Wednesday 14 November 2012

ಕನ್ನಡ ಯಾರು ಓದುತ್ತಾರೆ ಬಿಡ್ರಿ ? ಇದು ಓದುತ್ತಿರೋದೇ ಅಲ್ವೇ????

"ಕನ್ನಡ ಯಾರು ಓದುತ್ತಾರೆ ಬಿಡ್ರಿ, ಈಗೀಗ ಕನ್ನಡ ಓದುವವರೇ ಇಲ್ಲಾ" ಎಂಬ ಮಾತುಗಳು ಬಹಳ ವರ್ಷದಿಂದ ಕೇಳುತ್ತಲೇ ಬರುತ್ತಿದೆ.ಆದರೆ ಅದೇ ಕನ್ನಡದಲ್ಲಿ ಯಾರು ಬರೆಯುತ್ತಾರೆ ಬಿಡ್ರಿ ಎನ್ನುವ ಮಾತು ಅಷ್ಟಾಗಿ ಕೇಳಿಬರುವುದಿಲ್ಲ.  ಅದೆಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಓದುವವರಿಲ್ಲ ಎಂಬುವುದನ್ನು ನಂಬುವುದು ಸ್ವಲ್ಪ ಕಷ್ಟವೇ.ತುಂಬಾ ಓದುವವರನ್ನೇನೋ ನೋಡಿದ್ದೇನೆ, ಆದರೆ ಅಂಥವರನ್ನು ತುಂಬಾ ನೋಡಿಲ್ಲ. ಹಾಗೆಂದ ಮಾತ್ರಕ್ಕೆ ತುಂಬಾ ಓದಿಕೊಂಡಿರುವವರು ತುಂಬಾ ಇಲ್ಲಾ ಎಂದಲ್ಲ, ನಾನು ತುಂಬಾ ನೋಡಿಲ್ಲ ಎಂದೆ ಅಷ್ಟೇ. ಆದರೂ ತುಂಬಾ ಜನ ಕನ್ನಡ ಓದುತ್ತಿದ್ದಾರೆ ಎಂಬುದು ಮಾತ್ರ ನನಗೆ ಗ್ಯಾರಂಟಿ. ಈ ಮೇಲಿನ ಸಾಲುಗಳಲ್ಲಿ ’ತುಂಬಾ’ ಎಂಬ ಪದ ತುಂಬಾ ಕಡೆ ಬಳಕೆಯಾಗಿದ್ದಕ್ಕೆ ಕ್ಷಮೆಯಿರಲಿ. ಅಲ್ಲೆಲ್ಲಾ ’ಬಹಳ’ ಅಂಥ ಬಳಸಬಹುದಿತ್ತು ಆದರೆ ’ತುಂಬಾ’ ಅನ್ನೋದೆ ಯಾಕೋ ತುಂಬಾ ಆತ್ಮೀಯ. ಕನ್ನಡ ಇನ್ನೂ ಹಲವಾರು ಜನರು ಓದುತ್ತಿದ್ದಾರೆ ಎನುವುದಕ್ಕೆ ನನ್ನದೇ ಆದ ಕಾರಣಗೆಳಿವೆ. 

http://bangalore.citizenmatters.in/blogs/25-check-outs
ನಿಜ ಹೇಳಬೇಕೆಂದರೆ ನನ್ನ ಪರಿಚಯದ ಗೆಳೆಯರ ಬಳಗದಲ್ಲಿ, ಓದುವವರಿಗಿಂತ ಬರೆಯುವವರೇ ಹೆಚ್ಚು. ಹಾಗೆಂದರೆ ಆ ಬರೆಯುವ ಗೆಳೆಯರು ಓದುವುದಿಲ್ಲ ಎಂದಲ್ಲ ಅಥವಾ ಅವರು ಬರೆಯುವಷ್ಟು ಓದುವುದಿಲ್ಲ ಅಂತನೂ ಅಲ್ಲಾ. ಓದುವ ಗೆಳೆಯರಿಗಿಂತ ಬರೆಯುವ ಗೆಳೆಯರ ಹೆಚ್ಚಿನ ಸಂಖ್ಯೆ ಎಂಬುದಷ್ಟೇ ನನ್ನ ಉದ್ದೇಶ. ಈ ಗೆಳೆಯರು ಬರೆದಿದ್ದೆಲ್ಲಾ ಒಂದಷ್ಟು ಜನ ಓದುತ್ತಾರೆ ಎಂದುಕೊಂಡರೂ ಆ ಒಂದು ವೃತ್ತದಲ್ಲೇ ಸುಮಾರು ಓದುಗರು ಇದ್ದಾರೆ ಎಂದು ಖಾತ್ರಿಯಾಯಿತು. ಮೊದಲೇ ಹೇಳಿದಂತೆ ಓದುವವರನ್ನೂ ಅಷ್ಟಾಗಿ ವ್ಯಯಕ್ತಿಕವಾಗಿ ನೋಡಿಲ್ಲವಾದರೂ ಈ ಬರೆಯುವವರ ಸಂಖ್ಯೆಯ ಮೇಲೆ ಓದುವವರಿದ್ದಾರೆ ಎಂಬ ಗ್ಯಾರಂಟಿಯಿದೆ. ಮಿನಿಮಮ್ ಗ್ಯಾರಂಟಿ ಇಲ್ಲದಿದ್ದರೆ ಅವರಾದರೂ ಯಾಕೆ ಬರದಾರು? ಇನ್ನೂ, ನಾನು ಬರೆದಿದ್ದಕ್ಕೆ ಹೆಚ್ಚೇನು ಪ್ರತಿಕ್ರಿಯೆ ಬರುವುದಿಲ್ಲವಾದರಿಂದ ಅದೆಷ್ಟು ಜನ ನನ್ನ ಲೇಖನಗಳನ್ನು ಓದುತ್ತಾರೆ ಎಂಬುದರ ಬಗ್ಗೆ ನನಗೇ ಜಿಜ್ಞಾಸೆ ಇದೆ, ಹಾಸ್ಯ ಲೇಖನಗಳನ್ನು ಬರೆದಾಗ ಚೆನ್ನಾಗಿ ಬರೆಯುತ್ತೀರಾ ಎಂದು ಕೆಲವರು ಹಾಸ್ಯ ಮಾಡುವುದನ್ನು ಬಿಟ್ಟರೆ ಗಂಭೀರ ಲೇಖನಗಳನ್ನು ಯಾರು ಗಂಭೀರವಾಗಿ ಪರಗಣಿಸಿದ್ದು ಕಂಡಿಲ್ಲ. 

ಇನ್ನೂ "ಕನ್ನಡ ಯಾರು ಓದುತ್ತಾರೆ ಬಿಡ್ರಿ" ಎಂಬ ಮಾತಿಗೆ ಬಂದರೆ, ಕನ್ನಡ ಓದುವವರಿಲ್ಲದೆ ಅಷ್ಟೊಂದು ಪುಸ್ತಕಗಳು ಬರುತ್ತಿವೆಯೇ? ಅದರಲ್ಲೂ ಈಗಿನ ಕೆಲವು ಕನ್ನಡ ಲೇಖಕರು ಬರೆಯುತ್ತಿರುವ ವೇಗ ನೋಡಿದರೆ ಗಾಬರಿಯುಕ್ತ ಸಂತೋಷವಾಗುತ್ತದೆ. ಮಗದೊಮ್ಮೆ ಸಂತೋಷಭರಿತ ಗಾಬರಿಯಾಗುತ್ತದೆ.ನಮ್ಮ ಜೋಗಿ ಅವರನ್ನೇ ತೆಗೆದುಕೊಳ್ಳಿ, I mean ಉದಾಹರಣೆ ತೆಗೆದುಕೊಳ್ಳಿ. ಅಗಲೇ 27 ಪುಸ್ತಕಗಳಾಯಿತಂತೆ. ಅವರ ಅಪ್ಪಟ ಅಭಿಮಾನಿಯಾದ ನನ್ನಂತವನೇ ಇನ್ನೂ ಎಂಟೋ ಹತ್ತೋ ಓದಿರಬೇಕು ಅಷ್ಟರಲ್ಲಿ 27 ಅಂತೆ. ಅಬ್ಬಾ. ಇನ್ನೂ ರವಿ ಬೆಳೆಗೆರೆ ಅವರು ಬರೆಯುತ್ತಿರುವ ರಭಸ ನೋಡಿದರೆ ಹೇಗಪ್ಪ ಎಲ್ಲಾ ಓದಿ ಮುಗಿಸೋದು ಎನ್ನುವ ಗೊಂದಲ. ಇತರ ಲೇಖರರೂ ಏನೂ ಕಮ್ಮಿ ಇಲ್ಲ ಬಿಡಿ. ಮೊನ್ನೆ ಹಿರಿಯ ಗೆಳೆಯರೊಬ್ಬರ ತಮ್ಮ ಪುಸ್ತಕವೊಂದು ಕನ್ನಡ ಸರ್ಕಾರದ ಗ್ರಂಥಾಲಯ ಇಲಾಖೆಗೆ ಆಯ್ಕೆ ಆಯಿತೆಂದು ತಿಳಿಸಿ, ಅದನ್ನು ಅವರು ಪ್ರಕಟಿಸುವ ಪಟ್ಟಿಯಲ್ಲಿ ನೋಡಿ ಖಾತ್ರಿ ಮಾಡಕೊಳ್ಳಬೇಕೆಂದು ನನ್ನನ್ನು ವಿನಂತಿಸಿದರು. ಅಷ್ಟೇ ಅಲ್ವೇ? ಆಯ್ತು ಬಿಡಿ ಸಾರ್ ಎನ್ನುತ್ತಾ ಪಟ್ಟಿಯ ಲಿಂಕ್ ತೆರೆದು ನೋಡಿ ಗಾಬರಿ ಆಯಿತು, ಈ ವರ್ಷ ಆಯ್ಕೆಯಾದ ಪುಸ್ತಕ ಪಟ್ಟಿಯಲ್ಲಿ ಸುಮಾರು ೨೦೦೦ಕ್ಕೂ ಹೆಚ್ಚು ಪುಸ್ತಕಗಳು. ಅಬ್ಬಾ ಎಷ್ಟು ಸಮೃದ್ಧವಾಗಿದೆ ನಮ್ಮ ಪುಸ್ತಕ ಪ್ರಪಂಚ. ಬರೆದ ಲೇಖಕರು, ಟೈಪ್ ಮಾಡಿದವರು, ಅದನ್ನು ಪ್ರಕಾಶಿಸಿದವರು, ಪ್ರೂಫ್ ನೋಡಿದವರು,ಪ್ರಿಂಟ್ ಮಾಡಿದವರು, ಬೈಂಡ್ ಮಾಡಿದವರು, ಆಯ್ಕೆ ಮಾಡಿದವರು, ನನ್ನಂತೆ ಪಟ್ಟಿ  ನೋಡಿ ಗಾಬರಿ ಬಿದ್ದವರು, ಆಯ್ಕೆಯಾದ ಪುಸ್ತಕಗಳನ್ನು ಗ್ರಂಥಾಲಯಗಳಲ್ಲಿ ಜೋಡಿಸುವವರು, ಅದಕ್ಕೆ ಲೇಖಕರಿಗೆ ಚೆಕ್ ತಯಾರು ಮಾಡುವವರು, ಇವರೆಲ್ಲರ ಸಂಖ್ಯೆ ಏನು ಚಿಕ್ಕದೆ? ಅಬ್ಬಾ ಕನ್ನಡ ಪುಸ್ತಕ ಜಗತ್ತೇ ಎನಿಸಿತು!!!!!

ಹಾಗೆಯೇ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಆದ ಅನುಭವ ಮರೆಯಲು ಸಾಧ್ಯವೇ? ಪುಸ್ತಕ ಮಳಿಗೆಗಳಲ್ಲಿ ಕಂಡ ಅಪಾರ ಜನ ಜಂಗುಳಿ ನೋಡಿ  ನನಗೆ ಉಬ್ಬಸ ಬಂದು ಬಿಟ್ಟಿತ್ತು. ಸಂತೋಷ ಆದಾಗ ಅನಂದ ಬಾಷ್ಪ ಬರುವುದು ಸರಿ, ಹೃದಯ ಉಕ್ಕಿ ಬರುವುದು ಇನ್ನೂ ಸರಿ, ಇದಾವುದು ಉಬ್ಬಸ ಅಂದುಕೊಂಡಿರಾ?ಪುಸ್ತಕ ಮಳಿಗೆಯಲ್ಲಿ ವ್ಯವಸ್ಥೆ ಏನೋ ಎಲ್ಲವೂ ಚೆನ್ನಾಗಿಯೇ ಇತ್ತು ಆದರೆ ನೆಲಕ್ಕೆ ಏನೂ ಹಾಸಿರಲಿಲ್ಲ, ಇಲ್ಲಾ ಹಾಸಿದ್ದು ಜನರ ಉತ್ಸಾಹಕ್ಕೆ ಚೆಲ್ಲಾಪಿಲ್ಲಿಯಾಗಿತ್ತೋ ಏನೋ. ಮಣ್ಣಿನ ನೆಲದಿಂದ ಏಳುತ್ತಿದ್ದ ಧೂಳಿಗೆ ತತ್ತರಿಸಿಹೋಗಿದ್ದೆ. "ಈ ಕನ್ನಡ ಮಣ್ಣಿನ ಘಮವೇ" ಅಂತದ್ದು ಅಂತ ವೇದಿಕೆಯಲ್ಲಿ ಸಾಹಿತಿಯೊಬ್ಬರು ಮಾಡುತ್ತಿದ್ದ ಭಾಷಣ ಕೇಳಿ ಮೊದಮೊದಲು ಒಂದೆರೆಡು ಸಾರಿ ದೀರ್ಘ್ಹವಾಗಿ ಉಸಿರೆಳೆದುಕೊಂಡೆ ನೋಡಿ, ಅದೆಲ್ಲಿತ್ತೋ ಕೆಮ್ಮು ನಾಭಿಯಿಂದ ಹೊರಟು ಬಾಯಿಂದ ಹೊರ ಹೊಮ್ಮುವಷ್ಟರಲ್ಲಿ ಕೈಯಲ್ಲಿದ್ದ ಡಿಸ್ಕೌಂಟಲ್ಲಿ ಪಡೆದ ಅಷ್ಟು ಪುಸ್ತಕಗಳು ನೆಲಕ್ಕೆ ಬಿದ್ದವು.ತೆಗೆದು ಕೊಳ್ಳೋಣ ಅಂತ ಬಗ್ಗಿದ್ದೇ ತಪ್ಪಾಗಿಹೋಯಿತು. ಹಿಂದೆ ಯಾರೋ ತಳ್ಳಿದ್ದಂತಾಯಿತು. ಮುಂದೆ ನನಗಿಂತ ಮುಂಚೆ ನೆಲಕ್ಕೆ ಬಿದ್ದವರು ಕೈಹಿಡಿದು ನೆಲಕ್ಕೆ ಎಳೆದುಕೊಂಡರು. ಪುಸ್ತಕ ಮಳಿಗೆಯೊಂದರ ಕ್ಯಾಶಿಯರ್ ಮುಂದೆ ಸಾಷ್ಟಾಂಗ ನಮಸ್ಕ್ರಾರ ಮಾಡಿದಾಯ್ತು. ಪಾಪ ಅವರಿಗೆ ಅವರ ಕಂಪ್ಯೂಟರಿನ ವಯರ್ ಎಲ್ಲೆ ಎಳೆದುಬಿಡುವೆನೋ ಎಂಬ ಗಾಬರಿ. "ಈ ಮಣ್ಣಿನ ಋಣ ಮರೆತರೆ ಅವನಿಗಿಂತ ನಿರ್ಭಾಗ್ಯ ಇನ್ಯಾರಿಲ್ಲ" ಎನ್ನುತ್ತಿದ್ದ ಭಾಷಣ ಸಾಹಿತಿಯ ಮಾತು ಬೇಡವೆಂದರೂ ಕೇಳಿಸುತ್ತಿತ್ತು. ಬಟ್ಟೆಗೆ ಅಂಟಿಕೊಂಡಿದ್ದ ಮಣ್ಣಿನ ಋಣವನ್ನು ನಿಧಾನವಾಗಿ ಒದರುತ್ತಾ ಏಳುತ್ತಿದ್ದಂತೆ ಆ ಮಳಿಗೆಯ ಓನರ್ ’ಇರಲಿ ಇರಲಿ ನಮಗ್ಯಾಕಪ್ಪ ನಮಸ್ಕ್ರಾರ’ ಎಂಬ ಮುಖ ಭಾವದಲ್ಲಿ ನನ್ನ ಭುಜ ಹಿಡಿದು ಎಬ್ಬಿಸಿದರು. "ಬುಕ್ಸ್ ಬುಕ್ಸ್ ಹುಷಾರೀ" ಅಂತ ಇನ್ಯಾರೋ ಅಂದರು. ’ಮುಗಿಬಿದ್ದು ಕನ್ನಡ ಪುಸ್ತಕ ಖರೀದಿಸಿದ ಕನ್ನಡ ಜನತೆ’ ಎಂಬ ಮಾರನೆಯ ದಿನದ ದಿನಪತ್ರಿಕೆಯ ಹೆಡ್ಡಿಂಗನ್ನು ನನ್ನ ನೋಡಿಯೇ ಬರೆದರೇನೋ? ಕನ್ನಡ ಪುಸ್ತಕ ಪ್ರಿಯರು ಇನ್ನೂ ಅಪಾರ ಸಂಖ್ಯೆಯಲ್ಲಿ ಇದ್ದಾರೆ ಎಂಬುದಕ್ಕೆ ಆ ದಿನವೇ ಸಾಕ್ಷಿ . ಕೆಲವೊಂದು ಸತ್ಯಗಳು ಎದ್ದಿರುವಾಗಿಂತಲೂ ಬಿದ್ದಾಗಲೇ ಅರಿವಾಗುವುದು. ಹಾಗೆ ಎದ್ದ ನಾನು ಈ ವಿಷಯದಲ್ಲಿ ಮತ್ತೆ ಬಿದ್ದಿಲ್ಲ. 

ಇನ್ನೂ ಗಾಂಧಿನಗರದ ಪುಸ್ತಕ ಮಳಿಗೆಯೊಂದಕ್ಕೆ ಹೋದಾಗ ಬೈಕ್ ಗೆ ಪಾರ್ಕಿಂಗ್ ಸಿಗಲಿಲ್ಲ. ಅಲ್ಲೇ ಪಕ್ಕದ ಹೋಟೆಲ್ಲಿನ ಜಾಗದಲ್ಲಿ ಪಾರ್ಕಿಂಗ್ ಸಿಕ್ಕಿತು. ಹಾಗದರೆ ಒಂದು ಹೋಟೆಲಿಗಿಂತ ಪುಸ್ತಕ ಮಳಿಗೆಗೆ ಹೆಚ್ಚು ಮಂದಿ ಹೋಗುತ್ತರೆಯೇ ಎಂಬ ಅನುಮಾನ ಕಾಡಲು ಶುರುವಾಯಿತು. ಇದು ಜ್ಞಾನದ ಹಸಿವು ಹೆಚ್ಚುತ್ತಿರುವ ಸಂಕೇತವೇ ಎಂಬ ಮತ್ತೊಂದು ಪ್ರಶ್ನೆ ಎದುರಾಯಿತು.Food for thought ಎಂದು ಕೊಂಡು ಮುಂದೆ ನಡೆದಾಗ ಎಲ್ಲರ ಮನೆಯಲ್ಲೂ ಹೆಂಡತಿಯೋ,ತಾಯಿಯೋ ಅಡುಗೆ ಮಾಡೇ ಮಾಡುತ್ತಾರೆ, ಅದೇ ಎಲ್ಲಾ ಮನೆಯಲ್ಲೂ ಹೆಂಡತಿ, ತಾಯಿ ಪುಸ್ತಕ ಬರೆಯುವುದಿಲ್ಲವಲ್ಲ ಎಂಬ ಉತ್ತರ ಹೊಳೆಯಿತು. ಮಾಡಿದ ಅಡುಗೆ ತಿನ್ನುವುದಲ್ಲದೇ ಹೆಂಡತಿ ಬರೆದದ್ದನ್ನು....... ಓಕೆ ಬೇಡ. ಬಿಡಿ.

ಕಳೆದ ವರ್ಷ ಸಮ್ಮೇಳನದಲ್ಲಿ ಖರೀದಿಸಿದ ಅಷ್ಟೂ ಪುಸ್ತಕಗಳಲ್ಲಿ ಹೆಚ್ಚಿನವನ್ನು ಇನ್ನೂ ಓದೇ ಇಲ್ಲಾ, ಸಮಯ ಸಿಕ್ಕಾಗ ಓದಬೇಕು ಎಂದುಕೊಳ್ಳುತ್ತಲೇ ತುಂಬಾ ಸಮಯವಾಗಿದೆ. ಓದಲು ಕುಳಿತಾಗ ಬರೆಯಬೇಕು ಅನಿಸುತ್ತದೆ, ಬರೆಯಬೇಕಾದಾಗ ಓದಬೇಕು ಅನ್ನಿಸುತ್ತದೆ. Atleast ಬರೆದದ್ದನ್ನೇ ಒಮ್ಮೆ ಓದಿಕೊಂಡರೆ, ಬರೆದಿದ್ದರಲ್ಲಿ ಇಷ್ಟೆಲ್ಲಾ ತಪ್ಪುಗಳಿರುತ್ತಿರಲಿಲ್ಲವೇನೋ? 


"ಕನ್ನಡ ಪುಸ್ತಕ ತಗೋತ್ತಾರೆ, ಆದ್ರೆ ಯಾರ್ ಓದ್ತಾರೆ ಬಿಡಿ" ಅನ್ನೋದು ಲೇಟಸ್ಟ್ ಮಾತು. ಏನಂತೀರ? 

14 comments:

  1. Thanks prashanth you gave me an opportunity to read your above article, it inspired me to cultivate the the habbit of reading Kannaada books.

    ReplyDelete
    Replies
    1. Prashanth Ignatius16 November 2012 at 09:43

      Tell me your identity, I will give better articles, books to read.

      Delete
  2. ಹೌದು, ಇದೊಂದು ತರ ಬಟ್ಟೆ ಮಾರುವ ಮಾಳಿಗೆಯಲ್ಲಿ ಇದ್ದಂತೆ. ಮನಸ್ಸು ತಿಕ್ಕಲು ತಿಕ್ಕಲಾಗಿ ಆಡುತಿರುತ್ತದೆ. ಯಾವ ಬಟ್ಟೆಗೂ ತೃಪ್ತಿಗೊಳ್ಳುವುದಿಲ್ಲ. ಮನೆಗೆ ತಂದ ಮೇಲೂ.
    ಪುಸ್ತಕ ಓದುವಾಗಲು ಕೂಡ. ರವಿಬೆಳಗೆರೆಯನ್ನು ಓದುವಾಗ. ಜೋಗಿ ಅಡ್ಡಬರುತ್ತಾರೆ, ಜೋಗಿಯನ್ನು ಓದುವಾಗ ಅವರೇ ಇತರ ಉತ್ತಮ ಲೇಖಕರನ್ನು ಪರಿಚಯಿಸಿ ಅಡ್ಡಿಪಡಿಸುತ್ತಾರೆ. ಇದರಿಂದ ಓದುವ ಸ್ಥಿರತೆ ಇನ್ನೂ ಬಂದಿಲ್ಲ. ಉಂಡುವಾಗಿನಲ್ಲಿನ ಸಮಯಪಾಲನೆ ಓದುವಿನಲ್ಲೂ ಬೇಕು ಎಂದು ಮೇಷ್ಟ್ರು ಹೇಳಿದ ನೆನಪು. ಇತ್ತೀಚೆಗೆ 'ಹಲಗೆ ಬಳಪ' ಎಂಬ ಪುಸ್ತಕ ಬಂದಿದೆಯಂತೆ. ಓದುವ ಪರಿಯನ್ನು ವಿವರಿಸಿದ್ದಾರಂತೆ. ಓದುವಿನಲ್ಲಿ ಆಸಕ್ತಿ ಮೂಡಿಸುವುದಂತೆ. ಕೊಂಡು ಓದಬೇಕನಿಸಿದೆ.

    ReplyDelete
    Replies
    1. ಪ್ರಶಾಂತ್ ಇಗ್ನೇಷಿಯಸ್16 November 2012 at 09:42

      ಹಲಗೆ ಬಳಪ ಸಕ್ಕತ್ತಾಗಿದೆ, ಓದಿ.

      Delete
  3. Prashanth Neevu thumba chennagi article barithira, Nanagu hoduva aase adare samaya siguttilla melagi nanage utsaha baruttilla.Hoduvadannagali, bariyuvadannagali hege rudisikolluvudu antha swalpa nimage time sikkaga heli kodthira.I would be great if you suggest me to read some books.

    ReplyDelete
    Replies
    1. ಪ್ರಶಾಂತ್ ಇಗ್ನೇಷಿಯಸ್16 November 2012 at 09:38

      ಬರೆಯುವ ಮುನ್ನ ಸ್ವಲ್ಪ ಓದಿಕೊಂಡರೆ ಚೆನ್ನ. ಯಾವ ವಿಷಯದಲ್ಲಿ ಆಸಕ್ತಿ ಅಂಥ ಹೇಳಿ, ಅ ತರನಾದ ಯವುದಾದರೂ ಪುಸ್ತಕ ನನ್ನ ಬಳಿ ಇದ್ದರೆ ಸಾಲವಾಗಿ ಕೊಡುತ್ತೇನೆ, ಓದಿ, ಇಷ್ಟವಾದರೆ ಹೊಸ ಪುಸ್ತಕ ಕೊಂಡು ಕೊಳ್ಳಿ.

      Delete
    2. Modalagi reply madiddakke thumba dannyavadagalu :)

      Nanu "Tulasi" book hodidde ondu sari.adu thumbane chennagide aa thara books nanage thumbane ista aguttve.aa book alli thumba suspense ide, book end varegu rahassya ne gottagolla , nanage aa book yake istu bega mugudu hoyithy antha bejaragtha ittu.aa thara yavudadru book idre nanage dayavittu salahe maadi.Nanu nana snehitharondige hogiro pravasa kathanavannu kelavu putagalli baradiddene.

      Delete
  4. Tumba chennagide uncle :) naanu kannada pusthka tegedukonde hhgu oduttaiddenne. Nimma article odi nanu bribeku annisutide.

    ReplyDelete
    Replies
    1. ಖಂಡಿತ ಸ್ವರಚಿತ್ತಾರಕ್ಕೆ ಬರಿಯಬಹುದು.

      Delete
  5. Nice Try Prashanth sir .. Accounts bitu sahityada kade olavu..

    Yogesh

    ReplyDelete
    Replies
    1. ಪ್ರಶಾಂತ್ ಇಗ್ನೇಷಿಯಸ್16 November 2012 at 09:40

      Thanks ಯೋಗಿ!!! Accounts ಬಿಟ್ರೆ ಬದುಕು ಸಾಗೊಲ್ಲ, ಸಾಹಿತ್ಯ ಬಿಡೋಕೆ ಮನಸ್ಸು ಬಿಡೊಲ್ಲ. :-)

      Delete
  6. ಪ್ರಶಾಂತ್ , ಇದು ಅದ್ಭುತ ಬರಹ , ನಿಜವಾಗಿಯೂ ಸತ್ಯಾಂಶ ಈ ನಿಮ್ಮ ಬರಹದಲ್ಲಿ ಕಾಣುತಿದೆ , ನಿಜ ಹೇಳಬೇಕಂದರೆ ಎಷ್ಟು ದಿನದ ಮೇಲೆ , ಕನ್ನಡ ಓದುತಿದೇನೆ :-) ಖುಷಿ ಆಯಿತು !! ಆಲ್ ದಿ ಬೆಸ್ಟ್ :-)

    ReplyDelete
  7. ಕಮೆಂಟ್ ಮಾಡಿದ ಗೆಳೆಯರಿಗೂ ಹಾಗೂ ಇತರ ಅನಾನಮಸ್ ಗಳಿಗೂ ವಂದನೆಗಳು.

    ReplyDelete