Monday 27 April 2015

ಆಡಿಯೋ ಅನಿಸಿಕೆ - ವಜ್ರಕಾಯ

’ಭಜರಂಗಿ’ಯ ಭರ್ಜರಿ ಜೋಡಿ ಮತ್ತೆ ಒಂದಾಗಿ ಬರುತ್ತಿದೆ.  ಶಿವಣ್ಣನ ಪ್ರತಿಭೆ, ಹುರಿಗೊಳಿಸಿದ ದೇಹ ಎಲ್ಲವನ್ನು ಭರ್ಜರಿಯಾಗಿ ತೆರೆಯ ಮೇಲೆ ಅನಾವರಣಗೊಳಿಸಿದ ನಿರ್ದೇಶಕ ಹರ್ಷ, ವಜ್ರಕಾಯದಲ್ಲೂ ಅದೇ ಜಾದೂ ಮುಂದುವರಿಸುತ್ತಾರೆಯೇ ಎಂದು ಕಾತುರದಲ್ಲಿದೆ ಚಿತ್ರರಂಗ. ಚಿತ್ರದ ಟ್ರೈಲರ್ ಹಾಗೂ ಸ್ಥಿರ ಚಿತ್ರಗಳು ಸಕ್ಕತ್ತಾಗಿಯೇ ಮೂಡಿ ಬಂದಿದೆ. ನಿರ್ದೇಶಕನೇ ನೃತ್ಯ ಸಂಯೋಜಕನಾದಾಗ ಅಥವಾ ನೃತ್ಯ ಸಂಯೋಜಕನೇ ಚಿತ್ರದ ನಿರ್ದೇಶಕನಾಗಿರುವಾಗ ಚಿತ್ರದ ಹಾಡುಗಳಿಗೆ ವಿಶೇಷವಾದ ಮೆರಗು ಒದಗಿ ಬರುತ್ತದೆ. ಅಲ್ಲದೆ ಹಾಡುಗಳಲ್ಲಿಯೂ ವಿಶೇಷತೆ ಇರುತ್ತದೆ ಎಂಬ ಕುತೂಹಲ ಇರುತ್ತದೆ. ಕನ್ನಡದ ಅಗ್ರಗಣ್ಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅರ್ಜುನ್ ಜನ್ಯರ ನಿರ್ದೇಶನದ ಹಾಡುಗಳು ಹೇಗಿವೆ ನೋಡೋಣವೇ?

ವಜ್ರಕಾಯ
ಗಾಯನ - ಶಂಕರ್ ಮಹಾದೇವನ್ 
ಸಾಹಿತ್ಯ - ನಾಗೇಂದ್ರ ಪ್ರಸಾದ್ 
ಶಂಕರ್ ಮಹಾದೇವನ್ ಹಾಗೂ ನಾಗೇಂದ್ರ ಪ್ರಸಾದ್ ಒಟ್ಟಾಗಿ ಸೇರಿದೊಡನೆ ಒಂದು ಶಕ್ತಿಶಾಲಿ ಹಾಡು ಸಿದ್ಧವಾದಂತೆಯೇ. ಅರ್ಜುನ್ ಜನ್ಯರ ಭರ್ಜರಿ ಸಂಗೀತಕ್ಕೆ, ಸಾಹಿತ್ಯ ಗಾಯನವೆಲ್ಲವೂ ರಭಸದಿಂದಲೇ ಕೂಡಿಕೊಂಡು ಬಂದಿದೆ. ತೆರೆಯ ಮೇಲೆ ನೃತ್ಯವೂ ಅದೇ ರೀತಿಯಲ್ಲಿ ಇರುವುದರಲ್ಲಿ ಸಂಶಯವಿಲ್ಲ. ಅಬ್ಬರದ ನಡುವೆ ಕೇಳಿಸಿಕೊಂಡು ಹೋಗುವ ಗೀತೆ. 

ನೋ ಪ್ರಾಬ್ಲಮ್
ಗಾಯನ - ಧನುಷ್ 
ಸಾಹಿತ್ಯ - ಮೋಹನ್ ಕುಮಾರ್
ಕೊಲವೇರಿ ಹಾಡಿನಿಂದ ಗಾಯಕನಾಗಿಯೂ ಹೆಸರು ಮಾಡಿದ ತಮಿಳಿನ ಧನುಷ್ ಹಾಡಿರುವ ಗೀತೆ. ಅವರ ಕಂಚಿನ ಕಂಠಕ್ಕೆ ತಕ್ಕುದ್ದಾದ ಸಂಗೀತ ಒದಗಿ ಬಂದಿದ್ದೂ, ಸಾಹಿತ್ಯವೂ ಲವಲವಿಕೆಯಿಂದ ಇರುವುದರಿಂದ ಇಷ್ಟವಾಗುವ ಗೀತೆ. ಸರಳವಾದ ವಾದ್ಯ ಸಂಯೋಜನೆ ಇಷ್ಟವಾಗುತ್ತದೆ. ಮೋಹನ್ ಕುಮಾರರ ಸಾಹಿತ್ಯ ಯುವ ರಸಿಕರನ್ನು ಮೆಚ್ಚಿಸುವಂತಿದೆ. ಎಲ್ಲಕ್ಕಿಂತ ಮಿಗಿಲಾಗಿ ಧನುಷ್ ರ ಕನ್ನಡ ಉಚ್ಛರಣೆ ಹಾಗೂ ಸ್ಪಷ್ಟತೆ ಈಗಿನ ಎಷ್ಟೋ ಪರಭಾಷಾ ಗಾಯಕರಿಗಿಂತ ಚೆನ್ನಾಗಿದೆ. ಕೇಳುತ್ತಾ ಕೇಳುತ್ತಾ ಇಷ್ಟವಾಗುವಂತ ಸಂಗೀತವನ್ನು ಅರ್ಜುನ ನೀಡಿದ್ದಾರೆ.

ಕಂದಮ್ಮ ಮುದ್ದಮ್ಮ
ಗಾಯನ - ಕಾರ್ತಿಕ್ 
ಸಾಹಿತ್ಯ - ಕೆ ಕಲ್ಯಾಣ್ 
ಕಲ್ಯಾಣ್ ರ  ಸಾಹಿತ್ಯ ಎಂದೆಡೊನೆ ಒಂದು ನಿರೀಕ್ಷೆ ಕನ್ನಡ ಚಿತ್ರ ರಸಿಕರಲ್ಲಿ ಇದ್ದೇ ಇದೆ. ಕಲ್ಯಾಣ್ ನಿರಾಸೆ ಮೂಡಿಸುವುದಿಲ್ಲ. ಸಂಗೀತ ಕೂಡ ಮಾಧುರ್ಯದ ಗಡಿ ದಾಟದೆ ಇಷ್ಟವಾಗುತ್ತದೆ. ನಡುವೆ ಬರುವ ಕೋರಸ್ ವಿಭಿನ್ನವಾಗಿದೆ. ಕೊಳಲಿನ ಧ್ವನಿ ನೆನಪಿನಲುಳಿಯುತ್ತದೆ. ಕಾರ್ತಿಕರ ಗಾಯನ ಎಂದಿನಂತೆ ಇದೆಯಷ್ಟೆ.  ಉತ್ತಮವಾದ ಗೀತೆ.

ತುಕತು ಗಡಬಡ
ಗಾಯನ - ಶರಣ್ ಹಾಗೂ ಸುನಿತಾ  
ಸಾಹಿತ್ಯ - ಯೋಗಾನಂದ ಮುದ್ದನ್

ಶರಣ್ ಗಾಯನದ ಹಾಡೆಂಬ ಉತ್ಸಾಹಕ್ಕೆ ಭರಪೂರವಾದ ಹಿಂದಿಯ ಸಾಹಿತ್ಯ ತಣ್ಣೀರೆರೆಚುತ್ತದೆ. ಯೋಗಾನಂದರವರ ಸಾಹಿತ್ಯದಲ್ಲಿ ಕನ್ನಡ ಪದಗಳು ಸಮಾಧಾನಕರ ಬಹುಮಾನದಂತೆ ಅಲ್ಲಲ್ಲಿ ಕೇಳ ಸಿಗುತ್ತದೆ. ಕನ್ನಡ ಹಾಡೊಂದರಲ್ಲಿ ಅಷ್ಟು ಪರಭಾಷಾ ಸಾಹಿತ್ಯದ ಅವಶ್ಯಕತೆ ಚಿತ್ರದ ಸನ್ನಿವೇಶದಲ್ಲಿ ನಿಜಕ್ಕೂ ಇದೆಯೇ ಎಂಬುದನ್ನು ಪರದೆ ಮೇಲೆಯೇ ನೋಡಬೇಕು. ಹರ್ಷರವರ ನೃತ್ಯ ಸಂಯೋಜನೆಗೆ ಒಳ್ಳೆಯ ಅವಕಾಶವಿರುವ ಸಂಗೀತ, ವಾದ್ಯ ಸಂಯೋಜನೆ ಇದೆ. 

ಉಸಿರೆ 
ಗಾಯನ - ಸಂತೋಷ್   
ಸಾಹಿತ್ಯ - ಕೆ ಕಲ್ಯಾಣ್

ಬಹುಶ: ಚಿತ್ರದ ಅತ್ಯುತ್ತಮ ಗೀತೆ. ಒಳ್ಳೆಯ ಸಾಹಿತ್ಯಕ್ಕೆ, ಉತ್ತಮವಾದ ಸಂಗೀತ, ಗಾಯನ ಎಲ್ಲವೂ ಮಿಳಿತಗೊಂಡು ಉತ್ತಮವಾಗಿ ಕೇಳಿಸಿಕೊಂಡು ಹೋಗುವ ಗೀತೆ. ತಾಯಿಯನ್ನು ಕಾಣುವ ಕಾತುರದಲ್ಲಿ ಹೊರಟ ನಾಯಕನ ಸದಾಶಯ ಸಾಹಿತ್ಯದಲ್ಲಿ ಇದ್ದರೆ, ಅದರ ಉತ್ಸಾಹ ಗಾಯನದಲ್ಲಿ ಇದೆ. ಈ ಹಾಡಿನಲ್ಲೂ ಅರ್ಜುನ್ ಜನ್ಯ ಮಾಧುರ್ಯದಿಂದ, ಸಂಯಮದಿಂದ ಗಮನ ಸೆಳೆಯುತ್ತಾರೆ. 

ವಜ್ರಕಾಯ ಥೀಮ್
ಮೆಲುದನಿಯ ಕೋರಸ್ ನಿಂದ ಆರಂಭವಾಗಿ ಅಬ್ಬರದಿಂದ ಕೊನೆಗೊಳ್ಳುವ ಥೀಮ್ ಸಾಂಗ್ ಎಂದಿನ ಥೀಮ್ ಗೀತೆಗಳಂತೆಯೇ ಇದ್ದೂ, ಅದಕ್ಕೆ ಬೇಕಾದ ಅದಕ್ಕೆ ಬೇಕಾದ ರಭಸವೂ ಸಂಗೀತದಲ್ಲಿದೆ.

-ಪ್ರಶಾಂತ್ ಇಗ್ನೇಷಿಯಸ್

ಆಡಿಯೋ ಅನಿಸಿಕೆ - ರನ್ನ

ವಿಕ್ಟರಿ, ಅಧ್ಯಕ್ಷದಂಥ ಯಶಸ್ವಿ ಚಿತ್ರಗಳನ್ನು ಕೊಟ್ಟ  ನಂದ ಕಿಶೋರ್ ಈ ಬಾರಿ ಸೂಪರ್ ಸ್ಟಾರ್ ಸುದೀಪ್ ರವರ ಜೊತೆ ರನ್ನದ ಮೂಲಕ ತೆರೆಗೆ ಅಪ್ಪಳಿಸಲು ತಯಾರಾಗಿ ಬರುತ್ತಿದ್ದಾರೆ. ಬಹು ದಿನಗಳ ನಂತರ ಬರುತ್ತಿರುವ ಕಿಚ್ಚ ಸುದೀಪ್ ಚಿತ್ರ ಇದಾಗಿರುವುದರಿಂದ ಅಭಿಮಾನಿಗಳ ಕಾತರ ನಿರೀಕ್ಷೆ ಸಹಾ ಮುಗಿಲು ಮುಟ್ಟಿದೆ. ಚಿತ್ರದ ಟೀಸರ್, ಟ್ರೈಲರ್ ಗಳು ಈ ನಿರೀಕ್ಷಯನ್ನು ದ್ವಿಗುಣಗೊಳಿಸಿರುವ ಬೆನ್ನಲ್ಲೇ ಹಾಡುಗಳು ಚಿತ್ರ ರಸಿಕರ ಮುಂದಿದೆ. ಹರಿಕೃಷ್ಣರ ಸಾರಥ್ಯದ ಹಾಡುಗಳು ಹೇಗಿವೆ ಎಂದು ನೋಡೋಣ -

ಬಬ್ಬರ್ ಶೇರ್
ಗಾಯನ - ಶ್ರೀ ದೇವಿ ಪ್ರಸಾದ್
ಸಾಹಿತ್ಯ - ನಾಗೇಂದ್ರ ಪ್ರಸಾದ್ 
ಉತ್ತಮವಾದ ಕನ್ನಡ ಸಾಹಿತ್ಯದೊಂದಿಗೆ ಆರಂಭವಾಗುವ ಗೀತೆ ಇದ್ದಕ್ಕಿದ್ದಂತೆ ಹಿಂದಿಗೆ ಹೊರಳಿ ಇಂಗ್ಲಿಷ್ ಪದಗಳ ನಡುವೆ ಸಾಗುವುದು ನಿರಾಸೆ ಮೂಡಿಸಿದರೂ, ಉತ್ತಮ ಸಂಗೀತ ಹಾಗೂ ವಾದ್ಯ ಸಂಯೋಜನೆ ಗೀತೆಯನ್ನು ಎತ್ತಿ ಹಿಡಿಯುತ್ತದೆ.ನಾಗೇಂದ್ರ ಪ್ರಸಾದರ ಸಾಹಿತ್ಯದಲ್ಲಿ ನಾಯಕ ಗುಣಗಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರಕಿದೆ.


ಸೀರೆಲಿ ಹುಡುಗೀನ 
ಗಾಯನ - ವಿಜಯ್ ಪ್ರಕಾಶ್  
ಸಾಹಿತ್ಯ - ಯೋಗರಾಜ್ ಭಟ್
ಸರಳ ಸುಮಧುರ ಸಂಗೀತ ಸಂಯೋಜನೆ ಇರುವ ಗೀತೆ, ಖುದ್ದು ಸುದೀಪರೇ ಹಾಡಿದಾರೇನೋ ಎನ್ನುವಷ್ಟು ಮಟ್ಟಿಗೆ ವಿಜಯ್ ಪ್ರಕಾಶರ ಧ್ವನಿ ಹೊಂದಿಕೆಯಾಗಿದೆ. ಯೋಗರಾಜ್ ಭಟ್ಟರ ಸಾಹಿತ್ಯವನ್ನು ಹೇಗೆ ಹಾಡಿದರೆ ಚೆಂದ ಎಂಬುದನ್ನು ಕರಗತ ಮಾಡಿಕೊಂಡಿರುವ ವಿಜಯ್ ಸೊಗಸಾಗಿ ಹಾಡಿದ್ದಾರೆ. ಭಟ್ಟರ ಸಾಹಿತ್ಯ ಎಂದಿನಂತೆ ಇದೆ.

ತಿಥಲಿ  ತಿಥಲಿ 
ಗಾಯನ - ಟಿಪ್ಪು, ಸಂಗೀತ ರವೀಂದ್ರನಾಥ್ 
ಸಾಹಿತ್ಯ - ಕೆ ಕಲ್ಯಾಣ್ 
ಟಿಪ್ಪು ಹಾಗೂ ಸಂಗೀತರವರು ಹಾಡಿರುವ ಈ ಗೀತೆ ಆರಕ್ಕೇರದೆ ಮೂರಕ್ಕಿಳಿಯದಂತಿದೆ. ಕಲ್ಯಾಣರ ಸಾಹಿತ್ಯವೂ ಬದಲಾದ ಇಂದಿನ ಹವಾಗುಣಕ್ಕೆ ಹೊಂದಿಕೊಂಡಂತಿದೆ.ಸಾಧಾರಣ ಯುಗಳ ಗೀತೆಯಾಗಿದ್ದೂ ತೆರೆಯ ಮೇಲೆ ಹೇಗೆ ಇರಬಹುದು ಎಂದು ಕಾದು ನೋಡ ಬೇಕಾಗಿದೆ.

What to do? 
ಗಾಯನ - ವಿಜಯ್ ಪ್ರಕಾಶ್  
ಸಾಹಿತ್ಯ - ಯೋಗರಾಜ್ ಭಟ್
ಹರಿ, ವಿಜಯ್ ಹಾಗೂ ಭಟ್ಟರ ಸಮಾಗಮದ ಮತ್ತೊಂದು ಗೀತೆ. ಗುಂಡು ಹಾಕುತ್ತಾ, ಹುಡುಗೀರ ಬಗೆಗಿನ ಹುಡುಗರ  ವಿರಹದ ಗೀತೆಗಳ ಸಾಲಿಗೆ ಮತ್ತೊಂದು ಸೇರ್ಪಡೆ. ನೃತ್ಯಕ್ಕೆ, ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಗೀತೆ.

ಜಗದೋದ್ಧಾರನ
ಗಾಯನ - ಕಾರ್ತಿಕ್ , ವಾಣಿ ಹರಿಕೃಷ್ಣ 
ಸಾಹಿತ್ಯ - ಪುರಂದರ ದಾಸರು 
ಪುರಂದರ ದಾಸರ ಪ್ರಸಿದ್ಧ ಗೀತೆಗಳಲ್ಲಿ ಒಂದಾದ, ಮೈ ಆಟೋಗ್ರಾಫ್ ಚಿತ್ರದಲ್ಲಿ ಬಳಕೆಯಾದ ಗೀತೆ ಮತ್ತೆ ಇಲ್ಲಿ ಕೇಳ ಸಿಗುತ್ತದೆ. ಈ ಬಾರಿ ಕಾರ್ತಿಕ್ ಹಾಗೂ ವಾಣಿ ಹರಿ ಕೃಷ್ಣರ ಧ್ವನಿಯಲ್ಲಿ ಮೂಡಿ ಬಂದಿರುವ ಗೀತೆ ಹಿಂದಿಗಿಂತಲೂ ಹೆಚ್ಚು ಆಪ್ತವಾಗುತ್ತದೆ. ಚಿತ್ರದಲ್ಲಿ ಹೇಗೆ ಎಲ್ಲಿ ಮೂಡಿ ಬಂದಿರಬಹುದೆಂಬ ಕುತೂಹಲ ಮೂಡಿಸುತ್ತದೆ.

ರನ್ನ ಥೀಮ್ 
ಕೊನೆಯಲ್ಲಿ ಬರುವ ರನ್ನ ಥೀಮ್ ಹರಿ ಕೃಷ್ಣರ ಹಳೆಯ ಥೀಮ್ ಗೀತೆಗಳನ್ನು ನೆನಪಿಸುತ್ತದೆ. ನಾಯಕನ ಎಂಟ್ರಿ ಅಥವಾ ಅವನ ಕಾರ್ಯ ವೈಖರಿಯನ್ನು ಪರಿಚಯಿಸುವ ಎಂದಿನ ಥೀಮ್ ಗೀತೆಗಳಂತೆ ಇಲ್ಲಿಯೂ ಲವಲವಿಕೆ ಇದೆ.

-ಪ್ರಶಾಂತ್ ಇಗ್ನೇಷಿಯಸ್