Saturday 14 May 2022

'ಈಸಬೇಕು, ಈಸಿ ಜಯಸಬೇಕು' - ಪ್ರಶಾಂತ್ ಇಗ್ನೇಷಿಯಸ್



ಒಂದೋ ಎರಡನೆಯ ಕ್ಲಾಸ್ ಇರಬೇಕು. ನಮ್ಮಲ್ಲಿದ್ದ ಬುಕ್ ಗಳಲ್ಲಿ ಪಾಠಗಳ ಜೊತೆ ಅದರ ಚಿತ್ರಗಳೂ ಇರುತ್ತಿತ್ತು. ಹಾಗೆಯೇ ಒಂದು ಇಂಗ್ಲೀಷ್ ಬುಕ್ಕಿನಲ್ಲಿ ಒಂದು ಚಿತ್ರಆ ಕಡೆ ಒಂದು ನೇಣು ಹಗ್ಗ, ಇತ್ತ ಒಬ್ಬ ಪೊಲೀಸ್, ಇನ್ನೊಂದು ಕಡೆ ಒಬ್ಬ ಒಂದು ಹೆಂಗಸಿನ ಕಿವಿ ಕಚ್ಚುತ್ತಿದ್ದ ಚಿತ್ರ ಭಾರಿ ಸೆಳೆಯುತಿತ್ತು. ಕಿವಿಯಿಂದ ರಕ್ತ ಸೋರುತ್ತಿದ್ದ ಆ ಚಿತ್ರ ಭಯಂಕರವಾಗಿದ್ದರೂ ಮನಸ್ಸಿನಲ್ಲಿ ಹಾಗೆಯೇ ಅಚ್ಚೋತ್ತಿದೆ. ಆ ಕಥೆ ಎಲ್ಲರಿಗೂ ಗೊತ್ತಿರುವಂಥದ್ದೇ. ಸಣ್ಣ ವಯಸ್ಸಿನಲ್ಲೇ ಕಳ್ಳತನ ಕಲಿತು ಮುಂದೆ ದೊಡ್ಡ ದರೋಡೆಗಾರನಾದವನು ಮುಂದೆ ಕಾನೂನಿಗೆ ಸಿಕ್ಕಿ  ನೇಣುಗಂಬ ಸೇರುವ ಪ್ರಸಂಗ ಬರುತ್ತದೆ. ಕೊನೆಯ ಆಸೆಯಾಗಿ  ತನ್ನ ತಾಯಿಯನ್ನು ಕರೆಸಿಕೊಳ್ಳುವ ಅವನು, ಕಿವಿಯಲ್ಲಿ ಏನೋ ಹೇಳಬೇಕೆಂಬ ನೆಪದಲ್ಲಿ ತಾಯಿಯ ಕಿವಿಯನ್ನು ಬಲವಾಗಿ ಕಚ್ಚಿ ರಕ್ತ ಬರಿಸುತ್ತಾನೆ. ಕಾರಣ ತಾನು ಹುಡುಗನಿರುವಾಗಲೇ ತನ್ನನು ಸರಿಪಡಿಸಿ, ಸರಿಯಾಗಿ ಬೆಳಸಿ, ಕೆಟ್ಟ ಅಭ್ಯಾಸಕ್ಕೆ ಶಿಕ್ಷಿಸಿದ್ದರೆ, ತಾನು ನೇಣುಗಂಬ ಏರುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬುದು


ಬೇಸಿಗೆಯಲ್ಲಿ ಇದೆಲ್ಲಾ ನೆನಪಾಗಲು ಕಾರಣಗಳ ಸರಮಾಲೆ ದೊಡ್ಡದು
. ಕಳೆದ 122 ವರ್ಷಗಳಲ್ಲಿ ಅತ್ಯಂತ ಸುಡುವ ಏಪ್ರಿಲ್ ಈ ವರ್ಷದ್ದು ಎನ್ನುತ್ತಿದೆ ವರದಿಗಳು. ಆಶ್ಚರ್ಯವಿಲ್ಲ ದಾಖಲೆಗಳು ಮುರಿಯುವ ಕಾಲ ಬಂದಿದೆ ಹಾಗೂ ಹವಾಮಾನ  ವೈಪರೀತ್ಯಗಳು ಹೀಗೆ ಮುಂದುವರಿಯಲಿದೆ. ಆದರೆ ಕರೆಂಟು, ಫ್ಯಾನುಗಳು ಇಲ್ಲದ ಕಾಲದಲ್ಲಿ ಬಿಸಿಲನ್ನು ಅಂದಿನ  ಜನರು ಹೇಗೆ ನಿಭಾಯಿಸಿದರು ಎಂಬುದೇ ಕುತೂಹಲದ ಸಂಗತಿ. ಕೆರೆ ಮರ ಗಾಳಿಗಳಿದ್ದವು. ಈಗೆಲ್ಲವೂ ದುರ್ಭರ, ದುಬಾರಿ.     

ಬೆಂಗಳೂರಲ್ಲೂ ಬಿಸಿಲು ಸುಡುತ್ತಿದೆ. ಕಳೆದೆರೆಡು ಬೇಸಿಗೆಗಳು ಕೊರೋನಾಗೆ ಬಲಿಯಾದ ಪರಿಣಾಮ ಈ ವರ್ಷದ ಬೇಸಿಗೆ ರಜಕ್ಕೆ ಜನ ಸಿಡಿದೆದ್ದಿದ್ದಾರೆ. ಈಜುಕೊಳದಲ್ಲೆಲ್ಲಾ ನೀರಿಗಿಂತ ಮಕ್ಕಳದೇ ಕಲರವ. ಮಕ್ಕಳು ನೀರಿಗೆ ಬೀಳುವ ಸದ್ದಿಗಿಂತ ಪೋಷಕರು ಮಕ್ಕಳನ್ನು ಈಜಿನ ಕೋಚಿಂಗ್ ಸೇರಿಸುವ ಗದ್ದಲವೋ ಗದ್ದಲ. ಮನೆಯಲ್ಲಿ ಒಂದು ಸಣ್ಣ ಗ್ಲಾಸ್ ನೀರು ಕೂಡ ಫಿಲ್ಟರ್ ಆಗಬೇಕಿದ್ದರೂ ಇಲ್ಲಿ ಮಾತ್ರ ನೂರಾರು ಜನ ಆಡಿದ ಕೊಳದಲ್ಲೇ  ಯಾವುದೇ ಎಗ್ಗಿಲ್ಲದೆ ಮಕ್ಕಳನ್ನು ಖುಷಿಯಿಂದ ಇಳಿಸುತ್ತಾ ಇರುವುದು ನಿಜಕ್ಕೂ ಸಂತೋಷದ(?) ವಿಷಯ. ಈ ಅದೃಷ್ಟವಿರದ ಗ್ರಾಮಾಂತರ ಮಕ್ಕಳು ಹತ್ತಿರದ ಕೊಳಗಳಲ್ಲಿ ಈಜಲು ಹೋಗಿ ಮುಳುಗಿ ಹೋಗುವುದನ್ನು ಆಗ್ಗಾಗ್ಗೆ ಪತ್ರಿಕೆಗಳಲ್ಲಿ ಕೇಳುತ್ತಿರುತ್ತೇವೆ. ನೆಲ ಮಾತ್ರವಲ್ಲ ನೀರಲ್ಲೂ ಅಸಮಾನತೆ.

ಒಂದಷ್ಟು ಮಕ್ಕಳು ಖುಷಿಯಾಗಿ ನೀರಿಗೆ ಇಳಿದರೆ,  ನೀರಿಗೆ ಚಳಿಗೆ ಹೆದರುವ ಇನ್ನೊಂದಿಷ್ಟು ಮಕ್ಕಳನ್ನು ಪೋಷಕರೇ ಕೋಚ್ ಗಳ ಮೂಲಕ  ಕೊಳಕ್ಕೆ ತಳ್ಳುತ್ತಿದ್ದಾರೆ. 'ಈಸಬೇಕು, ಈಸಿ ಜಯಸಬೇಕು' ಎನ್ನುವುದು ನಿಜಕ್ಕೂ ಇಲ್ಲಿ ಅರ್ಥಪೂರ್ಣ, ಏಕೆಂದರೆ ಇಲ್ಲಿ ಈಜುವುದು ಸವಾಲೇ ಸರಿ, ಅರ್ಧದ ಅಡಿಗೂ ಮತ್ತೊಬ್ಬರು ಸಿಕ್ಕಿ ಕೈಕಾಲು ಆಡಿಸಲೂ ಜಾಗ ಇಲ್ಲದಂಥ ಪರಿಸ್ಥಿತಿಯಲ್ಲಿ 'ಈಸಿ ಜಯಸುವುದು' ಅಷ್ಟು ಈಸಿಯಲ್ಲ.

ಇದೆಲ್ಲವೂ ಒಳ್ಳೆಯದೇ ಅಲ್ಲವೇ? ತಮ್ಮ ಮಕ್ಕಳು ಎಲ್ಲಾ ರೀತಿಯಲ್ಲೂ ಜಯಸಬೇಕು, ಸನ್ನದ್ಧರಾಗಬೇಕು ಎನ್ನುವ ತಂದೆ ತಾಯಿಗಳ ಬಯಕೆ ಸಹಜವಾದುದ್ದೇ. ಅತ್ತ ಕ್ರಿಕೆಟ್ ಕೋಚಿಂಗ್ ಸೆಂಟರ್ ಗಳದ್ದು ಮತ್ತೊಂದು ಸಂಭ್ರಮ. ಅಲ್ಲೆಲ್ಲಾ ಮುಂದೆ ಐಪಿಲ್ ಆಡುವ ಕನಸು ಹೊತ್ತವರ, ಹೆತ್ತವರ ಸಾಲು. ಕ್ರಿಕೆಟ್ ಭಾರತದಲ್ಲಿ ಎಂದಿಗೂ ಜನಪ್ರಿಯ ಕ್ರೀಡೆಯೇ ಬಿಡಿ. 'ಉಳ್ಳವರು ಕೋಚಿಂಗ್ ಗೆ ಹೋಗುವರಯ್ಯ ನಾನೇನ ಮಾಡುವೆ ಬಡವನಯ್ಯಾ, ರೋಡೇ ಗ್ರೌಂಡು, ಗೋಡೆಯೇ ವಿಕೇಟಯ್ಯ' ಎಂಬ ಪರಿಸ್ಥಿತಿ ಈಗಿಲ್ಲ. ನಗರಗಳಲ್ಲಿ ಆದಷ್ಟು ಮಕ್ಕಳು ಕೋಚಿಂಗ್ ಸೇರಿರುತ್ತಾರೆ. ಏಕೆಂದರೆ ಅಲ್ಲಿ ಕ್ರಿಕೆಟ್ ಮಾತ್ರ ಕಲಿಸುವುದಿಲ್ಲ , ಅದು ಮುಂದಿನ ಹೆಜ್ಜೆಗೆ ಕೋಚಿಂಗ್ ರಹದಾರಿ.

ಅದೇ ರೀತಿ ಸ್ಕೇಟಿಂಗ್, ಸಂಗೀತ, ಕರಾಟೆ, ಡ್ಯಾನ್ಸ್ ಇವೆಲ್ಲದರ ಬೇಸಿಗೆ ಶಿಬಿರ, ಕ್ಲಾಸು, ಕ್ಯಾಂಪುಗಳಿಗೆ'ಎಲ್ಲಿಲ್ಲದ ಬೇಡಿಕೆ. ತಮಗೆ ಸಿಗದ ಸೌಲಭ್ಯ, ಅವಕಾಶಗಳು ತಮ್ಮ ಮಕ್ಕಳಿಗಾದರೂ ಸಿಗಲಿ, ಅವಕಾಶ ವಂಚಿತರಾಗದಿರಲಿ ಎಂಬ ಆಸೆ ತಂದೆ ತಾಯಿಯರದು. ಇವೆಲ್ಲವೂ ಮಕ್ಕಳ ಜೀವನದಲ್ಲಿ ಖಂಡಿತ ಉಪಯೋಗಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಮುದ್ರ, ನದಿಯಲ್ಲಿ ಈಜದಿದ್ದರೂ ಈಜು ಕಲಿಯುವುದರಿಂದ ನೀರಿನ ಭಯ ದೂರ, ದೇಹಕ್ಕೂ ವ್ಯಾಯಾಮ. ರಣಜಿ, ಐಪಿಲ್ ಆಡದಿದ್ದರೂ ಒಂದು ಕ್ರೀಡೆ ಬಯಸುವ ತಾಂತ್ರಿಕತೆ, ಕಲಾತ್ಮಕತೆ, ಶಿಸ್ತು, ಬದ್ಧತೆ, ಒಂದು ಸ್ಪರ್ಧೆಯ ಸಾಧಕ, ಬಾಧಕಗಳ ಪರಿಚಯವಂತೂ ಆಗುತ್ತದೆ. ಅದು ಜೀವನಕ್ಕೂ ಅನ್ವಯವಾಗುತ್ತದೆ. ಬ್ರೂಸ್ ಲೀಯಂತೆ ದುರಳರನ್ನು ಸದೆ ಬಡಿಯದಿದ್ದರೂ ನಮ್ಮದೇ ದೇಹದ ನಿಷ್ಕ್ರಿಯತೆ, ಸೋಮಾರಿತನದ ವಿರುದ್ಧದ ಹೋರಾಟವನ್ನು ಕರಾಟೆ ಕಲಿಸುತ್ತದೆ. ದೇಹದ ಮೇಲಿನ ಸಮತೋಲನವನ್ನು ಸ್ಕೇಟಿಂಗ್ ಕಲಿಸಿದರೆ, ಸಂಗೀತ ಮನಸ್ಸಿನ ಆಲಾಪನೆಗಳಿಗೆ ಸಾಧನವಾಗುತ್ತದೆ. ನೃತ್ಯ ದೇಹ ಮನಸ್ಸನ್ನು ನಿರಾಳಗೊಳಿಸಿದರೆ, ಇವೆಲ್ಲವೂ ನಮ್ಮದೇ ದೇಹದ ಅಗಾಧ ಸಾಧ್ಯತೆಯ ಪರಿಚಯವನ್ನು ನಮಗೆ ಮಾಡಿಸುತ್ತವೆ.

ಇವೆಲ್ಲವನ್ನೂ ಗಂಭೀರವಾಗಿ ತೆಗದುಕೊಂಡು ಅಭ್ಯಾಸಿಸಿದರೆ, ವೃತ್ತಿಯೇ ಆಗಿ, ಸಂಪಾದನೆಯ, ಶ್ರೀಮಂತಿಕೆಯ ಮೂಲವೂ ಆಗುತ್ತದೆ. ತಮ್ಮ ಮಕ್ಕಳು ಈಗಾಗಲಿ ಎಂಬ ತಂದೆ ತಾಯಿಗಳ ಕನಸಲ್ಲಿ ತಪ್ಪು ಹುಡುಕಲು ಸಾಧ್ಯವೇ?

ಆದರೆ ಎಲ್ಲಿ ಹುಡುಕಿದರೂ ಇಂದಿನ ಮಕ್ಕಳು ನಾಳೆಯ ಒಳ್ಳೆಯ ಪ್ರಜೆಗಳಾಗಲು, ಉತ್ತಮ ನಾಗರೀಕರಾಗಲು, ಅವರಲ್ಲಿ ಉತ್ತಮ ರಾಜಕೀಯ ಪ್ರಜ್ಞೆ ಮೂಡಿಸಲು, ಸಾಮಾಜಿಕವಾಗಿ ಜವಾಬ್ದಾರರನ್ನಾಗಿಸಲು ಯಾವುದೇ ಕ್ಲಾಸು, ಕ್ಯಾಂಪು ಸುಲಭವಾಗಿ ಕಾಣುತ್ತಿಲ್ಲ. ಕಂಡರೂ ಪೋಷಕರು  ಅಲ್ಲಿಗೆ ಮಕ್ಕಳನ್ನು ತುದಿಗಾಲಲ್ಲಿ ನಿಂತು ಸೇರಿಸಲು ಹಾತೊರೆಯುತ್ತಿರುವುದು ಕಾಣುತ್ತಿಲ್ಲ. ತುಂಬು ಕುಟುಂಬಗಳು ಮರೆಯಾಗಿ, ನೆರೆಯವರ ಜೊತೆಗಿನ ಒಡನಾಟಗಳು ಕರಗಿ, ತಂದೆ ತಾಯಿ ಸೇರಿದಂತೆ ಯಾರಿಗೂ ಸಮಯವೇ ಇಲ್ಲದಂತ ಸಮಯದಲ್ಲಿ ನಾವು ಮಕ್ಕಳನ್ನು ಟಿವಿ, ಇಂಟರ್ ನೆಟ್, ಮೊಬೈಲುಗಳ ಸುರ್ಪದಿಗೆ ಒಪ್ಪಿಸಿದ್ದೇವೆ. ಸಮಯ ಮಾಡಿಕೊಂಡು ಕೋಚಿಂಗ್ ಗಳಿಗೆ ಕರೆದುಕೊಂಡು ಹೋಗಿ ಬರುವ ನಡುವೆ 'ಈ ಸಮಾಜಕ್ಕೆ ಅಗತ್ಯವಾಗಿ ಬೇಕಾದ ಮಕ್ಕಳನ್ನು, ಯುವ ಪೀಳಿಗೆಯನ್ನು ಬೆಳೆಸುತ್ತಿದ್ದೇವೆಯೇ? ಎಂಬ ಪ್ರಶ್ನೆ, ಯೋಚನೆ ಯಾಕಾದರೂ ಬರಬೇಕು ಹೇಳಿ?

ದಿನವೂ ಈಜಾಡಲು ಸಾಧ್ಯವಿಲ್ಲ, ಕೊನೆಗೆ ಕ್ರೀಡೆಗಳನ್ನು ವೃತ್ತಿಪರವಾಗಿ ತೆಗದುಕೊಳ್ಳುವವರು ನೂರಕ್ಕೆ ಐದೋ ಹತ್ತೋ ಜನ. ನೃತ್ಯ ಸಂಗೀತಗಳಿಗೆ ಅದರದೇ ಸಮಾರಂಭಗಳು,  ಸಮಯವಿದೆ. ಕರಾಟೆ, ಸ್ಕೇಟಿಂಗ್ ನಮ್ಮ ಹವ್ಯಾಸಗಳು. ಆದರೆ ಇವುಗಳ ಬಗ್ಗೆ ಇಷ್ಟೊಂದು ಯೋಚಿಸುವ ನಾವು ದಿನವೂ ಆಹಾರ, ಗಾಳಿ, ಬೆಳಕಿನಷ್ಟೇ ಮುಖ್ಯವಾಗಬಹುದಾದ ಮಕ್ಕಳ ಮಾನಸಿಕ ಆರೋಗ್ಯ, ಸಾಮಾಜಿಕ ಸ್ವಾಸ್ಥ್ಯ, ಪ್ರಬುದ್ಧತೆ, ಪರಸ್ಪರ ಒಡನಾಟ, ಧಾರ್ಮಿಕ ಸಹಿಷ್ಣುತೆ, ಪರಿಸರ ಕಾಳಜಿ, ಸಾಮಾಜಿಕ ಶಿಸ್ತು ಹಾಗೂ ಸಂವಿಧಾನದ ಜ್ಞಾನದ ಬಗ್ಗೆ ತೋರುತ್ತಿರುವ ಅನಾದರ ಅಪಾಯಕ್ಕಾರಿ. ಇವೆಲ್ಲವನ್ನೂ ಮಕ್ಕಳಿಗೆ ಹೇಗೆ ಹೇಳಿಕೊಡುವುದು. ಅವರನ್ನು ಈ ವಿಷಯಗಳಲ್ಲಿ ಹೇಗೆ ತಯಾರು ಮಾಡುವುದು ಎಂಬ ಯೋಜನೆಗಳೇ ನಮಗಿಲ್ಲ.

ಒಂದು ಅಂದಾಜಿನ ಪ್ರಕಾರ 'ಆರ್ಟಿಫಿಷಲ್ ಇಂಟಲಿಜೆನ್ಸ್' ಎಂಬ ತಾಂತ್ರಿಕ ಪ್ರಗತಿಯಿಂದಾಗಿ, ಇಂದು ನಮ್ಮಲ್ಲಿ ಚಾಲ್ತಿಯಲ್ಲಿರುವ  ನೂರಕ್ಕೆ ಅರವತ್ತು ಉದ್ಯೋಗಗಳು ಇನ್ನು ಕೆಲವೇ ವರ್ಷಗಳಲ್ಲಿ ಇರುವುದಿಲ್ಲ. ಪ್ರತಿ ವರ್ಷವೂ ಕಾಲೇಜುಗಳಿಂದ ಹೊರಬರುವ ಲಕ್ಷಾಂತರ ಪದವೀಧರರಲ್ಲಿ ನೂರರಲ್ಲಿ ಅತ್ತ್ಯುತ್ತಮರಾದ ಮೊದಲ ಇಪ್ಪತ್ತೋ ಮೂವತ್ತೋ ಜನಕ್ಕೆ ಮಾತ್ರ ತಮ್ಮ ಇಷ್ಟದ ಕೆಲಸಗಳು ಸಿಗಬಹುದು. ಮಿಕ್ಕವರು ಮಿಕ್ಕ ಕೆಲಸಗಳು ಮಾಡಬೇಕಾಗುತ್ತದೆ. ತಮ್ಮ ಓದಿಗೆ ಸಂಬಂಧವಿಲ್ಲದ ಕೆಲಸಗಳಲ್ಲಿ ಅತೃಪ್ತ ಉದ್ಯೋಗಿಗಳ ಸಂಖ್ಯೆ ದೊಡ್ಡದಾಗುವ ಸಂಭವಗಳೇ ಹೆಚ್ಚು. ಇದು ಮುಂದಿನ ಪೀಳಿಗೆಯ ಮಾನಸಿಕ ಸ್ವಾಸ್ಥ್ಯದ ಮೇಲೆ ದೊಡ್ಡ ಪರಿಣಾಮ ಬೀರಬಲ್ಲದು. ಸಾಮಾಜಿಕ ಶಿಸ್ತು, ಬದ್ಧತೆಗಳಿಲ್ಲದೆ ಈಗಾಗಲೇ ಟ್ರಾಫಿಕ್ ಜಾಮ್ ಸೇರಿದಂತೆ ಸಾರ್ವಜನಿಕವಾಗಿ ನಾವು ಅನುಭವಿಸುತ್ತಿರುವ ಅನೇಕ ಕಷ್ಟಗಳು ನಮ್ಮ ಮುಂದೆಯೇ ಇದೆ. ಇನ್ನೂ ಪರಸ್ಪರ ಗೌರವ, ಸಹಿಷ್ಣುತೆಯ ಮಹತ್ವ ತಿಳಿಯದೇ ಹೋದರೇ ಇಂದು ನಾವು ಕಾಣುತ್ತಿರುವ ಧಾರ್ಮಿಕ, ಸಾಮಾಜಿಕ ಸಂಘರ್ಷಗಳು, ಬಿರುಕುಗಳು ಮತ್ತಷ್ಟು ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ.

ಭ್ರಷ್ಟಾಚಾರದ ಬಗ್ಗೆ ನಾವು ಮಾತಾಡುತ್ತೇವಷ್ಟೇ, ಆದರೆ ಆದೇ ಭ್ರಷ್ಟರೇ ನಮ್ಮ ನಾಯಕರು, ನಮ್ಮ ಆದರ್ಶಗಳಾಗಿರುವುದನ್ನು ನಾವೇ ಒಪ್ಪಿಕೊಂಡಿದ್ದೇವೆ. ನಗರಗಳಲ್ಲಿ ಬಿಡಿ ಒಂದು ಸಾಮಾನ್ಯ ಹಳ್ಳಿಯಲ್ಲೂ ಈಗ ನಾಯಕರಿಲ್ಲ ಮುತ್ಸದ್ಧಿಗಳಿಲ್ಲ. ಇರುವವರೆಲ್ಲಾ ರಾಜಕೀಯ ಧುರೀಣರು, ಹಣ ಅಧಿಕಾರದ ಪ್ರಭಾವಿಗಳು ಹಾಗೂ ತಮ್ಮ ಅಧಿಕಾರದಿಂದ ಮಾತ್ರವೇ ನಿಮ್ಮ ಕೆಲಸಗಳನ್ನು ಮಾಡಿಕೊಡಬಲ್ಲವರು. ತಮ್ಮವರಿಗೆ ಮತ ಹಾಕದವರನ್ನು ಗೋಳಾಡಿಸಿ,  ಆಡಿಸಬಲ್ಲವರು ಹಾಗೂ ಅದರಲ್ಲೇ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಬಲ್ಲವರು

ಇದೆಲ್ಲವೂ ಒಂದು ಪಿಡುಗು, ಆದರ್ಶವಲ್ಲ ಬದಲಾವಣೆ ಅಗತ್ಯ ಎಂದು ಮಕ್ಕಳಿಗೆ, ಯುವಕರಿಗೆ ಮನದಟ್ಟು ಮಾಡುವ ಪರಿ ಯಾವುದು? ಸಂವಿಧಾನ ಪ್ರಜ್ಞೆ, ನಮ್ಮ ಭಾರತೀಯತೆಯ ಸೊಬಗು, ಸೊಡಗುಗಳ ಬಗ್ಗೆ ಪರಿಚಯವೇ ಇಲ್ಲದೆ ಹೋದರೆ ಅದರ ಸೌಲಭ್ಯ, ರಕ್ಷಣೆಗಳು ದೂರದ ಮಾತೇ.

ಪರಸ್ಪರ ಒಡನಾಟವಿಲ್ಲದ,  ಓದಿನ ಹಂಬಲವಿಲ್ಲದ, ಪರಿಸರ ಕಾಳಜಿಯಿಲ್ಲದ ಸಮಾಜವು ಮುಂದೆ ಅನುಭವಿಸುವ ಕಷ್ಟ ನಷ್ಟಗಳಿಗೆ ನಾವು ಜವಾಬ್ದಾರಲ್ಲವೇ? ಬಿಸಿಲು ಸುಮ್ಮನೆ ಹೆಚ್ಚುತ್ತಿದೆಯೇ? ಮಳೆ ಸಮಯದಲ್ಲಿ ನೀರು ಸುಮ್ಮನೆ ಮನೆಗೆ ನುಗ್ಗುತ್ತಿವೆಯೇ? ನದಿಗಳು ತಮ್ಮಷ್ಟಕ್ಕೆ ತಾವೇ ಕಲುಷಿತಗೊಳ್ಳುತ್ತಿವೆಯೇ?

ಮುಂದಿನ ಜನಾಂಗ ಆ ಕಳ್ಳನಂತೆ ನೇಣಿಗೆ ಹೋಗಲಾರದೇನೋ? ಆದರೆ ನಮ್ಮ ಹಿಂದಿನ ಹಿರಿಯರು ನಮ್ಮನ್ನೇಕೆ ಇನ್ನಷ್ಟು ಪರಿಪಕ್ವವಾಗಿಸಲಿಲ್ಲ, ಪ್ರಭುದ್ಧರಾಗಿಸಲಿಲ್ಲ  ಎಂದು ನಮ್ಮ ಕಿವಿ ಕಚ್ಚಲು ಅವರು ಬರಬಹುದೇನೋ?

ಹೀಗೆ ಮುಂದುವರಿದರೆ ಬೇಸಿಗೆ ಮಾತ್ರವಲ್ಲ ಮುಂದೆ ಎಲ್ಲದರ ಬಿಸಿ ನಮಗೆ ಮುಟ್ಟುತ್ತದೆ. 

ಪ್ರಶಾಂತ್ ಇಗ್ನೇಷಿಯಸ್