Friday 21 September 2012

"ಬಂದ್" ದಿತರಿಗೆ ಬಿಡುಗಡೆ......?

     ಹೋದ್ಯಾ ಪಿಶಾಚಿ ಆದ್ರೆ ಬಂದೆ ಗವಾಕ್ಷಿಲಿ ಅಂತ "ಬಂದ್" ಬಂದು ಮೂರುದಿನ ಆಗಿಲ್ಲ ಆಗಲೇ ಪುನಃ ಬಂದ್ ಅಂತ ಹೇಳ್ತಾರಲ್ಲ ಎಂದು ನನ್ನ ಗೆಳೆಯನೊಬ್ಬ ಸಿಡುಕಿದ. ಸಾಮಾನ್ಯವಾಗಿ ನಮಗೆ ರಜೆ, ತುರ್ತು ರಜೆಗಳು ಖುಷಿಕೊಡುತ್ತವೆ. ಆದರೆ ಇವನ ಈ ಮಾತಿನಿಂದ ಆಶ್ಚರ್ಯವಾಯಿತು. ನಿಜಕ್ಕೂ ಈ ಬಂದ್ ಎಂದರೆ ಏನು? ಏಕೆ? ಮತ್ತು ಹೇಗೆ? ಎಂದು ವಿಚಾರಮಂಥನ ಮಾಡಿದಾಗ ತಿಳಿದದು ಬಂದ್ ಒಂದು ಸಾಮೂಹಿಕ ಪ್ರತಿಭಟನೆ. ತಮ್ಮ ಕೆಲಸಕಾರ್ಯಗಳನ್ನು ಸೇವೆ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅವಿಧೇಯತೆಯನ್ನು ಪ್ರದರ್ಶಿಸುವ ರಾಜಕೀಯ ಪ್ರಕ್ರಿಯೆ. ಮೂಲತಃ ಪ್ರತಿಭಟನೆಯನ್ನು ಬಂದ್ ಹೆಸರಿನಲ್ಲಿ ಕರೆಯುವುದು ಭಾರತ ಹಾಗೂ ನೇಪಾಳದಲ್ಲಿ ರೂಢಿಯಲ್ಲಿದೆ. ಭಾರತಕ್ಕೂ ಬಂದ್ ಗು ಅವಿನಾಭಾವ ಸಂಬಂಧ. ಸಾಮಾನ್ಯವಾಗಿ ಆಡಳಿತ ಪಕ್ಷದ ನಿರ್ಣಯಗಳ ವಿರುದ್ಧ ವಿರೋಧಪಕ್ಷಗಳು ಸಾರುವ ಯುದ್ಧ. ದೇಶದಾದ್ಯಂತ ಕರೆಕೊಡುವ ಈ ಯುದ್ಧಕ್ಕೆ "ಭಾರತ್ ಬಂದ್" ಅಂತಲೇ ಕರೆಯುತ್ತಾರೆ.

         ಮೇ 31 ಕ್ಕೆ ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ಭಾರತ್ ಬಂದ್ ಆಚರಿಸಿದವು. ಕೆಲವೇ ದಿನಗಳ ಹಿಂದೆ ಬೆಂಗಳೂರಿನ ಬಸ್ಸುಗಳು ಎರಡು ದಿನ ಬೀದಿಗಿಳಿಯದೇ ಬಂದ್ ಆಚರಿಸಿದವು.  ಅದಕ್ಕೂ ಮೊದಲು ಭಾರತದಾದ್ಯಂತ ಬ್ಯಾಂಕ್ ಗಳು ಎರಡು ದಿನ ವಹಿವಾಟು ಸ್ಥಗಿತಗೊಳಿಸಿ ಬಂದ್ ನಡೆಸಿತ್ತು. ಸೆಪ್ಟಂಬರ್ 20ರಂದು ಮತ್ತದೇ ಬಂದ್ ವಕ್ಕರಿಸಿದೆ. ಕಾವೇರಿ ವಿವಾದದಲ್ಲಿ ಕಾವೇರಿದ ಹಲವು ದಿನಗಳು ಬಂದ್ ಗೆ ಶರಣಾಗುತ್ತವೆ,. ಹೀಗೆ ಬಂದ್ ಮಾಡುವುದರಿಂದ ಸಾರ್ವಜನಿಕವಾಗಿ ನಮ್ಮ ಆಕ್ರೋಶವನ್ನು, ಒತ್ತಡ ಹೇರುವಂತ ತಂತ್ರವು ಪರಿಣಾಮಕಾರಿಯಾದದ್ದೆ. ಕೈಗೊಂಡ ನಿರ್ಧಾರಗಳ ಮುಂದಿನ ನಡೆಯು ಪರಿಶೀಲನೆಗೆ ಒಳಪಡಬೇಕು ಅಥವಾ ಮುಂದೆ ಎಂದಾದರೂ ಇಂತಹದೇ ವಿಷಯದಲ್ಲಿ ನಿರ್ಣಯಗಳಾಗುವಾಗ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಸೂಚಿಗಳಾಗಬೇಕು ಎಂಬ ಎಚ್ಚರಿಕೆಯ ಬಿಸಿ ಮುಟ್ಟಿಸುವುದು ಪ್ರಜಾಪ್ರಭುತ್ವದ ಬಹುದೊಡ್ಡ ಅಸ್ತ್ರ. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಮಾಡಿದ್ದು ತಪ್ಪು ಎನಿಸಿದರೆ ಬಂದ್ ಗೆ ಕರೆಗೊಡುತ್ತೇವೆ. ನಮ್ಮ ತಪ್ಪನ್ನು ಮಾಫಿ ಮಾಡಿ ಎಂದು ಬಂದ್ ನಡೆಯುತ್ತದೆ. ಹೊಸತನಕ್ಕೊಂದು ಬಂದ್, ಹೆಸರೇ ಇಲ್ಲದಿರುವ ಕೆಲವು ಬಂದ್. ಇವ ಸೋತದ್ದಕ್ಕೆ ಒಂದು ಬಂದ್, ಅವ ಸತ್ತದಕ್ಕೆ ಒಂದು ಬಂದ್. ಬಂದ್ ಮೇಲೆ ಬಂದ್..!! ನಮ್ಮ ದೇಶದ ಸರ್ವೋಚ್ಚನ್ಯಾಯಲವು ಇಂತಹ ಬಂದ್ ಗಳನ್ನು ನಡೆಸಕೂಡದು ಎಂದು 1998ರಲ್ಲಿ ತಾಕೀತು ಮಾಡಿತ್ತು.  ಮತ್ತೆ 2004ರಲ್ಲಿ ಮುಂಬೈ ಬಾಂಬ್ ದಾಳಿ ವಿರೋಧಿಸಿ ಬಿಜೆಪಿ ಮತ್ತು ಶಿವಸೇನೆ ಪಕ್ಷಗಳು ನಡೆಸಿದ ಬಂದ್ ಗೆ ನ್ಯಾಯಾಲಯ ತೀವ್ರ ಅಕ್ಷೇಪ ವ್ಯಕ್ತಪಡಿಸಿತ್ತು. ಈಗಲೂ ವರ್ಷಕ್ಕೆ 40 ರಿಂದ 50 ಭಾರಿ ಬಂದ್ ಆಚರಿಸುತ್ತದೆ ನಮ್ಮ ಪಶ್ಚಿಮ ಬಂಗಾಳ.

       ಇದೇ ಬಂದ್ ಗಳ ಅಡ್ಡಪಾರಿಣಾಮಗಳು ಜನಸಾಮಾನ್ಯರ ಕಾಲಿಗೆ ಬಂದು ಸುತ್ತಿಕೊಳ್ಳುತ್ತವೆ ಎಂದು ಯೋಚಿಸಿದ್ದೇವಾ? ಇಲ್ಲ. ನಮ್ಮಲ್ಲಿ ಆಕ್ರೋಶ ಮನೆಮಾಡಿರುವುದರಿಂದ ನಮ್ಮ ಮನೆ ಕಿಟಕಿಗಾಜು ಬಾಗಿಲುಗಳನ್ನು ದ್ವ 0ಸ ಮಾಡುತ್ತೇವೆಯೇ ಇಲ್ಲ ಅದರಬದಲು ಸರ್ಕಾರಿ ಕಛೇರಿಗಳ ಮೇಲೆ, ಸಾರ್ವಜನಿಕ ವಾಹನಗಳಿಗೆ ಕಲ್ಲು ತೂರಿ, ರಸ್ತೆ ಅಗೆದು, ಟಯರ್ ಸುಟ್ಟು, ಅಂಗಡೀಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಸಿಸಿ ಬಂದ್ ಆಚರಿಸುತ್ತೇವೆ. ಅಷ್ಟಕ್ಕೂ ಇಲ್ಲಿ ಸಾರ್ವಜನಿಕರು ಯಾರು? ಯಾವುದೋ ಪಕ್ಷ ಅಥವಾ ಸಂಘಟನೆಗಳು ಅಷ್ಟೇ. ಇವರ ಪ್ರತಿಷ್ಟೆಯನ್ನು ತೋರಿಸಲೊ, ಇವರ ಇರುವಿಕೆಯನ್ನು ಪ್ರದರ್ಶಿಸಲೊ ಹುಟ್ಟಿಕೊಳ್ಳುವ ಬಂದ್. ಇಂತಹ ಬಂದ್ ನಿಂದಾಗಿ ದೇಶಕ್ಕಾಗುವ ನಷ್ಟವಾದರೂ ಎಷ್ಟು ಗೊತ್ತೇ? ಬರೊಬರಿ 2500 ಸಾವಿರ ಕೋಟಿಯ ಅಂದಾಜು. ಅಂದರೆ ರಾಜ್ಯದಲ್ಲಿ ಬರ ಬಂದಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಪರಿಹಾರಧನವಾಗಿ ಮೀಸಲಿಟ್ಟ ಹಣದ ಮೊತ್ತಕ್ಕೆ ಸಮ. ಇಷ್ಟು ದೊಡ್ಡ ಮೊತ್ತವನ್ನು ಮತ್ತೆ ಗಳಿಸಿಕೊಳ್ಳುಲೇಬೇಕಾದ ಸರ್ಕಾರ ತಮ್ಮ ನೀತಿ ನಿಯಮಾವಳಿಗಳನ್ನು ಮತ್ತಷ್ಟು ಕಠಿಣಗೊಳಿಸುತ್ತದೆ. ಅದು ಹೇಗೆ ಎಂದರೆ ತುಸು ಬೆಲೆ ಏರಿಕೆ, ತೆರಿಗೆ ಹೇರಿಕೆ, ಸೌಲಭ್ಯಗಳಲ್ಲಿ ಕಡಿತ, ಸಬ್ಸಿಡಿಗಳನ್ನು ಮೊಟಕುಮಾಡಿ ಪ್ರತಿಯೊಬ್ಬನ ಭುಜದ ಮೇಲೆ ಹೊರೆಹೊರೆಸಿಬಿಡುತ್ತಾರೆ. ಇದರ ಪರಿಣಾಮ ದೇಶದ GDPಯಲ್ಲಿನ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ.  

           ಅರ್ಥವ್ಯವಸ್ಥೆಯಲ್ಲಿ GDP(Gross Domestic Product) ಎನ್ನುವುದು ಪ್ರತಿಯೊಬ್ಬ ಭಾರತಿಯನ ಸರಾಸರಿ ಜೀವನಮಟ್ಟವನ್ನು ಅಳೆಯುವ ಮಾಪನ. ಭಾರತದ ಆರ್ಥಿಕತೆಯ ಪ್ರಗತಿಯನ್ನು ಈ ಮಾಪನದ ಆಧಾರದಿಂದಲೇ ಗುರುತಿಸಲಾಗುವುದು. ದೇಶದಲ್ಲಿನ ಉತ್ಪನಗಳನ್ನು ಜನರ ಬೇಡಿಕೆಗೆ ತಕ್ಕಂತೆ ಬೆಲೆ ನಿಗದಿಮಾಡಿ ಅದರಿಂದ ಬರುವ ಆದಾಯ ನಡುವಣ ಲೆಕ್ಕಚಾರವೇ GDP. ಸಾಮಾನ್ಯರ ಭಾಷೆಯಲ್ಲಿ "ತಲಾದಾಯ" ಎಂತಲೂ ಕರೆದು ಸರಳೀಕರಿಸಿದ್ದಾರೆ. ಇಂತಹ GDP ಕಳೆದ ವರ್ಷದಿಂದ ಇಳಿಮುಖವಾಗುತಿದೆ. ಜಾಗತಿಕ ಆರ್ಥಿಕಾವಲಯದಲ್ಲಿ 120 ನೇ ಸ್ಥಾನದಲ್ಲಿದ್ದ ಭಾರತದ GDP ಈಗ 140ನೇ ಸ್ಥಾನಕ್ಕೆ ದೂಡಲ್ಪಟ್ಟಿರುವುದು ಶೋಚನೀಯ. ಇದರಿಂದ ರೂಪಾಯಿ ಮೌಲ್ಯವು ಕುಸಿತ ಕಂಡಿದೆ. ಇದೂ ಒಂದು ರೀತಿಯಲ್ಲಿ ಬರ (ಆರ್ಥಿಕ ಬರ). ಇದರ ಬಗ್ಗೆ ಸರ್ಕಾರ ಬಹು ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿತ್ತಾದರೂ, ಬಂದ್ ನಂತಹ ಕ್ರಮದಿಂದ ದೇಶದ ಆರ್ಥವ್ಯವಸ್ಥೆಗೆ ಇನ್ನೂ ಹೊಡೆತ ಬೀಳುತ್ತದೆ ವಿನಃ ಮತ್ತೇನೂ ಇಲ್ಲ. ಪಾಳುಬಾವಿಗೆ ಬಿದ್ದವನ ಮೇಲೆ ಆಳಿಗೋಂದು ಕಲ್ಲು ಎನ್ನುವಂತೆ. ಬಂದ್ ಮಾಡುವುದರಿಂದ ಉತ್ಪನಗಳ ತಯಾರಿಕೆಯಲ್ಲಿ, ವಿವಿಧ ಸೇವೆ ಸುಧಾರಣೆಗಳಲ್ಲಿ, ವಹಿವಾಟುಗಳಲ್ಲಿ ತದನಂತರ ಆಧಾಯ ಗಳಿಕೆಗಳಲ್ಲಿ ತೊಂದರೆಯಾಗುವುದರಿಂದ ಬಂದ್ ದೇಶದ ಅಭಿವೃದ್ಧಿಗೆ ಮಾರಕವೇ ಸರಿ. ಇದರ ಬದಲು ಸಾಮಾಜಿಕ ಕಳಕಳಿ ಪ್ರದರ್ಶಿಸುವ ಬಂದ್ ಗಳು ಪ್ರಯೋಜನಕಾರಿ ಎಂದು ನನ್ನ ಅಭಿಪ್ರಾಯ. ಉದಾಹರಣೆಗೆ ಹತ್ತಿರವಿರುವ ಅಂಗಡಿಗೆ ನಡೆದೇ ಹೋಗುವುದು. ಸ್ವಂತ ವಾಹನ ಇದ್ದವರು ತಿಂಗಳಿಗೆ ಒಂದೆರಡುಸಲವಾದರು ಓಡಾಟಕ್ಕೆ ಸಾರ್ವಜನಿಕ ಬಸ್ಸುಗಳನ್ನು ಬಳಸುವುದು, ಒಬೋಬ್ಬರೇ ಓಡಾಡುವಾಗ ಕಾರಿಗಿಂತ ದ್ವಿಚಕ್ರ ವಾಹನ ಬಳಸುವುದರಿಂದ ಪೆಟ್ರೊಲ್ ಡೀಸೇಲಿನ ಉಳಿತಾಯ ಸಾಧ್ಯ. ವಿದ್ಯುತ್ ಚಕ್ತಿಯನ್ನು ಅವಶ್ಯವಿದ್ದಾಗ ಮಾತ್ರ ಬಳಸುವುದು, ಸಾಧ್ಯವಾದರೆ ಸೋಲಾರ್ (ಸೌರಶಕ್ತಿ) ಅಳವಡಿಸಿಕೊಳ್ಳುವುದು ಧನಾತ್ಮಕ ಅಂಶ. ಅಡುಗೆ ಅನಿಲದ ಬಳಕೆಯಲ್ಲಿ ತುಸು ಜಿಪುಣತವಿದ್ದರೆ ಒಳ್ಳೆಯದೇ. ಇದೆಲ್ಲ ನಮ್ಮ ದಿನ ಬಳಕೆಯ ಅಗತ್ಯತೆಗಳು ಮತ್ತು ನೈಸರ್ಗಿಕವಾಗಿ ಸಿಗುವಂತ ಸಂಪನ್ಮೂಲಗಳಾದರೂ ನಿಸರ್ಗ ಈ ಮನುಷ್ಯನ ಹೊಟ್ಟೆಬಾಕುತನವನ್ನು ನೀಗಿಸುವಲ್ಲಿ ದಿನೆದಿನೇ ದಣಿದುಹೋಗುತಿದೆ. ಮುಂದಿನ ದಿನಗಳಲ್ಲಿ ಈ ಸಂಪನ್ಮೂಲಗಳ ಕೊರತೆಯೂ ನಮಗೆ ತಟ್ಟದೆ ಇರದು. 

       ಮುಂದುವರೆದ ದೇಶಗಳು 'ಗ್ಲೋಬಲ್ ವಾರ್ಮಿಂಗ್' (ಉಷ್ಣಾಂಶದ ಕಾವು ಹೆಚ್ಕಳದಿಂದಾಗಿ ಜಗತ್ತು ವಿನಾಷದ ಅಂಚಿಗೆ ಹೋಗುತ್ತಿರುವ ಸುಳಿವು)  ತಗ್ಗಿಸುವಂತಹ ದೂರದೃಷ್ಟಿ ಇರುವ ಯೋಜನೆಗಳತ್ತ ಚಿತ್ತಹರಿಸುತ್ತಿದ್ದರೆ, ನಮ್ಮ ದೇಶದಲ್ಲಿ ನಾಳೆಯ ಯೋಚನೆಯೂ ನಮ್ಮಲ್ಲಿ ಸುಳಿಯುತ್ತಿಲ್ಲ. ಇವತ್ತಿನ ಆರ್ಥಿಕ ಅಂತಃಪತನಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಈ ಸಂದಿಗ್ಧ ಪರಿಸ್ಥಿತಿಯನ್ನು ಸಂಸತ್ತಿನಂತಹ ದಿವ್ಯ ಸನ್ನಿಧಿಯಲ್ಲಿ ಕುಳಿತು ಚರ್ಚಿಸಿ ಪರಿಹಾರ ಹುಡುಕಬೇಕಾದ ರಾಷ್ಟ್ರೀಯ ಪಕ್ಷಗಳು ಬಹಿಷ್ಕಾರ, ಪ್ರತಿಭಟನೆ, ಜಗಳಗಳಿಂದಾಗಿ ಕಾಲಹರಣ ಮಾಡಿದ್ದಲ್ಲದೇ ಬಂದ್ ಹೆಸರಿನಲ್ಲಿ ಭಾರತಕ್ಕೆ ಬೀಗ ಹಾಕಿ ಜನಸಾಮಾನ್ಯರನ್ನು ಹಾದಿ ತಪ್ಪಿಸುತ್ತಿವೆ. 

-ಸಂತೋಷ್ ಇಗ್ನೇಷಿಯಸ್
 Read more!

No comments:

Post a Comment