Wednesday 6 February 2013

ಪೂರ್ವದಿಂದ ಬಂದ ರಾಯರು ಹಳ್ಳಿಗಳಲ್ಲೇ ಉಳಿದುಬಿಟ್ಟರು!

ಈ ಹಬ್ಬಕ್ಕೆ ಮೂರು ಅಂಶಗಳಿದ್ದರು ಮೂರು ರಾಯರದ್ದೇ ಪ್ರಧಾನ.  ಕ್ರಿಸ್ಮಸ್ ಹಬ್ಬಕ್ಕೆಂದು ಗೊದಲಿಯನ್ನು ಕಟ್ಟಿ ಮೂಲೆಯಲ್ಲಿಡುತ್ತಿದ್ದ  ೩ ರಾಯರನ್ನು ಅಂದು ತಂದು ಬಾಲಯೇಸುವಿನ ಬಳಿ ಇಡುವ ಮೂಲಕ ಇದು ಮೂರು ರಾಯರು ಸಂದರ್ಶಿಸಿದ ಹಬ್ಬವೆಂದೇ ನಮ್ಮ ಮನಗಳಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ವಿಶೇಷವೇನೆಂದರೆ ಮೂರೂರಾಯರು ಯೇಸುವನ್ನು ಸಂಧಿಸುವುದಕ್ಕೂ ಹಳ್ಳಿಗಳಲ್ಲಿ  ಆಚರಣೆಯಲ್ಲಿರುವಂತೆ ಜಾನುವಾರುಗಳನ್ನು ತೀರ್ಥದಿಂದ ಪ್ರೋಕ್ಷಿಸಿ ಆಶೀರ್ವದಿಸುವ ಅದೇ ದಿನಕ್ಕೂ ಅದ್ಯಾವ ಸಂಬಂಧ ಬೆಸೆದಿದೆಯೋ ಗೊತ್ತಿಲ್ಲ.


ದು ಜಾತ್ರೆ ಜಾತ್ರೆಯಂತಹ ಜನ ಜಂಗುಳಿ. ಊರಿಗೆ ಊರೇ ತಮ್ಮ ತಮ್ಮ ಮನೆ ಬಾಗಿಲ ಬಳಿ ನಿಂತು ತಮ್ಮ ಜಾನುವಾರುಗಳನ್ನೂ ಸಾಲಾಗಿ ನಿಲ್ಲಿಸಿ ಗುರುಗಳಿಂದ ಪ್ರೋಕ್ಷಿಸಲ್ಪಡುವ ತೀರ್ಥಕ್ಕೆ ಮೈಯೊಡ್ಡಿ ನಿಲ್ಲುವ ವಿಶ್ವಾಸನೀಯ ಗಳಿಗೆ. ಇದೊಂದು ಆಚರಣೆ ಕೂಡ. ಕೇವಲ ಹಳ್ಳಿಗಳಲ್ಲಿ ಮಾತ್ರವೇ ಕಂಡುಬರುವ ಹಬ್ಬದ ಸಂಪ್ರಾದಾಯಿಕ ಆಚರಣೆ. ಕ್ರಿಸ್ಮಸ್ ಹಬ್ಬದ ನಂತರ ಬರುವ ಮೊದಲ ವಾರ್ಷಿಕ ಹಬ್ಬ. ಇದುವೇ ಮೂರು ರಾಯರ ಹಬ್ಬ. ಕ್ರಿಸ್ತ ಜಯಂತಿಯ ೧೨ ನೇ ದಿನಕ್ಕೆ ಸರಿಯಾಗಿ ಈ ಹಬ್ಬ ಬರುತ್ತದೆಯಾದರೂ ಆ ದಿನದ ಮುಂದಿನ ಭಾನುವಾರದಂದು ಆಚರಿಸುವುದು ವಾಡಿಕೆ. ಈ ಹಬ್ಬವನ್ನು ಪೂರ್ವ ಕ್ರೈಸ್ತ ದೇಶಗಳು ಅತಿ ವಿಜ್ರಾಂಭಣೆಯಿಂದ ಆಚರಿಸುತ್ತವೆ ಎಂದು ಕೇಳಿದ್ದೇವೆ. ೩ ರಾಜರು ಪೂರ್ವದೇಶದಿಂದ ಬಂದರು ಎಂಬ ಉಲ್ಲೇಖಗಳೆ ಅದಕ್ಕೆ ಕಾರಣಗಳು ಇದ್ದಾವು. ಏನೇ ಆಗಲಿ ಇದು ಕ್ರಿಸ್ತನ ಆನೇಕ ಪ್ರಥಮಗಳ ಸಂಗಮದ ಹಬ್ಬ ಅಥವಾ ಕ್ರಿಸ್ತರು ದೈವಿಕ ಪ್ರಕೃತಿಯ ಕುರುಹುವಿನೊಂದಿಗೆ ಹಠಾತ್ ಬಹಿರಂಗಗೊಂಡ ದಿನವೆಂತಲೂ ಅರ್ಥೈಸಬಹುದು. ಅವುಗಳನ್ನು ಪಟ್ಟಿಮಾಡುವುದೇ ಆದರೆ; ಮೊದಲನೆಯದು, ಲೋಕಕ್ಕೆ ಬೆಳಕಾಗುವ ರಾಜನು ಈ ಕ್ರಿಸ್ತ ಎಂಬ ಸಂಕೇತವಾಗಿ ೩ ರಾಜರು ತಾರೆಯ ಬೆಳಕನ್ನು ಅನುಸರಿಸಿ ಬಂದು ಕ್ರಿಸ್ತನನ್ನು ಸಂಧಿಸಿ ಕ್ರಿಸ್ತನೆ ಜಗತ್ತಿನ ಮಹಾರಾಜ ಎಂದು ಪರಿಚಯಿಸಿದ ಹಬ್ಬ. ಎರಡನೆಯದು, ಯೇಸು ಸ್ನಾನಿಕ ಅರಲಪ್ಪರಿಂದ ಸ್ನಾನಾದೀಕ್ಷೆ ಪಡೆದು ತನ್ನನೇ ಲೋಕಾರ್ಪಣೆಮಾಡಿಕೊಂಡ ದಿನ. ಮೂರನೆಯದು, ಕಾನಾ ಮದುವೆಯಲ್ಲಿ ನೀರನ್ನು ದ್ರಾಕ್ಷರಸವನ್ನಾಗಿ ಪರಿವರ್ತಿಸಿ ತನ್ನ ದೈವೀ ಗುಣವನ್ನುಪ್ರಚುರಪಡಿಸಿದ ದಿನ. ಹೀಗೆ ಕ್ರಿಸ್ತನ ಮಹತ್ತರ ಪ್ರಥಮ ಹೆಜ್ಜೆಗಳ ಸಲುವಾಗಿ ಧರ್ಮಸಭೆ ಈ ಹಬ್ಬವನ್ನು ದೈವ ದರ್ಶನದ ಹಬ್ಬವನ್ನಾಗಿ ಆಚರಿಸುತ್ತದೆ. ಈ ಹಬ್ಬಕ್ಕೆ ಮೂರು ಅಂಶಗಳಿದ್ದರು ಮೂರು ರಾಯರದ್ದೇ ಪ್ರಧಾನ.  ಕ್ರಿಸ್ಮಸ್ ಹಬ್ಬಕ್ಕೆಂದು ಗೊದಲಿಯನ್ನು ಕಟ್ಟಿ ಮೂಲೆಯಲ್ಲಿಡುತ್ತಿದ್ದ  ೩ ರಾಯರನ್ನು ಅಂದು ತಂದು ಬಾಲಯೇಸುವಿನ ಬಳಿ ಇಡುವ ಮೂಲಕ ಇದು ಮೂರು ರಾಯರು ಸಂದರ್ಶಿಸಿದ ಹಬ್ಬವೆಂದೇ ನಮ್ಮ ಮನಗಳಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ವಿಶೇಷವೇನೆಂದರೆ ಮೂರೂರಾಯರು ಯೇಸುವನ್ನು ಸಂಧಿಸುವುದಕ್ಕೂ ಹಳ್ಳಿಗಳಲ್ಲಿ  ಆಚರಣೆಯಲ್ಲಿರುವಂತೆ ಜಾನುವಾರುಗಳನ್ನು ತೀರ್ಥದಿಂದ ಪ್ರೋಕ್ಷಿಸಿ ಆಶೀರ್ವದಿಸುವ ಅದೇ ದಿನಕ್ಕೂ ಅದ್ಯಾವ ಸಂಬಂಧ ಬೆಸೆದಿದೆಯೋ ಗೊತ್ತಿಲ್ಲ.. ಯೇಸು ಹುಟ್ಟಿದ್ದು ದನಕರುಗಳ ಮಧ್ಯೆ ಎಂದಾಗಲಿ ಮೂರು ರಾಯರು ಒಂಟೆಗಳ ಮೇಲೆ ಪ್ರಯಾಣಿಸಿ ಬಂದರು,  ಒಂಟೆಗಳು ನಮ್ಮಲ್ಲಿ ಇಲ್ಲದ್ದರಿಂದ ದನಕರುಗಳ ರೂಪದಲ್ಲಿ ಅವುಗಳನ್ನೂ ಆಶೀರ್ವದಿಸಲಾಗುವುದು ಎಂದಾಗಲಿ ನಮ್ಮದೇ ಕಲ್ಪನೆಯಲ್ಲಿ ಆ ಅಚರಣೆಯನ್ನು ಅರ್ಥೈಸಿಕೊಂಡಿದ್ದೇವೆ. ಈ ಕಲ್ಪನೆ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ತಿಳಿದಿಲ್ಲ. ಆದರೂ ಇದನ್ನು ಆಚರಿಸುವ ಆಸಕ್ತಿ ಮಾತ್ರ ಅಸಾಧಾರಣ.    


 
ಹಳ್ಳಿಗರಿಗೆ ವ್ಯವಸಾಯವೇ ಜೀವನಾಂಶವಾದ್ದರಿಂದ ದನಕರು ಕುರಿ ಮೇಕೆಗಳು ಅವರ ಅವಿಭಾಜ್ಯ. ವರ್ಷಕ್ಕೊಮ್ಮೆ ಅವುಗಳನ್ನು ಗೌರವಿಸಿ ಸತ್ಕರಿಸುವ ಹಬ್ಬವನ್ನು ಇನ್ನೆಷ್ಟು ಮುತುವರ್ಜಿಯಿಂದ ಮಾಡಿಯಾರು ಉಹಿಸಿ.  ಉಹಿಸುವುದೇನು? ಅಂತಹ ಪ್ರದೇಶದಿಂದ ಹುಟ್ಟಿ ಬಂದ ನನ್ನಂತವನಿಗೆ ಆ ಚಿತ್ರಣವನ್ನು ಕಟ್ಟಿಕೊಡುವುದು ಕಷ್ಟಕರವೇನಲ್ಲ. ವರ್ಷಪೂರ ಕಷ್ಟಪಟ್ಟು ಗೇಮೆ ಗೈಯುವ ಜಾನುವಾರುಗಳನ್ನು ಅಂದು ಆದಷ್ಟು ಚೆಂದವಾಗಿ ಶೃಂಗರಿಸಿ ಮೆರವಣಿಗೆಗೆ ತರಬೇಕು ಎಂದು ಎಂತಹ ಬಡವನಿಗೂ ಅನಿಸದೇ ಇರದು. ಇದು ಅವನ ಮತ್ತು ಜಾನವಾರುಗಳ ನಡುವಿನ ಭಾಂಧವ್ಯ; ಅವುಗಳ ಕೊಂಬನ್ನು ನುಣುಪಾಗಿ ಒರೆದು, ಕೊಂಬನ್ನು ಅಂದಗೊಳಿಸುವುದರಿಂದ ಆರಂಭಗೊಳ್ಳುವ ಕಾಳಜಿ, ಮನೆಮಂದಿಯೆಲ್ಲ ದನಕರುಗಳ ಒಂದಲ್ಲ ಒಂದು ಸೇವೆಗೆ ನಿಂತುಬಿಡುವಂತೆ ಮಾಡುತಿತ್ತು. ಒಬ್ಬರಿಂದ ಕೊಂಬನ್ನು ಮೊನಚುಗೊಳಿಸುವ ಮುತುವರ್ಜಿ. ಜೊತೆಯಲ್ಲೇ ಮೇವು ತಿನ್ನಿಸಿ ಹೊಟ್ಟೆ ಭರ್ತಿಮಾಡುವ ಮತ್ತೊಬ್ಬನ ಅವಸರ. ಅಳಿದುಳಿದ ಜಾಗವನ್ನು ತೊಳೆದು ಸ್ವಚ್ಚಗೊಳಿಸುವುದು ಉಳಿದೊಬ್ಬನಿಗೆ ಬಿಟ್ಟು ಕೆಲಸ. ಇದಕ್ಕೆ ಬೇಸರಿಸಿಕೊಂಡ ವರದಿಯಾಗಿಲ್ಲ. ಈ ವಿಷಯದಲ್ಲಿ "ಪಾಲಿಗೆ ಬಂದದ್ದೆ ಪಂಚ ಮೂತ್ರ".... ಪಾಪ ಅವುಗಳು ತಾನೇ  ಏನು ಮಾಡಿಯಾವು! ಅಷ್ಟು ಜನರ ಶೂಶ್ರುಷೆ ಒಟ್ಟಿಗೆ ನೋಡಿದ ಗಾಬರಿಗೆ ಆಗಾಗ ಮೂತ್ರ ಮಾಡುವುದು ಅವತ್ತಿನ ಸಾಮಾನ್ಯ. ಇದೆಲ್ಲ ಮುಗಿಯುವ ಹೊತ್ತಿಗೆ ಎಲ್ಲರೂ ದೌಡಾಯಿಸಿ ಊರಿನ ವೃತ್ತ(ಊರಿಗೆ ಇರುತ್ತಿದ್ದ ಒಂದೇ ಒಂದು Circle)ದಲ್ಲಿ ಅರವಿಕೊಂಡ ಅಂಗಡಿಗಳಿಗೆ ಮುತ್ತಿಗೆಹಾಕಿ ವ್ಯಾಪಾರಕ್ಕಿಳಿಯುವ ಜನರು, ಪರಸ್ಪರ ಏನೇನು ಅಲಂಕಾರಿಕ ವಸ್ತುಗಳನ್ನು ಕೊಂಡೆವು, ಆ ಅಂಗಡಿಯ ಬೆಲೆ ಈ ಅಂಗಡಿಯಲ್ಲಿನ ಬೆಲೆ ತಾಳೆ ಮಾಡಿ ತರುವಷ್ಟರಲ್ಲಿ ದೊಡ್ಡ ಡೀಲ್ ಮುಗಿದಂತೆ.

ಅಂಗಡಿಯವರೇನು ಸಾಮಾನ್ಯನೇ. ಬೆಲೆಗೆ ತಕ್ಕ ಸಭೂಬು ಉಚಿತವಾಗಿ ಕೊಡುತ್ತಿದ್ದ. ಇವರೆಲ್ಲರು ಅದೇ ಊರಿನವರಲ್ಲ ಅಕ್ಕ ಪಕ್ಕದ ಊರಿನಲ್ಲಿರುವ ವ್ಯಾಪಾರಸ್ಥರು. ಈ ವಾರ್ಷಿಕ ದಿನವನ್ನು ಮುಂಗಡವಾಗಿ ಗೊತ್ತುಪಡಿಸಿಕೊಂಡು ಎಲ್ಲ ಅಲಂಕಾರಿಕ ಸಾಮಾನುಗಳೊಂದಿಗೆ ಹಾಜರಾಗುತ್ತಿದ್ದರು. ರಸ್ತೆಯ ಬದಿಯಲ್ಲಿ, ಮನೆಯ ಜಗುಲಿಗಳಲ್ಲಿ ಮಾರಗಲ ಜಾಗಸಿಕ್ಕರೆ ಸಾಕು ಥೇಟ್ ಅಂಗಡಿಗಳಂತೆ ಮಾಡಿಬಿಡುತ್ತಿದ್ದರು. ಹಿಂಬದಿ ಗೋಡೆಗೆ ತರಾವರಿ ಬಣ್ಣದ ಮಾಲೆಗಳನ್ನು ನೇತುಹಾಕಿ ಅಂಗಡಿಗೊಂದು ಅಂದ ಕೊಡುತ್ತಿದ್ದರು. ತಾವು ಅರವಿಟ್ಟುಕೊಂಡ ಅಂಗಡಿಯ ಅಳತೆಗಾಗಿ ಆ ಬದಿ ಈ ಬದಿಯಲ್ಲಿ ದನಕರುಗಳಿಗೆ ಕಟ್ಟುವ ಮೂಗುದಾರಗಳು, ಕರಿಹಗ್ಗವನ್ನು ಸಿಕ್ಕಿಸಿಬಿಟ್ಟು, ತಮ್ಮ ಮುಂದೆ ವಿವಿಧ ಬಣ್ಣದ ಡಬ್ಬಗಳು, ಕುಂಚ,  ಬಲೂನು, ಚಿನಾರಿ ಕಾಗದ, ಮತ್ತು ಸೂರ್ಯಕಾಂತಿಯಂತೆ ಕಾಣುವ ಬಣ್ಣಬಣ್ಣ್ದ ವಿನ್ಯಾಸಗಳನ್ನು ಬಿಡಿಸಿಟ್ಟುಕೊಂಡು ಅಪ್ಪಂದಿ ರೊಂದಿಗೆ ಬರುವ ಮುದ್ದು ಮಕ್ಕಳನ್ನು ಆಕರ್ಷಿಸಲು ಸಣ್ಣ ಪುಟ್ಟ ಅಟಸಾಮಾನುಗಳನ್ನೂ ಇಟ್ಟುಕೊಂಡು ಗಲ್ಲಪೆಟ್ಟಿಯ ಮೇಲೆ ಕೂತುಬಿಟ್ಟರೆ ಭರ್ಜರಿ ವ್ಯಾಪಾರ ಶುರು. ಬಂದ ಅಷ್ಟು ಜನರ ಗುಂಪನ್ನು ಒಮ್ಮೆಲೇ ನಿಭಾಯಿಸಿ ಎಲ್ಲರಿಗೂ ಸಂಯಮ ದಿಂದ ಉತ್ತರಿಸಿ ವ್ಯವಹರಿಸುವ ಜಾಣ್ಮೆ ಈ ಶೆಟ್ಟರುಗಳಿಗೆ ಮಾತ್ರವೇ ಬಂದ ಜನ್ಮತ ಕಲೆ ಎಂದು ಭಾವಿಸುತ್ತೇನೆ.  ಇನ್ನೂ ಮುಂದಿನ ದೇನಿದ್ದರೂ ಆ ಊರಿನ ಸ್ಪರ್ಧಾ ಜಗತ್ತು.

ಊರಿಗೆ ಊರೇ ತಮ್ಮ ಮನೆಗಳ ಮುಂದೆ ದನಕರುಗಳ ಸಿಂಗಾರ  ಕಾರ್ಯದಲ್ಲಿ ನಿರುತರಾಗಿದ್ದರೆ, ಆಟವಾಡುವ ಮಕ್ಕಳ ಒಂದು ದಂಡು ಬೀದಿ ಬೀದಿ ಬೇಟಿಕೊಟ್ಟು ಯಾರ ಕೈಂಕರ್ಯ ಹೆಚ್ಚು ಎಂದು ಅಂದಾಜಿಸಿ ಬರುತ್ತಿದ್ದರು. ಕೆಲವರಂತೂ ಮನೆಯ ಒಳ ಹಿತ್ತಲಿನಲ್ಲೇ ಹಸುಗಳನ್ನು ಸಿಂಗರಿಸುತ್ತಿದ್ದರು. ಏಕೆಂದರೆ ಇಂತಹ ದಂಡಿನಲ್ಲಿ ಎದುರಾಳಿಯ ಮಕ್ಕಳೇನಾದರೂ ಬಂದು ನೋಡಿಬಿಟ್ಟಾರು ಎಂಬ ಭಯ. ಅದು ಸ್ಪರ್ಧೆಯ ಮೊದಲೇ ಗುಟ್ಟು ಬಿಟ್ಟುಕೊಡದ ಗಟ್ಟಿ ನಿರ್ಧಾರ. ಒಟ್ಟಾರೆ ಆ ಘಳಿಗೆಯವರೆಗೂ ಸಸ್ಪೆನ್ಸ್. ಅನಂತರದ ತೋರಿಕೆಯೇ ಬೇರೆ. ಅವರದು ಹೀಗಿತ್ತು, ಅವರದು ಹಾಗಿತ್ತು, ಇವರದ್ದು ಎಲ್ಲರಿಗಿಂತಲೂ ಜೋರಾಗಿತ್ತು ಎಂಬ ಊರವರ ಪ್ರಶಂಸೆಯನ್ನು ವಾರಗಟ್ಟಲೇ ಕೇಳುವ ಭಾಗ್ಯಕ್ಕೆ ತಾವು ಪಾತ್ರರಾಗಬೇಕು ಎಂಬುದೇ ಮೂಲ ಆಸೆ. ಸಾಕಷ್ಟು ಶಕ್ತಿಮೀರಿ ಇರುವ ಐಡಿಯಾನೆಲ್ಲ ಬಳಸಿ ಸಿದ್ದತೆಯಲ್ಲಿ ತೊಡಗುತ್ತಿದ್ದರು. ಸಮಯ ಮೀರಿತೆನೋ ಎಂಬ ಗಗಾಬರಿಗೆ ಕೊನೆಗಳಿಗೆಯಲ್ಲಿ ಕಟ್ಟುತ್ತಿದ್ದ ಬಲೂನು, ಪೇಪರ್ ಮಾಲೆಗಳು ಆಕಾರ ಕಳೆದುಕೊಂಡು ಆಭಾಸ ಎನಿಸಿದರೂ "ಎಲ್ಲರ ಮನೆ ದೋಸೆನೂ ತೂತೆ" ಎಂಬ ಗಾದೆ ಇದ್ದೇ ಇದೆಯಲ್ಲ.. 

ಸಂಜೆ ಆಗುತ್ತಿದ್ದಂತೆ ಸರಿಯಾಗಿ ೪ ಕ್ಕೆ ದೇವಾಲಯದ ಗಂಟೆ ಬಾರಿಸುವುದರೊಂದಿಗೆ ಹಬ್ಬ, ಜಾತ್ರೆ, ಸ್ಪರ್ಧೆ, ಸಾಹಸದ ನಾಡಿಮಿಡಿತ ಹೆಚ್ಚಾಗುವುದು. ಊರಿನ ಎಲ್ಲ ದನಕರುಗಳು ಬಂದು ರಸ್ತೆಯುದ್ದಕ್ಕೂ ಸಾಲಾಗಿ ನಿಂತು ಗುರುವಿನ ಬರುವಿಕೆಗೆ ಕಾಯುವ ಸರಧಿ. ರಸ್ತೆಯ ಆಜುಬಾಜಿನಲ್ಲಿ ನಿಲ್ಲುವ ಜಾನುವಾರುಗಳ ಸೌಂದರ್ಯದ ಲೆಕ್ಕಾಚಾರ ಆಗ ಶುರು. ತಮ್ಮ ಇಡೀ ದಿನದ ಶ್ರಮಾದಾನ ಇಲ್ಲಿ ಪ್ರದರ್ಶನಕ್ಕಿಡಬೇಕಾಗಿತ್ತು. ದನಗಳನ್ನು ಮಾತನಾಡಿಸುವ ಶಬ್ಧಗಳಿಂದ ನೆರೆದ ಜನರ ಗಮನವನ್ನು ತಮ್ಮ ಸಿಂಗಾರಗೊಂಡ ಎತ್ತುಗಳ ಮೇಲೆ ಸೆಳೆಯುವ ಮಂತ್ರ. ಬಲ್ಲವರಿಗೆ ಗೊತ್ತು ಅವರ ತಂತ್ರ. ನೆರೆದವರೆಲ್ಲರೂ ಒಂದೇ ಕಡೆ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳಿ, ಅಲ್ಲಾವುದೋ ಒಂದು ಬೆದರಿದ ಎತ್ತು ಗುಂಪನ್ನು ಚದುರಿಸಿ ಧೂಳೆಬ್ಬಿಸಿರುವುದು ಖಾತ್ರಿ. ಅದನ್ನು ಹಿಡಿದು ಹತೋಟಿಗೆ ತರುವಂತಹ ಸಾಹಸಮಯ ಪಟ್ಟುಗಳನ್ನು ಯುವಕರು ಮಾಡುತಿದ್ದರು. ಮಾಡಿ ಬೀಗುತ್ತಿದ್ದರು. ಆ ಹುಡುಗರು ಕಟ್ಟಿಕೊಳ್ಳುವ ಹೆಣೈಕಳು ಅತ್ತ ಸುಳಿದಾಡಿದರೋ ಆ ಪಟ್ಟುಗಳು ಇನಷ್ಟು ಖಚಿತ. ಇದು ಹಸು-ಎತ್ತುಗಳ ಕಥೆಯಾದರೆ, ಕುರಿಮೇಕೆಗಳನ್ನು ಕಟ್ಟಿಕೊಂಡವರ ಕಥೆನೆ ಬೇರೆ. ಕುರಿ ಮೇಕೆಗಳು ಒಂದುಕಡೆ ನಿಲ್ಲುವ ಜಾತಿಯವಲ್ಲ. ಗುರುಗಳು ಬಂದು ಹೋಗುವವರೆಗೆ ಅವುಗಳನ್ನು ನಿಭಾಯಿಸುವ ಸಾಹಸ ಸವಾಲಿನ ಕೆಲಸ. ತೀರ್ಥ ಪ್ರೋಕ್ಷಣೆ ಮುಗಿದ ಮೇಲೆ ವಾಪಾಸು ಮನೆ ಸೇರುವ ಗೊಂದಲದಲ್ಲಿ ಯಾರದೋ ಕುರಿ ಮತ್ಯಾರದೋ ಕುರಿ ಮಂದೆಯೊಂದಿಗೆ ಸೇರಿ  ತಪ್ಪಿಸಿಕೊಂಡಿರುತ್ತಿತ್ತು. ಅದನ್ನು ಹುಡುಕಿ ಎಳೆತರುವುದರೊಳಗೆ ಮೂರು ರಾಯರು ಸವೆದ ದಾರಿ, ದುಗುಡ ಎಲ್ಲ ಪರಿಚಯವಾಗಿಬಿಟ್ಟಿರುತ್ತದೆ. ಈ ಎಲ್ಲ ಸಂದಣೀಯ ಮದ್ಯೆ ಎಮ್ಮೆಗಳ ದಂಡು ಬಂದು ಊರಿನ ಪ್ರಮುಖ ವೃತ್ತದ ಸುತ್ತ ನಿಂತು ಅರಚುತಿದ್ದರೆ ಯಮಧರ್ಮನಿಗೆ ಕೇಳಿಸದೇ ಇದ್ದಿತೇ?. ಅವನ ಪ್ರತಿನಿಧಿಯಾಗಿ ಎಮ್ಮೆಕಾಯುವ ಹುಡುಗ ಎಮ್ಮೆಯ ಮೇಲೇ ಕೂತು ಅವುಗಳನ್ನು ಸಮಾದಾನ ಪಡಿಸುವ ವಿದಿಯೇ ಯಮಯಾತನೆ. ಆದರೂ ಬೇಸರಿಸದ ಅವನು ಎಮ್ಮೆಗಳಂತೆ ನಿಧಾನವಾಗಿ ಬಂದ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದ. ಎಮ್ಮೆಗಳೆನು ಉಚಿತವಾಗಿ ಬಂದು ಹೋಗುವಂತವಲ್ಲ. ಇಡೀ ಊರನ್ನು ಗುಡಿಸಿ ಸಾರಿಸುವಷ್ಟು ಸಗಣಿ ಬಿಟ್ಟುಹೋಗುತ್ತಿದ್ದವು. ಈ ಹಬ್ಬಕ್ಕೆ ಅವುಗಳ ಬಳುವಳಿ ಅದು.

ಈ ಶೋ ನ ಕಡೆಗೆ ನಡೆಯುತ್ತಿದುದೆ 'ಹೋರಿ' ಆಟ. ಅದು ಒಂಟಿ. ಒಂಟಿ ಸಲಗವೇ ಸರಿ!. ಅದರ ನೋಟ ಭಯಂಕರ. ಹೋರಿಯನ್ನು ಎಡ ಮತ್ತು ಬಲ ಎರಡು ಕಡೆ ಮೂಗುದಾರಕ್ಕೆ ಕಟ್ಟಿ ದಾರ ಹಿಡಿದ ಇಬ್ಬರ ನಡುವೆ ಬರುತ್ತಿದ್ದರೆ, ನೋಡಲು ನಿಂತ ಜನ ಹೆದರಿ ಓಡಿಹೊಗುತ್ತಿದರು. ಕಟ್ಟುಮಸ್ತಾದ ಮೈಕಟ್ಟು, ಬಿರ್ಗಣ್ಣಿನ ನೋಟ , ಊರಿನ ಎಲ್ಲ ಜಾನುವಾರುಗಳು ಆಲಂಕಾರಗೊಂಡು ಹಬ್ಬ ಆಚರಿಸಿದರೆ, ಹೋರಿ ಮಾತ್ರ ಚೂಪಾದ ತನ್ನ ಒಂದು ಕೊಂಬಿನ ತುದಿಗೆ ಕೇವಲ ನಿಂಬೆಹಣ್ಣನ್ನು ಸಿಕ್ಕಿಸಿಕೊಂಡು ಠೀವಿಯಿಂದ ಬರುವುದೇ ಅದಕ್ಕೆ ಅಲಂಕಾರ ಮತ್ತು ಅದರ ಅಹಂಕಾರ. ಹೆಚ್ಚೆಂದರೆ ಕತ್ತಿಗೊಂದು ಹಾರ. ಕುಸ್ತಿ ಅಂಕಣದತ್ತ ಜಟ್ಟಿಯನ್ನು ಕರೆತರುವಂತೆ ಬಾಸವಾಗುತ್ತಿತ್ತು. ಇದಕ್ಕೆ ತದ್ವಿರುದ್ಧ ನೋಡಿ ಜೋಡಿ ಎತ್ತುಗಳ ಆಟ. ಹೆಥೆಚ್ಚವಾಗಿ ಖರ್ಚುಮಾಡಿ ಸಿಂಗಾರಗೊಂಡಿರುತ್ತವೆ. ಅವು ಮೈಬೆನ್ನ ಮೇಲೆ ಕುಪುಸ ಹೊದ್ದು, ಕಾಲ್ಗೆಜ್ಜೆಗಳನ್ನು ಕಟ್ಟಿಕೊಂಡು, ಕಟ್ಟಿಗೆ ಕೊರಳ್ಗೆಜ್ಜೆ, ಸರ ಹಾಕಿಕೊಂಡು ಯಕ್ಷಗಾನ ಆಡುವವರಂತೆ ಹೆಜ್ಜೆಗಳನ್ನಾಕುತಾ ಬರುವ ಪರಿಯೇ ಪರಮಾನಂದ. ಥೇಟ್ ಪ್ಯಾಶನ್ ಶೋ. ವ್ಯಾಪಾರೀ ಶೆಟ್ಟರ ಊಟ್ಟಕ್ಕೆ ಪಾಯಸ, ಪಲ್ಯ ಆದವರೆ ಈ ಎತ್ತುಗಳ ಧಣಿಗಳು. ಇಲ್ಲಿಗೆ ಆಟ ಮುಗಿಯಿತು ಅಂದುಕೊಳ್ಳುತ್ತೇವೆ, ಆದರೆ ಕ್ಲೈಮಾಕ್ಸ್ ಬೇರೆನೆ ಇದೆ. ಅದೇನೆಂದರೆ, ಎಲ್ಲವನ್ನು ನೋಡಿ ಉನ್ಮಾದಗೊಂಡ ಕೆಲವು ಕುಡುಕ ಮಹಾಶಯರು ಸಿಕ್ಕ ಬೀದಿ ನಾಯಿಯೋ, ಸಾಕಿದ ಬೆಕ್ಕಿಗೋ ಅಲ್ಲಿ ಇಲ್ಲಿ ಉದುರಿ ಬಿದಿದ್ದ ಬಲೂನು, ಪೇಪರ್ ಅನ್ನು ಕಟ್ಟಿ ಗುರುಗಳ ಬಳಿ ಎಳೆದುತಂದು ಇವಕ್ಕೂ ನೀವು ತೀರ್ಥ ಪ್ರೋಕ್ಷಿಸಬೇಕೆಂದು ಆಗ್ರಹಿಸಿ, ನಾಯಿ ಜೊತೆ ತಾನು ಮಂಡಿಯೂರಿ ಆಶೀರ್ವಾದ ಪಡೆದು ಖುಷಿಪಡುತ್ತಿದ್ದರು. ಅಲ್ಲಿಗೆ ಎಲ್ಲವೂ ಶುಭಂ.!

-ಸಂತೋಷ್ ಇಗ್ನೇಷಿಯಸ್ 

1 comment:

  1. ಚಿಕ್ಕಂದಿನಲ್ಲಿ ನೋಡಿದ್ದ ಆ ದೃಶ್ಯಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿವೆ. ನಿಮ್ಮ ಲೇಖನ ಅದನ್ನು ಇನ್ನಷ್ಟು ಹೊಳಪು ಮಾಡಿತು. ಇದರ ಚಿತ್ರಗಳೇನಾದರೂ ಇವೆಯೇ?

    ReplyDelete