Saturday 29 December 2018

ನೀವೂ ನೋಡಿ - ಜೊಯ್ ನೋಯೆಲ್ - ಭಾಗ 1

1914  ಮಹಾಯುದ್ಧದ ಸಮಯದಲ್ಲಿ ನಡೆದ ಸತ್ಯ ಘಟನೆಯೊಂದನ್ನು ಆಧರಿಸಿ ನಿರ್ಮಾಣವಾದ ಚಿತ್ರವೇ ’ಜೊಯ್ ನೋಯೆಲ್’ ಅಥವಾ ’ಮೆರ್ರಿ ಕ್ರಿಸ್ಮಸ್’. ಕ್ರಿಸ್ಟಿಯನ್ ಕ್ಯಾರಿಯನ್ ಎಂಬ ಫ್ರೆಂಚ್ ನಿರ್ದೇಶಕ ನಿರ್ದೇಶಿಸಿದ ಈ ಚಿತ್ರ ಅತ್ಯುತ್ತಮ ವಿದೇಶಿ ಚಿತ್ರವೆಂದು  ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾಗಿತ್ತು. 2005ರ ಪ್ರತಿಷ್ಠಿತ ಕೇನ್ಸ್ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿ, ಎಲ್ಲರ ಮೆಚ್ಚುಯನ್ನೂ  ಗಳಿಸಿತ್ತು. ಕೇವಲ ಎರಡು ಕೋಟಿ ಅಮೆರಿಕನ್ ಡಾಲರ್ ‍ಗಳಲ್ಲಿ ನಿರ್ಮಾಣಗೊಂಡ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನೂ ಸದ್ದು ಮಾಡದಿದ್ದರೂ ಚಿತ್ರ ನೋಡಿದವರೆಲ್ಲರೂ ಅತ್ಯುತ್ತಮ ಚಿತ್ರವೆಂದು ಇದನ್ನು ಹೊಗಳುತ್ತಾರೆ. 

ಮೊದಲೇ ತಿಳಿಸಿದಂತೆ ಇದು ಸತ್ಯ ಘಟನೆಯೊಂದನ್ನು ಆಧರಿಸಿದ ಚಿತ್ರವಾಗಿದೆ. ಈ ರೀತಿಯ ಘಟನೆಗಳನ್ನು ಬೆಳ್ಳಿ ತೆರೆಗೆ ತರುವಾಗ ಒಬ್ಬ ನಿರ್ದೇಶಕ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಚಿತ್ರವನ್ನು ಯಾವ ದೃಷ್ಟಿಕೋನದಲ್ಲಿ ಹೇಗೆ ತೆರೆಯ ಮೇಲೆ ತರಬೇಕೆಂಬ ಅಂಶ ಒಂದು ದೊಡ್ಡ ಸವಾಲಾಗುತ್ತದೆ. ಇಲ್ಲಿ ನಿರ್ದೇಶಕ ಅದನ್ನು ನಿವಾರಿಸಿ ಯುದ್ಧದಲ್ಲಿ ಪಾಲ್ಗೊಂಡಿದ್ದ ಸೈನಿಕರ ಅನುಭವಗಳ ಮೂಲಕ ತೆರೆದಿಡುವ ಪ್ರಯತ್ನವನ್ನು ಮಾಡುತ್ತಾರೆ ಹಾಗೂ ಅದರಲ್ಲಿ ಯಶಸ್ವಿಯೂ ಆಗುತ್ತಾರೆ.        

ಚಿತ್ರದ ಬಗ್ಗೆ ಬರೆಯುವ ಮುನ್ನ ಈ ಚಿತ್ರದ ಮೂಲ ವಸ್ತುವಿನ ಹಿನ್ನಲೆಯನ್ನು ಬರೆಯಬೇಕಾಗುತ್ತದೆ. 1914ರಲ್ಲಿ ಇಡೀ ವಿಶ್ವವನ್ನೇ ಕರಾಳತೆಯತ್ತ ದೂಡಿದ ಮೊದಲನೆಯ ಮಹಾ ಯುದ್ಧವು ತನ್ನ ಉತ್ತುಂಗದ ಸ್ಥಿತಿಯಲ್ಲಿರುವಾಗ, ಎಲ್ಲೆಡೆ ದ್ವೇಷ ರೋಷ ಹಾಗೂ ಕಹಿ ಭಾವಗಳೇ ತಾಂಡವವಾಡುತ್ತಿರುತ್ತದೆ. ರಾಜಕೀಯ ಕಾರಣಗಳಿಂದ ಆರಂಭಗೊಂಡ ಈ ಮಹಾಯುದ್ಧದಲ್ಲಿ ಹೆಚ್ಚು ವ್ಯಯಕ್ತಿಕ ಹಾನಿಗೊಳಗಾದವರು ಯುದ್ಧಭೂಮಿಯಲ್ಲಿ ಹೋರಾಡಿದ ಸೈನಿಕರು.

ಜರ್ಮನಿ ಹಾಗೂ ಮಿತ್ರ ದೇಶಗಳ ನಡುವಿನ ಈ ಮಹಾ ಸಮರ ಎರಡೂ ಕಡೆಗಳಲ್ಲಿ ಅಪಾರ ಸಾವು ನೋವನ್ನು ತಂದಿರುತ್ತದೆ. ಆದರೂ ನಾಯಕರುಗಳ ಮನಸು ಕರಗದೆ ಸಮರ ಮುಂದುವರಿಯುತ್ತದೆ. ಬೆಲ್ಜಿಯಂ ಮೂಲಕ ಫ್ರೆಂಚ್ ನೆಲದ ಮೇಲೆ  ಆಕ್ರಮಣ ಮಾಡಿಕೊಂಡು ಬಂದ ಜರ್ಮನ್ ಸೈನ್ಯವನ್ನು ಫ್ರೆಂಚ್ ಹಾಗೂ ಬ್ರಿಟಿಷ್ ಪಡೆ ಯಶಸ್ವಿಯಾಗಿ ತಡೆದು ನಿಲ್ಲಿಸುತ್ತದೆ. ಎರಡು ಕಡೆಯ ಪಡೆಗಳು ಜಗ್ಗದೆ ತಮ್ಮ ಪಟ್ಟುಗಳನ್ನು ಸಡಲಿಸದ ಕಾರಣ ಯುದ್ಧ ಯಾವುದೇ ರೀತಿಯ ಪ್ರಗತಿ ಕಾಣದೇ ಒಂದು ಹಂತದಲ್ಲಿ ನಿಂತ ನೀರಂತೆ ಆಗುತ್ತದೆ.

ಎರಡು ಪಡೆಗಳು ಮೇಲುಗೈ ಸಾಧಿಸಲು ಸಾಧ್ಯವಾಗದೆ ಆಕ್ರಮಣವನ್ನು ಬಿಟ್ಟು ತಮ್ಮ ನೆಲೆಯನ್ನು ಕಾಪಾಡಿಕೊಳ್ಳುವ ತಂತ್ರಕ್ಕೆ ಮೊರೆ ಹೋಗಿ ಒಂದು ರೀತಿ  ಸ್ತಬ್ಧವಾದ ಸ್ಥಿತಿಯಲ್ಲಿರುತ್ತಾರೆ. ಆದರೂ ಎಚ್ಚರದ ಸ್ಥಿತಿಯಲ್ಲಿ ಎರಡೂ ಪಡೆಗಳು ತಮ್ಮ ನೆಲೆಯನ್ನು ಕಾಯುತ್ತಿರುತ್ತದೆ. ಯುದ್ಧ ಭೂಮಿಯಲ್ಲಿನ ದೊಡ್ಡ ಕಂದಕಗಳಲ್ಲಿ ನೆಲೆಸುವ ಪಡೆಗಳ ಸೈನಿಕರು ಒಂದು ರೀತಿಯ ತಾತ್ಕಾಲಿಕ ವಿಶ್ರಾಂತಿಗೆ ಮೊರೆಹೋಗುತ್ತಾರೆ. ಕಂದಕಗಳಲ್ಲಿ ತಾತ್ಕಾಲಿಕ ಗೋಡೆಗಳ ಹಿಂದೆ ಇದ್ದ ಎರಡು ಕಡೆಯ ಸೈನಿಕರು ಒಮೊಮ್ಮೆ ಬರುವ ಆಹಾರ ಪದಾರ್ಥಗಳನ್ನು ಪಡೆಯುವ ಸಮಯದಲ್ಲಿ ಒಂದು ಕಡೆ ಸೇರುತ್ತಾರೆ. ಒಂದಷ್ಟು ಮಟ್ಟಿಗೆ ಪರಿಚಯ ಮಾಡಿಕೊಂಡು ಪರಸ್ಪರ ವಿಷಯಗಳನ್ನು ವಿನಿಮಯವೂ ಮಾಡಿಕೊಳ್ಳುತ್ತಾರೆ ಆದರೆ ಯುದ್ಧ ನೀತಿ ಮಾತ್ರ ಕಠೋರ ನಿರ್ದಯವಾಗಿರುವುದರಿಂದ ತಮ್ಮ ಮೂಲಕ್ಕೆ ಮರಳುತ್ತಾರೆ.

ಹೀಗೆ ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬ ಸ್ಥಿತಿಗೆ ತಲುಪಿದ ಸಮರದ ಈ ಸಮಯದಲ್ಲಿ ಸಂಧಾನದ ಮಾತುಕತೆಗಳು ನಡೆಯುತ್ತವೆ. ಈ ರೀತಿಯ ಶಾಂತಿ ಸಂಧಾನದ ಮಾತುಕತೆಗಳು ಯಾವುದೇ ಪ್ರಯೋಜನಕ್ಕೆ ಬಾರದೆ ವಿಫಲವಾಗುತ್ತವೆ. ಅಂದಿನ ಪೋಪ್ ಬೆನೆಡಿಕ್ಟ್ XV ಕೂಡ ಪಡೆಗಳ ನಡುವಿನ ಶಾಂತಿಗೆ ಪ್ರಯತ್ನಿಸುತ್ತಾರೆ. ಕೊನೆಯ ಪಕ್ಷ ಬಾನಿನಲ್ಲಿ ದೇವದೂತರು ಹಾಡುವ ಕ್ರಿಸ್ಮಸ್ ಹಿಂದಿನ ಸಂಜೆಯಾದರೂ ಗುಂಡು ಮದ್ದುಗಳ ಶಬ್ದವಿಲ್ಲದೆ ಶಾಂತಿ ಇರಲಿ ಎಂದು ಅವರು ಕೇಳಿಕೊಂಡರೂ ಮಿಲಿಟರಿ ಮತ್ತು ರಾಜಕೀಯ ನಾಯಕರುಅದಕ್ಕೆ ಮನಸು ಕಿವಿಗೊಡದೆ ಕಠಿಣ ನಿಲುವನ್ನು ತೋರಿಸುತ್ತಾರೆ.   

ಈ ನಡುವೆ ಸೈನಿಕರು ಮಾತ್ರ ತೀರ ಆಕ್ರಮಣಶೀಲರಾಗದೆ ತಕ್ಕಮಟ್ಟಿಗಿನ ಮಾನವೀಯತೆ ಮೆರೆಯುತ್ತಾ, ಸಾಗುತ್ತಾ ತಮ್ಮ ಕುಟುಂಬಗಳನ್ನು ನೆನೆಯುತ್ತ ಕಾಲ ಕಳೆಯುತ್ತಾರೆ. ಅಲ್ಲಿ ಒಂದು ಅನಧಿಕೃತವಾದ ಸಂಧಾನವೆಂಬಂತೆ ಪ್ರತಿ ಸಂಜೆ ಸೈನಿಕರು ಸ್ವಯಂ ಯುದ್ಧ ವಿರಾಮ ಘೋಷಿಸಿಕೊಂಡು ಸತ್ತ ಸೈನಿಕರ ಸಂಸ್ಕಾರ ಹಾಗೂ ಗಾಯಾಳುಗಳನ್ನು ತಮ್ಮ ಶಿಬಿರಗಳಿಗೆ ತೆಗೆದುಕೊಂಡು ಹೋಗುವ ಶಾಂತಿಯ ಹೆಜ್ಜೆಗಳನ್ನು ಹಿಡಿಯುತ್ತಾರೆ.

ಹಾಗೆ ಶಾಂತಿಯ ಪ್ರಕ್ರಿಯೆ ಗೊತ್ತಿಲ್ಲದೆ ನಡೆದಿರುತ್ತದೆ. ಇದರ ಜೊತೆಗೆ ಸಂಗೀತವೂ ಸಹ ಈ ಪ್ರಕ್ರಿಯೆಯಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಸಂಜೆಯಲ್ಲಿ ಸೈನಿಕರು ತಮ್ಮ ನೋವು ದಣಿವನ್ನು ಮರೆಯಲು ತಮ್ಮದೇ ಆದ ರೀತಿಯಲ್ಲಿ ಹಾಡುತ್ತಾ ಕೇಕೆ ಹಾಕುತ್ತಾ, ಕೆಲವು ಸಲ ವಿರೋಧಿ ಸೈನಿಕರ ಕಾಲೆಳೆಯುತ್ತಾ ಹಾಡುಗಳನ್ನು ಹಾಡುತ್ತಿರುತ್ತಾರೆ.       

Read more!




No comments:

Post a Comment