಿತ್ತು. ಆದರೆ ಈಗಿನದು ಬೇರೆಯದೇ ಆದ ಸಮಸ್ಯೆ. ಕಾಲ ಬದಲಾದಂತೆಲ್ಲಾ ನೀರನ್ನು ಸಮರ್ಪಕವಾಗಿ ತಲುಪಿಸುವ ಕಾರ್ಯ ಯೋಜನೆಗಳು ಸಾಕಾರಗೊಂಡವು. ನೀರಾವರಿ ಯೋಜನೆಗಳ ಆಮೆ ವೇಗ, ಭ್ರಷ್ಟಾಚಾರದ ನಡುವೆಯೂ ನೀರು ಮರಿಚಿಕೆಯಾಗದೆ, ಗಗನ ಕುಸುಮವಾಗದೆ, ಮೂಲ ಸೌಕರ್ಯದ ಭಾಗವಾಗಿ ಮನೆ ಮನೆಗಳನ್ನು ತಲುಪಿತು. ಅದು ನೂರಕ್ಕೆ ನೂರರಷ್ಟು ಅಲ್ಲದಿದ್ದರೂ ಭಾರತದಂಥ ಅಗಾಧ ಜನಸಂಖ್ಯೆಯ ದೇಶದಲ್ಲಿ ನಿಜಕ್ಕೂ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿಯಾಗಿದೆ, ಇನ್ನೂ ಸುಧಾರಿಸುವ ಭರವಸೆ ಇದೆ ಎಂಬುದಾಗಿ ವಿಶ್ವದ ಅನೇಕ ನೀರು ನಿರ್ವಹಣಾ ಸಂಸ್ಥೆಗಳು ಮೆಚ್ಚುಗೆ ವ್ಯಕ್ತ ಪಡಿಸಿವೆ, ಆದರೆ ಅಸಲಿ ಸಮಸ್ಯೆ ಪ್ರಾರಂಭವಾಗಿರುವುದೇ ಇಲ್ಲಿ. ಈಗ ಇಲ್ಲಿ  ಒತ್ತಡ ಹಾಗೂ ಮುಗಟ್ಟಿನ ಸಮಸ್ಯೆ. ಈ ನೀರಿನ ಒತ್ತಡವೆಂದರೆ ಏನು ಎಂದು ಅವಲೋಕಿದಾಗ ಕಣ್ಣಿಗೆ ರಾಚುವುದು ಕಳೆದ 50 ವರ್ಷಗಳಲ್ಲಿ  ದುಪ್ಪಟ್ಟಾಗಿರುವ ಪ್ರಪಂಚದ ಜನಸಂಖ್ಯೆ. ಅದರಲ್ಲೂ ಭಾರತ ಇದರಲ್ಲಿ ಬಹು ಮುಂದು. ಜನ ಸಂಖ್ಯೆ ಮಾತ್ರವಲ್ಲದೆ ಒಬ್ಬ ಮನುಷ್ಯ ಉಪಯೋಗಿಸುತ್ತಿದ್ದ, ಬಳಸುತ್ತಿದ್ದ ನೀರಿನ ಸರಾಸರಿ ಕೂಡ ದುಪ್ಪಟ್ಟಾಗಿದೆ. 

ಜೀವನ ಶೈಲಿ ಸರಳವಾಗಿದ್ದ, ಶ್ರೀಮಂತಿಕೆಯ ಅರ್ಥ ಬೇರೆಯದೇ ಇದ್ದ ಸಮಯದಲ್ಲಿ ನೀರಿನ ಬಳಕಯಲ್ಲೂ ಸಮಾನತೆಯಿತ್ತು. ಶ್ರೀಮಂತ, ಬಡವನ ಆಹಾರ, ನೀರು ಬಳಸುವ ಪದ್ದತಿಗಳು ಒಂದೇ ರೀತಿಯದ್ದಾಗಿದ್ದವು.ಆದರೆ ಕಾಲ ಬದಲಾದಂತೆ ಹೆಚ್ಚು ಹೆಚ್ಚು ನೀರು ಬಳಸುವಂತ ಮಾನವನ ಜೀವನ ವಿಧಾನಗಳು, ಆಹಾರ ಪದ್ಧತಿಯಿಂದಾಗಿ ನೀರಿನ ಮೂಲಗಳ ಮೇಲೂ ಅಧಿಕವಾದ ಒತ್ತಡ ಪ್ರಾರಂಭವಾಯಿತು. ಉಳ್ಳವರು ತಮ್ಮ ಸಂಪತ್ತನ್ನು ಬಳಸಿ ನೀರನ್ನು ಬಸಿಯುವ, ಕೂಡಿಸಿಕೊಳ್ಳುವ ಪ್ರಕ್ರಿಯೆಯೂ ಪ್ರಾರಂಭವಾಯಿತ್ತು. ವಾತವರಣದಲ್ಲಿನ ಬಲಾವಣೆ ಪ್ರಕೃತಿ ಮೇಲೆಯೂ ಪರಿಣಾಮ ಬೀರಿ ಈ ನೀರಿನ ಸೆಲೆಗಳು ಬೇಡಿಕೆಯ ಮಟ್ಟದಲ್ಲಿ ನೀರನ್ನು ನೀಡಲು ವಿಫಲವಾದವು.  ಕೈಗಾರೀಕರಣದಿಂದಾಗಿ ಸಿಹಿ ನೀರಿನ ಬುಗ್ಗೆಗಳು ಕಲುಷಿತಗೊಂಡವು. ನೀರು ಯತ್ತೇಚ್ಛವಾಗಿದ್ದರೂ ಬೃಹದಾಕಾರವಾಗಿ ಬೆಳೆಯುತ್ತಿದ್ದ ಮಾನವನ ದಾಹಕ್ಕೆ ಪರಿಸರ ಒಂದಲ್ಲ ಒಂದು ದಿನ ಬರಿದಾಗಲೇ ಬೇಕಿತ್ತು. ಆ ಬರಿದಾಗುವ ಕಾಲ ಈಗ ಬರುತ್ತಿದೆ. ಎಚ್ಚರ ವಹಿಸದಿದ್ದರೆ ಮುಂದೆ ಸಂಪೂರ್ಣವಾಗಿ ಬತ್ತಿಹೋಗುವ ಲಕ್ಷಣಗಳು ಕಾಣುತ್ತಿವೆ. ಎಚ್ಚರಿಕೆಯ ಗಂಟೆಗಳು ಮೊಳಗುತ್ತಿವೆ. ನೀರು ಸಿಕ್ಕರೂ ಸುರಕ್ಷಿತವಾದ, ಸ್ವಚ್ಛವಾದ ನೀರು ಎನ್ನುವುದು ಖಾತ್ರಿಯಿಲ್ಲ. ಭಾರತದಂಥ ದೇಶದಲ್ಲಿ ದಿನವೊಂದಕ್ಕೆ 1600 ಜನರು ಕಲುಷಿತ ನೀರಿನಿಂದ ಅಸ್ವಸ್ಥಗೊಂಡು ಅಸುನೀಗುತ್ತಾರೆ ಎಂಬದು ಬೆಚ್ಚಿ ಬೀಳಿಸುವ ಸಂಗತಿ. 

ಶೇಕಡ 50ಕ್ಕಿಂತ ಹೆಚ್ಚಿನ ಶುದ್ಧ ನೀರಿನ ಯೋಜನೆಗಳು ವಿಫಲವಾಗಲು ಬಹು ಮುಖ್ಯ ಕಾರಣ ಸಾಮಾನ್ಯ ಜನರ ಅಸಹಕಾರ ಹಾಗೂ ಉದಾಸೀನತೆ ಎಂದು ಸಂಸ್ಥೆಯೊಂದರ ಅಂಕಿ ಅಂಶಗಳು ಹೇಳುತ್ತವೆ. ನಮ್ಮ ಮಕ್ಕಳಿಗಾಗಿ, ಮುಂದಿನ ಜನಾಂಗಕ್ಕಾಗಿ  ಒಳ್ಳೆಯ ಪರಿಸರವನ್ನು ಉಳಿಸಬೇಕಾದ ಜವಬ್ದಾರಿ ನಮ್ಮ ಮೇಲಿರುವಾಗ ನೀರು ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಸಾಮೂಹಿವಾದ, ಸಾಂಘಿಕವಾದ ಪ್ರಯತ್ನಗಳು ಆಗಬೇಕಾಗಿದೆ. ತನ್ನ ಪೂರ್ವಜರಿಗಾಗಿ ಕೈಲಾಸದಿಂದ ನೀರನ್ನು ಹರಿಸಿದ ಭಗೀರಥನ ಪ್ರಯತ್ನ ನಮ್ಮ ನಿಮ್ಮದಾಗ ಬೇಕಾಗಿದೆ. ವ್ಯತ್ಯಾಸವೆಂದರೆ ಅದಕ್ಕೆ ಸ್ವರ್ಗದ ಮೊರೆ ಹೋಗಬೇಕಾದ ಅವಶ್ಯಕತೆಯಿಲ್ಲ, ಇರುವ ನೀರನ್ನು ಉಳಿಸಿಕೊಳ್ಳುವ, ನೀರಿನ ಮೂಲಗಳನ್ನು ಬೆಳೆಸುವ ಮನಸ್ಸು ಮಾಡಬೇಕಾಗಿದೆ. ಕಠಿಣ ತಪ್ಪಸಿನ ಬದಲು ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಶಿಸ್ತು, ನಮ್ಮದೇ ಉದಾಸೀನದ ಅಡೆತಡೆಗಳನ್ನು ದಾಟುವ ಸಂಕಲ್ಪ, ಪರಿಸರದ ಬಗೆಗಿನ ಗೌರವ ಬೆಳೆಸಿಕೊಳ್ಳಬೇಕಾಗಿದೆ. ತನ್ನ ಮನೆಯ ಚಂದದ ಹೂದೋಟಕ್ಕೆ ನೀರುಣಿಸುವ ಶ್ರೀಮಂತನಿಗೆ ಎದುರಿನ ಮನೆಯ ಕುಟುಂಬದ ನೀರಿನ ಬವಣೆ ಅರ್ಥವಾಗಬೇಕಾಗಿದೆ. 


ನೀರನ್ನು ನಮ್ಮದೇ ಆದ ರೀತಿಯಲ್ಲಿ ಉಳಿಸುವ 100 ಸರಳ ವಿಧಾನಗಳನ್ನು http://wateruseitwisely.com ಎಂಬ ಅಂತರ್ಜಾಲದ  ಸೈಟ್ ನಲ್ಲಿ ಕಾಣ ಬಹುದು. ಪಾತ್ರೆಗಳನ್ನು ತೊಳೆಯುವಾಗಿನಿಂದ ಹಿಡಿದು ನಮ್ಮದೇ ಪುಟ್ಟ ಕೈ ತೋಟದಲ್ಲಿ ನೀರನ್ನು ಹೇಗೆ ಬಳಸಬಹುದು ಎಂಬುದರ ಮಾಹಿತಿ ಇದರಲ್ಲಿದೆ. ಬಹುತೇಕ ಮಾಹಿತಿಗಳು ನಮಗೆ ತಿಳಿದಿರುವಂಥದೇ, ಆದರೆ ಅದನ್ನು ಕಡೆಗಣಿಸುತ್ತಾ ಬಂದವರು ನಾವು. ಇನ್ನು ಮುಂದೆ ಮನಸು ಮಾಡಬೇಕು ಆಷ್ಟೇ. ಇನ್ನು, ಭಾರಿ ಪ್ರಮಾಣದಲ್ಲಿ ಮಳೆ ಕಾಣುವ ಮಲೆ ನಾಡು, ಕರಾವಳಿ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ನೀರು ಹರಿದು ಸಮುದ್ರ ಪಾಲಾಗುತ್ತವೆ. ಹರಿದು ಹೋಗುವ ನೀರನ್ನು, ಸಂಗ್ರಹಿಸಿ, ಸದ್ಬಳಕೆ ಮಾಡಿಕೊಳ್ಳುವಂಥ, ನೀರಿಲ್ಲದ ಜಾಗಗಳಿಗೆ ಹರಿಸುವಂಥ  ಯೋಜನೆಗಳತ್ತ ನಮ್ಮ ಸರ್ಕಾರಗಳು, ನಾಯಕರುಗಳು ಗಮನ ಹರಿಸಬೇಕಾಗಿದೆ. ಕಷ್ಟವಾದರೂ ಅಸಾಧ್ಯದ ಮಾತಲ್ಲ. ರಾಜಕೀಯ ಇಚ್ಚಾಶಕ್ತಿ ಬೇಕಷ್ಟೆ. ನಮ್ಮ ಸ್ಥಳಗಳಲ್ಲೇ ಬೀಳುವ ಪ್ರತಿಯೊಂದು ಮಳೆಯೂ ಪ್ರಕೃತಿ ಕೊಡ ಮಾಡುತ್ತಿರುವ ನೈಜ ಕೊಡುಗೆ. ಅಗಾಧ ನೀರ ಕಣಜ. ಅದನ್ನು Rain Harvesting ಗಳಂಥ ಯೋಜನೆಗಳಿಂದ ಸಂಗ್ರಹ ಮಾಡುವ ಪ್ರಕ್ರಿಯೆಗೆ ಮತ್ತಷ್ಟು ಚುರುಕು ತರುವ ಕಾರ್ಯವನ್ನು ಸ್ಥಳೀಯ ಪೌರ ಸಂಸ್ಥೆಗಳೂ ಮಾಡಬೇಕಾಗಿದೆ. ನೀರಿನ ಮರು ಬಳಕೆಯಂಥ ಅವಿಶ್ಕಾರಗಳು ಮತ್ತಷ್ಟು ಹೆಚ್ಚಬೇಕಾಗಿದೆ.

ಈ ಬೇಸಿಗೆಯಲ್ಲಿ ನೀರಿನ ಅಭಾವವಿರುತ್ತದೆ ಎಂದು ಮಾಹಿತಿಗಳು ಬಂದಿವೆ. ಕಾವೇರಿ ಸಹಾ ಬರಿದಾಗಿರುವುದು ಮಾತ್ರವಲ್ಲದೆ, ನಮ್ಮ ಕೈಯಿಂದ ಜಾರಿದೆ. ಪ್ರತಿ ಹನಿ ಹನಿಯನ್ನೂ ಮುತ್ತಿನಂತೆ ಜೋಪಾನವಾಗಿ ಬಳಸಬೇಕಾದ ಕಾಲಘಟ್ಟದಲ್ಲಿ  ನಾವಿರುವಾಗ, ಜವಬ್ದಾರಿಯುತವಾಗಿ ಬಾಳೋಣ. ನಮ್ಮ ಪರಿಸರವನ್ನು ಕಾಪಾಡಿಕೊಳ್ಳೋಣ. 

-ಪ್ರಶಾಂತ್ ಇಗ್ನೇಷಿಯಸ್

Sunday 3 March 2013

ಬ್ರ. ಗೆಬ್ರಿಯಲ್ ಪೆರಿಚೋ‍ರ ನೆನಪುಗಳಲ್ಲಿ ಹುಟ್ಟಿದ ಮಾತುಗಳು..



ಮನಸ್ಸು ಹಿಂಡಿದಂತಾಯಿತು. ಕೇಳಿಸಿಕೊಳ್ಳಲು ಇಚ್ಛಿಸದ ವಿಷಯ ಕೇಳಿ ಮನಸ್ಸು ರೋಧಿಸಿತ್ತು.
ಅದೇ ಗೆಬ್ರಿಯಲ್ ಪೆರಿಚೋರ ಸಾವಿನ ಸುದ್ದಿ.
ಅಧಮ್ಯ ಕಲೆಗಾರ ಗೆಬ್ರಿಯಲ್ ಪೆರಿಚೋರನ್ನು ಸಾವು ಎಂಬುವಳು ಇಷ್ಟೂ ಬೇಗ
ವರಿಸಿಕೊಂಡು ಬಿಡುತ್ತಾಳೆಂದು ನಾನು ಕನಸು ಮನಸಿನಲ್ಲೂ ಊಹಿಸಿರಲಿಲ್ಲ.
ಗಟ್ಟಿಮುಟ್ಟಾಗಿ, ಮನೆಯ ಸುತ್ತ ಮುತ್ತಲಿನ ಗಲ್ಲಿಗಳನ್ನು ಸುತ್ತಾಡಿ, ರಸ್ತೆಯಲ್ಲಿ
ಸಿಕ್ಕಿದವರಿಗೆ ಬಿಟ್ಟಿ ಸಲಹೆಗಳನ್ನು ಕೊಟ್ಟು, ಬೆಸೆಲಿಕಾ ಮತ್ತು ಪಾಟ್ರಿಕ್ಸ್ ಚರ್ಚ್ ಗಳಿಗೆ ಹಾಜರಿ ಕೊಟ್ಟು ಮನೆಗೆ ಹಿಂದಿರುಗಿ ತನ್ನ ಹಾಸ್ಯಭರಿತ ಮಾತುಕತೆಗಳಿಂದ
ಮನೆಯಲ್ಲಿದ್ದವರೆನ್ನಲ್ಲ ನಕ್ಕಿ ನಗಿಸುತ್ತಿದ್ದ, ಇವಿಷ್ಟನ್ನು ತನ್ನ
ದಿನಚರಿಯಾಗಿಸಿಕೊಂಡಿದ್ದ ಪರಿಚೋ ಎಂಬ ಬೀದಿಬಸವ, ಕಿಂದರಿಜೋಗಿಯನ್ನು ಸಾವೆಂಬ ಮಾಯೆ
ನಿರ್ದಯೆಯಿಂದ ಕೈಕಾಲುಗಳನ್ನು ಕಟ್ಟಿ ಒಂದು ಕಡೆ ಮಲಗಿಸಿಬಿಟ್ಟಿತ್ತು.

ಪೂರಿಯಂತೆ ಉಬ್ಬಿದ ಮುಖ, ದಪ್ಪ ತುಟ್ಟಿ. ನಾಣ್ಯದಗಲದ ಕಣ್ಣುಗಳು, ಬೊಜ್ಜು ಹೊಟ್ಟೆ,
ಮಜಬೂತಾದ ದೇಹ, ಸ್ವಲ್ಪ ಬಾಗಿದ ಬೆನ್ನು. ಇವಿಷ್ಟು ಪೆರಿಚೋರ ಮೈಮಾಟವಾದರೆ, ಅವರ
ವ್ಯಕ್ತಿತ್ವದ ಆಳ ಅಗಲ ಇನ್ನೊಂದು ಬಗೆಯದು. ಚಿಕ್ಕದನ್ನೂ ದೊಡ್ಡದಾಗಿಸುತ್ತಿದ್ದ
ಪೆರಿಚೋ ವಿಶಾಲ ಹೃದಯದ ಮನುಷ್ಯ. ೧೦೦ ಎಂಬುವುದು ಗೆಬ್ರಿಯಲ್ ಬಾಯಲ್ಲಿ
೧೦೦೦೦೦ವಾಗುಬಿಡುತಿತ್ತು. ಇರುವೆ ಆನೆಯಾಗುತ್ತಿತ್ತು. ತನಗೆ ಸಿಕ್ಕ ಒಂದು ಚಿಕ್ಕ ಗೌಣ
ಸಹಾಯ ಅವನಿಗೆ ದೊಡ್ಡದೆನಿಸಿಬಿಡುತಿತ್ತು. ಒಬ್ಬ ಸಾಮಾನ್ಯ ಸ್ಕೊಲಸ್ಟಿಕ್- ಹುಡುಗ ಅವನ
ಕಣ್ಣಿಗೆ ರಾಜಮಹಾರಾಜನಾಗಿಬಿಡುತ್ತಿದ್ದ.   ಇದೇ ಒಂದು ಗುಣ ಗೆಬ್ರಿಯಲ್ ಎಂಬ ಸಾಮಾನ್ಯನ
ಪ್ರಸಿದ್ಧಿಯನ್ನು ಉತ್ತುಂಗದ ತುದಿಗೆ ಏರಿಸಿದ್ದು. ಇಲಿ ಹೋದ್ರೆ ಹುಲಿ ಹೋಯಿತು
ಎಂದು ಹೇಳುವುದೊಂದೆ ಅಲ್ಲ ಇಲಿಗೆ ಹುಲಿಯಂತಹ ಧೈರ್ಯ, ಶಕ್ತಿ, ಬಲಿಷ್ಠತೆ ತುಂಬಿ
ಜೀವಂತವಾಗಿ ಬಿಡಿಸುತ್ತಿದ್ದ ಜಾದುಗಾರ ಪರಿಚೋ.

ಯಾರಾದರೂ ಏನಾದರೂ ಒಂದು ಒಳ್ಳೆಯದು ಮಾಡಿ, ಅಥವಾ ಏನಾದರು ಸಾಧಿಸಿ ಪರಿಚೋನ ಕಣ್ಣಿಗೆ
ಸಿಕ್ಕಿಹಾಕಿಕೊಂಡರೋ ಮುಗಿಯಿತು ಅವರಒಳ್ಳೆತನಸಾಧನೆ ಪೆರಿಚೋರ ಹುಚ್ಚುಬಾಯಿಯಲ್ಲಿ
ಕ್ಷಣಕ್ಕೊಮ್ಮೆ ಹುಟ್ಟಿ, ಮರು ಹುಟ್ಟಿ, ಮನೆಗೆ ಬಂದವರ ಕಿವಿಗಳಲ್ಲಿ ಟಂ ಟಂ
ಅಗಿಬಿಡುತ್ತಿದ್ದವು. ಹೀಗಿ ಇನ್ನೊಬ್ಬರ ಒಳ್ಳೆತನವನ್ನು ಗುರುತಿಸಿ ಬೆಳೆಸುವಲ್ಲಿ ಪರಿಚೋ
ಎಂದು ಹಿಂದ್ಬೀಳಲಿಲ್ಲ. ಕೆಲ ಮಿಷನ್ಗಳ spokeperson ಆಗಿದ್ದ(?) ಪೆರಿಚೋ
ಒಳ್ಳೆತನವನ್ನು ಡಂಗುರಿಸುವ ಜಾಹೀರಾತಾಗಿಬಿಟ್ಟಿದ್ದರು.

ಕಥೆಗಳನ್ನು ಹೇಳುವುದರಲ್ಲಿ ಎಷ್ಟೂ ನಿಪುಣನೆಂದರೆ ಅವರ ಕಾಲ್ಪನಿಕತೆಗೆ ಎಲ್ಲೆ
ಎಂಬುವುದೇ ಇರಲಿಲ್ಲ. ಒಂದು ಚೌಕಟ್ಟು, ತೆಕ್ಕೆಗೆ ಸಿದ್ಧಿಸದ ಅವರ ಕಾಲ್ಪನಿಕತೆ
ಕೆಲವೊಮ್ಮೆ ಅಸ್ವಾಭವಿಕತೆಯ ವೇಷವನ್ನು ಧರಿಸಿಕೊಂಡರೂ ಅವು ಹಾಸ್ಯವನ್ನು ಎಂದು
ಬರಿದಾಗಿಸಿಕೊಂಡಿರಲಿಲ್ಲ. ಸ್ವಾರಸ್ಯವಾಗಿ ಕಥೆಗಳನ್ನು narrate ಮಾಡುವುದಿರಲೀ
ಕಥೆಗಳಲ್ಲಿ ಸಿಗುತ್ತಿದ್ದ ಕೇಂದ್ರಶಕ್ತಿ, ಅಧಮ್ಯ ಪ್ರತಿಭೆ, ಸೃಷ್ಟಿ -ಉತ್ಪ್ರೇಕ್ಷಾಪ್ರಯೋಗ ನಿಜವಾಗಲೂ ಅದ್ಬುತ.

ಅಟೋ ಬಂದು ಅವನಿಗೆ ಡಿಕ್ಕಿ ಹೊಡೆದರು ಸೊಳ್ಳೆ ಕಚ್ಚಿದಂತಾಗಿ ಹಿಂದೆ ತಿರುಗಿ ನೋಡಿದಾಗ
ಅವನಿಗೆ ಡಿಕ್ಕಿ ಒಡೆದ ಆಟೋ ಮೋರಿಯ ಪಾತಾಳದಲ್ಲಿ ಬಿದಿದ್ದು, ತಾನು ಸಾಕಿದ ಹಸುವಿನಿಂದ
ಬೇಕುಬೇಕಾದಾಗೆಲ್ಲಾ ತೊಡೆ ಮಾಂಸ ಕಟಾವು ಮಾಡಿ ತಿಂದರೂ ಪುನ: ಬೆಳೆದುಕೊಳ್ಳುತ್ತಿದ್ದ
 ಹಸುವಿನ ತೊಡೆ ಮಾಂಸ, ಅಂತೋಣಿಯವರ ಪುಣ್ಯಕ್ಷೇತ್ರಕ್ಕೆ ಹೋಗಿ ಅತ್ತು ಕಾಡಿ ಬೇಡಿ ಕಣ್ಣೀರು
ಸುರಿಸಿ, ಕಣ್ಣೀರ  ಒರೆಸಲು ತಂದ ಹತ್ತಾರು ಕರವಸ್ತ್ರಗಳು ತೇವಗೊಂಡು ಕೊನೆಗೆ ಒಂದು
ದೊಡ್ಡ ಕಂಬಳಿ ಸಂಪೂರ್ಣ ಒದ್ದೆಯಾಗಿದ್ದು ಇವೆಲ್ಲವು ಉತ್ಪ್ರೇಕ್ಷಾಪ್ರ ಯೋಗದ
ಅಭ್ಯಾಸಕ್ಕೆ ಪಕ್ಕ ಪಠ್ಯಗಳಾಗಬಹುದೆನೋ. ಅವನ ಉತ್ಪ್ರೇಕ್ಷೆಗಳು ನಮ್ಮಲ್ಲಿ ನಗು
ಹುಟ್ಟಿಸಿದ್ವೆ ಹೊರತು ಅದರಲ್ಲಿ ಅಡಗಿ ಕುಳಿತ್ತಿದ್ದ ಪರಿಚೋ ಎಂಬುವವನ ಆಸೆ ಅಭಿಲಾಸೆ
ನೋವು ನಲಿವುಗಳು ಮತ್ತು ಅವನಿಗೆ ತಪ್ಪಿದ ಅನುಭೋಗಗಳು ನಮ್ಮ ಕಿವಿಗಳಿಗೆ
ಕೇಳಿಸವಿಲ್ಲವೇನೋ!

ಅಂಚೆಚೀಟಿಗಳ ಸಂಗ್ರಹ, ಪ್ರಾಚೀನ ನಾಣ್ಯಗಳ ಸಂಗ್ರಹ, ಪೋಪ್ಗಳ ಚಿತ್ರಗಳಿದ್ದ
ಅಂಚೆಚೀಟಿ, ನಾಣ್ಯಗಳ ಸಂಗ್ರಹ, ಹೀಗೆ ಬೇಕಾದಷ್ಟು ಹವ್ಯಾಸಗಳನ್ನು ಬೆಳೆಸಿಕೊಂಡಿದ್ದ
ಪೆರಿಚೋ ಅವುಗಳ ರಸಸ್ಥಿತಿಯನ್ನು ಸಹ ಕಂಡಿದ್ದರು. ಮನೋಭಿಲಾಷೆಯ ಕ್ರಿಯಾಶೀಲ ರಸಸ್ಥಿತಿಯ
ಪರಮಾಭಿವ್ಯಕ್ತಿಗೆ ಒಂದು ರೂಪಕವಾದರು. ತನ್ನಲ್ಲಿ ಉರಿಯುತ್ತಿದ್ದ ಅನಾಥಪ್ರಜ್ಞೆ
ನಂದಿಸಲು ಇಂತಹ ಹವ್ಯಾಸಗಳ ಬಳಸಿಕೊಂಡರೋ ಅಥವಾ ಅನಾಥಪ್ರಜ್ಞೆ ಎಂಬ ಬಲಿಷ್ಠ ಪ್ರಾಣಿಯ
ಉಗ್ರ ಹಿಂಸೆಯೇ ಎಲ್ಲಾ ಕೌಶಲ್ಯ,ಹವ್ಯಾಸಗಳಿಂದ ಅವರನ್ನು ತುಂಬಿತ್ತೋ ಗೊತ್ತಿಲ್ಲ.
ಸಾವಿರಾರು ಜನರ ಪ್ರೀತಿಗೆ ಪಾತ್ರರಾಗಿದ್ದ ಅವರು ಅನಾಥಪ್ರಜ್ಞೆಯಲ್ಲಿ
ಸಾಯಲಿಲ್ಲವೆಂಬುವುದೇ ನನ್ನ ಗ್ರಹಿಕೆ.

ಮನೆಗೆ ಬಂದ ಅತಿಥಿಗಳ ಆತಿಥ್ಯದ ಜವಾಬ್ದಾರಿಯನ್ನು ಸ್ವಂತ ಇಷ್ಟದಿಂದ ತಾನೇ
ವಹಿಸಿಕೊಳ್ಳುತ್ತಿದ್ದ ಪರಿಚೋ ಅತಿಥಿ ಅಭ್ಯಾಗತರನ್ನು ಆದರಿಂದ ಸ್ವಾಗತಿಸಿ
ಉಪಚರಿಸುತ್ತಿವುದಿರಲಿ ಅವರಿಗೆ ಮನೆಯ ಪ್ರತಿಯೊಂದು ಮಾಹಿತಿಯನ್ನು ಒದಗಿಸಿ
ಅತಿಥಿಗಳನ್ನು ನಿರಾತಂಕವಾಗಿಬಿಡಿಸುತ್ತಿದ್ದ. ಅವರ ಆರೈಕೆಗೆ ಯಾವತ್ತು ಪ್ರಾಂತ್ಯ,
ಭಾಷೆ, ಧಾರ್ಮಿಕ ಗುಂಪು, ಸಭೆ ಎಂಬ ಮಾನವ ನಿರ್ಮಿತ ಬೇಧಗಳ ಗರಬಡಿಯಲಿಲ್ಲ. ಅವರ
ಆರೈಕೆಗೆ ಎಲ್ಲಾ ವ್ಯಕ್ತಿಗಳು ಸಮಪಾಲುದಾರರಾಗುತ್ತಿದ್ದರು.

ಕೊನೆಗೆ ಹೇಳಲೇಬೇಕಾದ ಒಂದೇ ಒಂದು ಮಾತು ಕೇಳಿ:
ಗೆಬ್ರಿಯಲ್ ಸಮೀಪಿಸಿದಷ್ಟು ದೂರವಾಗುವ ಕಾಲುದಾರಿ, ಗ್ರಹಿಕೆಗೆ ಪ್ರಯಾಸ ಕೇಳುವ ಒಂದು ಪುಸ್ತಕ, ತನ್ನ ಚಿಕ್ಕಪುಟ್ಟ ಆಟಗಳಲ್ಲಿ ಹಾಸುಹೊಕ್ಕ ಪುಟ್ಟ ಬಾಲಕ, ಬರಹಗಾರರಿಗೆ ಆಗಬಹುದಾದ ಒಂದು ಹಿಡಿ ಕಾದಂಬರಿ.
ಅವರ ಅತ್ಮಕ್ಕೆ ಶಾಂತಿ ನಿತ್ಯವಾಗಲಿ.
ಜೋವಿ ಯೇ..
Read more!