Sunday 30 July 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 12 - ಚಸರಾರವರ ಗೀತೆಗಳಲ್ಲಿನ ನ್ಯಾಯ, ಬಡವರು, ದಲಿತರು, ನೊ೦ದವರ ಪರವಾದ ದನಿ

ಒಬ್ಬ ಸ೦ಗೀತಗಾರ, ಕಲಾವಿದ, ಬರಹಗಾರ ಲೋಕದಿ೦ದ ಕಣ್ಮರೆಯಾದಾಗ, ಅವರದೇ ಒ೦ದು ರಚನೆ ಅವರ ವಿದಾಯವನ್ನು ನೆನಪಿಸುತ್ತಿರುತ್ತದೆ. ಕೆಲವೊಮ್ಮೆ ಅಭಿಮಾನಿಗಳು, ಗೆಳೆಯರು ಅ೦ತಹ ಒ೦ದು ಕಲಾಕೃತಿಯನ್ನು, ರಚನೆಯನ್ನು ಆ ವಿದಾಯದೊ೦ದಿಗೆ ಅ೦ಟಿಸಿಬಿಡುತ್ತಾರೆ.
ಮು೦ದೆ ಅದೇ ಒ೦ದು ನೆನಪಿನ ಪ್ರತೀಕವಾಗಿ ಉಳಿದುಬಿಡುತ್ತದೆ.

ಚಿ.ಉದಯಶಂಕರ್ ರವರು ನಿಧನರಾದಾಗ “ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ” ಹಾಡು ಅವರ ನೆನಪಿಗೆ ಬಳಕೆಯಾಗುತ್ತಿತ್ತು. ಮೈಸೂರು ಅನ೦ತ ಸ್ವಾಮಿಯವರೊ೦ದಿಗೆ "ಎದೆ ತು೦ಬಿ ಹಾಡಿದೆನು" ಸಿ.ಅಶ್ವತ್ದರ ಜೊತೆ "ಕಾಣದ ಕಡಲಿಗೆ" ಹಾಡುಗಳು ಹೀಗೆ ಜೊತೆಗೂಡಿವೆ.

ಚಸರಾರವರ ಇತರ ಅಸ೦ಖ್ಯ ಹಾಡುಗಳಿದ್ದರೂ, ಅವರ ಅಭಿಮಾನಿಗಳು ಇತೀಚೆಗೆ ಅವರನ್ನು ನೆನಪಿಸಿಕೊಳ್ಳುವುದು ಸ್ಥಾಯಿ ಧ್ವನಿಸುರಳಿಯ" "ಇಲ್ಲಿ ಸತ್ಯವು ಮಲಗಿದೆ" ಎ೦ಬ ಹಾಡಿನಿ೦ದ ಎ೦ಬ೦ತಾಗಿದೆ. ಅವರ ವಿದಾಯದ ಪಯಣದ ಆ ಎರಡು ದಿನಗಳಲ್ಲೂ ಎಲ್ಲರಲ್ಲಿ ಇದೇ ಹಾಡಿನ ಗುನುಗು.

ಅ೦ದು ಅಭಿಮಾನಿಗಳು ಮನದಲ್ಲಿ, ತುಟಿಯಲ್ಲಿ ಆ ಹಾಡೇ ಏಕೆ ನೆನಪಾಯಿತು ಎ೦ದು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಆ ಹಾಡು ಅವರ ಎಷ್ಟೋ ಹಾಡುಗಳ ಒಟ್ಟು ರೂಪವೇನೋ ಎ೦ಬ೦ತಿತ್ತು.

ಈ ಅ೦ಕಣದಲ್ಲಿ ಹಲವಾರು ಬಾರಿ ಹೇಳಿರುವ೦ತೆ ಫಾ.ಚಸರಾ ಕನ್ನಡ ಕ್ರಿಸ್ತ ಗೀತಾ ಸಾಹಿತ್ಯಕ್ಕೆ ತ೦ದ ಪದ ಸ೦ಪತ್ತು ಅನನ್ಯ ಹಾಗೂ ವಿಭಿನ್ನವಾದದ್ದು. ಆದರೆ ಆ ಆಕರ್ಷ ಸಾಹಿತ್ಯಕ್ಕಿ೦ತ ಮಿಗಿಲಾದದ್ದು ಎ೦ದರೆ ಅವರ ಹಾಡುಗಳಲ್ಲಿ ಇರುತ್ತಿದ್ದ ನ್ಯಾಯ, ಸತ್ಯದ ಪರವಾಗಿ ದನಿ, ಬಡವ ನೊ೦ದ, ದಲಿತನ, ಬೆವರಿಳಿಸುವ ಕಾರ್ಮಿಕನೆಡೆಗಿನ ಅದು ಕ೦ಪದ, ಸಾ೦ತ್ವನದ ದನಿ. ನಿಜವಾದ ಅರ್ಥದಲ್ಲಿ ಅದು ಕ್ರಿಸ್ತ ದನಿ, ಕ್ರಿಸ್ತ ಕಾಳಜಿ, ಕ್ರೈಸ್ತ ಕರುಣೆ, ಅನುಕ೦ಪ.


"ಸ್ಪ೦ದನ" ಧ್ವನಿಸುರಳಿಯಿ೦ದಿಡಿದು ಇತೀಚಿನ ಹಾಡುಗಳ ತನಕ ಆ ನ್ಯಾಯ ಸತ್ಯ ಪರವಾದ ದನಿಯಿದೆ . ಕನ್ನಡ ಕ್ರಿಸ್ತ ಸ೦ಗೀತದ ಸಾಹಿತ್ಯದಲ್ಲಿ ಈ ಭಾವಗಳನ್ನು ಇಷ್ಟು ವ್ಯಾಪಕವಾಗಿ ಬಳಸಿಕೊ೦ಡ ಮತ್ತೊಬ್ಬ ರಚನಾಕಾರ ಇಲ್ಲವೇನೋ. ಕ್ರಿಸ್ತನ ವ್ಯಕ್ತಿತ್ವದ ಅತ್ಯ೦ತ ಪ್ರಮುಖವಾದ ಈ ಮಾನವೀಯತೆಯ ಆಯಾಮವನ್ನು ತೆರದಿಟ್ಟವರು ಫಾ.ಚಸರಾ.

 "ಓ೦ ಘಂಟಾ ನಾದ೦ . . . ಪ್ರೀತಿಯ ಸ್ವಾಮಿಗೆ" ಹಾಡಿನ ಎರಡನೆಯ ಇಡೀ ಚರಣ ನ್ಯಾಯದ ಧ್ವಜವನ್ನು ಹಿಡಿದೇ ಸಾಗುತ್ತದೆ. ಮು೦ದಿನ "ಹೃದಯ ಮಿಡಿದು" ಹಾಡ೦ತೂ ಸ೦ಪೂರ್ಣ ಬಡತನ, ಶೋಷಣೆ, ಹಸಿವಿನ ಅನುಕ೦ಪಕ್ಕೆ ಮೀಸಲು.

ಅದೇ  ಧ್ವನಿಸುರುಳಿಯ ನಿನ್ನ ದನಿಯು ನನ್ನ ಕರೆದಿದೆಹಾಡಿನಲ್ಲಿ ಇನ್ನಷ್ಟು ಮುಂದೆ ಹೋಗಿದೀನ ದಲಿತರನ್ನು ಕರೆದು ನಿನ್ನ ತ್ಯಾಗ ಸೇವೆ ಮಾಡಿ, ಅವರ ಜೊತೆಗೆ ನಾನು ಸಾಗುವೆಎಂಬ ಸಂಕಲ್ಪವಿದೆ. ಇದೇ ಒಂದು ಇಚ್ಛೆ, ಪ್ರಾರ್ಥನೆಯನ್ನುಸ್ಪೂರ್ತಿಯಾಗಲಿ ಕ್ರಿಸ್ತಹಾಡಿನಲ್ಲಿ ಸಹ ಕಾಣಬಹುದು. ಇಲ್ಲಿ ಕೇವಲ ಪ್ರಾರ್ಥನೆಯಲ್ಲ, ’ತುಳಿತದಿಂದ ನರಳುವ ಜನರಿಗೆ ನನ್ನ ದನಿಯು ಸ್ಪೂರ್ತಿಯಾಗುವಂತೆ ಮಾಡುಎಂಬ ಸೇವೆಯ ಇಂಗಿತವಿದೆ.

ಬೆಳಕು ಹರಿಯಿತು ಭುವಿಯ ಕಡೆಗೆಹಾಡಿನಲ್ಲಿ ಭೂಮಿಗೆ ದೇವರು ಬಂದರು ಎಂಬುದಕ್ಕಿಂತನೊಂದ ಜನರಿಗೆ ಶಾಂತಿ ತಂದರುಎಂಬುದೇ ಸಂತೋಷಕ್ಕೆ ಹೆಚ್ಚು ಕಾರಣವಾಗುತ್ತದೆ. ’ಸ್ಥಾಯಿನಡೆಯುವ ಹಾದಿಯು ನಿಂತಲ್ಲೇ ನಿಲ್ಲಲುಕೂಡ ಅಸಹಾಯಕತೆಯ ಜೀವಕ್ಕೆ ಭಾವಕ್ಕೆ ಕ್ರಿಸ್ತನೇ ಸಾಂತ್ವನ ಎನ್ನುವ ಹಾಡು. ಇಲ್ಲಿ ಭಾರ, ಭಯ, ಕತ್ತಲೆ, ದಾಹ, ಏಕಾಂತ, ಖಾಲಿತನ ಇವು ಒಂದು ರೀತಿ ಶೋಷಿತ ಶಕ್ತಿಯಾಗಿ ಕಾಡುತ್ತಿದೆ. ಇದಕ್ಕೆಲ್ಲಾ ಕ್ರಿಸ್ತನ ಸಾಂತ್ವನವನ್ನು ಬೇಡುವ ಸುಂದರ ಗೀತೆ.  ’ಮುಂಜಾನೆ ಮುಸುಕಲ್ಲಿ ಬಂಗಾರ ತೆರೆಗಳಹಾಡಿನಲ್ಲಿ ಮುಂಜಾನೆಯ ಮುಸುಕನ್ನು ಸೌಂದರ್ಯವಾಗಿ ಬಣ್ಣಿಸಿದರೆ, ಇಲ್ಲಿ ದಾರಿಗೆ ಅಡ್ಡವಾಗುವ ಮುಸುಕಿನ ರೂಪಕವಾಗಿ ಬಳಸುತ್ತಾರೆ.

’ಇಲ್ಲಿ ಸತ್ಯವು ಮಲಗಿದೆ’ ಹಾಡಂತೂ ವಿಷಾದದ ಛಾಯೆಯಲ್ಲಿ ಮುಳುಗಿಸುವ ಗೀತೆ. ಸತ್ಯ, ನ್ಯಾಯವು ಏಳಲಾರದೆ ಮಲಗಿದೆ ಎಂಬ ಹತಾಶ ಭಾವವೇ ಇಲ್ಲಿ ಸ್ಠಾಯಿಭಾವ. ತನ್ನಷ್ಟಕ್ಕೆ ತಾನೇ ಏಳಲಾಗದ ಸ್ಥಿತಿಯಲ್ಲಿ, ಜಗತ್ತಿನ ಯಾವ ಶಕ್ತಿಯೂ ಸಹಾಯಕ್ಕೆ ಬರಲಾರದು ಎಂಬ ದು:ಖ ಇಲ್ಲಿನ ಸಾಹಿತ್ಯದಲ್ಲಿದೆ. ಕೊನೆಗೆ ಕ್ರಿಸ್ತ ಮಾತ್ರ ಸತ್ಯವನ್ನು ಸ್ಥಾಪಿಸಬಲ್ಲ, ಸತ್ಯಕ್ಕೆ ಸಾಕ್ಷಿಯಾಗಬಲ್ಲ ಎಂಬ ಆಶಾಭಾವನೆಯೊಂದಿಗೆ ಹಾಡು ಮುಗಿಯುತ್ತದೆ.  ’ಚೇತನ’ದಲ್ಲಿ ಇದು ತಪಸ್ಸುಕಾಲ ಹಾಡುಗಳ ಸಾಲಿನಲ್ಲಿರುವುದರಿಂದ ಇದು ಕ್ರಿಸ್ತನ ಜೀವನಕ್ಕೂ ಅನ್ವಯವಾಗಬಹುದೇನೋ.

ಸ್ಪರ್ಶಿತ ಧ್ವನಿಸುರುಳಿಯ  ’ಬಾಳ ಕಡಲಿಗೆ ಅಲಗಳು ನೂರು’ ಹಾಡು ಸಂಪೂರ್ಣ ನೊಂದವರ ಪರವಾದ ದನಿಯೇ. ಇಲ್ಲಿ ನೋವಿನ ತೀವ್ರತೆ ಎಷ್ಟೆಂದರೆ ’ಅಳುವ ಕಣ್ಣಲ್ಲಿ ಕೆಂಪು ಕಣ್ಣೀರು ಬರುವಷ್ಟು. ’ಸ್ಪೂರ್ತಿಯಾಗಲಿ ಕ್ರಿಸ್ತ’ ದಂತೆ ಇಲ್ಲಿ ಕೂಡ ಬಡವರ ಬೆವರನ್ನು ಕೊನೆಗೊಳಿಸು ಎಂಬ ಪ್ರಾರ್ಥನೆ ಮೊದಲು ಬಂದರೆ, ಕೊನೆಗೆ ಬೆವರನ್ನು ಒರೆಸಲು ಸೇವೆಗೆ ಅಣಿಗೊಳಿಸು ಎಂಬ ಬದ್ದತೆ ಇದೆ.
ಅಷ್ಟು ಮಾತ್ರವಲ್ಲದೆ ತೀರ ಧಾರ್ಮಿಕ ಸ್ಪರ್ಶ ಇರಬೇಕಾದ ಅರ್ಪಣಾ ಗೀತೆಗಳಲ್ಲೂ ಫಾ. ಚಸರಾ ಈ ನ್ಯಾಯ, ಬಡವನ ಬೆವರುಗಳ ಬಗ್ಗೆ ಬರೆಯುತ್ತಾರೆ.  ’ನೀನಿರುವೆ ಮನದಲ್ಲಿ ತಲಸ್ಪರ್ಶ ಬದುಕಲ್ಲಿ’ ಇದಕ್ಕೊಂದು ಉತ್ತಮ ಉದಾಹರಣೆ.

’ಕರುಣಾಳು ಕ್ರಿಸ್ತನೆ ಬರಬಾರದೆ  ಹೃದಯದ ಗುಡಿಯಲ್ಲಿ ಇರಬಾರದೇ’ ಹಾಡಲ್ಲಿ ಮತ್ತೆ ಜನರ ಕಷ್ಟ, ಕಣ್ಣೀರು, ಸೇವೆಗೆ ಒಂದಷ್ಟು ಸಾಲುಗಳು ಮೀಸಲಾಗಿವೆ.
ಪ್ರೀತಿ, ಕರುಣೆ, ಅನುಕಂಪ, ಮಾನವೀಯತೆ, ಸೇವೆಯೇ ಕ್ರಿಸ್ತನ ನಿಜವಾದ ರೂಪ ಎಂದು ನಮ್ಮ ಗ್ರಂಥಗಳು ಹೇಳುತ್ತಲೇ ಬಂದಿವೆ. ಈ ನಂಬಿಕೆಯಲ್ಲೇ ಮುರಿದ ಮನಸ್ಸುಗಳನ್ನು ಕಟ್ಟಲು ಬಾ ಎನ್ನುವ ಹಾಡು ’ಸ್ವಾಮಿ ನಿನ್ನ ರೂಪ ನೀಡೆನಗೆ’. ಅತ್ಯಂತ ಪರಿಣಾಮಕಾರಿಯಾದ ಗೀತೆಯದು.
ಹೀಗೆ ನೋಡುತ್ತಾ ಸಾಗಿದರೆ, ಪ್ರತಿ ಹಾಡಿನಲ್ಲೂ ಈ ಕಾಳಜಿಯನ್ನು ಕಾಣಬಹುದು. ಈ ನಿಟ್ಟಿನಲ್ಲಿ ಫಾ. ಚಸರಾರವರ ಗೀತ ಸಾಹಿತ್ಯ ಕ್ರಾಂತಿಕಾರಿಯಾಗಿ ಕಾಣುತ್ತದೆ. ಎಲ್ಲಾ ಹಾಡುಗಳ ಬಗ್ಗೆ ಇಂತಿಷ್ಟೆ ಹೇಳುತಾ ಸಾಗಬೇಕಾಗಿರುವುದು ಈ ಬರಹದ ಮಿತಿಯಾಗಿದೆ. ಒಂದೊಂದು ಹಾಡು ಸವಿಸ್ತಾರ ಬರಹ, ಅಧ್ಯಯನಕ್ಕೆ ವೇದಿಕೆಯಾಗಬಲ್ಲದು.


ಚಸರಾರವರ ಇನ್ನೂ ಅನೇಕ ಗೀತೆಗಳ ಬಗ್ಗೆ ಬರೆಯಬಹುದು. ’ಮುಂಜಾನೆ ಮುಸುಕಲಿ’ ’ಏಕೆ ಈ ಶೋಧನೆ’ ನೀನಿರುವೆ ಮನದಲ್ಲಿ’ ’ಮನದಾಳದಿಂದ....’ ಈ ರೀತಿಯ ಅನೇಕ ಅತ್ಯಂತ ಜನಪ್ರಿಯ ಗೀತೆಗಳ ಬಗ್ಗೆ ಈ ಅಂಕಣದಲ್ಲಿ ಬರೆದಿಲ್ಲ. ಇವೆಲ್ಲವೂ ಎಲ್ಲರ ಅಚ್ಚುಮೆಚ್ಚಿನ ಗೀತೆಗಳು. ಅದರಲ್ಲೂ’ಸುಪ್ತ’ ’ಸಿಟ್ಟಾಗಬ್ಯಾಡ ಸ್ಬಾಮಿ’ ಯಂಥ ಧ್ವನಿಸುರುಳಿಗಳ ಬಗ್ಗೆ ಇಡಿಯಾಗಿ ಬರೆಯಬಹುದು. ಫಾ.ಚಸರಾ ಹಾಗೂ ಸಿ.ಡೇವಿಡ್ ಕಾಂಬಿನೇಷನ್ ನಿಂದ ಬಂದ ಹಾಡುಗಳ ಬಗ್ಗೆ ಬರೆಯ ಹೊರಟರೆ ಅದೇ ಒಂದು ಸರಣಿಯಾಗಬಹುದೇನೋ. ಮುಂದೆ ಎಂದಾದರೂ ಬರೆಯಬಹುದು.

ಈ ನಡುವೆ ಈ ಅಂಕಣದಲ್ಲಿ ನನ್ನಿಂದ ಬಿಟ್ಟು ಹೋದ ಇತರ ಗೀತೆಗಳ ಬಗ್ಗೆ ನಮ್ಮ ಕಿರಿಯ ಬರಹಗಾರರು ಬರೆದಾರು. ಅವರಿಗೆ ಆ ಕೆಲಸವನ್ನು ಬಿಟ್ಟು ಈ ಸರಣಿಯನ್ನು ಸದ್ಯಕ್ಕೆ ಮುಗಿಸುತ್ತೇನೆ. ಪ್ರತಿ ತಿಂಗಳು ಬರೆಯಲು ಅನುವು ಮಾಡಿಕೊಟ್ಟಿದಲ್ಲದೆ ಸದಾ ಪ್ರೋತ್ಸಾಹದ ನುಡಿಗಳನಿತ್ತ ರೀಟಾ ರೀನಿಯವರಿಗೆ ನನ್ನ ಧನ್ಯವಾದಗಳು. ಫಾ.ಚಸರಾ, ಸ್ಟೀಫನ್ ದತ್ತ್, ಸಾಧುಕೋಕಿಲ ಹಾಗೂ ಅತ್ತ್ಯುತ್ತಮ ಗಾಯಕರನ್ನೊಳಗೊಂಡ ಈ ಹಾಡುಗಳ ಬಗ್ಗೆ ಬರೆಯುವಾಗ ಒಂದು ರೀತಿಯ ಅಳುಕು ಇದ್ದೇ ಇರುತ್ತದೆ. ಅದೇ ರೀತಿ ಸಾಮಾನ್ಯ ಕೇಳುಗನ ದೃಷ್ಟಿಯಲ್ಲಿ ಹೇಳಬೇಕಾದ ಆಸೆ ಹಾಗೂ ಆತ್ಮವಿಶ್ವಾಸವೂ ಇತ್ತು. ಇದಕ್ಕೆ ಅವಕಾಶವಿತ್ತ ರೀನಿಯವರಿಗೆ ಮತ್ತೆ ಧನ್ಯವಾದಗಳು.

ತಮ್ಮ ಕೊನೆಯ ನಾಲ್ಕು ಐದು ವರ್ಷಗಳಲ್ಲಿ ಫಾ. ಚಸರಾ ತಮ್ಮದೇ ಯಾವುದೇ ಧ್ವನಿಸುರುಳಿಗೆ ಕೈ ಹಾಕಿದಂತೆ ಕಾಣಲಿಲ್ಲ. ಗೀತ ಸಾಹಿತ್ಯವೂ ವಿರಳವಾಯಿತು. “ ಏಕೆ ಹಾಡುಗಳು ಬರುತ್ತಿಲ್ಲ” ಎಂದೊಮ್ಮೆ ನಾವು ಕೇಳಿದಾಗ, “ಈಗ ಸಾಕಷ್ಟು ಯುವ ಪ್ರತಿಭೆಗಳು ಬರೆಯುತಿದ್ದಾರೆ, ಅವರು ಬರೆಯಲಿ. ನಾನು ಪ್ರಾರಂಭಿಸಿದಾಗ ಕೆಲವೇ ಜನ ರಚನಕಾರರು ಇದುದ್ದರಿಂದ ಅನಿವಾರ್ಯವಾಗಿ ಬರಯಬೇಕಾಯಿತು” ಎನ್ನುವ ಉತ್ತರ ಬಂದಿತ್ತು.

ಕನ್ನಡ ಕ್ರೈಸ್ತ ಸಾಹಿತ್ಯ, ಸಂಗೀತ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮನ್ನೇ  ತೊಡಗಿಸಿಕೊಂಡ ಫಾ.ಚಸರ ಇದ್ದಿದ್ದರೆ ತಮ್ಮ ಬಗ್ಗೆಯೇ ಈ ರೀತಿಯ ಒಂದು ಅಂಕಣಕ್ಕೆ ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಿರಲಿಲ್ಲ. ಇಷ್ಟು ಬೇಗ ಅವರ ಬಗ್ಗೆ ಅವರಿಲ್ಲದಿದ್ದಾಗ ಬರಯಬೇಕಾಗಿ ಬಂದದ್ದು ನಮ್ಮೆಲ್ಲರ ದುರಂತವೇ ಸರಿ.





-ಪ್ರಶಾಂತ್ ಇಗ್ನೇಶಿಯಸ್