Wednesday 14 November 2012

ಆಗಲೇ ಸೀತಾಪಹರಣ ಆಗಿಬಿಟ್ಟಿದೆ - ಮುಂದುವರಿದ ಭಾಗ

(ಮುಂದುವರಿದ ಭಾಗ)

ರಾಮುವಿಗೆ ಅದು ಮದುವೆ ಹಂಗಾಮು. ಊರವರ ಮತ್ತು ಹತ್ತಿರದ ಪರವೂರುಗಳ ಕಾಯಂ ಗಿರಾಕಿಗಳ ಕೊಟ್ಟ ಆಭರಣಗಳ ತಯಾರಿಕೆಯ ಕೆಲಸವನ್ನು ರಾಮು ಒಪ್ಪಿಕೊಂಡಿದ್ದ. ಮೊದಲು ಬೇರೆಯರ ಅಭರಣಗಳನ್ನು ಮಾಡಿಕೊಟ್ಟ ನಂತರ, ಇನ್ನು ಹದಿನೈದು ಹದಿನಾರು ದಿನಗಳ ನಂತರ ನೀನು ಕೊಟ್ಟ ಬಂಗಾರದ ಕೈ ಕಡಗ ಕೆಡೆಸಿ ನಿನ್ನ ಮಗಳ ಆಭರಣಗಳನ್ನು ಮಾಡಿಕೊಡುವೆ ಎಂದು ರಾಮು ಅಕ್ಕನಿಗೆ ತಿಳಿಸಿದ್ದ. ಹದಿನೈದು ದಿನಗಳು ಕಳೆದವು. ಮತ್ತೆ ಹದಿನೈದು ದಿನಗಳು ಗತಿಸಿ 
ಒಂದು ತಿಂಗಳಾದರೂ ತಮ್ಮ ರಾಮುವಿನಿಂದ ಯಾವ ಸುದ್ದಿಯೂ ಬರಲಿಲ್ಲ. ಒಂದು ದಿನ ಸುಹಾಸಿನಿ ಗಂಡನನ್ನು ತವರು ಮನೆಗೆ ಕಳುಹಿಸಿದಳು. ರಾಮಚಂದಪುರಕ್ಕೆ ಗಂಡನನ್ನು ಕಳುಹಿಸುವ ಮೊದಲು, ನಿಮ್ಮ ಮಾವನ ಮನೆಯಲ್ಲಿ ಪಟ್ಟಾಗಿ ಕುಳಿತು, 
ಅಭರಣಗಳನ್ನು ಮಾಡಿಕೊಂಡೇ ಬನ್ನಿ ಎಂದು ತಾಕೀತು ಮಾಡಿದ್ದಳು. ಪಾಳೇಗಾರನನ್ನು ಹೇಗೋ ಒಪ್ಪಿಸಿ ನಾಲ್ಕು ದಿನ ರಜೆ ಹಾಕಿದ ಸುಹಾಸಿನಿಯ ಗಂಡ ರಾಮಚಂದ್ರಪುರದ ಮಾವನ ಮನೆಗೆ ಬಂದ. ರಾಮುವಿಗೆ ಮೈ ತುಂಬಾ ಕೆಲಸ. 
ಕೆಲಸದಲ್ಲೇ ಮುಳುಗಿದ್ದ ರಾಮು, ಊರವರ ಮತ್ತು ಹತ್ತಿರದ ಪರವೂರುಗಳ ಕಾಯಂ ಗಿರಾಕಿಗಳ ಅಭರಣಗಳನ್ನು ಮಾಡುವುದರಲ್ಲೇ ಹೆಚ್ಚು ಸಮಯ ಕಳೆದಿದ್ದ. ಅವನಿಗೆ ಅಕ್ಕ ಕೊಟ್ಟಿದ್ದ ಬಂಗಾರದ ಕೈ ಕಡಗ ಮತ್ತು ಅದನ್ನು ಮುರಿದು ಅವಳ ಮಗಳಿಗೆ ಅಭರಣಗಳನ್ನು ಮಾಡಿಕೊಡಬೇಕೆಂಬ ಸಂಗತಿ ಮರೆತೇ ಹೋಗಿತ್ತು. ಭಾವ ಮನೆಯ ಬಾಗಿಲಿಗೆ ಬಂದಾಗಲೇ ಅವನಿಗೆ ಭಾವನ ಕೈ ಕಡಗದ ನೆನಪಿಗೆ ಬಂದಿತು. ಅದರಲ್ಲೇ ತನ್ನ ಸೋದರ ಸೊಸೆ, ಅಕ್ಕನ ಮಗಳಿಗೆ ಅಭರಣಗಳನ್ನು ಮಾಡಬೇಕೆಂಬುದನ್ನು ಮರೆತದ್ದಕ್ಕಾಗಿ ಅಯ್ಯೋ ನನ್ನ ಮರೆವೆ? ಎಂದು ಕೊಳ್ಳುತ್ತಾ ಹಣೆ ಬಡಿದುಕೊಂಡ. ಸರಿ ಭಾವ, ಒಂದರೆಡು ದಿನ ನಮ್ಮಲ್ಲೇ ಇರು. ಅಭರಣಗಳನ್ನು ಮಾಡಿಕೊಡುವೆ ಎಂದು ಭಾವನಿಗೆ ಹೇಳಿದ. ನಂತರ ತಕ್ಷಣ ಕೈಯಲ್ಲಿದ್ದ ಕೆಲಸವನ್ನು  ಬದಿಗಿಟ್ಟು, ಭಾವನ ಕೈ ಕಡಗವನ್ನು ಕರಗಿಸಿ ಅಭರಣಗಳನ್ನು ಮಾಡಲು ಸಿದ್ಧತೆ ಮಾಡಿಕೊಂಡ. ಸಾಮಾನ್ಯವಾಗಿ ಸಾಂಪ್ರದಾಯಿಕವಾದ ಸರಾಫ್ ಕಟ್ಟೆ ಅಂದರೆ ಚಿನಿವಾರರ ಪೇಟೆಯಲ್ಲಿ ಮುಂದೆ ಅಂಗಡಿಯಿದ್ದರೆ, ಹಿಂದೆ ಅಯಾ ಚಿನಿವಾರರ ಅಂಗಡಿಗಳ ಮಾಲೀಕರ ಮನೆಗಳಿರುತ್ತದೆ.

ಕಣ್ಣು ಅಷ್ಟು ಸರಿಯಾಗಿ ಕಾಣದಿದ್ದರೂ , ಅಂಗಡಿಯಲ್ಲಿನ ಮತ್ತು ಮನೆಯಲ್ಲಿನ ವಿದ್ಯಾಮಾನಗಳನ್ನು ದಶರಥ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ದಶರಥನಿಗೆ ಅಳಿಯ ಮನೆಯಲ್ಲಿ ಬಂದು ಕುಳಿತ್ತಿದ್ದು ಇರಿಸುಮುರಿಸಿಗೆ ಕಾರಣವಾಗಿತ್ತು. ಅಕ್ಕ ಕೊಟ್ಟ ಬಂಗಾರದಲ್ಲಿ ಈಗ ಅಭರಣಗಳನ್ನು ಮಾಡುವ ತುರಾತುರಿಯಲ್ಲಿರುವ ಮಗ ರಾಮನ ಮೇಲೆ ಅವನಿಗೆ ಸಂಶಯ ಮೂಡ ತೊಡಗುತ್ತದೆ. ಮಗ ಕುಲಕಸಬಿನ ರೀತಿ ರಿವಾಜನ್ನು ಮರೆತಾನು ಎಂದು ಕೊಳ್ಳುತ್ತಾನೆ. ಅಕ್ಕ ಕೊಟ್ಟ ಬಂಗಾರದಲ್ಲಿ ಒಡವೆಗಳನ್ನು ಮಾಡುತ್ತಿರುವ ಮಗ ರಾಮು, ಅಕ್ಕ ಎಂಬ ಕಕ್ಕಲಾತಿಯಲ್ಲಿ ಬಂಗಾರ ಕದಯಲಿಕ್ಕಿಲ್ಲ ಎಂಬ ಅನುಮಾನ ಕಾಡುತ್ತಿರುತ್ತದೆ. ಮನೆಯ ಒಳಗೆ ಹಜಾರದಲ್ಲಿ ತೂಗು ಮಂಚ ಮೊಮ್ಮಕ್ಕಳೊಂದಿಗೆ ಕುಳಿತಿದ್ದ ದಶರಥ, ಮಗ ರಾಮುವಿಗೆ ಹೇಗಾದರೂ ಮಾಡಿ ಈ ಬಗ್ಗೆ ಸೂಚನೆ ಕೊಡಬೇಕು ಎಂದು ಕೊಂಡ. ಬಾಯಿ ಬಿಟ್ಟು ಜೋರಾಗಿ ಹೇಳುವಂತಿಲ್ಲ. ಏಕೆಂದರೆ, ಮಗಳು ಸುಹಾಸಿನಿಯ ಗಂಡ-ಅಳಿಯ, ರಾಮುವಿನ ಮಕ್ಕಳೊಂದಿಗೆ ಆಡುತ್ತಾ ಅಲ್ಲೇ ಹಜಾರದಲ್ಲೇ ಇನ್ನೊಂದು ಕಡೆ ಕುಳಿತ್ತಿದ್ದ. ಮೊಮ್ಮಗುವೊಂದು ಕೈ ಕೊಸರಿಕೊಂಡು, ತೂಗು ಮಂಚದಿಂದ ಕೆಳಗೆ ಇಳಿದು ಮುಗ್ಗರಿಸಿ ಬಿತ್ತು. ಆಗ, ದಶರಥ ಹೊರಗೆ ಮನೆಯ ಮುಂದಿನ ಅಂಗಡಿಯಲ್ಲಿ ಕುಳಿತ್ತಿದ್ದ ಮಗ ರಾಮುವಿಗೆ ಕೇಳಿಸುವಂತೆ, ರಾಮ ರಾಮಾ, ರಾಮ ರಾಮ ಎಂದು ಎರೆಡು ಬಾರಿ ಕೂಗಿಕೊಂಡ.ಅಳಿಯನಿಗೆ ಮಾವನ ಕೂಗು ಮತ್ತು ಮನೆಯಲ್ಲಿದ್ದ ತಿಳವಳಿಕೆ ಹೊಂದಿದ್ದ ದೊಡ್ಡ ಮೊಮ್ಮಕ್ಕಳಿಗೆ ಅಜ್ಜನ ಕೂಗು ಅಗತ್ಯಕ್ಕಿಂತ ಜೋರಾಗಿತ್ತು ಎನ್ನಿಸಿತು. 

ಅಷ್ಟರಲ್ಲಿ ಅತ್ತ ಹೊರಗೆ ಅಂಗಡಿಯಲ್ಲಿ ಕುಳಿತು, ಕೆಟ್ಟೋನ್ ಕೆಟ್ಟ, ಕೆಟ್ಟೋನ್ ಕೆಟ್ಟ,ಕುಟ್ಟಾ ಕುಟ್ಟಾ, ಕುಟ್ಟೋನ್ ಕೆಟ್ಟ ಎಂಬ ಶಬ್ದ ಬರುವಂತೆ ಬಂಗಾರವನ್ನು ಹದವಾಗಿ ಬಡಿಯುತ್ತಿದ್ದ, ರಾಮು,  ರಾಮನ ಹೆಂಡತಿ ಸೀತೆಯನ್ನು ರಾವಣ ಆಗಲೇ ಅಪಹರಿಸಿದನಲ್ಲಾ! ಎಂದು ಜೋರಾಗಿ ಉದ್ಗರಿಸುತ್ತಾನೆ. ಅದನ್ನು ಕೇಳಿಸಿಕೊಂಡ ದಶರಥನಿಗೆ ಸಮಾಧಾನ ಮೂಡುತ್ತದೆ. ದಶರಥ ಅಳಿಯನಿಗೆ ಮಾವನ ಮತ್ತು ಭಾವ ರಾಮುವಿನ ಮಾತುಗಳು ವಿಚಿತ್ರವಾಗಿ ಕಾಣಿಸುತ್ತದೆ. ಮಾವ ದಶರಥ  ರಾಮ ರಾಮಾ ಎಂದು ಕೂಗಿದರೆ, ಅದಕ್ಕೆ ಪ್ರತಿಯಾಗಿಯೋ ಎಂಬಂತೆ, ಭಾವ ರಾಮನ ಹೆಂಡತಿ ಸೀತೆಯನ್ನು ರಾವಣ ಆಗಲೇ ಅಪಹರಿಸಿದನಲ್ಲಾ! ಎಂದು ಜೋರಾಗಿ ಉದ್ಗರಿಸಿದ್ದು ಒಗಟಾಗಿ ಕಾಡುತ್ತದೆ. ಒಂದೆರೆಡು ದಿನಗಳು ಕಳೆದ ಮೇಲೆ, ರಾಮು ಎಲ್ಲಾ ಒಡವೆಗಳನ್ನು ಮಾಡಿ ಕೊಟ್ಟಾಗ, ರಾಮುವಿನ ಅಕ್ಕ ಸುಹಾಸಿನಿಯ ಗಂಡ ಅವುಗಳನ್ನು ತೆಗೆದುಕೊಂಡು ಮನೆಗೆ ಹೋಗುತ್ತಾನೆ. 

ಮನೆಯಲ್ಲಿ ಹೆಂಡತಿ ಸುಹಾಸಿನಿಯ ಜೊತೆಗೆ ಅದು ಇದು ಮಾತಾನಾಡುವಾಗ, ಮಾವ ’ರಾಮಾ ರಾಮಾ’ ಎಂದದ್ದು, ಆಗ ಉತ್ತವೆಂಬಂತೆ, ರಾಮು ’ರಾಮನ ಹೆಂಡತಿ ಸೀತೆಯನ್ನು ರಾವಣ ಆಗಲೇ ಅಪಹರಿಸಿದನಲ್ಲಾ!’ ಎಂದು ಉದ್ಗರಿಸಿದ ಬಗ್ಗೆ ಗಂಡ ತಿಳಿಸಿದಾಗ, ಅವಳು ಮುಗುಳ್ನಕ್ಕಳು. "ನೀವು ಗಂಡಸರೇ ಇಷ್ಟು, ಸೊನ್ನೆ, ಸೂಕ್ಷ್ಮಗಳು ಅರ್ಥವಾಗುವುದಿಲ್ಲ.ನಿಮ್ಮದು ಮಂದ ಬುದ್ಧಿ" ಎಂದು ಮೂದಲಿಸಿ ಅಪಹಾಸ್ಯ ಮಾಡಿದಳು. "ಏನೇ ಹಂಗಂದ್ರೆ?" ಎಂದು ಗಂಡ ಕೆಣಕಿದಾಗ," ರೀ ನೀವು ಎದುರಿಗಿದ್ದರೂ, ತಮ್ಮ ಅಕ್ಕಳಾದ ನನ್ನ ಬಂಗಾರ ಕದಿಯಲು ಹಿಂದೆ ಮುಂದೆ ನೋಡದೇ ಕದ್ದಿದ್ದಾನೆ. ಹುಟ್ಟು ಗುಣ ಸುಟ್ಟರೂ ಬಿಡುವುದಿಲ್ಲವಂತೆ. ’ರಾಮ ರಾಮ’ ಎಂದು ಅಪ್ಪ ಅಂದದ್ದು, ’ಅಕ್ಕನ ಬಂಗಾರ ಕದ್ದೆಯೋ? ಇಲ್ಲವೋ? ಎಂದು ವಿಚಾರಿಸಲು.ಅಪ್ಪನಿಗಿಂತ ಘಾಟಿಯಾದ ಮಗ ರಾಮುವಿನ ’ರಾಮನ ಹೆಂಡತಿ ಸೀತೆಯನ್ನು ರಾವಣ ಆಗಲೇ ಅಪಹರಿಸಿದ್ದಾನಲ್ಲ!’ ಎಂಬ ಉದ್ಗಾರದ ಮಾತು, ’ಅಕ್ಕನ ಬಂಗಾರವನ್ನು ತಾನು ಆಗಲೇ ಕದ್ದು ಬಿಟ್ಟಾಗಿದೆ’ ಎಂಬುದರ ಸೂಚನೆ" ಎಂದು ಮುಸಿನಗುತ್ತಾ ಸುಹಾಸಿನಿ ವಿವರಿಸಿದಳು.

ಆಗ, ಅವಳ ಗಂಡ ಪೆಚ್ಚು ಪೆಚ್ಚಾಗಿ ಮುಗಳ್ನಕ್ಕ.  ಅಂದಿನಿಂದ, ’ಅಕ್ಕಸಾಲಿಗ ಅಕ್ಕನ ಬಂಗಾರವನ್ನು ಕದಿಯದೇ ಬಿಡೋನಲ್ಲ’ ಎಂಬ ಗಾದೆ ಮಾತು ಪ್ರಚಲಿತದಲ್ಲಿ ಬಂದಿತಂತೆ.

 - ಎಫ್.ಎಂ.ನಂದಗಾವ್

No comments:

Post a Comment