Friday 30 December 2011

ಕ್ರಿಸ್ಮಸ್ ತಾತ

ಡಿಸೆಂಬರ್ ಬಂದೊಡನೆ ಅಂಗಡಿಗಳಲ್ಲಿ, ಮಾಲ್ ಗಳಲ್ಲಿ, ಪಾರ್ಕುಗಳಲ್ಲಿ ಕ್ರಿಸ್ ಮಸ್ ಸಂಭ್ರಮ. ಎಲ್ಲೆಲ್ಲಿಯೂ ಕಾಣ ಸಿಗುವ ಬಣ್ಣ ಬಣ್ಣದ ಅಲಂಕಾರಗಳ ನಡುವೆಯೇ ಒಬ್ಬ ಮನುಷ್ಯನಂತೂ ಎಲ್ಲೆಡೆಯೂ ಕಾಣಸಿಗುತ್ತಾನೆ. ಯಾರದು ಎನ್ನುವ ಮೊದಲೇ ಥಟ್ ಎಂದು ಸಿಗುವ ಉತ್ತರ ’ಸಾಂಟಾ ಕ್ಲಾಸ್’ ಅಥವಾ ಮಕ್ಕಳ ಪ್ರೀತಿಯ ಕ್ರಿಸ್ ಮಸ್ ತಾತ. ಡೊಳ್ಳು ಹೊಟ್ಟೆ, ಕೆಂಪು ಅಂಗಿ, ರೇಶ್ಮೆಯಂಥಾ ತಲೆಗೂದಲು, ನುಣುಪಾದ ಗಡ್ಡ, ನಿಶ್ಕಲ್ಮಶ ನಗು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಉಡುಗೊರೆ ತುಂಬಿದ ಕೈ ಚೀಲದಿಂದಾಗಿ ಎಲ್ಲರ ಸೆಳೆಯುವ ಈ ತಾತ ಕ್ರಿಸ್ಮಸ್ ಹಬ್ಬದ ಅನೇಕ ಅರ್ಥಗರ್ಭಿತ ಸಂಕೇತಗಳಲ್ಲಿ ಒಬ್ಬ.
ಇಡೀ ವರ್ಷ ಒಳ್ಳೆಯ ನಡತೆಯನ್ನು ಪ್ರದರ್ಶಿಸಿದರೇ, ಕಾಯ್ದು ಕೊಂಡರೆ ಕ್ರಿಸ್ಮಸ್ ಹಬ್ಬದ ಹಿಂದಿನ ದಿನ ಬಂದು ಒಳ್ಳೆಯ ಉಡುಗೊರೆಯನ್ನು ಕೊಡುತ್ತಾನೆ ಎಂಬ ನಂಬಿಕೆಯಲ್ಲಿ ಮಕ್ಕಳಿಗೆ ವರ್ಷ ಪೂರ್ತಿ ಅವನದೇ ಧ್ಯಾನ , ನಿರೀಕ್ಷೆ, ಕಾತುರ. ಅಂತೆಯೇ ಕ್ರಿಸ್ ಮಸ್ ಅಂದಾಕ್ಷಣ ಮಕ್ಕಳಿಗೆ ಮಾತ್ರವಲ್ಲದೆ ಎಲ್ಲರಿಗೂ ನೆನಪಿಗೆ ಬರುವುದು ಈ ಸಾಂಟಾ ಕ್ಲಾಸ್. ಈ ಸಾಂಟಾ ಕ್ಲಾಸ್ ಯಾರು? ಇವರಿಗೂ ಕ್ರಿಸ್ ಮಸ್ ಗೂ ಏನು ಸಂಬಂಧ ? ನಿಜಕ್ಕೂ ಸಾಂಟಾ ಈ ರೀತಿಯೇ ಇದ್ದರೇ ಎನ್ನುವದನ್ನು ತಿಳಿಯ ಹೊರಟರೆ ಆಸಕ್ತಿಕರ ವಿಷಯಗಳು ಹೊರಹೊಮ್ಮುತ್ತದೆ ಸಾಂಟಾ ಬಗೆಗಿನ ವಿವಿಧ ದೇಶಗಳಲ್ಲಿ ಅನೇಕ ದಂತಕಥೆಗಳಿದ್ದರೂ ನಾಲ್ಕನೆಯ ಶತಮಾನದಲ್ಲಿ ಟರ್ಕಿ ದೇಶದ ಮೈರಾ ಪ್ರದೇಶದ ಬಿಷಪ್ ಆಗಿದ್ದ ನಿಕೋಲಸ್ ಎಂಬ ವ್ಯಕ್ತಿಯೇ ಸಾಂಟಾ ಕ್ಲಾಸ್ ಕಲ್ಪನೆಯ ಮೂಲ.
ಬಡವರು, ನಿರ್ಗತಿಕರ ಮೇಲೆ ಅಪಾರವಾದ ಪ್ರೀತಿ ಕನಿಕರವನ್ನು ತೋರುತ್ತಿದ್ದ ನಿಕೋಲಸ್, ಅಂಥವರಿಗಾಗಿಯೇ ತಮ್ಮೆಲ್ಲಾ ಹಣ ಆಸ್ತಿಯನ್ನು ವ್ಯಯ ಮಾಡುತ್ತಿದ್ದರು. ಅದರಲ್ಲೂ ದಾನದ ಸಮಯದಲ್ಲಿ ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎಂಬ ಯೇಸುವಿನ ವಾಕ್ಯದಂತೆಯೇ ತಾವು ಮಾಡುತ್ತಿದ್ದ ದಾನವನ್ನು ಗೌಪ್ಯವಾಗಿ ಇಡುತ್ತಿದ್ದರು. ಅಂತೆಯೇ ಬಡವರ ಮನೆಯ ಹೊಗೆಯ ಗೂಡು, ಕಿಟಕಿ ಗಳ ಮೂಲಕ ನಾಣ್ಯಗಳನ್ನು ಎಸೆಯುವುದು, ಮನೆಯ ಹೊರಗೆ ಬಿಟ್ಟ ಶೂ ಗಳಲ್ಲಿ ನಾಣ್ಯಗಳನ್ನು ಇಡುವುದ ಮುಲಕ ಸಹಾಯ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಅನ್ಯಾಯಕ್ಕೊಳಗಾದ , ಅಸಹಾಯಕರ ರಕ್ಷಣೆಗೂ ಧಾವಿಸುತ್ತಿದ್ದ ಇವರು ನಿಧನರಾದ ನಂತರ ಇವರ ಅಭಿಮಾನಿಗಳು ಅವರ ನೆನಪಿನಲ್ಲಿ ಅವರ ಸೇವಾ ಕಾರ್ಯಗಳನ್ನು ಮುಂದುವರಿಸಿಕೊಂಡು ಬಂದದ್ದು ವಿಶ್ವದಾದ್ಯಂತ ಅವರನ್ನು ಜನಪ್ರಿಯವಾಗಿಸಿತು.೨೦ನೇ ಶತಮಾನದಲ್ಲಿ ಅಮೆರಿಕಾದ ವ್ಯಂಗ್ಯ ಚಿತ್ರಕಾರನಾದ ಥಾಮಸ್ ನಾಸ್ಟ್ ನ ಕಲ್ಪನೆಯಲ್ಲಿ ಮೂಡಿ ಬಂದ ಒಂದು ಚಿತ್ರದಿಂದಾಗಿ ಸಾಂಟಾಕ್ಲಾಸ್ ನ ಸ್ವರೂಪವೇ ಬದಲಾಗಿ ಅದೇ ಚಿತ್ರದ ಸಾಂಟಾ ಕ್ಲಾಸ್ ನ ರೂಪ ಇಲ್ಲಿಯ ತನಕವೂ ಚಾಲ್ತಿಯಲ್ಲಿದೆ.
ಾಂಟಾನಾಗಿ ಅಮರರಾದರೂ, ಈಚೀನ ವರ್ಷಗಳಲ್ಲಿ ಕೇವಲ ಆಕರ್ಷಣೆಯ ಗೊಂಬೆಯಾಗಿ, ವ್ಯಾಪಾರದ ವಸ್ತುವಾಗಿ,ಮಾರಾಟದ ಪ್ರತಿನಿಧಿಯಾಗಿ, ಶ್ರೀಮಂತಿಕೆಯ ಗುರುತಾಗಿ ಬಿಂಬಿತವಾಗುತ್ತಿರುವುದು ದು:ಖದ ವಿಷಯ.ಪರ ಪ್ರೀತಿ , ಸೇವೆ, ದೀನತೆಯ ಸಂಕೇತವಾಗಿರುವ ಯೇಸುವಿನ ಹಾಗೂ ಕ್ರಿಸ್ಮಸ್ ಹಬ್ಬದ ನಿಜ ಪ್ರತಿನಿಧಿಯಾಗಿ ಬಾಳಿದ ನಿಕೋಲಸ್ ರ ಮಾನವೀಯ ಗುಣಗಳು ಮಕ್ಕಳಿಗೂ, ನಮ್ಮಗೆಲ್ಲರಿಗೂ ಉಡುಗೊರೆಯಾಗಿಲಿ ಹಾಗೂ ಸ್ಪೂರ್ತಿಯಾಗಲಿ
- ಪ್ರಶಾಂತ್ ಇಗ್ನೇಷಿಯಸ್
Read more!

Saturday 24 December 2011

ಕ್ರಿಸ್ಮಸ್ ನಲ್ಲಿ ಕಾಡಿದ ಕೆಲವು ಪ್ರಶ್ನೆಗಳು !!!


ಪ್ರೀತಿಯ ಅನುಗೆ ..

ದೇವರು ಮನುಷ್ಯನನ್ನು ಸಂಧಿಸಿದ ಅಪೂರ್ವ ಘಟನೆಯ ಸ್ಮರಣೆಯೇ ಕ್ರಿಸ್ಮಸ್. ದೈವ ಪದವಿಯನ್ನು ತ್ಯಜಿಸಿ ಮನುಷ್ಯನಲ್ಲಿ ಒಂದಾಗಿ, ಮನುಷ್ಯನನ್ನು ದೇವರಲಿ ಕೂಡಿಸಿದ ಕ್ರಿಸ್ತನ ಸವಿನೆನಪೇ ಕ್ರಿಸ್ಮಸ್.

ಕ್ರಿಸ್ತ ಜಯಂತಿ  ಹಬ್ಬದ ಮುನ್ನಾದಿನ ವ್ಯಕ್ತಿಯೊಬ್ಬ ಈ ಹಬ್ಬದ ವಿಶೇಷತೆಯ ಬಗ್ಗೆ ಗಾಢ ಯೋಚನೆಯಲ್ಲಿ ಮುಳುಗಿದ್ದ. ದೇವರು ಮನುಷ್ಯ ರೂಪವನ್ನು ತಾಳುವುದರಲ್ಲಿ ಅರ್ಥವೇ ಇಲ್ಲ ಎಂಬುವುದು ಅವನ ವಾದವಾಗಿತ್ತು. ಸರ್ವಶಕ್ತರಾದ ದೇವರು ನಮ್ಮಂತಹ ದುರ್ಬಲ ಮನುಜರಾಗುವ ಅಗತ್ಯವಾದರು ಏನು? ಒಂದು ವೇಳೆ ಅಂತಹ ಅಗತ್ಯ ಬಂದರೂ ಅವರು ಬಡವರಾಗಿ ಗೋದಲಿಯಲ್ಲಿ ಏಕೆ ಜನಿಸಬೇಕು? ಇಲ್ಲ, ಇದರಲ್ಲಿ ಅರ್ಥವೇ ಇಲ್ಲ. ಖಂಡಿತವಾಗಿಯೂ ದೇವರಿಗೆ ಮಾನವನ ಮಧ್ಯೆ ಬರಲು ಮನಸ್ಸಿದ್ದಿದ್ದರೆ ಬೇರೆ ಯಾವ ಅವತಾರದಲ್ಲಾದರೂ ಬರಬಹುದಾಗಿತ್ತು ಎಂಬುವುದು ಅವನ ತರ್ಕವಾಗಿತ್ತು. 
ತಕ್ಷಣ ಪಕ್ಕದಲ್ಲಿ ಆದ ಯಾವುದೋ ಸದ್ದು ಆತನ ಯೋಚನೆಗೆ ಕಡಿವಾಣ ಹಾಕಿತು. ಆತ ಕಿಟಕಿಯ ಹೊರಗೆ ಕಣ್ಣಾಯಿಸಿದಾಗ ಚಳಿ ಹಾಗು ಭಯದಿಂದ ನಡುಗುತ್ತಿದ್ದ ಕೋಳಿಮರಿಗಳ ಗುಂಪೊಂದು ಅವನ ಕಣ್ಣಿಗೆ ಬಿತ್ತು. ಅವುಗಳ ಮೇಲೆ  ಕನಿಕರ ಪಟ್ಟು ಅವುಗಳನ್ನು ತನ್ನ ಮನೆಯೊಳಗಿನ ಬೆಚ್ಚಗಿನ ಜಾಗಕ್ಕೆ ಒಯ್ಯಲು ಆತನು ಪ್ರಯತ್ನಿಸಿದನು. ಆದರೆ ಅವನು ಎಷ್ಟೇ ಪ್ರಯತ್ನಪಟ್ಟರೂ ಕೋಳಿಮರಿಗಳು ಅವನ ಹತ್ತಿರ ಬರದೆ ಹೆದರತೊಡಗಿದವು. “ನಾನೊಂದು ಕ್ಷಣ ಕೋಳಿಯಾಗಿ ಅದರ ಭಾಷೆಯನ್ನು ಅರಿತು, ಅದರ ಭಾಷೆಯಲ್ಲಿಯೇ ಆ ಮರಿಗಳೊಡನೆ ಮಾತನಾಡಿದರೆ….” ಎಂಬ ಯೋಚನೆಗಳು ಅವನಲ್ಲಿ ಹರಿಯುತ್ತಿದ್ದಂತೆ… ಕ್ರಿಸ್ತ ಜಯಂತಿಯು ರಹಸ್ಯದ ಬೇಲಿಯನ್ನು ದಾಟಲಾರಂಭಿಸಿತ್ತು.
ಕೊನೆಗೆ, ಈ ಆಚರಣೆಯ ಸಂದರ್ಭದಲ್ಲಿ ಕಾಡಿದ ಕೆಲವು ಪ್ರಶ್ನೆಗಳ ಸಾಲುಗಳನ್ನು ನಿನಗೆ ಬರೆಯುತ್ತಿದ್ದೇನೆ….

ಅಲ್ಲಿ ಇಲ್ಲಿ ಎಲ್ಲೆಲ್ಲೂ ಹೋಗಿ
ಬೇಕಾಗಿದು, ಬೇಡವಾಗಿದು,
ಬೇಡಿ ಕಾಡಿ ತಡಕಾಡಿ ತಂದು
ಕಟ್ಟಿದೆ ಗೋದಲಿ
ವಾಕ್ಪಟವಾಗಿಸಲೆಂದು ಕ್ರಿಸ್ತನ ಜನನವ.
ಕೊನೆಗೆ,
ನಿರತ ನನ್ನ ಕಾಡಿದ್ದು ಒಂದು ಪ್ರಶ್ನೆ ಮಾತ್ರ;
ಕ್ರಿಸ್ತ ನಿಜವಾಗಿ ಹುಟ್ಟಿದ್ನಾ, ಹುಟ್ಟ ಬೇಕಾದ ನನ್ನ ಶ್ರೀಮಂತ ಗೋದಲಿಯಲ್ಲಿ ?

ಬೀದಿ ಬೀದಿ ಮನೆ ಮನೆಗೆ ಹೋದೆ
ಮನೆಮಂದಿಯ ಬೇಡಿಕೆಯ ಲೆಕ್ಕಿಸಿ.
ಹಾಡುತ ಸಾರುತ
ಕ್ರಿಸ್ತನ ಜನನವ
ಕೈಕುಲುಕುತ್ತಾ ಶುಭಾಶಯ ಹೇಳುತ್ತಾ..
ಸಾಂತನ ಜತೆ ಕುಣಿಯುತ್ತಾ
ಕೊನೆಗೆ,
ನಿರತ ನನ್ನ ಕಾಡಿದ್ದು ಒಂದು ಪ್ರಶ್ನೆ ಮಾತ್ರ:
ಮನಸ್ಸನು ಬೆಸಯುವ ಕ್ರಿಸ್ತನ ಮನಸ್ಸಿತ್ತಾ ಹಾಡಿದ ನನ್ನ ಮನಸ್ಸಿನಲ್ಲಿ..?

ಆ ಪುಸ್ತಕ ಈ ಪುಸ್ತಕ
ಹತ್ತಾರು ಪುಸ್ತಕಗಳ ಓದಿ
ನೂರಾರು ಪದಗಳ ಜೋಡಿಸಿ
ಬರೆದೆ ಸಾಲು ಸಾಲು ವಚನವ ನೋಡಿ
ಕ್ರಿಸ್ಮಸ್ ದಿನದಂದು ಮೋಡಿ ಮಾಡಬೇಕಾದ ಪ್ರವಚನವ ಕೋರಿ
ಕೊನೆಗೆ,
ಮಾತು ನಿರತ ನನ್ನ ಕಾಡಿದು ಒಂದು ಪ್ರಶ್ನೆ ಮಾತ್ರ:
ಕ್ರಿಸ್ತನ ಮಾತಿತ್ತೇ ನಾನು ಬರೆದ ಪ್ರವಚನದಲ್ಲಿ..?

ಪ್ರೀತಿಯ ಕ್ರಿಸ್ತ ಜಯಂತಿ ಹಾಗೂ ಹೊಸವರ್ಷದ ಶುಭಾಶಯಗಳು


-ಜೋವಿ
Read more!

Sunday 18 December 2011

ಕ್ರಿಸ್ಮಸ್ ಜಾತ್ರೆಯಲ್ಲಿ ಅನಾಥನಾದ ಕ್ರಿಸ್ತ..

ಮಳಿಗೆಗಳಿಗೆಂದೆ ಮೀಸಲಾಗಿದ್ದ ರಸ್ತೆ..ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಈ ಕಡೆ, ಕ್ರಿಸ್ಮಸ್ ಆಚರಣೆಗೆ ಬೇಕಾದ ವಸ್ತುಗಳ ಮಾರಾಟಕ್ಕೆಂದೇ ಹುಟ್ಟಿಕೊಂಡಿದ್ದ ಮಳಿಗೆ ಗಿರಾಕಿಗಳಿಂದ ಕಿಕ್ಕಿರಿದಿತ್ತು. ಸ್ಟಾರ್, ಕ್ರಿಬ್ ಸೆಟ್, ಕ್ರಿಸ್ಮಸ್ ಟ್ರೀ.,,ತಿಂಡಿತಿನಿಸುಗಳು ಕೇಕ್ಗಳ ಬೇಡಿಕೆ ಆಕಾಶಕ್ಕೇರಿತ್ತು.  ಸ್ಟಾರ್ ಕೊಡಿ.. ಕ್ರಿಸ್ಮಸ್ ಟ್ರೀ ಕೊಡಿ ಎಂದು ಕೇಳುತ್ತಿದ್ದ  ಗಿರಾಕಿಗಳಿಗೆ ಬೇಡಿಕೆಯ ಪ್ರಕಾರ ಒದಗಿಸಲು ಮಳಿಗೆಯ ವ್ಯಾಪಾರಿಗಳಿಗೆ ಅವರ ಎರಡು ಕೈಗಳೇ ಸಾಕಗಲಿಲ್ಲ. ಕ್ರಿಸ್ಮಸ್ ಪ್ರಯುಕ್ತ ಸಾಮಗ್ರಿಯನ್ನು ಕೊಂಡುಕೊಳ್ಳಲು ಅತೀ ಉತ್ಸುಕತೆಯಿಂದ ಬಂದಿದ್ದ ಗಿರಾಕಿಗಳಿಗೆ ಮಳಿಗೆಯ ಬದಿಯ ಒಂದು ಮೂಲೆಯೊಂದರಲ್ಲಿ.. ಚಳ್ಳಿಯಿಂದ ನಡುಗುತ್ತಾ ಬರೀ ಮೈಯಲ್ಲಿದ್ದ...  ಕ್ರಿಸ್ತನು ಅವರಿಗೆ ಕಾಣಿಸಲೇ ಇಲ್ಲ…!!!!

ಜೋವಿ
Read more!

ಬದುಕಿನ ಮಾಪನಗಳಾಗಿಬಿಡುವ ಕ್ರಿಸ್ತನ ಸಾಮತಿಗಳು !

ಕತೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ನೈತಿಕತೆಯ ಬಗ್ಗೆ ತಿಳಿಸಲು ಬದುಕಿನ ಅಮೂಲ್ಯ ಪಾಠಗಳ ಬಗ್ಗೆ ತಿಳಿ ಹೇಳಲು, ತಪ್ಪುದಾರಿ ಹಿಡಿದ ನಮ್ಮನ್ನು ತಿದ್ದಲು ಘನವಾದ ಸತ್ಯವನ್ನು, ತಲೆಬುಡ ಅರ್ಥವಾಗದೆ ತಲೆ ತಿನ್ನುವ ಪಾಠಗಳನ್ನು ಸಲೀಸಾಗಿಸಲು, ನಮ್ಮ ಹಿರಿಯರು, ಕಿರಿಯರು, ಉಪನ್ಯಾಸಕರು, ಪ್ರವಚಕರು ಧಾರಳವಾಗಿ ಉಪಯೋಗಿಸುತ್ತಿದ್ದ ಮಾಧ್ಯಮವೆಂದರೆ ಕತೆಗಳು. ತಮಗೆ ಲಭಿಸಿದ ಲೋಕಜ್ಞಾನ.. ವ್ಯಾವಹಾರಿಕ ಜಾಣ್ಮೆ ಬದುಕಿನ ಅನುಭವಗಳು..ಗ್ರಹಿಕೆಗೆ ನಿಲುಕದ ಸತ್ಯಗಳು ಹೀಗೆ ಅನೇಕವುಗಳನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ರವಾನಿಸಲು ಕಥೆಗಳು ಒಂದು ಉತ್ತಮ ಮಾಧ್ಯಮವಾಯಿತೆಂಬುವುದು ಎಲ್ಲರ ಸರ್ವಾನುಮತದ ಅಭಿಪ್ರಾಯ.  ಶತಮಾನಗಳ ಇತಿಹಾಸ ಹೊಂದಿರುವ ಹರಿಕಥೆ ಎಂಬ ಪ್ರಕಾರವು ಇಂದಿಗೂ ಜನಪ್ರಿಯತೆಯ ಮಾಧ್ಯಮವಾಗಿ ಉಳಿದುಕೊಂಡಿರುವುದು ಕಾರಣದಿಂದಲೇ. ನಾವು  ನಮ್ಮ ತಂದೆ ತಾಯಿ, ಅಜ್ಜ ಅಜ್ಜಿಯವರ ಬಳಿ ಕಾಡಿ ಬೇಡುತ್ತಿದ್ದು ಕತೆಗಳಿಗಾಗಿಯೇ. ಊಟವನ್ನು ಮಾಡಲು ಚಂಡಿ ಹಿಡಿಯುತ್ತಿದ್ದ ನಮಗೆ ಊಟ ಉಣಿಸಲು, ಅಥವಾ ಮಲಗದೆ ಹಟ ಮಾಡುತ್ತಿದ್ದ ನಮ್ಮನ್ನು ನಿದ್ರಾದೇವಿಗೆ ಶರಣಾಗಿಸಲು..ತಾಯಂದಿರು ಕಂಡು ಕೊಂಡಿದ್ದ ಅನೇಕ ಉಪಾಯಗಳಲ್ಲಿ ಕತೆ ಹೇಳುವುದು ಒಂದು. ಇಂದು ನಮ್ಗೋತ್ತು ನಮ್ಮ ಕಲ್ಪನಾಶಕ್ತಿ, ಸೃಜನಶೀಲತೆಯನ್ನು ಜಾಗೃತಗೊಳಿಸಿ ಭಾವ ಪ್ರಪಂಚವನ್ನು ಅರಳಿಸಿ, ನಮ್ಮ ಗ್ರಹಣಶಕ್ತಿಯನ್ನು ಹೆಚ್ಚಿಸಿದ್ದು ಈ ಕತೆಗಳೇನನ್ನ ಬಾಲ್ಯದಲ್ಲಿ ಕೇಳಿದ ಹತ್ತಾರು ಕತೆಗಳಲ್ಲಿ ಕ್ರಿಸ್ತನ ಸಾಮತಿಗಳದೇ ಸಿಂಹಪಾಲು. ದುಂದುಗಾರಮಗ, ಸದಯಸಮಾರಿತ..ಹೀಗೆ ಅನೇಕ ಸಾಮತಿಗಳನ್ನು ನನ್ನ ಉಪಾಧ್ಯಾಯರು, ಊರಿನ ಕನ್ಯಾಸ್ತ್ರಿಗಳು ಮತ್ತು ಧರ್ಮಗುರುಗಳಿಂದ ಕೇಳಿದ ನೆನಪು. ಆ ಸಾಮತಿಗಳ ಗುಂಗೇ ಇಂದು ಈ ಲೇಖನ ಬರೆಸಿದ್ದು.
ಬದುಕಿನ ಸತ್ಯವನ್ನು ತಿಳಿಸಲು ಕ್ರಿಸ್ತ ಸಾಮತಿಗಳನ್ನು ಹೇಳಿದ. ಸಾಮಾನ್ಯ ಜನರಿಗೆ ಪರಿಚಯವಿದ್ದ ರೂಪಕಗಳನ್ನು ಬಳಸಿಕೊಂಡು ಹೇಳಿದ ಅವನ ಕತೆಗಳಲ್ಲಿ ಸೃಜನಾತ್ಮಕತೆ ಇತ್ತು, ಸಾಮಾನ್ಯಜನರಿಗೆ ಬಹುಬೇಗ ತಲುಪುವ ಸರಳತೆ ಅವುಗಳಿತ್ತು. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಹೇಳಿದ ಸಾಮತಿಗಳು ಎಲ್ಲ ಕಾಲಕ್ಕೂ ಅನ್ವಯವಾಗುವಂತಹ, ಹಳಸದ ಕಾಲಾತೀತ  ಸತ್ಯವನ್ನು ಹೇಳುವುದರಿಂದ ಅವುಗಳ ಪ್ರಸ್ತುತತೆ ಪ್ರಶ್ನಾತೀತ. ಇತ್ತೀಚಿನ ದಿನಗಳಲಂತೂ, ಕ್ರಿಸ್ತನ ಸಾಮತಿಗಳು ನಾಟಕ, ಗೀತ ರೂಪಗಳನ್ನು ಪಡೆದುಕೊಂಡು ಜನಜನಿತವಾಗಿದೆ. ಇಂತಹ ಸಾಮತಿಗಳ ಒಳ ಹೊಕ್ಕಿ ಅದರ ಒಳಾರ್ಥವನ್ನು (ಅಂತ:ಸತ್ವ) ಕಂಡುಕೊಂಡಾಗ ಮಾತ್ರ ಕ್ರಿಸ್ತನು ಸಾಮತಿಗಳನ್ನು ಯಾತಕ್ಕಾಗಿ, ಯಾವ ಸಂದರ್ಭದಲ್ಲಿ ಹೇಳಿದ ಎಂಬ ಅರಿವು ನಮ್ಮದಾಗುವುದರ ಜತೆಗೆ ನಮ್ಮ ಪ್ರಸ್ತುತ ಬದುಕಿಗೆ ಪಾಠಗಳಾಗುತ್ತವೆ.
ಸಾಮತಿ, ಇದೊಂದು ವಿಶಿಷ್ಠ ಸಾಹಿತ್ಯ ಪ್ರಕಾರ. ಇದು ಆಧ್ಯಾತ್ಮಿಕ ಸಂಕೇತಗಳನ್ನೊಳಗೊಂಡ ಒಂದು ಲೌಕಿಕ ಕತೆ. ಧಾರ್ಮಿಕ ಸತ್ಯಗಳನ್ನು ವರ್ಣಿಸುವ ನೀತಿಕತೆಗಳು. ಇದರಲ್ಲಿಬರುವ ಒಂದೊಂದು ಅಂಶಕ್ಕೂ ಒಂದೊಂದು ಅರ್ಥವಿರದೆ, ಇಡೀ ಕತೆಗೆ ಒಂದೇ ಅರ್ಥವಿರುತ್ತದೆ. ಅಂದರೆ ಸಾಮತಿಗಳು ಒಂದೇ ಒಂದು ವಿಷಯವನ್ನು ಅಥವಾ ಪಾಠವನ್ನು ಬಲವಾಗಿ ಸ್ಪಷ್ಟಪಡಿಸುತ್ತವೆ. ಉದಾ: ಸದಯ ಸಮಾರಿತ ಎಂಬ ಸಾಮತಿ. ವಾಸ್ತವಿಕವಾಗಿ ಸದಯ ಸಮಾರಿತ ಎಂಬುದು ಅನುಕರಣೀಯ ಸಾಮತಿ. ನಿಜವಾದನೆರೆಯವನನ್ನು ಸ್ಪಷ್ಟಪಡಿಸಿ, ಹೋಗು, ನೀನೂ ಹಾಗೆಯೇ ಮಾಡು ಎಂದು ಅಮರ ಜೀವವನ್ನು ಪಡೆಯಲು ದಾರಿತೋರಿಸುವ ಸಾಮತಿ. ಕಷ್ಟದಲ್ಲಿರುವವರೆಲ್ಲಾ ನಮ್ಮ ನೆರೆಯವರು, ಅಂತವರಿಗೆ ನಾವು ಸಹಾಯ ಹಸ್ತವನ್ನು ಚಾಚುವುದರ ಮೂಲಕ ನಾವು ಕೂಡ ಒಳ್ಳೆಯ ನೆರೆಯವರಾಗುತ್ತೇವೆ ಎಂಬುವುದು ಸಾಮತಿ ಸ್ಪಷ್ಟಪಡಿಸುವ ಸತ್ಯ.
ಸಾರ್ವತ್ರಿಕ ಮೌಲ್ಯ: ಸಾಮತಿಗಳು ಸಾಂಸ್ಕೃತಿಕ ಎಲ್ಲೆಗಳನ್ನು ಮೀರುವ ಒಂದು ಪ್ರಕಾರ. ಸಾಮತಿಯ ಮೂಲ ಭಾಷೆ, ಕೇಳುಗರು, ಹೇಳಿದ ಸಮಯ ಸಂದರ್ಭ ಬದಲಾದರೂ ಅವುಗಳ ಸಂದೇಶ ಸಾರ್ವತ್ರಿಕ ಏಕೆಂದರೆ ಶಾಶ್ವತವಾದ ಸಾರ್ವತ್ರಿಕ ಮೌಲ್ಯ ಅವುಗಳಲ್ಲಿವೆ. ಆ ಮೌಲ್ಯಗಳು ಕಾಲ, ಭಾಷೆ, ಜಾತಿ, ವರ್ಗ, ಕುಲಗೋತ್ರಗಳೆನ್ನದೆ ಎಲ್ಲರಿಗೂ ಅನ್ವಯಿಸುವಂತವು. ಈ ಸಾಮತಿಯಲ್ಲಿ ಬರುವ ವ್ಯಕ್ತಿಗಳು ಸಾಂಸ್ಕೃತಿಕ ಅಥವಾ ಇತಿಹಾಸ ಪುರುಷರಲ್ಲ, ಅವರು ಮಾನವನ ಇತಿಹಾಸದ ಪ್ರತಿರೂಪಗಳು. ಆದ್ದರಿಂದ ದುಂದುಗಾರ ಮಗ, ಸಮಾರಿತ ಎಂಬ ವ್ಯಕ್ತಿಗಳು ಇಂದಿಗೂ ನಮ್ಮಲ್ಲಿ ಕಾಣಸಿಗುವ ಪಾತ್ರಗಳೇ. ಕ್ಷಮೆ, ದಯೆ, ಇಂದಿಗೂ ವಿಚ್ಛಿದ್ರ ಮನುಷ್ಯನಿಗೆ ಬೇಕಾಗಿರುವಂತಹ ಮೌಲ್ಯಗಳೇ.
ಕಾಲಾತೀತ: ಸಾಮತಿಗಳ ಪ್ರಸ್ತುತದ ಬಗ್ಗೆ ಎರಡು ಮಾತಿಲ್ಲ. ಅವುಗಳ ವಸ್ತುವಿಷಯಗಳು ಮಾನವನ ಮೂಲಭೂತ ಮತ್ತು ಅಧ್ಯಾತ್ಮಿಕ ಪ್ರಶ್ನೆಗಳಿಗೆ ಸಂಬಂಧಿಸಿರುವುದ್ದರಿಂದ, ಅವು ಕಾಲಾತೀತ. ನಾವು ಯಾರು? ಸಾವೆಂದರೇನು?  ಸಾವು ಏಕೆ..? ಶತಮಾನಗಳಿಂದ ಕಾಡಿಕೊಂಡು ಬಂದ ಪ್ರಶ್ನೆಗಳು ಇಂದು ನಮ್ಮನ್ನು ಕಾಡುತ್ತಿವೆ ಮತ್ತು ನಮ್ಮ ಮುಂದಿನವರನ್ನು ಕಾಡುತ್ತವೆ. ಸಾಮತಿಗಳು ಇಂತಹ ಮೂಲಭೂತ ಪ್ರಶ್ನೆಗಳ ಬಗ್ಗೆ ಬೆಳಕು ಚೆಲ್ಲುವುದ್ದರಿಂದ ಅವು ಕಾಲಾತೀತ.
ಸಾಂಕೇತಿಕ: ಸಾಮತಿಗಳು ಸಾಂಕೇತಿಕ. ಅವು ಮೌಖಿಕ ಸಂಭಾಷಣೆಗಳಿಂದ ಬಂಧಿತವಾಗಿಲ್ಲ. ಇವು ಒಂದು ರೀತಿಯ ಪದರಹಿತ ಸಂವಹನ. ಶಬ್ಧಗಳಿಲ್ಲದೆ ಸಾಮತಿಗಳನ್ನು ಜನರಿಗೆ ತಿಳಿಸಬಹುದು. ಅದ್ದರಿಂದಲೇ ಸಾಮತಿಗಳು ಮೂಕಾಭಿನಯ, ನಟನೆ, ಚಿತ್ರಕಲೆ, ಹಾಡು ಮತ್ತು ನೃತ್ಯಗಳಿಗೆ ಒಗ್ಗಿ ಹೋಗಿವೆ. ಇನ್ನೊಂದು ಕಡೆ, ಅವು ಸಾಂಕೇತಿಕವಾದ್ದರಿಂದ ಅವುಗಳನ್ನು ನಾನಾ ರೀತಿಯಲ್ಲಿ ವ್ಯಾಖ್ಯಾನಿಸಿಕೊಳ್ಳಬಹುದು. ಆದರೆ ಈ ವ್ಯಾಖ್ಯಾಗಳು ಸಾಮತಿಯ ಮೂಲ ಉದ್ದೇಶದ ಗೆರೆ ದಾಟಬಾರದಷ್ಟೆ.
ಬದಲಾವಣೆಯ ಕಿಡಿ: ಸಾಮತಿಗಳು ಅಸ್ತಿತ್ವದಲ್ಲಿರುವ ವರ್ಗ, ಸಾಮಾಜಿಕ ವ್ಯವಸ್ಥೆ, ಮೌಲ್ಯ ವ್ಯವಸ್ಥೆಗಳನ್ನು ಬುಡಮೇಲು ಮಾಡುತ್ತವೆ. ಅನ್ಯಾಯದ ವ್ಯವಸ್ಥೆಯ ಪಾಲುದಾರರಾದ ನಮ್ಮನ್ನು ಗಲಿಬಿಲಿಗೊಳ್ಳಿಸುತ್ತವೆ. ಸಮಾಜದಲ್ಲಿ ಆಗುವ ಅನ್ಯಾಯ, ದಬ್ಬಾಳಿಕೆ, ಶೋಷಣೆಗಳನ್ನು ಎತ್ತಿತೋರಿಸುತ್ತಾ ಅವುಗಳ ವಿನಾಶಕ್ಕೆ ಕರೆ ನೀಡುತ್ತಾ, ಮನುಷ್ಯನಲ್ಲಿ ಸಾಮಾಜಿಕ ಕಳಕಳಿ ಚಿಗುರಿಸುವ ಬೀಜಗಳಾಗುತ್ತವೆ. ಮೊದಲಿಗರನ್ನು ಕೊನೆಯವರಾಗಿಸುತ್ತದೆ, ಕೊನೆಯವರನ್ನು ಮೊದಲಿಗರಾಗಿಸುತ್ತದೆ. ತನ್ನನ್ನು ತಾನೇ ಏರಿಸಿಕೊಳ್ಳುವನನ್ನು ಕೆಳಗಿಳಿಸುತ್ತದೆ, ತನ್ನನ್ನು ತಾನೇ ತಗ್ಗಿಸಿಕೊಳ್ಳುವವನ್ನು ಮೇಲಕ್ಕೇರಿಸುತ್ತದೆ.
ಪ್ರಚೋದಕ: ಸಾಮತಿಗಳಿಗೆ ಪ್ರೇರೇಪಿಸಿ ಪ್ರಚೋದಿಸುವ ಶಕ್ತಿಯಿದೆ. ನಮಗೆ ಸವಾಲು ಹಾಕಿ ನಮ್ಮನ್ನು ತಿದ್ದುತ್ತವುದಲ್ಲದೆ ಜಾಗೃತಗೊಳಿಸಿ ಕ್ರೀಯಾಶೀಲರನ್ನಾಗಿಸುತ್ತವೆ. ಅವು ನಮ್ಮ ನಡತೆ ವಿಚಾರಗಳ ಮಾಪನಗಳಾಗುತ್ತಾ ಅವುಗಳ ಬದಲಾವಣೆಗೆ ಮುಹೂರ್ತ ಹಾಕಿಕೊಡುತ್ತವೆ. ವಿಕಾರ ಸಮಾಜದ ಸುಧಾರಣೆಗೆ ಮತ್ತು ನವೀಕಕರಣಕ್ಕೆ ಕರೆ ನೀಡುತ್ತವೆ.
ಅದ್ದರಿಂದ ಸಾಮತಿಗಳಿಗೆ ನಮ್ಮ ದೃಷ್ಟಿಕೋನವನ್ನು ಬದಲಾಯಿಸುವ ಶಕ್ತಿಯಿದೆ. ನಾವು ಕಟ್ಟಿಕೊಂಡಿರುವ ಚಿಂತನಾಕ್ರಮವನ್ನು ಅದರ ಸಂಕುಚಿತೆಯನ್ನು ಪ್ರಶ್ನಿಸುವ ತಾಕತ್ತಿದೆ. ನಮ್ಮ ಮೂಲ ನಂಬಿಕೆಗಳನ್ನೇ ಬುಡಮೇಲು ಮಾಡುವ ಧೈರ್ಯವಿದೆ. ಜೊತೆಗೆ ಪರಿವರ್ತನೆಯನ್ನು ಚಿಗುರಿಸುವ ಸತ್ವವಿದೆ. ಹೊಸಜಗತ್ತು, ಹೊಸ ಬದುಕಿಗೆ ಕರೆದೊಯ್ಯುವ ಬೆಳಕಿದೆ. ಕೆಲವು ಸಾಮತಿಗಳು ಕತೆಯಲ್ಲಿ ಬರುವ ವ್ಯಕ್ತಿಗಳನ್ನು ಮೌಲ್ಯಮಾಪನ ಮಾಡಲು ಕರೆ ನೀಡುತ್ತಲೇ, ನಮ್ಮ ಬದುಕಿನ ಮಾಪನವಾಗಿಬಿಡುತ್ತವೆ. ನಮ್ಮ ವಾಸ್ತವಿಕ ಬದುಕಿಗೆ ಕನ್ನಡಿ ಹಿಡಿಯುತ್ತಾ, ಹೃದಯದ ಬದಲಾವಣೆಗೆ ನಾಂದಿಹಾಡುತ್ತವೆ. ಅವು ಕೇವಲ ಕತೆಗಳಾಗದೆ, ಬದುಕಿನ ಜೀವಂತ ದೃಶ್ಯಗಳಾಗುತ್ತಾ ನಮ್ಮ ಅನುಭವಗಳ ನೆರಳಾಗುತ್ತವೆ. ಮಡಿಗಟ್ಟಿದ ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತವೆ. ಸಾಮತಿಗಳ ಇಂತಹ ಶಕ್ತಿ, ಧೈರ್ಯ, ಸತ್ವ ಮತ್ತು ಬೆಳಕನ್ನು ಕಾಣಬೇಕಾದರೆ..ತೆರದ ನಿಷ್ಪಕ್ಷಪಾತ ಮನಸ್ಸಿನಿಂದ ನಾವು ಸಾಮತಿಗಳನ್ನು ಓದಿದರೆ ಆ ಓದು ಪರಿಪಾಠವಾಗದೆ ಸಾತ್ವಿಕ ಅನುಭವಾಗುವುದರ ಬಗ್ಗೆ ಎರಡು ಮಾತಿಲ್ಲ.
ನಮ್ಮ ಮಕ್ಕಳನ್ನು ಕಂಪ್ಯೂಟರು, ಟಿ.ವಿ ಅಂತ ನಿರ್ಜೀವ ವಸ್ತುಗಳೊಡನೆ ಕಟ್ಟಿಹಾಕಿ ಬಿಟ್ರೆ..ಅವರ ಬಾಲ್ಯವೇ ನಿರ್ಜೀವವಾಗುವ ಗಂಡಾತರವಿದೆ. ತಂದೆತಾಯಿಗಳು ಮಕ್ಕಳಿಗೆ ಕಥೆಗಳನ್ನು ಹೇಳುವುದರ ಮೂಲಕ ಅವರಲ್ಲಿ ಸೃಜನಶೀಲತೆ ತುಂಬಲಿ ಎಂಬ ಕಳಕಳಿಯ ಮನವಿಯೊಂದಿಗೆ, ಧಾರ್ಮಿಕ ಪ್ರವಚನಗಳಲ್ಲಿ ಕಂಡು ಬರುವ ಕತೆಗಳನ್ನು ಯಾವ ರೀತಿ ಅರ್ಥೈಸಿಕೊಳಬೇಕೆಂಬ ಆಶಯವನ್ನು ವ್ಯಕ್ತಪಡಿಸುವ ಕತೆಯೊಂದಿಗೆ.. ನಿಮಗೆ ಶುಭಂ ಹೇಳುತ್ತೇನೆ.
ಒಬ್ಬ ರೈತನು ಚಿನ್ನದ ಮೊಟ್ಟೆಯನ್ನಿಡುವ ಒಂದು ಬಾತುಕೋಳಿಯನ್ನು ಸಾಕಿದ್ದನು. ಅದು ಪ್ರತಿದಿನ ಒಂದೊಂದು ಚಿನ್ನದ ಮೊಟ್ಟೆಯನ್ನು ಇಡುತ್ತಿತ್ತು. ರೈತನ ಹೆಂಡತಿ ಪ್ರತಿದಿನ ಒಂದೊಂದು ಮೊಟ್ಟೆಯಿಡುತ್ತಿದ್ದ ಬಾತುಕೋಳಿಯಿಂದ ಎಲ್ಲಾ ಮೊಟ್ಟೆಗಳನ್ನು ಒಮ್ಮೆಲೇ ಪಡೆಯುವ ದುರಾಸೆಯಿಂದ ಬಾತುಕೋಳಿಯನ್ನು ಕೂಯ್ದುಬಿಡುತ್ತಾಳೆ...ದೇವರ ವಾಕ್ಯವಿದು.
ವಾಕ್ಯವನ್ನು ಕೇಳಿದ ಒಬ್ಬ ನಾಸ್ತಿಕ ಲೇವಡಿ ಮಾಡುತ್ತಾ, ಬಾತುಕೋಳಿ ಚಿನ್ನದ ಮೊಟ್ಟೆಯಿಡುವುದೆಂದಾದರೂ ಸಾಧ್ಯವೇ, ಇದು ವೇದಗಳ ಅಸಂಬದ್ಧತೆಯನ್ನು ಮತ್ತು ಅರ್ಥಹೀನತೆಯನ್ನು ಎತ್ತಿ ತೋರಿಸುತ್ತದೆ” ಎಂದು ಮೂದಲಿಸಿದ. ಇನ್ನೊಬ್ಬ ಧಾರ್ಮಿಕ ಪಂಡಿತ ಮೇಲಿನ ಪಠ್ಯವನ್ನು ಓದಿ ರೀತಿ ಪ್ರತಿಕ್ರಿಯಿಸಿದ “ದೇವರು ಚಿನ್ನದ ಮೊಟ್ಟೆಯಿಡುವ ಬಾತುಕೋಳಿಯ ಬಗ್ಗೆ ತಿಳಿಸುತ್ತಾರೆ..ವಾಸ್ತವಿಕವಾಗಿ ನಮಗೆ ಅಸ್ವಭಾವಿಕವಾಗಿ ಕಂಡು ಬರಬಹುದು. ಆದರೆ ಇದು ನಮ್ಮ ಗ್ರಹಿಕೆಗೆ ನಿಲುಕದ ಸತ್ಯ.. ಒಂದು ಮೊಟ್ಟೆ ಚಿನ್ನದ ಲಕ್ಷಣಗಳನ್ನು ಪಡೆದುಕೊಂಡು ಹೇಗೆ ಅದು ಮೊಟ್ಟೆಯಾಗಿರಲು ಸಾಧ್ಯ? ಎಂದು ಕೆಲವರು ವಾದಿಸಬಹುದು..ನಾನಾ ಪಂಥಗಳು ರೀತಿಯ ಘಟನೆಗೆ ನಾನಾ ರೀತಿಯ ಅರ್ಥವಿವರಣೆಗಳನ್ನು ಟೀಕೆಯನ್ನು ನೀಡಬಹುದು. ಆದರೆ ಇಲ್ಲಿ ಮುಖ್ಯವೆನ್ನಿಸುವುದು ನಮ್ಮ ವಿಶ್ವಾಸ. ನಮ್ಮ ಜ್ಞಾನಕ್ಕೆ ನಿಲುಕದ ರೀತಿಯ ರಹಸ್ಯವನ್ನು ಅರ್ಥಮಾಡಿಕೊಳ್ಳಬೇಕಾದರೆ ನಮ್ಮಲ್ಲಿ ವಿಶ್ವಾಸವಿರಬೇಕುಇನ್ನೊಬ್ಬ ಪ್ರಬೋಧಕ ಪಠ್ಯದಿಂದ ಪ್ರೇರಿತನಾಗಿ, ನಗರ ಮತ್ತು ಹಳ್ಳಿಗಳಲ್ಲಿ ಸುತ್ತಾಡಿ ಒಂದಾನೊಂದು ಕಾಲದಲ್ಲಿ ಚಿನ್ನದ ಮೊಟ್ಟೆಯಿಡುವ ಬಾತುಕೋಳಿಗಳನ್ನು ದೇವರು ಸೃಷ್ಟಿಸಿದ್ದಿರಬಹುದು..ಅಂತಹ ಕೋಳಿಗಳು ಚಿನ್ನದ ಮೊಟ್ಟೆಗಳನಿಡುತ್ತಿದ್ದಿರಬಹುದು ಎಂದು ಹೇಳಿ ಜನರನ್ನು ನಂಬಿಸಿದನು. ಚಿನ್ನದ ಮೊಟ್ಟಯನ್ನಿಡುವ ಬಾತುಕೋಳಿಯಲ್ಲಿ ವಿಶ್ವಾಸವನ್ನು ವೃದ್ಧಿಸುವುದೋ ಅಥವಾ ನಮ್ಮ ದುರಾಸೆಯಿಂದ ಆಗುವ ಹಾನಿಕಾರಕ ಬಗ್ಗೆ ಹೇಳುವುದೋ ಕತೆ /ಪಠ್ಯದ ಮೂಲ ಉದ್ದೇಶ...?


ಜೋವಿRead more!