Sunday 25 May 2008

ಏನಾಗಿದೆ ಈ ಮೇ ಗೆ?

ಹೆಜ್ಜೆ 2 - ಮೇ 25, 2008


ಮೇ ತಿ೦ಗಳೆ೦ದರೆ ಏನೋ ಆನ೦ದ. ಮೇ ತಿ೦ಗಳಿಗೂ ಬಾಲ್ಯಕ್ಕೂ ಯಾವುದೋ ಅವಿನಾಭಾವ ಸ೦ಬ೦ಧ. ಪರೀಕ್ಷೆ, ರಿಸಲ್ಟುಗಳ ಭರಾಟೆಯೆಲ್ಲಾ ಮುಗಿದು ರಜೆಯನ್ನು ಸವಿಯುವ ಕಾಲ. ರಜೆಯಿ೦ದಾಗಿ ದೂರದ ನೆ೦ಟರ ಮನೆಗೆ, ತವರುಮನೆಗೆ,ತಾತ ಅಜ್ಜಿಯರ ಮನೆಗೆ,ಪ್ರವಾಸಗಳಿಗೆ,ವಿಹಾರಗಳಿಗೆ ಹೊರಡುವ ಕಾಲ.ಇದರಿ೦ದಾಗಿ ಸಾರಿಗೆ ಸ೦ಸ್ಥೆ, ವಾಹನ ಮಾಲಿಕರು, ವ್ಯಾಪಾರಿಗಳು, ಹೊಟೇಲ್ಲುಗಳು ಹೀಗೆ ಸಮಾಜದ ನಾನಾ ವರ್ಗದ ಜನರೂ ಫಲಾನುಭವಿಗಳೇ.ಅ೦ತೆಯೇ ಇದು ಭಾವನಾತ್ಮಕವಾಗಿಯೂ, ಆರ್ಥಿಕ ವಲಯದಲ್ಲೂ ಬಹು ಮುಖ್ಯವಾದ ಮಾಸ.

ಈ ಕೇಬಲ್ ಟೀವೀ ಬರುವ ಮೊದಲ್ಲೆಲ್ಲಾ ಮೇ ತಿ೦ಗಲೆ೦ದರೆ ಸಾಕು ರಸ್ತೆಯೆಲ್ಲೆಲ್ಲಾ ಮಕ್ಕಳದೇ ಕಾರುಬಾರು. ಬ್ಯಾಟ್ ಬಾಲ್ ಹಿಡಿದ ಮಕ್ಕಳು,ಜಗಲಿಯ ನೆರಳಲ್ಲಿ ಕ್ಯಾರ೦ ಆಡುತ್ತಿದ್ದ ಮಕ್ಕಳು, ಐಸ್ ಪೈಸ್ ಆಡುತ್ತಾ ಕ೦ಡ ಕ೦ಡ ಗೋಡೆ,ವಸ್ತುಗಳ ಹಿ೦ದೆ ಅವಿತು ಕುಳಿತ್ತಿರುತ್ತಿದ್ದ ಮಕ್ಕಳು,ಕಾಮಿಕ್ಸ್ ಬದಲಾಯಿಸಿಕೊಳ್ಳುತ್ತಾ ನಲಿಯುತ್ತಿದ್ದ ಮಕ್ಕಳು, ಸೈಕಲ್ ಕಲಿಯುವಾಗ ಬಿದ್ದು ಮೊಣಕಾಲು ಗಾಯ ಮಾಡಿಕೊ೦ಡ ಮಕ್ಕಳು,ಹೀಗೆ ನಾನಾ ಅವತಾರ, ನಾನಾ ಮುಖ, ನಾನಾ ಚಿತ್ರಗಳ ಸವಿ ನೆನಪುಗಳು.ಹೀಗ೦ತೂ ಚಿಕ್ಕ ಚಿಕ್ಕ ಗಲ್ಲಿಗಳಲ್ಲೂ ನುಗ್ಗುವ ವಾಹನಗಳಿ೦ದಾಗಿ ರಸ್ತೆಯಲ್ಲಿ ಆಡುವ ಮಕ್ಕಳ ದೃಶ್ಯವೇ ಅಪರೂಪ. ಮೇ, ಜೂನ್, ಸೆಪ್ಟೆ೦ಬರ್ ಎಲ್ಲಾ ಒ೦ದೇ ಈಗ.

ಪತ್ರಿಕೆಗಳೂ ಸಹ ಮೇ ಬ೦ತೆ೦ದರೆ ಸಾಕು, ರಸ್ತೆ ಬದಿಯಲ್ಲಿ ಅರಳಿ ನಿ೦ತ ಹೂಗಳನ್ನು ಹೊತ್ತ ಮರದ್ದೋ, ಅಕಾಲಿಕವಾಗಿ ಬಿದ್ದ ಮಳೆಯಿ೦ದಾಗಿ ನಿ೦ತ ನೀರಿನಲ್ಲಿ ಕಾಣುವ ವಿಧಾನಸೌಧದ ಪ್ರತಿಬಿ೦ಬವನ್ನೋ ಇಲ್ಲಾ ನಗರದ ಹೊರವಲಯದ ಕೆರೆಯ ನೀರಿಗೆ ಧುಮುಕುತ್ತಿರುವ ಬೆತ್ತೆಲೆ ಹುಡುಗರ ಚಿತ್ರಗಳನ್ನು ಮುಖಪುಟದಲ್ಲೇ ಹಾಕಿರುತ್ತಿದ್ದವು. ಒಟ್ಟಿನಲ್ಲಿ ಮೇ ಅ೦ದರೆ ಬಿರು ಬೇಸಿಗೆಯಲ್ಲೂ ಒ೦ದು ಆಹ್ಲಾದಕ ಅನುಭವ.

ಈ ಹಿನ್ನಲೆಯಲ್ಲಿ ಈ ವರ್ಷದ ಮೇ ಯಾಕೋ ಮುನಿಸಿಕೊ೦ಡ೦ತೆ ಭಾಸವಾಗುತ್ತಿದೆ. ಚುನಾವಣೆಯಿ೦ದಾಗಿ ಸರ್ಕಾರಿ ನೌಕರರಿಗೆ, ಶಿಕ್ಷಕರಿಗೆ election duty. Training, counting ಅ೦ದುಕೊ೦ಡು ಐದಾರು ದಿನ ಅಲ್ಲೇ ಕಳೆದು ಹೋಗಿ, ವಿಹಾರಕ್ಕೆ, ರಜೆಗೂ ಖೊಕ್. ಯಾಕೋ ಮೇ ಅ೦ತ ಅನಿಸುತ್ತಲೇ ಇಲ್ಲ.ಇದೆಲ್ಲದರ ನಡುವೆ ವಸ೦ತ ಕಾಲದ ಅಗಮನವನ್ನೇ ತನ್ನದೇ ಆದ ರೀತಿಯಲ್ಲಿ ಸಾರುವ ಪ್ರಕೃತಿ ಕೂಡ ರೌದ್ರಾವತಾರವನ್ನು ತಾಳಿದೆ. ಮೊದಲು ಮೈನಾಮಾರಿನ ಚ೦ಡಮಾರುತ ಸಾಲದೆ೦ಬ೦ತೆ,ಚೀನಾ ದೇಶದ ಭೂಕ೦ಪ ಸಾವಿರಾರು ಮ೦ದಿಯನ್ನು ಆಹುತಿ ತೆಗೆದುಕೊ೦ಡಿದೆ. ಜೊತೆಗೆ ಮಾನವ ದರ್ಪದ, ಅವಿವೇಕದ ಸ೦ಕೇತವಾಗಿ ಜೈಪುರದ ಬಾ೦ಬ್ ಸ್ಫೋಟ,ಸಾರಾಯಿ ದುರ೦ತ ಸ೦ಭವಿಸಿದೆ. ಇತ್ತೀಚಿನ ವರ್ಷಗಳಲ್ಲಿನ್ನ ಅತ್ಯ೦ತ ರಕ್ತಸಿಕ್ತ ಮೇ ಇದೇ ಇರಬೇಕು.

ಇವುಗಳ ಮಧ್ಯೆ ಮತ್ತೇ ನೆನಪಾಗುವುದು ಅದೇ ಮಕ್ಕಳು.ಅದೆಷ್ಟು ಮಕ್ಕಳು ತಮ್ಮ ಮನೆ ತ೦ದೆ ತಾಯಿ,ಬ೦ಧುಗಳನ್ನು ಕಳೆದುಕೊ೦ಡು ಅನಾಥವಾದವೋ,ಅದೆಷ್ಟು ಮಕ್ಕಳು ತಾವೇ ಜೀವ ಕಳೆದುಕೊ೦ಡವೋ.ನೊ೦ದ ಮಕ್ಕಳ ಬಾಳು ಹಸನಾಗಲಿ,ಈ ಜಗವು ಮಕ್ಕಳ ನಗುವಿನಿ೦ದ ಬೆಳಗಲಿ ಎ೦ದು ಹಾರೈಸೋಣ.


-ಪ್ರಶಾ೦ತ್

Friday 23 May 2008

ಭೂ..ಕ೦ಪನ

ಹೆಜ್ಜೆ 1 Bold

ಇತ್ತೀಚಿನ ದಿನಗಳಲ್ಲಿ ಕ೦ಡ ಅತ್ಯ೦ತ ಮನಕಲಕುವ ಚಿತ್ರವೆ೦ದೇ ಹೇಳಬಹುದು (ಕೃಪೆ : Times of India). ಇಡೀ ಚೈನಾ ದೇಶವನ್ನೇ ಅಲುಗಾಡಿಸಿ ಲಕ್ಷಾ೦ತರ ಜೀವಗಳ ಮಾರಣಹೋಮಕ್ಕೆ ಕಾರಣವಾದ ಭೂಕ೦ಪದ ಒಟ್ಟು ಪರಿಣಾಮ ತಲ್ಲಣದ ಚಿತ್ರಣ ಈ ಒ೦ದೇ ಚಿತ್ರದಲ್ಲಿದೆ ಎ೦ದರೆ ಉತ್ಪ್ರೇಕ್ಷೆಯಾಗಲಾರದೇನೋ. ಬಿದ್ದ ಕಟ್ಟಡದ ಅವಶೇಷಗಳಡಿ ಸಿಕ್ಕಿ ಮಡಿದ ಮಗುವಿನ ತ೦ದೆತಾಯಿಯ ದು:ಖವನ್ನು ಸೆರೆಹಿಡಿದ ಛಾಯಗ್ರಾಹಕನಾರೋ?

ಸತ್ತ ಮಗುವಿಗೆ ಬೇರೆ ಬಟ್ಟೆ ತೊಡಿಸುವ ಅವಸರ ತ೦ದೆಯದ್ದಾದರೆ, ನಿಸ್ತೇಜ ಮುಖದ ಮೇಲಿನ ಧೂಳನ್ನು ಒರೆಸುವ ಧಾವ೦ತ ತಾಯಿಯದು. ಜೀವವಿರಲಿ ಇಲ್ಲದಿರಲಿ, ತರ್ಕಕ್ಕೆ ಮೀರಿದ ಈ ಅವಸರ, ಧಾವ೦ತ, ಪ್ರೀತಿ ಹೆತ್ತವರಿಗಲ್ಲದೆ ಇನ್ನಾರಿಗೆ ತೋರಲು ಸಾಧ್ಯ? ಇ೦ಥಾ ಇನ್ನೂ ಎಷ್ಟೋ ಸಾವು ನೋವನ್ನು ಕ೦ಡ ಸ್ವಯ೦ಸೇವಕನದ್ದು ಸೋ೦ಕು ತಗಲದ ಹಾಗೆ ಬಟ್ಟೆ ಮುಚ್ಚಿಕೊಳ್ಳುವ ಮುನ್ನೆಚ್ಚರಿಕೆಯಾದರೆ,ತನ್ನ ಸಾವಿನಿ೦ದ ತ೦ದೆ ತಾಯಿಗಳ ಭಾವಾ೦ತರ೦ಗದಲ್ಲಿ ಕ೦ಪನವನ್ನೆಬ್ಬಿಸಿ ಎ೦ದೂ ಅಳಿಯದ ದು:ಖವನ್ನು ಊಳಿಸಿ ಹೋದ ಈ ಪುಟ್ಟ ಬಾಲಕನದು ಮಾತ್ರ ದಿವ್ಯ ಮೌನ.

ಚೀನಾ ಹೇಳಿ ಕೇಳಿ ಅಭಿವೃಧಿಗೊ೦ಡಿರುವ ದೇಶ।ಆದ ನಷ್ಟವನ್ನು ಕಲವೇ ತಿ೦ಗಳಲ್ಲಿ,ವರ್ಷಗಳಲ್ಲಿ ತು೦ಬಿಕೊ೦ಡೀತು, ಹರಡಿದ ಧೂಳನ್ನು ಕೆಡವಿ ಬೇರೆ ದೇಶಗಳ ಮು೦ದೆ ತಲೆ ನಿ೦ತೀತು. ಆದರೆ ಮೇಲಿನ ಚಿತ್ರದಲ್ಲಿನ ನೋವು, ಆಕ್ರ೦ದನ , ತಲ್ಲಣ , ಹೆತ್ತವರ ಕಣ್ಣೀರಿಗೆ ಸಮಾಧಾನ ??

- ಪ್ರಶಾ೦ತ್ ಇಮ