Monday 20 November 2017

ರಾಜ್ಯೋತ್ಸವ - ನೆನಪುಗಳನ್ನು ಬೆಚ್ಚಗೆ ಬಚ್ಚಿಟ್ಟುಕೊಳ್ಳೋಣ.

ಮತ್ತೊಂದು ಕನ್ನಡ ರಾಜ್ಯೋತ್ಸವ. ಮೊದಲಂತೆ ರಸ್ತೆಗಳಲ್ಲಿ ಸಮಾರಂಭಗಳು ಈಗಿಲ್ಲ. ಗಣೇಶ, ಅಣ್ಣಮ್ಮ ಉತ್ಸವಗಳೇ ಕಮ್ಮಿಯಾಗುತ್ತಾ ಬಂದಿರುವಾಗ ಇದರಲ್ಲಿ ಆಶ್ಚರ್ಯವಿಲ್ಲ.ಇತ್ತೀಚೆಗೆ ಹಬ್ಬಗಳ ಸಂಭ್ರಮ ಖಾಸಗಿಯಾಗುತ್ತಾ ಬರುತ್ತಿದೆ. ಹಿಂದಿನ ಸಾರ್ವಜನಿಕ ಪಾಲ್ಗೊಳ್ಳುವಿಕೆ ಈಗಿಲ್ಲ. ಮೊನ್ನೆಯ ದೀಪಾವಳಿ ಬಹಳ ಸಪ್ಪೆಯೇ.

ವರ್ಷಗಳ ಹಿಂದೆ ಬೆಂಗಳೂರಿನ ಸಂಪಗಿರಾಮನಗರದಲ್ಲಿರುವಾಗ ಆಯುಧ ಪೂಜೆಯ ದಿನ ಗೆಳೆಯರೆಲ್ಲಾ ಓಡಿ ಬಂದು ಕಂಠೀರವ ಕ್ರೀಡಾಂಗಣದ ಮುಂದಿನ ಮೆಟ್ಟಿಲುಗಳ ಬಂದು ನಿಲ್ಲುತ್ತಿದ್ದೆವು. ಪೂಜೆಯಿಂದ ವಿಧ ವಿಧವಾಗಿ ಅಲಂಕಾರಗೊಂಡ ಬಸ್ಸು ಲಾರಿಗಳ ಸಾಲುಗಳನ್ನು ನೋಡುವುದೇ ಕೆಲಸ. ಆಗಿನ್ನು ಟಿ.ವಿಗಳಲ್ಲಿ  ಚಾನಲ್ಲುಗಳ ಭರಾಟೆ ನಮ್ಮ ಸಮಯವನ್ನು ತಿಂದು ಹಾಕುತ್ತಿರಲಿಲ್ಲ. ಇಂಥಾ ಸಣ್ಣ ಪುಟ್ಟ ಸಂತೋಷಗಳೇ ಮೃಷ್ಟಾನ್ನ. ಚಕ್ರಕ್ಕೆ ಬಲೂನ್ ಕಟ್ಟಿಕೊಂಡ ಸೈಕಲ್ಲು ಮಾಡುತ್ತಿದ್ದ ಶಬ್ದ ಮಾಲಿನ್ಯಕ್ಕೆ ಯಾರೂ ಬೇಸರಪಟ್ಟುಕೊಳ್ಳುತ್ತಿರಲಿಲ್ಲ.

ನವೆಂಬರ್ ೧ ಬಂತೆಂದರೆ ಮತ್ತೊಂದು ಸಂಭ್ರಮ. ಸಂಜೆಯಾಗುತ್ತಿದ್ದಂತೆ ಮನೆ ಮಂದಿಯೆಲ್ಲಾ ಸಿಂಗರಿಸಿಕೊಂಡು , ಒಂದಷ್ಟು ಮುರುಕು ತಿಂಡಿಗಳೊಡನೆ ಬಂದು ನಿಲ್ಲುತ್ತಿದ್ದದ್ದು ಕಾರ್ಪರೇಷನ್ ಸರ್ಕಲ್‍ನ ಬಳಿ. ವಾಟಾಳ್ ನಾಗರಾಜ್, ಜಿ.ನಾರಾಯಣ್ ಕುಮಾರ್‌ರವರ ಸಂಘಟನೆಗಳು ಕಬ್ಬನ್ ಪಾರ್ಕಿನಿಂದಲೋ, ಮೈಸೂರ್ ಬ್ಯಾಂಕ್ ವೃತ್ತದಿಂದಲೋ ಹೊರಡಿಸಿಕೊಂಡು ಬರುತ್ತಿದ್ದ ವರ್ಣರಂಜಿತ ಮೆರವಣಿಗೆಗೆ ಜನರೆಲ್ಲಾ ಪುಳಕಗೊಳ್ಳುತ್ತಿದ್ದರು. ಕರ್ನಾಟಕದ ಸಾಂಸ್ಕೃತಿಕ  ಸ್ತಬ್ಧ ಚಿತ್ರಗಳು, ವಿವಿಧ ವೇಷಧಾರಿಗಳು, ಡೊಳ್ಳು ಕುಣಿತ, ಹತ್ತು ಹದಿನೈದು ಅಡಿಗಳ ಗೊಂಬೆಧಾರಿಗಳು, ಕನ್ನಡದ ಹಾಡುಗಳ ನಡುವೆ ನಡೆಯುತ್ತಿದ್ದರೆ, ಜನರ ಹರ್ಷೋದ್ಗಾರ ಕಬ್ಬನ್ ಪಾರ್ಕಿನ ತಂಗಾಳಿಗೆ ಸೆಡ್ಡು ಹೊಡೆದಂತಿರುತ್ತಿದ್ದವು.

ಕಾರ್ಪೋರೇಷನ್ ದಾಟಿ ಮೆರವಣಿಗೆ ಮುಂದೆ ಸಾಗುತ್ತಿದ್ದಂತೆ ಜನಜಂಗುಳಿ ಮಾರ್ಥಾಸ್ ಆಸ್ಪತ್ರೆ ಎದುರಿನ ಬನ್ನಪ್ಪ ಪಾರ್ಕಿನಲ್ಲಿ ಜಮಾಯಿಸುತ್ತಿತ್ತು. ಮುಂದೆ ಇಡೀ ನವೆಂಬರ್ ಆ ಪಾರ್ಕಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ. ಪ್ರತಿ ಸಂಜೆಯೂ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮ. ಅದೇನಾಯಿತೋ, ಇವೆಲ್ಲದರ ಆಕರ್ಷಣೆ ಕಮ್ಮಿಯಾಗುತ್ತಾ ಬಂದಿದೆ. ಬನ್ನಪ್ಪ ಪಾರ್ಕಿನಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆಯೇ ಗೊತ್ತಿಲ್ಲ.

ನಂತರದ ವರ್ಷಗಳಲ್ಲಿ  ರಾಜ್ಯೋತ್ಸವದ ಮುಂಜಾನೆ ಕಂಠೀರವ ಕ್ರೀಡಾಂಗಣದಲ್ಲಿ ಸರ್ಕಾರದ ವತಿಯಿಂದ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಕಿಕ್ಕಿರಿದು ಜನ ಸೇರುತ್ತಿದ್ದದ್ದು ಇನ್ನೂ ನೆನಪಿದೆ. ಕಂಠೀರವದ ಆ ಒರಟು ಸಿಮೆಂಟು ಮೆಟ್ಟಿಲ್ಲುಗಳು ತುಂಬೆಲ್ಲಾ ಬಿಳಿಯ ಬಣ್ಣದ ಸಮವಸ್ತ್ರ ಹಾಕಿಕೊಂಡು ಕುಳಿತ ವಿದ್ಯಾರ್ಥಿಗಳ ಸಾಲು ಮನಮೋಹಕ ದೃಶ್ಯವಾಗಿರುತಿತ್ತು. ಮೆಟ್ಟಿಲ ಇನ್ನೊಂದು ಬದಿಯ ಹುಲುಸಾದ ಹುಲ್ಲಿನ ಇಳಿಜಾರಿನ ಮೇಲೆ ಉರುಳಾಡುತ್ತಿದ್ದ ನೆನಪೂ ಆ ಹುಲ್ಲಿನಷ್ಟೇ ಹಚ್ಚ ಹಸಿರು. ಕೀಡಾಂಗಣದ ವೇದಿಕೆಯ ಮೇಲೆ  ಹೂವಿನ ಮಳೆ ಸುರಿಸಲು ಬರುತ್ತಿದ್ದ ಹೆಲಿಕಾಫ್ಟರ್ ಮಾಡುತ್ತಿದ್ದ ಸದ್ದಿಗೆ ಇಡೀ ಸಂಪಂಗಿರಾಮನಗರ, ಕಬ್ಬನ್ ಪೇಟೆ ಸುತ್ತಮುತ್ತಲಿನ ಜನರ ಚಿತ್ತವೆಲ್ಲಾ ಆಕಾಶದೆಡೆಯೇ.

ಅದೇ ಕಾರ್ಪರೇಷನ್ ಬಳಿಯ ಪಲ್ಲವಿ ಚಿತ್ರ ಮಂದಿರ ಒಂದು ಕಾಲದಲ್ಲಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುತಿತ್ತು. ಅದೇನಾಯಿತೋ ನಂತರ ಅದರ ಚಿತ್ತ ಪರಭಾಷೆ ಚಿತ್ರಗಳತ್ತ ಹರಿಯಿತು. ಅದೊಂದು ವರ್ಷ ನವೆಂಬರ್ ತಿಂಗಳಲ್ಲಿ ಹಾದು ಹೋಗುವಾಗ ನೋಡಿದ ದೃಶ್ಯ ಇನ್ನೂ ನೆನಪಿದೆ.  ರಸ್ತೆಗೆ ಮುಖ ಮಾಡಿಕೊಂಡಿದ್ದ ಚಿತ್ರಮಂದಿರದ ಸುಂದರ ಗಾಜಿನ ಕಿಟಕಿಯ ಮೇಲೆಲ್ಲಾ ಒಂದು ಸಣ್ಣ ಕಲ್ಲಿನಷ್ಟು ಗಾತ್ರದ ತೂತುಗಳು, ಕನ್ನಡದ ಗುರುತು ಎಂಬಂತೆ. ನಮಗೋ ಖುಷಿ. ಮುಂದಿನ ವರ್ಷದಿಂದ ನವೆಂಬರ್ ಮೊದಲ ವಾರ ತಪ್ಪದೆ ಕನ್ನಡದ್ದೇ ಯಾವುದಾದರೊಂದು ಚಿತ್ರ ನಡೆಯುತಿತ್ತು. ಗಾಜುಗಳ ಭದ್ರತೆಗಾಗಿ.

ನವೆಂಬರ್  ಬಂತೆಂದರೆ ನನ್ನ ಕಸಿನ್ ಜಾನ್ ಹಾಗೂ ನನ್ನ ಗಮನವೆಲ್ಲಾ ಪ್ರಜಾವಾಣಿಯ ’ನಗರದಲ್ಲಿ ಇಂದು’ ಕಾಲಮ್ಮಿನತ್ತವೇ. ಭಾನುವಾರಗಳು ಎಲ್ಲೆಲ್ಲಿ ರಾಜ್ಯೋತ್ಸವದ ಕಾರ್ಯಕ್ರಮವೋ ಅಲ್ಲೆಲ್ಲಾ ನಮ್ಮ ಹಾಜರಿ ಕಡ್ಡಾಯ. ಸಿನಿಮಾ ನಟರು ಬರುವ ಕಾರ್ಯಕ್ರಮಗಳಿಗೆ ಮೊದಲ ಆದ್ಯತೆ. ನಂತರ ಸಾಹಿತಿ, ಇನ್ನಿತರರು. ೯೦ರ ದಶಕದಲ್ಲಿ ಹಲಸೂರಿನಲ್ಲಿ ಕನ್ನಡ ಸೋಮು ಅಧ್ಯಕ್ಷತೆಯಲ್ಲಿ ಆಡಂಬರದ ರಾಜ್ಯೋತ್ಸವ ನಡೆಯುತಿತ್ತು. ಅಲ್ಲಿಗೂ ತಪ್ಪದೇ ಇರುತಿತ್ತು ನಮ್ಮ ಹಾಜರಿ. ಮುಖ್ಯ ಆಕರ್ಷಣೆ ಸಿನಿಮಾ ನಟರು ಹಾಗೂ ಅದ್ಭುತವೆನಿಸುವಂತ ಆರ್ಕೇಷ್ಟ್ರಾ.

ಹಾಗೆಯೇ ಒಂದಷ್ಟು ವರ್ಷಗಳ ಕಾಲ ಕನ್ನಡ ಚಿತ್ರ ಕಲಾವಿದರ ಸಂಘವು ಡಾ.ರಾಜ್ ನೇತೃತ್ವದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಸುತ್ತಿತ್ತು. ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಕಲಾವಿದರೆಲ್ಲ ಸೇರಿ ಒಂದಿಬ್ಬರು ಕಲಾವಿದರನ್ನು ಸನ್ಮಾನಿಸುವ ಕಾರ್ಯಕ್ರಮವದು. ನಮಂಥ ಪೀಚು ಪಡ್ಡೆ ಹುಡುಗರನ್ನು ಯಾರು ಒಳಗೆ ಬಿಟ್ಟಾರು? ಆದರೂ ಒಂದೆರೆಡು ಗಂಟೆ ಅಲ್ಲೇ ನಿಂತು ವಾಚ್‍ಮೆನ್‍ನನ್ನು ಆಸೆಯಗಣ್ಣಿನಿಂದ ನೋಡುತ್ತಾ, ಏನೂ ಮಾಡಿದರೂ ಅವನು ಇನ್ನೂ ಒಳಗೆ ಬಿಡುವುದಿಲ್ಲ ಎಂದು ಖಾತರಿಯಾದಾಗ ಅಲ್ಲಿಂದ ಹೊರಡುತ್ತಿದ್ದೆವು. ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಸರ್ಕಾರದ ಕಾರ್ಯಕ್ರಮ. ಇಂದಿಗೂ ಆ ಕಾರ್ಯಕ್ರಮ ನಮಂಥ ಸಾಮಾನ್ಯರಿಗೆ ಗಗನಕುಸುಮವೇ.

ಇನ್ನೂ ಎಲ್ಲಾ ಬಡಾವಣೆಗಳ ಪ್ರಮಖ ಸ್ಥಳಗಳಲ್ಲಿ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಹಾಡುಗಳದ್ದೇ ದರ್ಬಾರು. ’ಜೇನಿನ ಹೊಳೆಯೋ’ , ’ಕರುನಾಡ ತಾಯಿ ಸದಾ ಚಿನ್ಪಯಿ’, ಲಾಲಲಲಾ ಲಲಾಲಾ ಎಂದು ಪ್ರಾರಂಭವಾಗುವ ’ಇದೇ ನಾಡು ಇದೇ ಭಾಷೆ’ ಹಾಡುಗಳು ದಿನಪೂರ್ತಿ ಕಂಬದ ಮೇಲಿನ ಹಾರ್ನ್‍ಗಳಲ್ಲಿ ಮೊಳಗುತ್ತಿದ್ದವು. ಇನ್ನೂ ದೂರದರ್ಶನದ ಚಿತ್ರಮಂಜರಿಯಲ್ಲಿ ’ ಅಪಾರ ಕೀರ್ತಿ ಮೆರೆವ ಭವ್ಯ ನಾಡಿದು’ ಎನ್ನುತ್ತಾ ಸಾಗುವ ಸುದರ್ಶನ್‍ರ ದರ್ಶನ.

ಇಂದಿಗೂ ಉದ್ಯೋಗದ, ಓದಿನ  ಅನೇಕ ಸಣ್ಣ  ವಿಷಯಗಳನ್ನು ನೆನಪಿಟ್ಟುಕೊಳ್ಳಲು ಪರದಾಡುವ ನನಗೆ ರಾಜ್ಯೋತ್ಸವ ಎಂದಾಕ್ಷಣ ಬಂದ ಸವಿಸ್ತಾರ ನೆನಪುಗಳು ಅದೆಷ್ಟೋ? ಮನಸ್ಸಿಗೆ ಹತ್ತಿರವಾದುದ್ದನು ಜೋಪಾನವಾಗಿ ಎತ್ತಿಟ್ಟು, ಬೇಕಾದಗ ಕೊಡುತ್ತಾ, ಮೆತ್ತೆಲ್ಲವನ್ನು ಕಾಲದ ಕಸದ ಬುಟ್ಟಿಗೆ ಎಸೆಯುವ ಮಹಾ ಚಾಣಕ್ಯ ಈ ’ನೆನಪೆಂಬ ಮಹಾಶಯ’

ಕೇಬಲ್ ಟಿ.ವಿ ಬಂದು ಈ ಎಲ್ಲಾ ಸಂಭ್ರಮಗಳನ್ನು ಕಸಿದುಕೊಂಡಿತೇ ಎಂಬ ಯೋಚನೆ ಸುಳಿದರೂ, ಕಾಲಕ್ಕೆ ತಕ್ಕಂತೆ ಬದಲಾಗುವ ಅನಿವಾರ್ಯಕ್ಕೆ ನಾವೆಲ್ಲಾ  ಒಗ್ಗಿಕೊಳ್ಳಬೇಕಾಗಿದೆ. ಬದಲಾಗದೆ ಉಳಿಯಬೇಕಾಗಿರುವುದು ಕನ್ನಡ ಬಗೆಗಿನ ಪ್ರೀತಿ . ಕನ್ನಡದ ಯುವ ಮನಸ್ಸುಗಳು ಈ ನೆನಪುಗಳನ್ನು ಸದಾ ಜೀವಂತವಾಗಿಸಿಕೊಂಡರೆ ಮಾತ್ರ ತಮ್ಮದೇ ಆದ ಇನಷ್ಟು ನೆನಪುಗಳನ್ನು ಈ ಮಣ್ಣಲ್ಲಿ ಉಳಿಸಬಲ್ಲರು. 

ಪ್ರತಿ ರಾಜ್ಯೋತ್ಸವದ ಸಮಯದಲ್ಲಿ ಮೂಡುವ ಮತ್ತೊಂದು ಪ್ರಶ್ನೆ ಎಂದರೆ ನಮ್ಮ ಚರ್ಚ್‍ಗಳಲ್ಲಿನ ನಮ್ಮ ಕನ್ನಡದ ಪರಿಸ್ಥಿತಿ ಬಗ್ಗೆ. ನಮ್ಮದೇ ಚರ್ಚ್‍ಗಳಲ್ಲಿ ಕನ್ನಡವೆಂಬುದು ಪ್ರೀತಿಯ, ಆಡಳಿತದ, ಪ್ರಧಾನವಾದ ಭಾಷೆ ಆಗಿದೆಯೇ? ಎಂಬ ಪ್ರಶ್ನೆ ನಮ್ಮೆಲ್ಲರ ಮುಂದಿದೆ. ಉತ್ತರಿಸುವ, ಕನ್ನಡವನ್ನು ಎತ್ತರಿಸುವ ಸೌಜನ್ಯ, ಪ್ರೀತಿಯ ಕೊರತೆಯಿಂದಾಗಿ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.


ಕನ್ನಡದ ಯುವ ಮನಸ್ಸುಗಳ ಕನ್ನಡವನ್ನು ಅರಳಿಸುತ್ತಾರೆ ಎಂಬ  ಭರವಸೆಯಲ್ಲೇ ನೆನಪುಗಳನ್ನು ಬೆಚ್ಚಗೆ ಬಚ್ಚಿಟ್ಟುಕೊಳ್ಳೋಣ.

Wednesday 1 November 2017

ಕನ್ನಡವೆಂದರೆ......

ಕನ್ನಡವೆಂದರೆ.....

ನನ್ನ ಪಾಲಿಗೊಂದು
ಕನವರಿಕೆ
ಮುಗಿಯದ
ಕನವರಿಕೆ....

ಕನ್ನಡವೆಂದರೆ.....
ಮನದೊಳಗಿನ
ಚಿರ ಚಟುವಟಿಕೆ
ನಿಲ್ಲದ
ಚಡಪಡಿಕೆ.


ಕನ್ನಡವೆಂದರೆ.....
ತಂಗಾಳಿಯ
ಬೀಸಣಿಕೆ
ಮಿತಿಯಿಲ್ಲದ
ಹೃದಯವಂತಿಕೆ.

ಕನ್ನಡವೆಂದರೆ.....
ನನ್ನೀಭಾವಗಳ
ವೇದಿಕೆ
ನನ್ನೊಳಗಿನ
ಅಳಿಯದ ನಂಬಿಕೆ….

ಕನ್ನಡವೆಂಬುದು.....
ಆಗದಿರಲಿ
ಮರೀಚಿಕೆ
ಎಲ್ಲರೆದೆಯಲ್ಲಿ
ಉಳಿಯಲಿ
ಕನ್ನಡದ
ಕನವರಿಕೆ..... ಕನವರಿಕೆ

Friday 20 October 2017

ಮಿಥುನ್ ಬಿರಾಲ - ಸಂವಾದ


ಕ್ರಿಕೆಟ್ ಆಟದಲ್ಲಿ ಆಟಗಾರರು ಬಹು ಮುಖ್ಯ ಭಾಗ. ೨೨ ಜನ ಮೈದಾನದಲ್ಲಿ ಆಟವಾಡಿದರೆ, ತೆರೆಯ ಹಿಂದೆ ನೂರಾರು ಜನರ ಶ್ರಮವಿರುತ್ತದೆ. ಅಂತಹ ಒಂದು ಬಹು ಮುಖ್ಯ ಕಾರ್ಯಕ್ಷೇತ್ರವೆಂದರೆ ಪಂದ್ಯದ ರೆಫರಿಯ ಹುದ್ದೆ. ಅತ್ಯಂತ ಜವಬ್ದಾರಿಯ ಹಾಗೂ ಗೌರವಯುತವಾದ ಹುದ್ದೆಗೆ ತನ್ನದೇ ಆದ ಘನತೆಯಿದೆ. ಕರ್ನಾಟಕದ ಆಟಗಾರರಿಗೆ ವಿಶ್ವ ಕ್ರಿಕೆಟ್ನಲ್ಲಿ ಒಂದು ವಿಶಿಷ್ಠ ಸ್ಥಾನವಿದೆ. ಸಭ್ಯ ಕ್ರಿಕೆಟಿಗರೆಂದೇ ಖ್ಯಾತಿ ಪಡೆದ ನಮ್ಮದೇ ಆಟಗಾರರು ರೆಫರಿ ಹುದ್ದೆಯನು ಅಲಂಕರಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಈಗ ಮಿಥುನ್ ಬಿರಾಲ ಹುದ್ದೆಗೆ ಆಯ್ಕೆಯಾಗಿದ್ದಾರೆ. ೪೦ ವರ್ಷದ ಮಿಥುನ್ ರವರ ತಂದೆ ರಘುನಾಥ್ ಬಿರಾಲ ಸಹಾ ಹುದ್ದೆಯನ್ನು ನಿಭಾಯಿಸಿದವರೇ. ಇಂತಹ ಸಂದರ್ಭದಲ್ಲಿ ಮಿಥುನ್ರವರನ್ನು ಮಾತುಕತೆಯ ಪರವಾಗಿ ಅಭಿನಂದಿಸಿದಾಗ ನಡೆದ ಸಂವಾದ .

ಮಾ.- ನಮಸ್ಕಾರ ಮಿಥುನ್, ಮೊದಲಿಗೆ ಬಿಸಿಸಿಐ ನಿಯೋಜಿತ  ಮ್ಯಾಚ್ ರೆಫ಼ರಿ ಆಗಿ ಆಯ್ಕೆಯಾಗಿರುವ ನಿಮಗೆ ನಮ್ಮ ಮಾತುಕತೆ ಬಳಗ ಹಾಗೂ ಕಥೋಲಿಕ ಕ್ರೈಸ್ತರ ಪರವಾಗಿ ಅಭಿನಂದನೆಗಳು. ಪಾತ್ರದಲ್ಲಿನ ನಿಮ್ಮ ಮುಂದಿನ ದಿನಗಳಿಗೆ ನಮ್ಮ ಶುಭ ಹಾರೈಕೆಗಳು
ಮಿಥುನ್ ನಮಸ್ಕಾರ ಪ್ರಶಾಂತ್. ನಿಮಗೂ, ನಿಮ್ಮ ಪತ್ರಿಕೆಗೂ, ಎಲ್ಲಾ ಜನರಿಗೂ ನನ್ನ ಧನ್ಯವಾದಗಳು. ನಿಮ್ಮ ಅಭಿನಂದನೆಯೊಂದಿಗೆ ಪ್ರಾರಂಭಿಸುತ್ತಿರುವ ನನ್ನ ಹೊಸ ಇನ್ನಿಂಗ್ಸ್ಗಾಗಿ ನನಗಾಗಿ ಪ್ರಾರ್ಥನೆಯೂ ಇರಲಿ.

ಮಾ.- ನಿಮ್ಮ ತಂದೆ ರಘುನಾಥ್ ಬಿರಾಲ ಅವರೂ ಸಹಾ ಮ್ಯಾಚ್ ರೆಫರಿ ಆಗಿದ್ದವರು. ತಂದೆಯ ಹೊರತಾಗಿ  ರೆಫರಿಯ ಹುದ್ದೆ ಆಯ್ಕೆ ಮಾಡಲು ಪ್ರೇರಣೆ ಏನು? ಸ್ವತ: ಆಟಗಾರರಾಗಿದ್ದ ನೀವು ಕೋಚ್ ಅಥವಾ ತರಬೇತುದಾರರಾಗಬಹುದಿತ್ತಲ್ಲವೇ?
ಮಿಥುನ್ ಹೌದು ನಾನು ಆಸ್ಟ್ರೇಲಿಯಾದವರು ನೀಡುವ ೨ನೇ ಹಂತದ ಸರ್ಟಿಫೈಡ್ ಕೋಚ್. ವರ್ಷದ ರಣಜಿ ಸರಣಿ ಅರಂಭಗೊಂಡರೂ ಕೋಚ್ ಆಗಿ ನನಗೆ ಯಾವುದೇ ರಾಜ್ಯದಿಂದ ಕರೆ ಇನ್ನೂ ಬಂದಿಲ್ಲ. ಕರ್ನಾಟಕ ರಾಜ್ಯ ಸಂಸ್ಥೆಯಿಂದ ಅವಕಾಶ ಲಭಿಸಿದಾಗ, ಇದು ಸದ್ಯಕ್ಕೆ ಅತ್ತ್ಯುತ್ತಮ ಅವಕಾಶ ಎಂದೆನಿಸಿತು. ಕೋಚ್ ಹುದ್ದೆಯ ಅರ್ಹತೆ ಪಡೆದಿರುವುದರಿಂದ ಅದನ್ನು ಯಾವುದೇ ಸಮಯದಲ್ಲೂ ಮಾಡಬಹುದಾಗಿದೆ. ಆಟದೊಂದಿಗೆ ಯಾವುದಾದರೊಂದು ರೀತಿಯ ನಂಟನ್ನು ಉಳಿಸಿಕೊಳ್ಳಬೇಕಾಗಿರುವುದು ಮುಖ್ಯ ಎನಿಸಿತು. ಹುದ್ದೆಯನ್ನು ನಾನು ಸ್ವೀಕರಿಸಿರುವುದು ಸಂತಸ ತಂದಿದೆ.

ಮಾ.- ಪಂದ್ಯಗಳಲ್ಲಿ ಆಟಗಾರರ ನಡುವಳಿಕೆ ಬಗ್ಗೆ ಗಮನ ಹಾಗೂ ಪಂದ್ಯಕ್ಕೆ ಅಡಚಣೆ ಉಂಟಾಗುವ ಸಮಯದಲ್ಲಿ ಮ್ಯಾಚ್ ರೆಫರಿಗಳು ಕಾರ್ಯಪ್ರವೃತ್ತರಾಗುವ ಬಗ್ಗೆ ಕ್ರಿಕೆಟ್ ಪ್ರಿಯರಿಗೆ ಒಂದಷ್ಟು ಮಾಹಿತಿ ಇದ್ದರೂ, ಒಬ್ಬ ರೆಫರಿಯ ಇತರ ಕಾರ್ಯ ಚಟುವಟಿಕೆಗಳು ಯಾವುವು?
ಮಿಥುನ್ ಕ್ರೀಡೆಯಲ್ಲಿ ಆಟಗಾರರೇ ಅತಿ ಮುಖ್ಯ ಮತ್ತು ಅದು ನಡೆಯುವುದೇ ಅವರಿಂದ. ಆಟಗಾರರ ಮೈದಾನದೊಳಗೆ ತಮ್ಮ ಅತ್ತ್ಯುತ್ತಮ ಸಾಮಾರ್ಥ್ಯ ತೋರಲು ಬೇಕಾದ ಏನೆಲ್ಲಾ ಸೌಲಭ್ಯಗಳು ಇರಬೇಕೋ ಅದರೆಲ್ಲದರ ಕಡೆ ಗಮನ ಕೊಡಬೇಕು. ಒಬ್ಬ ಮ್ಯಾಚ್ ರೆಫರಿ ಆಟಗಾರರ ಗೆಳೆಯನಂತಿರಬೇಕೆ ವಿನಹ ಅವರ ಮೇಲೆ ಸವಾರಿ ಮಾಡಬಾರದು. ಹೌದು, ಆಟ ಲೋಕ ರೂಢಿಯ ಕ್ರೀಡಾ ಮನೋಭಾವದಿಂದ ನಡೆಯುತ್ತಿದೆ ಎಂಬುದನ್ನು ನಾವು ಖಚಿತ ಪಡಿಸಿಕೊಳ್ಳಬೇಕಾಗುತ್ತದೆ. ಕಟ್ಟುನಿಟ್ಟಾಗಿರಬೇಕಾಗಿದ್ದರೂ ಕಠೋರವಾಗಿರಲು ಸಾಧ್ಯವಿಲ್ಲ. ತೂಗಿಸಿಕೊಂಡು ಹೋಗಬೇಕಾಗುತ್ತದೆ. ಇದರೊಂದಿಗೆ ಮೈದಾನ ಹಾಗೂ ಕ್ರೀಡಾಂಗಣದಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ, ಆಟಗಾರರು ಉಳಿದುಕೊಳ್ಳುವ ಹೋಟೆಲ್ಲುಗಳ ಗುಣಮಟ್ಟ, ಆಟದ ವರದಿಗಾಗಿ ಸರಿಯಾದ ಅಂತರ್ಜಾಲ ವ್ಯವಸ್ಥೆ, ಮೈದಾನದಲ್ಲಿನ ಸಲಕರಣೆಗಳ ಗುಣಮಟ್ಟ ಹೀಗೆ ಎಲ್ಲದರ ಬಗ್ಗೆ ರೆಫರಿ ಗಮನ ಹರಿಸಬೇಕಾಗುತ್ತದೆ. ಒಟ್ಟಿನಲ್ಲಿ ಆಟಕ್ಕೆ ಆಟಗಾರರಿಗೆ ಯಾವುದೇ ತೊಂದರೆ ಆಗದಂತ ವಾತಾವರಣದ ಬಗ್ಗೆ ಸದಾ ಗಮನಹರಿಸಬೇಕಾಗುತ್ತದೆ.

ಮಾ. - ವಿಶ್ವ ಕ್ರಿಕೆಟ್ನಲ್ಲಿ ಕರ್ನಾಟಕದ ಕ್ರಿಕೆಟಿಗರು ತಮ್ಮ ಸಭ್ಯ ಕ್ರಿಕೆಟ್ ಎಂದು ಹೆಸರುವಾಸಿಯಾದವರು, ಒಂದು ಸಂಪ್ರದಾಯ ನಿಮ್ಮ ಹುದ್ದೆಯ ಮೇಲೆ ಹೇಗೆ ಪರಿಣಾಮ ಬೀರಬಹುದು. ಏಕೆಂದರೆ ಯಾವುದೋ ಒಂದು ನಡುವಳಿಕೆ ಒಂದು ಸಂಸ್ಕೃತಿಯಲ್ಲಿ ಬೆಳೆದ ಆಟಗಾರನಿಗೆ ತಪ್ಪೆನಿಸಿದರೆ  ಇನ್ನೊಬ್ಬನಿಗೆ ಅದು ಏನೂ ಅನಿಸದಿರಬಹುದು
ಮಿಥುನ್ - ಹೌದು ನಮ್ಮ ಆಟಗಾರರು ಉತ್ತಮ ನಡುವಳಿಕೆಗೆ ಹೆಸರುವಾಸಿ ಹಾಗೂ ಕ್ರಿಕೆಟ್ ಉತ್ತಮ ರಾಯಭಾರಿಗಳು. ಆದರೆ ಆಟಗಾರರು ಪರಸ್ಪರ ಆಡುತ್ತಲೇ ಇರುವುದರಿಂದ, ಹೇಗೆ ನಡೆದುಕೊಳ್ಳಬೇಕು ಹಾಗೂ ತಮ್ಮ ಮಿತಿಗಳನ್ನು ತಿಳಿದವರೇ ಆಗಿರುತ್ತಾರೆ. ಅದನ್ನು ಮೀರಿದ ಅಶಿಸ್ತಿನ ನಡುವಳಿಕೆಗೆ ನಿಯಮಗಳಿವೆ ಹಾಗೂ ಅದರ ಪ್ರಕಾರ ಅದೇಷ್ಟೇ ದೊಡ್ಡ ಆಟಗಾರನಾಗಿದ್ದರೂ ತಲೆ ಬಾಗಬೇಕಾಗುತ್ತದೆ

ಮಾ.-  ಮ್ಯಾಚ್ ರೆಫರಿ ಆಗಲಿ ಯಾವುದಾದರೂ ನಿರ್ದಿಷ್ಟವಾದ ಅರ್ಹತೆ ಇದೆಯೇ?
ಮಿಥುನ್ - ಹೌದು, ರೆಫರಿ ಆಗಬಯಸುವವರು ಕನಿಷ್ಠ ೨೦ ರಣಜಿ ಪಂದ್ಯಗಳನ್ನಾದರು ಆಡಿರಲೇ ಬೇಕಾಗುತ್ತದೆ.

ಮಾ.- ಇಂದಿನ ದಿನಗಳಲ್ಲಿ ಮ್ಯಾಚ್ ರೆಫರಿ ಹುದ್ದೆಯ ಸವಾಲುಗಳೇನು?
ಮಿಥುನ್ ಈಗ ಪ್ರತಿ ಪಂದ್ಯವೂ ಕ್ಯಾಮರಗಳಲ್ಲಿ ಚಿತ್ರೀಕರಣವಾಗುತ್ತದೆ. ಇದರಿಂದ ಅನುಕೂಲದೊಂದಿಗೆ ಒತ್ತಡವೂ ಇರುತ್ತದೆ. ಪಂದ್ಯದ ಪ್ರತಿ ಕ್ಷಣವನ್ನೂ ಗಮನಿಸಲು ಕ್ಯಾಮರಗಳು ಸಹಾಯಕ. ಅದೇ ನಿಟ್ಟಿನಲ್ಲಿ ನಮ್ಮಿಂದ ಯಾವುದೇ ಒಂದು ಲೋಪವಾದರೆ ಬೇರೆಯವರು ಅದನ್ನು ಎತ್ತಿ ತೋರಿಸುವ ಸಂಭವವೂ ಇದೆ.

ಮಾ.-  ಇನ್ನೂ ನಿಮ್ಮ ಕ್ರಿಕೆಟ್ ಜೀವನಕ್ಕೆ ಬಂದರೆ, ಪಾದಾರ್ಪಣೆ ಮಾಡಿದ ಮೊದಲ ವರ್ಷದಲ್ಲಿ ಅತಿ ಹೆಚ್ಚು ರನ್ನುಗಳನ್ನು ಹೊಡೆದ ದಾಖಲೆ ೧೭ ವರ್ಷಗಳಿಂದ ನಿಮ್ಮ ಹೆಸರಲ್ಲಿದೆ. ಆಟಗಾರನಾಗಿ ನಿಮ್ಮ ಆರಂಭದ ವರ್ಷಗಳ ಬಗ್ಗೆ ಹೇಳಿ?
ಮಿಥುನ್ ಕ್ರಿಕೆಟ್ ಕುಟುಂಬ ಹಿನ್ನಲೆಯಿಂದ ಬಂದವರಿಗೆ ಏರುಪೇರುಗಳು ಸಹಜ. ನಾನಾಡಿದ ಮೊಟ್ಟ ಮೊದಲ ಪಂದ್ಯದಲ್ಲಿ ಶತಕಗಳಿಸಿದ್ದೆ. ನನಗಾಗ ೧೩ ವರ್ಷ. ನಂತರ ಎಲ್ಲಾ ವಯೋಮಾನದ ತಂಡಗಳಲ್ಲೂ ನಾನು ಆಡಿದ್ದೇನೆ. ಕಿರಿಯರ ತಂಡದಲ್ಲಿ ದ್ವಿಶತಕ ಬಾರಿಸಿದ್ದು ನನಗೆ ರಣಜಿ ಪ್ರವೇಶಿಸಲು ಸಹಕಾರಿಯಾಯಿತು. ರಣಜಿ ತಂಡಕ್ಕೆ ಆಯ್ಕೆಯಾದ ಮೊದಲ ವರ್ಷ ನನಗೆ ಆಡಲು ಅವಕಾಶವೇ ಸಿಗಲಿಲ್ಲ. ನನ್ನ ತಂದೆ ಆಗ ತಂಡದ ಕೋಚ್ ಆಗಿದ್ದರು. ನನಗಿಂತ ಹಿಂದೆ ಬಂದವರಿಗೆಲ್ಲಾ ನನಗಿಂತ ಮುಂಚೆ ಅವಕಾಶ ಸಿಕ್ಕಿದು ನೋಡಿಯೂ ನನಗೆ ಏನೂ ಅನಿಸಲಿಲ್ಲ ಎಂದು ನಾನು ಹೇಳಿದರೆ ಅದು ಸುಳ್ಳಾಗುತ್ತದೆ. ಈಗ ಹಿಂದಿರುಗಿ ನೋಡಿದರೆ ನನ್ನ ತಂದೆಯ ಹುದ್ದೆಯ ಬಗ್ಗೆ ನನಗೇನು ಹೊಟ್ಟೆಕಿಚ್ಚಿಲ್ಲ. ಅವರದು ನಿಜಕ್ಕೂ ಕಷ್ಟದ ಕೆಲಸವೇ. ಕಷ್ಟದ ದಿನಗಳೇ ನನಗೆ ಮುಂದೆ ಅವಕಾಶ ಸಿಕ್ಕಾಗ ದಾಖಲೆಯ ರನ್ನು ಗಳಿಸಲು ಪ್ರೇರಣೆಯಾಯಿತು.

ಮಾ.- ನಿಮ್ಮ ಅಂದಿನ ಸಾಮರ್ಥ್ಯದ ಹಿನ್ನಲೆಯಲ್ಲಿ ನೋಡಿದಾಗ, ನೀವು ಕ್ರಿಕೆಟ್ನಲ್ಲಿ ಇನ್ನಷ್ಟು ಸಾಧಿಸಬಹುದಿತ್ತು ಎನಿಸುವುದಿಲ್ಲವೇ? ಅಂದು ನೀವು ಎದುರಿಸಿದ ಸವಾಲುಗಳೇನು?
ಮಿಥುನ್ ಹೌದು, ನಾನು ಇನ್ನಷ್ಟು ಸಾಧಿಸಬಹುದಿತ್ತು. ಆದರೆ ಅಂದು ನಾನು ಎಸ್. ಎಸ್. ದಾಸ್, ಆಕಾಶ್ ಚೋಪ್ರ, ಸೆಹ್ವಾಗ್, ಗೌತಮ್ ಗಂಭೀರ ಮುಂತಾದವರೊಂದಿಗೆ ಸ್ಪರ್ಧೆಯಲ್ಲಿದ್ದೆ. ಅವರ ಸಾಧನೆಗಳೇನು ಎಂಬುದು ಈಗ ಎಲ್ಲರಿಗೆ ತಿಳಿದಿದೆ. ಆದರಿಂದ ನನಗೆ ಯಾವುದೇ ರೀತಿಯ ವಿಷಾದವಿಲ್ಲ.

ಮಾ.- ಇಂದಿನ ಕ್ರಿಕೆಟ್ ಬದಲಾಗಿದೆಯೇ?
ಮಿಥುನ್ ಖಂಡಿತ. ಅಂದು ೨೫೦ ರಿಂದ ೨೭೫ ರನ್ನುಗಳು ಸ್ಪರ್ಧಾತ್ಮಕವಾಗಿದ್ದವು, ಇಂದು ೧೮೦ ರನ್ನುಗಳನ್ನು ೨೦ ಓವರುಗಳಲ್ಲಿ ಚಚ್ಚಿ ಬಿಸಾಡುತ್ತಾರೆ. ಹೆಚ್ಚು ರನ್ನುಗಳು, ರಂಗು ರಂಗಿನ ಬಟ್ಟೆ, ಅಡ್ಡಾದಿಡ್ಡಿ ಹೊಡೆತಗಳು ಎಲ್ಲಾ ಸೇರಿ ಕ್ರಿಕೆಟ್ ಮನೋರಂಜನೆಯ ಮಾಧ್ಯಮವಾಗಿದೆ. ಮೊದಲ ಎಸೆತದಿಂದಲೇ ಮನೋರಂಜನೆ. ಸಾಂಪ್ರದಾಯಿರಿಗೆ ಟೆಸ್ಟ್ ಕ್ರಿಕೆಟ್ ಇಷ್ಟ. ಅದರಲ್ಲಿ ಅಂತಹ ಬದಲಾವಣೆ ಆಗಿಲ್ಲ.

ಮಾ.- ಈಗಿನ ನಿಮ್ಮ ಮೆಚ್ಚಿನ ಕ್ರಿಕೆಟಿಗರು?
ಮಿಥುನ್ ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್, .ಬಿ.ಡಿವಿಲಿಯರ್ಸ್ ಹಾಗೂ ಜೋ ರೂಟ್

ಮಾ.- ಕ್ರಿಕೆಟ್ ಆಡುವುದನ್ನು ಬಿಟ್ಟು ರಂಗದಲ್ಲಿ ಯುವಕರಿಗೆ ಬೇರೆ ಉದ್ಯೋಗಾವಕಾಶಗಳು ಇವೆಯೇ?
ಮಿಥುನ್ ನಿಮ್ಮ ಅಭಿರುಚಿಗೆ ತಕ್ಕಂತೆ ಅನೇಕ ಅವಕಾಶಗಳಿವೆ. ವೀಕ್ಷಕ ವಿವರಣೆ, ಅಂಪೈರ್, ಸ್ಕೋರರ್, ಅಂಕಣ ತಯಾರಿಕೆ, ದೈಹಿಕ ಸಲಹೆಗಾರರು, ಕ್ಯಾಮರಾ ಮೆನ್, ಮಾಧ್ಯಮ ಪ್ರತಿನಿಧಿ ಹೀಗೆ ಅನೇಕ ಅವಕಾಶಗಳಿವೆ.

ಮಾ.- ವಂದನೆಗಳು ಮಿಥುನ್. ನಿಮ್ಮ ಹುದ್ದೆ ಅಂತರಾಷ್ಟ್ರೀಯ ಪಂದ್ಯಗಳಿಗೂ ಆದಷ್ಟು ಬೇಗ ವಿಸ್ತಾರಗೊಳ್ಳಲಿ ಎಂದು ಹಾರೈಸುತ್ತೇವೆ.
ಮಿಥುನ್ - ನಿಮ್ಮ ಹಾರೈಕೆಗೆ ಹಾಗೂ ಸಂವಾದಕ್ಕಾಗಿ ವಂದನೆಗಳು. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.