Tuesday 30 May 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 10 - ’ಸಂವೇದ್ಯ’

’ಸಂವೇದ್ಯ’

ಫಾ.ಚಸರಾರವರ ಇನ್ನೂ ಅನೇಕ ಗೀತೆಗಳ ಬಗ್ಗೆ ಬರೆಯಬಹುದಾದರೂ ’ಸಂವೇದ್ಯ’ ಧ್ವನಿಸುರಳಿಯ ಬಗ್ಗೆ ಪ್ರತ್ಯೇಕವಾಗಿ ಬರೆಯಲೇ ಬೇಕಾಗುತ್ತದೆ. ಈಗಾಗಲೇ ಈ ಧ್ವನಿಸುರಳಿಯ ಮೂರ್ನಾಲ್ಕು ಹಾಡುಗಳ ಬಗ್ಗೆ ಬರೆದಿದ್ದಾಗಿದೆಯಾದರೂಈ ಧ್ವನಿ ಸುರಳಿಯ ಒಟ್ಟು ಹಿನ್ನಲೆ, ಪರಿಣಾಮ, ಸಾಂಸ್ಕೃತಿಕ ಮಹತ್ವದ ಬಗ್ಗೆ ಉಲ್ಲೇಖಿಸಲೇಬೇಕಾಗುತ್ತದೆ.

ಎಲ್ಲರಿಗೂ ತಿಳಿದಿರುವಂತೆ ’ಸಂವೇದ್ಯ’  ಧ್ವನಿಸುರಳಿ, ಮರಿಯಾಪುರದಲ್ಲಿ ಫಾ. ತೋಮಸ್ ನಿರ್ದೇಶನದಲ್ಲಿ ನಡೆಯುತ್ತಾ ಬಂದಿರುವ ’ಕ್ರಿಸ್ತ ದ್ವನಿ’ ಮಹಿಮೆ ನಾಟಕದಲ್ಲಿನ  ಹಾಡುಗಳ ಗುಚ್ಛ. ಹಿಂದಿನ ಸಂಚಿಕೆಯೊಂದರಲ್ಲಿ ಹೇಳಿದಂತೆ ಕನ್ನಡ ಕ್ರೈಸ್ತರು ಮಾತ್ರವಲ್ಲದೆ ಇಡೀ ಕ್ರೈಸ್ತ ಸಮುದಾಯ, ಕನ್ನಡ ಸಾಂಸ್ಕೃತಿಕ ಲೋಕ ಹೆಮ್ಮೆಪಡಬಹುದಾದ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳಲ್ಲಿ ಇದು ಒಂದು.

ಕರ್ನಾಟಕದ ಹಾಗೂ ತಮಿಳುನಾಡಿನ ಅನೇಕ ಕ್ರೈಸ್ತ ಗ್ರಾಮಗಳಲ್ಲಿ ಹಬ್ಬ, ಜಾತ್ರೆ, ವಿಶೇಷ ಸಂದರ್ಭಗಳಲ್ಲಿ ಕ್ರೈಸ್ತ ನಾಟಕಗಳು ನಡೆದುಕೊಂಡು ಬಂದಿದೆ. ತಮಿಳುನಾಡಿನ ಪಳ್ಳಪಟ್ಟಿ ಹಾಗೂ ಹಾರೋಬೆಲೆಯ ಮಹಿಮೆ ನಾಟಕಗಳು ಸಾಕಷ್ಟು ಜನಪ್ರಿಯವೂ ಹೌದು.  ಹಾರೋಬೆಲೆಯ ಮಹಿಮೆ ನಾಟಕಕ್ಕೆ ನೂರು ವರ್ಷಗಳ ಇತಿಹಾಸವೂ ಇದೆ. ಈ ಹಿನ್ನಲೆಯಲ್ಲಿ ಇವುಗಳಿಗಿಂತ ಭಿನ್ನವಾದ ಧ್ವನಿ ಬೆಳಕಿನ ಮೂಲಕ ವಿಶಾಲವಾದ ವೇದಿಕೆಯಲ್ಲಿ ಬೈಬಲ್ ಅಧಾರಿತ ನಾಟಕವನ್ನು ಮಾಡಬೇಕೆನ್ನುವ ನಿರ್ಧಾರವೇ ಒಂದು ದೊಡ್ಡ ಸಾಹಸ. 

ಈ ನಿಟ್ಟಿನಲ್ಲಿ ಈ ಸಾಹಸಕ್ಕೆ ಕೈ ಹಾಕಿದ ಫಾ.ತೋಮಾಸರ ಧೈರ್ಯ ಮೆಚ್ಚತಕ್ಕದೆ. ಒಂದೀಡಿ ಗ್ರಾಮದ ಜನರ ಸಹಕಾರ, ತಕ್ಕ ಬಯಲು, ತಕ್ಕಮಟ್ಟಿನ ಆರ್ಥಿಕ ಬಲ ಎಲ್ಲವೂ ಹೊಂದಿಸಿದ ಮೇಲೆ ನಿಜಕ್ಕೂ ಸವಾಲಾಗುವಂತದ್ದು ನಾಟಕದ ಕಥಾವಸ್ತು, ನಿರೂಪಣೆ ಹಾಗೂ ಸಾಹಿತ್ಯ. ಮೊದಲೇ ಹೇಳಿದಂತೆ ನಾಟಕಗಳ ಇತಿಹಾಸವಿದ್ದೂ, ಸಂಪ್ರದಾಯಸ್ತ ಮನಸ್ಸುಗಳ ನಡುವೆ ಯುವ ಸಮುದಾಯವನ್ನೂ ಆಕರ್ಷಿಸುವಂತ ಗಟ್ಟಿ ಸಾಹಿತ್ಯ ಮಾತ್ರವೇ ಈ ಮಹಿಮೆ ನಾಟಕವನ್ನು ಯಶಸ್ವಿಗೊಳಿಸಬೇಕಿತ್ತು. ಇಂದಿಗೂ ಈ ಮಹಿಮೆ ನಾಟಕ ಅತ್ತ್ಯುತ್ತಮ ಎನ್ನಬಹುದಾದ ರಂಗ ವಿನ್ಯಾಸ, ಬೆಳಕು ಹಾಗೂ ಸಮರ್ಥ ಮಾನವ ಸಂಪನ್ಮೂಲದ ಬಳಕೆಯಿಂದ ಶ್ರೇಷ್ಠವಾದ ರಂಗ ಚಟುವಟಿಕೆಯಾಗಿ ನಿಂತಿದೆ. ಆದರೆ ಅದಕ್ಕೆ ಸಮನಾದ ಆಧಾರ ಸ್ತಂಭವಾಗಿ ನಿಂತಿರುವುದು ಅದರ ಸಾಹಿತ್ಯ ಹಾಗೂ ಸಂಗೀತ.

ಇಲ್ಲಿನ ಹಾಡುಗಳು ನಿಜಕ್ಕೂ ಒಂದಕ್ಕಿಂತ ಒಂದು ಮೀರಿಸುವಂತದ್ದು. ಧ್ವನಿಸುರಳಿ ಮೊದಲಿಗೆ ಫಾ.ಚಸರಾರವರ ಸುಂದರ ನಿರೂಪಣೆಯಿದೆ. ನಂತರದ್ದು ಫಾ.ಫಿಲಿಪ್ ಸಿಜೋನ್‍ರವರ ಬಗೆಗಿನ ಹಾಡು. ಒಬ್ಬ ವ್ಯಕ್ತಿ ಒಂದು ಗ್ರಾಮಕ್ಕೆ, ಒಂದು ಸಮುದಾಯಕ್ಕೆ ಕೊಡಬಹುದಾದ ಸಾಮಾಜಿಕ, ಅಧ್ಯಾತ್ಮಿಕ, ಸಾಂಸ್ಕೃತಿಕ ಕೊಡುಗೆಗಳ ಬಗ್ಗೆ ನೆನೆಯುತ್ತಾ, ಅದಕ್ಕೆ ಧನ್ಯತೆಯನ್ನು ಒಂದು ಹಾಡಿನಲ್ಲೇ ಹೇಗೆ ಸೂಚಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದೆ ಈ ಹಾಡು. ಈ ಗೀತೆಯ ಸಾಹಿತ್ಯ, ಸಂಗೀತ, ವಾದ್ಯ ಸಂಯೋಜನೆ ಎಲ್ಲವೂ ಶ್ರೇಷ್ಠ ಮಟ್ಟದಲ್ಲಿದೆ. ಮುಂದೆ ಬರುವ ’ಬಾನಲಿ ದೂತರು ಹಾಡಿದರು’ ಗೀತೆಯ ಬಗ್ಗೆ ಈಗಾಗಲೇ ಇದೇ ಸಂಚಿಕೆಯಲ್ಲಿ ಬರೆಯಲಾಗಿದೆ. ಸುಂದರವಾದ ಕ್ರಿಸ್ತ ಜಯಂತಿಯ ಹಾಡು ಸಾಗುತ್ತಾ ಅನೇಕ ಆಯಾಮಗಳನ್ನು ಪಡೆದುಕೊಳ್ಳುತ್ತದೆ. ಅತ್ತ್ಯುತ್ತಮ ಎನ್ನಬಹುದಾದ ಗಾಯನ ಇಲ್ಲಿದೆ.

ಬಿತ್ತುವವನ ಸಾಮತಿ ಆಧಾರಿತ ’ಒಂದೂರಲ್ಲಿ ಒಬ್ಬ ರೈತನಿದ್ದ’ ಒಂದು ವಿಶೇಷವಾದ ಗೀತೆ. ಸಿ.ಅಶ್ವತ್ಥ್‍ರವರ ಕಂಠಸಿರಿ ಇಲ್ಲಿ ಕೊಡುಗೆಯಾಗಿದೆ.  ಈ ಗೀತೆ ಮನ ಸೆಳೆಯುವುದು ತನ್ನ ಸಂಗೀತದಿಂದ. ಸಾಹಿತ್ಯ ಎಂದಿನಂತೆ ಸರಳ ಆದರೆ ಪರಿಪೂರ್ಣ.  ಸಾಧು ಕೋಕಿಲರವರ ವಾದ್ಯ ಸಂಯೋಜನೆಯ ಬಗ್ಗೆ ಏನು ಹೇಳುವಂತಿಲ್ಲ. ಮಣ್ಣಿನ ಸೊಗಡು ಹಾಡಿನ ಪ್ರತಿ  ವಿಭಾಗ ಹಾಗೂ ಕ್ಷಣಗಳಲ್ಲೂ ಹಾಸು ಹೊಕ್ಕಿದೆ. ಇನ್ನೂ ’ನನ್ನ ಆತ್ಮವೂ ಕರ್ತರನ್ನು ಸ್ತುತಿಸುತ್ತದೆ’ ಹಾಡು ಹಳೆಯ ಗೀತೆಯನ್ನು ನೆನಪಿಸುತ್ತಾ ಹೊಸತಾದ ಅನುಭಾವವನ್ನು ಹೊರಡಿಸುತ್ತದೆ. ದೇವಮಾತೆಯ ಸ್ವಗತದ ಗೀತೆಗೆ ಇದಕ್ಕಿಂತ ಉತ್ತಮವಾದ ಸಂಗೀತ, ವಾದ್ಯ ಸಂಯೋಜನೆ ಸಾಧ್ಯವೇ ಎನ್ನುವಷ್ಟು ಮಧುರ.

’ಪರಲೋಕ ಪಾರ್ಥನೆ’ ಜಗತ್ತಿನ ಅತ್ಯಂತ ಸರಳ ಆದರೆ ಅಷ್ಟೇ ಜನಪ್ರಿಯ, ಪರಿಣಾಮಕ್ಕಾರಿಯಾದ ಪ್ರಾರ್ಥನೆ ಎಂಬ ಮಾತಿದೆ. ಆ ಮಾತಿಗೆ ಪುಷ್ಠಿ ನೀಡುವಂತ ಸರಳ ಸಂಗೀತ ಹಾಗೂ ಸಂಯೋಜನೆ ’ಪರಲೋಕ ತಂದೆಯೇ ನಿಮ್ಮ ನಾಮವು’ ಗೀತೆಗೆ ಒದಗಿ ಬಂದಿದೆ. ಗಾಯನ ಹಾಗೂ ಕೋರಸ್ ಅದೆಷ್ಟು ಸುಂದರವಾಗಿದೆ ಎಂದರೆ ಹಾಡು ಕೇಳುತ್ತಿದ್ದಂತೆ ಯೇಸು ಹಾಗೂ ಶಿಷ್ಯರ ಚಿತ್ರಣ ಕಣ್ಣ ಮುಂದೆ ಮೂಡಿ ಬರುತ್ತದೆ. ’ನನ್ನ ತಂದೆಯ ಈ ಆಲಯ’ ಗೀತೆಯ ಬಗ್ಗೆಯೂ ಇದೇ ಮಾತು ಅನ್ವಯವಾಗುತ್ತದೆ.

ಯೇಸು ಕ್ರಿಸ್ತ ಜೆರುಸಲೇಮ್ ನಗರವನ್ನು ಪ್ರವೇಶಿಸಿದಾಗ ಸಿಕ್ಕ ಅಭೂತಪೂರ್ವ ಸ್ವಾಗತ, ಪ್ರೀತಿಯನ್ನು ಅತ್ಯಂತ ಸಮರ್ಥವಾಗಿ, ಸುಂದರವಾಗಿ ಮಹಿಮೆಯ ವೇದಿಕೆಯ ಮೇಲೆ ತೋರಿಸಲು ಬೇಕಾದ ಲವಲವಿಕೆ ,ಶಕ್ತಿ ’ದಾವಿದ ಕುವರಗೆ ಹೊಸಾನ್ನ’ ಹಾಡಿನಲ್ಲಿದೆ. ಸಾಂಪ್ರದಾಯಿಕವಾದ ಸಾಹಿತ್ಯದ ಜೊತೆ ಜೊತೆಗೆ ಫಾ.ಚಸರಾ ತಮ್ಮದೇ ಆದ ಚಿಂತನೆಯನ್ನುಈ ಗೀತೆಯಲ್ಲಿ ಪೋಣಿಸಿದ್ದಾರೆ. ಸದಾ ಗುನುಗಬಹುದಾದ ಗೀತೆ.

ಧ್ವನಿಸುರಳಿಯ ಮುಂದಿನ ಎರಡು ಗೀತೆಗಳಾದ ’ ನನ್ನ ಸ್ವಾರ್ಥ ಮನಸ್ಸಿನ ಈ ಬದಕು’ ಹಾಗೂ ’ಅಗೋ ನೋಡಿ’ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿದೆ. ಈ ಎರಡು ಗೀತೆಗಳು ಈ ಧ್ವನಿಸುರಳಿಯ ಮೇಲ್ಮೆಯನ್ನು ಇನ್ನೂ ಎತ್ತರಕ್ಕೆ ಏರಿಸುತ್ತದೆ. ಕನ್ನಡದ ಅತ್ತ್ಯುತ್ತಮ ಪುನರುತ್ಥಾನ ಗೀತೆಗಳ ಸಾಲಿನಲ್ಲಿ ಇದೇ ಧ್ವನಿಸುರಳಿಯ ’ಪುನರುತ್ಥಾನರಾದರು ನಮ್ಮ ಯೇಸು ಕ್ರಿಸ್ತರು’ ಸಹಾ ಒಂದು. ಭಿನ್ನವಾದ, ಕೇವಲ ಫಾ.ಚಸರಾ ಚಿಂತನೆಯ ಬತ್ತಳಿಕೆಯಿಂದ ಮಾತ್ರ ಬರಬಹುದಾದ ಸಾಲುಗಳು ಈ ಹಾಡಿನಲ್ಲಿವೆ. ’ಮುಂಜಾನೆ ಮೂಡಿ ಬಂದು ಹೊಂಗಿರಣ ಚಿಮ್ಮಿಸಿತು’ ಎಂಬುದು ಯೇಸುವಿನ ಪುನರುತ್ಥಾನಕ್ಕೆ ಹೊಸ ಅರ್ಥವನ್ನೂ ನೀಡುತ್ತದೆ. ’ಸೂರ್ಯನು ಉದಯಿಸಿದ ಬದುಕೆಲ್ಲಾ ಹೊಸದಾಯಿತು, ಮನಸೆಲ್ಲಾ ಹಗುರಾಯಿತು’ ಎನ್ನುವ ಸಾಲುಗಳು ಚಸರಾರವರು ಕನ್ನಡ ಭಕ್ತಿ ಸಂಗೀತಕ್ಕೆ ತಂದ ಹೊಸ ಅಲೋಚನೆಗಳ ಪ್ರತಿಬಿಂಬವಾಗಿದೆ.   

ಇಷ್ಟು ಶ್ರೇಷ್ಠವಾದ ಹಾಡುಗಳು ಒಂದೇ  ಧ್ವನಿಸುರಳಿಯಲ್ಲಿ ಇರುವುದು ನಿಜಕ್ಕೂ ಅಪರೂಪದ ಸಂಗತಿಯಾಗಿರುವುದರಿಂದ ಈಡೀ  ಧ್ವನಿಸುರಳಿಯ ಬಗ್ಗೆ ಬರೆಯಬೇಕಾಯಿತು.
ಫಾ.ಚಸರಾರವರ  ಸಾಹಿತ್ಯ ಹಾಗೂ ಸಂಗೀತ ಎರಡು ದಶಕಗಳ ನಂತರವೂ ತನ್ನ ನಾವಿನ್ಯತೆಯನ್ನು ಕಳೆದುಕೊಂಡಿಲ್ಲ ಎಂದರೆ ಅದಕ್ಕೆ ಅವರ ದೂರದೃಷ್ಟಿ, ಪಾಂಡಿತ್ಯ, ಪ್ರತಿಭೆ, ಶ್ರಮ ಮಾತ್ರವಲ್ಲದೆ ಅವರು ನಂಬಿದ ಟೀಂ ವರ್ಕ್ ಕಾರಣವಾಗಿದೆ. ಹಳೆಯ ಹಾಗೂ ಹೊಸತನದ ಮಿಲನವಾಗಿರುವ ಈ ಸಾಹಿತ್ಯದಿಂದಾಗಿಯೇ ಈ ಧ್ವನಿಸುರಳಿಯ ಎಲ್ಲಾ ಹಾಡುಗಳು ಇಂದಿಗೂ ನನ್ನ ಮೆಚ್ಚಿನ ಮಾತ್ರವಲ್ಲದೆ ಕ್ರೈಸ್ತ ಸಮುದಾಯದ ಮೆಚ್ಚಿನ ಹಾಡುಗಳಾಗಿ ಜನಮನದಲ್ಲಿ ಬೆರೆತು ಹೋಗಿದೆ.

ಸಂಗೀತ ಹಾಗೂ ವಾದ್ಯ ಸಂಯೋಜನೆಯಲ್ಲಿ ದೃಶ್ಯಗಳಿಗೆ ಬೇಕಾದ ಭಾವನಾತ್ಮಕತೆಯನ್ನು ಕಾಪಾಡಿಕೊಳ್ಳಲಾಗಿದೆ. ಉದಾಹರಣೆಗೆ ’ನನ್ನ ತಂದೆ’,’ನನ್ನ ಆತ್ಮವು’,’ಪರಲೋಕ ತಂದೆಯ’ ಗೀತೆಗಳಲ್ಲಿ ಅತ್ಯಂತ ಕಡಿಮೆ ವಾದ್ಯಗಳನ್ನು ಬಳಸಿ ಮಾಧುರ್ಯಕ್ಕೆ ಆದ್ಯತೆ ನೀಡಲಾಗಿದೆ. ’ದಾವಿದ ಕುವರಗೆ ಹೊಸಾನ್ನ’ ಹಾಗೂ’ಪುನರುತ್ಥಾನರಾದರೇಸು’ ಗೀತೆಗಳಲ್ಲಿ ಸಂಭ್ರಮ ಹಾಸುಹೊಕ್ಕಿದೆ. ’ಒಂದೂರಿನಲ್ಲಿ’ ಅಪ್ಪಟ ದೇಸಿ ಶೈಲಿಯಲ್ಲಿದ್ದರೆ, ’ಗ್ಲೋರಿಯಾ’ ಹಾಗೂ ’ಜನತೆಯ ಬದುಕಿನ’ ಹಾಡುಗಳಲ್ಲಿ ಪ್ರಯೋಗವಿದೆ.  ’ನನ್ನ ಸ್ವಾರ್ಥ ’ಹಾಗೂ ’ಅಗೋ ನೋಡಿ’ ಗೀತೆಗಳ ಸಂಗೀತದಲ್ಲಿ ಕರುಣರಸ ಎದ್ದು ಕಾಣುತ್ತದೆ.

ಇಲ್ಲಿನ ಹಾಡುಗಳು ಬೈಬಲ್ ಘಟನೆಗಳಿಗೆ, ಅದರ ಆಶಯಕ್ಕೆ ಬದ್ಧವಾಗಿರುವುದರಿಂದ ಸಾಹಿತ್ಯದ ಆಳಕ್ಕೆ ಇಳಿದು ಹೇಳುವಂಥದ್ದೇನಿಲ್ಲ. ಗೊತ್ತಿರುವ ಸಂಗತಿಗಳನ್ನೇ ಸೃಜನಾತ್ಮಕವಾಗಿ, ಈ ಮಣ್ಣಿನ ಸೊಗಡಿಗೆ ಹತ್ತಿರವಾಗಿ, ಹೊಸ ಬಗೆಯಲ್ಲಿ ಕಟ್ಟಿಕೊಟ್ಟಿರುವ ಫಾ.ಚಸರಾರವರ ಪ್ರಯತ್ನವನ್ನು ಅಚ್ಚರಿಯಿಂದ, ಮೆಚ್ಚುಗೆಯಿಂದ ನೋಡಬಹುದಷ್ಟೇ.



Monday 1 May 2017

May 1

ಒಂದಷ್ಟು ವರ್ಷಗಳ ಹಿಂದೆ ಒಂದು ಜೋಕ್ ಪ್ರಚಲಿತವಾಗಿತ್ತು. ಅದು ಈಗಲೂ ಪ್ರಸ್ತುತ. ’ತಾಜ್ ಮಹಾಲ್ ಕಟ್ಟಿದ್ದು ಯಾರು?’ ಎಂಬ ಪ್ರಶ್ನೆಗೆ ’ಕಲ್ಲು ಮಣ್ಣು ಹೊತ್ತ ಕೂಲಿಯವರು’ ಎಂಬ ಉತ್ತರ ಬರುತಿತ್ತು.  ಶಹಜಹಾನಿನ ಆ ಕನಸಿಗೆ ಹೆಗಲು, ಬೆವರು ಕೊಟ್ಟವರು ಅಸಂಖ್ಯಾತ ಕೂಲಿ ಕೆಲಸಗಾರರೇ ಅಲ್ಲವೇ? ಜಗತ್ತಿನ ಅತ್ಯದ್ಭುತ ಕಟ್ಟಡಗಳ, ಸ್ಮಾರಕಗಳ ಹಿಂದಿನ ಶ್ರಮ ಕಾರ್ಮಿಕರದ್ದೇ. "ಪ್ರತಿಭೆ ಮಹತ್ವದ ಕಾರ್ಯಗಳನ್ನು ಆರಂಭಿಸಹುದು, ಕಾರ್ಮಿಕ ಅಥವಾ ಶ್ರಮಿಕ ಮಾತ್ರ ಅದನ್ನು ಪೂರ್ಣಗೊಳಿಸಬಲ್ಲ" ಎಂಬ ಮಾತಿದೆ. ಈ ಮಾತಿನ ಅರ್ಥ ಬಹಳ ಸರಳ . ಕೇವಲ ಪ್ರತಿಭೆ ಅಥವಾ ದೊಡ್ಡ ಆಲೋಚನೆ, ಯೋಜನೆಗಳಿಂದ ಮಾತ್ರ ಕಾರ್ಯಗಳು ಕೈಗೂಡುವುದಿಲ್ಲ, ಅದಕ್ಕೆ ಶ್ರಮಪಡುವ ಕಾರ್ಮಿಕರು ಅತ್ಯವಶ್ಯ ಎಂದು.

ನಮ್ಮ ಅಧುನಿಕ ಜಗತ್ತು ಅದೇನೆ ಐ.ಟಿ, ಬಿಟಿ, ಸಾಫ್ಟ್ ವೇರ್ ತಂತ್ರಜ್ಞಾನದಲ್ಲಿ ಮುಂದುವರಿದಿದ್ದರೂ ಕಾರ್ಮಿಕನಿಲ್ಲದ, ಆತನ ಬೆವರಿನ ಶ್ರಮವಿಲ್ಲದ ಜಗತ್ತು ಇಲ್ಲ. ಕಾರ್ಮಿಕ ಹಾಗೂ ಬೆವರಿನ ಶ್ರಮ ಈ ಲೋಕದಷ್ಟೇ ಹಳೆಯದು. ನಿರಂತರ ಶೋಷಣೆ, ದಬ್ಬಾಳಿಕೆ ಒಳಗಾದರೂ ಕಾರ್ಮಿಕರ ಸಂಖ್ಯೆ ಇಳಿದಿಲ್ಲ. ಆತನ ಕಷ್ಟವೂ ಕಡಿಮೆಯಾಗಿಲ್ಲ. ಇಂತಹ ಸಮಯದಲ್ಲಿ ಕಾರ್ಮಿಕನ ಬಗ್ಗೆ ಒಂದಷ್ಟು ನೆನಪು ಆತನ ಬಗ್ಗೆ ಸಹಾನುಭೂತಿ ಬರುವುದು ಕಾರ್ಮಿಕರ ದಿನ ಬಂದಾಗಲೇ. ವಿಶ್ವದ ಬಹುತೇಕ ದೇಶಗಳು ’ಕಾರ್ಮಿಕರ ದಿನ’ವನ್ನು ಮೇ ೧ ರಂದೇ ಅಚರಿಸುತ್ತದೆ. ಕಾರ್ಮಿಕ ಸಂಘ ಸಂಸ್ಥೆಗಳು, ಸಂಘಟನೆಗಳು ಆ ದಿನವನ್ನು ಅನೇಕ ರೀತಿಯಲ್ಲಿ ಆಚರಿಸುತ್ತವೆ. ಮೆರವಣಿಗೆಗಳು, ಕಾರ್ಯಕ್ರಮಗಳು ವಿಚಾರ ಸಂಕಿರಣಗಳು ನೆಡೆಯುತ್ತದೆ. ಅಂದು ಎಲ್ಲರಿಗೂ  ಕಡ್ಡಾಯ ರಜೆ ಎನ್ನುವುದು ಮತ್ತೊಂದು ಆಕರ್ಷಣೆ. ಆದರೆ ಈ ಮೇ ೧ ರ ಆಚರಣೆ ಹೇಗೆ ಪ್ರಾರಂಭವಾಯಿತು ಎಂದು ಇತಿಹಾಸದತ್ತ ನೋಟ ಹರಿಸಿದಾಗ, ಆಸಕ್ತಿದಾಯಕ ವಿಷಯಗಳು ಗಮನಕ್ಕೆ ಬರುತ್ತವೆ.

೧೮ನೇ ಶತಮಾನದಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿ, ವಿಶ್ವದ ಅನೇಕ ಅಭಿವೃದ್ಧಿ ಹೊಂದುತ್ತಿದ್ದ ದೇಶಗಳಲ್ಲಿ ಅನೇಕ ಕಾರ್ಖಾನೆಗಳ ಪ್ರಾರಂಭಕ್ಕೆ ಕಾರಣವಾಯಿತು. ಬ್ರಿಟನ್, ಫ್ರಾನ್ಸ್, ಅಮೇರಿಕಾ ಮುಂತಾದ ದೇಶಗಳಲ್ಲಿ ಲಕ್ಷಾಂತರ ಜನರು ಈ ಕಾರ್ಖಾನೆಗಳಲ್ಲಿ ಕೆಲಸ ಮಾಡತೊಡಗಿದರು. ಕೆಟ್ಟ ವಾತಾವರಣ, ಕನಿಷ್ಠ ಸೌಲಭ್ಯಗಳೂ ಇಲ್ಲದ ಈ ಕಾರ್ಖಾನೆಗಳಲ್ಲಿ ಕಾರ್ಮಿಕರ ಕಷ್ಟ ಹೇಳ ಸಾಧ್ಯವಿಲ್ಲದಂತಿತ್ತು. ಈ ನಡುವೆ ಕಾರ್ಖಾನೆಯ ಮಾಲೀಕರು ಕಾರ್ಮಿಕರನ್ನು ದಿನಕ್ಕೆ ೧೦ ರಿಂದ ೧೬ ಗಂಟೆಗಳ ಕಾಲ ದುಡಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಇದು ನಿಜಕ್ಕೂ ಕಾರ್ಮಿಕರ ಮೇಲೆ ಮಾನಸಿಕ ಹಾಗೂ ದೈಹಿಕ ಪರಿಣಾಮಗಳನ್ನು ಬೀರಲು ಪ್ರಾರಂಭಿಸುತ್ತದೆ. ೧೮೧೦ರಲ್ಲೇ ರಾಬರ್ಟ್ ಓವನ್ ಎಂಬ ನಾಯಕ ದಿನಕ್ಕೆ ಗರಿಷ್ಠ ’೧೦ ಗಂಟೆ ಮಾತ್ರದ ಕೆಲಸ’ ಎಂಬುದರತ್ತ ದನಿ ಎತ್ತುತ್ತಾನೆ.  ಕ್ರಮೇಣ ೮ ಗಂಟೆಗಳ ಅವಧಿಯ ಕೆಲಸದ ಬಗ್ಗೆ ಬೇಡಿಕೆಗಳು, ಮುಷ್ಕರಗಳು, ಧರಣಿಗಳು ಕಾರ್ಮಿಕ ವಲಯದಿಂದ ಪ್ರಾರಂಭವಾಗುತ್ತದೆ. ಇಡೀ ೧೮ನೇ ಶತಮಾನದ ಉದ್ದಕ್ಕೂ ಈ ರೀತಿಯ ಸಂಘರ್ಷಗಳು ನಡೆಯುತ್ತಲೇ ಇದ್ದವು. ೧೮೮೬ರ ಮೇ ೪ರಂದು ಇದೇ ರೀತಿಯ ಕಾರ್ಮಿಕ ಮುಷ್ಕರವೊಂದು ಅಮೇರಿಕಾದ ಚಿಕಾಗೋ ನಗರದ ಹೇಮಾರ್ಕೆಟ್ ಎಂಬಲ್ಲಿ ನಡೆಯುತ್ತದೆ. ಆ ಮುಷ್ಕರದ ಮುಖ್ಯ ಬೇಡಿಕೆ ಅದೇ ೮ ಗಂಟೆಗಳ ಕೆಲಸದ ಅವಧಿಯ ಬಗ್ಗೆಯೇ ಆಗಿತ್ತು.ಹಿಂದಿನ ದಿನ ನಡೆದ ಕಾರ್ಮಿಕರ ಮೇಲಿನ ಮಾರಣಾಂತಿಕ ದೌರ್ಜನ್ಯದ ಮೇಲಿನ ಪ್ರತಿಭಟನೆಯೂ ಅದಾಗಿತ್ತು.

ಶಾಂತಿಯುತವಾಗಿ ನಡೆಯುತ್ತಿದ್ದ ಮುಷ್ಕರದಲ್ಲಿ ಅಚಾನಕ್ಕಾಗಿ ಬಾಂಬೊಂದು ಸಿಡಿಯುತ್ತದೆ. ಇದರಿಂದಾಗಿ ಒಬ್ಬ ಪೋಲಿಸ್ ಅಧಿಕಾರಿ ಸತ್ತು ಆರು ಜನ ಗಾಯಗೊಳ್ಳುತ್ತಾರೆ. ನಂತರ ನಡೆದ ಪೋಲಿಸ್ ಹಾಗೂ ಕಾರ್ಮಿಕರ ತಿಕ್ಕಾಟದಲ್ಲಿ ಅನೇಕ ಸಾವು ನೋವುಗಳು ಸಂಭವಿಸುತ್ತವೆ. ಅಂದು ನಡೆದ ಆ ಘಟನೆಯಿಂದಾಗಿ ಕಾರ್ಮಿಕ ಹಾಗೂ ಮಾಲೀಕರ ನಡುವಿನ ಒಂದು ದೊಡ್ಡ ಕಂದರ ಉಂಟಾಗುತ್ತದೆ. ಆ ಘಟನೆಗಳ ಬಗ್ಗೆ ನಂತರ ನಡೆದ ವಿಚಾರಣೆ, ಕೋರ್ಟ್ ಕೇಸುಗಳಲ್ಲಿ ೭ ಜನ ಕಾರ್ಮಿಕ ಪರ ನಾಯಕರಿಗೆ ಮರಣ ದಂಡನೆ ವಿಧಿಸಲಾಗುತ್ತದೆ. ಅದರಲ್ಲಿ ಇಬ್ಬರ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಗುತ್ತದೆ. ಮತ್ತೊಬ್ಬ ಆರೋಪಿಯು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಇದು ಅನ್ಯಾಯದ ತೀರ್ಪು ಎಂಬ ಕಾರಣಕ್ಕಾಗಿವಿಶ್ವದಾದ್ಯಂತ ಅನೇಕ ಪ್ರತಿಭಟನೆಗಳು ಪ್ರಾರಂಭವಾಗುತ್ತದೆ.  ಮರಣ ದಂಡನೆಗೆ ಗುರಿಯಾದವರು ಕಾರ್ಮಿಕರ ಕಣ್ಣಲ್ಲಿ ತಮ್ಮ ಪರವಾಗಿ ಸತ್ತ ಹುತ್ತಾತ್ಮ ನಾಯಕರಾಗುತ್ತಾರೆ. ಕಾರ್ಮಿಕ ಸಂಘಟನೆಗಳು ಇದರಿಂದಾಗಿ ಮತ್ತಷ್ಟು ಸಂಘಟಿತರಾಗಿ ಬೆಳೆಯುತ್ತವೆ. ಕಾರ್ಮಿಕ ಪರ ದನಿ ದೊಡ್ಡ ಮಟ್ಟದಲ್ಲಿ ಬೆಳೆದು ಸಂಸ್ಥೆಗಳ ರೂಪ ಪಡೆಯುತ್ತವೆ. ಇದರ ಪರಿಣಾಮವಾಗಿ ೧೯೦೪ರಲ್ಲಿ ನಡೆದ ಕಾರ್ಮಿಕರ  ಸಂಘಟನೆಗಳ Sixth Conference of the Second International ಕೂಟದಲ್ಲಿ ಈ ಹೇಮಾರ್ಕೆಟ್ ಘಟನೆಯ ಸ್ಮರಣಾರ್ಥ ಪ್ರತಿ ಮೇ ೧ ರಂದು ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸುವ ನಿರ್ಣಯಕ್ಕೆ ಬರಲಾಗುತ್ತದೆ.

ಅಂದಿನಿಂದ ಅನೇಕ ರಾಷ್ಟ್ರಗಳಲ್ಲಿ ಇದನ್ನು ಆಚರಿಸಿಕೊಂಡು ಬರಲಾಗಿದೆ. ಕಾರ್ಮಿಕರ ದಿನವನ್ನು ಕಾರ್ಮಿಕರ ಆಶೋತ್ತರ, ಹಕ್ಕುಗಳಿಗೆ  ಪ್ರತೀಕವಾಗಿ ಬಳಸಿಕೊಳ್ಳಲಾಗಿದೆ. ಕ್ರೈಸ್ತ ಧರ್ಮಸಭೆ ಕೂಡ ಕಾರ್ಮಿಕರ ಪಾಲಕ ಸಂತರಾದ ಜೋಸೆಫರ ಹಬ್ಬವನ್ನು ಆಚರಿಸುವುದರ ಮೂಲಕ ತಾನು ಕಾರ್ಮಿಕರ , ಶ್ರಮಿಕರ ಪರ ಎಂದು ತೋರಿಸಿಕೊಟ್ಟಿದೆ.

ಕಾರ್ಮಿಕ ನಾಯಕನಾಗಿದ್ದು ಹೇಮಾರ್ಕೆಟ್ ಘಟನೆಯಲ್ಲಿ ಮರಣದಂಡನೆಗೆ ಒಳಗಾದ ಆಗಸ್ಟ್ ಸ್ಪೈಸ್ ಹೇಳಿದ ಮಾತು ಶೋಷಿತ, ದಮನಕ್ಕೊಳಗಾದ ಜನರ ಪಾಲಿಗೆ ಅಮರ ವಾಕ್ಯವಾಗಿದೆ. ನೇಣು ಕುಣಿಕೆಗೆ ಹಾಕುವ ಮುನ್ನ ಕೊನೆಯ ಮಾತಾಗಿ ಸ್ಪೈಸ್ ಹೇಳಿದ್ದೇನೆಂದರೆ " ನೀವು ಇಂದು ಅದುಮಿಡುತ್ತಿರುವ ದನಿಗಿಂತ ನಮ್ಮ ಮೌನವೇ ಶಕ್ತಿಶಾಲಿಯಾಗಿ ರೂಪುಗೊಳ್ಳುವ ಸಮಯವೊಂದು ಬರುತ್ತದೆ." ಆತನ ಮಾತು ನಿಜವೆಂಬಂತೆ ಕಾರ್ಮಿಕರ ಪರವಾದ ಚಿಂತನೆಗಳು ಮುಂದೆ  ದೊಡ್ಡ ದನಿಯಾಗಿ ಬೆಳೆಯಿತು ಎಂಬುದಕ್ಕೆ ಮೇ ೧ ಸಾಕ್ಷಿಯಾಗಿದೆ. ಆದರೆ ಕಾರ್ಮಿಕರೂ ಸೇರಿದಂತೆ  ನೊಂದ, ಶೋಷಿತರ ದನಿಗಳಿಗೆ ಪೂರ್ಣ ಶಕ್ತಿ, ಸ್ವಾತಂತ್ರ್ಯ ದೊರಕಿದೆಯೇ ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.