Monday 12 February 2024

'ರಿಸ್ಟ್ ಅಶುರ್ಡ್' - GRV ಆತ್ಮ ಚರಿತ್ರೆ - ಸುಂದರ ಕ್ರಿಕೆಟ್ ನೆನಪುಗಳು

'ರಿಸ್ಟ್ ಅಶುರ್ಡ್'




ಕರ್ನಾಟಕದ ಕ್ರಿಕೆಟ್ ಆಟಗಾರ ಜಿ ಆರ್ ವಿಶ್ವನಾಥ್ ರವರ ಆತ್ಮ ಚರಿತೆ 'ರಿಸ್ಟ್ ಅಶುರ್ಡ್' ಕೊನೆಯ ಭಾಗಕ್ಕೆ ಬಂದಿದ್ದೇನೆ. ಒಂದುವರೆ ವರ್ಷದಿಂದ ಸಮಯ ಸಿಕ್ಕಾಗಲ್ಲ ಓದಿಕೊಂಡು ಬಂದ ಪುಸ್ತಕವಿದು. ಪುಸ್ತಕ ಎನ್ನುವುದಕ್ಕಿಂತ ಕಿಂಡಲ್ ಆವೃತ್ತಿ ಅದು. ಕ್ರಿಕೆಟ್ ಪ್ರಿಯರಿಗೆ, ಅದರಲ್ಲೂ ಕರ್ನಾಟಕ ಕ್ರಿಕೆಟ್ ಪ್ರಿಯರಿಗೆ ಇಷ್ಟವಾಗಬಲ್ಲ ಪುಸ್ತಕ. ದುರಾದೃಷ್ಟವೆಂದರೆ ಇದರ ಕನ್ನಡ ಅವತರಣಿಕೆ ಇಲ್ಲ. ಪುಸ್ತಕ ಇಂಗ್ಲಿಷ್‌ನಲ್ಲಿದೆ. 

'ಎಲ್ಲವನ್ನೂ ಸಿದ್ಧಗೊಳಿಸಲಾಗಿದೆ, ಎಲ್ಲವನ್ನು ಸರಿಯಾಗಿ ಯೋಜಿಸಲಾಗಿದೆ, ಚಿಂತೆ ಬೇಡ' ಎಂದು ಅರ್ಥ ಕೊಡುವ ಇಂಗ್ಲಿಷಿನ 'ರೆಸ್ಟ್ ಅಶುರ್ಡ್' ಅನ್ನು 'ರಿಸ್ಟ್ ಅಶುರ್ಡ್' ಎಂದು ಪರಿವರ್ತಿಸಿರುವ ಜಾಣ ಹೆಸರು ಈ ಪುಸ್ತಕದ್ದು. ಜಿಆರ್‌ವಿ ಅವರ ಎರಡು ದೊಡ್ಡ ಹೆಗ್ಗಳಿಕೆಗಳಾದ ಅವರ ಆಟದಲ್ಲಿನ 'ರಿಸ್ಟ್ ವರ್ಕ್' ಹಾಗೂ ಅವರ 'ಆಪತ್ಭಾಂದವ'ದAಥ ಆಟವನ್ನು ಸ್ಫೂರ್ತಿಯಾಗಿಸಿಕೊಂಡಿರುವ ಶೀರ್ಷಿಕೆಯಿದು. 

ತಮ್ಮ ಬಾಲ್ಯದಿಂದ ಹಿಡಿದು ಇಲ್ಲಿಯನವರೆಗೂ ತಮ್ಮ ಕ್ರಿಕೆಟ್ ಜೀವನವನ್ನು ಜಿಆರ್‌ವಿ ಸುಂದರವಾಗಿ ಈ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಬಹುತೇಕ ಕ್ರಿಕೆಟ್ ಸುತ್ತಮುತ್ತಲಿನ ತನ್ನ ಜೀವನವನ್ನೇ ತೆರೆದಿಟ್ಟಿರುವ ಜಿಆರ್‌ವಿ ತಮ್ಮ ಖಾಸಗಿ ಜೀವನದ ಬಗ್ಗೆ ಮಾಹಿತಿಗಳನ್ನು ಅಷ್ಟಾಗಿ ಕೊಟ್ಟಿಲ್ಲ. ಅಭಿಮಾನಿಗಳಿಗೆ ಅದು ಬೇಕಾಗೂ ಇಲ್ಲ ಎನಿಸುತ್ತದೆ.  ಎಲ್ಲರಿಗೂ ತಿಳಿದಿರುವಂತೆ ಜಿಆರ್‌ವಿ ತಮ್ಮ ಕಲಾತ್ಮಕ ಆಟಕ್ಕೆ ಹೆಸರಾದವರು. ಇಂದಿನ ಟಿ-ಟ್ವೆಂಟಿ ಯುಗದಲ್ಲಿ ಶಕ್ತಿ ಬಲಪ್ರಯೋಗಗಳು ಬ್ಯಾಟಿಂಗ್ ಅನ್ನು ಗುತ್ತಿಗೆ ಪಡೆದಿದೆ. ಆದರೆ ಅಂದು ಕಲಾತ್ಮಕತೆಗೆ ಎಷ್ಟು ಪ್ರಾಮುಖ್ಯತೆ ಇತ್ತು ಎಂದರೆ ಇಂದಿಗೂ ವಿಶ್ವನಾಥ್ ರವರ ಅನೇಕ ಇನ್ನಿಂಗ್ಸ್ ಗಳನ್ನು ಜನ ಪ್ರೀತಿಯಿಂದ ನೆನೆಯುತ್ತಾರೆ. ತಮ್ಮ ಮಣಿಕಟ್ಟನ್ನು, ಅಂದರೆ ರಿಸ್ಟ್ ವರ್ಕ್ ಬಳಸಿ ಆಡುತ್ತಿದ್ದ ರೀತಿಗೆ ಜಿಆರ್‌ವಿ ಹೆಸರಾದವರು. 

ಈ ರಿಸ್ಟ್ ವರ್ಕ್ ಅನ್ನು ಎಷ್ಟು ಜನ ಗಮನಿಸುತ್ತಾರೋ ಗೊತ್ತಿಲ್ಲ. ಕ್ರಿಕೆಟ್ ಎಷ್ಟು ಪ್ರತಿಭೆ ಆಧಾರಿತವೋ, ಅದು ಅಷ್ಟೇ ತಾಂತ್ರಿಕತೆ, ವೈಜ್ಞಾನಿಕ ಹಾಗೂ ಮಾನಸಿಕ ಆಟವೂ ಹೌದು. ಒಬ್ಬ ಸಚಿನ್, ಧೋನಿ ಅಥವಾ ವಿರಾಟ್ ಹೊಡೆಯುವ ಹೊಡೆತಗಳು ಮಾತ್ರ ಕಾಣುತ್ತದೆ. ಆದರೆ ಹಿಂದಿನ ತಾಂತ್ರಿಕತೆಯ ಬಗ್ಗೆ ಕೆಲವರಿಗೆ ಮಾತ್ರ ಜ್ಞಾನವಿರುತ್ತದೆ. ಆದರೆ ಜಿ ಆರ್ ವಿಶ್ವನಾಥ್ ರವರ ಹೆಗ್ಗಳಿಕೆ ಇರುವುದೇ ಅದರಲ್ಲೇ. ಅವರ ಆಟವನ್ನು ನೋಡಿದವರು ಅವರ ರಿಸ್ಟ್ ವರ್ಕ ಬಗ್ಗೆ, ಅವರ ಬ್ಯಾಟಿಂಗ್ ನ ಸೊಗಸಿನ ಬಗ್ಗೆ ಮಾತಾಡುತ್ತಾ ಅದನ್ನು ಜನಪ್ರಿಯಗೊಳಿಸಿದರು. ೧೪೦-೧೫೦ ಕಿಮೀ ವೇಗದಲ್ಲಿ ಬರುವ ಚೆಂಡನ್ನು ಯಾವುದೇ ಕಷ್ಟವಿಲ್ಲದೆ ಅದರ ವೇಗವನ್ನೇ ಬಳಸಿ ಆಡುವ ಕಲಾವಂತಿಕೆ ಬ್ಯಾಟಿಂಗನಲ್ಲಿದೆ. ಜಿ ಅರ್ ವಿ ಅದರ ಸರದಾರರಾಗಿದ್ದರು.

ಜಿಆರ್‌ವಿ ಅನೇಕ ಹೆಗ್ಗಳಿಕೆಗೆ ಪಾತ್ರರದವರು. ಅವರು ಶತಕ ಹೊಡೆದ ಒಂದೂ ಪಂದ್ಯವನ್ನು ಭಾರತ ಸೋಲಲಿಲ್ಲ ಎಂಬುದು ಒಂದಾದರೆ, ಜಿಆರ್‌ವಿ ಆಟಕ್ಕೆ ಪ್ರತಿಸ್ಪರ್ಧಿಗಳೂ ಅಭಿಮಾನಿಗಳಾಗಿದ್ದರು. ತಮ್ಮ ಕ್ರಿಕೆಟ್ ಜೀವನದುದ್ದಕ್ಕೂ ಜೇಂಟ್ಲ್ ಮೆನ್ ಎಂದೇ ಕರೆಸಿಕೊಂಡವರು. ಇಂಗ್ಲೆಡ್ ವಿರುದ್ಧ ಬಾರಿಸಿದ ಒಂದು ಶತಕದ ನಂತರ, ಇಂಗ್ಲೆಡ್ ನಾಯಕ ಟೋನಿ ಗ್ರೇಗ್ ಜಿಆರ್‌ವಿ ಅವರನ್ನು ಮೈದಾನದಲ್ಲೇ ಮಗುವಿನಂತೆ ಎತ್ತಿ ಜೋಗುಳ ಆಡುವಂತೆ ಆಡಿಸಿದ್ದು ಇತಿಹಾಸ. 

ಕ್ರಿಕೆಟ್ ನಲ್ಲಿ ಕಿಂಗ್ ಎಂತಲೇ ಎನಿಸಿಕೊಂಡ ವಿವಿಯನ್ ರಿಚರ್ಡ್ಸ್, ತಾನು ವಿಶಿ ಆಟದ ಅಭಿಮಾನಿ ಎಂದು ಹೇಳಿದ್ದಾರೆ. ಭಾರತ ತಂಡಕ್ಕೆ ಮಿಂಚಿನAತೆ ಆಗಮಿಸಿ, ವಿಶ್ವ ಕಪ್ ಗೆಲ್ಲುವ ಮೂಲಕ ಭಾರತವನ್ನು ಕ್ರಿಕೆಟ್ ಜಗತ್ತಿನ ನಕ್ಷೆಯಲ್ಲಿ ಇರಿಸಿದ ಕಪಿಲ್ ದೇವ್, ವಿಶ್ವನಾಥ್ ರವರನ್ನು ತಮ್ಮ ಹೀರೊ ಎಂದೇ ಕರೆಯುತ್ತಾರೆ. "ಒಂದು ನಾನು ಅವರ ಆಟದ ಅಭಿಮಾನಿ, ಮತ್ತೊಂದು ನಾನು ಅವರ ವ್ಯಕ್ತಿತ್ವದ ದೊಡ್ಡ ಅಭಿಮಾನಿ. ಅವರಂತೆ ಆಗಲು ಬಹಳ ಪ್ರಯತ್ನಪಟ್ಟೆ ಆದರೆ ಸಾಧ್ಯವಾಗಲಿಲ್ಲ"

ಈ ಪುಸ್ತಕದಲ್ಲಿ ಅವರ ಕ್ರಿಕೆಟ್ ಬದುಕಿನ ಅನೇಕ ಘಟನೆಗಳನ್ನು ಅವರು ಮೆಲಕು ಹಾಕಿದ್ದಾರೆ ತಮ್ಮನ್ನು ಕ್ರಿಕೆಟ್ ಜಗತ್ತು ಏಕೆ ಹೊಗಳುತ್ತದೆ ಎಂಬುದರ ಬಗ್ಗೆ ಹೆಚ್ಚು ಮಾತನಾಡದೆ, ತಮ್ಮ ಕ್ರಿಕೆಟ್ ಅನುಭವವನ್ನು ಹಂಚಿಕೊಳ್ಳುತ್ತಾ ಹೋಗುತ್ತಾರೆ. ಅವುಗಳಲ್ಲಿ ಅನೇಕ ಸ್ವಾರಸ್ಯಕರ ಘಟನೆಗಳಿವೆ. ಅದರಲ್ಲಿ ಒಂದು ಜಿಆರ್‌ವಿ ಮಣಿಕಟ್ಟು ಹಾಗೂ ಮುಂಗೈಗೆ ಸಂಬAಧಿಸಿದ್ದು. ಜಿಆರ್‌ವಿ ಆಗಲೇ ಮೈಸೂರು ರಾಜ್ಯಕ್ಕೆ ರಣಜಿ ಪಾದಾರ್ಪಣೆ ಮಾಡಿ ಆಗಿತ್ತು. ಮೊದಲ ಪಂದ್ಯದಲ್ಲೇ ದ್ವಿಶತಕ ಬಾರಿಸಿದ್ದ ಜಿಆರ್‌ವಿ ಇಡೀ ದೇಶದ ಗಮನವನ್ನು ಸೆಳೆದಿದ್ದರು. ಅಂದಿನ ಭಾರತದ ನಾಯಕರದ ಟೈಗರ್ ಪಟೌಡಿ ಸಹ ವಿಶ್ವನಾಥ್ ಆಟದ ವೈಖರಿಯ ಬಗ್ಗೆ ಕೇಳಿದ್ದರು. ಆಗಿನ್ನು ವಿಶ್ವನಾಥ್ ಭಾರತಕ್ಕೆ ಆಡಿರಲಿಲ್ಲ ಅದೊಂದು ರಣಜಿ ಪಂದ್ಯದಲ್ಲಿ ಮೈಸೂರು ರಣಜಿ ತಂಡ ಹೈದರಾಬಾದ್ ತಂಡವನ್ನು ಎದುರು ಕೊಳ್ಳುತ್ತದೆ. ಆ ತಂಡದಲ್ಲಿ ಟೈಗರ್ ಪಟೌಡಿ ಇರುತ್ತಾರೆ ಪಂದ್ಯದಲ್ಲಿ ಜಿಆರ್‌ವಿ ಆಡಿ 60 ಸುಂದರ ರನ್ನುಗಳನ್ನು ಹೊಡೆಯುತ್ತಾ.ರೆ. 

ಅಲ್ಲಿ ಅವರ ಆಟ ಎಲ್ಲರ ಮನಸ್ಸನ್ನು ಗೆದ್ದರೂ, ಅವರ ಹೊಡೆತಗಳು ಬೌಂಡರಿ ಗೆರೆ ದಾಟುತ್ತಿಲ್ಲ ಅನ್ನುವುದನ್ನು ಪಟೌಡಿ ಗಮನಿಸುತ್ತಾರೆ. ನಂತರ ಬಂದವರೇ “ನಿನ್ನ ಮುಂಗೈಗಳಿಗೆ ಯಾವ ವ್ಯಾಯಾಮಗಳನ್ನು ಮಾಡುತ್ತೀಯಾ?” ಎಂದು ಜಿಆರ್‌ವಿ ಅವರನ್ನು ಕೇಳುತ್ತಾರೆ. “ಯಾವ ವ್ಯಾಯಾಮ ವೂ ಇಲ್ಲ” ಎಂಬ ಉತ್ತರಕ್ಕೆ ಆಶ್ಚರ್ಯಗೊಂಡ ಟೈಗರ್ ಪಟೌಡಿ, “ಅದೇ ಕಾರಣಕ್ಕೆ ನೀನು ಅಷ್ಟು ಸೊಗಸಾಗಿ ಶಾಟುಗಳನ್ನು ಹೊಡೆದರೂ ಅದು ಬೌಂಡರಿ ದಾಟುತ್ತಿಲ್ಲ, ನೀನೇಕೆ ಜಿಮ್ಮಿಗೆ ಹೋಗಬಾರದು?" ಎಂಬ ಸಲಹೆ ಕೊಡುತ್ತಾರೆ. "ಹಾಗಂದರೆ ಏನು?" ಎಂದು ಕೇಳಿದ ಪ್ರಶ್ನೆಗೆ ನಕ್ಕ ಪಟೌಡಿ "ಹಾಗಾದರೆ ಮನೆಗೆ ಹೋದ ಮೇಲೆ ಎರಡು ಬಕೆಟ್ ತುಂಬಾ ನೀರು ತುಂಬಿಸಿಕೊಂಡು, ದಿನವೂ ಅದನ್ನು ಹತ್ತಾರು ಬಾರಿ ಎತ್ತಿ ಇಳಿಸು" ಎನ್ನುತ್ತಾರೆ. 

ಕಿಚಾಯಿಸುವುದರಲ್ಲಿ ಪ್ರಸಿದ್ಧರಾಗಿದ್ದ ಪಟೌಡಿ ಮಾತುಗಳನ್ನು ಜೋಕ್ ಎಂದುಕೊಂಡ ಜಿಆರ್‌ವಿ ಈ ಬಗ್ಗೆ ಗೆಳೆಯ ಪ್ರಸನ್ನರನ್ನು ಕೇಳುತ್ತಾರೆ. "ಟೈಗರ್ ಹೇಳಿದ್ದಾರೆ ಎಂದ ಮೇಲೆ ಅದನ್ನು ಮಾಡು" ಎನ್ನುತ್ತಾರೆ ಪ್ರಸನ್ನ. ಅಂದಿನಿಂದ ಮನೆಯಲ್ಲಿನ ನೀರು ತುಂಬಿದ ಬಕೆಟ್ಟುಗಳೇ ಜಿಆರ್‌ವಿ ಅವರಿಗೆ ಡಂಬಲ್ ಗಳಾದವು. ಇದನ್ನು ಗಂಭೀರವಾಗಿ ತೆಗೆದುಕೊಂಡ ಜಿಆರ್‌ವಿ ದಿನವೂ ಹತ್ತಾರು ಬಾರಿ ಈ ಬಕೆಟ್ ಗಳನ್ನು ಎತ್ತಿ ಇಳಿಸುವ ಅಭ್ಯಾಸ ಮಾಡಿಕೊಂಡು, ಅದನ್ನೇ ವ್ಯಾಯಾಮವಾಗಿಸಿಕೊಳ್ಳುತ್ತಾರೆ. ಅಲ್ಲಿಂದ ಜಿಆರ್‌ವಿ ಬ್ಯಾಟಿಂಗ್ ಮತ್ತೊಂದು ಮಜಲಿಗೆ ಹೋಗುತ್ತದೆ. ಹೊಡೆತಗಳು ಕ್ಷಣಾರ್ಧದಲ್ಲಿ ಬೌಂಡರಿಗಳನ್ನು ದಾಟುತ್ತವೆ. ಅವರಿಗೆ ಮತ್ತಷ್ಟು ರನ್ನುಗಳು ಬರಲು ಸಾಧ್ಯವಾಗುತ್ತದೆ. ಈ ಒಂದು ಸಲಹೆಯನ್ನು ನೀಡಿದ ಟೈಗರ್ ಪಟೌಡಿ ಅವರನ್ನು ಅವರು ಸದಾ ಕಾಲಕ್ಕೂ ನಡೆಯುತ್ತಾರೆ. 

ಟೈಗರ್ ಪಟೌಡಿ ಅವರಿಂದಲೇ ಆಡುವ 11ರಲ್ಲಿ ಸ್ಥಾನ ಪಡೆದು, 1969ರಲ್ಲಿ ಆಸ್ಟ್ರೇಲಿಯ ವಿರುದ್ಧ ಕಾನ್ಪುರದಲ್ಲಿ ಮೊದಲ ಟೆಸ್ಟ್ ಹಾಡುವ ಅವಕಾಶ ಸಿಗುತ್ತದೆ. ಈ ಮೊದಲ ಪಂದ್ಯದಲ್ಲಿ ಎಲ್ಲರ ನಿರೀಕ್ಷೆ ಜಿಆರ್‌ವಿ ಮೇಲೆ ಇರುವಾಗ ದುರಾದೃಷ್ಟವಶಾತ್ ಮೊದಲ ಇನಿಂಗ್ಸ್ ನಲ್ಲಿ ಅವರು ಸೊನ್ನೆಗೆ ಔಟಾಗುತ್ತಾರೆ. ಮುಂದೆ ಎರಡು ದಿನ ನಿದ್ದೆ ಮಾಡಲಾಗದೆ, ಅದೇ ಚಿಂತೆಯಲ್ಲಿ ಇದ್ದ ಜಿಆರ್‌ವಿಗೆ ಮತ್ತೊಮ್ಮೆ ಎರಡನೇ ಇನ್ನಿಂಗ್ಸ್ ನಲ್ಲಿ ಅವಕಾಶ ದೊರಕುತ್ತದೆ. 

ತಮ್ಮ ಬ್ಯಾಟಿಂಗ್ ಸರಿದಿಗಾಗಿ ಚಿಂತಾಕ್ರಾಂತರಾಗಿ ಕುಳಿತು ಕಾಯುತ್ತಿರುವಾಗ, ಹೆಗಲ ಮೇಲೆ ಕೈಯೊಂದು ಇಟ್ಟಂತಾಗುತ್ತದೆ. ತಿರುಗಿ ನೋಡಿದಾಗ ಅದು ಟೈಗರ್ ಪಟೌಡಿ. "ಚಿಂತೆ ಮಾಡಬೇಡ ಈ ಇನಿಂಗ್ಸ್ ನಲ್ಲಿ ನೀನು ಶತಕ ಹೊಡೆಯುವೆ" ಎಂಬ ಟೈಗರ್ ಪಟೌಡಿ ಮಾತು ಅವರಿಗೆ ಆತ್ಮವಿಶ್ವಾಸವನ್ನು ತಂದುಕೊಡುತ್ತದೆ. ಕೆಲವೇ ನಿಮಿಷದಲ್ಲಿ ಅಂಗಳದ ಮಧ್ಯದಲ್ಲಿ ಹೋಗಿ ಹಾಡುವ ಅವಕಾಶ ಸಿಗುತ್ತದೆ. 

ಮುಂದಿನದು ಇತಿಹಾಸ, ಶತಕ ದಾಖಲಿಸಿದ ಜಿ ಆರ್ ವಿಶ್ವನಾಥ್ ಅಂದು ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಮೊದಲ ಪಂದ್ಯದಲ್ಲೇ ಶತಕ ಹೊಡೆದ ಕೆಲವೇ ಕೆಲವು ಜನರ ಸಾಲಿನಲ್ಲಿ ಬಂದು ನಿಲ್ಲುತ್ತಾರೆ. ಸುಮಾರು 6,000 ಅಂತರಾಷ್ಟ್ರೀಯ ರನ್ನುಗಳನ್ನು ಗಳಿಸಿದ ಜಿಆರ್‌ವಿ ರವರಿಗೆ ಬಹುತೇಕ ರನ್ನುಗಳು ಬಂದದ್ದು ತಮ್ಮ ರಿಸ್ಟ್ ವರ್ಕ್ ಗಳ ಮೂಲಕವೇ. ಅದೇ ಅವರಿಗೆ ಕೆಲವೊಮ್ಮೆ ಮುಳುವಾದರೂ ತಮಗೆ ಹೆಚ್ಚು ರನ್ನ್ ತಂದು ಕೊಟ್ಟ ಅದನ್ನು ಅವರು ಕೊನೆಯ ತನಕ ಬಿಡಲಿಲ್ಲ. 
ರಾಜ ಗಾಂಭೀರ್ಯದ ಅಂದಿನ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ, ಸ್ನೇಹಶೀಲರಾಗಿದ್ದರೂ ಮೌನಿ. ಕೆಲವೇ ಕೆಲವೇ ಗೆಳೆಯರೊಂದಿಗೆ ಸಲುಗೆಯಿಂದ ಬೆರೆಯುತ್ತಿದ್ದ ಅವರು ಜಿಆರ್‌ವಿ ಅವರನ್ನು ಒಂದು ಬಾರಿ ಸುಮಾರು 15 ದಿನಗಳ ಕಾಲ ಊಟಿಯಲ್ಲಿನ ತಮ್ಮ ಬಂಗಲೆಗೆ ಕರೆದುಕೊಂಡು ಹೋಗಿ ರಜ ದಿನಗಳನ್ನು ಕಳೆದಿದ್ದನ್ನು ಜಿಆರ್‌ವಿ ನೆನೆಯುತ್ತಾರೆ. ಪಟೌಡಿ ಅವರೊಂದಿಗೆ 3 ದಿನ ಪ್ರವಾಸಕ್ಕೆ ಹೋಗುತ್ತಿದ್ದೇನೆ ಎಂದಾಗ ಜಿ ಅರ್ ವಿ ಅವರ ತಂದೆ ಹೇಳಿದ್ದು " ಅವರು ರಾಜ ಮನೆತನದವರು, ಸರಿಯಾಗಿ ನಡೆದುಕೋ". 3 ದಿನದ ಪ್ರವಾಸ 15 ದಿನಗಳಾಗುತ್ತವೆ. ಅಂತಹ ಇಷ್ಟವಾಗುವ ವ್ಯಕ್ತಿತ್ವ ಜಿ ಅರ ವಿ ಅವರದು. ಅಲ್ಲಿ ಮೊದಲ ಬಾರಿಗೆ ಶರ್ಮಿಳಾ ಠಾಗೋರ್, ರಾಜೇಶ್ ಖನ್ನ ಮುಂತಾದವರ ಸ್ನೇಹವಾಗಿದ್ದನ್ನೂ ನೆನೆಯುತ್ತಾರೆ. 

ಇದೇ ರೀತಿಯ ಘಟನೆಗಳನ್ನು ಜಿಆರ್‌ವಿ ತಮ್ಮ ಪುಸ್ತಕದಲ್ಲಿ ದಾಖಲಿಸುತ್ತಾ ಸಾಗುತ್ತಾರೆ. ತಮ್ಮ ಕ್ರಿಕೆಟ್ ಜೀವನದ ಮಧ್ಯದಲ್ಲಿ ತಾವೇ ಎಷ್ಟೇ ಪ್ರಯತ್ನ ಪಟ್ಟರು ರನ್ನುಗಳು ಬರದೇ ಕಾಡತೊಡಗುತ್ತದೆ. ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದರೂ ಪರಿಹಾರ ಸಿಗದು. ಹೀಗಿರುವಾಗ ಹಿರಿಯ ಕ್ರಿಕೆಟಿಗ ಪಾಲಿಗರ್ ಉಮ್ರಿಗರ್ ರವರನ್ನು ಭೇಟಿಯಾದ ಜಿಆರ್‌ವಿ ತಮ್ಮ ಸಮಸ್ಯೆಯನ್ನು ಅವರ ಬಳಿ ಹೇಳುತ್ತಾರೆ. "ಬ್ಯಾಟಿಂಗ್ ಮಾಡುವ ಮುನ್ನ ಏನು ಮಾಡುತ್ತೀಯಾ?" ಎಂದು ಆ ಹಿರಿಯ ಕ್ರಿಕೆಟಿಗ ಕೇಳುತ್ತಾರೆ. 'ಪೆವೆಲಿಯನ್ ನಲ್ಲಿ ಕೂತು ಪ್ರತಿಯೊಂದು ಬಾಲನ್ನು ನೋಡುತ್ತೇನೆ, ಬೌಲರ್ ಏನು ಮಾಡುತ್ತಾರೆ, ಬ್ಯಾಟರ್ ಏನು ಮಾಡುತ್ತಾರೆ ಎಂಬುದನ್ನು ಗಮನಿಸುತ್ತಾ ಇರುತ್ತೇನೆ" ಎನ್ನುತ್ತಾರೆ ಜಿ ಆರ್ ವಿ.

"ನಿನ್ನ ಸಮಸ್ಯೆಯಿರುವುದು ಅಲ್ಲೇ, ಪಂದ್ಯದಲ್ಲಿ ಇಷ್ಟು ತೀವ್ರವಾಗಿ ತೊಡಗಿಕೊಂಡರೆ, ನೀನು ಬ್ಯಾಟಿಂಗ್ ಹೋಗುವ ಮುನ್ನವೇ ಮಾನಸಿಕವಾಗಿ ಸುಸ್ತಾಗಿರುತ್ತೀಯ, ಅಂಗಳಕ್ಕೆ ಹೋಗುವ ಮುನ್ನವೇ ನೀನು ದಣಿವಾಗಿದ್ದರೆ ರನ್ನುಗಳು ಎಲ್ಲಿ ಬರುತ್ತವೆ? ಆಗಾಗ ಡ್ರೆಸಿಂಗ್ ರೂಮಿಗೆ ಹೋಗಿ ಒಂದಷ್ಟು ಲಘು ವ್ಯಾಯಾಮ, ಕಣ್ಣಿನ ವ್ಯಾಯಾಮ ಮಾಡು" ಎನ್ನುತ್ತಾರೆ. ಹಾಗೆಯೇ ಮಾಡಿದ ವಿಶ್ವನಾಥ್ ರವರ ಬ್ಯಾಟಿಂದ ಮತ್ತೆ ರನ್ನುಗಳು ಹರಿಯುತ್ತವೆ. 

ಹೊಡೆದ 6000 ರನ್ನುಗಳಿಗಿಂತ ಜಿಆರ್‌ವಿ ಆ ರನ್ನುಗಳಿಗೆ ಗಳಿಸಿದ ಪ್ರೀತಿ ಅಪಾರ. 1974 ರಲ್ಲಿ ಮುಂಬೈನ ವೆಸ್ಟ್ ಇಂಡೀಸ್ ಎದುರಿನ ಅವರ ಔಟಾಗದ 97 ರನ್ನುಗಳ ಆಟಕ್ಕೆ ಪ್ರತಿಷ್ಠಿತ ವಿಸ್ಡನ್ ಸಂಸ್ಥೆಯು ಶತಮಾನದ ಅತಿ ಶ್ರೇಷ್ಠ ಇನ್ನಿಂಗ್ಸ್ ಗಳ ಪಟ್ಟಿಯಲ್ಲಿ 38ನೇಯ ಸ್ಥಾನ ನೀಡಿದೆ. ಅದಕ್ಕಿಂತ ದೊಡ್ಡ ಹೆಗ್ಗಳಿಕೆ ಎಂದರೆ ಇಡೀ ಪಟ್ಟಿಯಲ್ಲಿ, ನೂರಕ್ಕಿಂತ ಕಡಿಮೆ ರನ್ನು ಇರುವ ಎರಡೇ ಎರಡು ಇನಿಂಗ್ಸ್ ಗಳಲ್ಲಿ ಇದು ಒಂದು. 

ಹಾಗೆಯೇ ಈ ಇನ್ನಿಂಗ್ಸ್ ನ ತಮ್ಮ ಪ್ರತಿಯೊಂದು ಹೊಡೆತಕ್ಕೂ ಇಂಡೀಸ್ ಆಟಗಾರರೇ ಚಪ್ಪಾಳೆ ತಟ್ಟುತ್ತಿದ್ದದ್ದು ತಮಗೆ ಕೇಳಿಸುತಿತ್ತು ಎಂದು ಅವರು ನೆನೆಯುತ್ತಾರೆ. ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾದ ಭಯಾನಕ ದಾಳಿಗೆ ನೀಡಿದ ಪ್ರತಿರೋಧ ಕಂಡ ಆಸ್ಟ್ರೇಲಿಯ ಬೌಲರ್ ಒಬ್ಬ "ಯು ಆರ್ ಎ ಮ್ಯಾನ್ ಆಫ್ ಸ್ಟೀಲ್" ಅನ್ನುತ್ತಾನೆ. ಮತ್ತಲ್ಲದೆ ಏನು? ಹೇಳಿ ಕೇಳಿ ಉಕ್ಕಿನ ಪಟ್ಟಣ ಭದ್ರಾವತಿಯವನಲ್ಲವೇ ಎಂದು ನೆನೆಯುತ್ತಾರೆ ಜಿ ಆರ್ ವಿ. 

ಟೈಗರ್ ಪಟೌಡಿ, ಬೇಡಿ ಪ್ರಸನ್ನ, ಚಂದ್ರಶೇಖರ್, ಗವಾಸ್ಕಾರ್, ವಾಡೇಕರ್, ದಿಲಿಪ್ ದೋಶಿ, ಮುಂತಾದ ದಿಗ್ಗಜರೊಂದಿಗೆ ಆಡಿದರೂ, ತಮ್ಮ ಆಟ ಹಾಗೂ ವ್ಯಕ್ತಿತ್ವದಿಂದ ತಮ್ಮದೇ ಹೆಸರು ಮಾಡಿದ ಜಿಆರ್‌ವಿ ಕರ್ನಾಟಕಕ್ಕೆ 'ಜಂಟಲ್ ಜಂಟಲ್ ಮೆನ್ ಕ್ರಿಕೆಟರ್ಸ್' ಎಂಬ ಬಿರುದು ತಂದುಕೊಟ್ಟವರು. ಇಂದಿಗೂ ಈ ಪರಂಪರೆ ಉಳಿಸಿಕೊಳ್ಳುವ ಒತ್ತಡ ಕರ್ನಾಟಕದ ಪ್ರತಿ ಆಟಗಾರನ ಮೇಲಿದೆ. 

ಮುಂಬೈ ತಂಡವನ್ನು ಮೊದಲ ಬಾರಿಗೆ ಮಣಿಸಿ ಕರ್ನಾಟಕಕ್ಕೆ ರಣಜಿ ಟ್ರೋಫಿ ತಂದ ಬಗ್ಗೆಯೇ ಒಂದೀಡೀ ಅಧ್ಯಾಯವಿದೆ. ಒಟ್ಟಿನಲ್ಲಿ ಓದುತ್ತಾ ಸಾಗುತ್ತಿದ್ದಂತೆ ಕ್ರಿಕೆಟಿನ ಒಳನೋಟಗಳು ಮಾತ್ರವಲ್ಲದೆ, ಒಬ್ಬ ಸಜ್ಜನ ಆಟಗಾರನ ಜೀವನದ ವಿವಿಧ ಆಯಾಮಗಳನ್ನು ಈ ಪುಸ್ತಕ ತೆರೆದಿಡುತ್ತದೆ.

Saturday 14 May 2022

'ಈಸಬೇಕು, ಈಸಿ ಜಯಸಬೇಕು' - ಪ್ರಶಾಂತ್ ಇಗ್ನೇಷಿಯಸ್



ಒಂದೋ ಎರಡನೆಯ ಕ್ಲಾಸ್ ಇರಬೇಕು. ನಮ್ಮಲ್ಲಿದ್ದ ಬುಕ್ ಗಳಲ್ಲಿ ಪಾಠಗಳ ಜೊತೆ ಅದರ ಚಿತ್ರಗಳೂ ಇರುತ್ತಿತ್ತು. ಹಾಗೆಯೇ ಒಂದು ಇಂಗ್ಲೀಷ್ ಬುಕ್ಕಿನಲ್ಲಿ ಒಂದು ಚಿತ್ರಆ ಕಡೆ ಒಂದು ನೇಣು ಹಗ್ಗ, ಇತ್ತ ಒಬ್ಬ ಪೊಲೀಸ್, ಇನ್ನೊಂದು ಕಡೆ ಒಬ್ಬ ಒಂದು ಹೆಂಗಸಿನ ಕಿವಿ ಕಚ್ಚುತ್ತಿದ್ದ ಚಿತ್ರ ಭಾರಿ ಸೆಳೆಯುತಿತ್ತು. ಕಿವಿಯಿಂದ ರಕ್ತ ಸೋರುತ್ತಿದ್ದ ಆ ಚಿತ್ರ ಭಯಂಕರವಾಗಿದ್ದರೂ ಮನಸ್ಸಿನಲ್ಲಿ ಹಾಗೆಯೇ ಅಚ್ಚೋತ್ತಿದೆ. ಆ ಕಥೆ ಎಲ್ಲರಿಗೂ ಗೊತ್ತಿರುವಂಥದ್ದೇ. ಸಣ್ಣ ವಯಸ್ಸಿನಲ್ಲೇ ಕಳ್ಳತನ ಕಲಿತು ಮುಂದೆ ದೊಡ್ಡ ದರೋಡೆಗಾರನಾದವನು ಮುಂದೆ ಕಾನೂನಿಗೆ ಸಿಕ್ಕಿ  ನೇಣುಗಂಬ ಸೇರುವ ಪ್ರಸಂಗ ಬರುತ್ತದೆ. ಕೊನೆಯ ಆಸೆಯಾಗಿ  ತನ್ನ ತಾಯಿಯನ್ನು ಕರೆಸಿಕೊಳ್ಳುವ ಅವನು, ಕಿವಿಯಲ್ಲಿ ಏನೋ ಹೇಳಬೇಕೆಂಬ ನೆಪದಲ್ಲಿ ತಾಯಿಯ ಕಿವಿಯನ್ನು ಬಲವಾಗಿ ಕಚ್ಚಿ ರಕ್ತ ಬರಿಸುತ್ತಾನೆ. ಕಾರಣ ತಾನು ಹುಡುಗನಿರುವಾಗಲೇ ತನ್ನನು ಸರಿಪಡಿಸಿ, ಸರಿಯಾಗಿ ಬೆಳಸಿ, ಕೆಟ್ಟ ಅಭ್ಯಾಸಕ್ಕೆ ಶಿಕ್ಷಿಸಿದ್ದರೆ, ತಾನು ನೇಣುಗಂಬ ಏರುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬುದು


ಬೇಸಿಗೆಯಲ್ಲಿ ಇದೆಲ್ಲಾ ನೆನಪಾಗಲು ಕಾರಣಗಳ ಸರಮಾಲೆ ದೊಡ್ಡದು
. ಕಳೆದ 122 ವರ್ಷಗಳಲ್ಲಿ ಅತ್ಯಂತ ಸುಡುವ ಏಪ್ರಿಲ್ ಈ ವರ್ಷದ್ದು ಎನ್ನುತ್ತಿದೆ ವರದಿಗಳು. ಆಶ್ಚರ್ಯವಿಲ್ಲ ದಾಖಲೆಗಳು ಮುರಿಯುವ ಕಾಲ ಬಂದಿದೆ ಹಾಗೂ ಹವಾಮಾನ  ವೈಪರೀತ್ಯಗಳು ಹೀಗೆ ಮುಂದುವರಿಯಲಿದೆ. ಆದರೆ ಕರೆಂಟು, ಫ್ಯಾನುಗಳು ಇಲ್ಲದ ಕಾಲದಲ್ಲಿ ಬಿಸಿಲನ್ನು ಅಂದಿನ  ಜನರು ಹೇಗೆ ನಿಭಾಯಿಸಿದರು ಎಂಬುದೇ ಕುತೂಹಲದ ಸಂಗತಿ. ಕೆರೆ ಮರ ಗಾಳಿಗಳಿದ್ದವು. ಈಗೆಲ್ಲವೂ ದುರ್ಭರ, ದುಬಾರಿ.     

ಬೆಂಗಳೂರಲ್ಲೂ ಬಿಸಿಲು ಸುಡುತ್ತಿದೆ. ಕಳೆದೆರೆಡು ಬೇಸಿಗೆಗಳು ಕೊರೋನಾಗೆ ಬಲಿಯಾದ ಪರಿಣಾಮ ಈ ವರ್ಷದ ಬೇಸಿಗೆ ರಜಕ್ಕೆ ಜನ ಸಿಡಿದೆದ್ದಿದ್ದಾರೆ. ಈಜುಕೊಳದಲ್ಲೆಲ್ಲಾ ನೀರಿಗಿಂತ ಮಕ್ಕಳದೇ ಕಲರವ. ಮಕ್ಕಳು ನೀರಿಗೆ ಬೀಳುವ ಸದ್ದಿಗಿಂತ ಪೋಷಕರು ಮಕ್ಕಳನ್ನು ಈಜಿನ ಕೋಚಿಂಗ್ ಸೇರಿಸುವ ಗದ್ದಲವೋ ಗದ್ದಲ. ಮನೆಯಲ್ಲಿ ಒಂದು ಸಣ್ಣ ಗ್ಲಾಸ್ ನೀರು ಕೂಡ ಫಿಲ್ಟರ್ ಆಗಬೇಕಿದ್ದರೂ ಇಲ್ಲಿ ಮಾತ್ರ ನೂರಾರು ಜನ ಆಡಿದ ಕೊಳದಲ್ಲೇ  ಯಾವುದೇ ಎಗ್ಗಿಲ್ಲದೆ ಮಕ್ಕಳನ್ನು ಖುಷಿಯಿಂದ ಇಳಿಸುತ್ತಾ ಇರುವುದು ನಿಜಕ್ಕೂ ಸಂತೋಷದ(?) ವಿಷಯ. ಈ ಅದೃಷ್ಟವಿರದ ಗ್ರಾಮಾಂತರ ಮಕ್ಕಳು ಹತ್ತಿರದ ಕೊಳಗಳಲ್ಲಿ ಈಜಲು ಹೋಗಿ ಮುಳುಗಿ ಹೋಗುವುದನ್ನು ಆಗ್ಗಾಗ್ಗೆ ಪತ್ರಿಕೆಗಳಲ್ಲಿ ಕೇಳುತ್ತಿರುತ್ತೇವೆ. ನೆಲ ಮಾತ್ರವಲ್ಲ ನೀರಲ್ಲೂ ಅಸಮಾನತೆ.

ಒಂದಷ್ಟು ಮಕ್ಕಳು ಖುಷಿಯಾಗಿ ನೀರಿಗೆ ಇಳಿದರೆ,  ನೀರಿಗೆ ಚಳಿಗೆ ಹೆದರುವ ಇನ್ನೊಂದಿಷ್ಟು ಮಕ್ಕಳನ್ನು ಪೋಷಕರೇ ಕೋಚ್ ಗಳ ಮೂಲಕ  ಕೊಳಕ್ಕೆ ತಳ್ಳುತ್ತಿದ್ದಾರೆ. 'ಈಸಬೇಕು, ಈಸಿ ಜಯಸಬೇಕು' ಎನ್ನುವುದು ನಿಜಕ್ಕೂ ಇಲ್ಲಿ ಅರ್ಥಪೂರ್ಣ, ಏಕೆಂದರೆ ಇಲ್ಲಿ ಈಜುವುದು ಸವಾಲೇ ಸರಿ, ಅರ್ಧದ ಅಡಿಗೂ ಮತ್ತೊಬ್ಬರು ಸಿಕ್ಕಿ ಕೈಕಾಲು ಆಡಿಸಲೂ ಜಾಗ ಇಲ್ಲದಂಥ ಪರಿಸ್ಥಿತಿಯಲ್ಲಿ 'ಈಸಿ ಜಯಸುವುದು' ಅಷ್ಟು ಈಸಿಯಲ್ಲ.

ಇದೆಲ್ಲವೂ ಒಳ್ಳೆಯದೇ ಅಲ್ಲವೇ? ತಮ್ಮ ಮಕ್ಕಳು ಎಲ್ಲಾ ರೀತಿಯಲ್ಲೂ ಜಯಸಬೇಕು, ಸನ್ನದ್ಧರಾಗಬೇಕು ಎನ್ನುವ ತಂದೆ ತಾಯಿಗಳ ಬಯಕೆ ಸಹಜವಾದುದ್ದೇ. ಅತ್ತ ಕ್ರಿಕೆಟ್ ಕೋಚಿಂಗ್ ಸೆಂಟರ್ ಗಳದ್ದು ಮತ್ತೊಂದು ಸಂಭ್ರಮ. ಅಲ್ಲೆಲ್ಲಾ ಮುಂದೆ ಐಪಿಲ್ ಆಡುವ ಕನಸು ಹೊತ್ತವರ, ಹೆತ್ತವರ ಸಾಲು. ಕ್ರಿಕೆಟ್ ಭಾರತದಲ್ಲಿ ಎಂದಿಗೂ ಜನಪ್ರಿಯ ಕ್ರೀಡೆಯೇ ಬಿಡಿ. 'ಉಳ್ಳವರು ಕೋಚಿಂಗ್ ಗೆ ಹೋಗುವರಯ್ಯ ನಾನೇನ ಮಾಡುವೆ ಬಡವನಯ್ಯಾ, ರೋಡೇ ಗ್ರೌಂಡು, ಗೋಡೆಯೇ ವಿಕೇಟಯ್ಯ' ಎಂಬ ಪರಿಸ್ಥಿತಿ ಈಗಿಲ್ಲ. ನಗರಗಳಲ್ಲಿ ಆದಷ್ಟು ಮಕ್ಕಳು ಕೋಚಿಂಗ್ ಸೇರಿರುತ್ತಾರೆ. ಏಕೆಂದರೆ ಅಲ್ಲಿ ಕ್ರಿಕೆಟ್ ಮಾತ್ರ ಕಲಿಸುವುದಿಲ್ಲ , ಅದು ಮುಂದಿನ ಹೆಜ್ಜೆಗೆ ಕೋಚಿಂಗ್ ರಹದಾರಿ.

ಅದೇ ರೀತಿ ಸ್ಕೇಟಿಂಗ್, ಸಂಗೀತ, ಕರಾಟೆ, ಡ್ಯಾನ್ಸ್ ಇವೆಲ್ಲದರ ಬೇಸಿಗೆ ಶಿಬಿರ, ಕ್ಲಾಸು, ಕ್ಯಾಂಪುಗಳಿಗೆ'ಎಲ್ಲಿಲ್ಲದ ಬೇಡಿಕೆ. ತಮಗೆ ಸಿಗದ ಸೌಲಭ್ಯ, ಅವಕಾಶಗಳು ತಮ್ಮ ಮಕ್ಕಳಿಗಾದರೂ ಸಿಗಲಿ, ಅವಕಾಶ ವಂಚಿತರಾಗದಿರಲಿ ಎಂಬ ಆಸೆ ತಂದೆ ತಾಯಿಯರದು. ಇವೆಲ್ಲವೂ ಮಕ್ಕಳ ಜೀವನದಲ್ಲಿ ಖಂಡಿತ ಉಪಯೋಗಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಮುದ್ರ, ನದಿಯಲ್ಲಿ ಈಜದಿದ್ದರೂ ಈಜು ಕಲಿಯುವುದರಿಂದ ನೀರಿನ ಭಯ ದೂರ, ದೇಹಕ್ಕೂ ವ್ಯಾಯಾಮ. ರಣಜಿ, ಐಪಿಲ್ ಆಡದಿದ್ದರೂ ಒಂದು ಕ್ರೀಡೆ ಬಯಸುವ ತಾಂತ್ರಿಕತೆ, ಕಲಾತ್ಮಕತೆ, ಶಿಸ್ತು, ಬದ್ಧತೆ, ಒಂದು ಸ್ಪರ್ಧೆಯ ಸಾಧಕ, ಬಾಧಕಗಳ ಪರಿಚಯವಂತೂ ಆಗುತ್ತದೆ. ಅದು ಜೀವನಕ್ಕೂ ಅನ್ವಯವಾಗುತ್ತದೆ. ಬ್ರೂಸ್ ಲೀಯಂತೆ ದುರಳರನ್ನು ಸದೆ ಬಡಿಯದಿದ್ದರೂ ನಮ್ಮದೇ ದೇಹದ ನಿಷ್ಕ್ರಿಯತೆ, ಸೋಮಾರಿತನದ ವಿರುದ್ಧದ ಹೋರಾಟವನ್ನು ಕರಾಟೆ ಕಲಿಸುತ್ತದೆ. ದೇಹದ ಮೇಲಿನ ಸಮತೋಲನವನ್ನು ಸ್ಕೇಟಿಂಗ್ ಕಲಿಸಿದರೆ, ಸಂಗೀತ ಮನಸ್ಸಿನ ಆಲಾಪನೆಗಳಿಗೆ ಸಾಧನವಾಗುತ್ತದೆ. ನೃತ್ಯ ದೇಹ ಮನಸ್ಸನ್ನು ನಿರಾಳಗೊಳಿಸಿದರೆ, ಇವೆಲ್ಲವೂ ನಮ್ಮದೇ ದೇಹದ ಅಗಾಧ ಸಾಧ್ಯತೆಯ ಪರಿಚಯವನ್ನು ನಮಗೆ ಮಾಡಿಸುತ್ತವೆ.

ಇವೆಲ್ಲವನ್ನೂ ಗಂಭೀರವಾಗಿ ತೆಗದುಕೊಂಡು ಅಭ್ಯಾಸಿಸಿದರೆ, ವೃತ್ತಿಯೇ ಆಗಿ, ಸಂಪಾದನೆಯ, ಶ್ರೀಮಂತಿಕೆಯ ಮೂಲವೂ ಆಗುತ್ತದೆ. ತಮ್ಮ ಮಕ್ಕಳು ಈಗಾಗಲಿ ಎಂಬ ತಂದೆ ತಾಯಿಗಳ ಕನಸಲ್ಲಿ ತಪ್ಪು ಹುಡುಕಲು ಸಾಧ್ಯವೇ?

ಆದರೆ ಎಲ್ಲಿ ಹುಡುಕಿದರೂ ಇಂದಿನ ಮಕ್ಕಳು ನಾಳೆಯ ಒಳ್ಳೆಯ ಪ್ರಜೆಗಳಾಗಲು, ಉತ್ತಮ ನಾಗರೀಕರಾಗಲು, ಅವರಲ್ಲಿ ಉತ್ತಮ ರಾಜಕೀಯ ಪ್ರಜ್ಞೆ ಮೂಡಿಸಲು, ಸಾಮಾಜಿಕವಾಗಿ ಜವಾಬ್ದಾರರನ್ನಾಗಿಸಲು ಯಾವುದೇ ಕ್ಲಾಸು, ಕ್ಯಾಂಪು ಸುಲಭವಾಗಿ ಕಾಣುತ್ತಿಲ್ಲ. ಕಂಡರೂ ಪೋಷಕರು  ಅಲ್ಲಿಗೆ ಮಕ್ಕಳನ್ನು ತುದಿಗಾಲಲ್ಲಿ ನಿಂತು ಸೇರಿಸಲು ಹಾತೊರೆಯುತ್ತಿರುವುದು ಕಾಣುತ್ತಿಲ್ಲ. ತುಂಬು ಕುಟುಂಬಗಳು ಮರೆಯಾಗಿ, ನೆರೆಯವರ ಜೊತೆಗಿನ ಒಡನಾಟಗಳು ಕರಗಿ, ತಂದೆ ತಾಯಿ ಸೇರಿದಂತೆ ಯಾರಿಗೂ ಸಮಯವೇ ಇಲ್ಲದಂತ ಸಮಯದಲ್ಲಿ ನಾವು ಮಕ್ಕಳನ್ನು ಟಿವಿ, ಇಂಟರ್ ನೆಟ್, ಮೊಬೈಲುಗಳ ಸುರ್ಪದಿಗೆ ಒಪ್ಪಿಸಿದ್ದೇವೆ. ಸಮಯ ಮಾಡಿಕೊಂಡು ಕೋಚಿಂಗ್ ಗಳಿಗೆ ಕರೆದುಕೊಂಡು ಹೋಗಿ ಬರುವ ನಡುವೆ 'ಈ ಸಮಾಜಕ್ಕೆ ಅಗತ್ಯವಾಗಿ ಬೇಕಾದ ಮಕ್ಕಳನ್ನು, ಯುವ ಪೀಳಿಗೆಯನ್ನು ಬೆಳೆಸುತ್ತಿದ್ದೇವೆಯೇ? ಎಂಬ ಪ್ರಶ್ನೆ, ಯೋಚನೆ ಯಾಕಾದರೂ ಬರಬೇಕು ಹೇಳಿ?

ದಿನವೂ ಈಜಾಡಲು ಸಾಧ್ಯವಿಲ್ಲ, ಕೊನೆಗೆ ಕ್ರೀಡೆಗಳನ್ನು ವೃತ್ತಿಪರವಾಗಿ ತೆಗದುಕೊಳ್ಳುವವರು ನೂರಕ್ಕೆ ಐದೋ ಹತ್ತೋ ಜನ. ನೃತ್ಯ ಸಂಗೀತಗಳಿಗೆ ಅದರದೇ ಸಮಾರಂಭಗಳು,  ಸಮಯವಿದೆ. ಕರಾಟೆ, ಸ್ಕೇಟಿಂಗ್ ನಮ್ಮ ಹವ್ಯಾಸಗಳು. ಆದರೆ ಇವುಗಳ ಬಗ್ಗೆ ಇಷ್ಟೊಂದು ಯೋಚಿಸುವ ನಾವು ದಿನವೂ ಆಹಾರ, ಗಾಳಿ, ಬೆಳಕಿನಷ್ಟೇ ಮುಖ್ಯವಾಗಬಹುದಾದ ಮಕ್ಕಳ ಮಾನಸಿಕ ಆರೋಗ್ಯ, ಸಾಮಾಜಿಕ ಸ್ವಾಸ್ಥ್ಯ, ಪ್ರಬುದ್ಧತೆ, ಪರಸ್ಪರ ಒಡನಾಟ, ಧಾರ್ಮಿಕ ಸಹಿಷ್ಣುತೆ, ಪರಿಸರ ಕಾಳಜಿ, ಸಾಮಾಜಿಕ ಶಿಸ್ತು ಹಾಗೂ ಸಂವಿಧಾನದ ಜ್ಞಾನದ ಬಗ್ಗೆ ತೋರುತ್ತಿರುವ ಅನಾದರ ಅಪಾಯಕ್ಕಾರಿ. ಇವೆಲ್ಲವನ್ನೂ ಮಕ್ಕಳಿಗೆ ಹೇಗೆ ಹೇಳಿಕೊಡುವುದು. ಅವರನ್ನು ಈ ವಿಷಯಗಳಲ್ಲಿ ಹೇಗೆ ತಯಾರು ಮಾಡುವುದು ಎಂಬ ಯೋಜನೆಗಳೇ ನಮಗಿಲ್ಲ.

ಒಂದು ಅಂದಾಜಿನ ಪ್ರಕಾರ 'ಆರ್ಟಿಫಿಷಲ್ ಇಂಟಲಿಜೆನ್ಸ್' ಎಂಬ ತಾಂತ್ರಿಕ ಪ್ರಗತಿಯಿಂದಾಗಿ, ಇಂದು ನಮ್ಮಲ್ಲಿ ಚಾಲ್ತಿಯಲ್ಲಿರುವ  ನೂರಕ್ಕೆ ಅರವತ್ತು ಉದ್ಯೋಗಗಳು ಇನ್ನು ಕೆಲವೇ ವರ್ಷಗಳಲ್ಲಿ ಇರುವುದಿಲ್ಲ. ಪ್ರತಿ ವರ್ಷವೂ ಕಾಲೇಜುಗಳಿಂದ ಹೊರಬರುವ ಲಕ್ಷಾಂತರ ಪದವೀಧರರಲ್ಲಿ ನೂರರಲ್ಲಿ ಅತ್ತ್ಯುತ್ತಮರಾದ ಮೊದಲ ಇಪ್ಪತ್ತೋ ಮೂವತ್ತೋ ಜನಕ್ಕೆ ಮಾತ್ರ ತಮ್ಮ ಇಷ್ಟದ ಕೆಲಸಗಳು ಸಿಗಬಹುದು. ಮಿಕ್ಕವರು ಮಿಕ್ಕ ಕೆಲಸಗಳು ಮಾಡಬೇಕಾಗುತ್ತದೆ. ತಮ್ಮ ಓದಿಗೆ ಸಂಬಂಧವಿಲ್ಲದ ಕೆಲಸಗಳಲ್ಲಿ ಅತೃಪ್ತ ಉದ್ಯೋಗಿಗಳ ಸಂಖ್ಯೆ ದೊಡ್ಡದಾಗುವ ಸಂಭವಗಳೇ ಹೆಚ್ಚು. ಇದು ಮುಂದಿನ ಪೀಳಿಗೆಯ ಮಾನಸಿಕ ಸ್ವಾಸ್ಥ್ಯದ ಮೇಲೆ ದೊಡ್ಡ ಪರಿಣಾಮ ಬೀರಬಲ್ಲದು. ಸಾಮಾಜಿಕ ಶಿಸ್ತು, ಬದ್ಧತೆಗಳಿಲ್ಲದೆ ಈಗಾಗಲೇ ಟ್ರಾಫಿಕ್ ಜಾಮ್ ಸೇರಿದಂತೆ ಸಾರ್ವಜನಿಕವಾಗಿ ನಾವು ಅನುಭವಿಸುತ್ತಿರುವ ಅನೇಕ ಕಷ್ಟಗಳು ನಮ್ಮ ಮುಂದೆಯೇ ಇದೆ. ಇನ್ನೂ ಪರಸ್ಪರ ಗೌರವ, ಸಹಿಷ್ಣುತೆಯ ಮಹತ್ವ ತಿಳಿಯದೇ ಹೋದರೇ ಇಂದು ನಾವು ಕಾಣುತ್ತಿರುವ ಧಾರ್ಮಿಕ, ಸಾಮಾಜಿಕ ಸಂಘರ್ಷಗಳು, ಬಿರುಕುಗಳು ಮತ್ತಷ್ಟು ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ.

ಭ್ರಷ್ಟಾಚಾರದ ಬಗ್ಗೆ ನಾವು ಮಾತಾಡುತ್ತೇವಷ್ಟೇ, ಆದರೆ ಆದೇ ಭ್ರಷ್ಟರೇ ನಮ್ಮ ನಾಯಕರು, ನಮ್ಮ ಆದರ್ಶಗಳಾಗಿರುವುದನ್ನು ನಾವೇ ಒಪ್ಪಿಕೊಂಡಿದ್ದೇವೆ. ನಗರಗಳಲ್ಲಿ ಬಿಡಿ ಒಂದು ಸಾಮಾನ್ಯ ಹಳ್ಳಿಯಲ್ಲೂ ಈಗ ನಾಯಕರಿಲ್ಲ ಮುತ್ಸದ್ಧಿಗಳಿಲ್ಲ. ಇರುವವರೆಲ್ಲಾ ರಾಜಕೀಯ ಧುರೀಣರು, ಹಣ ಅಧಿಕಾರದ ಪ್ರಭಾವಿಗಳು ಹಾಗೂ ತಮ್ಮ ಅಧಿಕಾರದಿಂದ ಮಾತ್ರವೇ ನಿಮ್ಮ ಕೆಲಸಗಳನ್ನು ಮಾಡಿಕೊಡಬಲ್ಲವರು. ತಮ್ಮವರಿಗೆ ಮತ ಹಾಕದವರನ್ನು ಗೋಳಾಡಿಸಿ,  ಆಡಿಸಬಲ್ಲವರು ಹಾಗೂ ಅದರಲ್ಲೇ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಬಲ್ಲವರು

ಇದೆಲ್ಲವೂ ಒಂದು ಪಿಡುಗು, ಆದರ್ಶವಲ್ಲ ಬದಲಾವಣೆ ಅಗತ್ಯ ಎಂದು ಮಕ್ಕಳಿಗೆ, ಯುವಕರಿಗೆ ಮನದಟ್ಟು ಮಾಡುವ ಪರಿ ಯಾವುದು? ಸಂವಿಧಾನ ಪ್ರಜ್ಞೆ, ನಮ್ಮ ಭಾರತೀಯತೆಯ ಸೊಬಗು, ಸೊಡಗುಗಳ ಬಗ್ಗೆ ಪರಿಚಯವೇ ಇಲ್ಲದೆ ಹೋದರೆ ಅದರ ಸೌಲಭ್ಯ, ರಕ್ಷಣೆಗಳು ದೂರದ ಮಾತೇ.

ಪರಸ್ಪರ ಒಡನಾಟವಿಲ್ಲದ,  ಓದಿನ ಹಂಬಲವಿಲ್ಲದ, ಪರಿಸರ ಕಾಳಜಿಯಿಲ್ಲದ ಸಮಾಜವು ಮುಂದೆ ಅನುಭವಿಸುವ ಕಷ್ಟ ನಷ್ಟಗಳಿಗೆ ನಾವು ಜವಾಬ್ದಾರಲ್ಲವೇ? ಬಿಸಿಲು ಸುಮ್ಮನೆ ಹೆಚ್ಚುತ್ತಿದೆಯೇ? ಮಳೆ ಸಮಯದಲ್ಲಿ ನೀರು ಸುಮ್ಮನೆ ಮನೆಗೆ ನುಗ್ಗುತ್ತಿವೆಯೇ? ನದಿಗಳು ತಮ್ಮಷ್ಟಕ್ಕೆ ತಾವೇ ಕಲುಷಿತಗೊಳ್ಳುತ್ತಿವೆಯೇ?

ಮುಂದಿನ ಜನಾಂಗ ಆ ಕಳ್ಳನಂತೆ ನೇಣಿಗೆ ಹೋಗಲಾರದೇನೋ? ಆದರೆ ನಮ್ಮ ಹಿಂದಿನ ಹಿರಿಯರು ನಮ್ಮನ್ನೇಕೆ ಇನ್ನಷ್ಟು ಪರಿಪಕ್ವವಾಗಿಸಲಿಲ್ಲ, ಪ್ರಭುದ್ಧರಾಗಿಸಲಿಲ್ಲ  ಎಂದು ನಮ್ಮ ಕಿವಿ ಕಚ್ಚಲು ಅವರು ಬರಬಹುದೇನೋ?

ಹೀಗೆ ಮುಂದುವರಿದರೆ ಬೇಸಿಗೆ ಮಾತ್ರವಲ್ಲ ಮುಂದೆ ಎಲ್ಲದರ ಬಿಸಿ ನಮಗೆ ಮುಟ್ಟುತ್ತದೆ. 

ಪ್ರಶಾಂತ್ ಇಗ್ನೇಷಿಯಸ್ 

Tuesday 15 March 2022

ಪುನೀತ್ ಇಲ್ಲದ ಈ ನಾಲ್ಕು ತಿಂಗಳು.... - ಪ್ರಶಾಂತ್ ಇಗ್ನೇಷಿಯಸ್







ದೊಡ್ಡಮಟ್ಟದಲ್ಲಿ ವೈರಲ್ ಆದ ವಿಡಿಯೋ ಅದು
. ಬಸ್ಸೊಂದರ ಮೇಲೊಂದು ಪೋಸ್ಟರ್. ಪೋಸ್ಟರ್ ಮೇಲೆ ಒಂದಷ್ಟು ಧೂಳು. ತನ್ನ ಮನೆಯ ಗೋಡೆಯ ಮೇಲಿನ ಧೂಳೇನೋ ಎಂಬಂತಹ ಕಾಳಜಿಯಿಂದ ಆ ಪೋಸ್ಟರ್ ಅನ್ನು ಒರೆಸುತ್ತಿದ್ದ ಹಣ್ಣು ಹಣ್ಣು ಅಜ್ಜಿ. ಸಾಮಾನ್ಯವಾಗಿ ಅವಸರದಲ್ಲೇ ಇರುವ ಬಸ್ಸಿನ ಡ್ರೈವರ್ ಆ ಅಜ್ಜಿ ಒರೆಸುವುದನ್ನು ನೋಡುತ್ತಾ ನಿಂತಿದ್ದ ವಿಡಿಯೋ ಅದು.  ಆ ಪೊಸ್ಟರ್ ಪುನೀತ್ ರಾಜಕುಮಾರ್ ದು. ಪುನೀತ್ ಅಗಲಿ ಒಂದಷ್ಟು ದಿನಗಳಾಗಿತ್ತಷ್ಟೇ. ಪುನೀತ್ ಸಾವು ಇಡೀ ನಾಡಿಗೆ ತಂದ ಭಾವಸ್ಪಂದನದ ಸಣ್ಣ ಉದಾಹರಣೆಯಷ್ಟೇ ಅದು.  ಪುನೀತ್ ಅಗಲಿ ನಾಲ್ಕೈದು ತಿಂಗಳು ಕಳೆದು ಅವರ ಹುಟ್ಟು ಹಬ್ಬ ಈ ಸಮಯದಲ್ಲಿ ಇಡೀ ಕರ್ನಾಟಕವೇ ಒಂದೇ ಉಸಿರಿನಲ್ಲಿ ಅಂದು ಕೇಳಿದ, ಇಂದಿಗೂ ಕೇಳುತ್ತಿರುವ ಪ್ರಶ್ನೆ ಒಂದೇ “ಈ ಸಾವು ನ್ಯಾಯವೇ?”.

ಸಾಮಾನ್ಯವಾಗಿ ಸಣ್ಣವಯಸ್ಸಿನಲ್ಲಿ ಸತ್ತ ವ್ಯಕ್ತಿಗಳ ಬಗ್ಗೆ ಈ ಪ್ರಶ್ನೆ ಸಹಜವಾಗಿಯೇ ಕೇಳಿಬರುತ್ತದೆ. ವ್ಯಕ್ತಿ ಜನಪ್ರಿಯನಾಗಿದ್ದರೆ ಸುತ್ತಮುತ್ತಲಿನ ಜನಸಮುದಾಯ ನೊಂದುಕೊಳ್ಳುತ್ತದೆ, ವಿಷಾದಿಸುತ್ತದೆ. ಆದರೆ ಇಡೀ ನಾಡೇ ಒಂದು ದೊಡ್ಡ ವಿಷಾದಕ್ಕೆ ತನ್ನನ್ನೇ ದೂಡಿಕೊಂಡು ದಿಗ್ಭ್ರಮೆಯಿಂದ ಹೊರಬಾರದಂತೆ ಪ್ರತಿಕ್ರಿಯಿಸುತ್ತಾ, ಒಂದು ಸಾವನ್ನು ಒಪ್ಪದ ಮನಸ್ಸಿನಿಂದ ಚಡಪಡಿಸುತ್ತಾ ತನ್ನ ಭಾವ ಪ್ರಪಂಚಕ್ಕೆ ಸೇರಿಸಿಕೊಳ್ಳುವುದು ಅಪರೂಪದ ಸಂಗತಿ.

ಜನಪ್ರಿಯ ವ್ಯಕ್ತಿಗಳು ಸಾಧಕರು, ಅದರಲ್ಲೂ ಜನಸೇವೆಯಲ್ಲಿ ಹೆಸರು ಮಾಡಿದವರು ಸತ್ತಾಗ ನಾಡು ಕಂಬನಿ ಮಿಡಿಯುವುದನ್ನು ನಾವು ಕಾಣುತ್ತೇವೆ. ಆ ರೀತಿಯ ಬಹುತೇಕರು ತುಂಬು ಜೀವನ ನಡೆಸಿ ತಮ್ಮ ಇಳಿವಯಸ್ಸಿನಲ್ಲಿ ಅಗಲಿದಾಗ ನೋವಾದರೂ ಭಾವಾಂತರಂಗದಲ್ಲಿ ಸಾವಿನ ಬಗ್ಗೆ ಒಂದು ಮಾನಸಿಕ ಸಿದ್ಧತೆ ಜೊತೆಗೆ ಸಾರ್ಥಕತೆ ಇರುತ್ತದೆ. ಆದರೆ ಪುನೀತ್ ಸಾವನ್ನು ಕರ್ನಾಟಕದ ಜನತೆ ಸುಲಭದಲ್ಲಿ ಅರಗಿಸಿಕೊಳ್ಳಲಿಲ್ಲ ಎಂಬ ವಿಷಯದಲ್ಲಿ ಯಾವುದೇ ಅನುಮಾನವಿಲ್ಲ.

ಸುಮಾರು 20 ಲಕ್ಷದಷ್ಟು ಜನ ಅಂದು ಅಂತಿಮ ನಮನ ಸಲ್ಲಿಸಲು ಬಂದರೆ, ಇಂದಿಗೂ ಭಾನುವಾರ ರಜಾ ದಿನಗಳಲ್ಲಿ 20- 30 ಸಾವಿರ ಜನ ಸಮಾಧಿಗೆ ಬರುತ್ತಿರುವುದು ಒಂದು ಸಾಂಸ್ಕೃತಿಕ ಅಚ್ಚರಿಯೇ ಸರಿ. ಪುನೀತ್ ಒಬ್ಬ ಸಿನೆಮಾ ನಟ. ಅದರಲ್ಲೂ ಬೆಳ್ಳಿ ಪರದೆಯನ್ನು ವಿಶಿಷ್ಟವಾಗಿ ಆವರಿಸಿಕೊಂಡು ರಂಜಿಸಬಲ್ಲವನಾಗಿದ್ದ ಒಬ್ಬ ಸುಸಂಸ್ಕೃತ ಸಜ್ಜನ ಜನಪ್ರಿಯ ನಟ. ಆದರೆ ಕರ್ನಾಟಕದ ಜನತೆ ಮಾತ್ರವಲ್ಲದೆ ಇಡೀ ದೇಶವೇ ಪುನೀತ್ ಸಾವಿಗೆ ಸ್ಪಂದಿಸಿದ ರೀತಿ ನಟನಾರಂಗದ ಗಡಿಯನ್ನು ಮೀರಿದ್ದು.

ಈ ತೀವ್ರತರವಾದ ಭಾವ ಸ್ಪಂದನಕ್ಕೆ ಕಾರಣವಾದರೂ ಏನು? ಕೇವಲ 46ನೇ ವರ್ಷದಲ್ಲಿ ಅಗಲಿದರೂ ಎಂಬುದೇ? ಇನ್ನುಮುಂದೆ ರಂಜಿಸಲು ಇಲ್ಲವಲ್ಲ ಎಂಬ ಖಾಲಿ ಭಾವವೇ? ಡಾ.ರಾಜ್ ಪುತ್ರನೆಂಬ ಅಭಿಮಾನವೇ? ಎಂಬ ಪ್ರಶ್ನೆಗಳು ಮೂಡುತ್ತವೆ. ಇವೆಲ್ಲವೂ ಹೌದು, ಆದರೆ ಇದೆಲ್ಲದಕ್ಕೂ ಮೀರಿದ ಭಾವನಾತ್ಮಕ ಕೊಂಡಿ ಪುನೀತ್ ಹಾಗೂ ಕನ್ನಡ ಜನತೆಯ ನಡುವೆ ಇತ್ತು ಹಾಗೂ ಪುನೀತ್ ಕೆಲವಾರು ವರ್ಷಗಳಲ್ಲಿ ಆ ಕೊಂಡಿಯನ್ನು ಗಟ್ಟಿಗೊಳಿಸುತ್ತಾ ಹೋಗಿದ್ದು ಮಾತ್ರವಲ್ಲದೆ ಅದನ್ನು ವಿಸ್ತರಿಸುತ್ತಾ ಸಾಗಿದ್ದರು. ಅದು ಕರ್ನಾಟಕದ ಉದ್ದಗಲಕ್ಕೂ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲಿ ಹರಡುವಂತೆ ತಮ್ಮ ವ್ಯಕ್ತಿತ್ವದಿಂದಲೇ ನೋಡಿಕೊಂಡರು. ಅಕ್ಕಪಕ್ಕದ ರಾಜ್ಯಗಳ ಕಥೆ ನಂತರಕ್ಕಿರಲಿ, ಕರ್ನಾಟಕದಲ್ಲಿ ಇದು ಈ ಪರಿ ಬೆಳೆದದ್ದಾದರೂ  ಹೇಗೆ?

ಚಿತ್ರರಂಗದ ಬಾಲನಟರಲ್ಲಿ ಪುನೀತ್ ಹೆಸರು ಮೊದಲ ಸಾಲಿನಲ್ಲಿ ಕಾಣುತ್ತದೆ. ಒಂದಷ್ಟು ಬಾಲನಟರು ಬಂದು, ಹೋಗಿ ಉತ್ತಮವಾಗಿ ನಟಿಸಿದ್ದರೂ ಗಮನಸೆಳೆದಿದ್ದರೂ ಇಲ್ಲಿ ಉಳಿದದ್ದು ಕೆಲವೇ ಮಂದಿ. ಡಾ ರಾಜ್ ಚಿತ್ರಗಳಲ್ಲಿ ಬಾಲನಟನಾಗಿ ಬಂದು ಪುನೀತ್ ಗಮನ ಸೆಳೆಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಬಾಲನಟನಾಗಿ ಕಾಣಿಸಿಕೊಂಡ ಪಾತ್ರಗಳು ಚಿತ್ರದಲ್ಲಿ ತುರುಕಿದಂತೆ ಕಾಣಲಿಲ್ಲ. ಇಲ್ಲಿ ಪಾರ್ವತಮ್ಮ ಹಾಗೂ ಅಂದಿನ ನಿರ್ದೇಶಕರ ಜಾಣ್ಮೆ ಮೆಚ್ಚತಕ್ಕದ್ದೇ. ಗಂಡ-ಹೆಂಡಿರ ಮುನಿಸಿನ ನಡುವಿನ ಮುದ್ದು ಮಗನ ’ವಸಂತ ಗೀತ’ ಪಾತ್ರ, ಕೊಲೆಯೊಂದರ ಪ್ರಮುಖ ಸಾಕ್ಷಿಯಾಗಿ ನಿಲ್ಲುವ ’ಚಲಿಸುವ ಮೋಡಗಳು’, ನತದೃಷ್ಟ ಎಂದು ಕರೆಸಿಕೊಂಡು ಕೊನೆಯಲ್ಲಿ ಸಾವಿರಾರು ಜನರ ಪ್ರಾಣವುಳಿಸುವ ’ಭಾಗ್ಯವಂತ’, ರಾಕ್ಷಸ ತಂದೆಗೆ ಸರಿಸಮನಾಗಿ ನಿಲ್ಲುವ ’ಭಕ್ತ ಪ್ರಹ್ಲಾದ’,  ಪತ್ತೆದಾರಿ ಪೊಲೀಸರಿಗೆ ಸಹಾಯ ಮಾಡುವ ’ಯಾರಿವನು’, ದ್ವಿಪಾತ್ರದ ’ಎರಡು ನಕ್ಷತ್ರಗಳು’ ಹಾಗೂ  ಎಲ್ಲದಕ್ಕೂ ಕಳಶವಿಟ್ಟಂತೆ ಬಡ ಹುಡುಗನ ಪಾತ್ರದಲ್ಲಿ ರಾಷ್ಟ ಪ್ರಶಸ್ತಿ ಪಡೆದ ’ಬೆಟ್ಟದ ಹೂವು’, ಎಲ್ಲವೂ ಪುನೀತ ರನ್ನು ಕನ್ನಡ ಜನರ ಹೃದಯದಲ್ಲಿ ಗಟ್ಟಿಯಾಗಿ ನಿಲ್ಲಿಸಿದ ಚಿತ್ರಗಳು.

 ಈ ಚಿತ್ರಗಳಲ್ಲಿನ ಲವಲವಿಕೆಯ ಅಭಿನಯ ಮಾತ್ರವಲ್ಲದೆ ಸ್ವತ: ಗಾಯನ ಕೂಡ ಪುನೀತ್ ಗೆ ಜನಪ್ರಿಯತೆಯ ಜೊತೆಗೆ ಜನರಲ್ಲಿ ಮೆನೆ ಮಗನ ಸ್ಥಾನ ದೊರಕಿಸಿತು.  ಆ ಸಮಯದಲ್ಲಿ ಎಲ್ಲರಿಗೂ ತಮ್ಮ ಮಕ್ಕಳು ಪುನೀತರಂತೆ ಹಾಡಿ ಅಭಿನಯಿಸಬೇಕೆಂಬ ಹಂಬಲ.

 ಬಾಲನಟನ ಅಧ್ಯಾಯ ಮುಗಿದು, ನಾಯಕ ನಟನಾಗುವ ಸಮಯದಲ್ಲಿ ಹೊಸ ನಾಯಕ ನಟರಿಗೆ ಕನ್ನಡ ಚಿತ್ರರಂಗ ಒಂದು ಪೂರಕವಲ್ಲದ ವಾತಾವರಣದಂತಿತ್ತು. ಡಾಕ್ಟರ್ ರಾಜ್ ಸೇರಿದಂತೆ ಹಿರಿಯ ನಟರ ಸಿನಿಮಾಗಳು ಕ್ರಮೇಣ ಕಡಿಮೆಯಾಗ ತೊಡಗಿ, ಗುಣಮಟ್ಟದಲ್ಲಿ ಪರಭಾಷಾ ಚಿತ್ರಗಳ ಮುಂದೆ ಸೊರಗಿ, ಸೃಜನಶೀಲ ನಿರ್ದೇಶಕರ ಕೊರತೆಯ ಸಮಯದಲ್ಲಿ ಪುನೀತರ ಮೊದಲ ಚಿತ್ರ ’ಅಪ್ಪು’ ಚಿತ್ರ ತೆರೆಗೆ ಸಿದ್ದವಾಗಿತ್ತು.   ಪುನೀತ್ ಎಂಬ ಕುತೂಹಲ ನಿರೀಕ್ಷೆ ಇದ್ದರೂ ಕುಟುಂಬ ಸಮೇತ ಚಿತ್ರ ನೋಡುವ ಪರಿಪಾಠ ಕನ್ನಡದ ಮಟ್ಟಿಗೆ ಗಣನೀಯವಾಗಿ ಕಡಿಮೆಯಾಗಿತ್ತು. ಯಾವುದೋ ವ್ಯಾಪಾರ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದು ಮಾತ್ರವಲ್ಲದೆ, ಸಣ್ಣ ವಿವಾದಕ್ಕೂ ಪುನೀತ್ ಗುರಿಯಾಗಿದ್ದರು.

ಆದರೆ ರಾಜ್ ಸಂಸ್ಥೆ ಜನರ ನಿರೀಕ್ಷೆಯನ್ನು ಸುಳ್ಳು ಮಾಡಲಿಲ್ಲ ಕತೆಯ ಆಯ್ಕೆಯಲ್ಲಿ ಸದಾ ಒಂದು ಹೆಜ್ಜೆ ಮುಂದಿದ್ದ ಸಂಸ್ಥೆ ಯುವ ಜನಾಂಗಕ್ಕೆ ಬೇಕಾದ ಪ್ರೇಮಕಥೆಯನ್ನು ಪುನೀತ್ ಮೊದಲ ಚಿತ್ರಕ್ಕೆ ಆಯ್ಕೆ ಮಾಡಿತ್ತು.  ಈ ದೊಡ್ಡಮಟ್ಟದ ನಿರೀಕ್ಷೆಯನ್ನು ಪುನೀತ್ ಮುಟ್ಟಬಲ್ಲರೇ ಎಂಬ ಸಣ್ಣ ಅನುಮಾನದಿಂದಲೇ ಥಿಯೇಟರಿಗೆ ಕಾಲಿಟ್ಟ ಜನಕ್ಕೆ ಆನಂದದ ಅಚ್ಚರಿ ಕಾದಿತ್ತು. ಯುವ ಜನರಿಗೆ ಬೇಕಾದ ಎಲ್ಲವೂ ಚಿತ್ರದಲ್ಲಿತ್ತು. ಅದಕ್ಕಿಂತಲೂ ಮುಖ್ಯವಾಗಿ ರಾಜ್ ಸಂಸ್ಥೆಯಿಂದ ಜನ ನಿರೀಕ್ಷಿಸುತ್ತಿದ್ದ ಕೌಟುಂಬಿಕ ಅಂಶಗಳು ಚಿತ್ರದಲ್ಲಿತ್ತು. ಮಧ್ಯಮ ಕುಟುಂಬಗಳಲ್ಲಿ ಕಾಣಬರುವ ತಾಯಿ-ಮಗನ ಅನುಬಂಧ, ತಂದೆ ಜೊತೆಗಿನ ಸೈದ್ಧಾಂತಿಕ ಮುನಿಸು ಚಿತ್ರದಲ್ಲಿ ಪ್ರೇಮಕಥೆಯ ಜೊತೆ ಜೊತೆಗೆ ಸಾಗಿತ್ತು. ಇದರ ಜೊತೆಗೆ ಪುನೀತ್ ರ ಲವಲವಿಕೆಯ ಅಭಿನಯ, ಫೈಟ್ ಹಾಗೂ ಡ್ಯಾನ್ಸ್ ಯುವಕರನ್ನು, ಮಕ್ಕಳನ್ನು ಕ್ಷಣಮಾತ್ರದಲ್ಲಿ ಆಕರ್ಷಿಸಿತು. ಮುಜುಗರವಿಲ್ಲದೆ ನೋಡಬಹುದಾದ ಸಿನಿಮಾ ಎಂಬ ಖಾತ್ರಿ ಇಡೀ ಕುಟುಂಬವೇ ಚಿತ್ರಮಂದಿರಗಳತ್ತ ಮುಗಿಬೀಳುವಂತೆ ಮಾಡಿತು.

ಅಲ್ಲಿಂದ ಪುನೀತ್ ಹಿಂದಿರುಗಿ ನೋಡಲೇ ಇಲ್ಲ. ಕೌಟಂಬಿಕ ಪ್ರೇಕ್ಷಕ ಪುನೀತ್ ಕೈಬಿಡಲಿಲ್ಲ. ಪುನೀತ್ ಸಹ ತನ್ನ ಪಟ್ಟು ಸಡಿಲಿಸಲಿಲ್ಲ, ಯಶಸ್ಸನ್ನು ತಲೆಗೇರಿಸಿಕೊಳ್ಳಲಿಲ್ಲ. ತನ್ನ ಚಿತ್ರಗಳನ್ನು ಇಡೀ ಕುಟುಂಬವೇ ಬಂದು ನೋಡಲು ಯಾವುದೇ ಅಡ್ಡಿ ಇಲ್ಲದಂತಹ ಚಿತ್ರಕಥೆಗಳನ್ನು ಆಯ್ಕೆ ಮಾಡುವಲ್ಲಿ ಎಚ್ಚರವಹಿಸುತ್ತಾ, ಚಿತ್ರ ನಿರಾಸೆ ಮೂಡಿಸಿದರೂ ತಾನು ನಿರಾಸೆ ಮೂಡಿಸದಂತೆ ಪುನೀತ್ ಗಮನ ಹರಿಸಿದರು. ಡಾ.ರಾಜ್ ಪುತ್ರ, ಸೂಪರ್ ಸ್ಟಾರ್ ಎಂಬುದನ್ನು ನೆಚ್ಚಿಕೊಳ್ಳದೆ ದಿನದ ವ್ಯಾಯಮ, ಕಸರತ್ತು ತಪ್ಪಿಸಲಿಲ್ಲ. ಶ್ರಮ ಹಾಗೂ ಶ್ರದ್ಧೆಯನ್ನು ತೊರೆಯಲಿಲ್ಲ. ಇದರಿಂದಾಗಿ 20 ವರ್ಷ ಕಳೆದರೂ ಚಿತ್ರರಂಗದ ಅತ್ತ್ಯುತ್ತಮ ಫೈಟರ್, ಡ್ಯಾನ್ಸರ್ ಎಂಬ ಪಟ್ಟದ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ತನ್ನತನವನ್ನು ಬಿಟ್ಟು ಕೊಡಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವಿನಯ ಹಾಗೂ ತನ್ನ ಸಜ್ಜನಿಕೆಯನ್ನು ಬಿಡಲಿಲ್ಲ.

ಆದರೆ ಪುನೀತ್ ವ್ಯಕ್ತಿತ್ವ ಇಷ್ಟಕ್ಕೇ ಸೀಮಿತವಾಗಲಿಲ್ಲ. ಸೂಪರ್ ಸ್ಟಾರ್ ಗಿರಿ ಬರ ಮಾಡುವ ಎಲ್ಲಾ ಮಿತಿಗಳನ್ನು ಮೀರಿ ಹೊಸತನಕ್ಕೆ ತನ್ನನ್ನು ಒಡ್ಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಬಂದರು. ಕನ್ನಡದ ಕೋಟ್ಯಾಧಿಪತಿ ಆ ದಿಸೆಯಲ್ಲಿ ಒಂದು ಯಶಸ್ವಿ ಹೆಜ್ಜೆಯಾದರೆ, ’ಪೃಥ್ವಿ’ ’ಮೈತ್ರಿ’ ಅಂತ ಚಿತ್ರಗಳು ದಿಟ್ಟ ಹೆಜ್ಜೆಗಳಾದವು. ಪಿಆರ್ ಕೆ  ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳನ್ನು ತರುವ ಪ್ರಯತ್ನ ಮಾದರಿ ನಡೆಯಾಗಿತ್ತು.

ಅಷ್ಟೇ ಅಲ್ಲದೆ ಯಾವುದೇ ಇತರ ನಟರು ತಮ್ಮ ಚಿತ್ರಗಳಿಗೆ ಏನಾದರೂ ಪ್ರಮೋ ಬೇಕಾದರೆ ಅಥವಾ ಒಂದು ಹಾಡು ಹಾಡಬೇಕಾದರೆ ಪುನೀತ್ ಸದಾ ಸಿದ್ಧರಾಗಿರುತ್ತಿದ್ದರು. ಹಾಡಿನಿಂದ ಬಂದ ಸಂಭಾವನೆ ತಮ್ಮ ಟ್ರಸ್ಟ್ ಗೆ ಹೋಗುತ್ತಿದ್ದರೂ ಸಂಭಾವನೆಗಿಂತ ಇತರರ ಚಿತ್ರಗಳಿಗೆ  ತಮ್ಮ ಭಾಗವಹಿಸಿಕೆಯಿಂದ ಸಹಾಯವಾಗಲಿ ಎಂಬ ಭಾವನೆ ಹೆಚ್ಚಾಗಿತ್ತು. ಇದರಿಂದ ಅಪಾರವಾದ ಸ್ನೇಹಾವಲಯವನ್ನು ಸಂಪಾದಿಸುತ್ತಾ ಬಂದರು. ಸರ್ಕಾರದ ’ನಂದಿನಿ’ ಸಂಸ್ಥೆಗೆ ಮಾತ್ರವಲ್ಲದೆ, ಮತದಾನದ ಮಹತ್ವವೂ ಸೇರಿದಂತೇ ಅನೇಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ರಾಯಭಾರಿಯಾಗಿದ್ದರು.

ಒಂದೆಡೆ ತಮ್ಮ ಸಂಸ್ಥೆಯಿಂದ ಹತ್ತಾರು ಯುವ ನಿರ್ದೇಶಕರ ಹೊಸ ಪ್ರಾಜೆಕ್ಟುಗಳು,  ಯಾವ ಸ್ಟಾರ್ ನಟನೂ ಸುಲಭವಾಗಿ ಒಪ್ಪಿಕೊಳ್ಳಲಾಗದ ಪ್ರಾಯೋಗಿಕ ಚಿತ್ರಗಳಲ್ಲಿ ಅಭಿನಯಿಸುವ ಇಂಗಿತ, ಮತ್ತೊಂದೆಡೆ ಕರ್ನಾಟಕದ ಕಾಡುಗಳನ್ನು ಜಗತ್ತಿಗೆ ತೋರ ಬಯಸುವ ’ಗಂಧದ ಗುಡಿ’ ಎಂಬ ಸಾಕ್ಷ್ಯಚಿತ್ರ, ಮಲೆ ಮಾದೇಶ್ವರದ ಬಗೆಗಿನ ಒಂದು ವಿಡಿಯೋ ಸಾಂಗ್, ’ನಾ ನಿನ್ನ ಮರೆಯಲಾರೆ’ ಚಿತ್ರದ ರಿಮೇಕ್, ಕನ್ನಡ ಚಿತ್ರರಂಗವನ್ನು ತಾಂತ್ರಿಕವಾಗಿ ವಿಶ್ವಮಟ್ಟದಲ್ಲಿ ಏರಿಸುವಂತ ಚಿತ್ರಗಳು... ಹೀಗೆ ಸಾಲು ಸಾಲು ಕನಸುಗಳನ್ನು ಅರ್ಧಕ್ಕೆ ಬಿಟ್ಟು ಹೋಗಿರುವ ಪುನೀತ್ ಉಳಿಸಿರುವ ವಿಷಾದ ಸುಲಭದಲ್ಲಿ ಅಳಿಸಲಾಗದು. ಇವೆಲ್ಲಕ್ಕೂ ಮೀರಿದ ಸಾಮಾನ್ಯ ಜನರಿಗೆ ಬೇಕಾದ ರಂಜನೆ, ಒಬ್ಬ ಐಕಾನ್, ಒಂದು ಸಂಭ್ರಮ, ಒಂದು ಪ್ರೇರಣೆ ಎಲ್ಲವೂ ಕ್ಷಣಮಾತ್ರದಲ್ಲಿ ಮಾಯವಾಗಿದೆ. ದೊಡ್ಡಮಟ್ಟದಲ್ಲಿ ಅಭಿಮಾನಿಗಳಾಗಿದ್ದ ಮಕ್ಕಳು ಈ ಸಾವು ಎಂದರೆ ಏನು ಎಂದು ತಿಳಿಯದೆ ಗೊಂದಲದಲ್ಲಿವೆ.

ಅಂತೆಯೇ ಪುನೀತ್ ಏನೂ ತೀರ ಸರಳವಾಗಿ ಏನು ಬದುಕಲಿಲ್ಲ. ತಮ್ಮ ಜೀವನಶೈಲಿ, ತಮ್ಮ ನಡೆ ನುಡಿಯಿಂದಲೇ ಒಬ್ಬ ಐಕಾನ್ ಆಗಿ ಕಾಣಿಸಿಕೊಳ್ಳುತ್ತಾ ಹೋದರು. ಐಶಾರಾಮಿ ಜೀವನ ಶೈಲಿ, ಕಾರುಗಳು ತೋರಿಕೆಯಂತಾಗದೆ,  ಶ್ರಮ ಜೀವನ, ಶ್ರದ್ಧೆ ಹಾಗೂ ಶಿಸ್ತಿನ ಜೀವನದ  ಫಲಿತಾಂಶವೆಂಬಂತೆ ಬಿಂಬಿತವಾಯಿತು. ಎಲ್ಲರೊಂದಿಗೆ ಬರೆಯಬಹುದಾದ ಸ್ವಭಾವದಿಂದಾಗಿ ವಿಶಿಷ್ಟವಾದ ಒಂದು ಸ್ಥಾನವನ್ನು ಪುನೀತ್ ಜನಮನದಲ್ಲಿ ಗಳಿಸಿಕೊಳ್ಳುತ್ತ ಸಾಗಿದರು. ಬದುಕಿದ್ದಾಗ ಇದು ಮೇಲ್ಪದರದಲ್ಲಿ ಕಾಣುತ್ತಿದ್ದರೂ  ನಾಡಿನ ಜನರ ಮನಸ್ಸಿನಲ್ಲಿ  ಅವರು ಗಳಿಸಿದ ಸ್ಥಾನ ಅವರ ಅಕಾಲಿಕ ಅಗಲಿಕೆಯಿಂದ ಹೊರಬಂದಿತಷ್ಟೇ.  

ಇದರ ಜೊತೆಗೆ ಅವರ ಕಾಳಜಿ ಹಾಗೂ ಹೃದಯ ವೈಶಾಲ್ಯದ ಕಥೆಗಳು ಒಂದೊಂದೇ ಹೊರ ಬರುತ್ತಾ ಈ ನಾಲ್ಕು ತಿಂಗಳಲ್ಲಿ ಒಂದು ದಂತಕತೆಯಾಗಿ ಬೆಳೆಯುತ್ತಿರುವುದು ಆಶ್ಚರ್ಯವಾಗಿದೆ. ಎಲೆ ಮರೆಯ ಕಾಯಿಯಂತಿದ್ದ ಪುನೀತ್ ದಾನ-ಸಹಾಯ ಹಾಗೂ ಮುಂದಿನ ಕನಸುಗಳ ಕಥೆಗಳು ಜನರ ಮನಸ್ಸಿನಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದೆ.

 ಒಬ್ಬ ವ್ಯಕ್ತಿಯ ಸಾವಿಗೆ ಮನಸ್ಸಿನಲ್ಲಿ ವ್ಯಥೆ ಪಡುವುದು ಸಹಜ, ಆದರೆ ಅಂತಹ ಉಸಿರುಗಟ್ಟುವ ಸಾಲಿನಲ್ಲೂ ಮಕ್ಕಳೊಂದಿಗೆ ನಿಲ್ಲುವುದು, ಬಿಸಿಲು ಚಳಿ ಲೆಕ್ಕಿಸದೆ ಸಮಾಧಿಯನ್ನು ಸಂಧಿಸುವುದು, ಪ್ರತಿ ಹತ್ತು ಇಪ್ಪತ್ತು ಅಡಿಗೆ ಬ್ಯಾನರ್ ಕಟ್ಟಿ ಶ್ರದ್ಧಾಂಜಲಿ ತೋರುವುದು, ಇದೆಲ್ಲವೂ ಯಾವದೋ ಒಂದು ಅನನ್ಯ ಸಾಂಸ್ಕೃತಿಕ ಸಂಗತಿಯಾಗಿ ಬೆಳೆದುಕೊಂಡು ಬಂದಿದೆ. ಮತ್ತೆ ಇದು ಕೇವಲ ಸಿನಿಮಾ ನಟನ ಮೇಲೆ ತೋರುವ ಸಿನಿಮಾ ಪ್ರೀತಿ ಮಾತ್ರದಂತೆ ಕಾಣುತ್ತಿಲ್ಲ.

ರಾಜ್ ಮಗನಾಗಿದ್ದರಿಂದ ಸಿನಿಮಾ, ನಾಯಕ ಪಟ್ಟ ಸುಲಭವಾಗಿ ಸಿಕ್ಕಿತು ಎಂಬ ತಮ್ಮ ಬಗೆಗಿನ ಮಾತಿಗೆ ಎಂದೂ ತಲೆಕೆಡಿಸಿಕೊಳ್ಳದೆ, ಬಂದದ್ದನ್ನು ಉಳಿಸಿಕೊಂಡು, ಬೆಳಿಸಿಕೊಂಡು, ಅದನ್ನು ಹಂಚಿಕೊಂಡು ಬದುಕಿ ಮರೆಯಾದ ಪುನೀತ್ ಅನೇಕ ಪಾಠಗಳನ್ನು ಸಮಾಜಕ್ಕೆ, ಯುವಕರಿಗೆ ಅದರಲ್ಲೂ ಸಾರ್ವಜನಿಕ ಬದುಕಿನಲ್ಲಿರುವವರಿಗೆ ಬಿಟ್ಟು ಹೋಗಿದ್ದಾರೆ. ಇಂದು ಪುನೀತ್ ಸಾವಿಗೆ ದು:ಖಿಸುತ್ತಿರುವವರು, ಅವರನ್ನು ಹೃದಯದಲ್ಲಿ ಇರಿಸಿಕೊಂಡಿರುವವರು, ಅವರ ಸಿನಿಮಾ ಅಭಿಮಾನಿಗಳು ಮಾತ್ರವಲ್ಲ, ಅವರಿಂದ ನೇರವಾಗಿ ಸಹಾಯ ಪಡೆದವರು ಮಾತ್ರವಲ್ಲ, ಅವರ ಒಡನಾಡಿಗಳು ಮಾತ್ರವಲ್ಲ, ಇದಕ್ಕೆ ಹೊರತಾದ ಲಕ್ಷಾಂತರ ಜನ. ಜನರ ಸರಳ ನಿರೀಕ್ಷೆಗಳಿಗೆ ಸ್ಪಂದಿಸುವ,  ಜನ ಸಮುದಾಯದ ಪರವಾಗಿ ನಿಲ್ಲುವ, ಮಿಡಿಯುವವರನ್ನು ಸಾಮಾನ್ಯ ಜನ ತಮ್ಮ ಮನಸ್ಸಿನಲ್ಲಿ  ಎತ್ತರಕ್ಕೆ ಇರಿಸುತ್ತಾರೆ ಎಂಬ ನಿತ್ಯ ಸತ್ಯವನ್ನು ಉಳಿಸಿ ಹೋಗಿರುವ ಪುನೀತ್  ಒಂದರ್ಥದಲ್ಲಿ ಈ ನಾಡಿನ ನಿಜ ಹೀರೋಗಳಲ್ಲಿ ಒಬ್ಬರು.

ಪುನೀತ್ ಅನ್ನು ’ಅಂಬಾಸಿಡರ್ ಆಫ್ ಲವ್ – ಪ್ರೀತಿಯ ರಾಯಭಾರಿ’ ಎಂದು ಕರೆದ ನಟ ಶಿವಾಜಿ ಪ್ರಭುವಿನ ಮಾತು ಎಷ್ಟು ನಿಜವಲ್ಲವೇ

-  ಪ್ರಶಾಂತ್ ಇಗ್ನೇಷಿಯಸ್