Tuesday, 13 December 2011

ಕ್ರಿಸ್ತನಿಗೊಂದು ಪವಿತ್ರ ಗೋದಲಿಯನ್ನು ಕಟ್ಟಲು ಅನುವುಮಾಡಿಕೊಡುವ ಭಜನೆಮೇಳ..


ಪ್ರೀತಿಯ ಅನು
ಸ್ನೇಹಾಂಜಲಿ.
ಭರವಸೆ, ನಿರೀಕ್ಷೆ, ಸಿದ್ಧತೆ, ಪರಿವರ್ತನೆ, ಹೀಗೆ ಬದುಕಿನ ನಾನಾ ವರಸೆಗಳನ್ನು ಕಟ್ಟಿಕೊಡುವ ಅಗಮನಕಾಲ, ಕ್ರೈಸ್ತ ಪಂಚಾ0 ಗದಲ್ಲಿ ಕಾಣಸಿಗುವ ಒಂದು ವಿಶಿಷ್ಟ ಕಾಲ. ಕ್ರಿಸ್ತನು ಮನುಷ್ಯ ರೂಪ ತಾಳಿ ಬಂದದ್ದನ್ನು ಅರ್ಥಭರಿತವಾಗಿ ಸ್ಮರಿಸಲು ಅಣಿಮಾಡಿಕೊಡುವುದರ ಜತೆಗೆ ಕ್ರಿಸ್ತನ ಪುನರಾಗಮನದ ಪೂರ್ವಾನುಭವವನ್ನು ಉಣಬಡಿಸುತ್ತದೆ ಆಗಮನಕಾಲ. ಕ್ರಿಸ್ಮಸ್ ಎಂಬ ಪಾರಮಾರ್ಥಿಕ ಅದ್ದೂರಿಯ ಜೌತಣದ ಸಂಪೂರ್ಣ ಅನುಭೋಗಕ್ಕೆ ನಮ್ಮನ್ನು ಸಿದ್ಧಗೊಳಿಸುತ್ತಲೇ, ಕ್ರಿಸ್ತನ ಎರಡನೆಯ ಬರುವಿಕೆಯನ್ನು ಮತ್ತು ಮಾನವರನ್ನು ನ್ಯಾಯವಿಚಾರಣೆಗೆ ಗುರಿಮಾಡುವ ಅಂತಿಮ ದಿನವನ್ನು ಸಾಂಕೇತಿಕವಾಗಿ ಸ್ಪಷ್ಟಪಡಿಸುತ್ತದೆ. ಕಾರಣದಿಂದ ಆಗಮನ ಕಾಲವೆಂಬುವುದು ಜೀವಾವಧಿಯ ಕಾಲ, ಆಜೀವ ಸಿದ್ಧತೆಯ ಕಾಲವೆಂಬ ಸತ್ಯವನ್ನು ಮನಗಾಣಿಸುತ್ತದೆ
ಆಂಗ್ಲ ಭಾಷೆಯ advent season ಎಂಬುವುದನ್ನು ಕನ್ನಡದಲ್ಲಿ ಆಗಮನಕಾಲ ಎಂದು ಕರೆಯುತ್ತಾರೆ. ಮೂಲತಃ ಲ್ಯಾತಿನ್ ಪದದ ವ್ಯುತ್ಪನ್ನವಾಗಿರುವ advent ಆಗಮನ ಅಥವಾ ಬರುವುದು ಎಂಬ ಅರ್ಥಗಳನ್ನು ನೀಡುತ್ತದೆ. ಕ್ರಿಸ್ತಜಯಂತಿಯ ಪೂರ್ವಭಾವಿಯಾಗಿ ಬರುವ ಆಚರಣೆಯ ಕಾಲಾವಧಿ ಸುಮಾರು ನಾಲ್ಕು ವಾರಗಳಿಗೆ ವಿಸ್ತರಿಸಿಕೊಂಡಿದ್ದು ಡಿಸಂಬರ್ ೨೫ಕ್ಕೆ ಪೂರ್ಣ ಗೊಂಡು ಕ್ರಿಸ್ಮಸ್ ಹಬ್ಬದ ಸಂಭ್ರಮದ ಆಚರಣೆಗೆ ಮೂರ್ಹತ ಹಾಕಿಕೊಡುತ್ತದೆ. ನಾಲ್ಕುನೆ ಶತಮಾನದಲ್ಲಿ ಆಗಮನಕಾಲವನ್ನು ಉಪವಾಸ ಮತ್ತು ಪ್ರಾಯಶ್ಚಿತ ಕಾಲವಾಗಿ ಆಚರಿಸುತ್ತಿದ್ದರೆಂಬುವುದು ಚಾರಿತ್ರಿಕ ಸತ್ಯ.  ಕ್ರೈಸ್ತ ಧರ್ಮದಲ್ಲಿ ಆಗಮದಕಾಲದ ಆಚರಣೆಯು ಯಾವಾಗ ರೂಢಿಗೆ ಬಂತ್ತೆಂಬ ಪ್ರಶ್ನೆಗೆ ನಿಖರವಾದ ಉತ್ತರ ಅಲಭ್ಯವಾದರೂ ಶತಮಾನಗಳಿಂದ ಅನೇಕ ರೀತಿಯ ವೈವಿಧ್ಯಮಯ ಆಚರಣೆಗಳು/ವಿಧಿಗಳನ್ನು ಕಾಲವು ಮೈಗೂಡಿಸಿಕೊಂಡಿರುವುದು ಒಂದು ಸ್ವಾರಸ್ಯಕರ ವಿಷಯ.
ವಾಡಿಕೆಯಂತೆ ಬಡ ಮಹಿಳೆಯರು ಆಗಮನಕಾಲದ ವಿಷಯವನ್ನು ಒಕ್ಕಣಿಸುವ ಕೆಲವೊಂದು ಭಾವಚಿತ್ರಗಳನ್ನು ಮತ್ತು ಮೇರಿ ಮತ್ತು ಯೇಸುವಿನಂತೆ ಆಲಂಕರಿಸಿದ ಗೊಂಬೆಗಳನ್ನು ಹೊತ್ತು, ಮನೆ ಮನೆಗೆ ಹೋಗಿ, ಮನೆಮಂದಿಗೆಲ್ಲಾ ತೋರಿಸಿ ಅವರಿಂದ ಹಣ ಪಡೆಯುವ ರೂಢಿ ಇಗ್ಲೆಂಡ್ ದೇಶದಲ್ಲಿ ಕಾಣ ಸಿಗುತ್ತದೆ. ಗೊಂಬೆಗಳನ್ನು ಹೊತ್ತುಕೊಂಡ ಮಹಿಳೆಯರು ಕ್ರಿಸ್ಮಸ್ ಮುಂಚಿತವಾಗಿ ತಮ್ಮ ಮನೆಯ ಅಂಗಳದಲ್ಲಿ ಕಾಣಿಸಿಕೊಳ್ಳದಿದ್ದಲ್ಲಿ ಅಂತಹ ಮನೆಗಳಿಗೆ ಅಪಶಕುನ ಅಥವಾ ಅನಿಷ್ಟ ಕಟ್ಟಿಟ್ಟ ಬುತ್ತಿಯೆಂಬ ನಂಬಿಕೆಯಿದೆ
ಉಳುಮೆದಾರರು ಅಥವಾ ಕೃಷಿಕರು ತಮ್ಮ ಹೊಲಗದ್ದೆಗಳ ಸುತ್ತಾ ಗಸ್ತು ತಿರುಗುವಂತೆ, ಒಣಗಿದ ಹುಲ್ಲು ಕಡ್ಡಿಗಳ ಕಂತೆಗಳಿಗೆ ಬೆಂಕಿ ಹಚ್ಚಿ ಕೂಗಾಡಲು ಮಕ್ಕಳನ್ನು ನೇಮಿಸುತ್ತಾರಂತೆ. ಕ್ರಿಮಿಕೀಟಗಳು ಬೆಳೆಗಳನ್ನು ನಾಶಮಾಡುವುದೆಂಬ ಭಯದಿಂದ ಅವುಗಳನ್ನು ತಮ್ಮ ಹೊಲಗದ್ದೆಗಳಿಂದ ಅಟ್ಟಿಸಲು ರೀತಿಯ ವಾಡಿಕೆ ಅವರಿಗೆ ಅಂಟಿಕೊಂಡಿದೆ ಎಂಬ ವಿವರಣೆಯಿದೆ. ಇಟಲಿಯ ದೇಶದಲ್ಲಿ ಮೇರಿ ಮಾತೆಯ ಪುಣ್ಯಕ್ಷೇತ್ರಗಳ ಮುಂದೆ ಜನರು bagpipe ಎಂಬ ವಾದ್ಯಗಳನ್ನು ನುಡಿಸುತ್ತಾರಂತೆ. ಕ್ರಿಸ್ತನ ಜನನದ ನಂತರ ಅವನನ್ನು ಕಾಣಲು ಬಂದ ಕುರುಬರು bagpipe ನುಡಿಸಿ ಸಂಭ್ರಮಿಸಿದರೆಂಬ ನಂಬಿಕೆಯಿಂದ ಹುಟ್ಟಿಕೊಂಡ ಇನ್ನೊಂದು ಆಚರಣೆಯಿದು.
ನನ್ನ ಹುಟ್ಟೂರಿನಲ್ಲಿ ಆಗಮನ ಮತ್ತು ಕ್ರಿಸ್ಮಸ್ ಕಾಲಗಳೆಂದರೆ ಭಜನೆಮೇಳಗಳ ಕಾಲ. ಆಗಮನಕಾಲದ ಭಜನೆಗಳು (ಬನ್ನಿ ರಕ್ಷಕರೇ ಬನ್ನಿ ರಕ್ಷಕರೆ, ನಾವು ನಿಮ್ಮನ್ನಪೇಕ್ಷಿಸಿ ಕಾದು ಕೊಂಡಿದ್ದೇವೆ. ಬನ್ನಿ ಬನ್ನಿ...) ಕ್ರಿಸ್ತನ ಬರುವಿಕೆಯನ್ನು ಉತ್ಕಟವಾಗಿ ಆಶಿಸುವ ಜನರ ಹಂಬಲವನ್ನು ವ್ಯಕ್ತಪಡಿಸುತ್ತವೆ. ಇನ್ನೊಂದು ಕಡೆ, ಕ್ರಿಸ್ಮಸ್ ಹಬ್ಬದ ದಿನ ಮತ್ತು ನಂತರ ದಿನಗಳಲ್ಲಿ ಹಾಡಲು ವಿಶೇಷವಾಗಿ ರಚಿತಗೊಂಡ ಕ್ರಿಸ್ಮಸ್ ಭಜನೆಗಳು ಕ್ರಿಸ್ತನ ಜನನದ ಘಟನೆಯನ್ನು ಮತ್ತು ಘಟನೆಯ ಸುತ್ತ ಆವರಿಸಿಕೊಂಡಿರುವ ಇನ್ನಿತರ ಘಟನೆಗಳನ್ನು ಸ್ವಾರಸ್ಯವಾಗಿ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತವೆ. ಗೊಲ್ಲರ ಅನುಭವಕ್ಕೆ ಬರುವ ಕ್ರಿಸ್ತ ಜನನದ ವಿವರಣೆಯ ಹಾಡುಗಳಂತೂ ತುಂಬ ವಿಶೇಷವೆನ್ನಿಸುತ್ತವೆ.
ಸರಳತೆ ಸ್ಪಷ್ಟತೆಗಳಿಗೆ ಒತ್ತುಕೊಡುವ ನಿರೂಪಣ ವಿಧಾನವನ್ನು ಭಜನೆಗಳಲ್ಲಿ ಕಾಣಬಹುದು. ಭಜನೆಗಳಲ್ಲಿ ರಾಗ, ತಾಳ ಲಯಬದ್ಧವಾಗಿದ್ದು ಸರಳ ಶೈಲಿಯಲ್ಲಿ ರಚಿತವಾಗಿರುವುದರಿಂದ ಒಮ್ಮೆ ಓದಿದವರಿಗೆ ಪುನಃ ಓದಬೇಕೆಂಬ, ಓದಿದ ಮೇಲೆ ಹಾಡಬೇಕೆಂಬ, ಹಾಡಿದ ಮೇಲೆ ಅಲ್ಲಿಯ ತತ್ತ್ವಗಳನ್ನು ಅರಿಯಬೇಕೆಂಬ ಆಸಕ್ತಿ ಒಡಮೂಡದೆ ಇರುವುದಿಲ್ಲ. ದೈನಂದಿನ ಮಾತಿನ ಬಳಕೆ ಹಾಗು ಆಡುಮಾತುಗಳಲ್ಲಿ ಭಜನೆಗಳು ರಚನೆಯಾಗಿರುವುದರಿಂದ ಅವುಗಳು ವ್ಯಕ್ತಪಡಿಸುವ ಧೋರಣೆ, ಆಶಯಗಳು ಸುಲಭವಾಗಿ ಅರ್ಥವಾಗುತ್ತವೆ. ಇನ್ನೊಂದು ಕಡೆ, ಸಂವಾದದ ಧಾಟಿಯಲ್ಲಿರುವ ಅನೇಕ ಭಜನೆಗಳು ಆಶಯಗಳ ಅಭಿವ್ಯಕ್ತಿಗೆ ಅನುಕೂಲವಾಗಿದೆ. ಒಟ್ಟಿನಲ್ಲಿ, ಭಾಷೆಯ ಸಂಕೀರ್ಣತೆಯಿಂದ ದೂರವಾಗಿ ಘನವಾದ ವಿಷಯಗಳನ್ನು ತಿಳಿಗೊಳಿಸಿ ಹೇಳುವ ನಿಪುಣತೆ ಭಜನೆಗಳ ಜೀವಾಳ. ಭಜನೆಗಳ ಧಾಟಿ ಗ್ರಾಮ್ಯವಾಗಿರುವುದ್ದರಿಂದ ಹಳ್ಳಿಯ ಕ್ರೈಸ್ತರ ಮನೆ ಮನಗಳಲ್ಲಿ ಇಂದಿಗೂ ಜೀವಂತವಾಗಿ ಉಳಿದಿವೆ. ಇನ್ನೊಂದು ಕಡೆ, ಭಜನೆಗಳಲ್ಲಿರುವ ಸಾಹಿತ್ಯ ಮತ್ತು ಸಂಗೀತಗಳ ಅನ್ಯೋನ್ಯತೆ ಭಕ್ತನನ್ನು ಭಕ್ತಿಯ ಪರವಶತೆಯಲ್ಲಿ ತೇಲಿಸಿಬಿಡುತ್ತವೆ. ಕೆಲವು ಭಜನೆಗಳ ಸಂಗೀತ ಲ್ಯಾಟಿನ್, ಪ್ರೆಂಚ್ ಮೂಲವಾಗಿದ್ದು ಅವುಗಳನ್ನು ಕನ್ನಡೀಕರಿಸಿ ತಮ್ಮ ಅರಾಧನವಿಧಿಗಳಲ್ಲಿ ಉಪಯೋಗಿಸಿಕೊಂಡಿರುವುದು ಗಮನಾರ್ಹ.
ಆಗಮನಕಾಲ, ಕ್ರಿಸ್ಮಸ್ ಕಾಲ, ಪಾಸ್ಖಕಾಲ ಹೀಗೆ ಕ್ರೈಸ್ತಪೂಜಾವಿಧಿಗಳ ವಿಶೇಷ ಕಾಲಗಳಲ್ಲಿ ಮತ್ತು ವಾರದ ವಿಶೇಷ ದಿನಗಳಲ್ಲಿ ಭಜನೆ ಮೇಳಗಳು ಯಥೇಚ್ಛವಾಗಿ ಕಾಣಸಿಗುತ್ತವೆ. ಜತೆಗೆ ಊರಿನಲ್ಲಿ ಭೀಕರ ಸಮಸ್ಯೆಗಳು ತಲೆದೋರಿದಾಗ ಭಜನೆಮೇಳಗಳು ಹೆಚ್ಚಾಗಿ ನಡೆಯುವುದು ಒಂದು ಕುತೂಹಲವುಳ್ಳ ವಿಷಯವು ಹೌದು.
ಭಜನೆ ಮೇಳವನ್ನು ವ್ಯಕ್ತಿಗತ ಮತ್ತು ಸಾಮೂಹಿಕ ಎಂದು ಎರಡು ಹಂತಗಳಲ್ಲಿ ವಿಭಾಗಿಸಬಹುದು. ಗ್ರಾಮದಲ್ಲಿ ನಡೆಯುವುವ ಭಜನೆಮೇಳಗಳು ಸಾಮೂಹಿಕ ರೂಪದ್ದು, ಇಲ್ಲಿ ಹಾಡುವವರ ಸಂಖ್ಯೆಯನ್ನು ನಿರ್ದಿಷ್ಟವಾಗಿ ಹೇಳದೇ ಒಂದಕ್ಕಿಂತ ಹೆಚ್ಚು ಎನ್ನುವುದೇ ಸೂಕ್ತವೆನ್ನಿಸುತ್ತದೆ. ಏಕೆಂದರೆ ಹಲವು ಬಾರಿ ಹಾಡುವವರ ಸಂಖ್ಯೆ ೧೦ ರಿಂದ ೧೫ ಇದ್ದರೆ, ಕೆಲವೊಮ್ಮೆ ಹಾಡುವವರ ಸಂಖ್ಯೆ ೨೦ಕ್ಕಿಂತ ಅಧಿಕವಿರುತ್ತದೆ. ಸಾಮೂಹಿಕ ಭಜನೆಯಾದ್ದರಿಂದ ಹಿಮ್ಮೇಳವಿರವುದನ್ನು ಗಮನಿಸಬಹುದು. ಮುಖ್ಯ ಗಾಯಕ ಭಜನೆಯನ್ನು ಹಾಡುತ್ತಾ ಹೋದಂತೆ ಉಳಿದವರು ಅದೇ ಧಾಟಿಯಲ್ಲಿ ಅದನ್ನು ಪುನರಾವರ್ತಿಸುತ್ತಾರೆ. ಕೆಲವೊಮ್ಮೆ ಪಲ್ಲವಿಯ ಭಾಗವನ್ನು ಪುನರಾವರ್ತಿಸಿದರೆ, ಹಲವು ಸಲ ಜತೆಯಲ್ಲೇ ಇಡೀ ಹಾಡನ್ನು ಪುನರಾವರ್ತಿಸುವುದು ಕಂಡು ಬರುತ್ತದೆ. ತಾಳ, ಕಂಜ್ರಿಹಾರ್ಮೊನಿಯಂ ಹೀಗೆ ಮೊದಲಾದ ವಾದ್ಯ ವಿಶೇಷಗಳು ಇಲ್ಲಿರುತ್ತವೆ.
ಭಜನೆ ಕರ್ನಾಟಕದಾದ್ಯಂತ ಕಂಡು ಬರುವ ದೇಸಿ ಧಾರ್ಮಿಕ ಸಂಪ್ರದಾಯ. ಒಂದು ಆರಾಧನಾ ಕ್ರಮ. ಒಂದೊಂದು ಭಾಗದಲ್ಲಿ ಹಾಡುವ ಭಜನೆಗಳ ಹಿನ್ನಲೆ ಹಾಗು ಪ್ರಕಾರಗಳ ಮಟ್ಟಿಗೆ ಸ್ವಲ್ಪ ವ್ಯತ್ಯಾಸವಾದರೂ ಒಟ್ಟಾಗಿ ಮೇಳಗಳು ಒಂದಲ್ಲ ಒಂದು ರೀತಿಯಲ್ಲಿ ನಾಡಿನ ಉದ್ದಗಲಕ್ಕೂ ವ್ಯಾಪಿಸಿವೆ. ಇದು ಧರ್ಮಾತೀತ ಸಂಪ್ರದಾಯವು ಹೌದು. ಇಂತಹ ದೇಸಿಮೇಳಗಳು ಆಗಮನಕಾಲ ಮತ್ತು ಕ್ರಿಸ್ಮಸ್ ಆಚರಣೆಗಳ ಅವಿಭಾಜ್ಯವಾಗಿದ್ದು ಹೇಗೆ
 ಕೆಲ ದುಷ್ಟಾತ್ಮಗಳಿಗೆ ಮಧ್ಯಾಹ್ನ ಮತ್ತು ನಡುರಾತ್ರಿಯಲ್ಲಿ ಕಾಲರ ರೋಗವನ್ನು ಹರಡುವ ಶಕ್ತಿ ಇತ್ತಂತೆ. ರೋಗವನ್ನು ಹರಡುವ ಅಂತಹ ಭಯಾನಕ ದುಷ್ಟಆತ್ಮಗಳನ್ನು ತಮ್ಮ ಊರುಕೇರಿಗಳಿಂದ ಬೆಂಕಿ ಪಂಜು ಮತ್ತು ಸದ್ದುಗದ್ದಲ ಕೂಗಾಟಗಳಿಂದ ಬೆದರಿಸಿ ಬಡಿದೋಡಿಸಬಹುದು ಎಂಬ ನಂಬಿಕೆಯಿಂದ ಜನರು ಊರಿನ ಸುತ್ತಾ ಪಂಜು ಮತ್ತು ಗದ್ದಲಗಳಿಂದ ಗಸ್ತುಮಾಡಲು ಪ್ರಾರಂಭಿಸಿ ಕಾಲಕ್ರಮೇಣ ಅದು ಭಜನೆ ಸಂಪ್ರದಾಯವಾಗಿ ರೂಪುಗೊಂಡಿತ್ತಂತೆಕೊನೆಗೆ ೧೯ನೇ ಶತಮಾನದಲ್ಲಿ ಭಜನೆಂಬ ದೇಸಿ ಸಂಪ್ರದಾಯವು carol singing ಜತೆ ಸಮೀಕರಿಸಿಕೊಂಡ ಪ್ರತಿಫಲದಿಂದ ಕ್ರೈಸ್ತ ಭಜನೆಮೇಳಗಳು ಹುಟ್ಟಿಕೊಂಡವೆಂದು ಜಾನಪದ ತಜ್ಞ ಪಾಧರ್ ವಿನ್ಸೆಂಟ್ ವಿಲ್ಸನ್ರವರ ವಿವರಣೆ. ಭಜನೆಮೇಳಗಳು ಈಗ ಕಾಲರ ರೋಗವನ್ನು ಹರಡುವ ದುಷ್ಟಶಕ್ತಿಯನ್ನು ಓಡಿಸುವ ಕೆಲಸವನ್ನು ಬಿಟ್ಟು, ಕ್ರಿಸ್ಮ ಆಚರಣೆಗೆ ಸಿದ್ಧತೆಗೊಳಿಸುವ, ಮನಸ್ಸಿನಲ್ಲಿರುವ ದುಷ್ಟ ಶಕ್ತಿಗಳನ್ನು ಬಡಿದೋಡಿಸಿ ಕ್ರಿಸ್ತನಿಗೆ ಒಂದು ಪವಿತ್ರ ಗೋದಲಿಯನ್ನು ನಮ್ಮ ಬದುಕಿನಲು ಕಟ್ಟಲು ಅನುವುಮಾಡಿಕೊಡುವ ಸಂಪ್ರದಾಯವಾಗಿ ರೂಪುಗೊಂಡಿರುವುದು ಶ್ಲಾಘನೀಯ ವಿಷಯ. ಅನು, ಇಂತಹ ಭಜನೆಗಳನ್ನು ಕೇಳಲು ಆಸಕ್ತಿಯಿದ್ದಲ್ಲಿ ನಮ್ಮ ನಾಯಕ ಹುಟ್ಟಿದ ನೋಡಿ ಎಂಬ ದ್ವನಿಸುರುಳಿಯನ್ನು ಕೊಂಡು ಆಲಿಸು. ಧನ್ಯವಾದಗಳು
-ಜೋವಿ

Read more!

Thursday, 1 December 2011

ನೆನೆದವನ ಮನದಲ್ಲಿ…..



ಶ್ರೀ.ಇನ್ನಾಸಪ್ಪನವರು ಒಬ್ಬ ಸಾಧಾರಣ ಕ್ರೈಸ್ತರಾದರೂ, ಅವರಿಂದ ಸ್ಫೂರ್ತಿಗೊಂಡ ಅನೇಕರಲ್ಲಿ ನಾನು ಒಬ್ಬ. ಒಬ್ಬ ಸಾಮಾನ್ಯನಾಗಿ, ಇಡೀ ಒಂದು ಗ್ರಾಮದ ಆರ್ಥಿಕ, ಶೈಕ್ಷಣಿಕ ಹಾಗು ಆಧ್ಯಾತ್ಮಿಕ ಪ್ರಗತಿಗೆ ದುಡಿದು ಯಶಸ್ಸು ಪಡೆದ ಶ್ರೀಯುತರು, ಆದರ್ಶ ಕ್ರೈಸ್ತ ಜೀವನ ಸಾಧ್ಯವೆಂದು ಬಾಳಿ ತೋರಿಸಿಕೊಟ್ಟವರು. ಶ್ರೀಯುತರ ಅಧ್ಯಾತ್ಮಿಕ ಜೀವನ, ಕ್ರಿಸ್ತನ ಶುಭಸಂದೇಶವನ್ನು ಜನಮನಗಳಲ್ಲಿ ಬಿತ್ತಲು ಕೈಗೊಂಡ ಕಾರ್ಯಗಳು, ತಮ್ಮ ಜನರ ಜೀವನದಲ್ಲಿ ಕ್ರೈಸ್ತ ಧರ್ಮವನ್ನು ಪ್ರಸ್ತುತ ಪಡಿಸಿದ ರೀತಿ, ತನಗಾದ ಕ್ರಿಸಾನುಭವವನ್ನು ಇತರಿಗೆ ತಿಳಿಸಲು ಭಾರತೀಯ ಕಲಾಪ್ರಕಾರಗಳನ್ನು ಬಳಸಿಕೊಳ್ಳುವ ನಿರ್ಧಾರ ನಿಜಕ್ಕೂ ಶ್ಲಾಘನೀಯ. ಹಾರೋಬೆಲೆ ಗ್ರಾಮದಲ್ಲಿ ವಂ. ಸ್ವಾಮಿ. ಲಾಜರಸ್ರವರು ಪ್ರಾರಂಭಿಸಿದ ಯೇಸು ಕ್ರಿಸ್ತರ ಪೂಜ್ಯ ಪಾಡುಗಳ ಮಹಿಮೆಯನ್ನು ಸಂಪೂರ್ಣವಾಗಿ ಪರಿಷ್ಕರಿಸಿ ಸುಮಾರು ೮೦ ವರ್ಷಗಳ ಕಾಲ ಅದರ ನಿರ್ದೇಶಕರಾಗಿ ಮುನ್ನಡೆಸಿಕೊಂಡು ಬಂದಿದ್ದು, ಸುಮಾರು ೩೫ಕ್ಕೂ ಹೆಚ್ಚು ಬೈಬಲ್ ಆಧಾರಿತ ನಾಟಕಗಳ ರಚನೆ, ೮೦೦ಕ್ಕೂ ಹೆಚ್ಚು ಭಜನಾ ಹಾಗೂ ರಂಗ  ಗೀತೆಗಳ ರಚನೆ, ೩೦ ವರ್ಷಗಳ ಕಾಲ ಶಾಲೆಯ ಶಿಕ್ಷಕ, ಮುಖ್ಯ ಉಪಾಧ್ಯಾಯರಾಗಿ ಸೇವೆ ಹಾಗೂ ಪಂಚಾಯಿತಿ ಅಧ್ಯಕ್ಷತೆ, ಊರಿನ ಪೋಸ್ಟ್ ಮಾಸ್ಟರ್ ಒಳಗೊಂಡಂತೆ ಅನೇಕ ಜವಬ್ದಾರಿಗಳ ನಿರ್ವಹಣೆ ಹಾಗೂ ಕರ್ನಾಟಕದ ರಾಯಭಾರಿಯಾಗಿ ರೋಮ್ ದೇಶದಲ್ಲಿ ಪೋಪ್ ಜಗದ್ಗುರುಗಳ ಭೇಟಿ, ಇವು ಇವರ ಜೀವಮಾನದ ಕೆಲವು ಪ್ರಮುಖ ಸಾಧನೆಗಳಾಗಿವೆ. ಇವೆಲ್ಲವೂ ಮೇಲ್ನೋಟಕ್ಕೆ ಕೇವಲ ಸಾಮಾನ್ಯ ಜವಾಬ್ದಾರಿ ಹಾಗೂ ನಿರ್ವಹಣೆಯಂತೆ ಕಂಡರೂ ಒಬ್ಬ ಗ್ರಾಮಸ್ಥನಾಗಿ, ತುಂಬು ಪರಿವಾರದ ಯಜಮಾನನಾಗಿ  ಇತಿಮಿತಿಯ ಹಾಗೂ ಪರಿಸ್ಥಿತಿಯ ಒತ್ತಡಗಳ ನಡುವೆಯೂ ರೀತಿಯ ಸಾಧನೆಗಳ ಶಿಖರವೇರಿದ್ದು ನಿಜವಾಗಲೂ ಅದ್ಭುತವೇ ಸರಿ. ಇನ್ನಾಸಪ್ಪನವರ ಹಂತ ಹಂತದ ಬೆಳವಣಿಗೆ, ಕೊಡುಗೆ, ಜೀವನ, ಸಾಧನೆ ಹಾಗೂ ತಮ್ಮ ಸುತ್ತಮುತ್ತಲಿನ ಜನ, ಪರಿಸರ ಹಾಗೂ ಜೀವನ ಕ್ರಮಗಳ ಮೇಲೆ ಬೀರಿದ ಪ್ರಭಾವದ ಬಗ್ಗೆ ಒಂದು ವಿಹಂಗಮ ನೋಟವನ್ನು ಹಂತ ಹಂತವಾಗಿ ಪರಿಚಯಿಸುವ ಸಾಹಸವನ್ನು ಕೈಗೊಳ್ಳುವ ಯೋಜನೆ ಇದೆ. ಅವರು ನಮ್ಮನ್ನು ಆಗಲಿ ನವಂಬರ್ ೨೪ಕ್ಕೆ ೧೪ ವರ್ಷಗಳು ತುಂಬಿ ೧೫ನೇ ವರ್ಷಕ್ಕ ಕಾಲಿಟ್ಟಿದೆ. ಈ ಒಂದು ಸುಸಂದರ್ಭದಲ್ಲಿ …ಅವರ ಬಗ್ಗೆ ಬರೆದಿದ್ದ ಕೆಲವೊಂದು ಸಾಲುಗಳು..


ಮೌನದಿ ನಿಂತು ನೋಡುತ್ತೇನೆ...
ನಿನ್ನಂದ ಊರು ಪಡೆದ ಹೂಸ ಆಕಾರಗಳ 
ವಿಕಾರದೊಳಗೆ ಭಕ್ತಿ ಬಂಡಾರದ ನವ ರೂಪಗಳ
ನೆನೆಯುತ್ತಿದೆ ಮನಸು ಮನಪಲ್ಲಟದೊಳೆಗೆ ಹುದುಗಿ
ನಿನ್ನ ಸಾಮಾನ್ಯತೆಯಲ್ಲಿ ಅಸಾಮಾನ್ಯತನವ
ಕೈಯಾರೆ ಕಟ್ಟಿ ಹರಸಿದ ಮಹಿಮೆ ನಾಟಕವ..
ಸೋಲಲಿಲ್ಲ ನಿನ್ನ ಕೈಗಳು ಹತ್ತಾರು ಪುಸ್ತಕಗಳ ಕೈಬರವಣಿಗೆಗೆ,
ಆರಲಿಲ್ಲ ದನಿಯು ನೂರಾರು ಹಾಡಿನ ರಚನೆಗಳಿಗೆ..
ದಣಿಯಲಿಲ್ಲ ಕಾಲುಗಳು ಕ್ರಿಸ್ತನ ಆವಿಷ್ಕಾರ ಪಯಣದ ಮೈಲಿಗಳಿಗೆ
ಎಲ್ಲದರಲ್ಲೂ ಕ್ರಿಸ್ತನನ್ನೇ ಉಣ ಬಡಿಸುವ ತೀವ್ರತೆಯಲಿ…
ಕ್ರಿಸ್ತಾನುಭವವ ಧಾರೆಯೆರದ ಅದಮ್ಯ ಅನುಭಾವಿಯೇ
ಸುಜ್ಞಾನ ಸಂಭ್ರಮಿಸಿದ ಕಲಾಗಣಿಯೇ..
ನಿನ್ನ ನೆನೆಯುವುದಕ್ಕೂ ಪಾತ್ರನಲ್ಲವೆಂಬ..
ನಿರ್ಭಾವ ಒಸರಲ್ಲಿ
ನೆನೆಯುತ್ತಿರುವೆ ನಿನ್ನ ಸಾರ್ಥಕ ಬದುಕ
ಸ್ವಲ್ಪವಾದರೂ ಕಲಿಯುವ ಹಂಬಲದಲ್ಲಿ
ಮೌನದಿ ನಿಂತು ನೋಡುತ್ತಿದೇನೆ…

-ಜೋವಿ

Read more!

Sunday, 27 November 2011

ಕುಲಜ


Read more!
ಪ್ರೀತಿಯ ಅನುಗೆ,
ಸ್ನೇಹಾಂಜಲಿ. ಹಲವಾರು ವರ್ಷಗಳಿಂದ ಗರ್ಭಕಟ್ಟಿಕೊಂಡಿದ್ದ ಕುಲಜ ಎಂಬ ಸಣ್ಣ ಕಥೆ, ಅಕ್ಷರ ರೂಪದಲ್ಲಿ ಪ್ರಸವಗೊಂಡಿದೆ. ನನ್ನ ವೈಯಕ್ತಿಕ ಅನುಭವ ಮತ್ತು ಕಲ್ಪನ ಶಕ್ತಿಯ ಕೂಡಿನಿಂದ ಹುಟ್ಟಿದ ಕೂಸಿದು. ಈ ಕಥೆಯನು ಓದಿ ಪ್ರತಿಕ್ರಿಯಿಸುವೆ ಎಂಬ ಉನ್ನತ ಭರವಸೆಯಿಂದ … ಕಥೆಯ ಓದಿಗೆ ನಿನ್ನನ್ನು ವಿನಯದಿಂದ ಸ್ವಾಗತಿಸುತ್ತೇನೆ…. Happy reading!!

ಕುಲಜ
ಕೊಲ್ಲುವವನೇ ಮಾದಿಗ.. ಕೊಲ್ಲುವವನೇ ಮಾದಿಗ.. ಹೊಲಸು ತಿಂಬುವವನೇ ಹೊಲೆಯ,
ಹೊಲೆಯ….. ಕುಲವೇನೋ ಅವಂದಿರ ಕುಲವೇನೋ
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
ನಮ್ಮ ಕೂಡಲ ಸಂಗನ ಶರಣರೇ ಕುಲಜರು…
ಮಗಳು ಬಾಯಿಪಾಠ ಮಾಡುತ್ತಿದ್ದ ವಚನವು ಮುಂಭಾಗದ ಕೋಣೆಯಲ್ಲಿದ್ದ ರಾಜಣ್ಣ ಗೌಡ್ರಿಗೆ ಚೆನ್ನಾಗಿ ಕೇಳಿಸುತಿತ್ತು. ಅದೇ ಕೋಣೆಯ ಒಂದು ಮೂಲೆಯಲ್ಲಿ ಹೆಸರಿಗೆ ತಕ್ಕಂತೆ ಮೈ ಬಣ್ಣ ಹೊಂದಿದ್ದ ಕರಿಯ ಕೂತಿದ್ದ. ಕಾಕಿ ಚಡ್ಡಿ..ತ್ಯಾಪೆಗಳ ಅಂಗಿ…ಅವನ ವ್ಯಾಸಕ್ಕೆ ತಕ್ಕಂತಿದ್ದವು. ಗೌಡ್ರ ಮನೆಯ ಮಾಮೂಲು ಗಿರಾಕಿಯಾಗಿದ್ದ ಉಲ್ಲಾಸಪ್ಪ.. ಗೌಡ್ರ ಪಕ್ಕದಲೇ ಇದ್ದ ಕುರ್ಚಿ ಮೇಲೆ ಕುಳಿತು..ಗೌಡ್ರ ಜೊತೆಗೆ ಮಾತಿಗಿಳಿಯಲು ಯಾವುದೋ ಘನವಾದ ವಿಷಯದ ಹುಡುಕಾಟದಲ್ಲಿರುವಂತೆ ಕಂಡು ಬಂದರು. ಗೌಡ್ರ ಪಕ್ಕದ ಮನೆಯವ ಇಡೀ ಊರಿಗೆ ಕೇಳಿಸುವಂತೆ ರೇಡಿಯೋ ಹಚ್ಚಿದ್ದನು…
“ತುತ್ತು ಅನ್ನ ತಿನೋಕೆ ಬೊಗಸೆ ನೀರು ಕುಡಿಯೋಕೆ ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ” ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಹಾಡಿಗೆ ಕರಿಯ ಕೈಯಲ್ಲಿದ್ದ ಬೆಂಕೆಪೊಟ್ಟಣದ ಸಹಾಯದಿಂದ ತಾಳ ಹಾಕುತ್ತಿದ್ದ. ತಕ್ಷಣ ಎನೋ ಹೊಳ್ದದಂತೆ “ಗೌಡ್ರೆ ನಮ್ ಕೇರಿಲಿ ನೆನ್ನೆ ರಾತ್ರಿ ಅಂತೋಣಪ್ಪ ಗಂಟ್ಲು ತುಂಬಾ ಕುಡ್ದು ಸಿಕ್ಕಾಪಟ್ಟೆ ಜಗ್ಳ ಮಾಡ್ದ ಗೌಡ್ರೆ… ಎಂದು ಅಲ್ಪವಿರಾಮ ಕೊಟ್ಟು ..ಕಥೆಯನ್ನು ಇನ್ನೇನು ಮುಂದುವರಿಸಬೇಕು ಅಷ್ಟ್ರಲ್ಲಿ ಶಿವ್ ಪೂಜೆಯಲ್ಲಿ ಕರಡಿ ಬಿಟ್ಟಂತೆ ಉಲ್ಲಾಸಪ್ಪ..”ನಿಮ್ ಜಾತಿಯವ್ರೆ ಅಂಗೆ..ಯಾವಗ್ಲೂ ಹುಚ್ಚು ನಾಯಿಗಳಂಗೆ ಕಚ್ಚಾಡೋದೇ ನಿಮ್ ಕೆಲ್ಸ” ಎಂದು ಹೀಯಾಳಿಸಿ ಕಥೆ ಹೇಳುತ್ತಿದ್ದ ಕರಿಯನ ಮುಖವನ್ನು ಸಣ್ಣದಾಗಿಸಿದ.
ಆ ಅಂತೋಣಪ್ಪನ ಹೆಂಡ್ರು ಅವ್ಳಾತ್ರ ಇರೋ ಮಗುನಾ ಜನಕ್ಕೆ ತೋರ್ಸಕೊಂಡು… ಇದು ಚಿನ್ನಿದು ಮಗು ಅಂತಾ ಸಾರ್ಕೊಂಡು ಬರ್ತಾಳಂತೆ. ಅದ್ಕೆ ಚಿನ್ನಿ ಎಲ್ಲಿ ಹೂಲೆಯಾಳ ಜೊತೆ ಮಲಗಿದ್ದ ಅಂತಾ ,, ಜನರು ಆಡ್ಕೋತಾರೆ ಅಂತಾ.. ಅಂತೋಣಪ್ಪಗೆ ಚೆಂದಾಗಿ ಕುಡ್ಸಿ ಹೆಂಡ್ತಿಯ ಬಾಯಿಮುಚ್ಚಿಸೋಕೆ ಹೇಳಿ ಕಳ್ಸಿದ್ನಂತೆ” ಕಥೆ ಹೇಳಿ ಮುಗಿಸುವಷ್ಟರಲ್ಲಿ, ನಾಗಮ್ಮ ಹೋಟ್ಲಿಂದ ನಂಜುಂಡ ಬಿಸಿ ಬಿಸಿ ಕಾಫಿ ತಂದ. ಗೌಡ್ರ ಹೆಂಡ್ತಿ ಇವತ್ತು ಬೆಳ್ಳಿಗೆನೇ ಬಟ್ಟೆ ಹೊಗೆಯುವುದಕ್ಕೆ ತೊರೆಗೆ ಹೋಗಿದ್ದರಿಂದ ಗೌಡ್ರ ಮನೆಯ ಮಾಮೂಲು ಗಿರಾಕಿಗಳಿಗೆ ಗೌಡ್ರ ಮನೆಯ ಸ್ಟ್ರಾಂಗ್ ಕಾಫಿ ಕುಡಿಯುವ ಪುಣ್ಯ ತಪ್ಪಿತ್ತು.
ಬಿಸಿ ಬಿಸಿ ಕಾಫಿ ಕಂಡಾಕ್ಷಣ ಕರಿಯ …ಕೋಣೆಯ ಮೂಲೆಯಲ್ಲಿ ಪ್ರತ್ಯೇಕವಾಗಿ ಇಟ್ಟಿದ ಅಲ್ಯೂಮಿನಿಯಂ ಲೋಟವನ್ನು ಎತ್ಕೊಂಡು ತನ್ನ ಭುಜದ ಮೇಲಿದ್ದ ಹಳೇ ಟವಾಲಿನಿಂದ ಒರೆಸಿಕೊಳ್ಳುತಾ ಕಾಫಿ ಹಾಕಿಸಿಕೊಳ್ಳಲು ಅಣಿಯಾದ.
ನಂಜುಂಡ ಗೌಡ್ರುಗೆ ಹಾಗು ಉಲ್ಲಾಸಪ್ಪಗೆ ಕಾಫಿ ಕೊಟ್ಟು.. ಕರಿಯನ ಅಲ್ಯೂಮಿನಿಯಂ ಲೋಟಕ್ಕೆ ಮೇಲೆತ್ತಿ ತಂದಿದ್ದ ಲೋಟದಿಂದ ಕಾಫಿ ಸುರಿದ. ಆಷ್ಟ್ರಲಿ ಗೌಡ್ರ ಮಗಳು ಶಾಲೆಚೀಲವನ್ನು ಬೆನ್ನಿಗೆ ನೇತಾಕಿಕೊಂಡು .. ಶಾಲೆಗೆ ಹೊರಡುತ್ತಿದ್ದಂತೆ” ಮಗ ನಿಮ್ ಅಮ್ಮ ಇನ್ನೂ ತೂರೆಯಿಂದ ಬಂದಿಲ್ಲ. ಏನಾಯ್ತಂಥ ನೋಡ್ಕೋ ಬರೋಗ್, ಬೆಳ್ಗೆ ಅಷ್ಟೋತ್ಕೆ ಹೋದ್ಳು. ಇನ್ನೂ ಬಂದೇಯಿಲ್ಲ..” ಗೌಡ್ರು ಮಗಳಿಗೆ ಹೇಳುತ್ತಿದಂತೆ “ ಶಾಲೆಗೆ ಟೈಮ್ ಆಯಿತ್ತಾಪ್ಪ ಲೇಟಾದ್ರೆ ಟೀಚರ್ ಹೊಡಿತಾರೆ” ಅಂತಾ ಹೇಳಿ ಮನೆಯಿಂದ ಓಟಕಿತ್ತಳು.
“ಗೌಡ್ರೆ ನನ್ ಮಗ ಸಾಲೆಗೆ ಹೋಗ್ತಿನಿ ಅಂತಾದಾ” ಎಂದು ಕರಿಯ ಗೊಣಗಿದಾಗ, “ನಿಮ್ಮ ಕೇರಿಯವರ್ಗೆ ಶಾಲೆ ಏಕೆ ಬೇಕು ಹೇಳು… ಯಾರದಾದ್ರು ಮನೇಲ್ಲಿ ಸಂಬಳ್ಕೆ ಇರ್ಸು ಅಷ್ಟೋ ಇಷ್ಟೋ ಕೈಗೆ ಸಿಗ್ತದೆ ” ಎಂದು ಉಲ್ಲಾಸಪ್ಪ ಕರಿಯಂಗೆ ಉಚಿತ ಸಲಹೆಯನ್ನಿಟ್ಟು, ಗೌಡ್ರುಗೆ ಸಂಜೆ ಬರುವುದಾಗಿ ಹೇಳಿ, ತನ್ನ ತೋಟದ ಕಡೆ ಹೆಜ್ಜೆ ಹಾಕಿದ. ಕರಿಯ ಕೂಡ ಕೇರಿ ಕಡೆಗೆ ನಡೆದ. ಹೆಂಡ್ತಿ ಯಾಕೆ ತೊರೆಯಿಂದ ಇನ್ನೂ ಬಂದಿಲ್ಲ? ತನ್ನನೇ ಪ್ರಶ್ನೆ ಮಾಡಿಕೊಂಡ. ಪಕ್ಕದ ಮನೆಯ ರೇಡಿಯೋ ಇನ್ನೂ ಜೋರಾಗಿ ಕಿರುಚಿಕೊಳ್ಳುತ್ತಿತ್ತು.
ಯಾಕೆ ಇಷ್ಟು ಲೇಟ್? ತಲೆಕೂದಲೆಲ್ಲ ಕೆದರಿದೆ, ಬಟ್ಟೆ ಬರಿಯಲ್ಲ ಮಣ್ಣಾಗಿದೆ ಏನಾಯ್ತು? ರಾಜಪ್ಪ ಕಣ್ಣು ಬಾಯಿಬಿಟ್ಟುಕೊಂಡು ಕೇಳುತ್ತಿದಂತೆ” ತೊರೆಯಿಂದ ಬಟ್ಟೆ ಒರುವಾಗ ತಲೆಸುತ್ತಾಂಗಾಗಿ. ಬಿದ್ಬಿಟ್ಟೆ.” ಎಂದು ಹೇಳಿ ಮನೆ ಒಳ ನಡೆದಳು. “ರಾಜಪ್ಪ ಎನೋ ನೆನಸಿಕೊಂಡು ಮನೆಯ ಹೂರಗೆ ಬಂದು ನಿಂತ ಕೆಲಕ್ಷಣಗಳಲ್ಲೇ… ಕೆಲ ಜನರು ಕೆಟ್ಟ ಮಾತುಗಳಿಂದ ಬೈಯುತ್ತಾ ಹುಚ್ಚು ಕೆಂಚಣ್ಣನನ್ನು ದೊಣ್ಣೆಗಳಿಂದ ಯದ್ವಾತದ್ವಾ ಹೊಡೆಯುತ್ತಿದ್ದರು. ಹುಚ್ಚು ಕೆಂಚಣ್ಣನ ಅಸಹಾಯಕತೆಯಿಂದ ಮುಗಿಲು ಮುಟ್ಟುವಂತೆ ಕೂಗುತ್ತಿದ್ದರು ಹೂಡೆತ ನಿಲ್ಲಲಿಲ್ಲ. “ರಾಜಪ್ಪನವರೇ ಆ ಮಾದ್ಗ ಹುಚ್ಚು ಕೆಂಚಣ್ಣ ನಮ್ಮ ಬಾವಿಯಿಂದ ನೀರು ಸೇದಿ ಮೈಲಿಗೆ ಮಾಡಿದ್ದರಿಂದ ಜನರು ಅವನನ್ನು ಹಿಟಾಡಿಸಿಕೊಂಡು ಬಡಿಯುತ್ತಿದ್ದಾರೆ.. “ ಊರವ ಎಂದಾಕ್ಷಣವೇ ರಾಜಪ್ಪನವರ ಮುಖ ಕೋಪದಿಂದ ಕೆಂಡಮಂಡಲವಾಯಿತ್ತು. ಈ ಕಡೇ ಕೆಂಚಣ್ಣನ ಸ್ಥಿತಿ ಹಸಿದ ಹುಲಿಗೆ ಸಾರಗ ಸಿಕ್ಕಿದಂತಾಗಿತ್ತು. “ನಮ್ಗಿದ್ದದು ಒಂದು ಬಾವಿ, ಹಾಳಾದವ್ನೇ ಅದ್ನು ಮೈಲಿಗೆ ಮಾಡ್ಬುಟ್ಟಲೋ ನಾವು ನೀರಿಗೆ ಏನ್ಮಾಡೊದು?” ಎಂದು ಒಬ್ಬ ಕೆಂಚಣ್ಣ ಎದೆ ಮೇಲೆ ಒದ್ರೆ, ಇನ್ನೊಬ್ಬ ಊರಲ್ಲಿ ಇರೋದು ಒಂದೇ ಬೋರ್ ವೆಲ್ ಅದ್ರಲ್ಲೂ ಸರಿಯಾಗಿ ನೀರು ಬರೋಲ್ಲ.. ಒಂದು ಮೈಲಿ ದೂರ ಬೇರೆ ನಾವು ನೀರಿಗೆ ಏನ್ಮಾಡ್ಕೊಂಡು ಸಾಯೋದ್ ? ಪ್ರಶ್ನೆ ಕೇಳುತ್ತಲೇ ದೊಣ್ಣೆಯಿಂದ ತಲೆಗೆ ಬಡಿದ, ಹೀಗೆ ಜನರೆಲ್ಲಾ ಸೇರಿ ವಿಚಾರಿಸದೆ ಯದ್ವಾತದ್ವಾ ಹೊಡೆದು ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಬೀದಿಯಲ್ಲೇ ಬಿಟ್ಟು ಹೋದರು.ಅವನ ಕಪ್ಪು ಮೈ ಬಣ್ಣ ಕೆಂಪಾಗಿತ್ತು.ಮುಖ ನೋವಿನಿಂದ ಕಿವುಚಿಕೊಂಡಿತ್ತು. .. ರಸ್ತೆಯಲ್ಲಿ ಅಸಹಾಯಕತೆಯಿಂದ ಬಿದ್ದಿದ್ದ ಹುಚ್ಹು ಕೆಂಚಣ್ಣ ಕಷ್ಟದಿಂದ ಎದ್ದು.. ಮುಖ ಒರೆಸಿಕೊಳ್ಳುತ್ತಾ… “ತೊರೆಯಿಂದ ಬರುತ್ತಿದ್ದ . ಹೆಣ್ಣ್ ಮಗ್ಳುತಲೆ ತಿರುಗಿ ಬಿದ್ದರಿಂದ ನಾನು ಬಾವಿಯಿಂದ ನೀರು ಸೇದಿ..ಅವಳ್ಗಿ ನೀರು ಕುಡ್ಸಿ.. ಎಬ್ಬಿಸಿ ಕಳ್ಸಿದು ತಪ್ಪಾ?...ಎಂದು ಅಳುತ್ತಾ ತನ್ನನ್ನೇ ಕೇಳಿಕೊಳ್ಳುತ್ತಾ ಮೇಲೇಳಲು ಪ್ರಯತ್ನಿಸುತ್ತಿದಂತೆ… ಗೌಡ್ರ ಹೆಂಡತಿ ತೊಳೆದ ಬಟ್ಟೆಯನ್ನು ಒಣಗಲು ಮನೆಯ ಮುಂದಿದ್ದ ತಂತಿ ಮೇಲೆ ಹಾಕುತ್ತಾ.. ಸುತ್ತಮುತ್ತಲು ಕಣ್ಣು ಹಾಯಿಸಿ ಅಸಹಾಯಕತೆಯಲ್ಲಿ ಅಳುತ್ತಾ ಮೇಲೇಳುತ್ತಿದ್ದ ಹುಚ್ಚು ಕೆಂಚಣ್ಣನನ್ನು ಕಣ್ಣಂಚಿಂದಲ್ಲೇ ನೋಡಿ.. ಮರುಗುತ್ತಾ ಮನೆಸೇರಿಕೊಂಡಳು. ಅವನ ಮನೆಯವರು ಬಂದು ಅವನ್ನು ಬೈಯುತ್ತಾ ಕರೆದುಕೊಂಡು ಹೋದರು. ಜನರ ವರ್ತನೆ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತಾಗಿತ್ತು. ಕೆಂಚಣ್ಣಗೆ ಬಿದ್ದ ಹೊಡೆತಗಳು ಕೇವಲ ಅವನ ಕೃತ್ಯಕ್ಕೆ ಶಿಕ್ಷೆ ಮಾತ್ರ ಅಗಿರಲಿಲ್ಲ, ಊರಲಿದ್ದ ಇತರ ಹೊಲೆಯರಿಗೆ ಎಚ್ಚರಿಕೆಯ ಗಂಟೆಯಾಗಿತ್ತು.
ಮೈಲಿಗೆ ಆದ ಬಾವಿ ಪಾಳಾಯ್ತು. ಕುಡಿಯುವ ನೀರಿಗಾಗಿ ಜನರು ಊರಿನಲ್ಲಿದ್ದ ಒಂದೇ ಒಂದು ಬೋರ್ ವೆಲ್ ಮೇಲೆ ಅವಲಂಬಿತರಾದ್ದರು. ಒಂದೇ ಒಂದು ಬೋರ್ ಊರಿನ ಜನರಿಗೆ ಎಷ್ಟ ದಿನ ನೀರು ಕೊಡಲು ಸಾಧ್ಯ?. ಕೆಲವು ದಿನಗಳ ನಂತರ ಬೋರ್ ಕೂಡ ಮಿತಿಮೀರಿದ ಬಳಕೆಯಿಂದ ಕೆಟ್ಟಿತ್ತು. ಬೇಸಿಗೆಯಾದ್ದರಿಂದ ತೊರೆಯಲ್ಲಿ ಕೂಡ ನೀರು ಸುಂಡಿತ್ತು.ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಯಿತ್ತು. ಕೆಲ ಜನರು ತಮ್ಮ ತೋಟದ ಬಾವಿಗಳಿಂದ ಎತ್ತಿನಗಾಡಿಗಳ ಮೂಲಕ ದೊಡ್ಡ ದೊಡ್ಡ ಡ್ರಮ್ ಗಳಲ್ಲಿ ನೀರು ತುಂಬಿಸಿ ತರಲು ಪ್ರಾರಂಭಿಸಿದರು. ಇದೇ ಸಂದರ್ಭದಲ್ಲಿ ಊರಿನಲ್ಲಿದ್ದ ಜಾತಿವ್ಯವಸ್ಥಯ ವಿರುದ್ಧ ಗಂಟಲು ಹರಿದುಕೊಳ್ಳುವಷ್ಟು ಮಾತನಾಡುತ್ತಲೇ ಬಂದಿದ್ದ ಇಗರ್ಜಿಯ ಗುರುಗಳು ಯಾವುದೇ ರೀತಿಯ ಫಲಕಾಣದೆ ಮೌನಕ್ಕೆ ಶರಣಾಗಿದ್ದರು.
ಒಂದು ದಿನ ವಿಚಾರಣೆಗೆ ಹೂಸದಾಗಿ ನೇಮಕಗೊಂಡು ಘಟನೆಯ ಹಿನ್ನಲೆಯ ಬಗ್ಗೆ ಸಾಕಷ್ಟ ಮಾಹಿತಿ ಕಲೆಹಾಕಿದ್ದ ಯುವ ಗುರುಗಳು ಮೈಲಿಗೆಯಾಗಿದ್ದ ಬಾವಿಯಿಂದ ನೀರು ತಂದು ಉಪಯೋಗಿಸಲು ಪ್ರಾರಂಭಿಸಿದರು. ಗುರುಗಳ ಈ ರೀತಿಯ ವರ್ತನೆಯಿಂದ ದಿಗ್ಭ್ರಮೆಗೊಂಡ ಊರಿನ ಜನರು ಗುರುಗಳ ವಿರುದ್ಧ ಪಿತೂರಿ ನಡೆಸಲು ಪ್ರಾರಂಭಿಸಿದರು. ಗುರುಗಳನ್ನು ವರ್ಗಾಯಿಸಬೇಕೆಂಬ ಮನವಿಯೊಂದಿಗೆ ಊರಿನ ನಿಯೋಗವೊಂದು ಬಿಷಪ್ವರನ್ನು ವೈಯಕ್ತಿವಾಗಿ ಬೇಟಿಮಾಡಿ ಬಂದರು. ಒಂದು ದಿನ ಭಾನುವಾರದ ಬಲಿಪೂಜೆಯ ಪ್ರಬೋಧನೆಯ ಸಮಯದಲ್ಲಿ “ಮೈಲಿಗೆಯಾಗಿದ್ದ ಬಾವಿಯಿಂದ ನೀರು ತಂದು ನಾನು ಕುಡಿದರೂ ನನಗೆ ಯಾವ ರೋಗ ಬರಲಿಲ್ಲ … ಸಾಯಲಿಲ್ಲ?” ಎಂದು ಘಟನೆಯ ಬಗ್ಗೆ ಗುರುಗಳು ಹೇಳುತ್ತಿದ್ದಂತೆ.. ಊರಿನ ಕೆಲ ಹಿರಿಯರು, ಕೊನೆಯ ಭೋಜನದ ಸಮಯದಲ್ಲಿ ಗುರುದ್ರೋಹಿ ಯೂದನು ಕ್ರಿಸ್ತನನ್ನು ಬಿಟ್ಟು ಎದ್ದು ಹೊರಟು ಹೋದಂತೆ ದೇವಸ್ಥಾನದಿಂದ ಹೂರ ನಡೆಯಲು ಪ್ರಾರಂಭಿಸಿದರು!!!!!
ಜೋವಿ

Monday, 21 November 2011

ನಾವು ಏಕೆ ಬರೆಯುತ್ತೇವೆ ?

ಪ್ರೀತಿಯ ಅನುಗೆ
ಸ್ನೇಹಾಂಜಲಿ.
ನಾವು ಏಕೆ ಬರೆಯುತ್ತೇವೆ? ತಮ್ಮ ಬಿಡುವಿಲ್ಲದ ಬ್ಯುಸಿ ಲೈಪ್ ನಲ್ಲೂ ಬ್ಲಾಗ್ ಅಥವಾ ಟ್ವಿಟ್ ಮಾಡಲು celebraties ಹೇಗೂ ಸಮಯ ಹುಡುಕಿಕೊಳ್ಳುತ್ತಾರಲ್ಲ ಏಕೆ? ನೀರು, ಊಟ, ನಿದ್ದೆ,, ನಮ್ಮ ಬದುಕಿನ ಅತ್ಯಾವಶ್ಯಗಳ ಪ್ಯಾಕೇಜ್ ನಲ್ಲಿ ಬರೆಯುವುದು..ಶ್ರುತಪಡಿಸುವುದು ಕೂಡ ಒಂದಾ? ಕುವೆಂಪು ಅಷ್ಟೊಂದು ಕವಿತೆ, ಕಾದಂಬರಿಗಳನ್ನು ಏಕೆ ಬರೆದರು? ಕಾರ್ಲ್ ಮಾರ್ಕ್ಸ್ ಏಕೆ ಕ್ಯಾಪಿಟಲ್ ಎಂಬ ಗ್ರಂಥ ಬರೆದ? ಯಾವ ಶಕ್ತಿ ಯು.ಆರ್ ಅನಂತಮೂರ್ತಿಯವರ ಕೈಯಲ್ಲಿ ಹತ್ತಾರು ಭಾಷೆಗಳಿಗೆ ಅನುವಾದಗೊಂಡಿರುವ ಸಂಸ್ಕಾರ ಎಂಬ ಕಾದಂಬರಿಯನ್ನು ಬರೆಸಿತ್ತು? ಗಿರೀಶ್ ಕಾರ್ನಾಡ್ ರವರು ನಾಟಕಗಳನ್ನು ಬರೆಯಲು ಕಾರಣವೇನಿರಬಹುದು? ಪ್ರರ್ತಕರ್ತರು ದಿನಪ್ರತಿ ಅಷ್ಟೊಂದು ಬರೆದು ದಿನಪತ್ರಿಕೆಯನ್ನು ತುಂಬಿಸುತ್ತಾರಲ್ಲ.. ಕಾರಣವೇನಿರಬಹುದೆಂದು ಎಂದಾದರೂ ನಾವು ಯೋಚಿಸಿದ್ದೇವೆಯೇ? ಮೊನ್ನೆ ರಾಜಕಾರಣಿಯೊಬ್ಬರು ಪ್ರಸ್ತುತ ಸರ್ಕಾರದ ದೌರ್ಬಲ್ಯ ಭ್ರಷ್ಟತೆ ಹಾಗು ನಿಷ್ಕ್ರಿಯತೆಗಳನ್ನು ಜನರಿಗೆ ತಿಳಿಸಲು ಕವಿತೆಗಳ ಮೊರೆ ಹೋಗಿದ್ದಾರಂತೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ೨೪ ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ತಮ್ಮ ೪೦ ವರ್ಷಗಳ ಹೋರಾಟ ಬದುಕಿನ ವಿವರಗಳನ್ನು ಡೈರಿ

ಯಲ್ಲಿ ಬರೆದಿದ್ದಾರಂತೆ!
ಸರ್ಕಾರಗಳ ನಿರ್ಬಂಧವಿದ್ದರೂ ಅನೇಕರು ಸರ್ಕಾರದ ವಿರುದ್ಧ ಬರೆದು ಜೈಲು ಅಥವಾ ಗಡೀಪಾರಾದ ಅನೇಕ ಉದಾಹರಣೆಗಳು ನಮಗೆ ಇತಿಹಾಸದಲ್ಲಿ ಕಾಣಸಿಗುತ್ತವೆ. ಕೆಲವರಂತೂ ಬರೆಯುವುದಕ್ಕಾಗಿಯೇ ಮನೆ, ಆಸ್ತಿ, ಕುಟುಂಬ, ದೇಶ ಕೊನೆಗೆ ತಮ್ಮ ಪ್ರಾಣಗಳನ್ನೇ ಕಳೆದುಕೊಂಡ ಹಸಿ ಸತ್ಯ ನಮ್ಮ ಮುಂದಿದೆ. ಆದ್ದರಿಂದ ಬರೆಯುವುದು ಒಂದು ಗೀಳಾ? ಅಥವಾ ಪ್ರೊಫೆಶನಾ? ಒಡಲಾಳಿನ ಕರೆ ಅಥವಾ ಕೂಗಾ? ನಾನಾ ಕಾರಣಗಳಿಗೆ ನಾವು ಬರೆಯಬಹುದು. ಕೆಲವರಿಗೆ ಅದೊಂದು ಉದ್ಯೋಗವಾಗಿರಬಹುದು, ಇನ್ನೂ ಕೆಲವರಿಗೆ ಅನೇಕ ಹವ್ಯಾಸಗಳಲ್ಲಿ ಬರೆಯುವುದು ಒಂದು ಹವ್ಯಾಸವಾಗಿರಬಹುದು. ಮತ್ತೆ ಕೆಲವರು ತಮ್ಮ ಅಂತರಂಗದ ಭಾವನೆಗಳನ್ನು ಹೂರಹಾಕಲು ಬರವಣಿಗೆಯನ್ನು ಆಯ್ಕೆ ಮಾಡಿಕೊಂಡಿರಬಹುದು. ಕೆಲವರಿಗಂತೂ ಸಂತೋಷದ ಮೂಲ ಬುಗ್ಗೆಯೇ ಬರವಣಿಗೆಯಾಗಿರಬಹುದು. ಆದರೆ ಬರವಣಿಗೆ ಇಲ್ಲದ ಜಗತ್ತನ್ನು ಒಮ್ಮೆ ಊಹಿಸಿ ನೋಡಿ.. ಬರವಣಿಗೆ ಎಷ್ಟೂ ಅನಿವಾರ್ಯವೆಂದು ಒಡನೆ ನಮಗೆ ಗೋಚರಿಸಿಬಿಡುತ್ತದೆ.
ಜಾರ್ಜು ಅರ್ವೆಲ್ ಎಂಬುವನು ತನ್ನ ಲೇಕನದಲ್ಲಿ ನಾವು ಏಕೆ ಬರೆಯುತ್ತೇವೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ನಾಲ್ಕು ಪ್ರೇರಕ ಶಕ್ತಿಗಳನ್ನು ಪಟ್ಟಿ ಮಾಡುತ್ತಾನೆ. ಮೊದಲನೆಯದು ನಮ್ಮ ಆಹಂ; ನಾವು ಬರೆಯಲು ಅವಿರತವಾಗಿ ಪ್ರೋತ್ಸಾಹಿಸುವ ಒಂದು ಪ್ರೇರಣಾ ಶಕ್ತಿ. ನಾನು ಬುದ್ಧಿವಂತ, ನಾನು ಎಲ್ಲರ ಹೊಗಳಿಕೆಗೆ ಭಾಜನನಾಗಬೇಕು. ನನ್ನ ಬಗ್ಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಬೇಕು, ನಾನು ಸತ್ತ ನಂತರವು ಜನ ನನ್ನನ್ನು ನೆನೆದು ಹಾಡಿ ಹೊಗಳಿ ಕೊಂಡಾಡಬೇಕೆಂಬ ವೈಯಕ್ತಿಕ ಆಸೆಗಳಿಗೆ ಹಠ ಬಿದ್ದು ಬರೆಯತೊಡಗಬಹುದು. ಈ ರೀತಿಯ ಡ್ರೈವ್ ವಿಜ್ಞಾನಿಗಳಲ್ಲಿ, ವಕೀಲರಲ್ಲೂ..ವಾಣಿಜ್ಯೋದ್ಯಮಿಗಳಲ್ಲೂ ಕೆಲಸಮಾಡುತ್ತಿರುತ್ತದೆ. ಎರಡನೆಯ ಪ್ರೇರಕಾ ಶಕ್ತಿ ರಾಜಕೀಯ ಉದ್ಡೇಶ. ರಾಜಕೀಯ ಎಂಬುವುದು ಇಲ್ಲಿ ವಿಶಾಲಾರ್ಥದಲ್ಲಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಜಗತ್ತಿಗೆ ಮಾರ್ಗದರ್ಶನ ನೀಡಲು,,,ಜನರ ಕೆಲವೊಂದು ತಪ್ಪು ಸಿದ್ದಾಂತಗಳನ್ನು ತಿದ್ದಲು,.ಸಮಾಜದ ನೈತಿಕತೆಯನ್ನು ವೃದ್ಧಿಸಲು ಹೀಗೆ ನಾನಾ ಕಾರಣಗಳು ಒಬ್ಬನನ್ನು ಬರೆಯಲು ಪ್ರೋ ತ್ಸಾಹಿಸುತ್ತಿರುತ್ತವೆ. ಮೂರನೆಯ ಕಾರಣ ಐತಿಹಾಸಿಕ ಪ್ರಚೋದನೆಯಿರಬಹುದು. ನಮ್ಮ ನಡುವಿನ ಆಗುಹೋಗುಗಳನ್ನು ನೈಜತೆಯ ಕಣ್ಣುಗಳಲ್ಲಿ ನೋಡಿ ದಾಖಲಿಸಲು, ವಿಷಯಗಳ ಸತ್ಯತೆಯನ್ನು ಹೊರಹಾಕಲು ಅನ್ಯಾಯ ದಬ್ಬಾಳಿಕೆಯ ವಿರುದ್ಧ ಹೋರಾಟ ನಡೆಸಲು ಜನರು ಬರೆಯುತ್ತಿರುತ್ತಾರೆ. ಕೊನೆಯದು ಸೌಂದರ್ಯಾಸ್ವಾದಕ್ಕೆ ಸಂಬಂಧಿಸಿದ ಶಕ್ತಿ. ಜಗತ್ತಿನ ಸೌಂದರ್ಯವನ್ನು ವರ್ಣಿಸಲು, ಅಥವಾ ಸುಂದರ ಪದಗಳು ಮತ್ತು ಪದಗಳ ಜೋಡನೆಯಿಂದ ರಚನೆಗೊಂಡ ಕಥೆಗಳನಾಗಲ್ಲಿ ಅಥವಾ ಕವಿತೆಗಳನಾಗಲಿ ಇನ್ನೊಬ್ಬರಿಗೆ ತಿಳಿಸಿ ಅದರ ಸ್ವಾದವನ್ನು ಅವರು ಸಹ ಅನುಭವಿಸಲಿ ಎಂಬ ಹಂಬಲದಿಂದ ಬರೆಯುತ್ತೇವೆ. ನಮಗೆ ಅಮೂಲ್ಯವೆನ್ನಿಸುವ ಘಟನೆ ಅಥವಾ ಅನುಭವಗಳನ್ನು ಮತ್ತೊಬ್ಬರಲ್ಲಿ ಹಂಚಿಕೊಳ್ಳಲು ಸಹ ನಾವು ಬರೆಯಬೇಕಾಗುತ್ತದೆ. ಇನ್ನೊಂದು ಕಡೆ ತಮ್ಮ ಸಿದ್ದಾಂತಗಳನ್ನು promote ಮಾಡಲು, ಸರ್ಕಾರ ಅಥವಾ ರಾಜಕೀಯ ಪಕ್ಷಗಳಿಗೆ ಗುಲಾಮರಾಗಿ ಅವುಗಳನ್ನು ಸಮರ್ಥಿಸಲು, ಜನರ ಮಧ್ಯೆ ಒಡಕನ್ನು ಮೂಡಿಸಿ ಸಾಮರಸ್ಯವನ್ನು ಕೆದಡಲು, ಸಮಾಜದಲ್ಲಿ ಅಸ್ತಿತ್ವದಲ್ಲಿರುವ ವರ್ಗ, ಜಾತಿ ವ್ಯವಸ್ಥೆಗಳನ್ನು ಸಮರ್ಥಿಸಲು ಹೀಗೆ ನಾನಾ ಕಾರಣಗಳಿಗೋಸ್ಕರ ಬರೆಯುವವರನ್ನು ಸಹ ನಾವು ಕಾಣುತ್ತೇವೆ.
ಬರೆಯುವುದು ಸುಲಭದ ಮಾತಲ್ಲ. ಅದು ಒಂದು ರೀತಿ ಮಗುವಿಗೆ ಜನ್ಮ ಕೊಟ್ಟಾಗೆ. ಅದು ನಮ್ಮ ಶಕ್ತಿಯನ್ನೆಲ್ಲಾ ಹಿಂಡಿ ಹೀರಿ ಬಿಡುವ ಹೆಣಗಾಟ. ಅರ್ಥಮಾಡಿಕೊಳ್ಳಲಾಗದ, ನಿಗ್ರಹಿಸಲಾಗದ ಯಾವುದೋ ಶಕ್ತಿಯಿಂದ ಪ್ರೇರಿತಗೊಂಡವನು ಮಾತ್ರ ಈ ರೀತಿಯ ಸೆಣಸಾಟಕ್ಕೆ ಕೈಹಾಕಬಹುದು. ಕೆಲವೊಮ್ಮೆ ತಮ್ಮ ಅಭಿವ್ಯಕ್ತಿಗೆ ಸರಿಯಾದ ಪದ ಅಥವಾ ವಾಕ್ಯಗಳು ಸಿಗದೆ ನಿದ್ದೆ ಊಟ ಬಿಟ್ಟವರು ಸಹ ನಮ್ಮಲ್ಲಿದ್ದಾರೆ.
ಹೌದು, ನಮ್ಮ ಯೋಜನೆಗಳನ್ನು ಜೀವನ ಅನುಭವಗಳನ್ನು ಅನುಭವಗಳಿಂದ ಕಲಿತೆ ಪಾಠಗಳನ್ನು ಆಂತರಿಕವಾಗಿ ನಮ್ಮಲ್ಲಿ ಹಾದು ಹೋಗುವ ಭಾವನೆಗಳನ್ನು ಆಸೆಗಳನ್ನು ಮತ್ತೊಬ್ಬರ ಮೇಲಿರುವ ಪ್ರೀತಿ ಪ್ರೇಮವನ್ನು ನಾವು ನಂಬುವ ಸಿದ್ಧಾಂತಗಳನ್ನು, ಸರಿ ಅನಿಸುವ ಸಲಹೆಗಳನ್ನು… ಹೀಗೆ ಇತರರಿಗೆ ತಿಳಿಸಲು ಹಂಬಲಿಸುತ್ತೇವೆ. ಹಂಬಲ ಎಷ್ಟೇಂದರೆ ಅದೇ ಜೀವನವೆನ್ನುವ ಮಟ್ಟಿಗೆ. ಇತರರಿಗೆ ತಿಳಿಸಲು ಉಪಯೋಗಿಸುವ ಪ್ರಕಾರ, ಸಾಧನಗಳು ಅಥವಾ ಮಾಧ್ಯಮಗಳು ಯಾವುದೇ ಇರಬಹುದು ಆದರೆ share ಅಥಾವ ಹಂಚುವ ಕಾರ್ಯಮಾತ್ರ must, ಇಂತಹ ಆಸೆ ಅಭಿಲಾಸೆಯಿಂದಲೇ, ಹಂಬಲದಿಂದಲೇ ನಮ್ಮ ಜಗತ್ತಿನಲ್ಲಿ ಅನೇಕ ಲೇಖಕರು, ಶಿಲ್ಪಿಗಳು, ಸಂಗೀತ ವಿದ್ವಾನರು, ಕವಿಗಳು ಹುಟ್ಟಿಕೊಂಡಿರುವುದು. ಜತೆಗೆ ಅನೇಕ ಸೃಜನಾತ್ಮಕ ಪ್ರಕಾರಗಳು, ಸಾಧನಗಳು ರೂಪಿತಗೊಂಡಿರುವುದು. ನಮ್ಮ ಸ್ವರಚಿತ್ತಾರ ನಮ್ಮಲ್ಲಿದ್ದ ಬರೆಯುವ ಹಂಬಲದಿಂದ ಹುಟ್ಟಿಕೊಂಡ ಪುಟ್ಟ ಕೂಸು.. ನಮ್ಮ ನಿಲ್ಲುವುಗಳನ್ನು, ಕಲಿಕೆಗಳನ್ನು, ವೈಯಕ್ತಿಕ ಚಿಂತನೆಗಳನ್ನು ತಿಳಿಸುವ, ಹಂಚಿಕೊಳ್ಳುವ ಒಂದು ವೇದಿಕೆಯನ್ನು ಈ ಬ್ಲಾಗ್ ಸೃಷ್ಟಿಮಾಡಿಕೊಟ್ಟಿದಕ್ಕೆ ಧನ್ಯವಾದ ಹೇಳುತ್ತಾ ಜತೆಗೆ ಅಸತ್ಯ ಅನ್ಯಾಯ, ಜೀವವಿರೋಧಿ, ಶೋಷಣೆ ಹಾಗು ಮನುಷ್ಯನನ್ನು ತುಚ್ಛವಾಗಿ ಕಾಣುವ ಸಿದ್ದಾಂತದ ವಿರುದ್ಧ ಸಾತ್ವಿಕ ಸಿಟ್ಟಿನಿಂದ ಬರೆಯುವ ಎಲ್ಲಾ ಲೇಖಕರನ್ನು ನೆನೆಯುತ್ತಾ ಉದಾತ್ತ ಮೌಲ್ಯಗಳಿಗೆ ಬೆಲೆಕೊಟ್ಟು ಜೀವಪೂರಕ ಬರವಣಿಯ ನೀಡಿ ಮನುಷ್ಯತ್ವ ಬೆಳಗಿದ ಎಲ್ಲಾ ಬರಹಗಾರರಿಗೆ ಧನ್ಯವಾದವನ್ನು ಹೇಳುತ್ತಾ ನನ್ನ ಈ ಲೇಖನಕ್ಕೆ ಶುಭಂ ಹೇಳುತ್ತೇನೆ.
ಜೋವಿ

Thursday, 6 October 2011

ಸಣ್ಣ ಕಾರುಗಳ ಕಾರ್ಬಾರು

ಬೆಂಗಳೂರುನಂತಹ ಹಲವು ನಗರಗಳಲ್ಲಿ ಕಾರುಗಳ ಕಾರ್ಬಾರು ಹೇಳತೀರದು. ಅದರಲ್ಲೂ ಸಣ್ಣ ಸಣ್ಣ ಕಾರುಗಳ ದರ್ಬಾರು ಜೋರಾಗೇ ಇದೆ. ಸಾಮಾನ್ಯರಿಗೂ ಎಟಕುವಂತಹ ಬೆಲೆಗೆ ಕಾರುಗಳು ಲಭ್ಯವಿರುವುದು ಮಧ್ಯಮ ವರ್ಗದ ಜನರಲ್ಲಿ ಒಂದು ರೀತಿಯ ಆಸೆ, ಪುಳಕ, ಕಾರು ಕೊಂಡುಕೊಳ್ಳುವ ತುಡಿತ ಹೆಚ್ಚಾಗಲು ಕಾರಣವಾಗಿದೆ ಮತ್ತು ಅದರಲ್ಲಿ ಸಿದ್ದಿ ಪಡೆಯುತ್ತಿದ್ದಾರೆ. ಈ ಕಥಾವಸ್ತುವನ್ನು ಇಲ್ಲಿ ಒಂದು ಹಾಡಾಗಿ ಭಟ್ಟಿ ಇಳಿಸಲಾಗಿದೆ.
ಮುತ್ತಿನಹಾರ ಚಲನಚಿತ್ರದ "ಸಾರು ಸಾರು ಮಿಲ್ಟ್ರಿ ಸಾರು" ಎಂಬ ಗೀತೆ ಪರಿಚಯವಿದ್ದರೆ ಅದೇ ಲಹರಿಯಲ್ಲಿ ಹಾಡಲು ಪ್ರಯತ್ನ ಪಟ್ಟು ನೋಡಿ..

ಕಾರು ಕಾರು ಬರಿ ಕಾರು ಕಾರು
ರೋಡಿನಲ್ಲಿ ಆ ದರ್ಬಾರು
ಒಬ್ರೆ ಇರ್ಲಿ ಇಬ್ರೆ ಇರ್ಲಿ ಕಾರೇ ಬೇಕು
ಎಲ್ಲಿಂದೆಲ್‍ಗೂ ಸುತ್ತೋಕ್ ಇವ್ರ್ಗೆ ಕಾರೇ ತೇರು

Alto Santro ಕಾರು ಮಿಡ್ಲು ಕ್ಲಾಸ್‌ಗೆ ನೆಂಟ್ರೂ
ಸಣ್ ಸಣ್ಣ ರೋಡಿನಲ್ಲೂ ಒಡಾಡೊ ಸಣ್ಣ ಬ0ಟ್ರೂ..
ಆಫೀಸಿಗೂ ಔಟಿಂಗ್ಗಿಗೂ ಬೆಸ್ಟು ಕಾರು
ಸದ್ಯಕಂತು ಜೋರಾಗಿದೆ ಇವ್ರ ಕಾರುಬಾರು.

Swift ನಲ್ಲಿ ಹೋಗೋ ಮಜಾನೇ ಸೂಪರೂ
ಫ್ಯಾಮಿಲಿ ಮೆಂಬರ್ಸಿಗೆ ಆರಾಮು Wagon Rಉ..
ಹ್ಯಾಚ್ ಬ್ಯಾಕ್ ಆದ್ರೂ ಅಚ್ಕಟ್ಟಾಗಿ ಕೂರ್ ಬಹುದ್ ನೋಡಿ
ಬೆಂಗ್ಲೂರ್ನವರ್ಗೆ ಮಾಡೈತೆ ನೋಡಿ ಭಾರಿ ಮೋಡಿ.

I 10 ಅಂತೆ ಎಲ್ಲೂ ಇವರ್ದೆ ಸಂತೆ
I 20ನೇ ಇದರ ಅಣ್ಣನ0ತೆ
ನೋಡೋದಕ್ಕೂ ಅಣ್ಣ ತಮ್ಮ ಬಲು ಸುಂದರವಂತೆ
ಕಾಸಿದ್ದೋರ ಪಾಲಿಗಂತು ಬಿಸಿ ದೋಸೆಯಂತೆ...

TaTa Nano' ಹಿಂದೆ ನಾನು ನೀನು ಅಂತ
ಎಲ್ರಗೂ ಎಟುಕುವ0ತ ದುಡ್ಡಲ್ಲಿ ಸಿಗುತಂತ
ಮನೆಗೊಂದು ಕಾರು ಬಂತು ಅಂತ ಖುಷಿಯಾಗವ್ರೆ
ಜನ.... ಪಾರ್ಕಿಂಗ್ ಅಂತೂ ಪ್ರಾಬ್ಲಮ್ ಇಲ್ಲ ಅಂತ ಅವ್ರೆ

-Santhosh.I

Friday, 23 September 2011

ವಿಮೋಚನೆ..


ಹಲೋ ಅನು…
ವಿಮೋಚನೆ ಬಗ್ಗೆ ಮೂಡಿದ ಕೆಲವು ಸಾಲುಗಳು

ಬುದ್ಧ ಹೇಳಿದ,..
ಆಸೆಗಳಿಗೆ ತಳವಿಲ್ಲದಂತಾಗಲಿ
ನಿನ್ನ ಬದುಕಿನ ಪಾತ್ರೆ…
ಕಾಣುವುದು ಆಗ ಬದುಕು ವಿಮೋಚನೆಯ ಸವಿನಿದ್ರೆ

ಇನ್ನೊಬ್ಬ ಗುರು ಹೇಳಿದ,..
ಅಜ್ಞಾನದ ಕೋಣೆಯ ಬಿಟ್ಟು
ಜ್ಞಾನ ಕೋಣೆಯ ಕಡೆಗೆ ಗುರಿಯಿಟ್ಟು
ನಡೆದು ಸೇರುವುದೇ ವಿಮೋಚನೆಯ ಗುಟ್ಟು..

ವಿಮೋಚನೆಯ ಪ್ರತಿಪಾದಕ ದೈವಶಾಸ್ತ್ರಜ್ಞ ಹೇಳಿದ..
ಅಸಮಾನತೆ, ಶೋಷಣೆ ಜಗತ್ತು ಕೊನೆಗೊಂಡು
ಹೂಸ ಜಗತ್ತು ಸೃಷ್ಟಿಗೊಂಡು
ದೇವರಾಜ್ಯದ ಪ್ರತಿಬಿಂಬವಾಗುವುದೇ ವಿಮೋಚನೆಯ ಒಗಟ್ಟು..

ನಾನು ನನ್ನನೇ ಕೇಳಿದೆ…
ವಿಮೋಚನೆ ಎಂದರೇನು?
ನನ್ನ ಮರೆತು ಇನ್ನೊಬ್ಬನಿಗೆ ಸಹಾಯ ಹಸ್ತಚಾಚುವಾಗ..
ಭಯ ಮರೆತು ದಬ್ಬಾಳಿಕೆಯ ವಿರುದ್ಧ ದನಿ ಎತ್ತುವಾಗ
ಕಳವಳ ಬಿಟ್ಟು ಇನ್ನೊಬ್ಬನಲ್ಲಿ ವಿಶ್ವಾಸವಿರುಸುವಾಗ..
ಹೀಗೆ ಬದುಕಿನ ಪ್ರತಿಕ್ಷಣದ ದಂದ್ವದಲ್ಲಿ..
ಕೆಟ್ಟತನ ಬಳಲಿ ಸೋತು ತನ್ನಲ್ಲಿ
ಒಳ್ಳೆತನ ಗೆಲ್ಲುವುದೇ ವಿಮೋಚನೆ… ಅದೇ ನಿಸ್ವಾರ್ಥ.. ನ್ಯಾಯ…ವಿಶ್ವಾಸ… ಮಾನವೀಯತೆ
ಆದ್ದರಿಂದ ವಿಮೋಚನೆಂಬುವುದು….
ದೂರದ ಮಾತಲ್ಲ.. ತಲುಪುವ ಸ್ಥಳವಲ್ಲ
ಅದು ಪ್ರತಿಕ್ಷಣದ ಗೆಲ್ಲುವು..ಕ್ಷಣ ಹೆಜ್ಜೆಯ ಒಲವು…

ಜೋವಿ
Read more!

Wednesday, 3 August 2011

ಸ್ವಾತಂತ್ರ್ಯ ನಡಿಗೆಗೆ ಆದರ್ಶ ಹೆಜ್ಜೆಗಳ ಸಾರಥ್ಯ..!


              ಸುಮಾರು ಎರಡು ಸಾವಿರಕ್ಕೂ ಅಧಿಕ ಇತಿಹಾಸ ಹೊಂದಿರುವ ದೇಶಕ್ಕೆ ಈಗ 63 ನೇ ಸ್ವಾತಂತ್ರ್ಯೋತ್ಸವ. ಇದು ಯಾವ ರೀತಿಯಲ್ಲಿ ತಾಳೆ ಆದೀತು!? ದ್ವಾಪರಯುಗದ ಪುರಾಣಗಳು ನಡೆದಿರುವ ಭರತಖಂಡದಲ್ಲಿ. ಹರಪ್ಪ-ಮಹೇಂಜೋಧಾರೋ ನಾಗರಿಕತೆ ಇದ್ದ ಸಿಂಧೂಬಯಲಿನಲ್ಲಿ. ಭೂಖಂಡದಲ್ಲಿ ಅತೀಹೆಚ್ಚು ದೇವಾನುದೇವತೆಗಳಿರುವ ತವರೂರಿನಲ್ಲಿ, ಈ ಸ್ವಾತಂತ್ರ್ಯದ ಕಹಳೆ ಊದಿದ್ದು ಯಾವ ಉದ್ದೇಶಕ್ಕಾಗಿ? ಅಷ್ಟಕ್ಕೂ ಈ ಸ್ವಾತಂತ್ರ್ಯ ಅಂದರೇ ಏನು? ಎಂಬ ಗೊಜಲುಗೊಜಲು ಪ್ರಶ್ನೆಗಳಿಗೆ  ಇತಿಹಾಸ ಓದಿಕೊಂಡಿರುವ ಒಬ್ಬ ವಿಧ್ಯಾರ್ಥಿಯಿಂದ ವಿವರವಾದ ಉತ್ತರ ಸಿಗಬಹುದು!. ಆದರೆ, ಇಲ್ಲಿ "ಸ್ವಾತಂತ್ರ್ಯ" ದ ಆಂತರ್ಯ ಅಧ್ಯಯನವಾಗಬೇಕಾಗಿದೆ. ಅದು ಯಾವುದೆ ವಿಶ್ವವಿದ್ಯಾಲಯದಿಂದಾಗಲಿ, ವಿಧ್ಯಾಸಂಸ್ಥೆಗಳಿಂದಾಗಲಿ ಅಲ್ಲ. ಅದಕ್ಕೆ ಬದಲು ನಮ್ಮೊಳಗೆ, ನಮ್ಮ ನಡುವೆ, ನಮ್ಮ ವೃತ್ತಿಯಲ್ಲಿ, ನಮ್ಮಕ್ರಿಯೆಗಳಲ್ಲಿ, ನಮ್ಮಭಾವನೆಗಳಲ್ಲಿ, ಮನೆಗಳಲ್ಲಿ, ಊರಿನಲ್ಲಿ, ನಮ್ಮನ್ನಾಳುವ ನಾಯಕರುಗಳಲ್ಲಿ ಈ ಸ್ವಾತಂತ್ರ್ಯದ ಅರ್ಥ ಹುಡುಕಬೇಕಾಗಿದೆ. ಬಂಧಿತರಿಗೆ ಬಿಡುಗಡೆ, ಬಂಧನದಿಂದ ಮುಕ್ತಿ ಇಂತಹ ಹಲವು ಉಕ್ತಿಗಳು ಈ ಸ್ವಾತಂತ್ರ್ಯಕ್ಕೆ ಅರ್ಥಕೊಡಬಲ್ಲವಾದರು, ಇಲ್ಲಿ ನಾವು ಅರ್ಥೈಸಿಕೊಳ್ಳಬೇಕಾಗಿರುವುದೇ ಬೇರೆ!. ಸ್ವಾತಂತ್ರ್ಯ ಎಂಬ ಪದಕ್ಕೆ ಅರ್ಥ ಹುಡುಕುತ್ತಾ ಹೋದರೆ ಈ ರಾಜಕೀಯ ನೆಲೆಗಟ್ಟಿನಲ್ಲಿ, ಸಾಮಾಜಿಕ ನೆಲೆಗಟ್ಟಿನಲ್ಲಿ ಮಾತ್ರವಲ್ಲ ಅಧ್ಯಾತ್ಮಿಕ ನೆಲೆಗಟ್ಟಿನಲ್ಲೂ ತನ್ನ ಗಾತ್ರ ಹೆಚ್ಚಿಸಿಕೊಂಡಿರುವುದ್ದನು ನೋಡಬಹುದು.
 
          ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ  ಮಹನೀಯರನ್ನೆ ವಿಶ್ಲೇಷಿಸಿ ನೋಡುವುದಾದರೆ ಅವರಲ್ಲಿ ಅಗ್ರಗಣ್ಯರಾಗಿ ನಿಲ್ಲುವುದು ಮಹಾತ್ಮ ಗಾಂಧೀಜಿ. ಎಲ್ಲರ ಗುರಿ ಒಂದೇ ಆಗಿತ್ತು.  ಅದು ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಡುವುದು, ಆದರೆ ಅದಕ್ಕೂ ಮೊದಲು ಕೆಲವು ಸಿದ್ದಾಂತಗಳನ್ನು ರೂಢಿಸಿಕೊಂಡು ಶಿಸ್ತು, ಶ್ರಮ, ಸಂಯಮ, ಪ್ರಾಮಾಣಿಕತೆ  ಮತ್ತು ಸ್ವಾವಲಂಬನೆಯಂತಹ ಮೌಲ್ಯಧಾರಿತ ಮಾರ್ಗದಿಂದ ದೇಶದ ಬಿಡುಗಡೆಯ ಬಗ್ಗೆ ಸ್ಪಷ್ಟ ಪರಿಕಲ್ಪನೆ ಹೊಂದಿದ್ದವರು ಮಾತ್ರ ಕೇವಲ ಗಾಂಧೀಜಿ.
 
        ಇವರೊಬ್ಬ ದಿಟ್ಟ ಹೊರಟಗಾರ, ತಮ್ಮ ಹೋರಾಟದ ಅವಿಭಾಜ್ಯವಾಗಿ, ಸತ್ಯ, ನಿಷ್ಟೆ, ಅಹಿಂಸೆಯಂತಹ ಸದ್ಗುಣಗಳಿಗೆ ತಮ್ಮಲ್ಲಿ ಜಾಗಮಾಡಿಕೊಟ್ಟರು. ಅಂದರೆ ಸುಳ್ಳುಕಟ್ಟುಪಾಡುಗಳಿಂದ ಸತ್ಯಕ್ಕೆ ಸ್ವಾತಂತ್ರ್ಯ, ಒತ್ತಡ, ಸ್ವಾರ್ಥಗಳಿಂದ, ಪ್ರಾಮಾಣಿಕತೆಗೆ ಸ್ವಾತಂತ್ರ್ಯ, ಕೌರ್ಯ, ಮತ್ಸರಗಳಿಂದ, ಶಾಂತಿಗೆ ಸ್ವಾತಂತ್ರ್ಯಗಳಿಸಿಕೊಂಡರು. ಇಂತಹ ಗುಣಗಳಿಂದ ದಿಟ್ಟತನ ಬೆಳೆಸಿಕೊಂಡರು. ಇಂಥ ಗುಣಗಳನ್ನೊಂದಿರುವ ನಾಯಕನಿದ್ದರೆ ಯಾವ ಕುತಂತ್ರಿಗಳು ತಾನೆ ಎದುರು ನಿಲ್ಲಲು ಸಾಧ್ಯ. ಒಂದು ಯುದ್ಧವನ್ನು ಕತ್ತಿ ಕಠಾರಿ, ಬಾಂಬು ಬಂಧೂಕುಗಳಿಲ್ಲದೇ ಗೆದ್ದು ಬಂದ ಏಕೈಕ ವ್ಯಕ್ತಿ ಗಾಂಧೀಜಿ. ಅದು ಸಾಧ್ಯಾವಾದದ್ದು ತನ್ನೊಳಗೆ ಆದ ಸ್ವಾತಂತ್ರ್ಯದಿಂದ.  ಈ ದೇಶದ ಸಾತಂತ್ರ್ಯೋತ್ಸವ   ಸಂಭ್ರಮದ ಜೊತೆಗೆ, ಆ ಎಲ್ಲ ಆದರ್ಶ ಗುಣಗಳಿಗೂ ನಮ್ಮೊಳಗೆ ಸ್ವಾತಂತ್ರ್ಯವನ್ನು ದಕ್ಕಿಸಿಕೊಟ್ಟರೆ ಅದು ನಿಜ ಅರ್ಥದಲ್ಲಿ ಸ್ವಾತಂತ್ರ್ಯ...!
ಯೇಸು ಸಹ ತನ್ನ ಗತಕಾಲದಲ್ಲಿ ಇದೆ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದ್ದರು. ಕೇವಲ ಸಮಾಜದ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ತಮ್ಮ ಜೀವನವನ್ನು ಬಂಧಿಸಿಕೊಂಡಿದ್ದ ಜನರಿಗೆ, ಈ ಸಂಕುಚಿತ ಬದುಕಿನಿಂದ ಹೊರಬನ್ನಿ ಎಂದು ಕರೆನೀಡಿದರು. ಅಜ್ಞಾನ ಶಾಪವಲ್ಲ ಅದು ನಿಮ್ಮ ಮುಗ್ಧತನವನ್ನು ಮುಚ್ಚಿಕೊಂಡಿರುವ ಕರಿ ಕಂಬಳಿ. ಬರಿ ಕಣ್ಣಿಗೆ ಕಾಣದ ಸ್ವಾತಂತ್ರ್ಯ ಬದುಕನ್ನು ಜ್ಞಾನ ಎಂಬ ದೀವಿಗೆ ಸಹಾಯದಿಂದ ನೋಡಿ ಎಂದು ಸಾರಿದರು.
 
ಇನ್ನೇನು ಬರುವ ಸ್ವಾತಂತ್ರ್ಯ ದಿನಾಚರಣೆಯ ರಜೆಗಾಗಿ ಕಾಯುತಿದ್ದೇವೆ. ದೇಶದೆಲ್ಲೆಡೆ ಸ್ವಾತಂತ್ರ್ಯ ದಿನವನ್ನು ಆಚರಿಸುವಾಗ ಅದನು ಗಳಿಸಿಕೊಳ್ಳಲ್ಲು ಬಳಕೆಯಾದ ಮೌಲ್ಯಗಳನ್ನು ನಮ್ಮೊಳಗೆ ಆಚರಿಸೋಣ ಹಾಗೂ ಅಳವಡಿಸಿಕೊಳ್ಳೋಣ.

-ಸಂತೋಷ್ ಇಗ್ನೇಷಿಯಸ್
Read more!