Tuesday, 10 June 2014

ಯಶಸ್ಸಿನ ಸೂತ್ರಗಳು??

ಹಳೆಯ ಕತೆ. ಇಬ್ಬರು ಗೆಳೆಯರು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಹಠಾತ್ತನೆ ಎದುರಿಗೆ ಒಂದು ಹುಲಿ ಬರುವುದು ಕಾಣಿಸಿತು. ಹೇಗೆ ಓಡಿದರೂ ಹುಲಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ತಕ್ಷಣವೇ ಒಬ್ಬ ತನ್ನ ಕೈ ಚೀಲದಿಂದ ಓಡಲು ಉಪಯೋಗಿಸುವ ಶೂ ತೆಗೆದುಕೊಂಡು ಹಾಕಿಕೊಳ್ಳಲು ಪ್ರಾರಂಭಿಸಿದ. ಭಯದ ನಡುವೆಯೂ ಇನ್ನೊಬ್ಬನಿಗೆ ಇದು ಏಕೋ ಅತಿ ಎನಿಸಿತು. ಆ ಶೂ ಹಾಕಿಕೊಂಡರೆ ಹುಲಿಗಿಂತ ವೇಗವಾಗಿ ಓಡಿ ತಪ್ಪಿಸಿಕೊಳ್ಳಲು ಸಾಧ್ಯಾನ? ದಡ್ಡ” ಎಂದ. ಶೂ ಹಾಕಿ ನಿಂತವನು ಹೇಳಿದ “ಹುಲಿಗಿಂತ ಜೋರಾಗಿ ಓಡೋದು ಬೇಡ. ನಿನಗಿಂತ ಜೋರಾಗಿ ಓಡಿದರೆ ಸಾಕು”

 ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಎಲ್ಲರ ಗುರಿ. ಆ ಯಶಸ್ಸನ್ನುಮುಟ್ಟಬೇಕಾದರೆ ಮತ್ತೊಬ್ಬರನ್ನು ಸೋಲಿಸುವುದು, ಹಿಂದೆ ಹಾಕುವುದು, ಮೀರಿಸುವದೇ ಗುರಿಯಾದಾಗ, ಯಶಸ್ಸು ಅಥವಾ ಗೆಲುವು ಎನ್ನುವುದರ ಅರ್ಥ ಬದಲಾವಣೆಯಾಗುತ್ತದೆ. ಸೋಲು ಅನಾಥ ಯಶಸ್ಸಿಗೋ ಹತ್ತಾರು  ತಾಯಿ ತಂದೆ ಎಂಬ ಮಾತಿದೆ. ಹಾಗೆಯೇ ಯಶಸ್ಸಿನ ಹಿಂದೆ ಬೆನ್ನು ಬಿದ್ದವರು ಮಾತ್ರ ಕೋಟ್ಯಾಂತರ. ಆ ಓಟದಲ್ಲಿ ನಾವು ನೀವೂ ಎಲ್ಲರೂ ಭಾಗಿ.ಯಶಸ್ಸಿನ ಬಗ್ಗೆ ನೂರಾರು ಗಾದೆಗಳು, ಮಾತುಗಳು, ನುಡಿಮುತ್ತುಗಳು, ಭಾಷಣಗಳನ್ನು ಕೇಳುತ್ತಲೇ ಇರುತ್ತೇವೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದರ ಜೊತೆ ಜೊತೆಗೆ ಇಂದು ಒಬ್ಬ ಯಶಸ್ವಿ ಅವಿವಾಹಿತ ಹುಡುಗನ ಹಿಂದೆ ಹತ್ತಾರು ಹುಡುಗಿಯರು ಇರುತ್ತಾರೆ ಎನ್ನುವಷ್ಟರ ಮಟ್ಟಿಗೆ ಯಶಸ್ಸಿನ ವ್ಯಾಖ್ಯಾನ ಬದಲಾಗುತ್ತಲೇ ಇರುತ್ತದೆ. ಎಲ್ಲರಿಗೂ ಯಶಸ್ಸನ್ನು ಕಂಡರೆ ಅಪಾರ ಪ್ರೀತಿ, ಆದರೆ ಯಶಸ್ವಿ ವ್ಯಕ್ತಿಯನ್ನು ಕಂಡರೆ ಮಾತ್ರ ಅದೇಕೋ ಅಸೂಯೆ ಎನ್ನುತ್ತಾನೆ ಲೇಖಕನೊಬ್ಬ.ಅಷ್ಟಕ್ಕೂ ಯಶಸ್ಸೆಂದರೆ ಏನು?

 ಬೆಂಗಳೂರಿನ ಯಾವುದಾದರೂ ರಸ್ತೆಯಲ್ಲಿ ಹಾದು ಹೋಗುವಾಗ ಗೋಡೆಗೆ ಅಂಟಿಸಿರುವ ಇತ್ತೀಚಿನ ಪೋಸ್ಟರ್ ಗಳನ್ನು ಗಮನಿಸಿದರೆ ಸ್ವಾರಸ್ಯಕರ ಸಂಗತಿಗಳು ಕಾಣಿಸುತ್ತವೆ. ಇಂದಿನ ಜನಜಂಗುಳಿಯ ಟ್ರಾಫಿಕ್ ಹಾಗೂ ವಾಹನ ಚಾಲಕರ ಅವರಸದ ಮಧ್ಯೆ ಪೋಸ್ಟರ್ ನೋಡುತ್ತ ನಿಲ್ಲುವುದು ದುಸ್ತರದ ಮಾತೇ. ಎಲ್ಲರೂ ಯಶಸ್ಸಿನ ಬೆನ್ನೇರಿ ಅವರಸದಲ್ಲಿ ಹೊರಟವರೇ.ಪೋಸ್ಟರ್ ನೋಡುತ್ತಾ ಮೈ ಮರೆತರೆ, ಭಾವಪೂರ್ಣ ಶ್ರದ್ಧಾಂಜಲಿ ಎಂಬ ತಲೆಬರಹ, ಮತ್ತೆ ಹುಟ್ಟಿ ಬಾ ಎನ್ನುವ ಅಡಿಬರಹದ ಮಧ್ಯೆ ನಾವೇ ಗೋಡೆ ಮೇಲಿನ ಪೋಸ್ಟರ್ ಆಗುವ ಸಂಭವ ಹೆಚ್ಚು,. ಅದರೂ ಸಿಕ್ಕ ಸ್ವಲ್ಪ ಸಮಯದಲ್ಲೇ ಕಣ್ಣಾಡಿಸಿದರೆ ಕಾಣ ಸಿಗುವುದು "ಯಶಸ್ವಿ 10ನೇ ದಿನ" ಅಥವಾ "ಯಶಸ್ವಿ 2ನೇ ವಾರ ಎಂಬ ಸಿನಿಮಾ ಪೋಸ್ಟರುಗಳು. ಮೊನ್ನೆ ಜೊತೆಯಲ್ಲಿದ್ದ ಹಿರಿಯರೊಬ್ಬರು ಇಂತಹುದೇ ಪೋಸ್ಟರ್ ನೋಡಿ "ಅಲ್ಲಿ ತಪ್ಪಾಗಿದೆ"ಎಂದರು, "ಏನು?" ಎಂದೆ. "2 ರ ಪಕ್ಕದಲ್ಲಿ 5" ಇಲ್ಲ ಅಂದರು. ಯಶಸ್ವಿ 25ನೇ ವಾರದ ಪೋಸ್ಟರ್ ಎಂದು ಕೊಂಡಿದ್ದರು. “ಈಗೆಲ್ಲಾ ಹಾಗೆ ಇಲ್ಲ, 2ನೆ ವಾರ ಚಿತ್ರ ಓಡಿದರೇ ಅದೇ ಖುಷಿ ಎನ್ನುತ್ತಲೇ, ಯಶಸ್ವಿಯೋ ಇಲ್ಲವೋ ಯಶಸ್ಸಾಗಿದೆ ಎಂದೂ ತೋರಿಸಿಕೊಳ್ಳುವುದೂ ಈಗ ಯಶಸ್ಸೇ ಎಂದೆ. ಅವರಿಗೆ ಅರ್ಥ ಮಾಡಿಸಲು ಯಶಸ್ವಿಯಾದೆನೋ ಇಲ್ಲವೋ ಗೊತ್ತಿಲ್ಲ. ಯಶಸ್ವಿ ಚಿತ್ರವನ್ನು ಬಯ್ದುಕೊಂಡೇ ನಡೆದರು.

ಯಶಸ್ಸಿನ ಅರ್ಥಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬರುತ್ತದೆ ಎನ್ನುವುದಕ್ಕೆ ಇದು ಒಂದು ಉದಾಹರಣೆ ಅಷ್ಟೆ. ಹತ್ತು ವರ್ಷಗಳ ಹಿಂದೆ 100 ದಿನ ಓಡಿದ ಚಿತ್ರ ಯಶಸ್ವಿ ಎನ್ನಿಸಿಕೊಂಡಿದ್ದರೆ ಅದಕ್ಕೂ ಹಿಂದಿನ ಸಮಯದಲ್ಲಿ ಯಶಸ್ಸನ್ನು ಆ ಚಿತ್ರದಲ್ಲಿದ್ದ ಮೌಲ್ಯ, ಸಂದೇಶ, ಪಡೆದ ಪ್ರಶಸ್ತಿ , ಜನ ಮನ್ನಣೆಯಿಂದ ಅಳೆಯಲಾಗುತ್ತಿತ್ತು. ಇದು ಈಗ ಎಲ್ಲಾ ರಂಗಗಳಲ್ಲೂ ಕಾಣಿಸುತ್ತಿದೆ. ಹಿಂದೆ ಒಬ್ಬ ಕ್ರಿಕೆಟ್ ಆಟಗಾರನ ಆಟದ ಶೈಲಿ,ಕಲಾತ್ಮಕತೆಯಲ್ಲಿ ಅವನ ಯಶಸ್ಸು ಅಡಗಿದರೆ, ನಂತರದ ದಿನಗಳಲ್ಲಿ ಆತನ ಅಂಕಿ ಅಂಶಗಳು,ದಾಖಲೆಗಳು ಅವನ ಯಶಸ್ಸನ್ನು ತೋರಿಸಿಕೊಡುತ್ತಿತ್ತು. ಇಂದೋ ಆತನ ಜನಪ್ರಿಯತೆ, ಅದರಿಂದ ಅವನಿಗೆ ದೊರಕಬಹುದಾದ ಜಾಹಿರಾತು ಹಾಗೂ ಐಪಿಲ್ ನಲ್ಲಿ ಆತನ ಹರಾಜು ಮೊತ್ತ ಅವನ ಯಶಸ್ಸನ್ನು ಅಳೆಯುತ್ತದೆ. ಒಬ್ಬ ಕಲಾವಿದನ ಯಶಸ್ಸು ಅವನ ಕಲಾಕೃತಿ ತರುವ ಹಣದ ಮೇಲೆಯೇ ಅವಲಂಬಿತ.

ಮೊನ್ನೆ ಹಿರಿಯರೊಬ್ಬರು ತಾವು ಬಿನ್ನಿ ಮಿಲ್ಸ್ ಸಂಸ್ಥಯಲ್ಲಿ ೩೭ ವರ್ಷಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿದರ ಬಗ್ಗೆ ಹೆಮ್ಮೆಯಿಂದ ಹೇಳಿದರು. ನಿಜಕ್ಕೂ ಅದು ಒಂದು ಹೆಮ್ಮೆಯ ವಿಷಯವೇ. ಆದರೆ ಇಂದಿನ ದಿನಗಳಲ್ಲಿ ಅದು ಯಶಸ್ಸಿನ ಮಾತಲ್ಲ. 3 ವರ್ಷ ಒಂದೇ ಸಂಸ್ಥೆಯಲ್ಲಿರುವವನನ್ನು ಗುಮಾನಿಯಿಂದ ನೋಡುತ್ತದೆ ಇಂದಿನ ಯುವ ಜನಾಂಗ. ಕಳೆದ 8 ವರ್ಷಗಳಿಂದ ಒಂದೇ ಸಂಸ್ಥೆಯಲ್ಲಿರುವ ನನ್ನನ್ನು ಕಂಡೇ ನನ್ನ ಯುವ ಸಹೋದ್ಯೋಗಿಗಳು “ನೀವು ಬಿಡಿ ಸಾರ್, ಈ ಕಂಪನಿಗೆ ಪಿಲ್ಲರ್ ಇದ್ದಂಗೆ” ಎನ್ನುತ್ತಾ ಕಾಲು ಎಳೆಯುವುದುಂಟು.’ ಪಿಲ್ಲರ್’ ಗೆ  ಇದ್ದಲ್ಲಿಯೇ ಇರುವುದು ಎಂಬುದು ವ್ಯಂಗ್ಯಾರ್ಥ.“ನೀವು ಬಿಡಿ ಗೋಡೆ ಮೇಲಿನ ಬಣ್ಣದಂತೆ” ಎನ್ನುತ್ತ ನಾನು ನಗುವುದುಂಟು.

 ಅಂದರೆ ಒಂದು ಗೆಲವು ಅಥವಾ ಯಶಸ್ಸಿನ್ನು ಇಂದಿನ ಕಾಲ ಜನಾಂಗ ನೋಡುವುದೇ ಬೇರೆಯದೇ ಅರ್ಥದಲ್ಲಿ. ಅದರೂ ಯಶಸ್ಸು ಎನ್ನುವುದರ ಅರ್ಥ ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆಯಾಗಿರುವುದರಿಂದ ನಮ್ಮ ಯಶಸ್ಸು ಯಾವುದು  ಎನ್ನುವುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮತ್ತೊಬ್ಬರ ಯಶಸ್ಸು ನಮಗೆ ಸ್ಪೂರ್ತಿ, ಪ್ರೇರಣೆಯಾದರೂ ನಮ್ಮ ಯಶಸ್ಸಿನ ಗುರಿ, ದಾರಿ, ಗುರುವನ್ನು ನಾವೇ ನಿರ್ಧರಿಸಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ತಜ್ಞರು. ಇದೇ ರೀತಿ ಯಶಸ್ಸಿನಹಾದಿಯಲ್ಲಿ ಕೆಲವೊಂದು ಯೋಜನೆಗಳು ಅವಶ್ಯವೆನ್ನುತ್ತಾರೆ ಅದೇ ತಜ್ಞರು . ಅವುಗಳಲ್ಲಿ ಪ್ರಮುಖವಾದವು :

ಗುರಿ: ನಾವು ಯಶಸ್ಸನ್ನು ಸಾಧಿಸಬೇಕಾದರೆ ಮೊದಲು ಒಂದು ಗುರಿ ಇರಬೇಕು ಮತ್ತು ಆಗುರಿಯನ್ನು ಸಣ್ಣ ವಿಭಾಗಗಳನ್ನಾಗಿ ಮಾಡಿಕೊಂಡು ಒಂದೊಂದೇ ಮೆಟ್ಟಿಲುಗಳನ್ನೇರುತ್ತಾಅಂತಿಮ ಗುರಿಯನ್ನು ಸಾಧಿಸಿಕೊಂಡು ಯಶಸ್ಸು ಪಡೆಯಬೇಕು. ಸಚಿನ್ ತೆಂಡುಲ್ಕರ್ ೧೦೦ಶತಕಗಳನ್ನು ಸಾಧಿಸಿಸ್ದರೂ ಅವೆಲ್ಲವೂ ಒಂದೇ ಬಾರಿಗೆ ಇಲ್ಲವೇ ಧಿಡೀರನೆ ಆದಂತವುದಲ್ಲ.ಪ್ರತಿಯೊಂದು ಶತಕದಲ್ಲಿಯೂ ನೂರು ರನ್ನುಗಳ ಮೊತ್ತವಿದೆ ಹಾಗೂ ಆ ಪ್ರತಿಯೊಂದು ರನ್ನಿಗೂಅದರದೇ ಆದ ಮಹತ್ವವಿದೆ. ರನ್ನು ಹೊಡೆಯಲಾಗದ ಬಾಲಿನ ಹಿಂದೆ ಒಂದು ರಕ್ಷಣಾತ್ಮಕ ಆಟವಿದೆಹಾಗೂ ಆ ರಕ್ಷಣಾತ್ಮಕ ಆಟಕ್ಕೆ ಪರಿಶ್ರಮ ಹಾಗೂ ಅಭ್ಯಾಸ  ಅಗತ್ಯವಿದೆ.

ಸಾಧಿಸಲಾಗದಂತ ಗುರಿಗಳು ಬೇಡ : ಗುರಿಗಳು ನಮ್ಮ ಸಾಮರ್ಥ್ಯ ಹಾಗೂ ನಮ್ಮ ಪರಿಶ್ರಮದ ಮಿತಿಯಲ್ಲಿದ್ದರೆ ಒಳ್ಳೆಯದು ಬೇರೆ ಯಾರನ್ನೋ ಅನುಸರಿಸಿ ಇಲ್ಲವೇ ನಮಗೆ ಒಲ್ಲದ ಗುರಿಗಳು ನಮ್ಮನ್ನು ಹತಾಶೆಗೆ ತಳ್ಳಬಹುದು. ಮೊದಲ ದಿನ ವಾಯು ವಿಹಾರದಲ್ಲೇ ೨೦ ಕಿಲೋಮೀಟರ್ ನಡೆಯುತ್ತೇನೆ ಎಂಬಂತ ನಿರ್ಧಾರಗಳು ಯಶಸ್ಸನ್ನು ತರುವುದಿಲ್ಲ ಬದಲಿಗೆನಿರಾಶೆಯನ್ನು ಮೂಡಿಸುತ್ತದೆ.

ಗುರಿಗಳನ್ನು ಬರೆದಿಟ್ಟುಕೊಳ್ಳುವುದು ಹಾಗೂ ಪೂರ್ವ ತಯಾರಿ : ಮುಟ್ಟಬೇಕಾದ ಗುರಿಸಾಧಿಸಬೇಕಾದ ಯಶಸ್ಸನ್ನು ಬರೆದಿಟ್ಟುಕೊಂಡು, ಅದರತ್ತ ನಿರಂತರ ಶ್ರಮ ವಹಿಸುವುದು ಹಾಗೂ ಆ ಯಶಸ್ಸು ಪ್ರಾಪ್ತಿಯಾದಾಗ ನಮ್ಮ ಜೀವನ ಹೇಗಿರಬಹುದೆಂದು ಉಹಿಸುತ್ತಾ, ಅದಕ್ಕೆ ತಯಾರಿಮಾಡಿಕೊಳ್ಳಬೇಕು

ಬದಲಾವಣೆಗೆ ಮುಕ್ತ ಮನಸ್ಸು : ಯಶಸ್ಸು ಸುಲಭವಾಗಿ ದೊರಕುವಂತದಲ್ಲ. ಒಂದು ಗುರಿಯನ್ನುಸಾಧಿಸಲು ಹೊರಟಾಗ ಯಾವುದನ್ನು ಯಶಸ್ಸು ಎಂದು ತಿಳಿದುಕೊಂಡಿರುತ್ತೇವೆಯೋ ಅದರ ಸ್ವರೂಪ ಕೆಲವೊಮ್ಮೆ ಬದಲಾಗಬಹುದು. ಆಗ ಹಳೆಯ ಯಶಸ್ಸಿನ ಕಲ್ಪನೆಗೆ ಜೋತು ಬೀಳದೆ ಬದಲಾವಣೆಗೆಮುಖ ಒಡ್ಡಬೇಕು. ಸಾಹಿತ್ಯ ಲೋಕ ಕಂಡ ಅದ್ಭುತ ಪ್ರತಿಭೆಯಾದ ರಾಷ್ಟ್ರಕವಿ ಕುವೆಂಪುತಮ್ಮ ಆರಂಭದ ದಿನಗಳಲ್ಲಿ ಬರೆದದ್ದು ಇಂಗ್ಲೀಷ್ ಸಾಹಿತ್ಯವನ್ನು. ಅದರಲ್ಲಿ ಬಹಳಯಶಸ್ಸು ಕಂಡು ಅಪಾರ ಪ್ರಶಂಸೆಯನ್ನೂ ಪಡೆದರು. ಆದರೆ ಐರಿಷ್ ಲೇಖಕ ಕವಿ ಜೇಮ್ಸ್ಕಸಿನ್ಸ್ ರವರನ್ನು ಭೇಟಿ ಮಾಡಿದಾಗ ಕಸಿನ್ಸ್, ಕುವೆಂಪುರವರಿಗೆ  ಕನ್ನಡದಲ್ಲೇ ಬರೆಯಲು ಹಿತವಚನ ನೀಡುತ್ತಾರೆ. ಯುವಕ ಕುವೆಂಪುಗೆ ಈ ಮಾತುಗಳು ರುಚಿಸದೆ ಕನ್ನಡ ಭಾಷೆಗೆ ತಮ್ಮದೇ ಆದ ಇತಿ ಮಿತಿ ಇರುವುದರಿಂದ ಇಂಗ್ಲೀಷ್ನಲ್ಲೇ ಬರೆಯುತ್ತೇನೆ ಎಂದು ವಾದಿಸಿಸುತ್ತಾರೆ. ಆದರೂ ನಂತರ ಯೋಚಿಸಿ, ಕನ್ನಡದಲ್ಲಿ ಬರೆಯಲು ನಿರ್ಧಾರ ಮಾಡಿದರ ಫಲವಾಗಿ ಜಗತ್ತು ಕಂಡ ಅತ್ಯದ್ಭುತ ಕೃತಿಗಳನ್ನು ನೀಡಿ ವಿಶ್ವ ಮಾನವರಾದವರು ನಮ್ಮಕುವೆಂಪು.

ತೊಡಕುಗಳನ್ನು ಗುರುತಿಸಿ ಅದರ ನಿವಾರಣೆಗೆ ಕ್ರಮ : ಗುರಿ ಹಾಗೂ ಯಶಸ್ಸಿನ ಹಾದಿಯಲ್ಲಿ ಅನೇಕ ತೊಡಕುಗಳು ನಮಗೆ ಎದುರಾಗುತ್ತವೆ. ಪದೇ ಪದೇ ಎದುರಾಗುವ ತೊಡಕುಗಳನ್ನು ಗುರುತಿಸಿಕೊಂಡು ಅದನ್ನು ನಿವಾರಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಯಶಸ್ಸು ಪಡೆಯಬಹುದು. ಗಾಯಕನಾಗಿ ಯಶಸ್ಸು ಪಡೆಯಬೇಕಾದವನು ಉತ್ತಮ ಕಂಠವಿದ್ದರೂ ಮುಂಜಾನೆ ಎದ್ದು ಅಭ್ಯಾಸದಲ್ಲಿ ತೊಡಗಬೇಕಾಗುತ್ತದೆ. ಹಾಗೇ ಮುಂಜಾನೆ ಏಳಲು ಸಾಧ್ಯವಾಗದ ಕಾರಣಗಳನ್ನು ಗುರುತಿಸಿ ಅವಗಳಿಗೆ ತಕ್ಕ ಕ್ರಮಗಳನ್ನು ಕಂಡುಕೊಂಡರೆ ಮಾತ್ರವೇ ಅವರ ಕಂಠ ಅವನ ಕೈಹಿಡಿಯುತ್ತದೆ.

ಯಶಸ್ಸಿನ ಹಾದಿಯಲ್ಲಿ ಎಚ್ಚರ : ಎಲ್ಲವನ್ನು ಗುರುತಿಸಿ ಯೋಜನೆಯನ್ನು ತಯಾರಿಮಾಡಿಕೊಂಡು ಸಾಗುತ್ತಿರುವಾಗ ಆಗಾಗ ನಡೆಯುತ್ತಿರುವ ಹಾದಿ ಸರಿಯಾಗಿದೆಯೇ, ಸರಿದಾರಿಯಲ್ಲಿಯೇ ನಡೆಯುತ್ತಿದ್ದೇನೆಯೇ ಎಂದು ಪರೀಕ್ಷಿಸಿಕೊಳ್ಳುವುದು ಜಾಣತನ.ಗೊತ್ತಿದ್ದೂ ಇಲ್ಲವೆ ಗೊತ್ತಿಲ್ಲದೆಯೇ ತಪ್ಪಬಹುದಾದ ದಾರಿಯಿಂದ ಸರಿ ದಾರಿಗೆ ಬೇಗನೇ ಮರಳದಿದ್ದರೆ, ಗುರಿ ಹಾಗೂ ಯಶಸ್ಸು ಮತ್ತಷ್ಟು ದೂರದ ದಾರಿಯಾಗಿ ಪರಿಣಮಿಸಿ ಪರಿಶ್ರಮಹಾಗೂ ಸಮಯ ಪೋಲಾಗುತ್ತದೆ. ಆರಿಸಿಕೊಂಡ ಗುರಿಯ ರಂಗದಲ್ಲಿ ಪರಿಣಿತರಾದವರ ಜೊತೆ ಒಡನಾಟವಿದ್ದರೆ ಇದನ್ನು ತಪ್ಪಿಸಬಹುದು.ಆ ಸಮಯಕ್ಕೆ ಕ್ರಮಿಸಬೇಕಾದ ದೂರದ ಯೋಜನೆ ಇದ್ದರೆ ದಾರಿ ತಪ್ಪುವುದು ಕಡಿಮೆಯಾಗುತ್ತದೆ.

ಅದೃಷ್ಟ, ಸೋಲು ಹಾಗೂ ಬಹುಮಾನ : ಯಶಸ್ಸಿನ ಪಯಣದಲ್ಲಿ ಅದೃಷ್ಟ ಹಾಗೂ ವಿಧಿಯಾಟಕ್ಕಿಂತ ಸ್ವಸಾಮರ್ಥ್ಯ,ಪರಿಶ್ರಮಕ್ಕೆ ಹೆಚ್ಚು ಮಹತ್ವ ಕೊಡುವುದು ಲೇಸು. ತೊಡಕು ತೊಂದರೆಗಳು ಬಂದಾಗ ಅದೇ ದುರಾದೃಷ್ಟ, ವಿಧಿಯ ಸಾಂತ್ವನ ಪಡೆಯುವದಕ್ಕಿಂತ ತೊಂದರೆಗಳ ನಿವಾರಣೆಗೆಕ್ರಮಗಳನ್ನು ಕೈಗೊಳ್ಳದಿದ್ದರೆ ಕಳ್ಳ ಮನಸ್ಸು ಗುರಿಯಿಂದ ಆಚೆಗೆ ಕರೆದೊಯ್ಯುತ್ತದೆ. Success is simply a matter of luck. Ask any failure  ಎಂಬ ಮಾತು ಅದೆಷ್ಟುಸತ್ಯವಲ್ಲವೇ.. ಅಂತೆಯೇ ಯಶಸ್ಸಿನ ಹಾದಿಯಲ್ಲಿ ಹೂವುಗಳು ಮಾತ್ರವಲ್ಲದೇ ಕಲ್ಲು ಮುಳ್ಳುಸೋಲು ಇರುವುದು ಸಹಜ. ತಮ್ಮ ಅಸಂಖ್ಯಾ ಸೋಲುಗಳನ್ನು ಮೆಟ್ಟಿ ಗೆಲುವನ್ನು ದಕ್ಕಿಸಿಕೊಂಡವರಲ್ಲಿ ಥಾಮಸ್ ಆಳ್ವಾ ಎಡಿಸನ್, ಅಬ್ರಾಹಾಂ ಲಿಂಕನ್ ರವರು ಪ್ರಮುಖರು.“ನಾನು ಸೋತಿಲ್ಲ, ನನ್ನ ಕೆಲಸದಲ್ಲಿ ೧೦,೦೦೦ ರೀತಿಯ ಮಾರ್ಗಗಳು ಕೆಲಸಕ್ಕೆಬರುವುದಿಲ್ಲ ಎಂಬ ಪಾಠವನ್ನು ಕಲಿತ್ತಿದ್ದೇನೆ” ಎನ್ನುತ್ತಾ ತಮ್ಮ ವೈಫಲ್ಯಗಳ ಬಗ್ಗೆಹೇಳುತ್ತಾರೆ ಎಡಿಸನ್. ಹಾಗೆಯೇ ಯಶಸ್ಸಿನ ಸಣ್ಣ ಸಣ್ಣ ಗುರಿಗಳನ್ನು ದಾಟುತ್ತಿದ್ದಂತೆ ನಮಗೆ ನಾವೇ ಬೆನ್ನು ತಟ್ಟಿಕೊಂಡು ಆಗಿಂದಾಗ್ಗೆ ಸಣ್ಣ ಪುಟ್ಟ ಕೊಡುಗೆಗಳನ್ನು ನೀಡಿಕೊಳ್ಳುವುದರಿಂದ ಮುಂದಿನ ಹೆಜ್ಜೆಯತ್ತ ಮನಸ್ಸು ಉಲ್ಲಾಸಗೊಳ್ಳುತ್ತದೆ.

ಇವಿಷ್ಟು ಮಾತ್ರವೇ ಯಶಸ್ಸಿನ ಗುಟ್ಟುಗಳಲ್ಲ, ಅಂತೆಯೇ ಇವೆಲ್ಲವೂ ಯಶಸ್ಸನ್ನು ಖಂಡಿತವಾಗಿಯೂ ತಂದು ಕೊಡುತ್ತವೆ ಎಂದು ಕೊಳ್ಳಬೇಕಾಗೂ ಇಲ್ಲ. ಆದರೆ ಇವೆಲ್ಲವೂ ಯಶಸ್ಸಿನ ಹಾದಿಯನ್ನು ಸುಗಮಗೊಳಿಸಬಲ್ಲಂತ ಸಂಗತಿಗಳು. ಯಶಸ್ಸು ಹಾಗೂ ಪರಿಶ್ರಮಕ್ಕೆ ಅವಿನಾಭಾವ ಸಂಬಂಧವಿದ್ದೂ ಪರಿಶ್ರಮವೇ ಯಶಸ್ಸಿನ ಸೂತ್ರಧಾರ ಎಂಬ ಮಾತನ್ನು ಜ್ಞಾನಿಯೊಬ್ಬ ಹೇಳಿದ್ದಾನೆ. ಇದನ್ನು ಅರಿತು ನಡೆದರೆ ಯಶಸ್ಸಿನ ಹಾದಿಯಲ್ಲಿ ಹತಾಶೆ,ನಿರಾಸೆಗೆ ಸ್ಥಳವಿರುವಿದಿಲ್ಲ. ಗುರಿ ಮಾತ್ರವಲ್ಲದೆ ಹಾದಿಯೂ ಮುಖ್ಯ ಆನಂದಕರ ಎಂಬ ಸತ್ಯವೂ ತಿಳಿಯುತ್ತದೆ.  ಹಾಗೆಯೇ ಕೇವಲ ಹಣ, ಸುಖದಲ್ಲಿ ಮಾತ್ರವಲ್ಲದೆ ಪರಸೇವೆಯಲ್ಲಿ,ನೋವಿನಲ್ಲೂ ಯಶಸ್ಸು ಇದೆ ಎಂಬುದನ್ನು ನಮ್ಮಲೇ ಅನೇಕ ಸಂತರು ತಮ್ಮ ಜೀವನದಿಂದ ನಿರೂಪಿಸಿದ್ದಾರೆ. ಇವಲ್ಲವೂ ನಮಗೆ ದಾರಿ ದೀಪವಾಗಲಿ, ಯಶಸ್ಸಿನ ಮೆಟ್ಟಿಲಾಗಲಿ.

ಸಾಧಿಸಬೇಕಾದ ಗುರಿಯ ಬಗ್ಗೆ ಇರಬೇಕಾದ ಆತ್ಮವಿಶ್ವಾಸದ ಬಗೆಗಿನ ಹಾಸ್ಯ ತುಣುಕೊಂದಿಗೆ ಮುಗಿಸೋಣ: ಹೆಂಡತಿಯೊಬ್ಬಳು ಹೊಸದಾಗಿ ಮನೆಗೆ ತಂದ ನಾಯಿಗೆ ಸರಿಯಾಗಿ ಕುಳಿತುಕೊಳ್ಳುವುದನ್ನು ಹೇಳಿ ಕೊಡುತ್ತಿದ್ದಳು. ದಿನವೆಲ್ಲಾ ಪ್ರಯತ್ನಿಸಿದರೂ ನಾಯಿ ಬಗ್ಗಲಿಲ್ಲ, ಹೆಂಡತಿ ಬಿಡಲಿಲ್ಲ. ಇದನ್ನು ನೋಡಿ ರೋಸಿ ಹೋದ ಗಂಡ ಹೇಳಿದ ” ಲೇ ಬಿಡೇ, ಅದು ಆಗೊಲ್ಲ,ನಿನ್ನಿಂದ ಸಾಧ್ಯವಿಲ್ಲ. ತಟ್ಟನೆ ಬಂತು ವಿಶ್ವಾಸದ ಉತ್ತರ : “ಆಗೊಲ್ಲ ಅಂದ್ರೆ ಹೆಂಗ್ರಿ? ಹೊಸತರಲ್ಲಿ ನೀವೂ ಹೀಗೆ ಇರಲಿಲ್ಲ್ವಾ? ನಾನು ಕಷ್ಟಪಟ್ಟು ಸರಿಮಾಡ್ಲಿಲ್ವಾ?.

-ಪ್ರಶಾಂತ್

(ತಾಬೋರ್ ಪತ್ರಿಕೆಯ ಜೂನ್ ೧೪ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ) 

Monday, 12 May 2014

ಮರೆಯಲಾಗದ ಮುತ್ತು

ಅದು 90ರ ದಶಕದ ಮಧ್ಯದ ಒಂದು ದಿನ. ಅಂದು ಯಾವುದೋ ಒಂದು ಸಂಸ್ಥೆಯ ಸಹಾಯಾರ್ಥದ ಡಾ.ರಾಜ್ ಕುಮಾರ್ ರಸ ಸಂಜೆ. ಸ್ಥಳ ಬೆಂಗಳೂರಿನ ಕಂಟೀರವ ಕ್ರೀಡಾಂಗಣ. ಅದಾಗಲೇ ರಾಜ್, ಚಿತ್ರಗಳಲ್ಲಿ ನಟಿಸುವುದು ವಿರಳವಾಗಿತ್ತು. ಸಿನಿಮಾ ಸಂಬಂದದ ಕಾರ್ಯಕ್ರಮಗಳನ್ನು ಬಿಟ್ಟರೆ ಸಾರ್ವಜನಿಕವಾಗಿ ಸಹ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ನಾವು ನೋಡಿದಂತೆ 80ರ ದಶಕದಲ್ಲಿ ರಾಜ್ ರಸ ಸಂಜೆಗಳಿಗೂ, ಈ ಕಂಟೀರವ ಕ್ರೀಡಾಂಗಣಕ್ಕೂ ಅವಿನಾಬಾವ ಸಂಬಂದ. ಅಗಾಗ ನಡೆಯುತ್ತಿದ್ದ ಈ ರಸ ಸಂಜೆಯ ಸಮಯದಲ್ಲಿ ಇಡೀ ಕ್ರೀಡಾಂಗಣ, ಅದರ ಅವರಣವೆಲ್ಲಾ ತುಂಬಿ ಹೋಗಿ, ಕಾರ್ಪೋರೇಶನ್ ಸುತ್ತಮುತ್ತಲಿನ ರಸ್ತೆಗಳಲ್ಲಿ ನಿಂತು ಒಳಗಿನ ರಾಜ್ ಗೀತೆಗಳನ್ನು ಕೇಳುತ್ತಿದ್ದ ಜನಸ್ತೋಮದ ದ್ರುಶ್ಯಗಳನ್ನು ನೆನೆದರೆ ಇಂದಿಗೂ ರೋಮಾಂಚನವಾಗುತ್ತದೆ. ಕನ್ನಡದ ಒಂದು ಕಾರ್ಯಕ್ರಮದಲ್ಲಿ ಅಷ್ಟೊಂದು ಸಡಗರ, ವೈಭವವೆಲ್ಲಾ ಇಂದು ಕನಸಿನ ಮಾತೇ.ಸರಿ.. 90ರ ದಶಕಕ್ಕೆ ಬರೋಣ. ಕಾರ್ಯಕ್ರಮ ಶುರುವಾಗಲು ಇನ್ನೂ 2, 3 ಗಂಟೆ ಇರುವಾಗಲೇ ಸುತ್ತಮುತ್ತಲೆಲ್ಲಾ ಜನ ಸಾಗರ. ಕ್ರೀಡಾಂಗಣ ಒಳಗಿದ್ದಷ್ಟೇ ಜನ ಹೊರ ಆವರಣದಲ್ಲೂ ನೆರದಿದ್ದಾರೆ. ಗುಂಪು ಗುಂಪಾಗಿ ನಿಂತ ಜನಗಳ ನಡುವೆ ರಾಜ್, ರಾಜ್ ಚಿತ್ರಗಳ ಬಗ್ಗೆಯೇ ಮಾತು. ರಾಜ್ ಕ್ರೀಡಾಂಗಣದ ಒಳಗೆ ಹೋಗಬೇಕಾದರೆ ಸಾಗಬೇಕಾದ ದಾರಿಯಲೆಲ್ಲಾ ಜನ. ಒಂದು ಕ್ಶಣ ನೋಡಲು ಸಿಕ್ಕರೂ ಸಾಕೆಂಬಂತೆ. ರಸ ಸಂಜೆಗೆ ಕಾಸು ಕೊಟ್ಟವರು, ಪಾಸು ಪಡೆದವರು ಒಳಗಿದ್ದರೆ, ಅದು ಸಾದ್ಯವಾಗದವರ ಸಂಬ್ರಮ ಇಲ್ಲಿ. 

ಹಗಲು ತನ್ನ ಬೆಳಕನ್ನು ಕಳಚಿಕೊಳ್ಳುತ್ತಾ ರಾತ್ರಿ ಕತ್ತನ್ನು ತಬ್ಬಿಕೊಳ್ಳುವ ಮುನ್ನ ಆಕಾಶದಲ್ಲಿ ಕೆಂಪು ನೀಲಿ ಬಣ್ಣಗಳು ಕಣ್ಣಾ ಮುಚ್ಚಾಲೆ ಆಡುತ್ತಿರುವ ಸಮಯ. ಬೆಳಕೂ ಅಲ್ಲದ ಕತ್ತಲೂ ಅಲ್ಲದ ಮಂಕಿನಲ್ಲಿ  ಸುತ್ತಮುತ್ತಲಿನ ಮರಗಳಲ್ಲಿ ಪಕ್ಶಿಗಳ ಚಿಲಿಪಿಲಿಯಿಲ್ಲ. ಅಲ್ಲೆಲ್ಲಾ ರಾಜ್ ದೇ ದ್ಯಾನ, ಕಲರವ. ಇದಕ್ಕಿಂದಂತೆ ಮುಕ್ಯ ದ್ವಾರದ ಬಳಿ ವಾಹನವೊಂದು ಬರುತ್ತದೆ. ಅದರ 
ಹಿಂದೆ ಮುಂದೆ  ಪೋಲಿಸ್ ಬೆಂಗಾವಲು ವಾಹನಗಳು. ವಾತಾವರಣದಲ್ಲಿ ಮಿಂಚಿನ ಸಂಚಾರ. ವಾಹನದ ಕಿಟಿಕಿಯಿಂದಲೇ ತಮ್ಮ ಆ ಸುಂದರ ನಗುವಿನೊಂದಿಗೆ ರಾಜ್ ಕೈ ಬೀಸುತ್ತಿದ್ದಂತೆ ನೆರದಿದ್ದ ಪ್ರತಿಯೊಬ್ಬನೂ ಅದು ತನಗೇ ಎಂಬಂತೆ ಕೈ ಬೀಸುತ್ತಾನೆ. ಆಗ ಅತ್ತವರೆಷ್ಟೋ? ಜಯಕಾರ ಕೂಗಿದವರೆಶ್ಟೋ, ವಾಹನದ ಹಿಂದೆ ಓಡಿದವರೆಶ್ಟೋ, ಬಿದ್ದವರೆಶ್ಟೋ, ನನ್ನಂತೆ ಅಲ್ಲೇ ನಿಂತು ಮೈ ಮರೆತವರೆಶ್ಟೋ? 

ಮುಂದೆ ನಡೆದದ್ದು ಮಾತ್ರ ಎಂದಿಗೂ ಮರೆಯಲು ಸಾದ್ಯವಾಗದ ಗಟನೆ. ಕ್ರೀಡಾಂಗಣದ ಬಾಗಿಲ ಒಳಗೆ ವಾಹನ ಮರೆಯಾಗುತ್ತಿದೆ ಎನಿಸುತ್ತಿದ್ದಂತೆ, ವಾಹನ ಗಕ್ಕೆನೆ ನಿಲ್ಲುತ್ತದೆ. ಕಾಸಿಲ್ಲದೆ, ಪಾಸಿಲ್ಲದೆ ಒಳಗಿರಲು ಸಾದ್ಯವಾಗದವರ ಬಗ್ಗೆ ಪ್ರೀತಿಯೋ, ಮಮತೆಯೋ ಎಂಬಂತೆ ರಾಜ್ ಜೀಪಿನಿಂದ ಕೆಳಗಿಳಿಯುತ್ತಾರೆ. ಅಲ್ಲಿ ಇಳಿಯುವ ಸಂದರ್ಭವೆನು ಇರಲಿಲ್ಲ. ಜನ ಏನಾಗುತಿದೆ ಎಂದು ನೋಡುತ್ತಿದಂತೆ ರಾಜ್ ಬಾಗಿಲು ತೆರೆದು, ಅದೇ ವಾಹನದ ಕಟ್ಟೆಯೊಂದರ ಮೇಲೆ ನಿಲ್ಲುತ್ತಾರೆ. ನಿಂತು, ತಮ್ಮ ಪಂಚೆಯನ್ನು ಒಮ್ಮೆ ಗಟ್ಟಿಯಾಗಿ ಕಟ್ಟಿ,  ಎರೆಡು ಕೈ ಮೇಲಕ್ಕೆತ್ತಿ ನಮಸ್ಕಾರ ಎನ್ನುತ್ತಿದ್ದಂತೆ ಆ ಸ್ತಳದಲ್ಲಾದ ರೂಪಾಂತರ ಅಕ್ಶರಗಳಲ್ಲಿ ವರ್ಣಿಸುವುದು ಅಸಾದ್ಯ. ಎಲ್ಲವೂ ಮೊದಲೇ ನಿರ್ದಾರವಾಗಿತ್ತೇನೋ ಎಂಬಂತೆ ದಟ್ಟ ಬಣ್ಣದ ಆ ವಾಹನದ ವೇದಿಕಯಲ್ಲಿ, ನಸುಗತ್ತಲ ನಡುವೆ ರಾಜ್ ತಮ್ಮ ಅಚ್ಚ ಬಿಳಿ ಅಂಗಿ ಹಾಗೂ ಪಂಚೆಯಲ್ಲಿ ಕಂಗೊಳಿಸಿದ ರೀತಿ ಅದ್ಬುತ. "ಅಬಿಮಾನಿ ದೇವರುಗಳಿಗೆ ನಮಸ್ಕಾರ" ಎಂಬಂತ ಆ ಬಂಗಿಗೆ ಅಲಲ್ಲಿ ಗುಂಪಾಗಿದ್ದ ಇಡೀ ಜನಸ್ತೋಮವೇ ವಾಹನದತ್ತ ದಾಪುಗಾಲಿಡುತ್ತದೆ. ಸಾವಿರಾರು ಕಪ್ಪು ತಲೆಗಳ ನಡುವೆ ಬಿಳಿಯ ಬಟ್ಟೆ ತೊಟ್ಟ ರಾಜ್. ಅಣ್ಣಾವ್ರಿಗೆ ಜೈ ಎಂಬ ಮಾತು ಎಲ್ಲ ಕಡೆಯಿಂದ ಮೊಳಗುತ್ತದೆ. ಕೆಲವೇ ಕ್ಶಣಗಳಲ್ಲಿ ಅವರಿದ್ದ ವಾಹನದ ಸುತ್ತಾ ಸಾವಿರಾರು ಜನ. ಪೋಲಿಸರ ಪಾಡಂತೂ ಬೇಡವೇ ಬೇಡ. ಸುತ್ತಲೂ ನಿಂತು ಜನ ಕೂಗುತ್ತಾ ಕುಣಿಯುತ್ತಿದ್ದ ರೀತಿ ಮರೆಯಲಸಾದ್ಯ. ರಾಜ್ ರದು ಎಂದಿನ ವಿನೀತ ನಗು. ಕಣ್ಣಲ್ಲಿ ಆನಂದಬಾಷ್ಪವಿತ್ತೇ ತಿಳಿಯಲಿಲ್ಲ. ಇಡೀ ಜನಸ್ತೋಮದತ್ತ ಬಾವಪೂರ್ಣವಾಗಿ ಕೈ ಬೀಸುತ್ತಾ ನಿಂತವರನ್ನು, ಪಕ್ಕದಲ್ಲಿದ್ದವರು ಎಚ್ಚರಿಸುತ್ತಾರೆ. ಇನ್ನೂ ಅಲ್ಲಿದ್ದರೆ ಆಗುವುದಿಲ್ಲ ಎಂದು ಅರಿತ ಪೋಲಿಸರು ವಾಹನವನ್ನು ಹೊರಡಿಸಿ ಕ್ರೀಡಾಂಗಣದ ಒಳಗೆ ಮರೆಯಾಗುತ್ತಾರೆ. ಜನರದ್ದು ಮಾತ್ರ ನಿಲ್ಲದ ಸಡಗರ, ಕೇಕೆ, ಕುಣಿತ. ಬಾಗಿಲಿಗೇ ಬಂದ ಬಗವಂತನ ಕಂಡ ಬಾವ ಪರವಶತೆ. 

ಅದು ಸಾಮಾನ್ಯ ಚಿತ್ರ ನಟನೊಬ್ಬನಿಗೆ ಇರಬಹುದಾದ ಅಬಿಮಾನವನ್ನು ಮೀರಿದ ಮಿಡಿತ, ತುಡಿತ. ರಾಜ್ ಮತ್ತು ಕನ್ನಡಿಗರದು ಸಿನಿಮಾ, ನಟನೆಗೆ ಮೀರಿದ ಸಂಬಂದ. ಅಂದು ರಾಜ್ ರ ಬಗೆಗಿನ ಜನರ ಪ್ರೀತಿ, ಉತ್ಸಾಹ ಮತ್ತು ರಾಜ್ ಗೆ ಅಬಿಮಾನಿಗಳ ಮೇಲಿದ್ದ ಕಾಳಜಿಯ ಒಟ್ಟು ರೂಪ ಕೆಲವೇ ಕ್ಶಣದಲ್ಲಿ ಮೈದಳೆದು ಮರೆಯಾದ ಅನುಭವ. ರಸ ಸಂಜೆ ಮುಗಿಯುವ ವರೆಗೂ ಕರಗಲಿಲ್ಲ ಜನ, ಮತ್ತೊಮ್ಮೆ ಸಿಕ್ಕೀತೆ ಭಾಗ್ಯ ಎಂಬ ನಿರೀಕ್ಶೆಯಲ್ಲಿ.  ಆದೇ ಕ್ರೀಡಾಂಗಣದಲ್ಲಿ ರಾಜ್ ರನ್ನು ಕೊನೆಯ ಬಾರಿಗೆ ನೋಡಿದಾಗಲೂ ಜನರದು ಅದೇ ಪ್ರೀತಿ, ರಾಜ್ ಮುಕದಲ್ಲಿ ಅದೇ ನಗು. ಉಸಿರು ಮಾತ್ರ ನಿಂತು ಹೋಗಿತ್ತು.

ರಾಜ್ ವ್ಯಕ್ತಿಯಲ್ಲ ಶಕ್ತಿ ಎಂಬದಕ್ಕೆ ಸಾಕ್ಶಿಯಾಗಿತ್ತು ಆ ಗಟನೆ. ರಾಜ್ ಎಂಬ ವ್ಯಕ್ತಿತ್ವಕ್ಕೆ ಅಶ್ಟು ಜನರನ್ನು ಸೆಳೆಯುವ ಶಕ್ತಿ ಬಂದದಾದರೂ ಹೇಗೆ?. ಒಂದೇ ಒಂದು ನಮಸ್ಕಾರ, ’ಅಬಿಮಾನಿ ದೇವರುಗಳೇ’ ಎಂಬ ಒಂದೇ ಒಂದು ಸಣ್ಣ ಉದ್ಗಾರಕ್ಕೂ ಸಿಗುತ್ತಿದ್ದ ಆ ಪ್ರತಿಕ್ರಿಯೆ, ಪ್ರೀತಿ ಹೇಗೆ ಸಾದ್ಯವಾಯಿತು ಎಂಬುದು ನಿಜಕ್ಕೂ ಆಶ್ಚರ್ಯದ ವಿಶಯವೇ. ಆದರೆ ರಾಜ್ ರ ದೊಡ್ಡ ಶಕ್ತಿ ಇದ್ದದ್ದು ಅವರು ಸಾಮಾನ್ಯ ಕನ್ನಡಿಗನಿಗೆ ತಂದಿತ್ತ ಸ್ವಾಬಿಮಾನ, ಆತ್ಮವಿಶ್ವಾಸದಲ್ಲಿ, ನೆರೆಹೊರೆಯಲ್ಲಿ ಕುಗ್ಗಿ ಹೋಗಿದ್ದ ಸಾಮಾನ್ಯ ಕನ್ನಡಿಗನ ಆತ್ಮ ಸ್ತೈರ್ಯಕ್ಕೆ ರಾಜ್ ಚಿತ್ರಗಳು, ವ್ಯಕ್ತಿತ್ವ ಕೊಟ್ಟ ಕೊಡುಗೆಯಲ್ಲಿ. ’ನಮ್ಮವನೊಬ್ಬ ಹೇಗಿದ್ದಾನೆ ನೋಡಿ’ ಎಂದು ಗಟ್ಟಿಯಾಗಿ ಹೇಳಲು ಆರಿಸಿಕೊಂಡ ಕನ್ನಡಿಗನ ಸಂಬ್ರಮದಲ್ಲಿ.  ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದ ಮುತ್ತುರಾಜ್, ಡಾ.ರಾಜ್ ಕುಮಾರ್ ಆಗಿ ಸಾಗಿದ ರೋಮಾಂಚಕ ಪಯಣದಲ್ಲಿ.   

ಸಾಮಾನ್ಯ ಚಿತ್ರ ಪ್ರೇಕ್ಶಕನಿಂದ ದೊರಕಬಹುದಾದ ಸಿನಿಮಾ ನಟನೆಡೆಗಿನ ಪ್ರೀತಿ, ಅಬಿಮಾನವನ್ನು ಒಬ್ಬ ಸಾಂಸ್ಕ್ರುತಿಕ ರಾಯಬಾರಿಗೆ ಸಿಗಬಹುದಾದ ಗೌರವವನ್ನಾಗಿ ವಿಸ್ತರಿಕೊಂಡವರು ರಾಜ್. ಕನ್ನಡ ಕರ್ನಾಟಕ ಅದಾಗಲೇ ಹಲವು ಮಹನೀಯರು, ಪ್ರತಿಬಾವಂತರನ್ನು ಕಂಡಾಗಿತ್ತು. ಆದರೂ ರಾಜ್ ಬೆಳೆದ ಪರಿ ಅದ್ಬುತ. ಅದಕ್ಕೆ ಅವರು ವಿಶೇಶವಾದ ಪ್ರಯತ್ನಗಳನೇನು ಮಾಡಲಿಲ್ಲ. ಪ್ರತಿಬೆ, ಸಾಮರ್ತ್ಯದ ಜೊತೆ ನೆಚ್ಚಿಕೊಂಡಿದ್ದು ಶ್ರಮ, ಶ್ರದ್ದೆಯನ್ನು. ಮರೆಯದಿದ್ದದ್ದು  ನಾಡು ನುಡಿಯನ್ನು. ಅವಲಂಬಿಸಿದ್ದು ಹಿರಿಯರ, ಅಬಿಮಾನಿಗಳ ಆಶೀರ್ವಾದನ್ನು. ಬಿಡದೆ ಬೆಳೆಸಿಕೊಂಡದ್ದು ಸರಳತೆ, ಶಿಸ್ತು ಹಾಗೂ ಸಾಮಾಜಿಕ ಜವಬ್ದಾರಿಯನ್ನು. ಅಶ್ಟಕ್ಕೂ ರಾಜ್ ಜನರಿಗೆ ಅಷ್ಟೇಕೆ ಹತ್ತಿರವಾದರು, ಅಬಿಮಾನಿಗಳಿಗೆ ದೇವರಾದರು ಎಂಬುದನ್ನು ಉತ್ತರಿಸುವುದು ಸುಲಬದ ವಿಶಯವಲ್ಲದಿದ್ದರೂ ಕಶ್ಟವೂ ಅಲ್ಲ. ಅದು ನಟನೆಯಿಂದಲೇ, ತಮ್ಮ  ಗಾಯನದಿಂದಲೇ, ಅಪರಿಮಿತ ಕನ್ನಡ ಪ್ರೇಮದಿಂದಲೇ, ತಮ್ಮ ನಿರ್ಮಲ ನಗುವಿಂದಲೇ, ಸರಳತೆಯಿಂದಲೇ, ಎಲ್ಲರೊಂದಿಗೂ ಬೆರೆಯುವ ಗುಣದಿಂದಲೇ, ಆ ಸ್ಪಶ್ಟ ಸಂಬಾಶಣೆಯಿಂದಲೇ? ಉತ್ತರ - ಎಲ್ಲದರಿಂದಲೂ ಹೌದು ಅತವಾ ಇವುಗಳಲ್ಲಿ ಯಾವುದಾದರೂ ಒಂದರಿಂದಲೂ ಹೌದು. ಜೀವನದಲ್ಲಿ ಚಿತ್ರಗಳನ್ನೇ ನೋಡದೆ ಇದ್ದರೂ ಅವರ ಬಕ್ತಿ, ಗೀತೆ, ಅವರ ವ್ಯಕ್ತಿತ್ವ, ಸಂಬಾಶಣೆಯ ಶೈಲಿಗೆ ಮರುಳಾಗಿ ಅಬಿಮಾನಿ ಎನಿಸಿಕೊಂಡವರ ದೊಡ್ಡ ಬಳಗವೇ ಇದೆ. ರಾಜ್ ಗೆ ಕನ್ನಡಿಗರು ತೋರಿದ ಪ್ರೀತಿ ದೊಡ್ಡದೋ ಅತವಾ ರಾಜ್ ರ ಕೊಡುಗೆ ದೊಡ್ಡದೋ ಎಂಬ ಮಾತುಗಳ ನಡುವೆ ಅದಾವುದನ್ನೂ ಲೆಕ್ಕಿಸದೇ ರಾಜ್ ರನ್ನು ಪ್ರೀತಿಯಿಂದ ಅಪ್ಪಿ ಒಪ್ಪಿಕೊಂಡ ಕನ್ನಡಿಗರ ಸಂಖ್ಯೆ ಎಲ್ಲಕಿಂತ ದೊಡ್ಡದಿದೆ. 

ಆಗಶ್ಟೇ ಬೆಳೆಯುತ್ತಿದ್ದ  ಚಿತ್ರರಂಗಕ್ಕೆ ಯುವ ಪ್ರತಿನಿದಿಯಾಗಿ, ಚಿಗುರೊಡೆಯುತ್ತಿದ್ದ ಅಕಂಡ ಕರ್ನಾಟಕದ ಬಾವನೆಗಳಿಗೆ ಸಾಂಸ್ಕ್ರುತಿಕ ರಾಯಬಾರಿಯಾಗಿ, ಶ್ರಮ ಜೀವಿಗಳ ಮುಕವಾಣಿಯಾಗಿ, ಕನ್ನಡ ಸ್ವಾಭಿಮಾನದ ಪ್ರತೀಕವಾಗಿ, ಸರಳತೆ, ದೀನತೆಯ ರೂಪಕವಾಗಿ, ಕನ್ನಡ ಪರ ನಿಲುವಿನ ಗಟ್ಟಿ ದನಿಯಾಗಿ, ಅಸಂಕ್ಯ ಕನ್ನಡಿಗರ ಕನಸುಗಳ ಸಾಕಾರತೆಗೆ ಸ್ಪೂರ್ತಿಯಾಗಿ, ರಾಜೀವನಾಗಿ, ಮಯೂರನಾಗಿ, ಕುಂಬಾರನಾಗಿ, ಸನಾದಿ ಅಪ್ಪಣ್ಣನಾಗಿ ರಾಜ್ ಈ ನಾಡಿಗೆ ನೀಡಿದ ಕೊಡುಗೆ ಅಪಾರ. ತನ್ನದು ಕೊಡುಗೆಯಲ್ಲ ರುಣ ಸಂದಾಯ ಎಂಬ ಬಾವದಲ್ಲಿಯೇ ಮರೆಯಾದರೂ ಮರೆಯಲಾಗದ ನೆನಪುಗಳನ್ನು ಬಿಟ್ಟು ಹೋದ ರಾಜ್ ರ ಹುಟ್ಟು ಹಬ್ಬದ ದಿನ ಪ್ರತಿಯೊಬ್ಬ ಅಬಿಮಾನಿಯ ಪಾಲಿಗೆ ಅವರ ಮೇಲಿನ ಅಬಿಮಾನದ ಮರುಹುಟ್ಟಿನ ದಿನವೇ ಸರಿ.. 

- ಪ್ರಶಾಂತ್ ಇಗ್ನೇಶಿಯಸ್

Wednesday, 9 April 2014

ದಾಹ

ಅದೊಂದು ದಿನ.....

ಅದೊಂದು ಸಣ್ಣ ಊರು. ಸುಡುತ್ತಿರುವ ಬಿಸಿಲು ಹಾಗೂ ಧೂಳಿನಿಂದಾಗಿ ಊರು ಮರುಭೂಮಿಯಂತೆ ಭಾಸವಾಗುತ್ತಿದೆ. ತಮ್ಮ ಕೆಲಸ ಕಾರ್ಯಗಳಲ್ಲಿ ನಿರುತರಾಗಿರುವ ಜನರ ನಡುವೆ ಕುದುರೆಗಳ ಹೆಜ್ಜೆಯ ಸದ್ದು, ಸೈನಿಕರ ಗದರಿಕೆಯ ಶಬ್ದ ಸಣ್ಣದಾಗಿ ಕೇಳಿ ಬರುತ್ತದೆ. ನೋಡು ನೋಡುತ್ತಿದ್ದಂತೆ ಹತ್ತಾರು ಸೈನಿಕರು, ಅವರ ಕುದುರೆಗಳು ಈ ಸಣ್ಣ ಊರನ್ನು ಪ್ರವೇಶಿಸುತ್ತವೆ. ಇದೆಲ್ಲಾ ಸಾಮಾನ್ಯವೆಂಬಂತೆ ಜನ ನೋಡುತ್ತಿದ್ದಾರೆ. ಕೆಲವರು ಎದ್ದು ನೀರು ತರಲು ಹೋಗುತ್ತಿದ್ದಾರೆ. ಸೈನಿಕರ ಹಿಂದೆಯೇ, ಒಬ್ಬರಿಗೊಬ್ಬರು ಸರಪಣಿಗಳಿಂದ ಬಂಧಿಸಲ್ಪಟ್ಟ ಇಪ್ಪತ್ತಕ್ಕೂ ಹೆಚ್ಚು ಖೈದಿಗಳು ನಡೆಯಲಾರದೆ ನಡೆದು ಬರುತ್ತಾರೆ. ಗುಲಾಮಿಗಿರಿಗೋ ಅಥವಾ ರಾಜ್ಯದ ಯಾವುದೋ ಶ್ರಮದ ಕೆಲಸಕ್ಕೋ ಇವರೆನ್ನೆಲ್ಲಾ ಇನ್ನೊಂದೆಡೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಬೆಂಕಿಯಂತೆ ಸುಡುತ್ತಿರುವ ಬಿಸಿಲಿನಲ್ಲಿ ನಡೆದುಕೊಂಡು ಬಂದ ದಣಿವು, ನೀರಿಗಾಗಿ ಹಾಹಾಕಾರ, ಸ್ವಲ್ಪ ಹೊತ್ತು ನಿಂತರೆ ಸಾಕು ಎಂಬಂತ ಭಾವ ಅವರ ಮುಖದಲ್ಲಿ, ಸೋತು ಹೋದ ಹೆಜ್ಜೆಗಳಲ್ಲಿ ಕಾಣಿಸುತ್ತಿದೆ. 

ಈ ಖೈದಿಗಳ ಗುಂಪಿನ ನಡುವೆಯೇ ಎದ್ದು ಕಾಣುವಂತೆ  ಎತ್ತರ ಆಕರ್ಷಕ ಮೈಕಟ್ಟು ಒಬ್ಬ ಖೈದಿಯದು. ರಾಜ ಕಳೆಯಿರುವ ಮುಖದಲ್ಲಿ ದಿಟ್ಟ ನಿಲುವಿದ್ದರೂ ಅವೆಲ್ಲವೂ ದಣಿವಲ್ಲಿ ಸೊರಗಿ ಹೋಗಿದೆ. ಇತ್ತ ಮರದ ಕೆಲಸ ಮಾಡುತ್ತಿರುವ ಬಡಗಿಯೊಬ್ಬನ ಮನೆಯ ಮುಂದೆ ಈ ಸೈನಿಕ, ಖೈದಿಗಳ ಗುಂಪು ಸಾಗುತ್ತಿದಂತೆ ಆ ಬಡಗಿಯು ತನ್ನ ಕೆಲಸಕ್ಕೆ ಒಂದು ವಿರಾಮ ಕೊಟ್ಟು ಇವೆಲ್ಲವನ್ನು ನೋಡುತ್ತಾ ಬಾಗಿಲ ಬಳಿ ಬಂದು ನಿಲ್ಲುತ್ತಾನೆ. ಸೈನಿಕರು ಮತ್ತು ಅವರ ಕುದುರೆಗಳಿಗೂ ಅದು ಅಲ್ಪ ವಿರಾಮ . ಅಲ್ಲಿನ ಜನ ಹೋಗಿ ನೀರುಗಳನ್ನು ತಂದು ಸೈನಿಕರಿಗೂ, ಅವರ ಕುದುರೆಗಳಿಗೆ ಕೊಡುತ್ತಾರೆ. ಅವರದಾದ ಬಳಿಕ ಖೈದಿಗಳ ಸರದಿ. ತಂದಿತ್ತ ನೀರನ್ನು ಕುಡಿಯಲು ಅವರು ಹಾತೊರೆಯುವ ದೃಶ್ಯ ಎಂತಹವರ ಮನಸ್ಸನ್ನೂ ಕಲಕದೆ ಇರದು. ಒಂದೊಂದು ಹನಿಯೂ ಅಮೃತ. ಕೊಟ್ಟ ಪಾತ್ರೆಯಲ್ಲಿ ಒಂದು ಹನಿಯೂ ಬಿಡದಂತೆ ಖೈದಿಗಳು ಕುಡಿಯುತ್ತಿರುವಾಗ, ಯಾರೋ ಬಂದು ಆ ಎತ್ತರದ ಖೈದಿಗೂ ಒಂದು ನೀರುಳ್ಳ ಪಾತ್ರೆ ಕೊಡುತ್ತಾನೆ. ಒಂದೆರೆಡು ಬೊಗಸೆಯಷ್ಟು ನೀರು ಹಿಡಿಯಬಹುದಾದ ಚಿಪ್ಪಿನ ಪಾತ್ರೆ. ಇನ್ನೇನು ನೀರನ್ನು ಬಾಯಿಗೆ ಇಳಿಸಿಕೊಳ್ಳಬೇಕು, ನೀರು ನಾಲಿಗೆಗೆ ಸೋಕಿ, ಅಮೃತದಂತ ರುಚಿ ತಾಕಬೇಕೆನ್ನುವಷ್ಟರಲ್ಲಿ ಅದೆಲ್ಲಿಂದಲೋ ಬಂದ ಸೈನ್ಯಾಧಿಕಾರಿ ಆ ಪಾತ್ರೆಯನ್ನು ಕಸಿದುಕೊಳ್ಳುತ್ತಾನೆ. "ಇವನಿಗೆ ಮಾತ್ರ ಯಾರೂ ನೀರು ಕೊಡುವಂತಿಲ್ಲ" ಎನ್ನುತ್ತಾ ಆ ನೀರನ್ನು ತಾನೇ ಗಟಗಟ ಕುಡಿಯ ತೊಡುಗುತ್ತಾನೆ. ದಿಕ್ಕೆ ತೋಚದಂತಾದ ಖೈದಿ, ಸೈನಿಕ ಕುಡಿಯುತ್ತಿರುವಾಗ ಸೋರುತ್ತಿರುವ ಹನಿಯನ್ನಾದರೂ ಕುಡಿಯಲು ಪ್ರಯತ್ನಿಸುತ್ತಾನೆ. ಉಹೂಂ... ಸೈನಿಕ ಅದೂ ಸಿಗದಂತೆ ಅವನ್ನನು ತಳ್ಳಿ ಬಿಡುತ್ತಾನೆ. ಅಂತಹ ದಿಟ್ಟ ನಿಲುವಿನ ನಡುವೆಯೂ ಆ ಖೈದಿಗೆ ಆಕಾಶವೇ ಬಿದ್ದಂತಾಗಿ ಅಳು ಒತ್ತರಿಸಿ ಬಂದು, ಗೋಳಾಡಲೂ ಶಕ್ತಿಯಿಲ್ಲದೆ, ಭೂಮಿಯೇ ಬಾಯಿ ತೆರೆದು ತನ್ನನ್ನು ನುಂಗಬಾರದೆ ಎಂಬಂತೆ ನೆಲಕ್ಕೆ 
ಬೀಳುತ್ತಾನೆ. 

ಮುಂದೆ ಸಣ್ಣ ನೆರಳೊಂದು ಅವನ ಮೈ ಮೇಲೆ ಬೀಳುತ್ತದೆ. ನೆಲದಲ್ಲಿ ಬಿದ್ದ ಆ ಖೈದಿಯ ತಲೆಯನ್ನು ಕೈಯೊಂದು ಪ್ರೀತಿಯಿಂದ ನೇವರಿಸುತ್ತದೆ. ಅವನ ಮುಖದ ಬಳಿ ನೀರಿನ ಸಣ್ಣ ಪಾತ್ರೆಯನ್ನು ಒಡ್ಡಿದಾಗ, ಮೃಷ್ಟಾನ್ನವೇ ಸಿಕ್ಕಿತ್ತೇನೋ ಎಂಬಂತೆ ಎಚ್ಚರಗೊಂಡ ಖೈದಿ ತ್ವರೆಯಿಂದ ನೀರು ಕುಡಿಯಲಾರಂಭಿಸುತ್ತಾನೆ. ನೀರು ತಂದಿತ್ತ ಕೈ ಅವನ ತಲೆಯನ್ನು ಪ್ರೀತಿಯಿಂದ ನೇವರಿಸುತ್ತಾ ನಿಧಾನವಾಗಿ ಕುಡಿ ಎನ್ನುವಂತೆ ಅವನನ್ನು ಉಪಚರಿಸುತ್ತದೆ. ಶತಮಾನಗಳ ದಾಹವೇನೋ ಎಂಬಂತೆ  ಆ ಖೈದಿ ನೀರನ್ನು ಕುಡಿಯುತ್ತಿರುವುದನ್ನು  ನೋಡಿದ ಸೈನ್ಯಾಧಿಕಾರಿ ಕೋಪದಿಂದ ಕುದಿಯುತ್ತಾ, ನೀರು ಕೊಡಬೇಡವೆಂದರೂ ಕೊಟ್ಟವರಾರು ಎಂದು ಆರ್ಭಟಿಸುತ್ತಾ ಮುಂದೆ ಬರುತ್ತಾನೆ. ಅಷ್ಟರಲ್ಲಿ ನೀರು ತಂದಿತ್ತ ಆ ವ್ಯಕ್ತಿ ನಿಧಾನವಾಗಿ ಎದ್ದು ನಿಲ್ಲುತ್ತಾನೆ. ನೀರು ಕೊಟ್ಟವನು ನಾನೇ ಎಂಬಂತ ದಿಟ್ಟ ಭಂಗಿಯದು. ಊರಲ್ಲಿ ಮರದ ಕೆಲಸ ಮಾಡುತ್ತಿದ್ದ ಅ ಬಡಗಿಯೇ ಆ ವ್ಯಕ್ತಿ. ಆರ್ಭಟಿಸುತ್ತಾ ಬಂದ ಅಧಿಕಾರಿ ಬಡಗಿಯನ್ನು ನೋಡಿದ್ದೆ, ಯಾಕೋ ಏನೂ ಮಾತನಾಡಲಾಗದೆ ಸುಮ್ಮನಾಗುತ್ತಾನೆ. ಮಾತ್ರವಲ್ಲದೆ ಬಡಗಿಯ ನೋಟವನ್ನು ಎದುರಿಸಲಾಗದೆ ಮೊದಲು ತಲೆ ತಗ್ಗಿಸಿ ನಂತರ ಹಾಗೇ ಮತ್ತೊಂದು ಕಡೆಗೆ ಮುಖ ಮರೆಸುತ್ತಾನೆ. ಯಾವುದೋ ತಪ್ಪಿಗೆ ಸಿಕ್ಕಿಕೊಂಡಂತ, ನಾಚಿಕೆಯ ಭಾವದಿಂದ ಅಲ್ಲಿ ನಿಲ್ಲಲಾಗದೆ ಪಕ್ಕಕ್ಕೆ ಸರಿಯುತ್ತಾನೆ . ಇತ್ತ ನೀರು ಕುಡಿದ ಖೈದಿ ಮಾತ್ರ ಹೊಸ ಜೀವ ಬಂದಂತೆ ಸಂತೋಷದಿಂದ ಬಡಗಿಯನ್ನು ಮೌನವಾಗಿ ವಂದಿಸುತ್ತಾ ಆತನ ಪಾದದ ಬಳಿ ಮಿಸುಕಾಡುತ್ತಿದ್ದಂತೆ,ಇನ್ನೂ ಅಲ್ಲಿ ನಿಲ್ಲಲ್ಲು ಸಾಧ್ಯವೇ ಇಲ್ಲವೆಂಬಂತೆ ಸೈನ್ಯಾಧಿಕಾರಿ ಅಲ್ಲಿಂದ ಎಲ್ಲರನ್ನು ಹೊರಡಿಸುತ್ತಾನೆ. ಖೈದಿಯ ಮುಖ ಮಾತ್ರ ತನಗೆ ಹೊಸ ಜೀವ ಕೊಟ್ಟ ಬಡಗಿಯನ್ನೇ ದಿಟ್ಟಿಸುತ್ತಿರುತ್ತದೆ. ಒಂದೆರೆಡು ಕ್ಷಣ ಒಬ್ಬರನೊಬ್ಬರು ನೋಡಿಕೊಳ್ಳುತ್ತಾರೆ. ಇತ್ತ ತನ್ನನ್ನು ಎಳೆದುಕೊಂಡು ಹೋಗುತ್ತಿದ್ದರೂ ಆ ಖೈದಿ ದೂರದ ತನಕ ಆತನನ್ನೇ ದಿಟ್ಟಿಸುತ್ತಾ ಮುಂದೆ ಸಾಗುತ್ತಾನೆ......



ಇದು ’ಬೆನ್ ಹರ್’ ಎಂಬ ಅತ್ಯಂತ ಜನಪ್ರಿಯ ಇಂಗ್ಲಿಷ್ ಚಿತ್ರದ ಒಂದು ತುಣುಕು. ಯೇಸು ಕ್ರಿಸ್ತನ ಸಮಕಾಲಿನಲ್ಲಿ ನಡೆಯುವ ಕಥೆಯ ಈ ಚಿತ್ರದ ಕಥಾನಾಯಕ ಬೆನ್ ಹರ್. ಅವನೇ ಆ ಖೈದಿ. ರೋಮನ್ ಸಾಮ್ರಾಜ್ಯದ ವಿರುದ್ಧ ಬಂಡಾಯ ಎದ್ದ  ಪರಿಣಾಮವಾಗಿ ತನ್ನ ಬಾಲ್ಯ ಗೆಳೆಯನಿಂದಲೇ, ದೇಶ ಭ್ರಷ್ಟನೆಂಬ ಸುಳ್ಳು ಹಣೆಪಟ್ಟಿಯೊಂದಿಗೆ ಜೀತದಾಳಾಗಿ ಸಾಗುವ ಸಂದರ್ಭದಲ್ಲಿ ನಡೆಯುವುದು ಮೇಲಿನ ಘಟನೆ. ಪ್ರೀತಿಯಿಂದ ನೀರು ನೀಡುವ ಬಡಗಿಯೇ ಯೇಸು ಕ್ರಿಸ್ತ ಎಂದು ಚಿತ್ರದಲ್ಲಿ ಪರೋಕ್ಷವಾಗಿ ತೋರಿಸಲಾಗಿದೆ. ಇದು ಬೆನ್ ಹರ್ ಎಂಬುವವನ ಕಥೆಯಾದರೂ ಇಡೀ ಚಿತ್ರದಲ್ಲಿ ಅಲ್ಲಲ್ಲಿ ಯೇಸು ಪಾತ್ರಧಾರಿ ಬರುತ್ತಾನೆ. ಅದರೂ ಯೇಸುವನ್ನು ಎಲ್ಲಿಯೂ ನೇರವಾಗಿ ತೋರಿಸದೆ ನಿರ್ದೇಶಕ ವಿಲ್ಲಿಯಂ ವೈಲರ್ ಜಾಣ್ಮೆ ಮರೆಯುತ್ತಾನೆ. 1956ರಲ್ಲಿ  ಬಿಡುಗಡೆಯಾದ ಈ ಚಿತ್ರ ಅತ್ತ್ಯುತ್ತಮವಾಗಿ ಮೂಡಿ ಬಂದು ಇಡೀ ವಿಶ್ವದಲ್ಲಿ ಜನಪ್ರಿಯವಾದರೂ, ಮೇಲಿನ ದೃಶ್ಯ ಮೂಡಿ ಬಂದಿರುವ ರೀತಿ  ಮಾತ್ರ ಮನೋಜ್ಞವಾಗಿದೆ. ಯೇಸು ಕ್ರಿಸ್ತನ  ಕೌಟಂಬಿಕ ಹಿನ್ನಲೆ, ಮಾನವೀಯತೆ, ಅಂತಕರಣ, ದಿಟ್ಟತನ , ಅನ್ಯಾಯದ ವಿರುದ್ಧದ ಧ್ವನಿ, ಅತನನ್ನು ಕಂಡರೆ ಅಧಿಕಾರ ವರ್ಗಕಿದ್ದ ಭಯ ಎಲ್ಲವೂ ಕೇವಲ ಮೂರು ನಾಲ್ಕು ನಿಮಿಷದ ಮೆಲಿನ ದೃಶ್ಯದಲ್ಲಿ  ಸುಂದರವಾಗಿ ಅನಾವರಣಗೊಂಡಿದೆ.ಹೆಚ್ಚಿನ ಮಾತಿಲ್ಲದೆ ಕೇವಲ ಭಾವಾಭಿನಯದಲ್ಲೇ ಎಲ್ಲವನ್ನು ಹೇಳಿರುವ ಪರಿ ಅಮೋಘ. ಯೇಸು ಕ್ರಿಸ್ತನ ಕೊನೆಯ ಘಳಿಗೆಗಳನ್ನು ಸಹಾ ಚಿತ್ರದಲ್ಲಿ ಮನಸ್ಸು ಮುಟ್ಟುವಂತೆ ಚಿತ್ರಿಸಲಾಗಿದೆ. ಸಮಯ ಅವಕಾಶ ಸಿಕ್ಕಾಗ ಒಮ್ಮೆ ನೋಡಲೇ  ಬೇಕಾದ ಚಿತ್ರವಿದು.

- ಪ್ರಶಾಂತ್ ಇಗ್ನೇಶಿಯಸ್

Monday, 17 March 2014

Exam ಓಕೆ Tension ಯಾಕೆ?



























ಟಾಮಿ : ಬೌ ಬೌ ಬೌ....

ರಾಕಿ : ಬೌ ಬೌ ಬೌ.....

ಟಾಮಿ : ಬಾ ರಾಕಿ ಹೇಗಿದ್ಯಾ?

ರಾಕಿ : ನಾನು ಚೆನ್ನಾಗಿದ್ದೀನಿ, ನೀನೇಗಿದ್ಯಾ?

ಟಾಮಿ : "ಏನಪ್ಪ ತುಂಬ ಅಪರೂಪ ಆಗಿಬಿಟ್ಟೆ? ಮೊದಲೆಲ್ಲಾ ನೋಡಿದ್ರೆ ಬೊಗಳ್ ತ್ತಿದ್ದೆ, ಈಗ ತಿರುಗಿನೂ ನೋಡಲ್ಲ?

ರಾಕಿ : ಸುಮ್ನಿರಪ್ಪ, ನೀನ್ ಮಾತ್ರ ಏನು? ದೂರದಲ್ಲಿ ನೋಡಿದ್ ತಕ್ಷಣ ಬಾಲ ಅಲ್ಲಾಡಿಸ್ತಿದ್ದೆ, ಈಗ ಹಾಗೇ ಮುದುರುಕೊಂಡು ಹೋಗ್ತಾ ಇರ್‍ತಿಯಾ?

ಟಾಮಿ : ಅಯ್ಯೋ ಬೊಗಳೊದಾ? ಅದೇನೋ ಈ ಮನುಷ್ಯರ್ ಮಕ್ಕಳಿಗೆಲ್ಲಾ Exam ಅಂತೆ, ನಾವೇನಾದ್ರೂ ಸ್ವಲ್ಪ ಸದ್ದು ಮಾಡಿದ್ರೂ “ಥೂ ನಾಯಿಮುಂಡೇದೇ ಮಕ್ಕಳ್ ಓದ್ ತಾವ್ರೇ ಬೊಗಳ್ ಬೇಡ ಅಂತಾರೆ. ಬೊಗಳಕ್ಕೂ ಬಿಡೊಲ್ಲ, ಏನ್ ಗತಿಯಪ್ಪ ನಮ್ಮದು?

ರಾಕಿ : ಅಯ್ಯೋ ಹೌದು ಗುರು, ಬೊಗೊಳೋದು ಇರ್‍ಲಿ, ನಮ್ಮ್ ನಾಯಿಗಳಿಗೆ ಈ ಬೆಂಗಳೂರ್ ಟ್ರಾಫಿಕ್ಕ್ನಲ್ಲಿ ಬಾಲ ಅಲ್ಲಾಡಿಸೋಕೂ ಜಾಗ ಇಲ್ಲ. ಮೊನ್ನೆ ರೋಡಲ್ಲಿ ನಿಮ್ಮ cousin ಜಾನಿ ಸಿಕ್ದಾ ಅಂತಾ ಜೋರಾಗಿ ಬಾಲ ಅಲ್ಲಾಡಿಸೋಕ್ಕೆ ಹೋದ್ರೆ, ಒಬ್ಬ ಬೈಕ್ ನಲ್ಲಿ ಬಾಲಕ್ಕೆ ಗುದ್ದ್ ಕೊಂಡ್ ಹೋಗ್ಬಿಟ್ಟಾ. ಅದಕ್ಕೆ ಬಾಲ ಅದರ ಪಾಡಿಗೆ ಸುಮ್ನೆ ಇಟ್ಕೊಂಡ್ ಇರ್ತೀನಿ. ಇವರ ರೋಡ್ ಗಳೆಲ್ಲಾ ಅಂಕು ಡೊಂಕು, ಆದ್ರೆ ನಮ್ಮ ಬಾಲ ಡೊಂಕು ಅಂತಾರೆ.

ಟಾಮಿ : ಅದೇನೋಪ್ಪ, ಇಡೀ ಜಗತ್ತನ್ನೇ ಇವರದೇ ಮಾಡ್ಕೊಂಡ್ ಅವ್ರೆ ಈ ಮನುಷ್ಯರು. ರೋಡ್ ಸಾಲ್ದು ಅಂತ ನಮ್ಮ ಫುಟ್ ಪಾತ್ ಗೂ ಗಾಡಿ ನುಗ್ಗಿಸ್ತಾರೆ. ರಸ್ತೆ ಅಕ್ಕಪಕ್ಕ ಇದ್ದ ಗಿಡ ಮರ ಎಲ್ಲಾ ಕತ್ತರಿಸವ್ರೆ. Urgentಗೆ ಒಂದು ಗಿಡ ಇಲ್ಲ ಮರ ಇಲ್ಲ ನಮಗೆ. ಆ ಲೈಟ್ ಕಂಬಗಳು ಅದ್ಯಾವಗ್ ಕರೆಂಟ್ ಹೊಡಿತ್ತಾವೋ ಭಯ.

ರಾಕಿ : ಇದನ್ನೆಲ್ಲಾ ಮಾತಡೊಕೆ ಅಂತಾನೇ, ಮೊನ್ನೆ ನಮ್ಮ ಏರಿಯಾ ನಾಯಿ ಸಂಘದವರ ಮೀಟಿಂಗ್ ಇಟ್ಕೊಂಡಿದ್ವಿ, ಮೀಟಿಂಗ್ ಎಲ್ಲಾ ಆದ ಮೇಲೆ ಕೊನೆಗೆ ಎಲ್ಲಾ ಸೇರಿಕೊಂಡು ಜೋರಾಗಿ ಬೊಗಳಿದ್ವಿ ನೋಡು, ಎಲ್ಲಾ ಮನೆಯಿಂದನೂ ಜನ ಬಂದು "ಥೂ ಮಕ್ಳು ಮಲಗವ್ರೆ, ನಾಳೆ Exam ಸುಮ್ನಿರಿ ನಾಯಿಗಳ ಅಂತ", ನಾವು ಬೊಗಳಿದಕ್ಕಿಂತ ಕೆಟ್ಟದಾಗಿ ಕೂಗಾಡಿದ್ರು"

ಟಾಮಿ : ಏನ್ Exam Exam Examu ಅಂತಾರೋ, ಆ ಮಕ್ಕ್ಳಿಗಿಂತ ಆ ತಂದೆ ತಾಯಿಗಳ್ದೆ ದೊಡ್ಡ್ ಗೋಳು. ಮೊನ್ನೆ ಯಾವ್ದೋ ಕಳ್ಳ ಬಂದಿದ್ದ, ನಾನು ಬೊಗಳಕ್ಕೆ ಹೋಗ್ಲಿಲ್ಲ, ಹಾಳಾಗೋಗ್ಲಿ ಅಂತ ಸುಮ್ನಿದ್ದೆ, ಅವ್ನು ಕಳ್ಳ ಬಂದು ಎಲ್ಲಾ ಬಿಟ್ಟು ಅದೇನೋ ಹಾಲ್ ಟಿಕೆಟ್ ಅಂತೆ, ಅದನ್ನ ಕದ್ದ್ಕೊಂಡ ಹೋದ ಅಂತ ಮನೆಯಮ್ಮ ಅಳ್ತಾಯಿದ್ಲು.

ರಾಕಿ : ನಮ್ಗೇನು ಬಿಡು, ನಾವು ನೋಡ್ದೆ ಇರೋ exama?...... ಅದ್ ಸರಿ ಏನ್ ಅದು exam ಅಂದ್ರೆ? ಅದು ಮಾಡಿ ಏನಾಗುತ್ತೆ?

ಟಾಮಿ : ಅದೇನೋ ನನಗೂ ಅಷ್ಟು ಗೊತ್ತಾಗೊಲ್ಲ, ಆದ್ರೆ ಅದನ್ನ ಚೆನ್ನಾಗಿ ಮಾಡೀದ್ರೆ, ಅವ್ರಿಗೆಲ್ಲ ಒಳ್ಳೆ ಕೆಲ್ಸ ಸಿಕ್ಕಿ ಚೆನ್ನಾಗಿ ಸಂಪಾದನೆ ಮಾಡಬಹುದು ಅಂತ ನಮ್ಮ ಮೀಟಿಂಗ್ ನಲ್ಲಿ ಹೇಳ್ತಿದ್ರು ರಾಕಿ ಹೌದಪ್ಪ ಈಗ ಮನುಷ್ಯರು ರಾತ್ರಿಯೆಲ್ಲಾ ಕೆಲಸಕ್ಕೆ ಹೋಗ್ತಾರೆ, ಅದ್ಯಾವಗೋ ಹೋಗ್ತಾರೋ, ಅದ್ಯಾವಗೋ ಬರ್‍ತಾರೋ, ಅದ್ಯಾವಗೋ ಮಲಗ್ತಾರೋ

ಟಾಮಿ : ಅವರು ಏನಾದ್ರು ಮಾಡ್ಕೊಳ್ಲಿ, ನಮಗೆ ಕಷ್ಟ ಆಗಿಬಿಟ್ಟಿದೆ. ಮೊದಲು ರಾತ್ರಿ ಹೊತ್ತು ರೋಡೆಲ್ಲಾ ನಮ್ದೆ. ರಾಜರ ಥರಾ ತಿರುಗಾಡಿಕ್ಕೊಂಡು ಇರ್‍ತಿದ್ವಿ. ಈಗ ರಾತ್ರಿಯೆಲ್ಲಾ BPO Cabಗಳು. ಯಾರು ಕಳ್ಳ,ಯಾರು ಯಜಮಾನ ಗೊತ್ತಾಗೊಲ್ಲ.ಮೊನ್ನೆ ನಮ್ಮ್ ರೋಡನಲ್ಲಿ ಮಧ್ಯರಾತ್ರಿ ಯಾರೋ ಕೂದಲೆಲ್ಲಾ ಕೆದರಿಕೊಂಡು, ಚಡ್ಡಿ ಹಾಕ್ಕೊಂಡು, ಮನೆ ಬೀಗ ತೆಗಿತ್ತಿದ್ದ, ಕಳ್ಳ ಅಂದ್ಕೊಂಡು ಹೋಗಿ ಕಾಲಿಗೆ ಬಾಯಿ ಹಾಕಿ ಬಿಡಲೇ ಇಲ್ಲ ನಾನು. ಅಮೇಲೆ ನೋಡಿದ್ರೆ, ಅವನು ಅ ಮನೆಯವನೇ, ರಾತ್ರಿ ಕೆಲಸ ಮುಗಿಸಿಕೊಂಡು ಬಂದಿದ್ನಂತೆ. ಎಲ್ಲಾ ಸೇರೊಕೊಂಡು ಸರಿಯಾಗಿ ಬಿಟ್ಟ್ರು ನನಗೆ.

ರಾಕಿ : ಥೂ ನಿನ್ನ, ಅವನ ಕತ್ತಿಗೆ ನೇತಾಕೊಂಡಿರೋ ID Card ನೋಡಿ ಕಚ್ಚಬಾರದಾ ನೀನು?

ಟಾಮಿ : ಸರಿ ಬಿಡು, ಇನ್ನು ಒಂದೆರೆಡು ತಿಂಗಳು ಆ ಕೆರೆ ಇರೋ ಪಾರ್ಕಿಗೆ ಹೋಗಬೇಡಪ್ಪ. ಅಲ್ಲಿ ಪೋಲಿಸ್ ಮಾಮ ಇರ್‍ತಾರೆ. ಯಾರನ್ನೂ ಬಿಡೋಲ್ಲ ರಾಕಿ ಹೌದಾ? ಯಾಕೆ?

ಟಾಮಿ : ಹೇ ಅದೇ, ಈ Exam ಚೆನ್ನಾಗಿ ಮಾಡ್ದೆ ಇರೋರು, ಫೇಲ್ ಆದೋರೆಲ್ಲಾ, ಕೆರೆಗೆ ಬೀಳೋಕೆ ಬರ್‍ತಾರಂತೆ ಅದಕ್ಕೆ ಕೆರೆ ಹಾಳುಗುತ್ತೆ ಅಂತ ಯಾರನ್ನೂ ಬಿಡೊಲ್ಲ ರಾಕಿ ಒಳ್ಳೆ ಕತೆ ಆಯ್ತಲ್ಲ, ಈ ಮನುಷ್ಯರ ಪಾಡಿಗಿಂತ ನಮ್ಮ ನಾಯಿ ಪಾಡೇ ಎಷ್ಟೋ ವಾಸಿ ಟಾಮಿ ಅಲ್ಲಾ ರಾಕಿ, Exam ನಲ್ಲಿ ಫೇಲ್ ಆದ್ರೆ ಕೆರೆಗೆ ಹಾರೋಂತಾದೇನು ಅಂತಾ, nex time ಬರದ್ರೆ ಆಯ್ತು

ರಾಕಿ : ಅದೇ ಅಲ್ವಾ? Exam ಮುಖ್ಯ ಸರಿ, ಆದರೆ ಅದಕ್ಕಿಂತ ಜೀವನ ಮುಖ್ಯ ಅಲ್ವಾ??

ಟಾಮಿ : ನಮ್ಮ ಮಾತು ಕೇಳೋ ಹಾಗಿದ್ರೆ ಹೇಳ್ತಿದ್ದೆ, "ನೋಡ್ರೋ ಮಕ್ಳ ಚೆನ್ನಾಗಿ ಓದಿ, ಚೆನ್ನಾಗಿ Exam ಬರೀರಿ, ಸುಮ್ನೆ Tension ಮಾಡ್ಕೊಂಡ್ರೆ ಆಗೊಲ್ಲ "ಆಂತಾ!!

ರಾಕಿ : ಅದನ್ನ ಅವರಿಗಿಂತ ಅವರ ತಂದೆ ತಾಯಿಗಳಿಗೆ ಹೇಳಬೇಕು. ಅವ್ರೆ ಮಕ್ಕಳನ್ನ ಹಿಂಸೆ ಡೋದು,ಅದೇನೋ Engineer ಆಗ್ರಿ, BPO ಹತ್ತಿ ಅಂತ....

ರಾಕಿ : ಎಲ್ಲಾ Engineer, BPOಗೆ ಹೋಗ್ಬೇಕು ಅಂದ್ರೆ, ಬೇರೆ ಬೇರೆ ಕೆಲ್ಸ ಮಾಡೋರು ಯಾರು ಆಂತಾ? ಅಮೇಲೆ ಮನುಷ್ಯರೆಲ್ಲ ಒಂದೇ ತರಾ ಕಾಣ್ತಾರಪ್ಪ!

ಟಾಮಿ : ಅದೇ ಅಲ್ವಾ, ನಾವು ನೋಡು, ಹೆಂಗೆ ಬೇರೆ ಬೇರೆ ತರಾ ನಾಯಿಗಳು ಇದ್ದೀವಿ, ನಮ್ಮದೇ ವ್ಯಕ್ತಿತ್ವ... ಸಾರಿ... ನಮ್ಮದೇ ನಾಯತ್ವ ಇಲ್ವಾ?

ರಾಕಿ : ಸರಿ ಸರಿ ನಡಿ…..Exam ಬರಿಯೋ ಎಲ್ಲಾ ಮಕ್ಕಳಿಗೆ, ಯುವಕರಿಗೆ ನಮ್ಮ ಕಡೆಯಿಂದ ಒಂದು ವಿಶ್ ಮಾಡೋಣ

ಟಾಮಿ : ಮಕ್ಕಳೇ, ಚೆನ್ನಾಗಿ Exam ಬರೀರಪ್ಪ. ಬರ್‍ದು ದೇಶಕ್ಕೆ ಒಳ್ಳೆ ಹೆಸರು, ನಮಗೆ ಒಳ್ಳೆ ಬಿಸ್ಕಟ್ ತಂದ್ ಕೊಡ್ರಪ್ಪ.

ರಾಕಿ : Exam ಓಕೆ, ತುಂಬ Tension ಯಾಕೆ?

- ಪ್ರಶಾಂತ್ ಇಗ್ನೇಷಿಯಸ್


Tuesday, 18 February 2014

ಆಡಿಯೋ ಅನಿಸಿಕೆ : ಉಳಿದವರು ಕಂಡಂತೆ

ತಮ್ಮ ಮೊದಲ ಚಿತ್ರದಿಂದಲೂ ಭರವಸೆ ಮೂಡಿಸಿದ್ದ ರಕ್ಷಿತ್ ಶೆಟ್ಟಿ, ’ಸಿಂಪಲಾಗಿ...’ ಯಿಂದ ಏರಿದ ಎತ್ತರ ಅಷ್ಟೇನು ಸಿಂಪಲ್ಲಲ್ಲ. ಈ ನಡುವೆ ನಿರ್ದೇಶಕರಾಗಿ ಹೊಸ ಚಿತ್ರವನ್ನು ಪ್ರಕಟಿಸಿದಾಗ, ಅದ್ಭುತವೆನಿಸುವಂತ ಟ್ರೈಲರ್ ಬಿಡುಗಡೆ ಮಾಡಿದಾಗ, ’ಸಿಂಪಲ’ನ್ನು ಕಾಣದಿದ್ದ ಅಳಿದುಳಿದವರೂ "ಉಳಿದವರು ಕಂಡಂತೆ’ಯತ್ತ ಈಗ ಮುಖ ಮಾಡಿದ್ದಾರೆ. ಚಿತ್ರದ ಆಡಿಯೋ ಬಿಡುಗಡೆಯಾಗಿದೆ, ಹೇಗಿದೆ ಎನ್ನುವುದಕ್ಕಿಂತ ಹೀಗೂ ಇರಬಹುದು ಎಂಬಂತೆ ವಿಭಿನ್ನವಾಗಿದೆ ಹಾಡುಗಳು. "ಕಣ್ಣು ನಿನ್ನದಾದರೇನು ನೋಡೋದು ಬೇರೆಯವರನ್ನು, ನೋಡೋದು ಬೇರೆಯವರಾದರೇನು? ಅಲ್ಲಿ ಹುಡ್ಕು ನೀನು ನಿನ್ನತನವನ್ನು" ಎಂಬ ಅರ್ಥದ ಸಾಲುಗಳು ಚಿತ್ರದ ಗೀತೆಯೊಂದರಲ್ಲಿದೆ. ಅಂತೆಯೇ ಚಿತ್ರದ ಹಾಡುಗಳಿಗೆ ತನ್ನದೇ ಆದ ’ತನ’ವಿದೆ.ಅಲ್ಲಿ ತಾಜತನವಿದೆ, ಹೊಸತನವಿದೆ, ದಕ್ಷಿಣ ಕನ್ನಡತನವಿದೆ, ರಕ್ಷಿತನವಿದೆ, ಹೊಸ ಸಂಗೀತ ನಿರ್ದೇಶಕ ಅಜನೀಶರ ತನವಿದೆ, ಹಾಡಿದ ಎಲ್ಲಾ ಗಾಯಕರು ತಮ್ಮ ತನವನ್ನು ಹಾಡುಗಳಲ್ಲಿ ಅಚ್ಚೊತ್ತಿದ್ದಾರೆ. ಹೇಗಿದೆ ಹಾಡುಗಳು ಕೇಳಿ :


ಥೀಮ್ ಆಫ್ ಉಳಿದವರು : ಚಿತ್ರದ ಥೀಮ್ ಸಂಗೀತ ಎಂಬ ಹಣೆಪಟ್ಟಿಯ  ಹಿನ್ನಲೆ ಸಂಗೀತದ  ಈ ಟ್ರ್ಯಾಕ್ ನ ಸಂಗೀತ ಉತ್ತಮವಾಗಿದ್ದೂ, ಮೀನುಗಾರರ,ಹಡಗು ಕಾರ್ಮಿಕರ, ಸಮುದ್ರಯಾನದ ಹಿನ್ನಲೆ ಧ್ವನಿ, ಯಾವುದೋ ಘಟನೆ, ಕಥೆಯನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡು ಮೆಲ್ಲಗೆ ಬಿಚ್ಚುತ್ತಾ ಹೋಗುತ್ತದೆ. ಅತ್ತ್ಯುತ್ತಮ ಎನ್ನಬಹುದಾದ ವಾದ್ಯ ಸಂಯೋಜನೆ.

ಸಮಯದ ತಿರುವು : ಸಿ. ಅರ್.ಬಾಬಿಯವರ ಮಾದಕ ಧ್ವನಿಯಲ್ಲಿ ಮೂಡಿ ಬಂದಿರುವ ಈ ಗೀತೆಯ ಹಿನ್ನಲೆಯಲ್ಲಿ ಬರುವ ವಾದ್ಯ ಸಂಗೀತವೂ ಅಷ್ಟೇ ಮಾದಕವಾಗಿದೆ. Knock Knock ಎನ್ನುತ್ತ ಹೃದಯದ ಬಾಗಿಲನ್ನು ತಟ್ಟುತ್ತಲೇ ಮುಗಿದು ಹೋಗುವ ಸುಂದರ ಗೀತೆಗೆ ಮನೋಜವ ಗಲಗಲಿ, ವಿಘ್ನೇಶ್ವರ ವಿಶ್ವರ ಸಾಹಿತ್ಯ ಇದ್ದೂ ಇಲ್ಲದಂತಿದೆ.

ರಿಚ್ಚೀಸ್ ಥೀಮ್ : ಮತ್ತೊಂದು  ಹಿನ್ನಲೆ ಸಂಗೀತದ  ಟ್ರ್ಯಾಕ್. ನಡುನಡುವೆ ಮಾತು, ನಗು ಕೇಕೆ,ಎಲ್ಲವೂ ಇದೆ. ಸಂಗೀತ ಏನಿದು ಹೀಗಿದೆ ಎಂದು ನಕ್ಕಿರೋ ಜೋಕೆ!!! ರಪ್ಪನೆ ಕೇಳಿ ಬರುತ್ತದೆ ಏನೋ ಬೋ* ಮಕ್ಳಾ ನಗ್ತೀರಾ? ಶೂಟ್  ಮಾಡಬೇಕಾ?  ಎಂಬ ಉದ್ಘಾರ.

ಹುಲಿವೇಷ : ಈ ಟ್ರ್ಯಾಕ್ ಕೇಳುತ್ತಾ ಕೇಳುತ್ತಾ ನಮ್ಮ ಹಳ್ಳಿ ಜಾತ್ರೆ, ತೇರು, ಮೆರವಣಿಗೆಗಳಲ್ಲಿನ ಬ್ಯಾಂಡ್ ಸೆಟ್ ನೆನಪಿಗೆ ಬರಲಿಲ್ಲವೆಂದರೆ ಕೇಳಿ. ಕ್ಲಾಸ್ ಗುಂಗಿನಲ್ಲೇ ಆರಂಭವಾಗಿ ’ಬಾ ಬಾರೋ ರಣಧೀರ ಹಾಡಿನ ಸಂಗೀತದಿಂದ ಪಕ್ಕಾ ಮಾಸ್ ಗೆ ತಿರುಗಿ ಅಲ್ಲೇ ಮೆರೆದಾಡುತ್ತದೆ. ತಮಟೆ, ಜಲ್ ಜಲ್  ಸದ್ದಂತೂ ಬಾಲ್ಯ  ದಿನಗಳ ನೆನಪತ್ತ  ಕರೆದುಕೊಂಡು ಹೋಗುತ್ತದೆ. ಕೂತ್ತಲ್ಲೇ  ಹುಲಿವೇಷದ  ಒಂದೆರೆಡು steps ಹಾಕುವಂತೆ ಮಾಡುತ್ತದೆ ಈ ಟ್ರ್ಯಾಕ್. ಕೇವಲ ಹಿನ್ನಲೆ ಸಂಗೀತದಲ್ಲೂ ಇಷ್ಟೊಂದು ತುಂಟತನವೇ?

ಕಣ್ಣಾಮುಚ್ಚೆ : ಥೀಮ್ ಸಾಂಗುಗಳ ಭರಾಟೆಯಿಂಡ ಕೇಳುಗರನ್ನು ಮಾಧುರ್ಯದ ಲೋಕಕ್ಕೆ ತಂದು ನಿಲ್ಲಿಸುವ ಗೀತೆಗೆ ಸುನಿಯವರ ಸಾಹಿತ್ಯವಿದೆ. ಶಂಕರ್ ಮಹಾದೇವನ್ ಗೆ ಸಾಟಿಯಾಗಿ ವಾಣಿ ಧ್ವನಿಗೂಡಿಸಿದ್ದಾರೆ.ಹಿನ್ನಲೆಯಲ್ಲಿ ಬರುವ ವಾದ್ಯ ಸಂಗೀತದಲ್ಲಿ ಸಂಗೀತ ನಿರ್ದೇಶಕ ತೋರಿರುವ ಸಂಯಮ ಅದ್ಭುತ. ಉತ್ತಮ ಸಾಹಿತ್ಯ, ಅದ್ಭುತ ಗಾಯನದ ನಡುವೆ ಅಜನೀಶ್ ತಮ್ಮ ಸಂಗೀತದಿ೦ದ ಎತ್ತರದಲ್ಲಿ ನಿಲ್ಲುತ್ತಾರೆ.

ಮಳೆ ಮರೆತು : ಅಜನೀಶ್ ತಮ್ಮ ವಾದ್ಯ ಸಂಯೋಜನೆಯಿಂದ ಬೆರಗುಗೊಳಿಸಿದರೆ, ವಿಘ್ನೇಶ್ವರ ವಿಶ್ವರ ಸಾಹಿತ್ಯ ಮೋಡಿ ಮಾಡುತ್ತದೆ. ಉತ್ತಮ ರಾಗಕ್ಕೆ ಒಳ್ಳೆಯ ಸಾಹಿತ್ಯ ದೊರಕಿ ವಿಜಯ್ ಪ್ರಕಾಶರ ಧ್ವನಿ ಸಿಕ್ಕ ಮೇಲೆ ಕೇಳಬೇಕೇ? ವಿಜಯ್ ಸಂದರ್ಭಕ್ಕೆ ತಕ್ಕಂತೆ ತಮ್ಮ ಧ್ವನಿಯನ್ನು ಬದಲಾಯಿಸಿಕೊಂಡು ಹಾಡಿದಂತೆ ಭಾಸವಾಗುವುದು ಒಂದು ಉತ್ತಮ ಬೆಳವಣಿಗೆ.

ಘಾಟಿಯ ಇಳಿದು : ಸಾಹಿತ್ಯ, ಸಂಗೀತ, ವಾದ್ಯ ಸಂಯೋಜನೆ, ಮಣ್ಣಿನ ವಾಸನೆ ಎಲ್ಲವೂ ಒಟ್ಟಾಗಿ ಉತ್ತಮವಾಗಿ ಜೊತೆಗೂಡಿ ಬಂದಾಗ ಒಂದು ಗೀತೆ ಏನಾಗಬಹುದೋ, ಇಲ್ಲಿ ಅದೇ ಆಗಿದೆ. ಹೆಚ್ಚಿಗೆ ಬರೆಯಲು ಏನಿಲ್ಲ. ಕೇಳಿ ಆನಂದಿಸಬೇಕಷ್ಟೇ. ರಕ್ಷಿತ್ ರ ಭರವಸೆಯ ಸಾಹಿತ್ಯದ ನಡುವೆ ಬರುವ ತುಳು ಮಾತುಗಳು ಗೀತೆಗೆ ಮೆರಗು ತಂದುಕೊಟ್ಟಿದೆ. ಹಾಡಿನ ವಿಡಿಯೋ ನೋಡಿ

ಪೇಪರ್: ಅಜನೀಶ್ ಲೋಕನಾಥರ ಉತ್ತಮವಾದ ಸಂಗೀತವನ್ನು ಮೀರಿ ನಿಲ್ಲುವಂತೆ ಮೋಡಿ ಮಾಡುವುದು ಗಾಯನ ಹಾಗೂ ರಕ್ಷಿತರ  ತುಂಟ ಸಾಹಿತ್ಯ. 'ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಕಟ್ಟಲಿ ಬಡವನಯ್ಯಾ? ಎನುತ್ತಲೇ ಗೀತೆ ಅನೇಕ ಅರ್ಥಗಳನ್ನು ಕಟ್ಟಿಕೊಡುತ್ತದೆ. ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ವಿಭಿನ್ನ  

ಕಾಕಿಗ್ ಬಣ್ಣ ಕಾಂತ :  ಗೀತೆ ಕೇಳುತ್ತಾ ಕೇಳುತ್ತಾ ಯಾರಿಗೆ ಹೆಚ್ಚು ಮಾರ್ಕ್ಸ್, ಯಾರಿಗೆ ಹೆಚ್ಚು ಅಭಿನಂದನೆ ಸಲ್ಲಬೇಕು ಎಂಬ ಗೊಂದಲ ಮೂಡದಿದ್ದರೆ ಕೇಳಿ. ರಕ್ಷಿತ್ ರ ಸಾಹಿತ್ಯದ ಒಂದೊಂದು ಪದಕ್ಕೂ ಶ್ರೇಯಾ ಘೋಶಾಲ್ ಎಂಬ ಅದ್ಘುತ ಪ್ರತಿಭೆ ತಂದು ಕೊಟ್ಟಿರುವ ಜೀವ,ಮೆರುಗು, ಬಣ್ಣಕ್ಕೆ ಎಲ್ಲೂ ಭಂಗ ಬರದಂತೆ ಸೈಡಲ್ಲಿದ್ದುಕೊಂಡು ಮಜಾ ತೆಗೆದುಕೊಂಡಿರುವ ಅಜನೀಶರ ಸಂಗೀತ ಖುಷಿ ಕೊಡುತ್ತದೆ. ಕೊನೆಗೆ ಶ್ರೇಯಾಗೆ hats off  ಹೇಳುತ್ತದೆ ಮನಸ್ಸು.  ಈ ಹಾಡನ್ನು ನೋಡಿ

The Final Countdown: ಮೊದಲೇ ಹೇಳಿದಂತೆ ಇಲ್ಲಿನ ಪ್ರತಿಯೊಂದು ಹಿನ್ನಲೆ ಸಂಗೀತವೂ, ಪ್ರತಿಯೊಂದು ಟ್ರ್ಯಾಕ್ಕೂ ಯಾವುದೋ ಒಂದು ಕಥೆಯನ್ನೋ ಘಟನೆಯನ್ನೋ ತೀವ್ರವಾಗಿ ಹೇಳುತ್ತಾ ಹೋಗುತ್ತದೆ. ಈ ಟ್ರ್ಯಾಕ್ ಸಂಗೀತವೂ ಅದರಿಂದ ಹೊರತಾಗಿಲ್ಲ. ನಿರ್ದೇಶಕ ರಕ್ಷಿತ್ ಸಂಗೀತದಲ್ಲೇ ಕಥೆಯನ್ನು ಮುನ್ನಡೆಸುವ ನಿರ್ಧಾರ ಮಾಡಿದಂತಿದೆ.

ಉಳಿದವರು ಕಂಡಂತೆ : ಎಲ್ಲಾ ಗೀತೆಗಳ ನಂತರ ಉಳಿದುಕೊಂಡಂತೆ ಬರುವ ಈ ಗೀತೆಗೆ ಸುನಿಯವರ ಸಾಹಿತ್ಯ ಸಕ್ಕತ್ತಾಗಿಯೇ ಒದಗಿ ಬಂದಿದೆ.ಮಿಕ್ಕೆಲ್ಲಾ ಗೀತೆಗಳಲ್ಲಿ ಇನ್ನೇನಾದರೂ ಉಳಿದುಕೊಂಡಿದ್ದರೆ ತಗ್ಗೊಳ್ಳಿ ಎಂಬಂತಿದೆ ಈ ಗೀತೆ. ಸ್ವತ: ಅಜನೀಶ್ ಲೋಕನಾಥ್ ರ ಧ್ವನಿ ಭಿನ್ನವಾಗಿದ್ದೂ ಗೀತೆಗೆ ಪೂರಕವಾಗಿದೆ.

ಉಳಿದವರು ಕಂಡಂತೆ ಟೈಟಲ್ ಟ್ರ್ಯಾಕ್ : "ಡೀಸಲ್ ಗಾಡಿ ಪೆಟ್ರೋಲ್ ಅಲ್ಲಿ ಓಡೊಲ್ವಂತೆ : ಟ್ರೈ ಮಾಡಿ ನೋಡೋಕೆ ಇವರಿಗೇನು ಧಾಡಿಯಂತೆ" ಎಂಬ ಯೋಗರಾಜ ಭಟ್ಟರ ಸಾಲು ಈ ಗೀತೆಗೆ ಹೇಳಿ ಮಾಡಿಸಿದಂತಿದೆ. ಸಾಹಿತ್ಯ, ಸಂಗೀತ, ಗಾಯನ ಎಲ್ಲದರಲ್ಲೂ ತುಂಟತನ, ಹೊಸತನ ಬೆರೆಸಿ ಟ್ರೈ ಮಾಡಿ ನೋಡಲಾಗಿದೆ ಹಾಗೂ ಅದರಿಂದಲೇ ಇಷ್ಟವೂ ಆಗುತ್ತದೆ.  A Fitting finish to the album.

http://kannada.oneindia.in/movies/music/audio-review-of-kannada-movie-ulidavaru-kandante-081825.html

-ಪ್ರಶಾಂತ್ ಇಗ್ನೇಷಿಯಸ್

Monday, 30 December 2013

ಆಡಿಯೋ ಅನಿಸಿಕೆ : ನಿನ್ನಿಂದಲೇ

ಪುನೀತ್ ಚಿತ್ರ ಜೀವನದಲ್ಲಿ ಮೈಲಿಗಲ್ಲಾದ ಮಿಲನ ಚಿತ್ರದ ’ನಿನ್ನಿಂದಲೇ’ ಹಾಡಿನ ಮೊದಲ ಸಾಲನ್ನೇ ಶೀರ್ಷಿಕೆಯಾಗಿಸಿಕೊಂಡ ’ನಿನ್ನಂದಲೇ’ ಚಿತ್ರ ತನ್ನ ಹೆಸರಿಂದಲೇ ಚಿತ್ರ ರಸಿಕರನ್ನು ಸೆಳೆದುಕೊಳ್ಳುತ್ತಿದ್ದಂತೆ, ಆಗಾಗ ಬಿಡುಗಡೆಯಾಗುತ್ತಿರುವ ಚಿತ್ರದ ಸ್ಟಿಲ್ ಗಳಿಂದಾಗಿ ಚಿತ್ರದ ಬಗೆಗಿನ ನಿರೀಕ್ಷೆ ಮತ್ತಷ್ಟು ಹಿಗ್ಗಿದೆ. ಪುನೀತ್ ಚಿತ್ರವೆಂದ ಮೇಲೆ ಅದರಲ್ಲಿನ ಹಾಡುಗಳ ಬಗ್ಗೆ ಕಾತುರ ಇದ್ದೆದ್ದೇ. ಅಪ್ಪು ಚಿತ್ರಗಳಲ್ಲಿನ ಬೇರೆ ಎಲ್ಲ ಅಂಶಗಳಷ್ಟೇ ಪ್ರಮುಖವಾದದ್ದು ಚಿತ್ರದ ಸಾಹಸ ದೃಶ್ಯಗಳು ಹಾಗೂ ಹಾಡುಗಳು. ಮಕ್ಕಳ ಹಾಗೂ ಯುವಕರ ಪಾಲಿಗಂತೂ ಅಪ್ಪು ಈ ಎರಡು ಅಂಶಗಳಿಂದಾಗಿಯೇ ಫೇವರೇಟ್. 2013ರಲ್ಲಿ ಪುನೀತ್ ನ ಯಾವುದೇ ಚಿತ್ರ ಬಿಡುಗಡೆ ಆಗದೆ ನಿರಾಸೆಯಲ್ಲಿದ್ದ ಅವರ ಅಭಿಮಾನಿಗಳ ಪಾಲಿಗೆ ಸ್ವಲ್ಪ ಸಮಾಧಾನವೆಂಬಂತೆ ನಿನ್ನಿಂದಲೇ ಧ್ವನಿಸುರಳಿ ಬಿಡುಗಡೆಯಾಗಿದೆ. ಸಿ.ಡಿ. ಗಳು ಭರದಿಂದ ಮಾರಾಟವಾಗುತ್ತಿರುವ ಸುದ್ದಿ ಇದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ಅದರೂ ಹಾಡುಗಳನ್ನು ಕೇಳಿದಾಗ ಇನ್ನೂ ಏನೋ ಬೇಕಿತ್ತು ಎಂಬ ಭಾವ ಕಾಡುತ್ತದೆ. ಇತ್ತೀಚಿನ ಕನ್ನಡ ಚಿತ್ರ ಗೀತೆಗಳಲ್ಲಿನ ಸೃಜನಶೀಲತೆ, ಪುನೀತ್ ಹಾಡುಗಳಿಗೆ ಇರುವ ಜನಪ್ರಿಯತೆ, ನಿರೀಕ್ಷೆಯ ಹಿನ್ನಲೆಯಲ್ಲಿ ಮಣಿಶರ್ಮ ಮತ್ತಷ್ಟು ಶ್ರಮವಹಿಸಬಹುದಿತ್ತೇನೋ ಎನಿಸುತ್ತದೆ.


ಡೋಂಟ್ ಕೇರ್ : ಕವಿರಾಜ್ ಸಾಹಿತ್ಯದ ವಿಶಾಲ್ ದದ್ಲಾನಿ ಹಾಡಿರುವ ಈ ಗೀತೆ ನೃತ್ಯಕ್ಕಾಗಿಯೇ ಸಂಯೋಜಿಸಿದಂತಿದೆ. ಈ ಹಾಡಿಗೆ ಪುನೀತ್ ಹೇಗೆ ನೃತ್ಯ ಮಾಡಿರಬಹುದು ಎಂಬದಷ್ಟೇ ಮುಂದಿನ ಕುತೂಹಲ. ವಿಶಾಲ್ ಗಾಯನದಲ್ಲಿ ಅಂಥಾ ವಿಶೇಷತೆ ಎನಿಲ್ಲ. ವೇಗದ ಧಾಟಿಯಲ್ಲಿ ಇರುವುದರಿಂದ ಕವಿರಾಜರ ಸಾಹಿತ್ಯಕ್ಕೂ ಹೆಚ್ಚಿನ ಅವಕಾಶ ಸಿಕ್ಕಿಲ್ಲ.

ನೀನು ಇರುವಾಗ : ಕಾರ್ತಿಕ್ ಹಾಗೂ ಅನುರಾಧ ಭಟ್ ಹಾಡಿರುವ ಈ ಸುಮಧುರ ಹಾಡಿಗೆ ಕಲ್ಯಾಣ್ ಉತ್ತಮವಾದ ಸಾಹಿತ್ಯವನ್ನು ಒದಗಿಸಿದ್ದಾರೆ. ಪ್ರೇಮಿಗಳ ಆಶಯ ಹಾಗೂ ತೊಳಲಾಟವನ್ನು ಸಾಹಿತ್ಯ ಮಾತ್ರವಲ್ಲದೆ ರಾಗದ ಮೂಲಕವೂ ಉತ್ತಮವಾಗಿ ಹಿಡಿದಿಡುವಲ್ಲಿ ಸಂಗೀತ ನಿರ್ದೇಶಕ ಮಣಿಶರ್ಮ ಸಫಲವಾಗಿದ್ದಾರೆ. ಅನುರಾಧ ಭಟ್ಟರ ಧ್ವನಿ ಅಪ್ತವಾಗಿದ್ದೂ, ಅನುರಾಧ ಚಿತ್ರದಿಂದ ಚಿತ್ರಕ್ಕೆ ಮತ್ತಷ್ಟು ಭರವಸೆ ಮೂಡಿಸುತ್ತಾರೆ. 

ಮೌನ ತಾಳಿತು : ಮೌನ ತಾಳಿತು ಎಂಬ ಹೆಚ್ಚಿನ ಅಬ್ಬರವಿಲ್ಲದ ಗೀತೆಗೆ ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಪೂರಕವಾಗಿದೆ. ಚಿತ್ರದಲ್ಲಿನ ದು:ಖದ ಸನ್ನಿವೇಶದಲ್ಲಿ ಬರಬಹುದು ಎಂಬಂತಿರುವ ಹಾಡು ಪರದೆಯ ಮೇಲೆ ಮತ್ತಷ್ಟು ಇಷ್ಟವಾಗಬಹುದೇನೋ. ಗಾಯಕ ಅರ್ಜಿತ್ ಸಿಂಗ್ ಧ್ವನಿ ಚೆನ್ನಾಗಿದ್ದರೂ ಯಾರೇ ಹಾಡಿದ್ದರೂ  ವಿಭಿನ್ನವಾದ ರಾಗದ ಧಾಟಿಯಿಂದಾಗಿ ಕೇಳುತ್ತಾ ಕೇಳುತ್ತಾ ಕೇಳುಗರಿಗೆ ಇಷ್ಟವಾಗಬಹುದಾದ ಗೀತೆಯಿದು. 

ನಿಂತೆ ನಿಂತೆ : ಧ್ವನಿ ಸುರಳಿಯ ಅತ್ತ್ಯುತ್ತಮ ಗೀತೆ ಎನ್ನಬಹುದು. ವಿಜಯ್ ಪ್ರಕಾಶ್ ಎಂದಿನಂತೆ ತಮ್ಮ ಧ್ವನಿ ಹಾಗೂ ಶೈಲಿಯಿಂದಾಗಿ ಹಾಡನ್ನು ತಮ್ಮದಾಗಿಸುಕೊಳ್ಳುವುದು ಮಾತ್ರವಲ್ಲದೆ ಕೇಳುಗರನ್ನು ಆವರಿಸಿಕೊಳ್ಳುತ್ತಾರೆ. ಚಿನ್ಮಯಿ ಹಾಗೂ ಸುಧಾಮಯಿ ಸಹಾ ಉತ್ತಮವಾಗಿ ಧ್ವನಿಗೂಡಿಸಿದ್ದಾರೆ, ನಡು ನಡುವೆ ಬರುವ ಇಂಗ್ಲೀಷ್ ಕೋರಸ್ ಉತ್ತಮವಾಗಿದೆ. ಕವಿರಾಜರ ಸಾಹಿತ್ಯವೂ ಗೀತೆಗೆ ಮೆರಗನ್ನು ತಂದುಕೊಟ್ಟಿದೆ.

ಹಾರು ಹಾರು : ಸರಳವಾದರೂ ವಿಭಿನ್ನವಾದ ಈ ಹಾಡಿಗೆ ಸ್ವೀಕಾರ್ ಹಾಗೂ ಚೈತ್ರ ಧ್ವನಿಗೂಡಿಸಿದ್ದಾರೆ. ಕವಿರಾಜ್ ರ ಸಾಹಿತ್ಯ ಅಗತ್ಯಕ್ಕೆ ತಕ್ಕಂತಿದೆ. ಮಣಿಶರ್ಮರ ವಾದ್ಯ ಸಂಯೋಜನೆಯಲ್ಲಿ ಹೊಸತೇನಿಲ್ಲ.

ಭೋಲೊ ಭಂ : ಡಾ.ನಾಗೆಂದ್ರ ಪ್ರಸಾದರ ಸಾಹಿತ್ಯವಿರುವ ಗೀತೆಗಲಲ್ಲಿ ಕೇಳ ಸಿಗುವ ಲವಲವಿಕೆ, ತುಂಟತನಗಳಿರುವ ಮತ್ತೊಂದು ಯುಗಳ ಗೀತೆ. ಕಾರ್ಥಿಕ್ ಹಾಗೂ ಶ್ರವನ್ ಭಾರ್ಗವಿ ಲವಲವಿಕೆಯಿಂದಲೇ ಹಾಡಿದ್ದಾರೆ. ಹಾಡಿನ ಧಾಟಿ ಹಾಗೂ ವೇಗಕ್ಕೆ ತೆಲುಗು ಗೀತೆಗಳ ಗುಣವಿದೆ. ಪುನೀತ್ ನೃತ್ಯವನ್ನು ಈ ಹಾಡಿನ ಮೂಲಕ ಕಣ್ಣು ತುಂಬಿಕೊಳ್ಳಬೇಕು ಎಂಬ ಭರವಸೆ ಹಾಗೂ ಆಸೆಯನ್ನು ಮೂಡಿಸುವ ಗೀತೆ.

-ಪ್ರಶಾಂತ್ ಇಗ್ನೇಷಿಯಸ್

Wednesday, 25 December 2013

ಕ್ರಿಸ್ಮಸ್

ಡಿಸೆಂಬರ್ ತಿಂಗಳು ಬರುತ್ತಿದ್ದಂತೆ ವರ್ಶಪೂರ್ತಿ ಮನೆಯ ಮೂಲೆಯಲ್ಲಿ ಮುದುಡಿಕೊಂಡಿದ್ದ ಕಂಬಳಿಗಳು ಅರಳಿಕೊಳ್ಳುತ್ತವೆ. ಚುಮು ಚುಮು  ಚಳಿಯ ಜೊತೆಯಲ್ಲೇ ಅನೇಕ ಬೆಚ್ಚನೆಯ ನೆನಪುಗಳೂ ಗರಿಗೆದರುತ್ತವೆ. ಈ ನೆನಪುಗಳಲ್ಲಿ ಕ್ರಿಸ್ ಮಸ್ ಹಬ್ಬದೂ ದೊಡ್ಡ ಪಾತ್ರವೇ. ದೂರದಲೆಲ್ಲೋ ಕೇಳಿ ಬರುವ ಕ್ರಿಸ್ ಮಸ್ ನ ಕ್ಯಾರೋಲ್ ಹಾಡು, ಗಿಜಿ ಗಿಜಿ ರಸ್ತೆಯ ಆಚೆಗೆ ದೀಪಗಳಿಂದ ಕಂಗೊಳಿಸುವ ಯಾವುದೋ ಚರ್ಚ್, ಸ್ವಲ್ಪ ಇಣುಕಿ ನೋಡಿದರೆ ಒಳಗೆ ಕಾಣ ಸಿಗುವ ಅಲಂಕೃತ ಗೋದಲಿ, ಎತ್ತರದಲ್ಲಿ ಕಟ್ಟಿರುವ ತಾರೆ, ಅಂಗಡಿಗಳಲ್ಲಿ ತೂಗಿ ಹಾಕಿರುವ ಬಣ್ಣ ಬಣ್ಣದ ಅಲಂಕಾರದ ವಸ್ತುಗಳು, ಮಳಿಗೆಗಳ ಬಾಗಿಲಲ್ಲಿ ಸ್ವಾಗತ ಮಾಡುತ್ತಿರುವ ಬಿಳಿಯ ಗಡ್ಡಧಾರಿ ಕ್ರಿಸ್ ಮಸ್ ತಾತ,  ಇವೆಲ್ಲವೂ ಡಿಸೆಂಬರ ಚಳಿಗೆ ತಳಕುಗೊಂಡ ದೃಶ್ಯಗಳು. ಹಾಗೆ ನೋಡಿದರೆ ಇಡೀ ವಿಶ್ವದಲ್ಲಿ ವಿಶಿಶ್ಟ ರೀತಿಯಲ್ಲಿ ಅಚರಿಸಲಾಗುವ ಕ್ರಿಸ್ಮಸ್ ಸಮಯದಲ್ಲಿ ಒಂದು ಮಾಯಲೋಕವೇ ಸ್ರುಶ್ಟಿಯಾದಂತೆ ಕಾಣಿಸುತ್ತದೆ.ಇತ್ತೀಚೆಗಂತೂ ಆಡಂಬರದ ಪಾಶ್ಚಾತ್ಯ ಶೈಲಿಯೇ ವಿಶ್ವದ ಎಲ್ಲೆಡೆ ಹಬ್ಬುತ್ತಿದೆ. ವ್ಯಾಪಾರೀಕರಣದ ಕದಂಬ ಬಾಹುಗಳು ಕ್ರಿಸ್ಮಸ್ ನ ಆಚರಣೆಯ ಸುತ್ತ ಹಬ್ಬಿಕೊಳ್ಳುತ್ತಿದ್ದರೂ, ಕ್ರಿಸ್ಮಸ್ ನ ನಿಜವಾದ ಆಚರಣೆಗಳು ಬಹಳ ಅರ್ಥಗರ್ಭಿತ. ಕ್ರಿಸ್ಮಸ್ ಸಮಯದಲ್ಲಿ ನೋಡಲು ಸಿಗುವ ಗೋದಲಿ, ನಕ್ಷತ್ರ, ಸ್ಯಾಂಟ ಕ್ಲಾಸ್, ದೇವ ದೂತರುಗಳು ಎಲ್ಲಕ್ಕೂ ತನ್ನದೇ ಅರ್ಥವಿದೆ. 

ಕ್ರಿಸ್ಮಸ್ ನ ಹಿನ್ನಲೆಯನ್ನು ತಿಳಿಯಲು ಬೈಬಲ್ ನಲ್ಲಿ ಯೇಸು ಕ್ರಿಸ್ತನ ಜನನದ ಸುತ್ತ ನಡೆಯುವ ಘಟನೆಗಳತ್ತ ಕಣ್ಣಾಡಿಸಿದರೆ, ಅದೊಂದು ಮನಮೋಹಕವಾದ ದ್ರುಶ್ಯ ಕಾವ್ಯದಂತೆ ಕಾಣಿಸುತ್ತದೆ. ದ್ವೇಶ, ಅಶಾಂತಿ, ದೌರ್ಜನ್ಯ, ಅಸಮತೆಯಿಂದ ಬಳಲುತ್ತಿದ್ದ ಜಗತ್ತಿಗೆ ದೇವರು ಯೇಸುವಿನ ರೂಪದಲ್ಲಿ ತಮ್ಮ ಮಗನನ್ನೇ ಕಳುಹಿಸುತ್ತಾರೆ ಎಂಬುದು ತಿರುಳಾದರೂ ದೇವರ ಪುತ್ರ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಒಂದು ದನಗಳು ವಾಸಿಸುವ ಗೋದಲಿಯಲ್ಲಿ ಜನಿಸಿದ ಎಂಬುದು ದೀನತೆಯ ಪ್ರತೀಕವಾಗಿದೆ. ಇದೇ ದೀನತೆ, ಕ್ಷಮೆ, ಸಹನೆಯ ಸಂದೇಶವನ್ನು ಯೇಸು ಮುಂದೆ ಬೋದಿಸಿದರು ಎಂಬುದಕ್ಕೆ ಈ ಗೋದಲಿ ಮುನ್ನುಡಿಯಾಗುತ್ತದೆ. ಅಂತೆಯೇ ಜನರನ್ನು ರಕ್ಷಿಸುವ ಉದ್ಧಾರಕ ಬಂದಾಗ ಪೂರ್ವ ದಿಕ್ಕಿನಲ್ಲಿ ತಾರೆಯೊಂದು ಕಾಣಿಸುತ್ತದೆ ಎಂಬ ಪ್ರವಾದನೆ ಯೇಸು ಹುಟ್ಟಿದ್ದಾಗ ನಿಜವಾಗುತ್ತದೆ. ಪ್ರಜ್ವಲವಾಗಿ ಹೊಳೆಯುತ್ತಿದ್ದ ಆ ತಾರೆಯೇ ಜನರಿಗೆ ಯೇಸು ಹುಟ್ಟಿದ ಸಂದೇಶವನ್ನು ಸಾರಿದ್ದಲ್ಲದೆ, ಗೋದಲಿಗೆ ದಾರಿಯನ್ನೂ ತೋರಿಸಿತು ಎನ್ನುತ್ತದೆ ಬೈಬಲ್. ಇದೇ ಸಂಕೇತವಾಗಿ ಇಂದಿಗೂ ಕ್ರಿಸ್ಮಸ್ ಸಮಯದಲ್ಲಿ ಬಣ್ಣ ಬಣ್ಣದ ತಾರೆಗಳು ಕ್ರೈಸ್ತರ ಮನೆಗಳ ಮೇಲೆ ರಾರಾಜಿಸುತ್ತವೆ. ಯೇಸು ಹುಟ್ಟಿದ ಸಂತೋಷದ ವಾರ್ತೆಯನ್ನು ಆ ಸಮಯದಲ್ಲಿ ದೇವ ದೂತರುಗಳು ಆಕಾಶದಲ್ಲಿ ಹಾಡುಗಳ ಮೂಲಕ ಎಲ್ಲೆಡೆ ಸಾರಿದರರು ಎನ್ನುವುದರ ಸಂಕೇತವಾಗಿ ಮನೆ ಮನೆಗೆ ಹೋಗಿ ಕ್ರಿಸ್ಮಸ್ ಹಾಡುಗಳನ್ನು ಹಾಡುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಇಷ್ಟೆಲ್ಲದರ ನಡುವೆಯೇ ಜೀವನದುದ್ದಕ್ಕೂ ಶಾಂತಿ, ಪ್ರೀತಿ, ಸಹನೆ, ಕ್ಷಮೆಯ ಸಂದೇಶವನ್ನು ತನ್ನ ನಡೆ ನುಡಿಯಿಂದ ಬೋಧಿಸಿದ ಯೇಸು ಕ್ರಿಸ್ತನನ್ನು ಕಂದನಾಗಿ, ಮನೆಯ ಮಗುವಾಗಿ, ಅನಂದ ತರುವ ಬಂದುವಾಗಿ, ಕತ್ತಲನನ್ನು ಹೋಗಲಾಡಿಸುವ ದಿವ್ಯ ಬೆಳಕ್ಕಾಗಿ ನೆನಪಿಸಿಕೊಳ್ಳುವ ಸುಸಮಯ ಈ ಕ್ರಿಸ್ಮಸ್.

ಇನ್ನೂ ಸ್ಯಾಂಟ ಕ್ಲಾಸ್ ದೇ ಮತ್ತೊಂದು ಕಥೆ. 4ನೇ ಶತಮಾನದಲ್ಲಿ ಈಗಿನ ಟರ್ಕಿ ದೇಶದಲ್ಲಿದ್ದ ನಿಕೋಲೇಸ್ ಎಂಬ ವ್ಯಕ್ತಿಗೆ ಬಡವರನ್ನು ಕಂಡರೆ ಬಹಳ ಪ್ರೀತಿ. ಬಡವರಿಗೆ ಉಡುಗೊರೆಗಳನ್ನು ಕೊಡುವುದು ಅವರಿಗೆ ಇಷ್ಟವಾದ ಕೆಲಸ. ಅದನ್ನು ಯಾರಿಗೂ ಗೊತ್ತಾಗದ ಹಾಗೆ ಮಾಡುತ್ತಿದ್ದದ್ದು ಅವರ ವಿಶೇಶತೆ. ಬಡವನ ಮನೆಯ ಹೊರಗಿನ ಪಾದರಕ್ಷೆಗಳಲ್ಲಿ ನಾಣ್ಯವನ್ನು ಇಡುವುದು, ಹೊಗೆ ಗೂಡಿನಿಂದ ಉಡುಗೊರೆಗಳನ್ನು ಚೆಲ್ಲುವುದು, ಈ ರೀತಿಯಾಗಿ ಗೌಪ್ಯವಾಗಿ ಮಾಡುತ್ತಿದ್ದ ನಿಕೋಲೇಸ್ ಮಾಡುತ್ತಿದ ಸಹಾಯವನ್ನು ಅವರು ಸತ್ತ ಮೇಲೂ ಅವರ ಅಭಿಮಾನಿಗಳು ಮುಂದುವರಿಸಿಕೊಂಡು ಬಂದರು ಎನ್ನುತ್ತದೆ ಮಾಹಿತಿಗಳು. 19ನೇ ಶತಮಾನದಲ್ಲಿ ಅಮೇರಿಕಾದ ಕಲಾವಿದನೊಬ್ಬ ಈ ಸ್ಯಾಂಟ ಎಂಬ ಕಲ್ಪನೆಗೆ ಈಗಿರುವ ರೂಪ ಕೊಟ್ಟ ಫಲವಾಗಿ ಈಗ ಕೆಂಪು ಬಣ್ಣದ ಸ್ಯಾಂಟ ನ ರೂಪ ಜನಪ್ರಿಯವಾಗಿದೆ. ಇಂತಹ ಮಾನವೀಯ ಗುಣದ ಸ್ಯಾಂಟವನ್ನು ಇಂದಿನ ವ್ಯಾಪಾರಿ ಜಗತ್ತು ಒಬ್ಬ ಮಾರಾಟ ವ್ಯಕ್ತಿಯಾಗಿ ಬಳಸಿಕೊಳ್ಳುತ್ತಿರುವುದು ದು:ಖಕರವಾದರೂ ಮಕ್ಕಳ ಮನಸ್ಸಿನಲ್ಲಿ ಸ್ಯಾಂಟ ವ್ಯಾಪಾರವನ್ನು ಮೀರಿದ ಮುದ್ದಿನ ತಾತನೇ.

ಎಲ್ಲಾ ಸಂಸ್ಕ್ರುತಿ, ದೇಶ, ಭಾಷೆಗಳೂ ತಮ್ಮದೇ ಆದ ರೀತಿಯಲ್ಲಿ ಕ್ರೈಸ್ತ ಧರ್ಮ ಹಾಗೂ ಕ್ರಿಸ್ಮಸ್ ಅನ್ನು ಆಚರಿಸುವಂತೆ ನಮ್ಮ ಕರ್ನಾಟಕದ ಕ್ರೈಸ್ತರೂ ತಮ್ಮದೇ ಆದ ಸ್ಥಳೀಯ ಆಚಾರ ವಿಚಾರದೂಂದಿಗೆ ಕ್ರಿಸ್ಮಸ್ ಆಚರಿಸುತ್ತಾರೆ. ಕನ್ನಡದ ಕ್ರಿಸ್ಮಸ್ ಗೀತೆಗಳಲ್ಲಿ ಕನ್ನಡದ ಜಾನಪದ ಮಿಳಿತವಾಗಿರುವ ಪರಿಯನ್ನು ಕೇಳಿಯೇ ಆನಂದಿಸಬೇಕು. ಚರ್ಚುಗಳಲ್ಲಿನ ಕನ್ನಡದ ಪ್ರಾರ್ಥನೆಗಳಲ್ಲಿ ನಾಡು ಹಾಗೂ ನಾಡಿನ ಜನರಿಗಾಗಿ ಪ್ರಾರ್ಥನೆ ಎಂದಿಗೂ ಮೀಸಲು.  ಕ್ರೈಸ್ತರ ಮನೆಗಳಲ್ಲಿ ಮಾಡಲಾಗುವ ಕ್ರಿಸ್ಮಸ್ ತಿಂಡಿಗಳಲ್ಲಿ ರವೆ ಉಂಡೆ, ಚಕ್ಕಲಿ, ಖರ್ಜಿಕಾಯಿ,ಮುರುಕು, ಕಜ್ಜಾಯಗಳದ್ದೇ ಕಾರುಬಾರು. ಇದರ ಜೊತೆ ಕೇಕ್, ಕಲಕಲ, ರೋಸ್ ಕುಕ್ ನದೂ ಪಾಲುಗಾರಿಕೆ. ಮನೆಗಳಲ್ಲಿ ಅಲಂಕಾರಗೊಳ್ಳುವ ಗೋದಲಿಯಲ್ಲಿ ದಸರಾ ಬೊಂಬೆಗಳ ರೀತಿಯದೇ ಮೆರಗು. ಮನೆ ಮುಂದೆ ಅರಳುವ ರಂಗೋಲಿಯಲ್ಲಿ ’ಹ್ಯಾಪಿ ಕ್ರಿಸ್ಮಸ್’ ಎಂಬ ಹಾರೈಕೆ. ಮನೆಗಳಿಗೆ ತಿಂಡಿ ತಿನ್ನಲು ಬರುವ ಅಕ್ಕ ಪಕ್ಕದ ಮನೆಯ ಮಕ್ಕಳ ಕಲರವಕ್ಕೆ ಜಾತಿ ಮತಗಳ ಹಂಗಿಲ್ಲ.

ಹೀಗೆ ಇಡೀ ವಿಶ್ವವೇ ಜಾತಿ ಮತಗಳ ಬೇಧವಿಲ್ಲದೆ ಆಚರಿಸುವ ಕ್ರಿಸ್ಮಸ್ ನ ಹಬ್ಬದ ತಿರುಳಿರುವುದು ಶಾಂತಿ ಪ್ರೀತಿ ಹಾಗೂ ದೀನತೆಯ ಸಂದೇಶದಲ್ಲೇ. ಇದೇ ಶಾಂತಿ ಪ್ರೀತಿ ಸಹನೆ ದೀನತೆ  ನಮ್ಮ ಪ್ರತಿ ದಿನವನ್ನೂ ಹಬ್ಬವಾಗಿ ಮಾರ್ಪಡಿಸಲಿ, ಯೇಸುವಿನ ಸಂದೇಶಗಳು ನಮ್ಮ ಮನಸ್ಸೆಂಬ ಗೋದಲಿಯಲ್ಲಿ ಸದಾ ನೆಲೆಗೊಳ್ಳಲ್ಲಿ ಎನ್ನುವುದರಲ್ಲಿದೆ ಕ್ರಿಸ್ಮಸ್ ನ ಸಾರ್ಥಕತೆ.

-ಪ್ರಶಾಂತ್ ಇಗ್ನೇಷಿಯಸ್

Monday, 16 December 2013

ಆಡಿಯೋ ಅನಿಸಿಕೆ : ಶ್ರಾವಣಿ ಸುಬ್ರಮಣ್ಯ

ಮಳೆ ನಿಂತರೂ ಹನಿ ಜಾರಿಯಲ್ಲಿರುವಂತೆ ಗಣೇಶ್ ಚಿತ್ರವೆಂದ ಮೇಲೆ ಮುಂಗಾರು ಮಳೆಯ ಹಾಡುಗಳ ನೆನಪಿಗೆ ಕೊನೆಯಿಲ್ಲ. ಅದರಿಂದಲೇ ಸಹಜವಾಗಿ ಗಣೇಶ್ ಚಿತ್ರಗಳ ಹಾಡುಗಳ ಬಗ್ಗೆ ಒಂದು ಕುತೂಹಲ ಜಾರಿಯಲ್ಲಿ ಇದ್ದೇ ಇರುತ್ತದೆ. ಅದೇ ಕುತೂಹಲದಿಂದ ಹರಿಕೃಷ್ಣ ಸಂಗೀತ ನಿರ್ದೇಶನದ, ಮಂಜು ಸ್ವ್ರರಾಜ್ ರ ಶ್ರಾವಣಿ ಸುಬ್ರಮಣ್ಯ ಚಿತ್ರದ ಹಾಡುಗಳನ್ನು ಕೇಳಿದಾಗ ನಿರಾಸೆ ಆಗವುದಿಲ್ಲ.  ಆದರೂ ಹರಿ ಸಂಗೀತ ನಿರ್ದೇಶನದ ಹಾಡುಗಳಲ್ಲಿನ ಲವಲವಿಕೆ ಹಾಗೂ ಹೊಸತನ ಇಲ್ಲಿ ಸ್ವಲ್ಪ ಮಟ್ಟಿಗೆ ಕಾಣೆಯಾಗಿದೆ ಎಂದೇ ಹೇಳಬಹುದು.  ಇತ್ತೀಚಿನ ಚಿತ್ರಗಳಲ್ಲಿನ ಸಿದ್ಧ ಸೂತ್ರದಲ್ಲೇ ಹಾಡುಗಳು ಮೂಡಿ ಬಂದಿದೆ ಎಂದರೆ ತಪ್ಪಾಗಲಾರದು. ಹಾಗಾದರೆ ಹೇಗಿದೆ ಹಾಡುಗಳು? 

ಅಕ್ಕಲ್ ಬೆಣ್ಣೆ : ಕೃಷ್ಣೇ ಗೌಡರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಈ ಹಾಡು ಮಾಸ್ ಪ್ರೇಕ್ಷಕರಿಗಾಗಿಯೇ ಸಿದ್ಧವಾದಂತಿದ್ದೆ. ಹರಿ ಉತ್ತಮವಾಗಿ ಸಂಗೀತ ನೀಡಿರುವ ಈ ಗೀತೆ ಕುಣಿತಕ್ಕೆ ಹೇಳಿ ಮಾಡಿಸಿದಂತಿದೆ. ಬಹಳ ದಿನಗಳ ನಂತರ ಹಾಡಿರುವ ಮಂಜುಳ ಗುರುರಾಜ್ ತಮ್ಮ ಹಿಂದಿನ ಗತ್ತನ್ನು ಉಳಿಸಿಕೊಂಡಿದ್ದಾರೆ. ಅವರ ಧ್ವನಿ ಹಾಗೂ ಹಾಡಿನಲ್ಲಿ  ನುಸುಳಿರುವ ಒಳಗೆ ’ಸೇರಿದರೆ ಗುಂಡು’ ಎಂಬ ಸಾಲುಗಳು ಹಳೆಯ ’ಗುಂಡಿನ’ ಹಾಡನ್ನೂ ಸೇರಿದಂತೆ 90ರ ದಶಕದ ಹಾಡುಗಳನ್ನು ನೆನಪಿಸುತ್ತದೆ. 

ನಿನ್ನ ನೋಡೋ : ಕನ್ನಡ ಸಿನಿಮಾ ಸಂಗೀತದಲ್ಲಿ made for each other ಎಂಬಂತೆ ಆಗಿ ಹೋಗಿರುವ ಸೋನು, ಹರಿ, ಗಣೇಶ್ ರ ಕಾಂಬಿನೇಶನಿನ್ನ ಮತ್ತೊಂದು ಗೀತೆ. ಕವಿರಾಜರ ಸಾಹಿತ್ಯವಿರುವ ಗೀತೆ ಕೇಳಲು ಮಧುರವಾಗಿದೆ ಎಂಬುದಕ್ಕಿಂತ ಹೆಚ್ಚೇನು ಹೇಳಲು ಸಾಧ್ಯವಿಲ್ಲವೇನೋ. ಈ ರೀತಿಯ ಹಾಡುಗಳಲ್ಲಿ ಪಳಗಿ ಹೋಗಿರುವ ಸೋನು ಹೆಚ್ಚಿನ ಶ್ರಮವಿಲ್ಲದೆ ಹಾಡಿದ್ದಾರೆ.

ನಗುವ ಮೊಗವ : ಹರಿಕೃಷ್ಣರ ಗೀತೆಗಳಲ್ಲಿನ ಜೀವಂತಿಕೆ ಈ ಗೀತೆಯಲ್ಲಿ ಕಾಣುತ್ತದೆ. ಕವಿರಾಜ್ ರ ಸಾಹಿತ್ಯಕ್ಕೆ ಧ್ವನಿಗೂಡಿಸಿರುವ ಸೋನು ಹಾಗೂ ನಂದಿತಾ ಹಾಡಿಗೆ ಮತ್ತಷ್ಟು ಜೀವ ತುಂಬಿದ್ದಾರೆ. ಉತ್ತಮವಾದ ವಾದ್ಯ ಸಂಯೋಜನೆ ಹಾಗೂ ಉತ್ತಮ ಗಾಯನವಿರುವ ಈ ಹಾಡನ್ನು ಕೇಳುತ್ತಿದ್ದರೆ ಎಲ್ಲೋ ಮೊದಲೇ ಕೇಳಿದಂತೆ ಅನಿಸಿದರೂ ಎಲ್ಲಿ ಎಂದು ತಟ್ಟನೆ ಗೊತ್ತಾಗದಿರುವುದೇ ಈ ಹಾಡಿನ ಹೆಗ್ಗಳಿಕೆ.

ಕಣ್ಣಲ್ಲೇ ಕಣ್ಣಿಟ್ಟು : ನಾಯಕ ನಾಯಕಿಯ ಪ್ರೇಮದ ಪರಿಯನ್ನು ವಿವರಿಸುವ ಹಾಡಿಗೆ ಶಾನ್ ಕಂಠವನ್ನು ಉತ್ತಮವಾಗಿ ಬಳಸಿಕೊಳ್ಳಲಾಗಿದೆ. ಡಾ.ನಾಗೆಂದ್ರ ಪ್ರಸಾದ್ ರಿಗೆ ಈ ರೀತಿಯ ಹಾಡಿನ ಸಾಹಿತ್ಯ ಕರತಲಾಮಲಕ. ಯುವಕ ಯುವತಿಯರಿಗೆ ಹೆಚ್ಚು ಪ್ರಿಯವಾಗಬಹುದಾದ ಗೀತೆ. ಚಿತ್ರದ ಕತೆಗೆ ಪೂರವಾಗಿರುವಂತಿದೆ ಈ ಹಾಡು.

-ಪ್ರಶಾಂತ್ ಇಗ್ನೇಷಿಯಸ್

Saturday, 30 November 2013

ರಕ್ಕಸ ರಸ್ತೆಗಳು

ಸ್ತೆಗಳು ನಗರಗಳ ನರನಾಡಿಯಾಗಿರುತ್ತವೆ ಎಂದು ನಂಬಿದ್ದೇವೆ. ಉತ್ತಮ ರಸ್ತೆಗಳು ಅಭಿವೃದ್ಧಿಯ ಅಳೆತೆಗೋಲು. ರಸ್ತೆಗಳ ನಿರ್ವಹಣೆಯಲ್ಲಿ ಸ್ಥಳಿಯ ಸಂಸ್ಥೆಗಳು ಹೆಚ್ಚು ಕಾರ್ಯೊನ್ಮುಖವಾಗಿರಬೇಕು. ಅದರಲ್ಲೂ ದಿನೇ ದಿನೇ ತನ್ನ ಒಡಲನ್ನು ಉಬ್ಬಿಸಿಕೊಳ್ಳೂತ್ತಿರುವ ಬೆಂಗಳೂರು ಒಂದು ಕೋಟಿ ಜನಸಂಖ್ಯೆಯನ್ನು, ೪೫ ಲಕ್ಷ ವಾಹನಗಳನ್ನು ತನ್ನ ಉದರದಲ್ಲಿಟ್ಟುಕೊಂಡು ತೂಕಹೆಚ್ಚಿಸಿಕೊಳ್ಳುತಿದೆ. ಎನಿಲ್ಲವೆಂದರೂ ಪ್ರತಿದಿನ ೭೦೦ ಹೊಸ ವಾಹನಗಳ ನೊಂದಣಿಯಾಗುತಿದೆಯಂತೆ. ವ್ಯಕ್ತಿ ಮತ್ತು ವಾಹನಗಳ ಅನುಪಾತ ಗಮನಿಸಿದರೆ ಪ್ರತಿ ಇಬ್ಬರಿಗೆ ಒಂದು ವಾಹನ. ಅದು ದೆಹಲಿಯಲ್ಲಿ : ರಂತಿದೆ. ಬೆಂಗಳೂರಿನ ವಾಹನಗಳು ದೆಹಲಿಗಿಂತ ಎರಡುಪಟ್ಟು ವೇಗವಾಗಿ ರಸ್ತೆಯನ್ನು ಅಕ್ರಮಿಸಿಕೊಳ್ಳುತ್ತಿರುವುದ್ದನ್ನು ಇಲ್ಲಿ ಗಮನಿಸಬಹುದು. ಇಂತಹ ಸಂದರ್ಭದಲ್ಲಿ ರಸ್ತೆಗಳ ನಿರ್ವಹಣೆಗೆಂದೆ ಪ್ರತ್ಯೇಕ ಕಾರ್ಪರೇಶನ್ ಬೇಕಾದೀತು. ಅಂತಹುದರಲಿ ಇರುವ ಏಕೈಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅನ್ನೋ ನೀರಾನೆ  ಬಿದ್ದಲ್ಲೆ ಬೃಹದಾಕಾರವಾಗಿ ಗೊರಕೆ ಹೊಡೆದುಕೊಂಡು ಬಿದ್ದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ರಸ್ತೆಗಳಿಗೆ ಯಾವ ಸಂಸ್ಕಾರ, ಹಬ್ಬ ಹರಿದಿನಗಳು ಆಗಿಲ್ಲ. ಹೊಸ ಬಟ್ಟೆಗಳಿರಲಿ, ಹರಿದ ಹಳೆಬಟ್ಟೆಗೆ ತ್ಯಾಪೆ ಹಾಕುವ ಕೆಲಸವು ನಡೆಯಲಿಲ್ಲ. ಅಗಿದ್ದ ಸಣ್ಣ ಪುಟ್ಟ ಗಾಯಗಳು ಕೊಳೆತು ಕುಷ್ಟರೋಗಿಯಂತಾಗಿವೆ. ನೋಡಲಂತೂ ಇನ್ನಿಲದ ಹೇಸಿಗೆ ವಕ್ಕರಿಸಿ ಬರುತ್ತದೆ. ಮೊದಲೆ ಬೆಂಗಳೂರಿಗೆ ಟ್ರಾಫಿಕ್ ಜಾಮ್ ನಂತಹ ಉಬ್ಬಸ ರೋಗವಿದೆ. ಸಾಗದ ರಸ್ತೆಯಲ್ಲಿ ವಾಹನಗಳನ್ನು ಜಗ್ಗಿಸಿ ಜಗ್ಗಿಸಿ ತಳ್ಳುತ್ತಿರಬೇಕು. ರಸ್ತೆಗಳು ರಕ್ಕಸನ ಹಲ್ಲುಗಳಂತೆ ಜಲ್ಲಿಕಲ್ಲುಗಳನ್ನು ಹೊರಚಾಚಿ ಅರಚುತ್ತಿದ್ದರೆ ಪ್ರಯಾಣ ಅಸಹನೀಯ.
ಓಪನ್ ಗಂಗ್ನಂ ಸ್ಟೈಲ್ ಹಾಡು ಕೇಳಿರಬೇಕಲ್ಲವೇ?.. ಪ್ರಪಂಚದಾದ್ಯಂತ ಹಾಡು ಸೃಷ್ಟಿಸಿದ ಹುಚ್ಚು ಹೇಳತೀರದು. ದಕ್ಷಿಣ ಕೊರಿಯದ ಒಬ್ಬ ಪಾಪ್ ಸಂಗಿತಗಾರ ರಚಿಸಿ ಹಾಡಿದ ಕೊರಿಯನ್ ಗೀತೆಗೆ ಆತನೆ ನೃತ್ಯ ಮಾಡಿದ್ದಾನೆ, ಒಂದು ವಿಚಿತ್ರ ಭಂಗಿಯ ನೃತ್ಯವಿದು. ಗಂಗ್ನಂ ಹಾಡಿಗೆ ಹಾಕಿದ ಹೆಜ್ಜೆಗಳು ಎಬ್ಬಿಸಿದ ಧೂಳು ಇಡಿ ಪ್ರಪಂಚವನ್ನೆ ಆವರಿಸಿತು. ಅಚ್ಚರಿಯೆಂದರೆ ಒಬ್ಬ ಸಾಮಾನ್ಯನು ಕುಣಿದುಬಿಡಬಲ್ಲ ಕುಣಿತಕ್ಕೆ ಸಿಕ್ಕ ಮಾನ್ಯತೆ ಉಬ್ಬೆರಿಸುವಂತಹದ್ದೆ!. ಗಂಗ್ನಂ ಸ್ಟೈಲ್ ಹೆಸರಿನಿಂದಲೆ ನೃತ್ಯ ಜಗತಿನಾದ್ಯಂತ ಸದ್ದು ಮಾಡಿತು. ಆ ನೃತ್ಯ ಹೇಗಿದೆ ಎಂದರೆ, ಬೆಂಗಳೂರಿನ ಅದಗೆಟ್ಟ ರಸ್ತೆಗಳಲ್ಲಿ ಓಡಾಡುವ ಬಸ್ಸು, ಆಟೊಗಳಲ್ಲಿ ಕುಳಿತವರು ಕುಳಿತಲ್ಲೆ  ಕುಲುಕುವಂತಿದೆ ಗಂಗ್ನಂ ಸ್ಟೈಲ್.
ಇತ್ತಿಚಿನಲ್ಲಾದ ಮಳೆಗೆ ತತ್ತರಿಸಿ ಹೋಗಿವೆ ನಮ್ಮ ರಸ್ತೆಗಳು. ಮೊದಲೆ ಅದಗೆಟ್ಟಿದ್ದ ರಸ್ತೆಗಳು ಮಳೆಯಿಂದ ಹಳ್ಳಕೊಳ್ಳದಂತಾಗಿವೆ. ಆನೇಕ ಕಡೆ ಕೇದರನಾಥನ ಕಾಶಿಯಲ್ಲಾದ್ದಂತೆ ಕಲ್ಲು ಮರಳಿನ ರಾಶಿ. ರಸ್ತೆಯ ಮೇಲೆ ಓಡಾಡುವ ಬೆಂಗಳೂರಿಗರು ಬೆಂಡಾಗಿ ಹೋಗಿದ್ದಾರೆ. ಆನೇಕ ಬಾರಿ ವಾಹನಗಳಲ್ಲಿ ಪ್ರಯಣಿಸುವುದಕ್ಕಿಂತ ನಡೆದುಕೊಂಡೆ ಹೋಗೊಣ ಎಂದೆಣಿಸುವುದುಂಟು. ಆದರೆ ನಡೆಯುವವನ ಪಡಿಪಾಟಿಲು ಅದಕ್ಕಿಂತ ಭಿನ್ನವಾಗಿಯೇನು ಇಲ್ಲ. ಸಾರ್ವಜನಿಕವಾಗಿ ಉಳಿದಿರುವ ಏಕೈಕ ಆಸ್ತಿ ಪಾದಚಾರಿ ರಸ್ತೆಗಳು. ಅವು ಸಹ ಪಾನಿಪುರಿಯವನ, ಬೀಡಾ ಸ್ಟಾಲಿನ, ಗ್ಯಾರೆಜ್ ಗ್ರೀಸಿನ, ತರಕಾರಿ ಜಯಮ್ಮನ ಜಾಗವಾಗಿ ಬಿಟ್ಟಿದೆ. ಸಣ್ಣಪುಟ್ಟ ಅಂಗಡಿಗಳು ತನ್ನ ದುರಾಸೆಗೆ ನಾಲಿಗೆಯನ್ನು ಚಾಚಿ ರಸ್ತೆಗ್ಗೇ ಬಂದು ಕುಂತಿವೆ. ಹೀಗಾಗಿ ವಾಹನಗಳು, ಪಾದಚಾರಿಗಳು, ಒಟ್ಟೊಟ್ಟಿಗೆ ತೂರುವಂತಾಗಿದೆ. ಕೆಲವೆಡೆ  ಮಾನವನಿರ್ಮಿತ ಮುಗ್ಧ ದೇವರುಗಳು ಟ್ರಾಫಿಕ್ ಚೌಕಿ(ಐಲ್ಯಾಂಡ್)ನಂತೆ ರಸ್ತೆನಡುವಲ್ಲಿಯೆ ಚಕ್ಕಳಬಕ್ಕಳ ಹಾಕಿ ಕೂತುಬಿಟ್ಟಿದ್ದಾರೆ. ಅವರನ್ನು ಎಬ್ಬಿಸಿ ಕಳಿಸುವ ಧೈರ್ಯ ಮಾತ್ರ ಸರ್ಕಾರಕ್ಕೆ ಇಲ್ಲ
ಇಷ್ಟೆಲ್ಲ ದುಸ್ತರದ ನಡುವೆ, ಆಗಾಗ ಏರ್ಪಡುವ ವಿದೇಶ ಪ್ರವಾಸಗಳಿಂದಾಗಿ ಚೀನಾ, ಸಿಂಗಾಪು, ನ್ಯೂಯರ್ಕ್ ಸಿಟಿಗಳನ್ನು ಕಣ್ತುಂಬಿಕೊಂಡು ಬಂದು, ಅಲ್ಲಿನ ವ್ಯವಸ್ಥಿತ ಮೂಲಸೌಕರ್ಯಗಳಿಗೆ ಪ್ರಭಾವಿತರಾಗಿ ನಮ್ಮ ಪುರವನ್ನು ಸಿಂಗಾಪು, ಶಾಂಘೈ ಸಿಟಿಯನ್ನಾಗಿ ಮಾಡುತ್ತೇವೆ ಎಂದು ಅಬ್ಬರಿಸುವ ರಾಜಕಾರಣಿಗಳು, ಹೊಸದರಲ್ಲಿ ಕಿಸಿದು ಕಿಸಿದು ಒಗೆದ ಅಗಸನಂತೆ ಕಾಣುತ್ತಾನೆ. ಸಿಂಗಾಪು, ಚೀನಾವನ್ನು ಕಂಡುಬಂದ ಅವರೆಲ್ಲ ತಂತಮ್ಮ ಚೀಲ ತುಂಬಿಸಿಕೊಂಡು ಹೋದರೆ ಹೊರತು ಮತ್ತೆನು ಆಗಲಿಲ್ಲ. ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಲಿಕ್ಕೆ ಚೀನಾದಿಂದ ಮಣ್ಣುರಬೇಕು? ಶಾಂಘೈ ಇರಲಿ ಮೊದಲು ಇದ್ದ ರಸ್ತೆಗಳನ್ನು ಸರಿಮಾಡಿಕೊಡಿ  ಸಾಕು ಎನ್ನುತ್ತಿದ್ದಾರೆ ಹತಾಶ ಜನತೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನೆ ದೇವರು ಎಂದು ಪೂಜಿಸುವ ರಾಜಕಾರಣಿಗಳು ಚುನಾವಣ ಸಮಯದಲ್ಲಿ ಮಾತ್ರ ಒಂದಷ್ಟು ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಒಂದಷ್ಟು ರಸ್ತೆ ರಿಪೇರಿಯನ್ನು ಮಾಡಿಸುತಾರೆ. ದು ಬಿಟ್ಟರೆ ಮತ್ತದೆ ಚುಣಾವಣೆಯವರೆಗೂ ಉಣ್ಣಾದ ರಸ್ತೆಗಳ ಮೇಲೆ ಓಡಾಡಿ ಹಣ್ಣಾಗುವುದೆ ನಮ್ಮ ಗತಿ. ಕೆಲವೇ ದಿನಗಳ ಹಿಂದೆ ಕಸದ ಧೂರ್ತವಾಸನೆಯಿಂದಾಗಿ ನಮ್ಮ ಮಹಾನಗರದ ಉಸಿರು ಕಟ್ಟಿತ್ತು. ಕಸದ ವಿಲೇವಾರಿಯನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸದ ಬಿಬಿಎಂಪಿಗೆ ಕೊರ್ಟ್ ಚಿಮಾರಿಹಾಕಿದ್ದು ಇನ್ನು ಮಾಸಿಲ್ಲ. ಇದೀಗ ಮಳೆಯಿಂದ ರಸ್ತೆಗಳು ಪೊರೆ ಬಿಟ್ಟು ವಿಲಕ್ಷಣ ರೂಪ ಪಡೆದಿವೆ. ಅಲಲ್ಲಿ ಚರಂಡಿ ಕಾಲುವೆಗಳು ಪಾಟ್ ಹೊಲ್ ಗಳು ಒಡೆದುಹೋಗಿ ಕೆಟ್ಟನೀರು ಹೊರಹರಿಯುತಿದೆ. ಕುಡಿಯುವ ನೀರಿನ ನಿರ್ವಹಣೆಯು ಅಷ್ಟಕಷ್ಟೆ. ಹೀಗಿರುವಾಗ ಸರ್ಕಾರಕ್ಕೆ ದೊಡ್ಡಮಟ್ಟದ ಅದಾಯ ದಕ್ಕಿಸಿಕೊಡುತ್ತಿರುವ ಮಹಾನಗರಕ್ಕೆ ಅಗತ್ಯತೆಗನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಸ್ವಾಸ್ಥ್ಯ ನಮ್ಮ ಪ್ರತಿನಿಧಿಗಳಿಗಿಲ್ಲವಾಯಿತೆ?. ಇದು ಪಾಲಿಕೆಯ ಅದಕ್ಷತೆಯ ಪರಮಾವಧಿ ಎನಿಸುತ್ತಿಲ್ಲವೆ? ಹೌದೆನ್ನಿಸುವುದಾದರೆ ಕಾರ್ಯವೈಖರಿಯನ್ನು, ಅವರ ಬದ್ಧತೆಯನ್ನು ಪ್ರಶ್ನಿಸಬೇಕಾದುದು ಎಲ್ಲ ನಾಗರಿಕರ ಜವಾಬ್ಧಾರಿ.
ಚುಣಾವಣೆಯಲ್ಲಿ ಮತಹಾಕಿ ಆರಿಸಿ ಕಳುಹಿಸಿದರೆ ಜವಾಬ್ಧಾರಿ ಕಳೆಯುವುದಿಲ್ಲ. ನಮ್ಮ ಅಗತ್ಯತೆಗಳನ್ನು ಪಡೆದುಕೊಳುವ ಹಕ್ಕು ಸಹ ನಮ್ಮದೇ. ಪ್ರಜ್ನಾವಂತ ನಾಗರೀಕರು ಮನಸ್ಸಿನಲ್ಲೆ ಮಡುಗಟ್ಟಿದ ಅಸಹನೆಯನ್ನು ಹೊರಹಾಕಬೇಕಿದೆ. ಕನಿಷ್ಟ ಪಕ್ಷ ನಮ್ಮ ವಾಸಸ್ಥಳದ ಸುತ್ತಮುತ್ತ ಆಗಿರುವ ನ್ಯೂನತೆಯನ್ನು ಪಾಲಿಕೆ ಸಿಬ್ಬಂದಿಗಳಿಗೆ ಕರೆ ಮಾಡಿ ಮನವರಿಕೆ ಮಾಡಿಕೊಡಬೇಕಾಗಿದೆ. ಮೌನ ಮುರಿದು ಸಂಭಂದಪಟ್ಟ ಅಧಿಕಾರಿಗಳಿಗೆ ಅಥವ ವಾರ್ಡ್ ನ ಪ್ರತಿನಿಧಿಗೆ ತಿಳಿಸಬೇಕಾಗಿದೆ. ಒಂದೆರಡುಬಾರಿ ಸಾಲದು ಏಕೆಂದರೆ ಅದು ಅವರಿಗೆ ತಾಕದು. ಪದೇ ಪದೇ ಕರೆ ಮಾಡಿ ಒತ್ತಡ ಹೇರುವ ತಂತ್ರವಾಗಬೇಕು. ಇದೊಂದು ರೀತಿ ಒತ್ತಡ ಆಂದೋಲನವಾಗಲಿ. ಬಿಬಿಎಂಪಿಯ ಟೊಲ್ ಫ್ರೀ  ದೂರವಾಣಿ ಸಂಖ್ಯೆ 22660000 ನಿಮ್ಮ ಕಾಂಟ್ಯಾಟ್ ಪಟ್ಟಿಯಲ್ಲಿರಲಿ ಮತ್ತು ಆಗಾಗೆ ಕರೆಗಳು ಹೋಗುತ್ತಿರಲಿ. ನಿಮ್ಮ ನಿಮ್ಮ ಹಕ್ಕನ್ನು ಪಡೆಯುವುದು ನಿಮ್ಮ ಕರ್ತವ್ಯವೆಂದು ಭಾವಿಸಿರಿ.
  
-ಸಂತೋಷ್ ಇಗ್ನೇಷಿಯಸ್
 
 

Saturday, 16 November 2013

ಆಡಿಯೋ ಅನಿಸಿಕೆ : ಭಜರಂಗಿ

ಇಂದಿಗೂ ಗೆಳೆಯ ಚಿತ್ರದ ’ಈ ಸಂಜೆ ಯಾಕಾಗಿದೆ’ಯಾಗಲಿ ಬಿರುಗಾಳಿ ಚಿತ್ರದ ’ಮಧುರ ಪಿಸು ಮಾತಿಗೆ’ ಹಾಡು ಟಿ.ವಿಯಲ್ಲಿ ಬರುತ್ತಿದ್ದರೆ ಚ್ಯಾನಲ್ ಬದಲಸಲು ಮನಸಾಗುವುದಿಲ್ಲ. ಆ ಹಾಡುಗಳನ್ನುಹರ್ಷ ಚಿತ್ರಿಸಿರುವ ಗುಂಗಿನಿಂದ ಕನ್ನಡ ಪ್ರೇಕ್ಷಕ ಇನ್ನೂ ಹೊರಗೆ ಬಂದಿಲ್ಲ. ಅಂತಹ ಹರ್ಷರ ನಿರ್ದೇಶನದಲ್ಲಿ, ನೃತ್ಯ ಸಂಯೋಜನೆಯಲ್ಲಿ ಭಜರಂಗಿ ಬರುತ್ತಿದೆ.  ಇಂದಿಗೂ ಹೆಜ್ಜೆ ಹಾಕುವುದರಲ್ಲಿ, ಲವಲವಿಕೆಯಲ್ಲಿ ಒಂದು ಕೈ(ಕಾಲೂ) ಮುಂದೇ ಇರುವ ಶಿವಣ್ಣ, ಕಿಕ್ ಕೊಡುವ ಗೀತೆಗಳನ್ನು ನೀಡುತ್ತಾ ಸಂಗೀತ ಪ್ರೇಮಿಗಳನ್ನು ವಾಲಾಡಿಸುತ್ತಿರುವ ಅರ್ಜುನ ಜನ್ಯರ ಸಂಗೀತ, ಹರ್ಷರ ಸಾರಥ್ಯವಿರುವ ಚಿತ್ರ ಎಂದರೆ ಆ ಚಿತ್ರದ ಬಗ್ಗೆ ನಿರೀಕ್ಷೆ ಇಲ್ಲದೆ ಇರುತ್ತದೆಯೇ?  ’ಭಜರಂಗಿ’ ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ಕನ್ನಡದ ಅಗ್ರಗಣ್ಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗುವತ್ತ ನಿಧಾನವಾಗಿ ಹೆಜ್ಜೆ ಇಡುತ್ತಿದ್ದ ಅರ್ಜುನ ಜನ್ಯ, ಈ ಚಿತ್ರದಿಂದ ಆ ದಿಕ್ಕಿನೆಡೆ ಬಲವಾದ ಹೆಜ್ಜೆ ಇಟ್ಟಿದ್ದಾರೆ ಎಂದೆನಿಸುತ್ತದೆ. ಇತ್ತೀಚೆಗೆ ತಾನೇ ಬಿಡುಗಡೆಯಾದ ಹಾಡುಗಳು ಹೇಗಿವೆ ನೋಡೋಣವೇ?

ಬಾಸು ನಮ್ಮ ಬಾಸು : ಅರ್ಜುನ್ ಜನ್ಯ ಸ್ವತ: ತಾವೇ ಹಾಡಿರುವ ಈ ಗೀತೆ ಇಂದಿನ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣ ಬರುವ ನಾಯಕನ ಗುಣಗಾನದ ರೀತಿಯ ಗೀತೆ. ’ಇವ್ರು ಹೊಡೆದ್ಬುಟ್ರೆ ಒಂದೇಟು, ಬಿದ್ದಂಗೆ ಬುಲ್ಲೆಟ್ಟು, ಇವ್ರು ಸ್ಟೆಪ್ ಹಾಕಿದ್ ಮೇಲೇನೆ, ಹುಟ್ಟ್ ಕೊಂಡ್ತು ಎರೆಡೇಟು’ ಎಂಬಂತ ಸಾಲುಗಳು ಚೇತನ್ ಚಂದನ್ ಹಾಗೂ ಮೋಹನ್ ಸಾಹಿತ್ಯ ಒದಗಿಸಿರುವ ಈ ಹಾಡಿನ ತುಂಬ ದಂಡಿಯಾಗಿ ಸಿಗುತ್ತದೆ.ಅರ್ಜುನ್ ಜನ್ಯರ ಸಂಗೀತದಲ್ಲಿ ಲವಲವಿಕೆ ಇದ್ದೂ, ತೆರೆಯ ಮೇಲೆ ಅಭಿಮಾನಿಗಳಿಗೆ ಫುಲ್ ಮೀಲ್ಸ್ ನೀಡಬಹುದೆಂಬ ಭರವಸೆ ನೀಡುತ್ತದೆ. ಕೇಳಿದೊಡನೆ ಕೈ ಕಾಲುಗಳು ತಾವೇ ತಾಳ ಹಾಕುವ
ಹಾಡುಗಳ ಸಾಲಿಗೆ ಸೇರುವ ವೇಗದ ಧಾಟಿಯ ಹಾಡು.

ಜೈ ಭಜರಂಗಿ : ಹಾಡಿನ ಶೀರ್ಷಿಕೆ, ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ಶಂಕರ್ ಮಹಾದೇವನ್ ಕಂಠ ಎಂದು ಓದಿದೊಡನೆ ಒಬ್ಬ ಪಳಗಿದ ಚಿತ್ರ ಸಂಗೀತ ಕೇಳುಗನ ಮನದಲ್ಲಿ ಒಂದು ಹಾಡಿನ ಕಲ್ಪನೆ ಖಂಡಿತವಾಗಿಯೂ ಮೂಡುತ್ತದೆ. ಆ ಕಲ್ಪನೆಗೆ ಮೋಸವಾಗದಂತ ಗೀತೆ ಇದು. ಶಕ್ತಿಶಾಲಿ ಸಾಹಿತ್ಯಕ್ಕೆ ಅಷ್ಟೇ ಭಾವ ಪೂರ್ಣ ಹಾಗೂ ಸತ್ವ ಪೂರ್ಣ ಗಾಯನ ಒದಗಿ ಬಂದಿದೆ. ಜನ್ಯರ ಸಂಗೀತ ಸಂಯೋಜನೆ ಉತ್ತಮವಾಗಿದ್ದೂ ಹಿನ್ನಲೆಯಲ್ಲಿನ ಕೋರಸ್ ಸಹಾ ಮೆರಗು ತಂದಿದೆ. ಮುಂದಿನದನ್ನು ತೆರೆಯ ಮೇಲೆ ನೋಡಿ ಎಂಬ ಅಹ್ವಾನವನ್ನು ನೀಡುವಂತಿದೆ ಸಂಗೀತ.

ಶ್ರೀ ಕೃಷ್ಣ : ಇತ್ತೀಚಿನ ಚಿತ್ರಗಳಲ್ಲಿ ಒಂದು ಪರಿಪೂರ್ಣ ಭಕ್ತಿ ಗೀತೆ ಕೇಳಿ ತುಂಬಾ ಸಮಯವೇ ಆಗಿತ್ತು ಎಂಬ ಕೊರತೆಯನ್ನು ನೀಗಿಸುವಂತ ಗೀತೆ. ಇಂತಹ ಗೀತೆಗಳನ್ನು ಚಂದವಾಗಿ ಹಾಡುವ ಅನುರಾಧ ಭಟ್ಟರ ಕಂಠ ಸಿರಿಯಲ್ಲಿ ಮೂಡಿರುವ ಗೀತೆ ತನ್ನ ವಿಭಿನ್ನತೆಯಿಂದ ಇಷ್ಟವಾಗುತ್ತದೆ. ಅರ್ಜುನ್ ಜನ್ಯ ಈ ಗೀತೆಯ ಮೂಲಕ ಅಚ್ಚರಿ ಮೂಡಿಸುತ್ತಾರೆ. ನಾಗೇಂದ್ರ ಪ್ರಸಾದರಿಗೆ ಈ ರೀತಿಯ ಗೀತಾಸಾಹಿತ್ಯ ಕಷ್ಟವೇನಲ್ಲ. ಸಾಹಿತ್ಯ ನವಿರಾಗಿ, ಉತ್ತಮವಾಗಿದೆ.

ಜಿಯಾ ತೇರಿ : ಜಯಂತ್ ಕಾಯ್ಕಿಣಿಯವರ ಸಾಹಿತ್ಯವಿರುವ ಗೀತೆಯಲ್ಲಿ ಹಿಂದಿ ಹೇಗೆ ನುಸುಳಿತು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಮೊದಲೇ ಹಾಡು ಇಷ್ಟವಾಗುತ್ತದೆ. ನಿಸ್ಸಂದೇಹವಾಗಿ ಚಿತ್ರದ ಅತ್ತ್ಯುತ್ತಮ ಗೀತೆ. ’ನೋಟದ ಬಾಣವು ನಾಟಿದೆ ಆಗಲೇ’ ಎಂಬ ಹಾಡಿನ ಸಾಲಿನಂತೆ ಸಂಗೀತ, ಕಾರ್ತಿಕರ ಗಾಯನ, ಕಾಯ್ಕಿಣಿಯವರ ಸಾಹಿತ್ಯ ಎಲ್ಲವೂ ಮನಸೂರೆಗೊಂಡು ಮನಸ್ಸಿಗೆ ನಾಟಿ ಕೊಳ್ಳುತ್ತದೆ. ಮೊದಲೇ ಕೇಳಿದಂತೆ ಎನಿಸಿದರೂ ಅದ್ಭುತವಾದ ವಾದ್ಯ ಸಂಯೋಜನೆ ಈ ಗೀತೆಗಿದೆ. ಕೋರಸ್ ಸಹ ಮನ ಗೆಲ್ಲುತ್ತದೆ. ಮನಮೋಹಕ ಗೀತೆ.

ಭಜರಂಗಿ ರೇ : ಕಲ್ಯಾಣ್ ರ ಸಾಹಿತ್ಯದ ಈ ಗೀತೆಗೆ ಕೈಲಾಶ್ ಖೈರ್ ರ ಕಂಠದ ಮಾಂತ್ರಿಕ ಸ್ಪರ್ಷ ದೊರಕಿದೆ. ಕೈಲಾಶ್ ಇದನ್ನು ಅದೆಷ್ಟು ಸೊಗಸಾಗಿ ಹಾಡಿದ್ದಾರೆಂದರೆ  ಉತ್ತಮವಾದ ವಾದ್ಯ ಸಂಯೋಜನೆ, ಸಂಗೀತ, ಸಾಹಿತ್ಯವೆಲ್ಲವೂ ತೆರೆಮರೆಯಲ್ಲಿ ನಿಂತು ಅವರ ಕಂಠಕ್ಕೆ ತಲೆದೂಗಿದಂತೆ ಅನಿಸುತ್ತದೆ. ಚಿತ್ರದ ಪ್ರಮುಖ ಘಟ್ಟದಲ್ಲಿ ಬರುವಂತೆ ತೋರುವ ಈ ಗೀತೆ ತನ್ನಲ್ಲಿ ಚಿತ್ರದ ಕಥೆಯನ್ನು ಸಹಾ ಹೇಳುವಂತೆ ತೋರುತ್ತದೆ. ಇದರ ದೃಶ್ಯರೂಪ ಹೇಗಿರಬಹುದೆಂಬ ನಿರೀಕ್ಷೆಯನ್ನು ಈ ಗೀತೆ ಹುಟ್ಟಿಸುತ್ತದೆ.

-ಪ್ರಶಾಂತ್ ಇಗ್ನೇಷಿಯಸ್