Tuesday 29 January 2013

ಹೊಸವರ್ಷದ ಆಚರಣೆ


ಮೊನ್ನೆ Newbilis ಎಂಬ ಪುಟ್ಟಿಯ ಹುಟ್ಟಿದ ದಿನದಾಚರಣೆಗೆ ಹೋಗಿದೆ. ಅವಳು ಹೊಸವರ್ಷದ ದಿನದಂದು ಹುಟ್ಟಿದ್ದರಿಂದ ಅವಳಿಗೆ Newbilis ಎಂದು ಹೆಸರಿಟ್ಟಿದ್ದರು. Newbilis ಎಂದರೆ ಹೊಸವರ್ಷ ಎಂದಾರ್ಥ. ಅವಳ ನೋಡಿ ಸೂರೆಗೊಂಡು ಬರೆದ ಸಾರವೇ ಸಾಲುಗಳು.

ಯಾರೋ ಕರೆದ
‘ಹೊಸವರ್ಷ ಪುಟ್ಟಿಯ ಹುಟ್ಟಿದಾಚರಣೆಗೆ
ಹೋದೆ ಒಲ್ಲದ ಮನಸ್ಸಿನಿಂದ
ಆಗಲೇ ಸೋಪಾಧಿಕವಾಗಿಬಿಟ್ಟಿದ್ದ
ಆಚರಣೆಗಳ ಬಗೆಗಿದ್ದ ಸಿಡುಕಿನಿಂದ

ಹೋಗಿದಾಕ್ಷಣ ಕಂಡಿದ್ದು
ಕೇಳದೆ ಕೂಡಿದು
ಪುಟ್ಟ ಮಗು 'ಹೊಸವರ್ಷ
ನವಿರಾದ ನಗು
ತೀವ್ರತೆಯ ಸೆಲೆಯಾಗಿದ್ದ  ಮಗು
ಯಾರೋದೋ ಕಟ್ಟುಪಾಡಿನ ಜಾಲ್ರಿ
ಸೂಸಿಗೆ ಸಿಗದ ಅವಳ ಹವಾಭಾವ
ನನ್ನ ನಿಖರ ಮಾತಿನ ಗಾಣದ ಎರೆಗೆ
ತುತ್ತಾಗಲು ನಿರಾಕರಿಸಿತ್ತಿದ್ದರೂ
 ಮಾತು ಕೈಬಿಡದೆ ಪ್ರಯತ್ನಿಸುತಿತ್ತು…

ಅವಳು ಮಾತ್ರ
ದಿಟ್ಟಿಸಿದಳು
ನಕ್ಕಳು..
ಏನನ್ನೋ ಪ್ರಶ್ನಿಸಿ ಬೆನ್ನೆಟ್ಟಿದಳು
ಕಂಡು ಹೊಸಬರ ಬೆಚ್ಚಿಬೆರಗಾದಳು
ಅಮ್ಮನ ಟಾರ್ಚಬೇಕೆಂದು ಹಠ ಹಿಡಿದು
ಕೊಟ್ಟಿದು ಬಿಸಾಡಿದಳು
ಬೇಡದು ಅಪ್ಪಿಕೊಂಡಳು
ಓಡಲು ಹೋಗಿ ಬಿದ್ದು ಎದ್ದಳು
ಎದ್ದು ಬಿದ್ದಳು
ಅಂಬೆಗಾಲಿಡುತ್ತಾ ಮನೆಯನೆಲ್ಲಾ ಸುತ್ತಾಡಿ
ಬಂದು ಕೂತಳು
ಕೂತು ಚೆಲ್ಲಾಡಿದಳು
ಬೆಲೆಯ ಹಂಗಿರಲಿಲ್ಲ ಅವಳಿಗೆ
ಅಂಟಿಕೊಳ್ಳುವ ದುರಾಸೆ ಅವಳಲ್ಲಿ ಹುಟ್ಟಿರಲಿಲ್ಲ
ನಾ ಗಂಡೆನ್ನಲಿಲ್ಲ
ನಾ ಹೆಣ್ಣೆನ್ನಲಿಲ್ಲ
ಜಗತ್ತಿನ ಬೇದವೆಂಬ ವ್ಯಾಕರಣ ಅವಳಿಗೆ ತಿಳಿದಿರಲಿಲ್ಲ
ಲಾಭನಷ್ಟಗಳನ್ನು ಪಕ್ಕಕಿಟ್ಟು
ಸಿಕ್ಕಿದು ಸಿಗದಿದ್ದ
ಪ್ರತಿ ಕ್ಷಣದ ಪ್ರತಿ ಕಣವನ್ನು
ಅಮ್ಮನ ಎದೆಹಾಲು ಹೀರಿದಂತೆ
ಅನುಭೋಗಿಸುತ್ತಾ ಕುಣಿದು ತೊದಲಿತ್ತಿದ್ದಳು
ಮಂದಹಾಸ
ಹೊಸತನ
ಪರಮಾನಂದಗಳ ಜೊತೆಯಾಗಿ

ಅವಳ ಅನನ್ಯಕ್ಕೆ
ನನ್ನ ಬರವಣಿಗೆಯ ಬಲೆ ಹಾಕಿ
ಬಂಧಿಸುತ್ತಿರುವ ನನ್ನ ಮನಸ ನೋಡಿ
ವಿಕೃತ್ತಗೊಂಡೆ.

ಕೊನೆಗೆ,
ಪುಟ್ಟ ಹೊಸವರ್ಷಳನ್ನು ನೋಡಿ
ನನ್ನ ಕಟ್ಟುಪಾಡಿನ ಬದುಕಿಗೆ ಅವಳ ತೋರಿಸಿ
ನಾನೇ ಅವಳಾಗಿ
ಅವಳೇ ನಾನಾಗಿ
ವರ್ಷವಿರಲ್ಲಿ
ಇಡೀ ಬದುಕೇ ಅವಳಂತೆ ನಾನು ಕಳೆಯಬೇಕೆನುವಷ್ಟರಲ್ಲಿ
ಆಚರಣೆ ಮುಗಿಸಿ ಮರಳಿದೆ ನನ್ನ ಮನೆಗೆ
ಹೊಸತನವಿಲ್ಲದ ಯಾರೋದೋ ಕಟ್ಟುಪಾಡಿಗೊಳಪಟ್ಟ
ಮನೆಯೊಡೆಯನಿಲ್ಲದ ನನ್ನ  ದರ್ವೆಸಿ ಬದುಕಿಗೆ

ಜೋವಿ ಯೇ.
Read more!

Monday 14 January 2013

ಹುಡುಗ ಸಿಬಿಯುಸ್…



ಮದುವೆಯ
ಸಮಾರಂಭದಲ್ಲಿ
ಇರುವುದೆಲ್ಲಾ ಸಗಡರ ಸಂಭ್ರಮ ಎಂಬ ನನ್ನ ಭ್ರಮೆಗೆ
ಸಿಕ್ಕಿಕಾಡಿದ್ದು ಹುಡುಗ ಸಿಬಿಯುಸ್ !!!

ವಯಸ್ಸನ್ನು ಮೀರಿದ ಹವಾಭಾವ
ಅಪ್ಪನ ಗಾಂಭಿರ್ಯದ ಒರಟು ಜೀವ
ಒಣ ಎಲೆಯ ಮುಖದ
ಏನನ್ನೋ ಸಾಲ ಕೇಳುವಂತಿದ್ದ ಆ ಹುಡುಗ
ಚಿಂತೆಬಾವಿಯ ಆಳಕಿಳಿದಿದ್ದ ಅವನ ಮನಸ್ಸು
ವಿಧಿಗೆ ಆಟಕ್ಕೆ ಬರಿದಾದಂತೆ ಅವನ ಕನಸ್ಸು
ದಿಕ್ದೆಸೆಗಳು ತಪ್ಪಿ ಕಂಗೆಟ್ಟವನಂತೆ
ಶಬ್ದದಾಚೆಗಿನ ಶೂನ್ಯದಲ್ಲಿ ಕರಗಿ ಹೋದವನಂತೆ ಕಂಡ
ಸಿಬಿಯುಸ್…

ತಮ್ಮನ ಕೈಗೆ ಕೈಯನಿಟ್ಟು
ನಡೆಯುತ್ತಿದ್ದ ಸಡಗರಕ್ಕೆ ಕೈಕೊಟ್ಟು
ಅಲ್ಲಿ ಇಲ್ಲಿ ಕೂತು ಕೇಳುತ್ತಿರುವುದನು ಕೂಡಿಟ್ಟು
ಹಸಿದ ಕಣ್ಣುಗಳಲ್ಲಿ ಕಾಣುವುದೆಲ್ಲಾವ ಹಿಡಿದಿಟ್ಟು
ಅವರನು ಇವರನು ದಿಟ್ಟಿಸುತ್ತಾ
ಏನೇನೋ ತನಗೆ ತಾನೆ ಹೇಳಿಕೊಳ್ಳುತ್ತಾ
ಕಂಡ ಜನಜಂಗುಳಿಯಲ್ಲಿ ಅಪರೂಪ ತಾತ್ವಿಕನಂತೆ

ಆಮೇಲೆ
ಅನಾಥ ಅವನೆಂದು ತಿಳಿದು
ನನ್ನ ಮನಸ್ಸು ದಿಟ್ಟಿಸಿ
ಕೇಳಿತು
ಸಮಾರಂಭದಲ್ಲಿ
ಅವನು ನೋಡುತ್ತಿರುವುದಾದರೂ ಏನು ಎಂದು…

ಅಮ್ಮಂದಿರ ಜತೆಗೆ ಆಟವಾಡುತ್ತಿದ್ದ ಮುದ್ದು ಮಕ್ಕಳ ನಗುವಿತ್ತು
ಸಂಭ್ರದಲ್ಲಿ ಮೈ ಮರೆತ ಕೊಟುಬೂಟಿನ ಜನರ ಕೂಗಾಟವಿತ್ತು
ಅಮಲಿನ ಅರ್ಭಟವಿತ್ತು
ಕದ್ದು ಇಣುಕುತ್ತಿದ್ದ ಹುಡುಗ ಹುಡಿಗಿಯರ ಮೈಮಾಟವಿತ್ತು
ಕಷ್ಟದಲ್ಲೂ ಸುಖದಲ್ಲೂ ಸದಾ ಜತೆಗಿರುವೆ ಎಂದೇಳುತ್ತಿದ್ದ ಜೋಡಿಗಳ ಕಂಗಳಲ್ಲಿ
ನಾಳಿನ ಭಯವಿತ್ತು
ಖರ್ಚಿನಲ್ಲಿ ಮುಳುಗಿದ ಮದುವೆಯ ಲೆಕ್ಕಚಾರವಿತ್ತು
ವೈಯಾರವಿತ್ತು..ವೈಭವವಿತ್ತು
ಆಲಂಕಾರ ತುಂಬಿ ತುಳುಕಿತ್ತು
ಮೃಷ್ಟಾನ ಭೋಜನದ ಸುವಾಸನೆಯಲ್ಲಿ
ಅಪ್ಪ ಅಮ್ಮರ ನಿಟ್ಟುಸಿರು
ನವದಂಪತಿಗಳ ಬಿಸಿ ಉಸಿರು ಹೆಪ್ಪುಗಟ್ಟಿ ನಿಂತಿತ್ತು

ಹೀಗೆ
ಇವುಗಳಲ್ಲಿ
ಅವನು ನೋಡಬೇಕೆಂದಿರುವುದಾದರೂ ಏನು?
ಅವನ ಅಂತರಾಳಕ್ಕೆ ಕನ್ನಡಿ ಹಿಡಿಯಲು
ನನದಲ್ಲದ ಅವನ ಮನಸ್ಸನು ಮಾತಿಗಿಳಿಸಲು
ಅಕ್ಷರಗಳ ತಡಕಾಟದಲ್ಲಿ
ತೂಗಿ ಕೊಡುವ ಯಾರದೋ ಅಂಗಡಿಯಲ್ಲಿ
ಖರೀದಿಸಿದ ಅಕ್ಷರಗಳ ಮೊರೆಹೋಗಿ
ಕೊನೆಗೆ
ಭಗ್ನಗೊಂಡು ಹೇಳಿತ್ತು ಮನಸ್ಸು ಮಾಗಿ
“ಅವನ ಒಟ್ಟು ಭಾವಸಮುದ್ರವನ್ನು ತೂಗಿ
ತನ್ನ ಅಂಗೈನಲ್ಲಿ ಹಿಡಿದಿಡಲು ಹೆಣಗಾಡುತ್ತಿರುವ ಹುಚ್ಚ ತಾನೆಂದು…”
ಸುಮ್ಮನಾದೆ
ಹುಟ್ಟಿಸಿದ ದೇವರ ಬೈಯುತ್ತಾ....!!!
ಜೋವಿ ಯೇ.ಸ

Monday 7 January 2013

ಸ್ಕೂಲ್ ಸಂತೆ

ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ ಹಾಡು ಕೇಳಿ
ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು
ಎಂಬ ದಾಸರ ಪದದ ಗೀತೆ ಕೇಳುತ್ತಿದ್ದಂತೆ ಮನಸ್ಸು ಉಲಾಸಗೊಳ್ಳುತ್ತದೆ. ದೇವರ ನಾಮವನ್ನು ಕಲ್ಲು ಸಕ್ಕರೆಗೆ ಹೋಲಿಸಿ ಅದರ ಸವಿಯನ್ನು ಬಲ್ಲವರೇ ಧನ್ಯರು, ಎಲ್ಲರೂ ಆ ಸವಿಯನ್ನು ಅನುಭವಿಸಿರಿ ಎಂದು ಕರೆ ನೀಡುವಾ ಆಧ್ಯಾತ್ಮ ಗೀತೆಯಿದು. ಹಾಗೆಯೇ ಮುಂದಿನ ಸಾಲುಗಳಲ್ಲಿ ದಾಸರು ಸಂತೆಯ ಚಿತ್ರಣವನ್ನು ನೀಡುತ್ತಾರೆ. ಈ ದೇವರ ನಾಮವೆಂಬ ಕಲ್ಲು ಸಕ್ಕರೆಯನ್ನು ಸಂತೆಯಲ್ಲಿ ಇಟ್ಟು ಮಾರಬೇಕಾಗಿಲ್ಲ, ಸಂತೆ ಸಂತೆಗೆ ಹೋಗಿ ಶ್ರಮ ಪಡಬೇಕಾಗಿಲ್ಲ ಎಂಬ ಸಾಲುಗಳು ಬರುತ್ತವೆ. ಅಂತೆಯೇ ಒಂದು ಎತ್ತಿನ ಗಾಡಿಯಲ್ಲಿ ಹೊತ್ತುಕೊಂಡು ಹೋಗಬೇಕಾಗಿಲ್ಲದ, ಗೋಣಿಯಲ್ಲಿ ತುಂಬ ಬೇಕಾಗಿಲ್ಲದ ಉತ್ತಮ ಸರಕಿದು ಎಂದು ದೈವ ನಾಮ ಸ್ಮರಣೆಯನ್ನು ಲೋಕದ ವ್ಯಾಪಾರ, ಜಂಜಾಟಗಳೊಂದಿಗೆ ಉದಹರಿಸುತ್ತಾ ಸಾಗುತ್ತಾರೆ ದಾಸರು. ಈ ರೀತಿಯ ಉದಹರಣೆಗಳೊಂದಿಗೆ ಸಾಮಾನ್ಯ ಜನರನ್ನು ಯಶಸ್ವಿಯಾಗಿ ತಲುಪಿದ ಹೆಗ್ಗಳಿಕೆ ಈ ದಾಸ ಸಾಹಿತ್ಯದ್ದು.  ಹಾಗೆಯೇ ಬದುಕಿನ ಜಂಜಾಟಗಳೆಲ್ಲಾ ಕ್ಷಣಿಕ ಎಲ್ಲವೂ ಮುಗಿದ ಮೇಲೆ ಶಾಶ್ವತವಾಗಿ ಉಳಿಯುವುದು  ಭಗವಂತನೊಂದಿಗಿನ ಅನುಬಂಧವೊಂದೇ ಎಂಬರ್ಥದ ಮತ್ತೊಂದು ಪದವೂ ದಾಸ ಸಾಹಿತ್ಯದಲ್ಲಿ ಇದೆ. ಬದುಕನ್ನು ಒಂದು ಸಂತೆಗೆ ಹೋಲಿಸಿ, ಸಂತೆಯಲ್ಲಿ ಕಾಣ ಸಿಗುವ ವಸ್ತುಗಳು, ಘಟನೆಗಳು, ಆಗು ಹೋಗುಗಳು, ವ್ಯಾಪರದ ದೃಶ್ಯಗಳು ನಂತರ ಸಂಜೆ ಎಲ್ಲವೂ ಖಾಲಿಯಾದಾಗ ಉಳಿಯುವ ಮೌನ, ಖಾಲಿತನ, ನಿರಾಳತೆಯನ್ನು ನಮ್ಮ ಬದುಕಿನ ನಶ್ವರತೆಗೆ ಈ ದಾಸರಪದ ಸುಂದರವಾಗಿ ಹೋಲಿಸಿ ವರ್ಣಿಸುತ್ತದೆ. ಅಕ್ಕ ಮಹಾದೇವಿಯ 'ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯ?' ಸಾಲಂತೂ ಸರ್ವಕಾಲೀಕ. 

ಸಂತೆಯೆಂಬುದು ಒಂದು ವ್ಯಾಪಾರದ ಚಟುವಟಿಕೆಯಾದರೂ ಈ ಅಧ್ಯಾತ್ಮದ ಬರಹಗಳಲ್ಲಿ ಅದು ನುಸುಳಿರುವುದನ್ನು ಕಂಡಾಗ ಸಂತೆಗಳು ನಮ್ಮ ಜನರ ಜೀವನ, ಸಂಸ್ಕೃತಿಯ ಪ್ರಮುಖ ಭಾಗವಾಗಿತ್ತು ಎಂಬುದನ್ನು ಗಮನಿಸಬಹುದು. ಮೇಲಿನ ಅಧ್ಯಾತ್ಮದ ಸಾಲುಗಳು ಅರ್ಥವಾಗಬೇಕಾದರೆ ನಮಗೆ ಒಂದು ಸಂತೆಯ ಸಮಗ್ರವೂ ಅತ್ಯಗತ್ಯ. ಈ ಸಾಲುಗಳಲ್ಲಿ ಬರುವ ಈ ಸಂತೆಗಳ ವೈವಿಧ್ಯತೆ, ಸಡಗರ, ಗಿಜಿಗಿಜಿ,ಸಂಭ್ರಮ, ಜಂಜಾಟದ  ಸ್ಪಷ್ಟ ಚಿತ್ರಣ ನಮಗೆ ದೊರಕಬೇಕಾದರೆ ಹಳ್ಳಿಗಳಲ್ಲಿ ನಡೆಯುವ ಸಂತೆಗಳಿಗೊಮ್ಮೆ ಭೇಟಿ ಕೊಡಲೇಬೇಕು. ಕೆಲವೇ ವರ್ಷಗಳ ಹಿಂದಿನವರೆಗೂ ನಮ್ಮ ಬೆಂಗಳೂರಿನ ಹೊರವಲಯದ ಹಳ್ಳಿಗಳಲ್ಲೇ ಈ ರೀತಿಯ ಹಲವಾರು ಸಂತೆಗಳನ್ನು ಕಾಣಬಹುದಿತ್ತು. ಆದರೆ ಯಾವಾಗ ಬೆಂಗಳೂರು ಕೇವಲ ಬೆಂಗಳೂರಾಗಿ ಉಳಿಯದೇ ಬೃಹತ್ತ್ ಬೆಂಗಳೂರಾಯಿತೋ, ಸಂತೆಗಳು ಮಾಯವಾಗಿ ಹೋಗಿವೆ. ಆ ಜಾಗಗಳಲ್ಲಿ ಈಗ ನೈಸಾದ ರೋಡುಗಳು, ಗಿಡ ಮರವಿಲ್ಲದ ಟೆಕ್ನಾಲಜಿ ಪಾರ್ಕುಗಳು, ನಮೋ ವೆಂಕಟೇಶವಿಲ್ಲದೆ ಪ್ರಾರಂಭವಾಗುವ ಮಲ್ಟಿಪ್ಲೆಕ್ಸುಗಳು, ಆಧುನಿಕ ಜಾತ್ರೆಗಳಾದ ಮಾಲುಗಳು, ಹುಟ್ಟು ಸಾವು ಎರಡಕ್ಕೂ ಕಟ್ಟುವ ಬಣ್ಣದ ಬ್ಯಾನರ್ ಗಳು, ಫ್ಲೆಕ್ಸುಗಳು ಎದ್ದು ನಿಂತಿವೆ.  ಇವೆಲ್ಲದರ ಮಧ್ಯೆ ನಮ್ಮ ಮಕ್ಕಳಿಗೆ ಸಂತೆಗಳನ್ನು ತೋರಿಸುವುದೆಲ್ಲಿಂದ, ಮೇಲಿನ ದಾಸರ ಪದವನ್ನು ಅರ್ಥ ಮಾಡಿಸುವುದು ಹೇಗೆ ಎಂದು ನಿರಾಸೆ ಪಡಬೇಕಾಗಿಲ್ಲ. ಒಂದು ಸಂತೆಯ ಗಿಜಿಗಿಜಿ, ಸಂಭ್ರಮ, ತಲ್ಲಣ, ಅವಸರ, ಫಜೀತಿಗಳೆಲ್ಲಾ ನೋಡಬೇಕಾದರೆ ಬೆಂಗಳೂರಿನ ಯಾವುದಾದರೂ ಪ್ರತಿಷ್ಠಿತ ಶಾಲೆಯ ಮುಂದೆ ಬೆಳಿಗ್ಗೆ ಶಾಲೆ ಪ್ರಾರಂಭವಾಗುವ ಸಮಯದಲ್ಲಿ ಹೋಗಿ ನಿಂತರೆ ಸಾಕು. ರಸ್ತೆ ವಿಶಾಲವಾಗಿರದೆ ಕಿರಿದಾಗಿದ್ದರೆ,ನೂಕು ನುಗ್ಗುಲು, ಟ್ರಾಫಿಕ್ಕ್ ಜ್ಯಾಮ್ ಆಗುವ ಶಾಲೆಯಾದರೆ ಇನ್ನೂ ಉತ್ತಮ. ಆ ಬೆಳಗ್ಗಿನ ಒಂದು ಅರ್ಧ ಗಂಟೆ ಅದು ಹಳ್ಳಿಯ ಸಂತೆಯೇ. ಎಲ್ಲರಿಗೂ ಅವಸರ. ಇಲ್ಲಿ ಅವರಸವೇ ಅನುಕೂಲಕ್ಕೆ ಕಾರಣ. 

ಮೊದಲಿಗೆ ಒಂದು ಕಡೆಯಿಂದ ಬರುವ ಸ್ಕೂಲ್ ವ್ಯಾನಿಗೆ ಎಲ್ಲರೂ ಜಾಗ ಬಿಡಲೇ ಬೇಕು. ಏಕೆಂದರೆ ಅದು ಆ ಸ್ಕೂಲಿನ ವ್ಯಾನು. ಆ ವ್ಯಾನಿನ ಡ್ರೈವರ್‌ದು, ಸಂತೆ ನಡೆಯುತ್ತಿರುವ ಊರಿನ ಗೌಡರ ಎತ್ತಿನ ಗಾಡಿ ಓಡಿಸುವವನ ಭಂಗಿ, ಠೀವಿ.  ನಿಂತ ವ್ಯಾನಿನಿಂದ ಇಳಿಯುತ್ತಿರುವ ಅಥವಾ ಇಳಿಸುತ್ತಿರುವ ಮಕ್ಕಳನ್ನು ನೋಡಿದ ಕ್ಷಣ ಸಂತೆಗಳಲ್ಲಿ ಲಾರಿ ಮೆಟಡೋರ್‌ನಿಂದ ಇಳಿಸಿಕೊಳ್ಳುತ್ತಿರುವ ಮೂಟೆಗಳ ಚಿತ್ರಣ ಸಿಗದಿದ್ದರೆ ಕೇಳಿ. ಇದಕ್ಕೆ ಮಕ್ಕಳ ಬ್ಯಾಗುಗಳು ಒಂದು ಕಾರಣವಾದರೆ ಮಕ್ಕಳ ನಿರ್ಭಾವುಕ ಮುಖ ಭಾವ ಮತ್ತೊಂದು ಕಾರಣ. ಒಂದು ಮೂಟೆ ಎಳೆದ ತಕ್ಷಣ ಅದಕ್ಕೆ ಒರಗಿಕೊಂಡಿದ್ದ ಇನ್ನೊಂದು ಮೂಟೆ ತಾನಾಗಿಯೇ ಬೀಳುವಂತೆ, ವ್ಯಾನ್ ನಿಂತ ಮೇಲೆ ಮಕ್ಕಳು ನಿಂತುಕೊಂಡರೆ ಸಾಕು, ವ್ಯಾನಿನ ಕ್ಲೀನರ್ ತಾನೇ ಮಕ್ಕಳನ್ನು ಎಳೆದು ಎಳೆದು ಕೆಳೆಗ ಬಿಡುತ್ತಾನೆ. ಅದೇ ವೇಗದಲ್ಲೇ ಮಕ್ಕಳು ತಮ್ಮ ತಮ್ಮ ತರಗತಿ ಸೇರಿಕೊಳ್ಳುತ್ತವೆ. ಇನ್ನೂ ಮಕ್ಕಳನ್ನು ತುಂಬಿಕೊಂಡು ಬರುವ ಆಟೋಗಳಂತೂ ಥೇಟ್ ಎತ್ತಿನ ಗಾಡಿಗಳೇ. ಗಾಡಿಯ ಗಾತ್ರವನ್ನು ದಾಟಿ ಚಾಚಿಕೊಳ್ಳುವ ಕಬ್ಬು, ಕಾಯಿಯಂತೆ, ಚಾಚಿ ಕೊಂಡಿರುವ ಮಕ್ಕಳ ಬ್ಯಾಗುಗಳ ಮುಂದೆ ಆಟೋದ ನಿಜ ಸ್ವರೂಪ ಕಾಣುವುದು ಕಷ್ಟವೇ.ಸ್ಕೂಲ್ ವ್ಯಾನಿಗೆ ಸಿಕ್ಕ ಹಾಗೇ ಸುಲಭದಲ್ಲಿ ಆಟೋಗೆ ದಾರಿ ಸಿಗಿವುದಿಲ್ಲ. ಜನರೂ ದಾರಿ ಬಿಡುವುದಿಲ್ಲ. ಆದರೆ ಡ್ರೈವರ್ ಇದಕ್ಕೆಲ್ಲಾ ಬೇಸರ ಮಾಡಿಕೊಳ್ಳುವುದೇ ಇಲ್ಲ. ಏಕೆಂದರೆ ಅವನಿಗಾಗಲೇ ಕೋಪ ಬಂದಿರುತ್ತದೆ. ಕೋಪ ಹಾಗೂ ಬೇಸರ ಎರಡೂ ಭಾವಕ್ಕೆ ಅಲ್ಲಿ ಸಮಯವೂ ಇಲ್ಲ, ಜಾಗವಂತೂ ಇಲ್ಲವೇ ಇಲ್ಲ. ಹಾಗೆ ಬೇಸರ ಮಾಡಿಕೊಂಡರೆ ಯಾರೂ ದಾರಿ ಬಿಡುವುದಿಲ್ಲ. ಆ ಸಮಯದಲ್ಲಿ ಕೋಪ ಉಪಯೋಗಕ್ಕೆ ಬರುತ್ತದೆ. ಕೋಪದಲ್ಲಿ ಬಯ್ದರೆ ಮಾತ್ರ ಮುಂದೆ ಇರುವ ಜನ  ಸೈಡ್ ಬಿಡುವುದು. ಆಟೋ ಒಳಗಿನ ಮಕ್ಕಳ ಶಬ್ದ ಭಂಡಾರಕ್ಕೂ ಅದು ಉಪಯುಕ್ತ. ಸಂತೆಯಲ್ಲಿ ತನ್ನ ವಸ್ತು ಮಾರಲು ವ್ಯಾಪರಿ ಕೂಗುವಂತೆ, ಇಲ್ಲಿ ಎಲ್ಲವನ್ನು ಕೂಗಿ ತೂಗಿಯೇ ಹೇಳಬೇಕು. ಬಯ್ಗುಳಗಳನ್ನು ಕೂಡ.  

ಇನ್ನೂ ಮಕ್ಕಳನ್ನು ಬಿಡಲು ಕಾರಿನಲ್ಲಿ ಬರುವವರ ಕಷ್ಟ ಸುಖ ಅವರಿಗೇ ಪ್ರೀತಿ. ಮೊದಲೇ ಸಣ್ಣ ರಸ್ತೆ.  "ಇಷ್ಟ್ ಚಿಕ್ಕ್ ರೋಡಲ್ಲಿ ಕಾರ್ ತಂದ್ ಬಿಡ್ತಾರೆ, ಏನ್ ಇವರೊಬ್ರತ್ರನೇ ಕಾರ್ ಇರೋದು" ಎಂದು ಕಾರಿನ ಹಿಂದೆ ಇರುವವರು ಬಯ್ದುಕೊಂಡರು ಕಾರನ್ನು ಸಾಗಿ ಮುಂದೆ ಹೋಗುತ್ತಿದ್ದಂತೆ ಏನೂ ಹೇಳುವುದಿಲ್ಲ. ಸಾಧ್ಯವಾದರೇ ಒಂದು ಹಾಯ್ ರೀತಿಯ ನಗು. ಜನ ಇಷ್ಟೆಲ್ಲಾ ಬಯ್ದದ್ದು ಗೊತ್ತಾದರೂ ಕಾರನಲ್ಲಿ ಬಂದವರು ಏನೂ ಆಗದಂತೆ ನಟಿಸುತ್ತಾರೆ. ದಿನವೂ. ಸಂತೆಯಲ್ಲಿ ಎರಡಷ್ಟು ಬೆಲೆ ನಿಗದಿ ಮಾಡಿ ಜನರಿಂದ ತೆಗಳಿಸಿಕೊಂಡರು ಜಗ್ಗದ ದುರುಳ ವ್ಯಾಪಾರಿಯಂತೆ. ಇದ್ದುದರಲ್ಲಿ ಈ ದ್ವಿಚಕ್ರ ವಾಹನಗಳಲ್ಲಿ ಬರುವವರು ಅಲ್ಪ ತಪ್ತರು. ಮಕ್ಕಳನ್ನು ಗೇಟಿನ ಬಳಿಯೇ ಬಿಟ್ಟು ಹುಷಾರು ಎಂದು ಹೇಳಿ ಫ್ಲೈಯಿಂಗ್ ಕಿಸ್ ( ತಮ್ಮ ಮಕ್ಕಳಿಗೇ) ಕೊಡುವಷ್ಟರಲ್ಲಿ ಹಿಂದಿನಿಂದ ಬಂದ ಬೈಕೊಂದು ಹಿಂದಿನ ನೇಮ್ ಪ್ಲೇಟಿಗೆ ಸಣ್ಣಗೆ ಮುತ್ತಿಟ್ಟಿರುತ್ತದೆ.  ಕೋಪ ಮಾಡಿಕೊಳ್ಳೋಣ ಎಂದರೆ ಕಳೆದ ವಾರ ಅದೇ ಜಾಗದಲ್ಲಿ ಅದೇ ರೀತಿ ತಾನು ಇನ್ನೊಂದು ವಾಹನಕ್ಕೆ ಮುತ್ತಿಟ್ಟ ನೆನಪಾಗಿ ಸುಮ್ಮನಾಗಬೇಕಾಗುತ್ತದೆ.ಶಾಲೆಯ ಒಳಗೆ ಹೋಗಬೇಕಾದವರು ಅಲ್ಲೇ ಯಾವುದಾದರೂ ನೋ ಪಾರ್ಕಿಂಗ್ ಬೋರ್ಡ್ ಹುಡುಕಿ ಅದರ ಕೆಳಗೆ ಗಾಡಿ ನಿಲ್ಲಿಸಿ ಹೋಗುತ್ತಾರೆ.ಸಂತೆಯಲ್ಲಿನ "ಇಲ್ಲಿ ಗಲೀಜು ಮಾಡಬಾರದು" ಎಂದು ಬರೆದ ಗೋಡೆಯೇ ಹೆಚ್ಚು ಗಲೀಜು ಆಗಿರುವಂತೆ. ಅಲ್ಲಿ ಜಾಗ ಸಿಗದಿದ್ದವರು ವಾಚ್ ಮ್ಯಾನ್ ಕಣ್ಣ್ತಪ್ಪಿಸಿ ಶಾಲೆಯ ಗೇಟಿನ ಮುಂದೆಯೇ ನಿಲ್ಲಿಸಿ ಹೋಗುತ್ತಾರೆ. 

ಇದೆಲ್ಲದರ ಮಧ್ಯೆ ಕಾಲು ನಡಿಗೆಯಲ್ಲಿ ಬರುವವರ ಕಷ್ಟ ಹೇಳ ತೀರದು. ಇಷ್ಟೆಲ್ಲಾ ವಾಹನಗಳ ಮಧ್ಯೆ ನಡೆಯಲು ಜಾಗವಿಲ್ಲದೆ ಪುಟ್ ಪಾತಿನ ಕಡೆ ಹೋದರೆ, ಅಲ್ಲಿ ವಿಲೇವಾರಿ ಆಗದ ಕಸ ತನ್ನ ಸಾಮ್ರಾಜ್ಯವನ್ನು ದಿನೇ ದಿನೇ ವಿಸ್ತರಿಸುತ್ತಲೇ ಇರುತ್ತದೆ. ಶಾಲೆಗೆ ಬಂದವರೂ ಸಹ ಅದಕ್ಕೆ ತಮ್ಮ ಕಪ್ಪ ಕಾಣಿಕೆ ಅರ್ಪಿಸುತ್ತಾ ತಾಜ್ಯ ವಿಸ್ತರಣೆಯಲ್ಲಿ ಸಹಾಯ ಮಾಡುತ್ತಾರೆ. ಆಡ್ದ ನಿಂತ ದ್ವಿಚಕ್ರ ವಾಹನಗಳ ಸುಡುತ್ತಿರುವ ಸೈಲೆನ್ಸ್ ರ್ ಗಳ ಮಧ್ಯೆ ನುಸುಳಿಕೊಂಡು ಹೋಗುವಾಗಿನ ಮಕ್ಕಳ ಮುಖಭಾವಕ್ಕೂ  ಸಂತೆಯ ಗಿರಗಿಟ್ಟಲೆಯಲ್ಲಿ ಕೂತು ತಲೆಸುತ್ತಿಸಿಕೊಂಡ ಹಳ್ಳಿಗನ ಮುಖ ಭಾವಕ್ಕೂ ಅಂತ ವ್ಯತ್ಯಾಸವೇನು ಇರುವುದಿಲ್ಲ. ಈ ಮಧ್ಯೆ ಸಂತೆಯಲ್ಲಿ ಮಾರಾಟವಾಗ ಬೇಕಿರುವ ಕುರಿಯೊಂದು ನಡೆಯದೆ ಮೊಂಡಾಟ ಮಾಡಿದಾಗ ಕತ್ತಿಗೆ ಕಟ್ಟಿದ ಹಗ್ಗವನ್ನು ಹಿಡಿದು ದರದರನೆ ಎಳೆದು ತರುವ ಕಟುಕನಂತೆ, ಶಾಲೆಗೆ ಬರಲು ಹಠ ಮಾಡುವ ಮಗನನ್ನೋ ಮಗಳನ್ನೋ ಎಳೆದು ತರುವ ಪೋಷಕರ ದೃಶ್ಯವೂ ಕಾಣ ಸಿಗುತ್ತದೆ. ಕುರಿಯ "ಮ್ಯಾ ಮ್ಯಾ" ಸದ್ದಿಗಿಂತ ಹೃದಯವಿದ್ರಾವಕ ಆ ಮಗುವಿನ ಅಳು. ಒಮ್ಮೆ ಶಾಲೆಯ ಬೆಲ್ಲ್ ಹೊಡೆದು ಪ್ರಾರ್ಥನಾ ಗೀತೆ ಪ್ರಾರಂಭವಾಗುತ್ತಿದ್ದಂತೆ ಇಡೀ ರಸ್ತೆ ನಿರಾಳತೆಗೆ ಹಿಂದಿರುಗುತ್ತದೆ. ತಡವಾಗಿ ಬಂದವರು ಓಡಿ ಬರುತ್ತಿದ್ದರೆ, ಪೆನ್ ಮರೆತ ಹುಡುಗ ಹತ್ತಿರದ ಅಂಗಡಿಗೆ ಓಡುತ್ತಿರುವುದು, ಮಕ್ಕಳನ್ನು ಬಿಟ್ಟ ತಾಯಿ ತನ್ನ ಕೆದರಿದ ಕೂದಲನ್ನು ಸರಿ ಮಾಡಿಕೊಳ್ಳುತ್ತಿರುವುದು, ಗಾಡಿಯ ಕನ್ನಡಿಯಲ್ಲಿ ಕಣ್ಣೊರೆಸಿಕೊಳ್ಳುತ್ತಿರುವ ತಂದೆ, ಗುಡ್ ಮಾರ್ನಿಂಗ್ ಹೇಳಿದ ವಾಚ್ ಮ್ಯಾನ್‌ಗೆ ಪ್ರತಿಕ್ರಯಿಸದೆ ಪ್ರೆಯರ್ ಮುಗಿಯಿತೇ ಎಂದು ಕೇಳುತ್ತಾ ಓಡುವಾ, ಇಲ್ಲವೇ ಓಡುತ್ತಾ ಕೇಳುವ ತಡವಾಗಿ ಬಂದ ಟೀಚರ್,  ಮನೆ ಮುಂದೆ ಯಾರೂ ಗಾಡಿ ನಿಲ್ಲಿಸಲು ಬಿಡದೆ ಗೆದ್ದ ಸ್ಕೂಲ್ ಎದುರು ಮನೆಯ ಅಂಕಲ್  .. ಹೀಗೆ ಒಂದೆರೆಡು ಕೊಸರು ದೃಶ್ಯಗಳು ಕಾಣುತ್ತವೆ.

ಮುಂದಿನ 5 ನಿಮಿಷದಲ್ಲಿ ಎಲ್ಲವೂ ಪ್ರಶಾಂತ. ದಾಸರು ಹೇಳಿದ ಬದುಕೆಂಬ ಸಂತೆ ಮುಗಿದ ಮೇಲೆ ಎಲ್ಲವೂ ನಿರಾಳ ಎಂಬ ನಶ್ವರದ ಮಾತಂತೆ ಇಡೀ ರಸ್ತೆ ಏನೂ ಆಗಿಲ್ಲದಂತೆ ತನ್ನ ಮೂಲ ಸ್ವರೂಪಕ್ಕೆ ಮರಳಿರುತ್ತದೆ. ಎಲ್ಲವೂ ಮುಗಿಯಲಿ ಎಂಬಂತೆ ಕಾದು ಕುಳಿತ್ತಿದ್ದ ಕೋಗಿಲೆಯೊಂದು ಮತ್ತೆ ಕುಹೂ ಕುಹೂ ಎನ್ನುತ್ತಿದಂತೆ ಹಿಮ್ಮೇಳದಲ್ಲಿ ತರಗತಿಯೊಂದರ ಕಿಟಕಿಯಲ್ಲಿ ಮಕ್ಕಳು ಮಗ್ಗಿ ಹೇಳುತ್ತಿರುವ ಸದ್ದು  ಗಾಳಿಯಲ್ಲಿ ತೇಲಿ ಬರುತ್ತದೆ. 

ಇನ್ನೂ ಸಂಜೆ ಶಾಲೆ ಬಿಡುತ್ತಿದ್ದಂತೆ ಆದು ಬೇರೆಯದೇ ಆದ ಮತ್ತೊಂದು ಜಗತ್ತು . . . . . . .ಅದರ ಬಗ್ಗೆ ಇನ್ನೊಮ್ಮೆ ಬರೆದೇನು...

 -ಪ್ರಶಾಂತ್ ಇಗ್ನೇಷಿಯಸ್


ಚಿತ್ರಗಳು : ದಿ ಹಿಂದು ಹಾಗೂ ಡೆಕ್ಕನ್ ಹೆರಾಲ್ಡ್

Tuesday 1 January 2013

ಹೊಸ ವರ್ಷದ ನನ್ನ ಹೊಸ ಬಯಕೆ


ನನ್ನ ಗೆಳೆಯರೊಬ್ಬರು ಸಿಡಿಮಿಡಿಯಿಂದಲೇ ನನ್ನ ಜತೆಗೆ ಮಾತಿಗಿಳಿದರು. ಮಾತು ಮಾತಿಗೂ ಹತ್ತಾಶೆ,..ಅತೃಪ್ತಿ. ಅವರ ಬಾಯಿಂದ ಅಗಾಗ ಮೋಟರ್ ಸೈಕಲ್ಗಳಿಂದ ದುತ್ತನೆ ಹೊರಬರುವ ಬಿಸಿ ಬಿಸಿ ಹೊಗೆಯಂತೆ ಹೊರ ಬರುತ್ತಿತ್ತು. ಎಷ್ಟೋ ವರ್ಷಗಳಿಂದ ಭ್ರಷ್ಟ, ಅನ್ಯಾಯ ಹಾಗು ದಬ್ಬಾಳಿಕೆಯ ವಿರುದ್ಧ ಪಣತೊಟ್ಟು  ಹೋರಾಡಿದ ಜೀವ  ಇಂದು ಯುದ್ಧದ ಮಧ್ಯದಲ್ಲೇ ಸೋಲಿಗೆ ಶರಣಾದ ಸೈನಿಕನಂತೆ ಕಂಡರು. ಮೊದಲಿನಷ್ಟ ತೀಕ್ಷ್ಣವಾಗಿರದ ಅವರ ಮಾತುಗಳು, ತನ್ನ ಜೀವಮಾನದ ಕಡು ವೈರಿನೊಡನೆ ರಾಜಿಮಾಡಿಕೊಂಡಂತಿತ್ತು. ಹತ್ತಾಶ ರಕ್ತದಲ್ಲಿ ತೊಯ್ದಂತಹ ಅವರ ವಿಚಾರಗಳು ಗುರಿ ಮುಟ್ಟುವ ಮೊದಲೇ ತನ್ನ ಹೋರಾಟಕ್ಕೆ ಗುಡ್ ಬೈ ಹೇಳಿದಂತಿತ್ತು.

ಹೌದು, ಅನ್ಯಾಯ ದಬ್ಬಾಳಿಕೆಯ ಮತ್ತು ಭ್ರಷ್ಟ ವ್ಯವಸ್ಥೆಯ ವಿರುದ್ಧ ನಿದ್ದೆ, ನೀರು ಊಟ ಬಿಟ್ಟು ಹೋರಾಡಿದ ಎಷ್ಟೋ ಸಾತ್ವಿಕರ ಅನುಭವವಿದು. ಆದರೆ, ಇವರೆಲ್ಲರು ತಾವು ಸೋಲುತ್ತೇವೆ ಎಂದು ಮುಂಚಿತವಾಗಿ ಗೊತ್ತಿದ್ದರೂ ಒಂದು ಒಳ್ಳೆಯ ಸಂಪ್ರದಾಯವನ್ನು, ನ್ಯಾಯವಾದ ವ್ಯವಸ್ಥೆಯನ್ನು ರೂಪಿಸಲು ದೊಡ್ಡ ಗಂಡಾಂತರದ ಚಪಡಿಗಳನ್ನೇ ತಮ್ಮ ಮೇಲೆ ಎಳೆದುಕೊಂಡವರು.. ಅವರಿಗೆ ಗೊತ್ತು, ತನ್ನ ಜೀವಮಾನದಲ್ಲೇ ತಾನು ಕೈಗೊಂಡಿರುವ ಕೆಲಸದಲ್ಲಿ, ಹೋರಾಟದಲ್ಲಿ ಯಶಸ್ಸು ಕಾಣುವುದು ಅನಿಶ್ಚಿತವೆಂದು. ಆದರೂ ಊಟ, ನೀರು ನಿದ್ದೆಯನ್ನು ಬಿಟ್ಟು ಅಂತಹ ವ್ಯವಸ್ಥೆಯ ಸಕಾರಕ್ಕೆ ಶಕ್ತಿ ಮೀರಿ ದುಡಿಯುತ್ತಾರೆ. ಅವರಿಗೆ ಸೋಲು ಸೋಲಾಗುವುದಿಲ್ಲ. ತಮ್ಮ ಕನಸ್ಸಿನ ಮತ್ತು ಸ್ಥಾಪಿಸ ಹೋರಟಿರುವ ವ್ಯವಸ್ಥೆಯ ಪಯಣಕ್ಕೆ ಮೆಟ್ಟಿಲುಗಳಾಗುತ್ತವೆ. ಕ್ರಿಸ್ತ, ಬಸವಣ್ಣ, ಅಬೆಂಡ್ಕರ್, ಗಾಂಧಿ, ಮಾರ್ಟಿನ್ ಲೂತರ್ ಕಿಂಗ್, ನೆಲ್ಸನ್ ಮಂಡೇಲಾ… ಇವರೆಲ್ಲರೂ ನಮ್ಮಲ್ಲಿ ಚಿರಸ್ಥಾಯಿಯಾಗಿರುವುದು ಈ ಕಾರಣಕ್ಕಾಗಿಯೇ. ಇವರಿಗೆ ಗೊತ್ತಿತ್ತು ಅನ್ಯಾಯದ ವಿರುದ್ಧ ಹೋರಾಡುವುದೆಂದರೆ ತಮ್ಮನ್ನೇ ಸೋಲಿನ ಸಮಾಧಿಯಲ್ಲಿ ಹೂಳುವುದೆಂದು. ಆದರೂ ಅನ್ಯಾಯದ ವ್ಯವಸ್ಥೆಯ ವಿರುದ್ಧ ಎದೆ ತಟ್ಟಿ ಹೋರಾಡಿದರು.  ಇಂತಹ ಹೋರಾಟ ಹಾದಿಯಲ್ಲಿ ತಲೆದೋರಿದ ಸಾವಿರಾರು ಸಂಕಷ್ಟಗಳಿಗೆ ಅವರು ಎದೆಗುಂದಲಿಲ್ಲ. ಅನ್ಯಾಯದ ಬಗೆಗಿನ ಅವರ ಸಾತ್ವಿಕ ಸಿಟ್ಟು ಬರಿದಾಗಲಿಲ್ಲ. ಬಂದ ಹತ್ತಾರು ಅಮಿಷಗಲಿಗೆ ತಲೆಬಾಗಲಿಲ್ಲ. ಅಧಿಕಾರದ ಲಾಲಾಸೆಗೆ ನಂಬಿರುವ ತತ್ವ ಆದರ್ಶಗಳನ್ನು ಬಲಿಕೊಡಲಿಲ್ಲ. ಮನೆಮಠವನ್ನು, ಸ್ವಹಿತಗಳ ಗಡಿಯನ್ನು ದಾಟಿ ಬೀದಿಗಿಳಿದು ಪೋಲಿಸ್ ಲಾಠಿಗಳ ರುಚಿಕಂಡು ಜೈಲು ಸೇರಿದವರು. ಸರ್ಕಾರಗಳ ಕೆಂಗೆಣ್ಣಿ ಗುರಿಯಾದವರು. ತಮ್ಮ ವಿರುದ್ಧ  ಸರ್ಕಾರಗಳು ಕೈಗೊಂಡ ’ಬಾಯಿಮುಚ್ಚಿಸು” ಕಾರ್ಯಚರಣೆಯನ್ನು ನಿರ್ಭಯದಿಂದ ಎದುರಿಸಿದವರು. ತಮ್ಮ ಭವಿಷ್ಯದ ಬಗ್ಗೆ ಕಿಂಚತ್ತೂ ತಲೆಕೆಡಿಸಿಕೊಂಡವರಲ್ಲ. ತಮ್ಮ ಹಿಂಬಾಲಕರು ನಡು ನೀರಿನಲ್ಲೇ ಕೈಕೊಟ್ಟು ಹೋದರೂ ಕೊರಗದೆ ಏಕಾಂಗಿಯಾಗಿ ಹೋರಾಡಿದವರು. ಅವರಲ್ಲಿ ಮೋಸತನವಿರಲಿಲ್ಲ. ಕಪಟತನವೆಂಬುದಿರಲಿಲ್ಲ. ರಕ್ಷಣೆಗೆ ಮುಖವಾಡಗಳ ಮೊರೆಹೋಗಲಿಲ್ಲ. ಅವರದು ಬೆರೆಕೆಯಲ್ಲದ ಅಪ್ಪಟ ಹೋರಾಟವಾಗಿತ್ತು. ನ್ಯಾಯ ಮತ್ತು ಮಾನವ ಹಕ್ಕುಗಳ ಮರು ಸ್ಥಾಪನೆಯೇ ಅವರ ಹೋರಾಟದ ಬುನಾದಿಯಾಗಿತ್ತು.

ಕಳೆದ ವರ್ಷದ ಸೋಲು ಗೆಲ್ಲುವುಗಳ ನೋವು ನಲಿವುಗಳ  ಗಾಢ ನೆನಪುಗಳಲ್ಲಿ  ಹೂಸ ವರ್ಷವನ್ನು ಸ್ವಾಗತಿಸುತ್ತಿದ್ದೇವೆ. ಇಂತಹ ಸೋಲು ಗೆಲ್ಲುವುಗಳ ಗಾಢ ನೆನಪುಗಳಲ್ಲಿ ಮುಖ್ಯವಾಗಿ ನನ್ನನ್ನು ಕಾಡಿದ್ದು  ಕಳೆದ ವರ್ಷದಲ್ಲಿ ನಡೆದ  ನೂರಾರು ಸಾರ್ವತ್ರಿಕ ಪ್ರತಿಭಟನೆಗಳು ಮತ್ತು ಹೋರಾಟಗಳು. ವ್ಯವಸ್ಥಿತವಾಗಿ ಹಾಗೂ ಸುದೀರ್ಘ‌ವಾಗಿ ನಡೆಸಿದ ಅನೇಕ ಹೋರಾಟಗಳು ನಿರೀಕ್ಷಿತ ಫಲ ಕೊಡಲಿಲ್ಲ. ಕೆಲವೊಂದು  ಹೋರಾಟಗಳಿಗೆ ಉದ್ದೇಶದ ಸ್ಪಷ್ಟತೆಯಿರಲಿಲ್ಲ. ಹೋರಾಟ, ಪ್ರಟಿಭಟನೆಗಳನ್ನು ಹುಟ್ಟು ಹಾಕಿದ ಅನೇಕರಲ್ಲಿ ಸಾತ್ವಿಕತೆಯಿರಲಿಲ್ಲ; ಪ್ರಾಮಾಣಿಕತೆಯಿರಲ್ಲ. ಕೆಲವೊಂದಂತು ಅಪ್ಪಟ ರಾಜಕೀಯ ಪ್ರೇರಿತವಾಗಿದ್ದವು. ಹಣೆಪಟ್ಟಿಗಳನ್ನು ಕಟ್ಟಿಕೊಂಡು ರಾತ್ರಿಹೊತ್ತು ಕ್ಯಾಂಡಲ್ ಹಚ್ಚುತ್ತಾ ಘೋಷಣೆ ಕೂಗುತ್ತಾ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದ ಜನಸಮೂಹಕ್ಕೆ ಇರಬೇಕಾದ ಬದ್ಧತೆಯಿರಲಿಲ್ಲ. ಹೀಗೆ ಅಬ್ಬರದೊಂದಿಗೆ ಸುರುವಾದ ಹಲವಾರು ಹೋರಾಟಗಳು ಉದ್ದೇಶದ ಸಫಲತೆ ಕಾಣುವುದು ಇರಲ್ಲಿ ಅವು ಕಣ್ಣುತೆರೆಯುವ ಮೊದಲೇ ನೆಲಕಚ್ಚಿದವು. ಇಂತಹ ಪರಿಸ್ಥಿತಿಯಲ್ಲಿ ನನ್ನ ಮನಸ್ಸಿಗೆ ಬಂದಿದ್ದು ಕ್ರಿಸ್ತ ಮತ್ತು ಬಸವಣ್ಣ.

ಕ್ರಿಸ್ತ ಬಸವಣ್ಣ ಕೂಡ ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಯ ವಿರುದ್ಧ ಹೋರಾಡಿದ ಹಠ ಯೋಗಿಗಳು. ಧಾರ್ಮಿಕ ಗಣ್ಯರನ್ನು ಸುಣ್ಣ ಬಳಿದ ಸಮಾಧಿಯೆಂದು ಬಹಿರಂಗವಾಗಿ ವ್ಯವಸ್ಥೆಯ ಬಂಡೆಗೆ ತಲೆ ಬಡಿದುಕೊಂಡವರು. ಅವರಿಗೆ ಗೋತ್ತಿತ್ತು, ತಾವು ಕೈಗೊಂಡಿರುವ ಹೋರಾಟದಲ್ಲಿ ಸೋಲು ಕಟ್ಟಿಟ್ಟ ಬುತ್ತಿಯೆಂದು. ಆದರೂ ಹಾವಿದ್ದ ಹುತ್ತಕ್ಕೆ ಕೈಹಾಕಿದರು. ಕೊನೆಗೆ ಧಾರ್ಮಿಕ ಅಧಿಕಾರಿಗಳ ಉಗ್ರ ಕೋಪಕ್ಕೆ ಸುಟ್ಟು ಭಸ್ಮವಾದರು. ಪ್ರಪಂಚದ ಸಂಕುಚಿತ ದೃಷ್ಟಿಯಲ್ಲಿ ಅವರು ಸೋತ ಯೋಧರಾದರು. ತಾವು ಕಂಡ ಕನಸ್ಸಿನ ರಾಜ್ಯವನ್ನು ಕಾಣದೆ, ಹತ್ತಾಶರಾಗಿ ಸತ್ತವರಾದರು. ಅವರ ಕನಸುಗಳು ಚಾಲ್ತಿಯಲ್ಲಿಲ್ಲದ್ದ ನಾಣ್ಯಗಳಾದವು. ಆದರೂ ಅನ್ಯಾಯದ ವ್ಯವಸ್ಥೆಯ ಜತೆ ರಾಜಿ ಮಾಡಿಕೊಳ್ಳಲಿಲ್ಲ. ಅವರು ಕ್ಷಣಿಕ ಸೋಲಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಅವರ ಸೋಲೇ ಇಂದು ನೂರಾರು ಜನರಲ್ಲಿ ನ್ಯಾಯದ ತುಡಿತವನ್ನು ಹುಟ್ಟಿಸಿದ್ದು. ನಿಸ್ಪಾರ್ಥ ಬದುಕಿಗೆ ಪ್ರೇರಣೆಯಾಗಿದ್ದು, ಸಾವಿರಾರು ಜನರಲ್ಲಿ ಅವರು ಮತ್ತೆ ಹುಟ್ಟಿ ಬಂದಿದ್ದು. ಅವರಂತಹ ಹೋರಾಟ ನಮ್ಮದಾಗಲಿ. ಅವರಲ್ಲಿದ್ದ ಬದ್ಧತೆ, ಪ್ರಾಮಾಣಿಕತೆ, ಸಂಕಲ್ಪ ನಮ್ಮ ಕೈಗಳ ಹಿಡಿಯಲಿ. ಕುಗ್ಗದ ಅವರ ಜೀವಪೂರಕ ಸಿದ್ಧಾಂತಗಳ ಚೈತನ್ಯ ನಮ್ಮ ಲ್ಲಿ ತುಂಬಿತುಳುಕಲಿ. ಆಗ ನಮ್ಮ ಹೋರಾಟ ನಡು ದಾರಿಯಲೇ  ಹಳಿ ತಪ್ಪಿದ ಹೋರಾಟವಾಗದೆ ಬದಲಾವಣೆಯ ಸಾಧನಗಳಾಗುತ್ತದೆ. ಇಂತಹ ಹೋರಾಟಗಳು ೨೦೧೩ ವರ್ಷವನ್ನು ತುಂಬಿಕೊಳಲಿ; ದಬ್ಬಾಳಿಕೆ ಅನ್ಯಾಯಗಳ ವಿರುದ್ಧ ದನಿ ಎತ್ತಲಿ., ಜಗತ್ತನ್ನು ಇನ್ನಷ್ಟ್ಟುಮಾನವೀಕರಣಗೊಳಿಸಲಿ ಎಂಬುವುದೇ ಹೊಸ ವರ್ಷದ ನನ್ನ ಹೊಸ ಬಯಕೆ ಮತ್ತು ಹಾರೈಕೆ.

ಜನವಿರೋಧಿ, ಜೀವ ವಿರೋಧಿಗಳ ವಿರುದ್ಧ ಹೋರಾಡುತ್ತಿರುವ ಸಾವಿರಾರು ಸಾತ್ವಿಕ ಜನರಿಗೆ ನಮಸ್ಕರಿಸಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ.
ಜೋವಿ.Read more!