Wednesday 6 February 2013

ಕಸವೆಂಬ ನಿತ್ಯ ಸತ್ಯ


ಕಸದಿಂದ ರಸ ಎಂಬದು ಹಳೆಯ ಮಾತು.  ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ತಲೆದೋರಿದ ಈ ಕಸದ ಸಮಸ್ಯೆ ನಿಜಕ್ಕೂ ಎಲ್ಲರ ತಲೆ ಕೆಡಿಸಿತು.ಮೂಗಗಳನ್ನು ಸಹಾ. ಈ ಸಮಯದಲ್ಲಿ ಈ ರಸ್ತೆಯಲ್ಲಿ ಉಳಿದು ಬಿದ್ದಿದ್ದ ಕಸದಿಂದ ಉಕ್ಕಿದ ರಸಗಳು ಅನೇಕ. ರಸ್ತೆಯ ಅರ್ಧ ಭಾಗಕ್ಕೆ ಹರಡಿಕೊಂಡಿದ್ದ ಕಸದ ನಡುವೆ ನಡೆದೋ ವಾಹನಗಳಲ್ಲಿ ಹೋಗುತ್ತಿದ್ದ ಜನರು, 
ತಮ್ಮ ಮೂಗುಗಳನ್ನು ಮುಚ್ಚಿಕೊಂಡು, ಕಸವನ್ನು ದಾಟಿ, ಒಮ್ಮೊಮ್ಮೆ ಹಾರಿ, ಕೆಲವೊಮ್ಮೆ ಜಾರಿ ಮುಂದೆ ಹೋಗುತ್ತಿದ್ದದ್ದನ್ನು ನೋಡಿದಾಗ ಎಂಥವರಿಗೂ ಕರುಣಾ ರಸ ಉಕ್ಕಿ ಬರುತ್ತಿತ್ತು. ಇನ್ನು ಹಾರಲು ಆಗದೆ,  ಜಾರಲೂ ಒಪ್ಪದೇ ಕಸದ ಮೇಲೇ ನಡೆದುಕೊಂಡು ಹೋಗಬೇಕಾದವರ ಮುಖದಲ್ಲಿ  ಕಾಣುತ್ತಿದ್ದ ಕೋಪವನ್ನು ಕಂಡಾಗ ರೌದ್ರ ರಸದ ನೆನಪು ಬೇಡವೆಂದರೂ 
ಬರುತ್ತಿತ್ತು. ಜನ ಹೇಗಾದರೂ ಒದ್ದಾಡಲಿ ಕಾದು ನೋಡುವ ಎಂಬಂತೆ ಎಲ್ಲವನ್ನು ಸಹನೆಯಿಂದ ನೋಡುತ್ತಿದ್ದ ಸರ್ಕಾರ, ಮಹಾನಗರ ಪಾಲಿಕೆಗಳು ಶಾಂತ ರಸವನ್ನು ಅಭ್ಯಾಸಿಸಿಕೊಂಡರೆ,ಕಸದ ರಾಶಿಯಲ್ಲಿ ಸತ್ತು ಬಿದ್ದಿದ್ದ ಪ್ರಾಣಿಗಳನ್ನು ಕುಕ್ಕಿ ತಿನ್ನುತ್ತಿದ್ದ ನಾಯಿ, ಕಾಗೆಗಳ ದೃಶ್ಯಗಳು ಭೀಭೀತ್ಸ್ಯ ರಸಕ್ಕೆ ಸಾಕ್ಷಿ. ಇನ್ನೂ ಕೆಲವೇ ದಿನಗಳಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ, ಆಲ್ಲಿಯವರೆಗೂ ಜನ ಸಹನೆಯಿಂದರಬೇಕು ಎಂದು ನಾಯಕರುಗಳು ನೀಡುತ್ತಿದ್ದ ಹೇಳಿಕೆಗಳು ಹಾಸ್ಯ ರಸಕ್ಕೆ ತಕ್ಕ ಉದಾಹರಣೆಗಳಾದರೆ, ತಮ್ಮ ಪಕ್ಷಕ್ಕೆ  ಅಧಿಕಾರ ಕೊಟ್ಟರೆ ಕ್ಷಣ ಮಾತ್ರದಲ್ಲಿ ಇದಕ್ಕೆ ಪರಿಹಾರ ಸಿದ್ಧ ಎಂಬ ವೀರರಸ ವಿರೋಧ ಪಕ್ಷಗಳದ್ದು. ಇದೆಲ್ಲಾದರ ನಡುವೆ ಕಸ ವಿಲೇವಾರಿಗಾಗಿ ಎತ್ತಿಟ್ಟ ಹಣ ಅದೆಲ್ಲಿ ಹೋಗುತ್ತಿದೆ ಎಂಬ ಆಶ್ಚರ್ಯ, ಅದ್ಭುತರಸ ಮಾತ್ರ ಜನ ಸಾಮಾನ್ಯರದು. 

ಸರ್ಕಾರಕ್ಕೂ ಇದರ ಕ(ಸ)ಸಿವಿಸಿ  ತಪ್ಪಲಿಲ್ಲ. ಮಹಾನಗರ ಪಾಲಿಕೆ ಸಹಾ ತಡವಾಗಿ ಎಚ್ಚೆತ್ತುಕೊಂಡು ಏನೆಲ್ಲಾ ಕಸರತ್ತು ಮಾಡಿದರೂ ಇನ್ನೂ ಶಾಶ್ವತ ಪರಿಹಾರವೆನ್ನುವುದು ದೊರಕಿಲ್ಲ. ಕಸವನ್ನು ಕೇವಲವಾಗಿ ನೋಡುವುದೇನೋ ಸರಿ ಆದರೆ ’ಕೇವಲ ಕಸ’ ಎನ್ನುವುದು ಇಂದಿನ ಪರಿಸ್ಥಿತಿಯಲ್ಲಿ ಬೇಜವಬ್ದಾರಿಯ ಮಾತಾಗುತ್ತದೆ. ಕಸದಿಂದ ರಸ ಮಾತ್ರವಲ್ಲ ಕಸದೊಂದಿಗೆ ಇಂದು ಹಣ,ಗುತ್ತಿಗೆ, ಪರಿಸರ ನಾಶವೆಂಬ ಅಪಸ್ವರ, ದಬ್ಬಾಳಿಕೆ, ಹೋರಾಟ, ಧರಣಿ ಎಲ್ಲವೂ ಸೇರಿಕೊಂಡಿವೆ. ಈಗ ಕಸ ಕೇವಲವಾಗಿ ಉಳಿದಿಲ್ಲ. ಅದರ ವಿಲೇವಾರಿಗೆ ನೂರಾರು ಕೋಟಿಗಳ ಯೋಜನೆಗಳು, ಒಪ್ಪಂದಗಳು, ಗುತ್ತಿಗೆಗಳು ಏರ್ಪಡುತ್ತಿವೆ. ಬೆಂಗಳೂರು ನಗರದ ಕಸದ ವಿಲೇವಾರಿ ಗುತ್ತಿಗೆಯ ಮೂತ್ತ ಸುಮಾರು ೩೦೦ ಕೋಟಿಗೂ ಅಧಿಕ ಎಂದರೆ ಕಸದ ಶಕ್ತಿ, ಸಾಧ್ಯತೆ ಅರ್ಥವಾಗುತ್ತದೆ. ಪ್ರತಿದಿನವು ಬೃಹತಾಕಾರದಲ್ಲಿ ಬೆಳೆಯುತ್ತಿರುವ ಕಸದ ಪ್ರಮಾಣದಿಂದ ನಮ್ಮ ಪರಿಸರದ ಮೇಲೆ ಆಗುತ್ತಿರುವ ಅಡ್ಡ  ಪರಿಣಾಮಗಳು, ಮಲೀನಗೊಳ್ಳುತ್ತಿರುವ ಅಂತರ್ಜಲ, ಜಾಗದ ಸಮಸ್ಯೆಗಳು ನಮ್ಮ ಭವಿಷ್ಯವನ್ನು ಭಯಾನಕವಾಗಿಸುವುದರಲ್ಲಿ ಸಂದೇಹವೇ ಇಲ್ಲ. ಪ್ರತಿ ಪ್ರಜೆಯೂ ಮತ ಹಾಕುತಾನೋ ಇಲ್ಲವೋ ಕಸವನ್ನು ಮಾತ್ರ ಉತ್ಪಾದಿಸುತ್ತಾನೆ, ಬೀದಿಗೆ ತಂದು ಹಾಕಿಯೇ ತೀರುತ್ತಾನೆ.

ಹಾಗೆಂದ ಮಾತ್ರಕ್ಕೆ ಇವೆಲ್ಲಕ್ಕೂ ಪರಿಹಾರವೇ ಇಲ್ಲವೇ ಎಂಬ ಪ್ರಶ್ನೆ ಮೂಡ ಬಹುದು. ಸಮಸ್ಯೆ ಎಷ್ಟೇ ಜಟಿಲವಾಗಿದ್ದರೂ ಅದಕ್ಕೆ ಪರಿಹಾರಗಳು ಖಂಡಿತ ಇರುತ್ತವೆ. ನಮ್ಮಂತೆ ದಟ್ಟ ಜನ ಸಂಖ್ಯೆಯ, ಅಗಾಧ ಕಸ ಹೊಮ್ಮಿಸುವ ಇತರ ದೇಶಗಳು ಇದಕ್ಕೆ ಕಂಡುಕೊಂಡಿರುವ ಪರಿಹಾರ ಮಾರ್ಗಗಳು ನಮಗೆ ಮಾದರಿಯಾಗಬಲ್ಲದು. ಮಾರಕವಾಗಬಲ್ಲ ಕಸವನ್ನು ಪರಿವರ್ತಿಸಿ ಅದನ್ನು ಶಕ್ತಿಯಾಗಿ ಖಂಡಿತ ಬಳಸಿಕೊಳ್ಳಬಹುದು. ಅದರೆ ಅದಕ್ಕೆ ಬೇಕಾದ ರಾಜಕೀಯ ಇಚ್ಛಾ ಶಕ್ತಿ, ಸಾಮಾಜಿಕ ಕಾಳಜಿ ಹಾಗೂ ಜನ ಸಾಮಾನ್ಯರ ಸಹಾಕರ ಕೊರತೆ ನಮ್ಮಲ್ಲಿ ಎದ್ದು ಕಾಣುತ್ತದೆ. ಇದರಿಂದಾಗಿ ಒಂದು ಸಣ್ಣ ಸಮಸ್ಯೆಯೂ ದೊಡ್ಡ ಪ್ರಮಾಣದಲ್ಲಿ ಬೆಳೆದು ಪರಿಹಾರವು ದೂರದ ಮಾತಾಗುವ ಪರಿಸ್ಥಿತಿ ನಮ್ಮದಾಗಿದೆ. ಕಸದ ಸಮಸ್ಯೆಯೂ ಇದಕ್ಕೆ ಹೊರತಲ್ಲ. ಮೇಲ್ನೋಟಕ್ಕೆ ಕಾಣುವ ಕಾರಣಗಳ ಜೊತೆಗೆ ಹಲವಾರು ಕಾಣದ ಕೈಗಳು, ಹಿತಾಸಕ್ತಿಗಳು ಸಮಸ್ಯೆಗೆ ತಮ್ಮದೇಆದ ರೀತಿಯಲ್ಲಿ ಕಾರಣವಾಗಿವೆ. ಇವೆಲ್ಲವೂ ದೊಡ್ಡ ಮಾತುಗಳು. ಆದರೆ ಒಂದು ಕಸದ ಸಮಸ್ಯೆ ಹೇಗೆ ಸರಳವೂ ಜೊತೆ ಜೊತೆಗೆ ಜಟಿಲವೂ ಎಂಬುದರ ಪರಿಚಯ ನಿಮ್ಮದಾಗಬೇಕಾದರೆ, ಖಾಲಿ ನಿವೇಶನವಿರುವ ಒಂದು ರಸ್ತೆಯನ್ನು ನೀವು ನೋಡಬೇಕು. ಅಲ್ಲಿ ನಿಮ್ಮ ಮನೆಯಿದ್ದು, ಅದರಲ್ಲೂ ನಿಮ್ಮ ಮನೆ ಆ ಖಾಲಿ ನಿವೇಶನದ ಪಕ್ಕದಲ್ಲೇ ಇದ್ದರೆ ಕಸದ ಸಮಸ್ಯೆಯು ನಿಮಗೆ ಇನ್ನಷ್ಟು ತಿಳಿ ತಿಳಿಯಾಗಿ ಅರ್ಥವಾಗುತ್ತದೆ. ಇಂದಿನ ಬೆಂಗಳೂರಿನ ಮಧ್ಯಮ, ಮೇಲ್ಮಧ್ಯಮ ವರ್ಗದ ಜನರಿರುವ ಬಡಾವಣೆಗಳಲ್ಲೂ ಒಂದು ಸಾಧಾರಣ ಸೈಟಿಗೆ ಎನ್ನಿಲ್ಲವೆಂದರೂ ಸುಮಾರು 30 ರಿಂದ 40 ಲಕ್ಷ ಬೆಲೆ. ಅಷ್ಟೊಂದು ಬೆಲೆಯಿದ್ದರೂ ಒಂದು ಖಾಲಿ ಸೈಟಿನ ಮೇಲೆ ನಡೆಯುವ ಶೋಷಣೆ ಮಾತ್ರ ಹೇಳತೀರದು.

ಮೊದಲು ಅದೇ ರಸ್ತೆಯಲ್ಲಿ ಮನೆ ಕಟ್ಟುತ್ತಿರುವವರು, ಖಾಲಿ ನಿವೇಶನದಲ್ಲಿ ತಮ್ಮ ಕೂಲಿಯವರಿಗೆ ಒಂದು ಶೆಡ್ ಹಾಕುವುದರೊಂದಿಗೆ ನಿವೇಶನಕ್ಕೆ ಸ್ವಲ್ಪ ಗೌರವ ದೊರಕುತ್ತದೆ. ನಿವೇಶನದ ಮಾಲೀಕನಿಗೂ ಕೊಂಚ ಗೌರವ ಧನ. ಈ ಸಮಯದಲ್ಲಿ ಅಲ್ಲಿ ಯಾರೂ ಕಸ ಹಾಕುವ ಧೈರ್ಯ ಮಾಡುವುದಿಲ್ಲ. ಕಸ ಹಾಕಿದರೆ ಅಲ್ಲಿನ ಕೂಲಿಯವನ ಹೆಂಡತಿಯ ಬಾಯಲ್ಲಿ ಬರುವ ಬಯ್ಗಳಕ್ಕಿಂತ ಕಸ ಮನೆಯಲ್ಲಿ ಇರುವುದೇ ಲೇಸು. ಮುಂದೆ ಕಟ್ಟಡದ ಕೆಲಸ ಮುಗಿದು, ಅದೇ ಮನೆಯ ಗೃಹ ಪ್ರವೇಶದ ಸಂದರ್ಭದಲ್ಲಿ ಈ ಖಾಲಿ ನಿವೇಶನ ಊಟದ ಮನೆಯಾಗಿ ಪರಿವರ್ತಿತವಾಗುತ್ತದೆ. ಅಲ್ಲಿಂದ ಪ್ರಾರಂಭ, ಕಸದೊಂದಿಗಿನ ಸ್ನೇಹ ಮಿಲನ. ಅತಿಥಿಗಳು ಹೊರಟರೂ ಊಟದ ಎಲೆ, ತರಕಾರಿ, ಮೂಳೆಗಳೆಲ್ಲಾ ಅಲ್ಲೇ ಉಳಿದು ಹೋಗುತ್ತದೆ. ಕೂಲಿಯವರ ಶೆಡ್ ಕೂಡ ಖಾಲಿ. ಒಂದೆರೆಡು ದಿನವಾದ ಮೇಲೆ ಹೊಸ ಮನೆಯ ಮುಂದೆ ಕಟ್ಟಿದ ಚಪ್ಪರದ ತೆಂಗಿನ ಗರಿಗಳು ಕೂಡ ಬಂದು, ಮೊದಲು ಒರಗಿಕೊಂಡಂತೆ ಮಾಡಿಕೊಂಡು ನಂತರ ಅಲ್ಲೇ ಮಲಗಿಕೊಳ್ಳುತ್ತವೆ. ಎಬ್ಬಿಸುವವರು ಯಾರು? ಹೊಸ ಮನೆ ಎಂದ ಮೇಲೆ ಒಡೆದು ಹೋದ ಟೈಲ್ಸ್ ಚೂರುಗಳು, ಪೇಯಿಂಟ್ ಡಬ್ಬಗಳು, ಎಲ್ಲವೂ  ಮೂಟೆಯೊಂದರಲ್ಲಿ ಸುಂದರವಾಗಿ ಜೋಡಿಸಲ್ಪಟ್ಟು ಇಲ್ಲೇ ಬಂದು ಸ್ಥಾಪಿತವಾಗುತ್ತದೆ. ಯಾರಾದರೂ ಧೈರ್ಯ ಮಾಡಿ ಇಲ್ಲಿ ಬಿಸಾಡಬೆಡಿ ಎಂದರೆ, ಉತ್ತರ ಸಿದ್ಧವಾಗಿರುತ್ತದೆ " ಎಲ್ಲಾ ಒಟ್ಟಿಗೆ ಕ್ಲೀನ್ ಮಾಡಿ ತೆಗೆದುಕೊಂಡು ಹೋಗುತ್ತೇವೆ ಸಾರ್"

ಅವರು ಮುಂದೆ ಅದನ್ನು ನಿಜಕ್ಕೂ ಕ್ಲೀನ್ ಮಾಡುತ್ತಾರೋ ಇಲ್ಲವೋ, ಅದರೆ ಸುತ್ತಮುತ್ತಲಿನ ಜನರ ಮನಸ್ಸಿನಲ್ಲಿ ಅಲ್ಲಿ ಒಂದು ಕಸದ ತೊಟ್ಟಿ ಹುಟ್ಟಿಕೊಂಡು, ಅದು ಎಲ್ಲರನ್ನೂ ತನ್ನತ್ತ ಆಕರ್ಷಿಸಲು ಪ್ರಾರಂಭಿಸುತ್ತದೆ. ಮೊದ ಮೊದಲಿಗೆ ಸುತ್ತಮುತ್ತಲಿನವರು ಅದನ್ನು ಗಮನಿಸಿದರೂ ಕಸ ಹಾಕದೆ ಮತ್ತಷ್ಟು ಕಸ ಸೇರುವ ತನಕ ಸಹನೆವಹಿಸುತ್ತಾರೆ. ನಂತರದ ದಿನಗಳಲ್ಲಿ ಹಳೆಯ ಟ್ಯೂಬ್ ಲೈಟ್ ಗಳು, ಹಲಗೆಗಳು, ಪ್ಲಾಸ್ಟಿಕ್ ಡಬ್ಬಗಳು ಹಳೆಯ ಒಡೆದ ಕಿಟಕಿ ಗಾಜುಗಳು ಎಂಟ್ರಿ ಕೊಟ್ಟು ತೊಟ್ಟಿಗೆ ಬಣ್ಣ ಕೊಡುತ್ತವೆ.  ಇವೆಲ್ಲಾ ಬಂದ ಮೇಲೆ ಚಿಂದಿ ಹಾಯುವವರು ವಾರಕ್ಕೆ ಒಮ್ಮೆಯೋ ಎರೆಡು ಬಾರಿಯೋ ಬಂದು ಚಟುವಟಿಕೆ ಆರಂಭಿಸುತ್ತಾರೆ. ಇಷ್ಟೆಲ್ಲಾ ಆಗಿ ಆಲ್ಲಿಗೆ ನಿಜಕ್ಕೂ ಒಂದು ಕಸದ ತೊಟ್ಟಿಯ ಕಳೆ ಬರುತ್ತಿದ್ದಂತೆ ಅಲ್ಲಿ ಅನೇಕ ವಸ್ತುಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ತುರಿದ ಸೌತೆಕಾಯಿ ಸಿಪ್ಪೆ, ಸುಲಿದ ಬಾಳೆ ಹಣ್ಣಿನ ಸಿಪ್ಪೆ, ಅವರೆಕಾಯಿಯ ಸಿಪ್ಪೆ, ಮಾವಿನಹಣ್ಣಿನ ವಾಟೆ, ಕೊಳೆತ ಟೊಮೆಟೊ, ಟೂತ್ ಬ್ರಷ್, ಪೇಸ್ಟಿನ ಟ್ಯೂಬು ಇತ್ಯಾದಿಗಳು. ಇನ್ನು ಅಲ್ಲಿ ಕಸ ಹಾಕಲು ಯಾರಿಗೂ ಹಿಂಜರಿಕೆಯಿಲ್ಲ. ಹಗಲಿನಲ್ಲಿ ಸ್ವಲ್ಪ ಸಂಕೋಚ. ಕತ್ತಲಿನಲ್ಲಿ ರಭಸ, ತಮ್ಮ ಮನೆಯಿಂದಲೇ ತೂರಾಟ. 

 ( ಮುಂದುವರಿಯುತ್ತದೆ)

-ಪ್ರಶಾಂತ್ ಇಗ್ನೇಷಿಯಸ್

3 comments:

  1. Rasagala vishleshane chenagide

    ReplyDelete
  2. Rasagala vishleshane adbhuta..mundi bhaaga yavaga sir?
    -Jogalekar

    ReplyDelete
  3. Rasagala vishleshane chenagide

    ReplyDelete