Friday 25 June 2021

ಎಚ್ಎಸ್ವಿಯವರ ಹುಟ್ಟು ಹಬ್ಬ


ಪ್ರೀತಿಯ ಗುರುಗಳಾದ ಎಚ್ ಎಸ್ವಿ ಯವರ ಹುಟ್ಟು ಹಬ್ಬ ಜೂನ್ 23 ಎಂದು ತಿಳಿದಿರಲಿಲ್ಲ. ಅವರೊಬ್ಬ ಅಸಾಮಾನ್ಯ ಕವಿ, ಲೇಖಕ ಎಂದು ನನಗೆ ತಿಳಿಯುವ ಮೊದಲೇ ಸೆಂಟ್ ಜೋಸೆಫ್ಸ್ ಕಾಮರ್ಸ್ ಕಾಲೇಜಿನಲ್ಲಿ ಅವರ ಕನ್ನಡ ಪಾಠ ಕೇಳಿ ಅಭಿಮಾನಿಯಾಗಿದ್ದೆ. ಸರಿ ಸುಮಾರು ಮೂವತ್ತು ವರ್ಷಗಳ ನಂತರವೂ ಮುಂದುವರಿದಿದೆ.

ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಸಮಯದಲ್ಲಿ ಅವರ ಬಗ್ಗೆ ಬರೆದ ಒಂದು ಸಣ್ಣ (ದೊಡ್ಡ) ಲೇಖನವನ್ನೇ ಮತ್ತೆ ಬಳಸುತ್ತಿದ್ದೇನೆ (ಒಂದಷ್ಟು ಸಣ್ಣ ಬದಲಾವಣೆಗಳೊಂದಿಗೆ).

Belated birthday wishes sir! (ಕನ್ನಡದಲ್ಲಿ ಅದನ್ನು ಹೇಗೆ ಹೇಳುವುದು ಎಂದು ತಿಳಿಯದೆ)

--------------------------------------

ಬರೆಯಲು ಕುಳಿತರೆ ಈ ಚಳಿಗೆ ಏನು ಬರೆಯೋದು ಅನ್ನೋದೇ ಗೊತ್ತಾಗೋದಿಲ್ಲ ಅನಿಸುತ್ತದೆ. ಬರೆಯಲು ಕುಳಿತಾಗಲೆಲ್ಲ ನನ್ನಂಥವರಿಗೆ ಹೀಗೆ ಅನಿಸುವುದು. ಬೇಸಿಗೆಯಲ್ಲಿ ಸೆಖೆಯಿಂದಾಗಿ ಬರೆಯಲು ಆಗುವುದಿಲ್ಲ. ಮಳೆಗಾಲದಲ್ಲಿ ಕಿಟಕಿಯ ಪಕ್ಕ ನಿಂತು ಮಳೆ ನೋಡಬೇಕೆನಿಸುತ್ತದೆ. ವಸಂತದಲ್ಲಿ ಬರೆಯುತ್ತಾ ಕೂರುವುದುಂಟೆ? .

ಕಾಲ ಯಾವುದಿರಲಿ ಪಟ್ಟಾಗಿ ಕುಳಿತು ಬರೆದವರು, ಬರೆಯುತ್ತಿರುವವರು   ತೇಜಸ್ವಿ, ಎಚ್ ಎಸ್ ವಿ ಮುಂತಾದವರು. ನಾವು ಮುಂದಿನ ಭವಿಷ್ಯತ್ ಕಾಲಕ್ಕಾಗಿ ಕಾಯುತ್ತೇವೆ. ಅಂದ ಹಾಗೆ ನಮ್ಮ ನೆಚ್ಚಿನ ಡಾ.ಎಚ್ ಎಸ್ ವೆಂಕಟೇಶ್ ಮೂರ್ತಿಯವರು ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ ಚಳಿಗೆ ಬೇಕಾದ ಬೆಚ್ಚನೆಯ ಸಂತೋಷ ಮನಸ್ಸಿಗೆ. ನನಂಥ ಅವರ ಅನೇಕ ಅಭಿಮಾನಿಗಳಿಗೆ ಕೂಡ.

ಕಾವ್ಯ, ಕಥೆ, ಕಾದಂಬರಿ, ನಾಟಕ, ಅಂಕಣ, ಭಾವ ಗೀತೆ, ಸಿನಿಮಾ, ಸಿನಿಮಾ ಗೀತೆ ಕೊನೆಗೆ ಕಾದಂಬರಿ ಶೀರ್ಷಿಕೆ ಗೀತೆ ಹೀಗೆ ಎಲ್ಲಾ ಪ್ರಕಾರಗಳಲ್ಲೂ ತಮ್ಮ ಸಾಹಿತ್ಯಿಕ ಕೈ ಚಳಕ ತೋರಿದವರು ಎಚ್ ಎಸ್ ವಿ. ಅಲ್ಲದೇ ಅನೇಕ ವರ್ಷಗಳ ಕಾಲ ಸೊಗಸಾಗಿ ಕನ್ನಡ ಪಾಠವನ್ನು ಮಾಡಿ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಸೊಬಗಿನ ರುಚಿ ತೋರಿಸಿದವರು.

ಪ್ರಸ್ತುತ  ಕನ್ನಡ ಸಾಹಿತ್ಯದ ಮಟ್ಟಿಗೆ ಅತ್ಯಂತ ಕ್ರಿಯಾಶೀಲವಾಗಿಯೂ, ಸೃಜನಶೀಲವಾಗಿಯೂ ತೊಡಗಿಸಿಕೊಂಡವರಲ್ಲಿ ಎಚ್ ಎಸ್ ವಿಯವರದು ಮೊದಲ ಸಾಲು. ಆಗೆಂದು ಪದ್ಮಾಸನ ಹಾಕಿ ಕುಳಿತು, ಘನ ಗಾಂಭೀರ್ಯದಿಂದ, ತಮ್ಮದೇ ಆದ ದ್ವೀಪದಲ್ಲಿ ಕುಳಿತು ಬರೆದವರೂ ಅಲ್ಲ. ಗಮನಿಸಿದರೆ ತಿಂಗಳಿಗೆ ನಾಲ್ಕಾರು ಸಮಾರಂಭಗಳಲ್ಲಿ ಅವರು ಭಾಗವಹಿಸಿದ, ಮಾತನಾಡಿದ ಚಿತ್ರಗಳನ್ನು ಪತ್ರಿಕೆಗಳಲ್ಲಿ ಕಾಣಬಹುದು. ಪುಸ್ತಕ ಬಿಡುಗಡಯಲ್ಲೂ ಇರುತ್ತಾರೆ, ಇನ್ಯಾವುದೋ  ಸಭೆ ಕವಿ ಸಮ್ಮೇಳನದಲ್ಲೂ ಇರುತ್ತಾರೆ.

ಇಷ್ಟೆಲ್ಲಾ ಸಮಾರಂಭಗಳಲ್ಲಿ ಭಾಗವಹಿಸಿದರೂ ಇಷ್ಟೆಲ್ಲಾ ಬರೆಯಲು ಹೇಗೆ ಸಾಧ್ಯವಾಗುತ್ತದೆ ಎಂಬುದಕ್ಕೂ ಅವರೇ  ಉತ್ತರಿಸುತ್ತಾರೆ. ದಿನಕ್ಕೊಂದು ಹೆಜ್ಜೆಯಿಟ್ಟರೆ ಕೈಲಾಸ” ಎಂಬಂತೆ ಪ್ರತಿದಿನ 1-2 ಗಂಟೆ ಬರೆದು ಬರೆದು 106 ಪುಸ್ತಕಗಳಾಗಿವೆ ಎಂಬ ಲೆಕ್ಕ ಕೊಡುತ್ತಾರೆ. 106 ಪುಸ್ತಕ ಅಷ್ಟು ಸುಲಭವಾಗಿ ಮೂಡಿ ಬಂದಿತೆ? ಎಂಬುದು ಪ್ರಶ್ನೆ. ಆದರೆ ಅದರ ಹಿಂದಿರುವುದು ಅವರ ಸಾಹಿತ್ಯ ಪ್ರೀತಿ ಮತ್ತು ಸಂಕಲ್ಪ ಶಕ್ತಿ. ಬರೆಯಬೇಕೆಂದರೆ ಎಲ್ಲಿ ಬೇಕಾದರೂ ಕುಳಿತು ಬರೆಯುತ್ತಾರೆ ಎಂಬುದಕ್ಕೆ ತಮ್ಮ ಮಗನ ಅನಾರೋಗ್ಯದ ಸಮಯದಲ್ಲಿ ಆಸ್ಪತ್ರೆಯಲ್ಲಿ ಕುಳಿತೂ ಬರೆದಿದ್ದರ ಬಗ್ಗೆ ಅವರ ಆಪ್ತರು ನೆನಪಿಸಿಕೊಳ್ಳುತ್ತಾರೆ.

ಹಿರಿಯರು ಬರೆಯದೆ ಉಳಿಸಿದ ಸಾಲುಗಳನ್ನು ನಾನು ಬರೆದೆ” ಎಂಬ  ವಿನೀತಭಾವವೂ ಅವರಲ್ಲಿದೆ. ಅವರ ಮಾತುಗಳನ್ನು, ಭಾಷಣಗಳನ್ನು ಕೇಳಿದಾಗಲೆಲ್ಲಾ ಒಂದು ಕವಿ  ಹೃದಯ ಹೇಗೆ ಕೆಲಸ ಮಾಡುತ್ತದೆ, ಹೇಗೆ ಯೋಚಿಸುತ್ತದೆ, ಒಬ್ಬ ಕವಿ ಲೇಖಕನ ಚಿಂತನಾಕ್ರಮದ ಬಗ್ಗೆ ಸ್ಪಷ್ಟ ಪರಿಚಯವಾಗುತ್ತದೆ.

ನಾನು ಓದಿದ ಸೆಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಎಚ್ ಎಸ್ ವಿ ಕನ್ನಡದ ಮೇಷ್ಟ್ರಾಗಿದ್ದರು ಎಂಬ ರೋಮಾಂಚನ ನನ್ನಲ್ಲಿ ಇನ್ನೂ ಇದೆ. ಅದು ಕಾಮರ್ಸ್ ಕಾಲೇಜಾಗಿದ್ದರೂ ಭಾಷಾ ವಿಷಯಗಳಲ್ಲಿ ಒಬ್ಬೊಬ್ಬರೂ ದಿಗ್ಗಜ ಪ್ರಾಧ್ಯಾಪಕರೇ. ಕನ್ನಡವನ್ನು ಎಚ್ ಎಸ್ ವಿ ಹೇಳಿ ಕೊಡುತ್ತಿದ್ದರೆ, ಇಂಗ್ಲಿಷ್ ಪಾಠ ಜಿ.ಕೆ.ಗೋವಿಂದರಾವ್ ರವರದು.  ಹಿಂದಿಗೆ  ಮತ್ತೊಬ್ಬ ಸಹೃದಯಿ ಅಮ್ಮಾನ್ನುಲ್ಲಾರವರ ಸಾರಥ್ಯ.      

ಜಿ ಕೆ ಗೋವಿಂದರಾಯರ ಗತ್ತು, ರಾಬರ್ಟ್ ಫ್ರಾಸ್ಟ್ ಕವಿತೆಗಳನ್ನು ವಿವರಿಸುತ್ತಿದ್ದ ಪರಿ, ಜೂಲಿಯಸ್ ಸೀಸರ್ ನಾಟವನ್ನು ಓದುತ್ತಿದ್ದ ಭಂಗಿ ಎಲ್ಲವೂ ರೋಮಾಂಚಕ ಅನುಭವವೇ.  ಇತ್ತ ಎಚ್ಎಸ್ವಿಯವರದು ನಿರ್ರಗಳವಾಗಿ ಸಣ್ಣದಾಗಿ ಹರಿಯುವಂತ ಝರಿಯಂತ ಪಾಠ. ಅವರ ಪಾಠ ಕೇಳುವುದೇ ಭಾಗ್ಯ ಎಂದುಕೊಳ್ಳುತ್ತಿದ್ದ  ನನ್ನಂಥವರ ಮಧ್ಯೆ ಅತ್ತ ಹಿಂದಿಯೂ ಬಾರದ ಇತ್ತ ಕನ್ನಡದ ಆಸಕ್ತಿಯೂ ಇಲ್ಲದ ವಿದ್ಯಾರ್ಥಿಗಳೂ ಇದ್ದರು. ಅವರ ಕೀಟಲೆಗೆ ಹೆಚ್ಚೆಂದರೆ ಎಚ್ಚೆಸ್ವಿಯವರ ಬಾಯಲ್ಲಿ ಬರುತ್ತಿದ್ದ ಬೈಗುಳ ಅವಿವೇಕಿ’.     

ನಿಟ್ಟಿನಲ್ಲಿ ಗೋವಿಂದರಾಯರದು ವ್ಯಾಘ್ರ ಕೋಪ. ಕಣ್ಣುಬಿಟ್ಟರೆ ವಿದ್ಯಾರ್ಥಿಗಳು ಗಪ್ ಚುಪ್. ಎಚ್ಚೆಸ್ವಿಯವರದು ಮಂದಹಾಸದ ಕೋಪ. ಇಂದಿಗೂ ಅವರು ವಿವರಿಸುತ್ತಿದ್ದ ಪಂಪ, ಕುಮಾರವ್ಯಾಸ, ಮುದ್ದಣ್ಣ, ಕುವೆಂಪು, ಬೇಂದ್ರೆ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ  ಕುಳಿತ್ತಿದ್ದಾರೆ. ಅದರಲ್ಲೂ ಯಶೋಧರ ಚರಿತೆ’ಯನ್ನೂ, ಅದರಲ್ಲಿನ ಅಷ್ಟಾವಕ್ರನ ಕ್ರೂರತೆಯನ್ನು ಎಚ್ಚೆಸ್ವಿಯವರ ಬಾಯಲ್ಲೇ ಕೇಳಬೇಕು. ಈಗದನ್ನು ಒಂದು ಪುಸ್ತಕವಾಗಿಯೂ ಹೊರ ತಂದಿದ್ದಾರೆ.   


ನಾನು
ಪಿಯುಸಿ ಓದುತ್ತಿದ್ದಾಗಲೇ ನಾಗಾಭರಣರ ಚಿನ್ನಾರಿಮುತ್ತ ಬಿಡುಗಡೆಯಾಗಿತ್ತು. ಅದರ ಹಾಡುಗಳ ಹುಚ್ಚು ನನಗಿಡಿದಿತ್ತು. ಆಡಿಯೋ ಕ್ಯಾಸೆಟ್ ತಂದು ನೋಡಿದ್ದರೆ ಅದರ ಹಾಡುಗಳೆಲ್ಲಾ ಎಚ್ ಎಸ್ ವಿ ಯವರದೇ.  “ನಾವು ಇರುವಾಗ ನಿನಗೇನು ಚಿಂತೆ” ಮಾರಿಷ ಮಾರಿಷಾ” “ಎಷ್ಟೊಂದು ಜನ ಇಲ್ಲಿ ಯಾರು ನನ್ನೋರು” ಹಾಡುಗಳೆಲ್ಲ ಇಂದಿಗೂ ಹಚ್ಚ ಹಸಿರು. ’ರೆಕ್ಕೆ ಇದ್ದರೆ ಸಾಕೆ’  ಹಾಡನ್ನು ನಾನಿಗಾಗಲೇ ಸಾವಿರ ಸಲ ಕೇಳಿರಬೇಕು.
 

ಅಧ್ಯಾಪಕರಾಗಿ ನಿವೃತ್ತರಾದ ಮೇಲಂತೂ ಎಚ್ಚೆಸ್ವಿಯವರ ಬರವಣಿಗೆ ಪಡೆದುಕೊಂಡಿರುವ ವೇಗ, ಅದಕ್ಕಿಂತ ಹೆಚ್ಚಾಗಿ ಅದರ ಆಳ ಅಗಲ ಅಚ್ಚರಿ ಮೂಡಿಸುವಂತದ್ದು. ಮೊನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅವರ 75ನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ಸಿಕ್ಕ ಅವರ ಪುಸ್ತಕಗಳನ್ನು ಬಾಚಿಕೊಂಡು ಬಂದೆ. ಅವುಗಳಲ್ಲಿ  ’ಕುಮಾರವ್ಯಾಸ ಕಥಾಂತರ’ ಓದುತ್ತಿದ್ದೇನೆ. ಕಾಲೇಜಿನ ಅವರ ಪಾಠಗಳು ನೆನಪಾಗುತ್ತಿವೆ. ಮುನ್ನುಡಿಯಲ್ಲಿ ಕೆ.ಸತ್ಯನಾರಾಯಣರವರು ಹೇಳಿದಂತೆ ’ನಮ್ಮೆದುರಿಗೆ ಕುಳಿತು ಮಾತಾಡುವ ಆಪ್ತ ಬಂಧುವಿನ ಧಾಟಿ”ಯಲ್ಲಿದೆ. ಸಾಹಿತ್ಯದ ಹೊರತಾಗಿಯೂ ಎಚ್ ಎಸ್ ವಿಯವರ ವ್ಯಕ್ತಿತ್ವದಲ್ಲಿಯೂ ಆದೇ ಆಪ್ತ ಬಾಂಧುತ್ವ.

ಕಾಲೇಜಿನಲ್ಲಿ ನಾನೊಮ್ಮೆ ಸ್ಪರ್ಧೆಯಲ್ಲಿ ಮುತ್ತಿನ ಹಾರ’ ಚಿತ್ರದ ದೇವರು ಹೊಸೆದ ಹಾಡು” ಹಾಡಿದೆ.  ಬಹುಮಾನ ಬರಲಿಲ್ಲ. ಅದಕ್ಕಿಂತಲು ಮಿಗಿಲಾದುದು ಕಾದಿತ್ತು.  ಹಾಡು ಮುಗಿಸಿ ಸ್ಟಾಫ್ ರೂಮಿನ ಮುಂದಿನ ಅಂಗಳದಲ್ಲಿ ಕ್ರಿಕೆಟ್ ಆಡುತ್ತಿದ್ದೆ. ಸ್ಟಾಫ್ ರೂಮಿನ ಬಾಗಿಲ ಬಳಿ ನಿಂತಿದ್ದ ಎಚ್ಚೆಸ್ವಿ ನನ್ನನ್ನು ಕರೆದು ಚೆನ್ನಾಗಿ ಹಾಡಿದ್ರಿ ಅಭ್ಯಾಸ ಮಾಡಿದರೆ ಒಳ್ಳೆ ಗಾಯಕನಾಗಬಹುದು” ಎಂದರು. ನಾನು ಅಭ್ಯಾಸ ಮಾಡಲಿಲ್ಲ, ಒಳ್ಳೆಯ ಗಾಯಕನಾಗಲಿಲ್ಲ. ಇನ್ನೊಮ್ಮೆ ನಮ್ಮ ಚಿಗುರು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದು ನನ್ನ ನಿರೂಪಣೆ ಕೇಳಿ ಭಾಷಣದಲ್ಲಿ ಭೇಷ್ ಅಂದಿದ್ದರು. ಅದರ ವಿಡಿಯೋದಲ್ಲಿ ಭೇಷ್’ ಅಂದ ಕಡೆ ಆಡಿಯೋ ಕಟ್ಟಾಗಿ, ವ್ಯಥೆ ಉಳಿದು ಹೋಗಿದೆ.     

ಒಂದಷ್ಟು ಯುವಕರನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಕುವೆಂಪು-ಬೇಂದ್ರೆ ಕುಮಾರವ್ಯಾಸ ಮುಂತಾದವರ ಬಗ್ಗೆ ಅವರ ಮಾತುಗಳನ್ನು ಕೇಳಿಸಿಕೊಂಡು ಬರಬೇಕು ಎನ್ನುವ ಯೋಜನೆ ಕೈಗೂಡಲೇ ಇಲ್ಲ. ಬಾರಿಯ ಸಾಹಿತ್ಯ ಸಮ್ಮೇಳನ ನಿಜಕ್ಕೂ ಅವರಿಂದ ಹೆಚ್ಚು ಮೆರಗು ಪಡೆಯುತ್ತದೆ ಎಂಬುದು ಖಾತ್ರಿ. ಅಧ್ಯಕ್ಷ ಭಾಷಣ ಕೇಳಲು ಗುಲ್ಬರ್ಗಕ್ಕೆ ಹೋಗೋದೇ ಎಂದು ಮನಸ್ಸು ಕೇಳುತ್ತಿದೆ. ನಾನಿನ್ನೂ ಉತ್ತರಿಸಿಲ್ಲ.

-ಪ್ರಶಾಂತ್ ಇಗ್ನೇಷಿಯಸ್