Wednesday 26 November 2008

ಕ್ರಿಯಾಶೀಲ ಕಲ್ಪನೆ......

ಎದೆ ಬಿರಿವ ಹತಾಶೆ ಶೂನ್ಯಗಳಿಗೆ
ಮೀರಿದ ಕ್ರಿಯಾಶೀಲ ಕಲ್ಪನೆ ಭೇದಿಸಲು
ಅಭಿವ್ಯಕ್ತವಾಯಿತು ಹೊಸಯುಗದ ಆತ್ಮವಿಶ್ವಾಸ.
ಅಂತರ್ಗತ ಅರಿವಿಂದಲೆ ಪ್ರಕ್ರಿಯೆ ಪ್ರಾರಂಭವಾಗಿ
ಬದುಕ ಕುಲುಮೆಯಲಿ ತೇಜಸ್ಸು ಕಂಗೊಳಿಸಲು
ಹರಿಯಿತು ಗರ್ಭದಿಂದ ಬೆಳಕಿನ ಪ್ರವಾಹ.
ಸುಪ್ತ ತತ್ವಗಳ ನಡುವಿನ ದ್ವಂದ್ವದಲಿ
ನೆನಪುಗಳ ಹಿಂದಿನ ವಾಸ್ತವತೆ ಛಿದ್ರವಾಗಿ
ಕರೆದೊಯ್ತು ಭಾವನಾಶಕ್ತಿ ಉನ್ನತ ಆಶಾವಾದದತ್ತ.
ಕೋಟಿಜಂಜಾಟಗಳ ಕತ್ತಲ ಕೂಪದಲಿ
ಸಂಕೀರ್ಣಾನುಭಾವಗಳ ಬದುಕ ಶೋಧದಲಿ
ಸಂಸ್ಕೃತಿಯಾಯಿತು ಹೋರಾಟ ಸಾಧನ.
ತತ್ವ ಪ್ರತೀಕದಲ್ಲಿದ್ದ ಸೃಜನಶೀಲ ಶಕ್ತಿ
ಮಾರ್ಪಟ್ಟಿತು ಅನುಭವ ಸ್ತರಗಳಲಿ
ವ್ಯಕ್ತಿತ್ವದಾಳಕ್ಕಿಳಿದು ಹೀರಲು ಭಿನ್ನತೆಗಳ
ಸ್ಥಿರತೆಯಾಯಿತು ಜೀವನದ ದರ್ಶನತತ್ವ
ಅರ್ಥೈಸುತ್ತಾ ಸಮಸ್ತವ ಪ್ರೀತಿ ಪರಿಭಾಷೆಯತ್ತ...
ಪ್ರವೀಣ್

No comments:

Post a Comment