Thursday 19 September 2013

ಆಡಿಯೋ ಅನಿಸಿಕೆ : ಬೃಂದಾವನ

ಯಾವ ನಟನಿಗೆ ಯಾವ ರೀತಿ ಸಂಗೀತ, ಆಯಾ ನಟರ ಅಭಿಮಾನಿಗಳ ನಿರೀಕ್ಷೆ, ಅಪೇಕ್ಷೆಗಳ ಸುತ್ತ ಗಿರಕಿ ಹೊಡೆಯುತ್ತಾ, ನಿರ್ದೇಶಕ ಇಷ್ಟಪಡುವ ಸಂಗೀತವನ್ನು ಕೊಡುವ ಕಲೆ ಹರಿಕೃಷ್ಣರಿಗೆ ಸಿದ್ಧಿಸಿದೆ ಎಂದೇ ಹೇಳಬಹುದು. ತಮ್ಮದೇ ಆದ ಇತಿ ಮಿತಿಯಲ್ಲೇ ಆಯಾ ನಟ, ನಿರ್ದೇಶಕನಿಗೆ ತಕ್ಕಂತೆ ಹಾಡುಗಳನ್ನು ನೀಡುತ್ತಾ ವಿಭಿನ್ನವಾಗಿ ನಿಲ್ಲುವುದರಲ್ಲಿ   ಹರಿಕೃಷ್ಣ ಇತ್ತೀಚಿನ ದಿನಗಳಲ್ಲಿ ಗೆದ್ದಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ದರ್ಶನ್  ಅಭಿನಯದ ಬೃಂದಾವನ ಚಿತ್ರದ ಗೀತೆಗಳು ಇದಕ್ಕೆ ಇತ್ತೀಚಿನ ಉದಾಹರಣೆ. ದರ್ಶನ್ ರ  ಯಶಸ್ಸು, ಅಭಿಮಾನಿ ವೃಂದ, ಇಮೇಜ್ ಗೆ ತಕ್ಕುದಾದ ಹಾಡುಗಳು ಚಿತ್ರದಲ್ಲಿದೆ. ಈಗಾಗಲೇ ಹಾಡುಗಳು ಅಭಿಮಾನಿಗಳ ಮೆಚ್ಚುಗೆಯೂ ಪಡೆದಿದೆ.  ಹೇಗಿದೆ ಹಾಡುಗಳು ?


ಹಾರ್ಟಲ್ಲಿರೋ ಹಾರ್ಮೋನಿಯಂ : ಟ್ಯೂನ್ ಹಾಕಿದೆ ಈ ಮನಸ್ಸಿನ FM ನಲ್ಲಿ ನಿಂದೆ ಹಾಡಿದೆ ಎಂದು ಪ್ರಾರಂಭವಾಗುವ ಹಾಡನ್ನು ಟಿಪ್ಪು ತಮ್ಮ ಎಂದಿನ ಶೈಲಿಯಲ್ಲೇ ಹಾಡಿದ್ದಾರೆ. ಕವಿರಾಜ್ ರ ಸಾಹಿತ್ಯದಲ್ಲಿ ಕನ್ನಡದಷ್ಟೆ ಸಮನಾಗಿ ಇತರ ಭಾಷೆಗಳೂ ಸೇರಿಕೊಂಡಿವೆ. ಇದು ಈಗಿನ ಟ್ರೆಂಡ್ ಹೌದಾದರೂ ಅದೇನು ಅಷ್ಟು ಸುಲಲಿತವಾಗಿ ಸೇರದ ಭಾವನೆ ಮೂಡುತ್ತದೆ. ದರ್ಶನ್ ಹಾಗೂ ಅವರ ಅಭಿಮಾನಿಗಳನ್ನು ಮನಸಿನಲ್ಲಿಟ್ಟುಕೊಂಡೇ ಹರಿ ಈ ಹಾಡನ್ನು ಸಂಯೋಜಿಸಿದರೇನೋ ಎಂಬಷ್ಟು ಗಟ್ಟಿಯಾಗಿ ದರ್ಶನ್ ಗೆ ಈ ಹಾಡು ಒಪ್ಪುತ್ತದೆ.

ಬೆಳ್ಳಂ ಬೆಳಗಾ : ಬಹಳ ದಿನಗಳ ನಂತರ ಕೇಳ ಸಿಗುವ ಹೇಮಂತರ ಧ್ವನಿಯಿರುವ ಈ ಗೀತೆ, ಅವರಿಂದಾಗಿಯೇ ಇಷ್ಟವಾಗುತ್ತದೆ. ಕನ್ನಡ ಹಾಗೂ ಕನ್ನಡಾಭಿಮಾನದ ಬಗೆಗಿನ ನಾಗೇಂದ್ರ ಪ್ರಸಾದರವರ ಸಾಹಿತ್ಯಕ್ಕೆ ಹಾಗೂ ಗೀತೆಯ ಗ್ರಾಮೀಣ ಸೊಗಡಿನ ಲಯಕ್ಕೆ ಹೇಮಂತ್ ರವರನ್ನೇ ಆರಿಸಿಕೊಂಡಿರುವಲ್ಲಿ ಹರಿಯವರ ಜಾಣ್ಮೆ ಎದ್ದು ಕಾಣುತ್ತದೆ.
ಇಷ್ಟೆಲ್ಲಾ ಸಾಧನೆ ಹಾಗೂ ಪ್ರತಿಭೆಯ ನಡುವೆಯೂ ಮತ್ತೊಮ್ಮೆ ಶ್ರೇಯಾ ಘೋಷಲ್ ಹಳ್ಳಿ ಲಾವಣಿಯ ಧಾಟಿಯ ಗಾಯನದಿಂದ ಅಚ್ಚರಿ ಮೂಡಿಸುತ್ತಾರೆ. ಉತ್ತಮವಾದ ಗೀತೆಗೆ ನಡು ನಡುವೆ ಒದಗಿ ಬಂದಿರುವ ಕೋರಸ್ ಮತ್ತಷ್ಟು ಮೆರಗು ದೊರಕುತ್ತದೆ.

ಮಿರ್ಚಿ ಹುಡುಗಿ : ಇದು ಮತ್ತೊಂದು ಪಕ್ಕಾ ಹರಿ ಹಾಗೂ ದರ್ಶನ್ ಕಾಂಬಿನೇಶನ್ ಗೀತೆ. ಅಭಿಮಾನಿಗಳಿಗೆ ತುಸು ಹೆಚ್ಚೇ ಇಷ್ಟವಾಗಬಹುದಾದ ಸ್ವರ ಸಂಯೋಜನೆ ಹಾಡಿಗಿದೆ. ಇಲ್ಲಿ ಕವಿರಾಜರ ಸಾಹಿತ್ಯಕ್ಕಿಂತ ಹರಿಯ ಸಂಗೀತ, ನೃತ್ಯ ಯೋಜನೆ ಹಾಗೂ ಪರದೆಯ ಮೇಲಿನ ಚಿತ್ರೀಕರಣವೇ ಹೆಚ್ಚು ಗಮನ ಸೆಳೆಯುವ ಅಂಶಗಳಾಗುತ್ತವೇನೋ. ಸಂತೋಷ್ ವೆಂಕಿಯ ಗಾಯನ ಹಾಗೂ ಧ್ವನಿ ಹಾಡಿನ ಆಶಯಕ್ಕೆ ತಕ್ಕ ಆಗಿದೆ.

ತಂಗಾಳಿ ಹಾಡಿದೆ : ಶಂಕರ್ ಮಹಾದೇವನ್, ಕೈಲಾಶ್ ಕೈರ್, ಕಾರ್ತಿಕ್, ಹೇಮಂತ್ ಎಲ್ಲರ ಧ್ವನಿ ಒಟ್ಟಿಗೆ ಕೇಳ ಸಿಗುವ ಬಂಪರ್ ಹಾಡು ಇದು. ಕುಟುಂಬವೆಲ್ಲ ಸೇರಿ ಸಂತೋಷವಾಗಿ ಹಾಡುವ ಇಂಥಹ ಗೀತೆಗಳ ಸಾಹಿತ್ಯದಲ್ಲಿ ನಾಗೇಂದ್ರ ಪ್ರಸಾದ್ ಎಂದಿಗೂ ಸಿದ್ಧ ಹಸ್ತರೇ. ಹರಿಕೃಷ್ಣ ಪೂರ್ಣ ಪ್ರಮಾಣದಲ್ಲಿ ಈ ಹಾಡಿನ ಮೂಲಕ ತಮ್ಮತನ ಮೆರೆಯುತ್ತಾರೆ. ವಾದ್ಯ ತಾಳಗಳ ಬಳಕೆ ಹಾಗೂ ಉತ್ತಮ ಗಾಯಕರ ಸಂಗಮದ ಮಟ್ಟಿಗೆ ಇದೊಂದು ಶ್ರೀಮಂತ ಗೀತೆಯೇ.

ಓಯ್ ಕಳ್ಳ : ಹರಿಕೃಷ್ಣರ ಸಂಗೀತ, ಯೋಗರಾಜರ ಭಟ್ಟರ ಸಾಹಿತ್ಯದ ಜೋಡಿಗೆ ಉಪ್ಪಿ ಭರ್ಜರಿಯಾಗಿಯೇ ಬಂದು ಸೇರಿಕೊಂಡಿದ್ದಾರೆ. ಭಟ್ಟರ ಎಂದಿನ ತುಂಟತನಕ್ಕೆ ಉಪ್ಪಿಯೂ ಸರಿಸಮಾನವಾಗಿ ಧ್ವನಿಗೂಡಿಸಿದ್ದಾರೆ. ಇಂದು ನಾಗರಾಜ್ ಹಾಗೂ ಪ್ರಿಯದರ್ಶಿ ಮಾತ್ರವೇನು ಹಿಂದೆ ಬಿದ್ದಿಲ್ಲ. ಇಬ್ಬರು ಹುಡುಗಿಯರ ನಡುವಿನ ಪ್ರೇಮದಾಟದ ಸಾಹಿತ್ಯಕ್ಕೆ ಪಕ್ಕಾ ನೃತ್ಯಕ್ಕೆ ಹೇಳಿ ಮಾಡಿಸಿದಂತಿರುವ ಗೀತೆಯನ್ನಾಗಿ ಹರಿ ಪರವರ್ತಿಸಿದ್ದಾರೆ.

- ಪ್ರಶಾಂತ್ ಇಗ್ನೇಷಿಯಸ್  

Monday 16 September 2013

ಹೃದಯವಂತಿಕೆಯ ಪ್ರತೀಕ - ಕರ್ನಾಟಕ ಕ್ರಿಕೆಟ್


ಅದು 1980 ರ ಭಾರತ ಹಾಗೂ ಇಂಗ್ಲೆಂಡ ತಂಡಗಳ ನಡುವಿನ ಕ್ರಿಕೆಟ್ ಪಂದ್ಯ. ಭಾರತ ಕ್ರಿಕೆಟ್ ಮಂಡಳಿಯ ಸ್ವರ್ಣ ಮಹೋತ್ಸವದ ನೆನಪಿನ ಜೂಬಿಲಿ ಟೆಸ್ಟ್. 58 ರನ್ನಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ಇಂಗ್ಲೆಂಡ ತಂಡದ ಏಳನೇ ಬ್ಯಾಟ್ಸ್ ಮ್ಯಾನಾಗಿ ಬಂದಿದ್ದ ಬಾಬ್ ಟೇಲರ್ ವಿಕೆಟ್ ಕೀಪರ್ ಸ್ಯಯದ್ ಕಿರ್ಮಾನಿಗೆ ಕ್ಯಾಚ್ ಇತ್ತಾಗ, ಅಂಪೈರ್ ಔಟೆಂದು ತೀರ್ಪು ಕೊಟ್ಟರು. ಬಾಬ್ ಟೈಲರ್ ಆಶ್ಚರ್ಯ ಹಾಗೂ ಅಸಮಧಾನದಿಂದ ತಲೆ ಅಲ್ಲಾಡಿಸುತ್ತ ಪೆವೆಲಿಯನ್ ನ್ ಕಡೆ ನಡೆಯಲು ಅನುವಾಗುತ್ತಿದ್ದಂತೆ ಕ್ರಿಕೆಟ್ ಚರಿತ್ರೆಯಲ್ಲಿ ಅಳಿಸಲಾಗದಂತಹ ಘಟನೆಯೊಂದು ನಡೆಯಿತು. ಅಲ್ಲೇ ಸ್ಲಿಪ್ ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಆಗಿನ ಭಾರತ ತಂಡದ ನಾಯಕ, ಬ್ಯಾಟ್ಸ್ ಮೆನ್ ಬಾಬ್ ಟೈಲರ ಬಳಿ ಚೆಂಡು ಬ್ಯಾಟಿಗೆ ತಗುಲಿತೇ ಎಂದು ಕೇಳುತ್ತಾರೆ, ಟೈಲರ್ ಇಲ್ಲ ಎಂದಾಗ, ಅಂಪೈರ್ ನ ಬಳಿ ಹೋಗಿ ತಮ್ಮ ತಂಡ ಮಾಡಿದ್ದ ಮನವಿಯನ್ನು( ಅಪೀಲ್) ಹಿಂದೆ ಪಡೆಯುತ್ತಾರೆ. ಬಾಬ್ ಟೈಲರ್ ಮತ್ತೆ ಬ್ಯಾಟಿಂಗ್ ಆಡುತ್ತಾರೆ. ಮುಂದಿನದು ಇತಿಹಾಸ. ಅದೇ ಬಾಬ್ ಟೈಲರ್ ಜೊತೆ ದಾಖಲೆಯ ಜೊತೆಯಾಟವಾಡಿದ ಪ್ರಖ್ಯಾತ ಆಲ್ ರೌಂಡರ್ ಇಯನ್ ಬಾತಮ್, ಬೌಲಿಂಗ್ ನಲ್ಲೂ ಮಿಂಚಿ ಇಂಗ್ಲೆಂಡ್ ತಂಡಕ್ಕೆ ಗೆಲುವನ್ನು ತಂದು ಕೊಡುತ್ತಾರೆ. ಭಾರತ 10 ವಿಕೆಟ್ಟುಗಳ ಹೀನಾಯ ಸೋಲು ಕಾಣುತ್ತದೆ. ಆದರೆ ಇಂದಿಗೂ ಬಾತಮಿನ್ನ ಪ್ರಚಂಡ ಆಲ್ ರೌಂಡ್ ಆಟಕ್ಕಿಂತ, ಸ್ವರ್ಣ ಮಹೋತ್ಸವದ ಟೆಸ್ಟ್ ಎನ್ನುವುದಕ್ಕಿಂತ ಮೇಲಾಗಿ ಕ್ರೀಡಾ ಜಗತ್ತು ಆ ಟೆಸ್ಟ್ ಅನ್ನು ಭಾರತ ತಂಡದ ನಾಯಕನ ಆ ಉದಾರತೆಗಾಗಿ,sportsman spirit ಗಾಗಿ, ಕ್ರೀಡಾ ಮನೋಭಾಕ್ಕಾಗಿ ನೆನಪಿಸಿಕೊಳ್ಳತ್ತದೆ. ಕ್ರಿಕೆಟ್ ಒಂದು ಸಜ್ಜನ, ಸಭ್ಯ ಕ್ರೀಡೆ ಎಂಬ ಮಾತು ಬಂದಾಗಲೆಲ್ಲಾ ಈ ಘಟನೆಯನ್ನು, ಆಗಿನ ಭಾರತ ತಂಡದ ನಾಯಕನನ್ನು ನೆನೆಪಿಸಿಕೊಳ್ಳಲಾಗುತ್ತದೆ. ಅ ನಾಯಕ ಮತ್ತಾರೂ ಅಲ್ಲ, ನಮ್ಮ ಕರ್ನಾಟಕದವರೇ ಆದ ಜಿ.ಆರ್.ವಿಶ್ವನಾಥ್. ಇಂದಿಗೂ ವಿಶಿಯನ್ನು ಕ್ರಿಕೆಟ್ ಜಗತ್ತು ಕಲಾತ್ಮಕ ಬ್ಯಾಟ್ಸ್ ಮ್ಯಾನ್ ಎಂದು ಮಾತ್ರವಲ್ಲದೆ Gentleman ಕ್ರಿಕೆಟರ್ ಎಂದೇ ಕರೆಯುತ್ತದೆ. ಈ ಘಟನೆ ಒಂದು ಉದಾಹರಣೆಯಷ್ಟೆ, ಈ ಮಾತು ವಿಶ್ವನಾಥ್ ಅವರೊಬ್ಬರಿಗೆ ಮಾತ್ರವಲ್ಲದೆ ಇಡೀ ರಾಜ್ಯದ ಕ್ರಿಕೆಟ್ಟಿಗೇ ಸಲ್ಲುವಂತೆ ಮಾಡಿರುವುದು ನಮ್ಮ ಕರ್ನಾಟಕದ ಇತರ ಎಲ್ಲಾ ಕ್ರಿಕೆಟ್ ಆಟಗಾರರೂ ಎಂದರೆ ತಪ್ಪಾಗಲಾರದೇನೋ. 

1933-34ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಇತ್ತೀಚೆಗೆ ತಾನೇ ತನ್ನ ವಜ್ರ ಮಹೋತ್ಸವವನ್ನು ಆಚರಿಸಿದೆ. ತನ್ನದೇ ಶ್ರೀಮಂತವಾದ ಇತಿಹಾಸವನ್ನು, ಕ್ರಿಕೆಟ್ ಪರಂಪರೆಯನ್ನು ಉಳಿಸಿಕೊಂಡು ಬೆಳಸಿಕೊಂಡೂ ಬಂದಿದೆ. ಇನ್ನೂ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಕರ್ನಾಟಕದ ಪಾಲು ಬಹಳ ದೊಡ್ಡದು. ಕ್ರಿಕೆಟ್ ಆಟದ ಘನತೆ ಹಾಗೂ ಸಂಸ್ಕೃತಿಯನ್ನು ಎತ್ತಿಡಿದಿರುವುದರಲ್ಲಿ ಸಹಾ ಕರ್ನಾಟಕ ಕ್ರಿಕೆಟ್ ಎಂದಿಗೂ ಮುಂದೆ. ಕ್ರಿಕೆಟ್ ಜಗತ್ತಿನಲ್ಲಿ ಕರ್ನಾಟಕದ ಆಟಗಾರರು ತಮ್ಮ ಆಟಕ್ಕೆ ಮಾತ್ರವಲ್ಲದೆ ಕ್ರಿಕೆಟ್ ಒಂದು ಸಜ್ಜನ, ಸುಸಂಸ್ಕೃತ ಕ್ರೀಡೆ ಎಂಬುದರ ಪ್ರತೀಕ  ಹಾಗೂ ರಾಯಭಾರಿಗಳಾಗಿದ್ದಾರೆ. 


ಸೆಂಟ್ರಲ್ ಕಾಲೇಜಿನ ಮೈದಾನವನ್ನೇ ತನ್ನ ಕಾರ್ಯಕ್ಷೇತ್ರವಾಗಿಸಿದ್ದ ಸಂಸ್ಥೆಯು, ಕ್ರಿಕೆಟ್ ಆಡುವುದು ಮಾತ್ರವಲ್ಲದೇ ಅಲ್ಲೇ ತನ್ನ  ಕಛೇರಿಯನ್ನೂ ಸ್ಥಾಪಿಸಿಕೊಂಡಿತ್ತು. ಇಂದಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಚಾಲನೆ ದೊರಕಿದ್ದು 1969ರಲ್ಲಿ. 1974 ರ ನವೆಂಬರ್ ನಲ್ಲಿ ಇನ್ನೂ ಪೂರ್ಣಗೊಳ್ಳದ ಕ್ರೀಡಾಂಗಣದಲ್ಲೇ ಮೊದಲ ಟೆಸ್ಟ್ ನಡೆಯಿತು. ವೆಸ್ಟ್ ಇಂಡೀಸ್ ವಿರುದ್ಧದ ಈ ಪಂದ್ಯದಲ್ಲೇ ಕ್ರಿಕೆಟ್ ದಂತಕಥೆಗಳಾದ ಗಾರ್ಡನ್ ಗ್ರೀನಿಡ್ಜ್ ಹಾಗೂ ವಿವಿಯನ್ ರಿಚರ್ಡ್ಸ್ ಟೆಸ್ಟ್ ರಂಗಕ್ಕೆ ಪಾದಾರ್ಪಣೆ ಮಾಡಿದರು ಎಂಬುದು ವಿಶೇಷ. ಮುಂದೆ ಹಲವಾರು ಸ್ಮರಣೀಯ ಟೆಸ್ಟ್ ಹಾಗೂ ಒಂದು ದಿನದ ಪಂದ್ಯಗಳಿಗೆ ಈ ಕ್ರೀಡಾಂಗಣ ವೇದಿಕೆಯಾಗಿದೆ. 1996 ರ ವಿಶ್ವಕಪ್ ನ ಭಾರತ ಪಾಕಿಸ್ತಾನ ಕ್ವಾಟರ್ ಫೈನಲ್ಸ್, 1987ರ ಭಾರತ ಪಾಕಿಸ್ತಾನ ಟೆಸ್ಟ್ ಪಂದ್ಯ, ಇತ್ತೀಚಿನ 2011ರ ವಿಶ್ವಕಪ್ ನ ಭಾರತ ಇಂಗ್ಲೆಂಡ ನಡುವಿನ ಟೈ ಪಂದ್ಯ ಇವು ಕೆಲವು ಉದಾಹರಣೆಗಳಷ್ಟೇ. ತಮ್ಮ ಕೊನೆಯ ಟೆಸ್ಟ್ ಇನ್ನಿಂಗ್ಸ್ ನಲ್ಲಿ ಗವಾಸ್ಕ್ ರ್ ಹೊಡೆದ 97 ರನ್ನು, ಅನಿಲ್ ಕುಂಬ್ಳೆ ರ 400ನೇ ವಿಕೆಟ್, ರಿಚರ್ಡ್ ಹ್ಯಾಡ್ಲಿ ದಾಖಲೆ ಮಾಡಿದ್ದು, ಕಪಿಲ್ ದೇವ್ ಹ್ಯಾಡ್ಲಿ ದಾಖಲೆ ಸರಿಗಟ್ಟಿದ್ದು ಮುಂತಾದವುಗಳಿಗೆ ಈ ಕ್ರೀಡಾಂಗಣ ಸಾಕ್ಷಿಯಾಗಿದೆ, ವಿದೇಶಿ ತಂಡಗಳೂ ಸಹ ಇಲ್ಲಿನ ವಾತಾವರಣ, ಹವೆ ಮಾತ್ರವಲ್ಲದೆ ಇಲ್ಲಿನ ಪ್ರೇಕ್ಷಕರ ಕ್ರಿಕೆಟ್ ಜ್ಞಾನ ಹಾಗೂ ಕ್ರೀಡಾ ಮನೋಭಾದಿಂದಾಗಿ  ಬೆಂಗಳೂರಿನಲ್ಲಿ ಆಡುವುದಕ್ಕೆ ಇಷ್ಟಪಡುತ್ತವೆ. ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ನಿಂದಾಗಿ ಕ್ರೀಡಾಂಗಣಕ್ಕೆ ಮತ್ತಷ್ಟು ರಂಗು ದೊರಕಿದೆ.

ಇನ್ನೂ ಕರ್ನಾಟಕ ತಂಡದ ರಣಜಿ ಇತಿಹಾಸ ಒಂದು ಸುಂದರ ಕಥಾನಕ. ಕರ್ನಾಟಕ ಕ್ರಿಕೆಟಿನ ಸುವರ್ಣ ಯುಗವೆಂದೇ ಹೇಳಬಹುದಾದ 90ರ ದಶಕದಲ್ಲಿ ನಾಲ್ಕು ವರ್ಷದ ಅಂತರದಲ್ಲಿ 3 ಬಾರಿ ರಣಜಿ ಟ್ರೋಫಿ ಗೆದ್ದ ಹೆಗ್ಗಳಿಕೆ ಅದರದು. ಭಾರತ ವಿಶ್ವ ಕಪ್ ಗೆದ್ದ 1983ರಲ್ಲೂ ಕರ್ನಾಟಕವೇ ರಣಜಿ ಚಾಂಪಿಯನ್. ಆದರೆ ಇವೆಲ್ಲಕ್ಕಿಂತಲೂ 70ರ ದಶಕದ ಗೆಲವುಗಳೇ ರೋಚಕ.  1959 ರಿಂದ  1973 ರ ವರೆಗೂ ದೇಶದ ರಣಜಿ ಸರಣಿಯಲ್ಲಿ ಆಗಿನ ಬಾಂಬೆ ತಂಡಕ್ಕೆ ಸರಿಸಾಟಿಯೇ ಇಲ್ಲ.  58 ರಲ್ಲಿ ಒಮ್ಮೆ ಬರೋಡ ತಂಡ ಗೆದ್ದದ್ದು ಬಿಟ್ಟರೆ ಎರಡು ದಶಕಗಳ ಪಾರಪತ್ಯ ಬಾಂಬೆ ತಂಡದು. ಅಂತಹ ಬಾಂಬೆ ತಂಡದ ನಾಗಲೋಟಕ್ಕೆ 1974 ರಲ್ಲಿ ತಡೆ ಹಾಕಿ ಟ್ರೋಫಿ ಗೆದ್ದು ಕೊಂಡದ್ದು ಕರ್ನಾಟಕ ತಂಡ. ಮುಂದೆ 78ರಲ್ಲಿ ಮತ್ತೇ ಟ್ರೋಫಿ ಗೆದ್ದು ತನ್ನ ಪ್ರಾಬಲ್ಯವನ್ನು ಮೆರೆಯಿತು. ಯಾವ ಅಂತರರಾಷ್ಟ್ರೀಯ ಪಂದ್ಯಗಳಿಗೂ ಕಡಿಮೆಯಿಲ್ಲದಂತೆ ಪ್ರೇಕ್ಷಕರು ಈ ರಣಜಿ ಪಂದ್ಯಗಳಿಗೆ ಸೇರುತ್ತಿದ್ದದ್ದನ್ನು ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ, ವಿಶ್ವನಾಥ್, ಬ್ರಿಜೇಶ್ ಪಟೇಲ್, ರಘುರಾಮ್ ಭಟ್ ಮುಂತಾದವರ ಆಟಕ್ಕೆ ಗ್ಯಾಲರಿಗಳು ತುಂಬುತ್ತಿದ್ದ ರೀತಿ ಅನನ್ಯ.ರಣಜಿಯಲ್ಲಿ ರಾಜ್ಯಕ್ಕೆ ಗೌರವ ತಂದು ಕೊಟ್ಟ ದೊಡ್ಡ ಪಟ್ಟಿಯೇ ಇದೆ. ಎಂ.ಚಿನ್ನಸ್ವಾಮಿ , ಶ್ರೀನಿವಾಸನ್ ಮುಂತಾದವರ ತೆರೆಮರೆಯ ಸೇವೆ ಅಪಾರ.

ಕರ್ನಾಟಕ ತಂಡದಿಂದ ಭಾರತವನ್ನು ಪ್ರತಿನಿಧಿಸಿದ ಆಟಗಾರರ ಪಟ್ಟಿಯೇ ಎಲ್ಲವನ್ನು ಹೇಳುತ್ತದೆ, ಕರ್ನಾಟಕದ ನವಾಬ್ ಪಟೌಡಿ ಎಂದೇ ಖ್ಯಾತರಾದ ವಿ.ಸುಬ್ರಮಣ್ಯರದು ಟೆಸ್ಟ್ ನಲ್ಲಿ ಸಾಧಾರಣ ಯಶಸ್ಸಾದರೂ, ಕರ್ನಾಟಕ ರಣಜಿ ತಂಡವನ್ನು ಕ್ಲಬ್ ಮಟ್ಟದಿಂದ ಮೇಲಕೇರಿಸಿದ ಕೀರ್ತಿ ಅವರು ಪಾತ್ರರು. ಇನ್ನೂ ಎರಪಳ್ಳಿ ಪ್ರಸನ್ನ ಈ ದೇಶ ಕಂಡ ಆತ್ತ್ಯುತ್ತಮ ಆಫ್ ಸ್ಪಿನ್ನರ್ ಎಂಬ ಮಾತಿದೆ. ಕ್ಲಾಸಿಕಲ್ ಆಫ್ ಸ್ಪಿನ್ ಎಂದಾಕ್ಷಣ ಪ್ರಸನ್ನರ ಹೆಸರು ವಿಶ್ವ ಕ್ರಿಕೆಟಿನಲ್ಲಿ ಮುಂಚೂಣಿಯಲ್ಲಿ ಕಾಣುತ್ತದೆ. ಪೋಲಿಯೋದಿಂದಾಗಿ ಸ್ವಲ್ಪ ಮಟ್ಟಗಿನ ಶಕ್ತಿಹೀನವಾದ ಕೈಯನ್ನೇ ಅಸ್ತ್ರವನ್ನಾಗಿಸಿಕೊಂಡ ಬಿ.ಎಸ್. ಚಂದ್ರಶೇಖರ್ ಭಾರತ ತಂಡಕ್ಕೆ  ವಿದೇಶಗಳಲ್ಲಿ ಮರಿಚಿಕೆಯಾದ ಟೆಸ್ಟ್ ಗೆಲವನ್ನು ತಂದುಕೊಟ್ಟ ಪ್ರಮುಖ ರುವಾರಿ. ಮೂಲತ: ಲೆಗ್ ಸ್ಪಿನರಾದರೂ ಅವರ ವೇಗದ ಬಾಲುಗಳು ವೇಗದ ಬೌಲರುಗಳಿಗಿಂತ ತೀಕ್ಷ್ನತೆ ಪಡೆದಿದ್ದವು ಎಂದು ಅಂದಿನ ಆಟಗಾರರು ನೆನಪಿಸಿಕೊಳ್ಳುತ್ತಾರೆ. ರಣಜಿಯಲ್ಲಿ ಅಸಾಧಾರಣ ಪ್ರತಿಭೆಯಾಗಿದ್ದ ಗ್ಲಾಮರ್ ಬಾಯ್ ಬ್ರಿಜೇಶ್ ಪಟೇಲ್ ಗೆ ಅಂತರಾಷ್ಟ್ರೀಯ ಯಶಸ್ಸು ಮರಿಚಿಕೆಯಾಯಿತು. ಸೈಯದ್ ಕಿರ್ಮಾನಿ ವಿಶ್ವದ ಅತ್ತ್ಯುತ್ತಮ  ವಿಕೆಟ್ ಕೀಪರ್ ಗಳಲ್ಲಿ ಒಬ್ಬರು ಎಂಬುದರಲ್ಲಿ ಯಾರಿಗೂ ಅನುಮಾನವೇ ಇಲ್ಲ. ಬ್ಯಾಟಿಂಗ್ ನಲ್ಲಿ ಸಹಾ ಅಪತ್ಭಾಂಧವನಂತೆ ಭಾರತದ ನೆರವಿಗೆ ಬಂದ ಉದಾಹರಣೆಗಳೆಷ್ಟೋ. 1983ರ ವಿಶ್ವಕಪ್ ನಲ್ಲಿ ಆತಿ ಹೆಚ್ಚು ವಿಕೆಟ್ ಪಡೆದು ಭಾರತದ ವಿಜಯದ ಪ್ರಮುಖ ರುವಾರಿಯಾಗಿದ್ದವರು ರೋಜರ್ ಬಿನ್ನಿ. ಜಿ,ಆರ್. ವಿಶ್ವನಾಥ್ ರವರಂತೂ ತಮ್ಮ ಕಲಾತ್ಮಕ ಆಟದಿಂದಾಗಿ ಕ್ರಿಕೆಟ್ ಜಗತ್ತಿನ ಕಣ್ಮಣಿಯಾದವರು. ಬ್ಯಾಟಿಂಗ್ ನ ಆಫ್ ಡ್ರೈವ್,ಸ್ಕ್ವೇರ್‍ ಕಟ್, ಫ್ಲಿಕ್ ಗಳಿಗೆ ವಿಶಿ ಇಂದಿಗೂ ಹೆಸರುವಾಸಿ.

ಇದಕ್ಕೆಲ್ಲಾ ಕಳಶವಿಟ್ಟಿದ್ದು 90 ಹಾಗೂ ನಂತರದ ದಶಕ, ಈ ದಶಕದಲ್ಲಿ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ರಾಹುಲ್ ಡ್ರಾವಿಡ್, ಸುನಿಲ್ ಜೋಶಿ, ವಿಜಯ್ ಭರದ್ವಾಜ್, ಗಣೇಶ್, ಡೇವಿಡ್ ಜಾನ್ಸನ್, ಸೋಮಸುಂದರ್, ರಾಬಿನ್ ಉತ್ತಪ್ಪ ಭಾರತವನ್ನು ಪ್ರತಿನಿಧಿಸಿದರು, ಕಪಿಲ್ ದೇವ್ ನಂತರ ಯಾರು ಎಂಬ ಪ್ರಶ್ನೆಗೆ ತಕ್ಕ ಉತ್ತರ ಕೊಟ್ಟವರು ಜಾವಗಲ್ ಶ್ರೀನಾಥ್.ವಿಶ್ವ ಕಪ್ ನ ಪಂದ್ಯದಲ್ಲಿ ಕೆಣಕಿದ ಅಮೀರ್ ಸೋಹೆಲ್ ನ ವಿಕೆಟ್ ಪಡೆದೇ ಅಪಾರ ಖ್ಯಾತಿ ಪಡೆದ ವೆಂಕಟೇಶ್ ಪ್ರಸಾದ್ ಸ್ವಿಂಗ್ ಬೌಲಿಂಗೆ ಹೆಸರು ಮಾಡಿದವರು. ಇನ್ನೂ ಅನಿಲ್ ಕುಂಬ್ಳೆ ಹಾಗೂ ರಾಹುಲ್ ಡ್ರಾವಿಡರ ಸಾಧನೆ ಎಲ್ಲರಿಗೂ ತಿಳಿದಿರುವುದೇ. ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆ ಮಾತ್ರವಲ್ಲದೆ ಭಾರತ ಕ್ರಿಕೆಟಿನ ಅನೇಕ ಹುದ್ದೆಗೆ ಕೇಳಿ ಬರುವ ಪ್ರಮುಖ ಹೆಸರು ಕುಂಬ್ಳೆಯದು. ಗೋಡೆಯೆಂದೇ ಪ್ರಖ್ಯಾತರಾಗಿರುವ ರಾಹುಲ್ ಡ್ರಾವಿಡ್ ಈಗ ವಿಶ್ವ ಕ್ರಿಕೆಟಿನ ದಂತಕಥೆ. ರನ್ನು ಹಾಗೂ ಜನಪ್ರಿಯತೆಯಲ್ಲಿ ಸಚಿನ್ ನಂತರದ ಹೆಸರು ಡ್ರಾವಿಡ್ ರದು 

ಕರ್ನಾಟಕ ಕ್ರಿಕೆಟ್ ಹಾಗೂ ಅದರ ಆಟಗಾರರ ಇಷ್ಟೆಲ್ಲಾ ಕ್ರಿಕೆಟ್ ಸಾಧನೆಗಳ ನಡುವೆಯೂ ಇಂದಿಗೂ ಅದರ ಹೆಗ್ಗಳಿಕೆ ಇರುವುದು ಅದರ ಸಜ್ಜನಿಕೆ ಹಾಗೂ ಸಭ್ಯತೆಯಲ್ಲೇ. ಕರ್ನಾಟಕ ಕ್ರಿಕೆಟಿನ ಅಭಿಮಾನಿಗಳಿಗೆ ಇದಕ್ಕಿಂತ ದೊಡ್ಡ ಉಡುಗೊರೆ ಬೇಕೆ?

-ಪ್ರಶಾಂತ್ ಇಗ್ನೇಶಿಯಸ್

Tuesday 10 September 2013

ಲೂಸಿಯಾ.......

ಪ್ರೇಕ್ಷಕರಿಂದ ಪ್ರೇಕ್ಷಕರಿಗಾಗಿಯೇ ಎಂಬ ಹೊಸ ಮಂತ್ರದಿಂದ ಪ್ರೇಕ್ಷಕರ ಹಣದಿಂದಲೇ ಪ್ರಾರಂಭವಾದ ಪವನ್ ಕುಮಾರ್ ರವರ ಹೊಸ ಕನಸು ’ಲೂಸಿಯಾ’ ಕನ್ನಡ ಚಿತ್ರ ಪ್ರೇಮಿಗಳ ನಡುವೆ ಒಂದು ಹೊಸ ನಿರೀಕ್ಷೆಯನ್ನೆ ಸೃಷ್ಟಿಸಿದೆ. ಅದರಲ್ಲೂ ಅಂತರಜಾಲ ಹಾಗೂ ಫೇಸ್ ಬುಕ್ಕಿನಲ್ಲಿ ಈ ಹೊಸ ಆಲೋಚನೆಯನ್ನು ಕನ್ನಡದ ಯುವ ಸಮುದಾಯ ಪ್ರೀತಿಯಿಂದ ಅಪ್ಪಿಕೊಂಡಿದೆ. ಲಂಡನ್ ಚಿತ್ರೋತ್ಸವದಲ್ಲಿ ಪ್ರೇಕ್ಷಕರ ಮೆಚ್ಚಿನ ಸಿನಿಮಾ ಎನ್ನುವ ಪ್ರಶಸ್ತಿ ಪವನ್ ಕುಮಾರರ ಈ ಕನಸಿನ ರೆಕ್ಕೆ ಮತ್ತಷ್ಟು ಗರಿಗಳನ್ನು ಮೂಡಿಸಿದೆ. ಈಗ ಇದು ಕೇವಲ ಪವನ್ ಚಿತ್ರ ಮಾತ್ರವಲ್ಲದೆ ಲೂಸಿಯದಲ್ಲಿ ತೊಡಗಿಸಿಕೊಂಡ, ಕೇವರ ೫೦೦ ರಷ್ಟು ಕಾಣಿಕೆ ನೀಡಿರುವ ಎಲ್ಲರದೂ ಎನ್ನುವಷ್ಟು ಬೆಳೆವಣಿಗೆ ಕಂಡಿದೆ. ಚಿತ್ರರಂಗ ಕೂಡ ವಾರೆ ಗಣ್ಣಿನಲ್ಲಿ ಇದನೆಲ್ಲಾ ಗಮನಿಸುತ್ತಿರಬಹುದು. ಮಾಧ್ಯಮಗಳ ಬೆಂಬಲ ಈಗಾಗಲೇ ಚಿತ್ರಕ್ಕೆ ಭಾರಿ ಎನ್ನುವ ಮಟ್ಟಿಗೇ ದೊರಕಿದೆ. ಈ ಎಲ್ಲಾ ಹಿನ್ನಲೆಯಲ್ಲೇ ಚಿತ್ರದ ಹಾಡುಗಳನ್ನು ಕೇಳಿದಾಗ ಯಾವುದೇ ಚಿತ್ರ ಹಿನ್ನಲೆಯಿಲ್ಲದ  ಹೊಸ ಸಂಗೀತ ನಿರ್ದೇಶಕ ಹಾಗೂ ಬಡ್ಜೆಟ್ ನ  ಇತಿ ಮಿತಿ ಇಲ್ಲಿನ ಹಾಡುಗಳಲ್ಲಿ ಎದ್ದು ಕಾಣುತ್ತದೆ. 


ತಿನ್ನ ಬೇಡ ಕಮ್ಮಿ 
ಇಂದಿನ ಹಾಡುಗಳ ಧಾಟಿಯಲ್ಲೇ ಸಾಗುವ ಈ ಗೀತೆ ಯುವಕರಿಗೆ ಮೆಚ್ಚುಗೆಯಾಗಬಹುದಾದ ಸಾಧರಣ ಗೀತೆ. ಕನ್ನಡ ಬಾರದ ಹುಡುಗಿಯೊಬ್ಬಳಿಗೆ ಕನ್ನಡದ ಬಗ್ಗೆ ಹೇಳುತ್ತಾ ಛೇಡಿಸುವ ಸಾಹಿತ್ಯವಿರುವ ಗೀತೆಯಲ್ಲಿ ತಾಳ ವಾದ್ಯವೇ ಹೈಲೈಟ್. ತೇಜಸ್ವಿಯವರೇ ಬರೆದು ಧ್ವನಿಗೂಡಿಸಿರುವ ಹಾಡು ಒಳ್ಳೆಯ ನೃತ್ಯದಿಂದ ಪರದೆಯ ಮೇಲೆ ಇಷ್ಟುವಾಗಬಹುದು. 

ನೀ ತೊರೆದ ಗಳಿಗೆಯಲ್ಲಿ 
ಆನನ್ಯ ಭಟ್ ಹಾಗೂ ಉದಿತ್ ಹ್ಯಾರಿಸ್ ಹಾಡಿರುವ ಗೀತೆ ಈ ಆಲ್ಬಂ ನ ಅತ್ತ್ಯುತ್ತಮ ಗೀತೆ ಎನ್ನಲು ಅಡ್ಡಿಯಿಲ್ಲ. ರಘು ಶಾಸ್ರ್ತಿಯವರ ಉತ್ತಮವಾದ ಸಾಹಿತ್ಯವು ಇದಕ್ಕೆ ಕಾರಣ. ಕೇಳುತ್ತ ಕೇಳುತ್ತ ಇಷ್ಟವಾಗುವ ಇಂಪಾದ ಗೀತೆ ತನ್ನ ಮಾಧುರ್ಯದಿಂದಲೇ ಮನ ಸೆಳೆಯುತ್ತದೆ. ಈ ಹಾಡಿನಿಂದ ಸಂಗೀತ ನಿರ್ದೇಶಕ ತೇಜಸ್ವಿ ಭರವಸೆ ಮೂಡಿಸುತ್ತಾರೆ. ಹಾಡು ನಡುವೆಯಲ್ಲಿ ಸಾಮಾನ್ಯದ ಮಟ್ಟ ಮುಟ್ಟಿದರೂ ಗೀತೆಯ ಪ್ರಾರಂಭದಲ್ಲಿ ಬರುವ ಸಾಲುಗಳು ಸಾಹಿತ್ಯದಿಂದಲೂ ಸಂಗೀತ ಸಂಯೋಜನೆಯಿಂದಲೂ ಕೇಳುಗರನ್ನು ಅವರಿಸುತ್ತದೆ.

ಜಮ್ಮ ಜಮ್ಮ 
ಮತ್ತೊಂದು ಮಾಸ್ ಹಾಡು. ನವ ಗಾಯಕ ನವೀನ್ ಸಜ್ಜುರವರ ಧ್ವನಿ ಹಾಗೂ ಉತ್ಸಾಹ ಎದ್ದು ಕಾಣುವಂತ ಈ ಹಾಡಿನ ಯಶಸ್ಸು ನವೀನಷ್ಟೇ ನಿರ್ದೇಶಕ ಪವನ್ ಹಾಗೂ ತೇಜಸ್ವಿಯವರಿಗೆ  ಸಲ್ಲಬೇಕು. ಆರ್ಕೇಷ್ಟ್ರಾ ಹಾಡುಗಾರನಿಗೆ ಅವಕಾಶಕೊಟ್ಟು ಹುರಿದುಂಬಿಸಿದ ಪರಿಣಾಮ ಹಾಡಿನಲ್ಲಿ ಕಾಣುತ್ತದೆ. ಉತ್ತಮ ವಾದ ಬೀಟ್ಸ್ ಹಾಗೂ ಉತ್ಸಾಹಭರಿತವಾದ ಗಾಯನದಿಂದ ಹಾಡು ಲವಲವಿಕೆಯಿಂದ ಕೂಡಿದೆ. 

ಜಮ್ಮ ಜಮ್ಮ ( ದು:ಖ) 
ಇದೇ ಹಾಡು ಮತ್ತೆ ದು:ಖದ ಸನ್ನಿವೇಶದಲ್ಲಿ ಬಂದಾಗಲೂ ನವೀನ್ ತಮ್ಮ ಗಾಯನದಿಂದ ಗಮನ ಸೆಳೆಯುತ್ತಾರೆ. ತೇಜಸ್ವಿಯವರ ಸಾಹಿತ್ಯ ಸಾಮಾನ್ಯವಾಗಿದೆಯಾದರೂ ರಾಗ ಹಾಗೂ ವಾದ್ಯಸಂಯೋಜನೆ ಹಾಡಿನ ಭಾವಲಹರಿಗೆ ತಕ್ಕ ಹಾಗೆ ಮೂಡಿ ಬಂದಿದೆ. ಮತ್ತೊಮ್ಮೆ ನವೀನ್ ಅಭಿನಂದನಾರ್ಹರು.

ಯಾಕೋ ಬರಲಿಲ್ಲ 
ಅನಂತಸ್ವಾಮಿಯವರ :ನೀನ್ ನನ್ನಟ್ಟಿಗೆ ಬೆಳಕ್ ಕಿದ್ದೆ ನಂಜಿ" ಎಂಬ ಗೀತೆ ನೆನಪಿಸುವಂತೆ ಅದೇ ಧಾಟಿಯಲ್ಲಿ ಸಾಗುವ ಗೀತೆ ಯಾಕೋ ಬರಲಿಲ್ಲ. ವಿಭಿನ್ನವಾದ ರಾಗ ಸಂಯೋಜನೆ  ಹಾಗೂ ಹಾಡುಗಾರಿಕೆ  ಇದೆ ಎನ್ನುವುದು ಈ ಗೀತೆಯ ಹೆಗ್ಗಳಿಕೆ. ಕೇಳುತ್ತ ಕೇಳುತ್ತ ಇಷ್ಟವಾಗಬಹುದಾದ ಗುಣ ಇರುವುದರಿಂದ ಚಿತ್ರದಲ್ಲಿ ಹೇಗೆ ಬಳಕೆಯಾಗಿದೆ ಎನ್ನುವುದರ ಮೇಲೆ ಹಾಡಿನ ಯಶಸ್ಸು ನಿಲ್ಲಬಹುದು. ಮಿತವಾದ ವಾದ್ಯಗಳು ಹಾಗೂ ಅಬ್ಬರವಿಲ್ಲದಿರುವುದರಿಂದ ಸಾಹಿತ್ಯ ಎದ್ದು ಕೇಳುತ್ತದೆ.

ಹೇಳು ಶಿವ 
ಪವನ್ ಸಿನಿಮಾ ಎಂದ ಮೇಲೆ ಯೋಗರಾಜ್ ಭಟ್ಟರ ಹಾಡು ಇಲ್ಲದಿರಲು ಸಾಧ್ಯವೇ ಹೇಳು ಶಿವಾ, ಹೇಳು ಶಿವಾ ಹಾಡಿಗೆ ಸಾಹಿತ್ಯ ಒದಗಿಸಿ ಧ್ವನಿಯನ್ನೂ ನೀಡಿರುವ ಭಟ್ಟರು ಮತ್ತೆ ತಮ್ಮ ತುಂಟತನ ಮೆರೆಯುತ್ತಾರೆ. ಹುಡುಗಿ, ಸೆಲ್ ಫೋನ್, ಹಾಸ್ಯ, ವೇದಾಂತ, ’ಗಳು’ ಎಲ್ಲವೂ ಇದು ಅವರ್ದೇ ಹಾಡು ಎಂಬುದನ್ನು ಧೃಢ ಪಡಿಸುತ್ತದೆ. ಹರಿಕೃಷ್ಣರ ಗೀತೆಯೇನೋ ಎನ್ನುವಷ್ಟು ಮಜವಾಗಿ ಶ್ರೀಮಂತವಾಗಿ ಹಾಡು ಮೂಡಿ ಬಂದಿದೆ. ನವೀನ ಹಾಗೂ ರಕ್ಷಿತ್ ನಗರ್ಲೆ ಉತ್ತಮವಾಗಿ ಹಾಡಿದ್ದಾರೆ.

ತಿನ್ನ ಬೇಡ 
ಕೊನೆಯಲ್ಲಿ ಸಂಗೀತ ರಾಜೀವ್, ನಿತಿನ್ ಹಾಗೂ ಸ್ಪರ್ಷರವರ ಧ್ವನಿಯಲ್ಲಿ ಮೂಡಿಬಂದಿರುವ ತಿನ್ನ್ ಬೇಡ ಹಾಡು ಮೊದಲಿನ ಗೀತೆಗಿಂತೆಗಿಂತ ಲವಲವಿಕೆಯಾಗಿ ಮೂಡಿ ಬಂದಿದೆ. ಸಂಗೀತ ರಾಜೀವ ರವರ ಧ್ವನಿ ಗೀತೆಗೆ ಹೇಳಿ ಮಾಡಿಸಿದಂತಿದೆ. ಗ್ರಾಮೀಣ ಆಡು ಬಾಷೆಯ ಸಾಹಿತ್ಯವಿರುವುದು ನಿಜಕ್ಕೂ ಹಾಡಿಗೆ ಮೆರಗನ್ನು ನೀಡಿದೆ. ಕೊನೆಯಲ್ಲಿ ಸರ್ ಪ್ರೈಸ್ ಪ್ಯಾಕ್ ಎಂದೇ ಹೇಳಬಹುದಾದ ಹಾಡು ಗುನುಗುನಿಸುವಂತಿದೆ. ಮತ್ತಷ್ಟು ಅವಕಾಶ ಹಾಗೂ ಇತಿ ಮಿತಿಯ ಸಂಕೋಲೆ ಇಲ್ಲದಿದ್ದರೆ ಉತ್ತಮ ಸಂಗೀತ ನಿರ್ದೇಶಕರಾಗುವ ಭರವಸೆ ಮೂಡಿಸುತ್ತಾರೆ ಪೂರ್ಣ ಚಂದ್ರ ತೇಜಸ್ವಿ.



- ಪ್ರಶಾಂತ್ ಇಗ್ನೇಶಿಯಸ್

ಕನ್ನಡ ಸಾಹಿತ್ಯದ ದಿವ್ಯ ತಾರೆ ’ಕರ್ವಾಲೋ’

ಪೂರ್ಣ ಚಂದ್ರ ತೇಜಸ್ವಿಯವರು ಕುವೆಂಪುರವರ ಮಗ ಎಂದು ತಿಳಿದಿತ್ತಾದರೂ ಅವರ ಬರಹಗಳ ಪರಿಚಯ ಆಗಿದ್ದು ಲಂಕೇಶ್ ಪತ್ರಿಕೆಯಲ್ಲಿನ  ’ಆಣ್ಣನ ನೆನಪು’ ಅಂಕಣದಿಂದಾಗಿಯೇ. ಆಗ ಲಂಕೇಶ್ ಪತ್ರಿಕೆ ಬಹಳ ಜನಪ್ರಿಯವಾಗಿದ್ದರೂ ಅದರಲ್ಲಿ ನನಂಥವನಿಗೆ ಅರ್ಥವಾಗುತ್ತಿದ್ದದ್ದು, ನೀಲು ಚುಟುಕುಗಳು, ಸಿನಿಮಾ, ಅನಂತ್ ನಾಗ್ ರ ’ನನ್ನ ತಮ್ಮ ಶಂಕರ’, ಅಣ್ಣನ ನೆನಪು ಯಂಥ ಅಂಕಣಗಳು ಮಾತ್ರವೇ. ಅಲ್ಲಿಂದಲೇ ತೇಜಸ್ವಿಯವರ ಬರಹಗಳ ಬಗ್ಗೆಯೂ ಒಂದು ಕುತೂಹಲ ಮೂಡಿತು. 
----------------------------------------------------------------------------------------------------------------

"ನಾನು ಮೂಡುಗೆರೆ ಜೇನು ಸೊಸೈಟಿಯ ಬಾಗಿಲುಗಳನ್ನು ತಳ್ಳಿ ಒಳಗೆ ಪ್ರವೇಶಿಸಿದಾಗ...." ಎಂದು ಪ್ರಾರಂಭವಾಗುವ ತೇಜಸ್ವಿಯವರ ಕರ್ವಾಲೋ ಕಾದಂಬರಿಯ ಮೊದಲ ಸಾಲುಗಳಲ್ಲೇ ಒಂದು ರೀತಿಯ ಗೊಂದಲ ಮೂಡುತ್ತಿತ್ತು. ಹಾಗೇ ನೋಡಿದರೆ ತೇಜಸ್ವಿಯವರ ಕಾದಂಬರಿ, ಕತೆಗಳನ್ನು ಅದರ ಮೊದಲ ಸಾಲು, ಪುಟ ಅಥವಾ ಅಧ್ಯಾಯದಿಂದ ಅಳೆಯಲಾಗದು. ಎಲ್ಲಿಯೋ ಅರಂಭವಾಗಿ ಯಾವುದೇ ಅನಗತ್ಯ ತಿರುವುಗಳಿಲ್ಲದೆ, ಹಂತ ಹಂತವಾಗಿ ಅಚ್ಚರಿಗೊಳಿಸುತ್ತ ಮತ್ತೆಲ್ಲಿಯೋ ಹೋಗಿ ಮುಟ್ಟುವ ಪರಿ ಅವರ ಓದುಗರಿಗೆ ಪರಿಚಿತವೇ. ಆದರೂ ಹಾರುವ ಓತಿಯ ಹುಡುಕಾಟದ ಬಗೆಗಿನ ಕಾದಂಬರಿ ಎಂದು ಗೊತ್ತಿತ್ತಾದರಿಂದ, ಈ ಕರ್ವಾಲೋ ಎಂಬ ವಿಚಿತ್ರ ಹೆಸರು ಯಾರದು? ಇದ್ಯಾವುದೋ ಕ್ರಾಂತಿಕಾರಿ ವ್ಯಕ್ತಿಯ ಹೆಸರಿರಬಹುದೇ, ಹಾರುವ ಓತಿಗೂ ಮೂಡುಗೆರೆಗೂ ಎಲ್ಲಿಯ ಸಂಬಂಧ, ಅದು ಕಾಡಿನ ಸಾಹಸ ಕತೆಯಾದರೆ ಅದಕ್ಕೂ ಮೂಡುಗೆರೆ ಜೇನು ಸೊಸೈಟಿಗೂ ಯಾವುದು ನಂಟು ಎಂಬುದರಲ್ಲೇ ಕರ್ವಾಲೋ ಓದುವುದನ್ನು ಬೇಕಂತಲೇ ಮುಂದೂಡತ್ತಲೇ ಬಂದಿದ್ದೆ.  




ಪೂರ್ಣ ಚಂದ್ರ ತೇಜಸ್ವಿಯವರು ಕುವೆಂಪುರವರ ಮಗ ಎಂದು ತಿಳಿದಿತ್ತಾದರೂ ಅವರ ಬರಹಗಳ ಪರಿಚಯ ಆಗಿದ್ದು ಲಂಕೇಶ್ ಪತ್ರಿಕೆಯಲ್ಲಿನ  ’ಆಣ್ಣನ ನೆನಪು’ ಅಂಕಣದಿಂದಾಗಿಯೇ. ಆಗ ಲಂಕೇಶ್ ಪತ್ರಿಕೆ ಬಹಳ ಜನಪ್ರಿಯವಾಗಿದ್ದರೂ ಅದರಲ್ಲಿ ನನಂಥವನಿಗೆ ಅರ್ಥವಾಗುತ್ತಿದ್ದದ್ದು, ನೀಲು ಚುಟುಕುಗಳು, ಸಿನಿಮಾ, ಅನಂತ್ ನಾಗ್ ರ ’ನನ್ನ ತಮ್ಮ ಶಂಕರ’, ಅಣ್ಣನ ನೆನಪು ಯಂಥ ಅಂಕಣಗಳು ಮಾತ್ರವೇ. ಅಲ್ಲಿಂದಲೇ ತೇಜಸ್ವಿಯವರ ಬರಹಗಳ ಬಗ್ಗೆಯೂ ಒಂದು ಕುತೂಹಲ ಮೂಡಿತು. ಈ ಕುತೂಹಲದಿಂದಾಗಿ ಮುಂದೆ ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಕಿರುಗೂರಿನ ಗಯ್ಯಾಳಿಗಳು ಮುಂತಾದ ಪುಸ್ತಕಗಳು ಓದುವಂತೆಯೂ ಆಯಿತು. ಮತ್ತೊಂದು ಪುಸ್ತಕದಲ್ಲಿ ತಮ್ಮ ಮನೆಯ ಬಳಿ ಹಾವೊಂದು ಕಪ್ಪೆಯನ್ನು ನುಂಗಿ, ಅದರ ಭಾರಕ್ಕೆ ಮುಂದೆ ಸಾಗಲಾರದೆ ಸಣ್ಣ ಪಕ್ಷಿಯೊಂದಕ್ಕೆ ಆಹಾರವಾಗುವ ಪ್ರಸಂಗವನ್ನು ತೇಜಸ್ವಿ ಎಷ್ಟು ಅದ್ಭುತವಾಗಿ ವರ್ಣಿಸಿದ್ದಾರೆಂದರೆ ಅವರ ಎಲ್ಲಾ ಬರಹಗಳನ್ನೂ ಓದಬೇಕೆಂಬ ಆಸೆ ಬೆಳೆಯಿತು. ಅದರೂ ಎಲ್ಲರೂ ಕ್ಲಾಸಿಕ್ ಎಂದೇ ಕರೆಯುತ್ತಿದ್ದ ’ಕರ್ವಾಲೋ’ ಓದಲು ಮನಸ್ಸಾಗಿರಲಿಲ್ಲ. 

ಒಂದಷ್ಟು ಪುಟಗಳನ್ನು ಓದಿ ಬಿಟ್ಟಿದ್ದ ಅದನ್ನು ಓದಲು ಮತ್ತೆ ಶುರು ಮಾಡಿದ್ದೊಂದೆ ನೆನಪು. ಹೇಗೆ ಮುಗಿಯಿತೋ ಕಾಣೆ. ಕರ್ವಾಲೋ ಒಂದು ಹೊಸ ಜಗತ್ತನ್ನೆ ತೆರೆದಿಟ್ಟಂತೆ ಆಯಿತು ಎಂಬುದು ನಿಜವಾದರೂ, ಅದಕ್ಕಿಂತ ಮುಖ್ಯವಾಗಿ ಈ ಕಾದಂಬರಿಯಲ್ಲಿ ಅಷ್ಟೇನೂ ಮುಖ್ಯವಲ್ಲದ  ಎಷ್ಟೊ ಸಣ್ಣ ಸಣ್ಣ ಪ್ರಶ್ನೆಗಳಿಗೆ ಉತ್ತರ ದೊರಕುತ್ತಾ ಹೋಯಿತು. ಇನ್ನೂ ಕಾದಂಬರಿಗೆ ಕರ್ವಾಲೋ ಎಂಬ ಹೆಸರು ಇದೆಯಾದರೂ ಅಲ್ಲಿನ ಯಾವ ಪಾತ್ರದ ಹೆಸರನ್ನೂ ಇಟ್ಟರೂ ಸರಿಯೇ ಎಂಬಷ್ಟು ಎಲ್ಲಾ ಪಾತ್ರಗಳೂ ಲೀಲಾಜಾಲವಾಗಿ ನಮ್ಮನ್ನು ಅವರಿಸಿಕೊಳ್ಳುತ್ತವೆ. ಜಗತ್ತಿನ ವಿಕಸನದ ರಹಸ್ಯದ ಅಧ್ಯಾಯವೊಂದನ್ನು ತನ್ನಲೇ ಇಟ್ಟುಕೊಂಡು ಅದರ ಬಗ್ಗೆ ಯಾವುದೇ ಅರಿವಿಲ್ಲದಂತೆ ಬಾಳುತ್ತಿರುವ ಓತಿ, ಅದನ್ನು ಹುಡುಕಿಕೊಂಡು ಹೊರಟವರಲ್ಲಿನ ಅದೇ ನಿರ್ಭಾವ, ಕರ್ವಲೋ ಗೆ ಮಾತ್ರ ತಿಳಿದಿರುವ ಅದರ ಮಹತ್ವ ಹಾಗೂ ಆದರೂ ಅವರು ತೋರುವ ಸಂಯಮ, ಮಂದಣ್ಣನ ಬೇಜವಬ್ದಾರಿ, ಬಿರಿಯಾನಿ ಕರಿಯಪ್ಪನ ರಸಿಕತನ, ನಾಯಿ ’ಕಿವಿ’ ಯ ನಾಯ್ತನ(?), ಸ್ವತ: ತೇಜಸ್ವಿಯವರ ಉತ್ಸಾಹ, ಹಾಸ್ಯ, ಹತಾಶೆ, ಬೇಸರ, ಪ್ರಭಾಕರನ ಪ್ರಜ್ಞೆ, ಕೆಲಸದಾಳು ಪ್ಯಾರನ ಮುಗ್ದತೆ, ಮೂಡುಗೆರೆಯಂಥ ಊರುಗಳಲ್ಲಿನ, ಕಾಡುಗಳಲ್ಲಿನ ಭಾರತ, ಎಲ್ಲವೂ ಓದುಗನ ಭಾವ ಪ್ರಪಂಚದಲ್ಲಿ ಲೀನವಾಗಿತ್ತಾ ಹೋಗುವ ಪರಿಯಿಂದಾಗಿಯೇ ಕರ್ವಾಲೋ ಏಕೆ ಕನ್ನಡ ಸಾಹಿತ್ಯದಲ್ಲಿ ಒಂದು ಆಪ್ತ  ಹೆಸರು ಎಂಬ ಸತ್ಯ ಅರಿವಾಗುತ್ತದೆ. ಆ ಹುಡುಕುವ ಪಯಣದ ರೋಮಾಂಚದಲ್ಲಿ ಮುಳುಗಿ ಏಳುವ ಓದುಗನಿಗೆ ಓತಿ ಸಿಕ್ಕರೂ ಸಿಕ್ಕದಿದ್ದರೂ  ನಿರಾಸೆಯಂತೂ ಆಗುವುದಿಲ್ಲ.  

ಈ ಕಾದಂಬರಿಯಲ್ಲಿ ಮೂಡುಗೆರೆಯಂತ ಊರುಗಳ, ಜನರ ಬವಣೆಗಳ ವಿವರಗಳ ಜೊತೆಗೆ ಕಾಡಿನ ಅಗಾಧತೆ, ಅನಂತತೆಯ ಬಗೆಗಿನ ವಿವರಗಳು ಆಶ್ಚರ್ಯ, ಭಯ, ರೋಮಾಂಚ ಎಲ್ಲವನ್ನೂ ಉಂಟು ಮಾಡುತ್ತದೆ. ತೇಜಸ್ವಿಯವರು ಮೂಡುಗೆರೆಗೆ ಬಂದು ಮನೆಗೆ ಇನ್ನೂ ವಿದ್ಯುತ್ ಶಕ್ತಿ ಸಂಪರ್ಕ ಹಾಕಿಸಕೊಳ್ಳದ ವರ್ಷಗಳಲ್ಲಿ ಈ ಕಾದಂಬರಿಯನ್ನು ಬರೆದರು ಎಂಬ ತೇಜಸ್ವಿಯವರ ಪತ್ನಿ ರಾಜೇಶ್ವರಿ ನೀಡುವ ಮಾಹಿತಿಯಿಂದಾಗಿ ’ಕರ್ವಾಲೋ’ ಕತ್ತಲ್ಲಲ್ಲಿ ಹೊಳೆಯುವ ದಿವ್ಯ ತಾರೆಯಂತೆ ಆಪ್ತವಾಗಿ ಕಾಣುತ್ತದೆ.


-ಪ್ರಶಾಂತ್ ಇಗ್ನೇಶಿಯಸ್

Wednesday 4 September 2013

ಓದಬೇಕು ಮಿತ್ರರೇ......

ಒಂದು ಪುಸ್ತಕ, ಕಾದಂಬರಿ, ಆತ್ಮ ಚರಿತ್ರೆಯನ್ನು ಓದುತ್ತಿದ್ದರೆ ಆ ಕಥಾವಸ್ತು, ವ್ಯಕ್ತಿಗೆ ಮೀರಿದ ವಸ್ತುಗಳು ಅದರೊಂದಿಗೆ ನಮ್ಮ ಭಾವನಾ ಪ್ರಪಂಚಕ್ಕೆ ದೊರಕುತ್ತದೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕೇವಲ ಒಂದು ಹಳ್ಳಿಯ, ಒಂದೆರಡು ಕುಟುಂಬದ, ಒಂದು ಕಾಲದ ಕಥೆಯಾಗದೆ, ಇಡೀ ಮಲೆನಾಡಿನ ಜೀವನ ಶೈಲಿ, ಕಾಡಿನ ಸೊಬಗು, ಭಾಷೆಯ ಸೊಗಡನ್ನು ಅದ್ಭುತವಾಗಿ ತೆರೆದಿಡುತ್ತದೆ. ಮಲೆನಾಡನ್ನು ನೋಡದವನೂ ಸಹಾ ಅಲ್ಲಿನ ಪಾತ್ರಗಳೊಂದಿಗೆ ಅಲ್ಲಿನ ಹೊಲಗದ್ದೆ, ಕಾಡುಗಳಲ್ಲಿ ಓಡಾಡುತ್ತಾ ಮಳೆಯಲ್ಲಿ ನೆಂದಂತ ಅನುಭವ ಸಿಗುತ್ತದೆ
***************************************************************************
ಮೊನ್ನೆ, ಲೇಖಕ ವಿಕ್ರಮ್ ಸೇಥ್‌ಗೆ ಪೆಂಗ್ವಿನ್ ಪ್ರಕಾಶನ ಸಂಸ್ಥೆ ನೀಡಿದ ಮುಂಗಡವನ್ನು ವಾಪಸ್ ಕೇಳಿತು ಎಂಬ ಸುದ್ದಿ ದಿನಪತ್ರಿಕೆಯಲ್ಲಿತ್ತು. ಆ ಸಂಸ್ಥೆ ಲೇಖಕನಿಗೆ ಕೊಟ್ಟಿದ್ದ ಹಣ 9.5 ಕೋಟಿಯಷ್ಟು. ಅದು ಮುಂಗಡ, ಅಂದರೆ ಅಡ್ವಾನ್ಸ್ ಅಷ್ಟು. ಮುಂಗಡದ ಹಣವೇ ಅಷ್ಟು ಎಂದ ಮೇಲೆ ಪೂರ್ತಿ ಹಣ ಇನ್ನೆಷ್ಟಿರಬೇಕು? ಇನ್ನೂ ಆ ಪುಸ್ತಕದಿಂದ ಬರಬಹುದಾದ ಲಾಭವೆಷ್ಟಿರಬಹುದು? ಅಂದರೆ ಇನ್ನೂ ಬರೆದು ಮುಗಿಯದ ಆ ಪುಸ್ತಕವನ್ನು ಕೊಳ್ಳುವವರು ಎಷ್ಟಿರಬಹುದು? ಅಷ್ಟು ಜನ ಕೊಂಡು ಓದುತ್ತಾರೆ ಎಂಬುದೇ ಸಂತೋಷದ ವಿಷಯ ಅಚ್ಚರಿಯ ವಿಷಯವೂ ಹೌದು. ಏಕೆಂದರೆ ನನ್ನ ಬಳಿಯೇ ಇರುವ ಎಷ್ಟೋ ಕನ್ನಡ ಪುಸ್ತಕಗಳನ್ನು ತೆಗೆದು ಪ್ರಾರಂಭದಲ್ಲಿ ಸಿಗುವ ಪ್ರತಿಗಳ ವಿವರವನ್ನು ನೋಡಿದಾಗ ಬಹಳಷ್ಟು ಪುಸ್ತಕಗಳು 1000 ಎಂದಿವೆ. ದುಂಡಿರಾಜರ ಹನಿಗವನದ ತರಹ ಪುಸ್ತಕಗಳು 2000 ಅಚ್ಚಾಗುತ್ತವೆ. ನಾಲ್ಕೈದು ಕೋಟಿಯಷ್ಟಿರುವ ಕರ್ನಾಟಕದ ಜನಸಂಖ್ಯೆಯಲ್ಲಿ ಜನಪ್ರಿಯ ಪುಸ್ತಕಗಳೂ ಸೇರಿದಂತೆ ಓದುವುದು 2000 ಜನರು ಮಾತ್ರವೇ?? ಸುಮಾರು 17 ಮರು ಮುದ್ರಣಗಳನ್ನು ಕಂಡ ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಓದಿದ ಅಷ್ಟೂ ಜನರು ಏನಾದರು? ಬೇಂದ್ರೆ, ಬೈರಪ, ಅನಂತಮೂರ್ತಿ, ಮಾಸ್ತಿ, ಮುಂತಾದವರ ಪುಸ್ತಕಗಳನ್ನು ಮುಗಿಬಿದ್ದು ಓದುತ್ತಿದ್ದ ಆ ಓದುವ ಪರಂಪರೆ ಎಲ್ಲಿ ಹೋಯಿತು? ನಮ್ಮ ನಾಯಕರ, ಸಿನಿಮಾ ನಟ ನಟಿಯರ, ಸಮಾಜದ ಪ್ರಮುಖ ವ್ಯಕ್ತಿಗಳ ಮಾತು, ಸಂದರ್ಶನಗಳನ್ನು ನೋಡುತ್ತಿದ್ದರೆ ಅರಿವಾಗುತ್ತದೆ. ಅವರೆಲ್ಲಾ ಹೆಚ್ಚು ಓದುತ್ತಿಲ್ಲ ಎಂಬ ಸಂಗತಿ.


ಈಗ ಎಲ್ಲದಕ್ಕೂ ಟ್ರಾಫಿಕ್, ಕೆಲಸ, ಟಿ.ವಿಯನ್ನು ದೂಷಿಸುವುದು ಅಭ್ಯಾಸವಾಗಿ ಹೋಗಿದೆ ನಮಗೆ. ಇಂದು ಯಾರಾದರೂ ಎಲ್ಲಿಗಾದರೂ ತಡವಾಗಿ ಬಂದರೆ ತಟ್ಟನೆ ಕೊಡುವ ಉತ್ತರ ತುಂಬಾ ಟ್ರಾಫಿಕ್, ಟ್ರಾಫಿಕ್ ಎನ್ನುವುದು ನಿಜವಾದರೂ ಬೆಂಗಳೂರಿನ ಮಟ್ಟಿಗಂತೂ ಇದು ಸುಮಾರು ಹತ್ತು ವರ್ಷದಿಂದ ಇರುವಂಥದ್ದೆ. ಇಂದು ನಾವೆಲ್ಲಿಗೆ ಹೊರಟರೂ ಆ ಟ್ರಾಫಿಕ್ ನಮ್ಮ ಪ್ರಯಾಣದ ಲೆಕ್ಕಚಾರದಲ್ಲಿ ಇದ್ದೆ ಇದೆ. ಆದರೂ ಟ್ರಾಫಿಕ್ಕನ್ನು ಸಮಜಾಯಿಸಿ ಕೊಡುವುದು ಇನ್ನು ಬಿಟ್ಟಿಲ್ಲ. ನಮ್ಮ ಟ್ರಾವೆಲ್ಸ್‌ನ ಡ್ರೈವರುಗಳು, ಕಾರ್ಖಾನೆ, ಕಛೇರಿ, ಶಾಲೆ ವಿದ್ಯಾರ್ಥಿಗಳೆಲ್ಲಾ ತಮ್ಮ ಕೆಲಸ, ಶಾಲೆಗಳಿಗೆ ಸರಿಯಾಗಿಯೇ ಹೋಗುತ್ತಾರೆ, ಏಕೆಂದರೆ ಅಲ್ಲಿಗೆ ಹೋಗುವಾಗಲೆಲ್ಲಾ ಟ್ರಾಫಿಕ್‌ನ ಲೆಕ್ಕಾಚಾರಗಳೊಂದಿಗೆ ನಾವು ಪ್ರಯಾಣ ಮಾಡುವುದು. ಅದೇ ಸಭೆ ಸಮಾರಂಭ, ದೇವಾಲಯ, ಪೂಜೆಗಳಿಗೆ ಹೋಗುವಾಗ ಮಾತ್ರ ತಡವಾಗಿ ಹೋಗುವುದಕ್ಕೆ ಟ್ರಾಫಿಕ್ ನೆಪವಾಗುತ್ತದೆ.

ಅಂತೆಯೇ ಈ ನಮ್ಮ ಓದುವ ಅಭ್ಯಾಸ, ಹವ್ಯಾಸ ಕಡಿಮೆಯಾಗುತ್ತಿರುವುದಕ್ಕೆ ನಾವು ಕೊಡುತ್ತಿರುವ ನೆಪ ಅದೇ. ಕೆಲಸ, ಸಮಯದ ಅಭಾವ ಇತ್ಯಾದಿ. ಆದರೆ ನಿಜಕ್ಕೂ ಓದು ಎನ್ನುವುದರ ಅರ್ಥವೇ ಬದಲಾಗತೊಡಗಿದೆಯೇನೋ ಎಂದೆನಿಸುತ್ತಿದೆ. ಇಂದು ಓದು ಎನ್ನುವುದು ಶಾಲೆಯ ಓದು ಬರಹ ಎನ್ನುವುದಕ್ಕಷ್ಟೇ ಸೀಮಿತವಾಗುತ್ತದೆ. ಅದು ಬಿಟ್ಟರೆ ಓದು ಬೇಕಾಗಿರುವುದು ಮಾಹಿತಿಗಾಗಿ ಮಾತ್ರ. ಹಿಂದೆಲ್ಲಾ ಓದುವುದು ಎನ್ನುವುದಕ್ಕೆ ಅದೆಷ್ಟು ಆಯಾಮಗಳಿದ್ದವು. ಓದು ಜ್ಞಾನಾರ್ಜನೆಯ ಪ್ರಮುಖ ಸಾಧನವಾದರೆ, ಸಂತೋಷಕ್ಕಾಗಿ, ಮನೋರಂಜನೆಗಾಗಿ, ಜೀವನಪ್ರೀತಿ, ಕೊನೆಗೆ ಬೇಸರ ಕಳೆಯುವಿಕೆಗೂ ಮುಖ್ಯವಾದ ಮಾಧ್ಯಮವಾಗಿತ್ತು. ಇವುಗಳ ಜೊತೆ ಜೊತೆಗೆ ಮಾಹಿತಿ, ತೃಪ್ತಿ, ಆತ್ಮವಿಶ್ವಾಸ ಎಲ್ಲವನ್ನೂ ಓದು ನೀಡುತ್ತಿತ್ತು. ಆದರೆ ಇಂದು ಇವಕ್ಕೆಲ್ಲಾ ಬೇರೆ ಬೇರೆ ಮಾಧ್ಯಮಗಳು ಬಂದು ಕೂತಿವೆ. ಜ್ಞಾನ, ಮಾಹಿತಿಗಳು ಕಂಪ್ಯೂಟರ್ ಮೂಲಕ ಬೆರಳ ತುದಿಯಲ್ಲಿವೆ. ಮನೋರಂಜನೆಯ ನೆಪದಲ್ಲಿ ಟಿ.ವಿ. ನಮ್ಮೆನ್ನೆಲ್ಲಾ ಆಳುತ್ತಾ ಮನೆಯಲ್ಲಿ ಕೆಡವಿ ಬೀಳಿಸಿವೆ. ಸಿಗುತ್ತಿರುವ ಸಾವಿರ ಸಾವಿರ ಸಂಬಳದಲ್ಲೇ ತೃಪ್ತಿ, ಆತ್ಮ ವಿಶ್ವಾಸಗಳನ್ನು ಕಂಡುಕೊಳ್ಳುತ್ತಾ, ಸಿಕ್ಕಿದ್ದನ್ನು ಕೊಂಡುಕೊಳ್ಳುತ್ತಿರುವಾಗ ಓದಿನಿಂದ ಸಿಗುವ ಲಾಭವಾದರೂ ಏನು ಎಂಬುದು ಮನಸಿನಾಳದ ಪ್ರಶ್ನೆ.

ಓದುವುದಕ್ಕೆ ಸಮಯವಿಲ್ಲವೆನ್ನುವುದು ಸ್ವಲ್ಪ ಮಟ್ಟಿಗೆ ನಿಜವೆನಿಸಿದರೂ ಅದು ಸುಳ್ಳೂ ಹೌದು. ನಮ್ಮ ಬಹುತೇಕ ಗೆಳೆಯರು ಚಾಟ್‌ಗಳಲ್ಲಿ, ಫೇಸ್ ಬುಕ್ಕಿನಲ್ಲಿ ಟ್ವಿಟ್ಟರ್‌ನಲ್ಲಿ, ಇಂದು ಸಿಗುತ್ತಾರೆ. ಸಿಗುವುದೇನು ಸಾಕಷ್ಟು ಸಮಯ ಅಲ್ಲಿ ಕಳೆಯುತ್ತಾರೆ. ಅದು ಕಂಪ್ಯೂಟರ್‌ನಲ್ಲಿ ಕೆಲಸ ಉದ್ಯೋಗ ಮಾಡುವವರಿಗೆ ಸಿಗುವ ಸೌಲಭ್ಯ. ಕೆಲಸ ಮಾಡುತ್ತಿರುವಂತೆಯೇ ಒಂದು ಸುತ್ತು ಇವೆಲ್ಲದರ ಬಳಿಗೆ ಹೋಗಿ ಬಂದುಬಿಡಬಹುದು. ಅಷ್ಟೇ ಸಮಯದಲ್ಲಿ ಒಂದು ಪುಸ್ತಕವನ್ನು ಓದಲು ಸಾಧ್ಯವಿಲ್ಲ ಅಲ್ಲವೇ, ಅವಕಾಶವೂ ಇಲ್ಲ. ಆದರೆ ಇಂದು ನಾವೆಲ್ಲ ಓದುವುದಿಲ್ಲ ಎನ್ನುವುದಕ್ಕೆ ಸಮಯವಿಲ್ಲವೆನ್ನುವುದು ಮಾತ್ರ ಕಾರಣವೇನಲ್ಲ. ಉದ್ಯೋಗಕ್ಕೆ, ನಮ್ಮ ಮಾಹಿತಿಗಷ್ಟೇ ನಮ್ಮ ಓದು ಸೀಮಿತವಾಗಿದೆಯಷ್ಟೇ.ನಮ್ಮ ಗೆಳೆಯರ ನಡುವಲ್ಲೇ ಒಂದು ವಿಷಯದ ಬಗ್ಗೆ, ಪುಸ್ತಕಗಳ ಬಗ್ಗೆ ಮಾತನಾಡೋಣವೆಂದರೆ ಪುಸ್ತಕ, ಕಾದಂಬರಿ, ಕಥೆಯಿರಲಿ ಪತ್ರಿಕೆ ಮನೆಗೆ ತರೆಸಿ ಓದುವವರೇ ಹತ್ತಕ್ಕಿಂತ ಹೆಚ್ಚಾಗಿ ಸಿಗುವುದು ಕಷ್ಟವಾಗಿದೆ. ಟಿ.ವಿ.ಗಳ ಬ್ರೇಕಿಂಗ್ ನ್ಯೂಸ್‌ಗಳೇ ಇಂದಿನ ಸುದ್ದಿಗಳ ಪ್ರಮುಖ ಮೂಲ. ನಾವೇಕೆ ಓದಬೇಕು? ಓದುವುದರಿಂದ ಬರುವ ಲಾಭವಾದರೂ ಏನು ಎಂಬುದಕ್ಕೆ ನಿಖರವಾದ ಉತ್ತರ ಹೊಳೆಯುತ್ತಿಲ್ಲವಾದರೂ ಒಂದು ಶಾಲೆ, ವಿಶ್ವವಿದ್ಯಾಲಯ ನೀಡುವಂಥ ಜ್ಞಾನ ಸಂಪಾದನೆ ಓದಿನಿಂದಲೂ ಸಾಧ್ಯವಿದೆ. ತಂದೆ ತಾಯಿ, ಕುಟುಂಬ ಮನೆಯ ವಾತಾವರಣದಿಂದ ದೊರಕುವ ಸಂಸ್ಕಾರ ಓದಿನಿಂದಲೂ ಸಾಧ್ಯ. ನಮ್ಮ ಮನೆಯ ಮುಂದಿನ ಕಸಗುಡಿಸುತ್ತಾ ಪಕ್ಕದ ಮನೆಯ ಮುಂದೆ ತಳ್ಳಬಾರದೆಂಬ ಸೂಕ್ಷ್ಮ ಗ್ರಹಿಕೆಗಳು, ರಸ್ತೆಯಲ್ಲಿ ವಾಹನ ಓಡಿಸುವಾಗ ನಮ್ಮ ಬದಿ ಬಿಟ್ಟು ಮತ್ತೊಂದು ಬದಿಗೆ ಹೋದರೆ ಎದುರಿನಿಂದ ಬರುವವರಿಗೆ ತೊಂದರೆಯಾಗುತ್ತದೆ, ಟ್ರಾಫಿಕ್ ಅಡಚಣೆಯಾಗುತ್ತದೆ ಎಂಬ ಸಂವೇದನೆಯುಳ್ಳ ಮನಸ್ಸು, ನೊಂದ ಗೆಳೆಯನಿಗೆ ನೆರವಾಗುವ ಮಿಡಿತ, ಎದುರಿಸುತ್ತಿರುವ ಅನ್ಯಾಯ, ದೌರ್ಜನ್ಯವನ್ನು ಸಣ್ಣದಾಗೆ ಪ್ರತಿಭಟಿಸುವ ತುಡಿತ, ಇಂಥ ಅನೇಕವುಗಳನ್ನು ಪುಸ್ತಕಗಳ ಓದು ನಮಗೆ ಒದಗಿಸಿಕೊಡುತ್ತದೆ. ಓದಿದನ್ನು ಗ್ರಹಿಸಿ, ಅಳವಡಿಸಿಕೊಳ್ಳದಿದ್ದರೆ ಪುಸ್ತಕದ ಬದನೆಕಾಯಿ ಆಗುವುದು ಇದೆ. ಅದು ಮತ್ತೊಂದು ವಿಷಯ. ಇಷ್ಟೆಲ್ಲಾ ಆಗಿ ಏನಾಗಬೇಕಾಗಿದೆ, ಇದರಿಂದ ಜೀವನ ನಡೆವುದೇ? ಜೀವನಕ್ಕೆ ಏನು ಲಾಭ ಎಂಬ ಪ್ರಶ್ನೆ ಬಂದರೆ ಅದಕ್ಕೆ ಉತ್ತರವಿಲ್ಲ. ಓದುವ ರೂಢಿ ರುಚಿ ಬೆಳೆಸಿಕೊಂಡಿರುವ ಹಾಗೆ ಕೇಳುವುದೂ ಇಲ್ಲ. ಬಲ್ಲವನೇ ಬಲ್ಲ ಬೆಲ್ಲದ ರುಚಿ ಎಂಬಂತೆ.

ಒಂದು ಪುಸ್ತಕ, ಕಾದಂಬರಿ, ಆತ್ಮ ಚರಿತ್ರೆಯನ್ನು ಓದುತ್ತಿದ್ದರೆ ಆ ಕಥಾವಸ್ತು, ವ್ಯಕ್ತಿಗೆ ಮೀರಿದ ವಸ್ತುಗಳು ಅದರೊಂದಿಗೆ ನಮ್ಮ ಭಾವನಾ ಪ್ರಪಂಚಕ್ಕೆ ದೊರಕುತ್ತದೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕೇವಲ ಒಂದು ಹಳ್ಳಿಯ, ಒಂದೆರಡು ಕುಟುಂಬದ, ಒಂದು ಕಾಲದ ಕಥೆಯಾಗದೆ, ಇಡೀ ಮಲೆನಾಡಿನ ಜೀವನ ಶೈಲಿ, ಕಾಡಿನ ಸೊಬಗು, ಭಾಷೆಯ ಸೊಗಡನ್ನು ಅದ್ಭುತವಾಗಿ ತೆರೆದಿಡುತ್ತದೆ. ಮಲೆನಾಡನ್ನು ನೋಡದವನೂ ಸಹಾ ಅಲ್ಲಿನ ಪಾತ್ರಗಳೊಂದಿಗೆ ಅಲ್ಲಿನ ಹೊಲಗದ್ದೆ, ಕಾಡುಗಳಲ್ಲಿ ಓಡಾಡುತ್ತಾ ಮಳೆಯಲ್ಲಿ ನೆಂದಂತ ಅನುಭವ ಸಿಗುತ್ತದೆ. ಒಂದು ಕಾಲದ ಜನರ ಸಾಮಾಜಿಕ, ಆರ್ಥಿಕ, ಸ್ಥಿತಿಗತಿಗಳ ಕಡೆ ಬೆಳಕು ಚೆಲ್ಲುತ್ತದೆ. ಇನ್ನೂ ಅನೇಕ ಸೂಕ್ಷ್ಮ ಸಂಗತಿಗಳು ನಮಗೆ ಕಾಣಸಿಗುತ್ತವೆ. ಇದು ಒಂದು ಕಾದಂಬರಿಯ ಲಾಭ. ಬೈರಪ್ಪನವರ ಭಿತ್ತಿ ಆತ್ಮಕಥೆಯಾದರೂ ಬಾಲಕನೊಬ್ಬನ ತಲ್ಲಣ, ಹತಾಶೆ, ಪ್ರಯತ್ನಗಳ ಜೊತೆ ಜೊತೆಯಲ್ಲೇ ಒಂದು ಕಾಲಘಟ್ಟದ ಸಾಮಾಜಿಕ ಪರಿಸ್ಥಿತಿ, ವ್ಯವಸ್ಥೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಡುತ್ತದೆ. ಒಬ್ಬ ಬರಹಗಾರನ ಪ್ರೇರಣೆ, ಬೆಳವಣಿಗೆ, ಒಂದು ಕೃತಿ ಹುಟ್ಟಿಕೊಳ್ಳುವ, ಹಂತ ಹಂತವಾಗಿ ಬೆಳೆಯುವ, ಅದರ ಹಿಂದಿನ ತಯಾರಿ ಎಲ್ಲವೂ ಅದರಲ್ಲಿ ಸಿಗುತ್ತವೆ. ಅಷ್ಟರ ಮಟ್ಟಿಗೆ ಅದರ ಓದುಗ ಅನುಭವದಲ್ಲಿ ಶ್ರೀಮಂತ. ತೇಜಸ್ವಿಯವರ ಅಣ್ಣನ ನೆನಪು ಪುಸ್ತಕದಲ್ಲಿ ಕುವೆಂಪುರವರು ಒಬ್ಬ ರಾಷ್ಟ್ರಕವಿ ಎನ್ನುವುದಕ್ಕಿಂತ ತಂದೆಯಾಗಿ, ಪತಿಯಾಗಿ, ಕುಲಪತಿಯಾಗಿ, ಬೆಳಗಿನ ದಿನಪತ್ರಿಕೆಗಾಗಿ ಕಾಯುವ ಸಾಮಾನ್ಯವಾಗಿ ನಮಗೆ ಓದಲು ಸಿಗುತ್ತಾರೆ. ಮೈಸೂರು ಹಾಗೂ ಸುತ್ತಮುತ್ತದ ೬೦, ೭೦ ದಶಕದ ಜೀವನ ಹೇಗಿತ್ತು ಎಂಬುದರ ಒಳ ಸುಳಿವು, ಪೇಚಾಟಗಳು ನಮ್ಮ ಅನುಭವಕ್ಕೆ ಸಿಗುತ್ತದೆ. ತೇಜಸ್ವಿಯವರ ಇನ್ನಿತರ ಕಾದಂಬರಿ, ಪುಸ್ತಕಗಳಂತೂ ನಮ್ಮಂಥ ನಗರದವರು ಕಾಣದ, ಇನ್ನೆಂದೂ ನೋಡಲು ಸಾಧ್ಯವಾಗದಂಥ ಅದ್ಭುತ ಪ್ರಪಂಚವನ್ನೆ ತೆರೆದಿಡುತ್ತದೆ. ಒಬ್ಬ ದಲಿತನ, ಸಮಾಜದಲ್ಲಿ ಶೋಷಣೆಗೊಳಗಾದವನ ನೋವು, ಹತಾಶೆ ಸಿದ್ಧಲಿಂಗಯ್ಯ, ದೇವನೂರರ ಕವಿತೆಗಳು ನಮ್ಮ ಮನಸ್ಸಿಗೆ ದಾಟಿಸುತ್ತವೆ, ಸೂಕ್ಷ್ಮ ಕವಿ ಮನಸ್ಸಿನ ತುಂಟತನ ಲಕ್ಷ್ಮಣರಾವ್‌ರವರ ಕವಿತೆಗಳಲ್ಲಿ ಸಿಗುತ್ತವೆ. ಜಿ.ಪಿ. ರಾಜರತ್ನಂರವರ ರತ್ನನ ಪದಗಳು ಮೇಲೆ ಕಣ್ಣಾಡಿಸುತ್ತಿದ್ದಂತೆ ಅವುಗಳಿಗೆ ಸಂಗೀತ ರೂಪ ಕೊಟ್ಟ ಮೈಸೂರು ಅನಂತಸ್ವಾಮಿಯವರ ತಾಳ ಜ್ಞಾನದ ಬಗ್ಗೆ ಆಶ್ಚರ್ಯ ಮೂಡುತ್ತದೆ. ಶಿಶುನಾಳ ಶರೀಫರ ಪದ್ಯಗಳು ಸಿ. ಅಶ್ವತ್ಥರ ಧ್ವನಿಯಲ್ಲಿ ಕಂಡುಕೊಳ್ಳುವ ಪರಿಪೂರ್ಣತೆಗೆ ಮನಸ್ಸು ತುಂಬಿಕೊಳ್ಳುತ್ತದೆ.

ಇನ್ನೂ ನಮ್ಮದೇ ಬೈಬಲಿನ ವಿಷಯಕ್ಕೆ ಬಂದರೆ, ಜಗತ್ತಿನ ಅತಿ ಹೆಚ್ಚು ಮಾರಾಟವಾಗುವ ಪುಸ್ತಕವೆಂಬ ಹೆಗ್ಗಳಿಕೆ ಅದರದು. ಆದರೆ ಬೈಬಲ್ ನಿಜಕ್ಕೂ ಅತಿ ಹೆಚ್ಚು ಮಂದಿ ಓದುವ ಪುಸ್ತಕವೇ ಎಂಬ ಪ್ರಶ್ನೆಯೂ ಜೊತೆಗೇ ಕೇಳಿ ಬರುತ್ತವೆ. ಇಂದಿಗೂ ಬೈಬಲನ್ನು ನಾವು ಒಂದು ಧಾರ್ಮಿಕ ಅಥವಾ ಆಧ್ಯಾತ್ಮಿಕ ನೆಲೆಯಲ್ಲಿ ಮಾತ್ರ ಓದುತ್ತೇವೆ. ಆದರೆ ಅದನ್ನು ಮೀರಿದ ಮೌಲಿಕ, 
ಮಾನವೀಯ, ಸಾಹಿತ್ಯಿಕ ಆಯಾಮಗಳು ಅದರಲ್ಲಿದೆ ಎಂಬ ಸತ್ಯವನ್ನು ನಾವು ಮನಗಾಣಬೇಕಾಗಿದೆ. ನಮ್ಮ ಓದುವ ಅಭ್ಯಾಸ ಹಾಗೂ ಹವ್ಯಾಸ ಇಲ್ಲಿ ಮತ್ತೆ ಕೆಲಸಕ್ಕೆ ಬರುತ್ತದೆ. ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಖಲೀಲ್ ಗಿಬ್ರಾನರ ಬರಹಗಳಲ್ಲಿ ಯೇಸು ಕ್ರಿಸ್ತನ ಜೀವನ ಬೋಧನೆಯ ಅನೇಕ ಒಳನೋಟಗಳು ಕಾಣಸಿಗುತ್ತವೆ. ಯು.ಆರ್. ಅನಂತಮೂರ್ತಿ, ಎಚ್.ಎಸ್. ವೆಂಕಟೇಶ್ ಮೂರ್ತಿ, ಸಾ.ಶಿ. ಮರುಳಯ್ಯನವರು ಮುಂತಾದವರು ಯೇಸುಕ್ರಿಸ್ತನನ್ನು ಅರ್ಥ ಮಾಡಿಕೊಂಡಿರುವ ಪರಿಯನ್ನು ಅವರ ಭಾಷಣಗಳಲ್ಲಿ ಕೇಳಿ ಅಚ್ಚರಿಗೊಂಡಿದ್ದೇನೆ. ಸಾ.ಶಿ. ಮರುಳಯ್ಯನವರಂತೂ ತಮ್ಮ ಒಂದು ಭಾಷಣದಲ್ಲಿ ಯೇಸು ಮಾನವನನ್ನು ಉಪ್ಪಿಗೆ ಹೋಲಿಸಿದರ ಮಹತ್ವವನ್ನು ಎಳೆ ಎಳೆಯಾಗಿ ಬಿಡಿಸಿ ವಿವರಿಸಿದ್ದು ಇಂದಿಗೂ ಯಾವುದೇ ಪ್ರಬೋಧನೆಗಿಂತ ಹೆಚ್ಚು ನೆನಪಿದೆ. ನಮ್ಮಲ್ಲೂ ಫಾ. ಅಂತಪ್ಪ, ಚಸರಾ, ವಿಲಿಯಂ, ನಾ. ಡಿಸೋಜ, ತಲ್ವಾಡಿ, ಶ್ರೀ.ಸ್ವಾಮಿ, ನಂದಗಾವ್, ಮರಿಜೋಸೆಫ್ ಮುಂತಾದವರು ಬರಹಗಳು ನಮಗೆ ಸಿಗುತ್ತವೆ. ಇದೆಲ್ಲವೂ ಅವರಿಗೆ ಸಾಧ್ಯವಾಗಿರುವುದು ಬೈಬಲ್ಲನ್ನು ಸಹಾ ಒಂದು ಉನ್ನತವಾದ ಗ್ರಂಥದಂತೆ ಓದುವ, ಅಭ್ಯಾಸಿಸುವ, ಅವರ ಅಧ್ಯಯನಶೀಲ, ಸಂವೇದನಾಶೀಲ ಮನಸ್ಸಿನಿಂದ. ಆ ಮನಸ್ಸು ದೊರಕುವುದು ಬಹುಮಟ್ಟಿಗೆ ಓದಿನಿಂದಲೇ.

ಹಾಗೆಂದ ಮಾತ್ರಕ್ಕೆ ಓದು ಎಲ್ಲವನ್ನು ನೀಡುತ್ತದೆ, ಅದೇ ಅಂತಿಮ ಎನ್ನುವುದೂ ತಪ್ಪಾಗುತ್ತದೆಯೇನೋ. ಓದು ಬರಹವಿಲ್ಲದ ನಮ್ಮ ಪೂರ್ವಜರು, ಹಿರಿಯರು ಸಹಾ ಸಜ್ಜನರು,ಸಾಂಸ್ಕೃತಿಕ ರಾಯಭಾರಿಗಳು,ಸಂವೇದನಾಶೀಲರಾಗಿದ್ದರು.ಆದರೆ ಅವೆಲ್ಲವೂ ಅವರಿಗೆ ತಮ್ಮ ಜೀವನಾನುಭವದಿಂದ, ತಮ್ಮ ಹಿರಿಯರಿಂದ ಪರಂಪರೆಯಿಂದ ಬಳುವಳಿಯಾಗಿಯೂ ಬಂದಿತ್ತು. ಮನುಷ್ಯ ಹೆಚ್ಚು ಸಮಾಜಮುಖಿಯಾಗಿದ್ದ ಹಾಗೂ ಇತರರೊಡನೆ, ಪರಿಸರದೊಡನೆ ಹೆಚ್ಚು ಒಡನಾಟವಿಟ್ಟುಕೊಂಡಿದ್ದ ಸಂದರ್ಭವಾಗಿತ್ತು. ಒಂದು ತುಂಬು ಕುಟುಂಬದಲ್ಲಿ ಬೆಳೆದ ಮಗುವಿನ ಮೇಲೆ ತಂದೆ ತಾಯಿ ಮಾತ್ರವಲ್ಲದೆ, ಅದರ ಅಜ್ಜನನಡುವಳಿಕೆ, ಅಜ್ಜಿಯ ಲಾಲನೆ, ಕಥೆಗಳು, ದೊಡ್ಡಪ್ಪ, ಚಿಕ್ಕಪ್ಪರ ಮಾತು, ಹಾಸ್ಯಪ್ರಜ್ಞೆ ಎಲ್ಲವೂ ಪ್ರಭಾವ ಬೀರುತ್ತಿತ್ತು. ಆದರೆ ಇಂದಿನ ಮಕ್ಕಳಿಗೆ, ಯುವಕರಿಗೆ ಆ ಸೌಲಭ್ಯಗಳಿಲ್ಲ. ಆಧುನಿಕ ಜೀವನದ ರಭಸದಲ್ಲಿ ಇವೆಲ್ಲವನ್ನು ಇನ್ನೆಲ್ಲಿಯಾದರೂ ನೋಡಿ, ಕೇಳಿ, ಓದಿ ಪಡೆಯಬೇಕಾಗಿದೆ. ಅದಕ್ಕೆ ಓದು ಒಂದು ಉತ್ತಮ ಸಾಧನವಾಗಬಹುದೆಂಬ ಒಂದು ಸಣ್ಣ ಆಸೆ ನಮ್ಮದಾಗಬೇಕು.

-ಪ್ರಶಾಂತ್ ಇಗ್ನೇಶಿಯಸ್