Sunday, 10 May 2020

ಮಿನುಗಿ ಮರೆಯಾದ ಬ್ರದರ್ ಚಿನ್ನಪ್ಪ



ಒಂದಾಗಿ ಸೇರೋಣ ಬನ್ನಿರೋ, ವಾದ್ಯಮೇಳ ಮೊಳಗಲಿ ಜೇನು ಮಳೆ ಸುರಿಯಲಿ, ಕುಂದಿದೆ  ಮನವು, ಯೇಸುವೇ ಸ್ತೋತ್ರ, ಶಿರ ಬಾಗಿಹೆ ಕರ ಚಾಚಿಹೆ,  ನಿನಗಾರು ದೇವರೆಂದರೆ ಯೇಸು ಎನ್ನುವೆನು, ಪುನರುತ್ಥಾನರಾದರೇಸು ಮುಂತಾದ ಹಾಡುಗಳನ್ನು ಕೇಳಿ ತಲೆದೂಗದವರಿಲ್ಲ, ದನಿಗೂಡಿಸದವರಿಲ್ಲ.  80 ದಶಕದ ಕೊನೆಯಲ್ಲಿ ಹೊಮ್ಮಿದ ಈ ಹಾಡುಗಳನ್ನು ಎಂದಿಗಾದರೂ
ಮರೆಯುವುದುಂಟೆ?

ಹತ್ತು ಹನ್ನೆರೆಡು ವರ್ಷಗಳ ಹಿಂದೆ ಒಂದಷ್ಟು ಜನಪ್ರಿಯ ಕನ್ನಡ ಕ್ರೈಸ್ತ ಭಕ್ತಿ ಗೀತೆಗಳನ್ನು ಆರಿಸಿ, ಅದರಿಂದ ವಾದ್ಯಸಂಗೀತದ ಇನ್ಸ್ಟ್ರುಮೆಂಟಲ್ ಸಿಡಿ  ಮಾಡುವ ಬಗ್ಗೆ ಯೋಚಿಸಿದ್ದೆವು. ಸೆಲ್ವ, ಚಂದ್ರು ಇದರ ಮುಂಚೂಣಿಯಲ್ಲಿ ನಿಂತು, ಸಿಡಿಗೆ ಒಂದು ಒಳ್ಳೆಯ ಹೆಸರಿಡುವ  ಆಲೋಚನೆಯನ್ನು ನಮಗೆ ಬಿಟ್ಟಿದರು. ಕನ್ನಡದ ಯಾವುದಾದರೂ ಜನಪ್ರಿಯ ಕ್ರೈಸ್ತ ಭಕ್ತಿಗೀತೆಯ ಮೊದಲ ಸಾಲನ್ನೇ ಸಿಡಿಯ  ಹೆಸರಾಗಿಸುವ ನಿರ್ಧಾರ ಮಾಡಿದೆವು. ಜನಪ್ರಿಯ ಹೆಸರಾದರೆ ಕೊಳ್ಳುಗರನ್ನು ಸೆಳೆಯಬಹುದು ಎಂಬುದು ಮತ್ತೊಂದು ಉದ್ದೇಶ. ಯಾವ ಶೀರ್ಷಿಕೆ ಎಂದು ಸುಮಾರು ಗೀತೆಗಳನ್ನು ರಿಸಿಕೊಂಡು ಹುಡುಕತೊಡಗಿದೆವು. ನೂರಾರು ಹಾಡುಗಳ ಟಫ್ ಫೈಟ್ ನಡುವೆ ಆಯ್ಕೆಯಾದದ್ದು ಚೇತನ ಧ್ವನಿಸುರಳಿಯ ಯೇಸುವೇ ಸ್ತೋತ್ರ’. 

ಕನ್ನಡ ಕ್ರೈಸ್ತರ ವ್ಯಾಪ್ತಿಯಲ್ಲಿ ಒಂದಷ್ಟು ಹಾಡುಗಳು ಗಾಳಿಯಷ್ಟೇ ವ್ಯಾಪಕ. ’ಸುಂದರವಾದ ಮನೆಯಲ್ಲಿ’ ಹಾಡು ಹಾಡಿಸಿಕೊಳ್ಳದ ನೂತನ ಮನೆಯಿಲ್ಲ. ’ಮಣ್ಣಿನಿಂದ ಸೃಷ್ಟಿಯಾದ ಮನುಜನೇ’ ಹಾಡಿಲ್ಲದ ಶವ ಸಂಸ್ಕಾರವಿಲ್ಲ. ಈಗಂತೂ ’ಪಾವನಾತ್ಮರೇ ಪ್ರಿಯ ಪಾವನಾತ್ಮರೇ’ ಇಲ್ಲದ ಸಾಮೂಹಿಕ ಪ್ರಾರ್ಥನೆಯಿಲ್ಲ. ಹೀಗೆ ಹಳೆಯ ಹಾಡುಗಳು,  ಫಾ. ಫೆಲಿಕ್ಸ್, ಫಾ.ಚಸರಾ, ಫಾ ಮರಿಜೋ ಮುಂತಾದವರ ಹಾಡುಗಳ ನಡುವೆ ನಾವು ಈ  ’ಯೇಸುವೇ ಸೋತ್ರ’ ಹಾಡು ಆರಿಸಿಕೊಂಡದ್ದು ಆಕಸ್ಮಿಕವೇನ್ನಲ್ಲ.  ಕನ್ನಡ ಕ್ರೈಸ್ತರು ಮಾತ್ರವಲ್ಲದೆ ಕನ್ನಡ ಬಲ್ಲ ಎಲ್ಲಾ ಕ್ರೈಸ್ತರಲ್ಲೂ ಈ ಹಾಡು ಸುಪರಿಚಿತವಾಗಿತ್ತು. ಅಲ್ಲದೆ ಈ  ಹಾಡಿಗೂ, ಭಕ್ತರಿಗೂ  ಒಂದು ಅವಿನಾಭಾವ ಸಂಬಂಧವಿತ್ತು. ಪೂಜೆಗಳಲ್ಲಿ ಮಾತ್ರವಲ್ಲದೆ,  ಪ್ರಾರ್ಥನೆಗಳಲ್ಲಿ, ಧ್ಯಾನಗಳಲ್ಲೂ ಈ ಹಾಡನ್ನು ಜನರು ಸುಲಲಿತವಾಗಿ ಹಾಡುತ್ತಿರುವುದನ್ನು ನಮ್ಮ ಮಟ್ಟಿಗೆ ನಾವು ಗಮನಿಸಿದ್ದೆವು. ಕೊನೆಗೆ ಸಿಡಿಯ ಹೆಸರು ’ಯೇಸುವೇ ಸ್ತೋತ್ರ’ ಆಯಿತು, ಸಿಡಿಯ ಮೊದಲ ಹಾಡೂ ಅದೇ ಆಯಿತು.

ಫಾ.ಜೆ ಅಂತೋಣಪ್ಪ (ಆಗಿನ್ನು ಬ್ರದರ್)ನವರ ’ಯೇಸುವೇ ಸ್ತೋತ್ರ’ದ ಸರಳ, ಸುಂದರ ಸಾಹಿತ್ಯಕ್ಕೆ ಮಧುರವಾಗಿ ಕೊರಳಾದವರು ಗಾಯಕಿ ಕಸ್ತೂರಿ ಶಂಕರ್. ಆದರೆ ಹಾಡಿನ ಹಿಂದಿನ ಮಾಂತ್ರಿಕತೆಯಿದದ್ದು ರಾಗ   ಸಂಯೋಜನೆಯಲ್ಲಿ. ಆ ರಾಗ-ಸ್ವರ ಮಾಂತ್ರಿಕನೇ ಬ್ರದರ್ ಚಿನ್ನಪ್ಪ M V ಅಥವಾ ಎಲ್ಲರ ಮೆಚ್ಚಿನ ಚಿನ್ನು. ಮೊದಲು ತಿಳಿಸಿದ ಆ ಎಲ್ಲಾ ಹಾಡುಗಳೂ ಅವರದೇ.
ಇದೇ ಏಪ್ರಿಲ್ ಗೆ ಬ್ರದರ್ ಚಿನ್ನು ಅಗಲಿ ಮೂವತ್ತು ವರ್ಷಗಳು. 90 ಏಪ್ರಿಲ್ 16ರ ಆ ದೌರ್ಭಾಗ್ಯದ ದಿನದಂದು ಮರಳಿ ಬಾರದ ಲೋಕಕ್ಕೆ ಹೊರಟ ಚಿನ್ನು, ಬಿಟ್ಟು ಹೋದದ್ದು ಒಂದಷ್ಟು ಸುಮಧುರ ಹಾಡುಗಳ ಬುತ್ತಿ, ತುಂಬಲಾಗದ ಖಾಲಿತನ ಹಾಗೂ ಎಂದಿಗೂ ಮುಗಿಯದ ಗುನುಗು.           

ಕನ್ನಡ ಕ್ರೈಸ್ತ ಭಕ್ತಿ ಸಂಗೀತದ ಪರಂಪರೆ ದೊಡ್ಡದು. ಚಿನ್ನುರವರ ಮುಂಚೆ ನೂರಾರು ಗೀತೆಗಳು ಬಂದಿವೆ. ಇನ್ನು ಅವರ ನಿಧನದ ನಂತರದ ವರ್ಷಗಳಲ್ಲಂತೂ ಕನ್ನಡ ಭಕ್ತಿ ಗೀತೆಗಳು ಮತ್ತಷ್ಟು ಸಮೃದ್ಧಿಯಾಗಿ ಬೆಳೆದು ನಿಂತಿದೆ. ಆದರೆ ದಶಕದ ಸೆಮಿನರಿ ಒಡನಾಟದಲ್ಲಿ, ಆ ಐದಾರು ವರ್ಷಗಳ ಕ್ರಿಯಾಶೀಲತೆಯಲ್ಲಿ, ಬೆರಳೆಣಿಕೆಯಷ್ಟು ಕ್ಯಾಸೆಟ್ಟುಗಳಲ್ಲಿ, ಕೆಲವೇ ಗೀತೆಗಳ ಸಂಯೋಜನೆಯಲ್ಲಿ, ಸುಂದರ ಕಂಠ ಸಿರಿಯಲ್ಲಿ ಚಿನ್ನು ಮೂಡಿಸಿದ ಭರವಸೆ, ಒತ್ತಿದ ಛಾಪು, ಉಳಿಸಿ ಹೋದ ಕೊರತೆ ಗಮನಾರ್ಹ. ಬ್ರದರ್ ಚಿನ್ನು ನವರ ಒಡನಾಟದಲ್ಲಿದ್ದ, ಬಲ್ಲ ಯಾರನ್ನು ಕೇಳಿದರೂ ಅದು ಸುಂದರ ನೆನಪುಗಳ ಮಂದಾರ, ಇನ್ನೂ ಇರಬೇಕಿತ್ತು ಎಂಬ ಏಕ ಅಭಿಪ್ರಾಯದ  ದುಃಖದ ಉದ್ಘಾರ.
 
90 ದಶಕ ಕನ್ನಡ ಕ್ರೈಸ್ತ ಭಕ್ತಿ ಗೀತೆಗಳ ಧ್ವನಿ ಸುರಳಿಗಳ ಪರ್ವಕಾಲ. ಆದರೆ ಅದಕ್ಕೂ ಹಿಂದಿನ 80ದಶಕ ಒಂದು ವಿಶಿಷ್ಟ ಚಟುವಟಿಕೆ ಕಾಲ. ಹಿರಿಯರಾದ ಫಾದರ್ ಫೆಲಿಕ್ಸ್, ಫಾದರ್ ಮರಿಜೋ ತಮ್ಮ ಗಾನೆ ಸುಧೆ ಹರಿಸುತ್ತಾ ಪ್ಲೇಟ್, ಕ್ಯಾಸೆಟ್ಟುಗಳ ಮೂಲಕ ಮನೆ ಮನಗಳ ತಾಕತ್ತಿದ್ದರು. ಇತ್ತ ಕಿರಿಯರ ಪಡೆಯೊಂದು ಆ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸುವ ಭರವಸೆಯನ್ನು ಮೂಡಿಸಿದ್ದರು. ಆ ದಶಕದ ಎರಡನೆಯ ಭಾಗದಲ್ಲಂತೂ ಕನ್ನಡ ಕ್ರೈಸ್ತ ಸಾಂಸ್ಕೃತಿಕ ಲೋಕ ಭರಪೂರ ಕೊಯ್ಲನ್ನು ಕಂಡಿತು. ಚಸರಾ ಎಂಬ ತಾರೆ ಸಂಗೀತ ಲೋಕದಲ್ಲಿ ಉದಯಿಸಿ ಮಿನುಗಲು ಆರಂಭಿಸಿದರೆ, ವಿನ್ಸೆಂಟ್ , ಡೇವಿಡ್ ಮುಂತಾದವರ ಜನಧಾರೆ, ಗಾನವೃಂದ ಮಾತ್ರವಲ್ಲದೆ ಸಾಂಸ್ಕೃತಿಕ, ಸಾಮಾಜಿಕ ಆಯಾಮಗಳತ್ತಲೂ  ಏರುಮುಖದಲ್ಲಿತ್ತು. ಸ ರಾ ಡಾಮನಿಕ್ ತಮ್ಮದೇ ಕ್ಯಾಸೆಟ್ಟುಗಳ ಮೂಲಕ ಸಣ್ಣ ಕಂಪನಗಳನ್ನು ಮೂಡಿಸುತ್ತಿದ್ದರು.

ಇತ್ತ ಸೆಮನರಿಯಲ್ಲಿನ ಬ್ರದರುಗಳು, ಯಾಜಕ ದೀಕ್ಷೆಯ ಹೊಸಿಲಲ್ಲಿದ್ದವರು, ನವ ಯಾಜಕರೂ ಎಲ್ಲರೂ ಸೇರಿ ಉತ್ಸಾಹದ  ಹೊಸ ದಾರಿಯ ಅನ್ವೇಷಣೆಯಲ್ಲಿ ಕ್ರಿಯಾಶೀಲರಾಗಿದ್ದರು. ಅದರಲ್ಲಿ ಮಿಂಚು ತಾರೆಯಂತೆ ಮಿನುಗಿ ಮರೆಯಾದದ್ದು ಬ್ರದರ್ ಚಿನ್ನು. ಒಂದೆರೆಡು ತಿಂಗಳಲ್ಲಿ ಡೀಕನ್ ಆಗಬೇಕಿತಷ್ಟೇ. ಫಾ.ಜೆ ಅಂತೋಣಪ್ಪ ಹಾಗೂ ಫಾ.ಲೂರ್ದಪ್ಪನವರ ಗುರು ದೀಕ್ಷೆಯ ಸ್ಮರಣಾರ್ಥ ಬಂದ ’ಅಭಿಷೇಕ’  ಪ್ರಾಯಶ: ಅವರು ತೊಡಗಿಸಿಕೊಂಡ ಕೊನೆಯ ಧ್ವನಿಸುರಳಿ. ಅದರಲ್ಲಂತೂ ಸುಮಧುರ, ಅರ್ಥಗರ್ಭಿತ ಮಾತ್ರವಲ್ಲದೆ ಸೂಪರ್ ಹಿಟ್ ಹಾಡುಗಳ ತೋರಣವೇ ಇತ್ತು.’ನಡೆಸು ಎನ್ನ ಸೇವಕ ಪ್ರಭು’, ತಗ್ಗಿ ನಡೆಯಬೇಕು ಮನುಜ’ ಬಂದೆನು ಇಂದು ತಂದೆಯ ನೆನೆದು’, ಧ್ಯಾನಿಸು’ ವಾರ್ತೆ ಕೇಳಿ ಧ್ಯಾನ ಮಾಡಿ ’ ಜಗಜ್ಯೋತಿ ಯೇಸು’ ಎಲ್ಲವೂ ಒಂದಕ್ಕಿಂತ ಒಂದು ಮೀರಿಸುವಂತ ಹಾಡುಗಳೇ.

ಬ್ರದರ್ ಚಿನ್ನುರವರ ಬಗ್ಗೆ ಗೊತ್ತಿಲ್ಲದ ಓದುಗರಿಗೆ ಅವರನ್ನು ಪರಿಚಯಿಸಬೇಕಾದದು ಅವರ ಹಾಡುಗಳಿಂದಲೇ.  ಎಂಬತ್ತರ ದಶಕದ ಕೊನೆಯ ಭಾಗದಲ್ಲಿ  ಹೊರ ಬಂದ ಅರ್ಪಣ, ಚೇತನ, ಪಾದುವ ಪುಷ್ಪ, ಅಭಿಷೇಕ, ಮೃತ್ಯುಂಜಯ  ಮುಂತಾದ ಕ್ರೈಸ್ತ ಭಕ್ತಿ ಗೀತೆಗಳ ಧ್ವನಿಸುರುಳಿಗಳಲ್ಲಿನ ಅತ್ಯಂತ ಸುಮಧುರ ಹಾಡುಗಳ ರಚನಾಕಾರರು ಅವರು. ಸಂಗೀತ ರಚನೆ ಜೊತೆಗೆ ಕೆಲವೊಂದಕ್ಕೆ ತಾವೇ ಸಾಹಿತ್ಯ ರಚಿಸಿ, ಕಂಠವನ್ನೂ ಒದಗಿಸಿದ ಮಹಾನ್ ಪ್ರತಿಭೆ ಬ್ರದರ್ ಚಿನ್ನಪ್ಪ. ತಮ್ಮ ಮಧುರವಾದ ಕಂಠ ಸಿರಿಯಲ್ಲಿ ಹಾಡಿಗೆ ಹಾಗೂ ಸಾಹಿತ್ಯಕ್ಕೆ ಬೇಕಾದ ಭಾವಾರ್ಥಗಳನ್ನು ಸಮರ್ಥವಾಗಿ ತಂದವರು.

ಒಂದು ಹಾಡಿಗೆ ಇರಬೇಕಾದ ಎಲ್ಲ ಗುಣಗಳನ್ನು ಒಳಗೊಂಡ ಗೀತೆಗಳನ್ನು ಅತ್ಯಂತ ಅಲ್ಪ ಸಮಯದಲ್ಲಿ ಅತ್ಯಂತ ಯಶಸ್ವಿಯಾಗಿ ಕೇಳುಗರ ಮನಮುಟ್ಟಿಸಿದ ಹೆಗ್ಗಳಿಕೆ ಅವರದು. ಚಿನ್ನುರವರ ಹಾಡುಗಳಲ್ಲಿನ ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ ಸಾಹಿತ್ಯ ಒದಗಿಸಿದವರ ಪಟ್ಟಿ. ಅಂದಿನ ಸಮಯದ ಅನೇಕ ಬ್ರದರ್ ಗಳು ಈ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದರು. ಅವರೆಲ್ಲಾ ಮುಂದೆ ಹಾಡುಗಳ ಕಾವ್ಯ ರಚನೆಯಲ್ಲಿ ತೊಡಗಿಕೊಂಡದ್ದು ವಿರಳವೇ.
ಹಾಡುಗಳ ವಿಶೇಷತೆಯ ಬಗ್ಗೆ ಹೇಳುವದಕ್ಕಿಂತ ಹಾಡುಗಳನ್ನು ಕೇಳುವುದೇ ಲೇಸು. ಸರಳವೆನಿಸುವ, ಎಲ್ಲರಿಗೂ ಸುಲಭವಾಗಿ ಮುಟ್ಟುವ, ದೇವಾಲಯದಲ್ಲಿ ಹಾಡಬಹುದಾದ, ಹಿಂದೆ ಬಂದ ಹಾಡುಗಳಿಗಿಂತ ತುಸು ಭಿನ್ನವಾಗಿ, ಮುಂದೆ ಬಂದ ಹಾಡುಗಳಿಗಿಂತ ಹೆಚ್ಚಾಗಿ ಬೈಬಲ್ ವಾಕ್ಯಗಳನ್ನೇ ನೆಚ್ಚಿಕೊಂಡ ಹಾಡುಗಳಿವು.

ಬ್ರದರ್ ಚಿನ್ನು ಜನಿಸಿದ್ದು 1961ರ ಏಪ್ರಿಲ್ 25ರಂದು. ಕೊಳ್ಳೇಗಾಲ ತಾಲೂಕಿನ ಪ್ರಕಾಶ್ ಪಾಳ್ಯ ಹುಟ್ಟಿದ ಊರು. ತಂದೆ ಮುತ್ತುಸ್ವಾಮಿ ಹಾಗೂ ತಾಯಿ ಪ್ರೆಸಿಲಮ್ಮ ದಂಪತಿಗಳ ನಾಲ್ಕನೆಯ ಮಗನಾಗಿ ಜನಿಸಿದ ಅವರು ಮೈಸೂರಿನ ಫಿಲೋಮಿನಾಸ್ ನಲ್ಲಿ ತಮ್ಮ ಪ್ರೌಢ ಶಿಕ್ಷಣ ಮುಗಿಸಿದರು. ಮುಂದೆ ಕಮನಹಳ್ಳಿಯಲ್ಲಿದ್ದ ತಮ್ಮ ಅಣ್ಣಂದಿರಾದ ಸೆಲ್ವರಾಜ್ ಹಾಗೂ ಪ್ರಕಾಶ್ ರವರೊಂದಿಗೆ ಇದ್ದ ಚಿನ್ನು, ನಂತರ ಕಮ್ಮನಹಳ್ಳಿ ಧರ್ಮಕೇಂದ್ರಕ್ಕೆ ಬಂದ ಫಾ.ತೋಮಸ್ ರವರ ಬಳಿ ದೇವಾಲಯದ ಕಾರ್ಯಗಳಲ್ಲಿ ಸಹಾಯಕರಾಗಿದ್ದರು. ಅವರ ಮಾರ್ಗದರ್ಶನದಲ್ಲೇ ಮೈಸೂರಿನ ಮೈನರ್ ಸೆಮನರಿಗೆ ಸಹ ಸೇರಿದರು. ಸೆಮಿನರಿಯಲ್ಲಿ ಸಾಂಸ್ಕೃತಿಕವಾಗಿ ತೊಡಗಿಕೊಂಡು ಬಂದು ಸಂಗೀತ ಕೃಷಿಯಲ್ಲಿ ಬೆಳೆದು ಬಂದರು.         

ಪ್ರತಿ ತಪಸ್ಸು ಕಾಲದಲ್ಲಿ ಅವರೇ ರಚಿಸಿ ಹಾಡಿರುವ ಶಿರ ಬಾಗಿಹೆ’ ’ಕರೆ ಚಾಚಿಹೆ’, ನಾ ಕಂಡೆ ಶಿಲುಬೆಯಲ್ಲಿ’ ಹಾಡು ನೆನಪಿಗೆ ಬರುತ್ತದೆ.’ಮೃತ್ಯುಂಜಯ’ ಕ್ಯಾಸೆಟ್ಟಿನ ಅವರ ಹಾಡುಗಳು ಇಂದಿಗೂ ಪಾಸ್ಕ ಕಾಲದಲ್ಲಿ ಚಾಲ್ತಿಯಲ್ಲಿವೆ. ’ರಟ್ಟಾಗದ ಗುಟ್ಟಿಲ್ಲ ಕೇಳೋ ಮನುಜ’, ’ಪ್ರೀತಿಸು ನೀ ಮಾನವ’, ’ಕಾದಿದೆ ಹೃದಯವು ಜೀವ ಜಲಕ್ಕೆ’, ಸತ್ಯ ಪ್ರೀತಿ ತ್ಯಾಗ ಪ್ರೇಮವು’, ’ಬಂದೆನು ಇಂದು ತಂದೆಯ ನೆನೆದು’ ’ಮಾತೆಯೆ ಮರಿಯೇ ಮೋಕ್ಷ ರಾಣಿಯೇ’ ಹಾಡುಗಳು ಇಂದಿಗೂ ಹೊಸತೆನಿಸುತ್ತದೆ.

ಏಪ್ರಿಲ್ ಅವರ ಹುಟ್ಟು ಹಾಗೂ ಸಾವು ಎರಡೂ ಸಂಭವಿಸಿದ ತಿಂಗಳು. ಸರಿಯಾಗಿ 30 ವರ್ಷಗಳ ಹಿಂದೆ ಮರೆಯಾದ ಗಾನವೇ ಮೈತಳೆದಂಥ ಜೀವವೊಂದಕ್ಕೆ ಅವರ ಹಾಡುಗಳ ನೆನಪಿನ ಮೂಲಕವೇ ಒಂದು ಸಣ್ಣ ಶ್ರದ್ಧಾಂಜಲಿ ಸಲ್ಲಿಸುವ ಬಯಕೆ ಇಷ್ಟು ದೊಡ್ಡ ಲೇಖನವಾಗಿದೆ. ಈ ಬಯಕೆಗೆ ಮಾಹಿತಿಗಳನ್ನು ಒದಗಿಸಿ ಸಹಾಯ ಮಾಡಿದ ಫಾ.ವಿಲ್ಲಿಯಂ ಪ್ಯಾಟ್ರಿಕ್, ಚಿನ್ನು ಸೋದರರಾದ ಶ್ರೀ.ಸೆಲ್ವರಾಜ್, ಶ್ರೀ.ಲೂಕಾಸ್ ರವರಿಗೆ ನಾನು ಅಭಾರಿ.

ಇಷ್ಟು ವರ್ಷಗಳಲ್ಲಿ ಅವರ ಒಂದು ಸಣ್ಣ ಫೋಟೋ ಕೂಡ ನೋಡದೆ ಅವರ ಹಾಡುಗಳು, ಅವರ ಉತ್ಸಾಹಭರಿತ ಕಂಠವನ್ನು ಮೆಚ್ಚುತ್ತಾ ಬಂದ ನನಗೆ ಈ ಒಂದು ಬರಹ ವಿಷಾದದ ಭಾರವನ್ನು ತುಸು ಇಳಿಸಿಕೊಂಡ ಅನುಭವ.  ಪ್ರಕಟಿಸಲು ಸರಿಯಾದ  ಫೋಟೊಗಳೂ ಇರದಂಥ ಸಂದರ್ಭದಲ್ಲಿ ಇವರ ಹಾಡುಗಳೇ ಇವರ ನೆನಪುಗಳನ್ನು ಜೀವಂತವಾಗಿಸಿವೆ. 




Wednesday, 20 February 2019

ದೇವರ ಸಂಕೇತ

ಕೇಳಿದನೊಬ್ಬ ದೇವರ ಸಂಕೇತವನ್ನು -
ಚಿತ್ತಾರದೊಡನೆ ಬಂದ ಸೂರ್ಯ ಮುಂಜಾನೆ 
ಮುಳುಗಿದ ಸಂಜೆ ಅದೇ ಬಣ್ಣಗಳೊಡನೆ 
ಹೊಳೆದವಾ ತಾರೆಗಳು ಬೆಳಕಿನ ಚಪ್ಪರದಡಿ 
ಹುಲ್ಲಿನ ದಾಹ ನೀಗಿಸಿತು ಮುತ್ತಿನಿಬ್ಬನಿ 
ಮಳೆಯಿಂದ ಬೆಳೆಯು ಬಳ್ಳಿಯಿಂದ ಗೊಂಚಲು 
ಹುಡುಕುತ್ತಲೇ ಇರುವನು ಇನ್ನೂ ದೇವರ ಸಂಕೇತವನ್ನು

Wednesday, 13 February 2019

ಸಂಬಂಧಗಳು

ಮನೆಯ ಹಿರಿಯರೊಬ್ಬರು ತಮ್ಮ ಕೊನೆಯ ದಿನಗಳಲ್ಲಿಇದ್ದರು. ಇನ್ನು ಕೆಲವೇ ದಿನಗಳು ಅಥವಾ ಗಂಟೆಗಳು ಮಾತ್ರ ಉಳಿಯಬಹುದು ಎಂದು ಡಾಕ್ಟರ್ ಹೇಳಿದ್ದರು.  ಹಿರಿಯರಿಗೂ ತಾವಿನ್ನು ಉಳಿಯುವುದಿಲ್ಲ ಎಂಬುದು ಗೊತ್ತಿತ್ತು. ಆದರೆ ಇನ್ನೂ ಸ್ಪಷ್ಟವಾಗಿಯೇ ಉಸಿರಾಡುತ್ತಿದ್ದರು. ಪಂಚೇದ್ರಿಯಗಳು ಇನ್ನೂ ಕೆಲಸ ಮಾಡುತ್ತಿದ್ದವು.

ಇತ್ತ, ಅವರ ಮೂರು ಜನ ಮಕ್ಕಳು ಪಕ್ಕದ ರೂಮಿನಲ್ಲಿ ತಮ್ಮ ಕೆಲಸ ಶುರು ಮಾಡಿಕೊಂಡರು. ’ದೇಹ’ವನ್ನು ಹೇಗೆ ರವಾನಿಸುವುದು ಎಂಬ ಲೆಕ್ಕಚಾರಗಳು ನಡೆಯುತ್ತಿದ್ದವು. ಒಬ್ಬ ಮಗ “ ದೇಹವನ್ನು ಮನೆಯಿಂದ ದೇವಾಲಯಕ್ಕೆ ಹಾಗೂ ನಂತರ ಅಲ್ಲಿಂದ ಸಮಾಧಿಗೆ ಸಾಗಿಸಲು ಒಳ್ಳೆಯ ವಾಹನದ ವ್ಯವಸ್ಥೆ ಮಾಡೋಣ. ಎಲ್ಲರೂ ಸಮಾಧಿಗೆ ಬರಲು ಅನುಕೂಲವಾಗುವಂತೆ  ಒಂದು ಬಸ್ ಸಹ ಮಾಡೋಣ” ಎಂದ.

ಇನ್ನೊಬ್ಬ ಮಗಳು ಇದಕ್ಕೆಲ್ಲಾ ನನಗೆ ಗೊತ್ತಿರುವ ಒಬ್ಬರು ಇದ್ದಾರೆ, ಅವರ ಮೂಲಕ ನಮಗೆ ಒಂದಷ್ಟು ಡಿಸ್ಕೌಂಟ್ ಸಿಗುತ್ತದೆ.  ಬಸ್  ಏಕೆ, ಟೆಂಪೋ ಸಾಕು, ಜನ ಬರಲಿಲ್ಲ ಎಂದರೆ ಬಸ್ ವ್ಯರ್ಥವಾಗುತ್ತದೆ” ಎಂದಳು. ಅದಕ್ಕೆ ಮೂರನೆಯವನು ಪ್ರೀತಿ ಇದ್ದರೆ ಜನರು ತಾವಾಗೇ ಹೇಗಾದರು ಬರುತ್ತಾರೆ, ನಾವೇಕೆ ವಾಹನ ಅರೆಂಜ್ ಮಾಡಬೇಕು? ಬರುವವರು ಬರಲಿ ಬಿಡಿ. ಇನ್ನೂ ಅಪ್ಪನ ದೇಹ ಬೇಕಾದರೆ ನನ್ನ ಕಾರಿನಲ್ಲಿಯೇ ಸಾಗಿಸಬಹುದು ಆಮೇಲೆ ಕಾರು ತೊಳೆದರೆ ಆಯ್ತು” ಎಂದ. ಅದಕ್ಕೆ ಒಬ್ಬ ವಾಹನ ಮಾಡೋಣ ಎಂದರೆ, ಮಗಳು ತಾನು ಹೇಳಿದ ಕಡೆಯೇ ಆಗಲಿ ಎನ್ನುತ್ತಾ ಅವರಲ್ಲೇ ಭಿನ್ನಮತ ಶುರುವಾಯಿತು.

ಪಕ್ಕದ ರೂಮಿನಲ್ಲಿ ತಂದೆಗೆ ಎಲ್ಲ ಕೇಳಿಸುತ್ತಿತ್ತು. ಮಕ್ಕಳನ್ನು ಕರೆದು ಹೇಳಿದರು ನನ್ನ ಬಟ್ಟೆ ಹಾಗೂ ವಾಕಿಂಗ್ ಸ್ಟಿಕ್ ಕೊಟ್ಟು ಬಿಡ್ರಪ್ಪ, ದೇವಾಲಯದ ತನಕ ನಾನೇ ಹೇಗೋ ನಡೆದುಕೊಂಡು ಬಂದು ಬಿಡುತ್ತೇನೆ ಆಮೇಲಿನ ವ್ಯವಸ್ಥೆ ನೀವು ಮಾಡಿಕೊಳ್ಳಿ”.  

ಇಂದು ಬಹುತೇಕ ಸಂಬಂಧಗಳು ನಡೆಯುತ್ತಿರುವುದು ರೀತಿಯ ಲೆಕ್ಕಾಚಾರಗಳಲ್ಲೇ. ಮೇಲಿನ ಪ್ರಸಂಗ ಕೇವಲ ಹಾಸ್ಯಕ್ಕಾಗಿ ಹಾಗೂ ಒಂದಷ್ಟು ಉತ್ಪ್ರೇಕ್ಷೆಯಿಂದ ಕೂಡಿದ್ದರೂ ಎಲ್ಲೋ ಒಂದು ಕಡೆ ನಮ್ಮ ಜೀವನದಲ್ಲಿ ಒಂದಷ್ಟು ಸಾಮ್ಯತೆಗಳನ್ನು ಕಾಣಬಹುದು.          

ಸಾವಿನ ಮನೆಯಲ್ಲಿನ ಮೇಲಿನ ಪ್ರಸಂಗದಲ್ಲಿನ  ಮಕ್ಕಳ ಕಠೋರತೆ, ನಿರ್ದಯತೆ ನಮ್ಮದಾಗಿಲ್ಲಬಹುದು. ಆದರೆ ಸಂಬಂಧಗಳನ್ನು ನಿಭಾಯಿಸುವಲ್ಲಿ ನಮ್ಮ ಲೆಕ್ಕಾಚಾರಗಳು, ನಮ್ಮ ಆರ್ಥಿಕತೆಗಳು, ಸಮಯದ ಅಭಾವ, ನಮ್ಮ ಅಹಂ, ನಮ್ಮ ಸೋಮಾರಿತನ, ನಮ್ಮ ದೌರ್ಬಲ್ಯಗಳು ಖಂಡಿತವಾಗಿಯೂ ತೊಡಕಾಗಿರುವುದು ಸತ್ಯ.

ನಿರುದ್ಯೋಗ, ಬಡತನ, ಆರ್ಥಿಕ ಮುಗ್ಗಟ್ಟುಗಳು ಒಂದಷ್ಟು ದಶಕಗಳ ಹಿಂದೆ ನಮ್ಮ ಸಮಾಜವನ್ನು ನಮ್ಮ ಕುಟುಂಬಗಳನ್ನು ನಮ್ಮ ದೈನಂದಿನ ಜೀವನವನ್ನು ಕಾಡಿದ್ದು ನಿಜ. ಆದರೆ ಅವು ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿಯೂ ಸಹಾಯಕವಾಗಿದ್ದವು. ಸಮಾನ ದುಃಖಿಗಳು ಮಾನಸಿಕವಾಗಿ ಒಟ್ಟಾಗಿ ಕಲೆಯುತ್ತಿದ್ದರು, ಬೆರೆಯುತ್ತಿದ್ದರು.

ಇಂದು ನಿರುದ್ಯೋಗ ಅಂತಹ ದೊಡ್ಡ ಸಮಸ್ಯೆಯೇನಲ್ಲ. ಬೆಂಗಳೂರಿನಂಥ ನಗರದಲ್ಲಿ ಉದ್ಯೋಗಗಳು ಲಕ್ಷಾಂತರವಿದೆ. ಸಂಬಳವೂ ಲಕ್ಷ ಲಕ್ಷ. ಮೂಲಭೂತವಾದ ಬಡತನ, ಆರ್ಥಿಕ ಮುಗ್ಗಟ್ಟು ಇಲ್ಲ . ತಂದೆ ತಾಯಿಗಳಿಗೆ ತಮ್ಮ ಮಕ್ಕಳು ತಮ್ಮಂತೆ ಬಡತನದಲ್ಲಿ ಇಲ್ಲ ಎಂಬ ಸಮಾಧಾನ ನೆಮ್ಮದಿ ಇದೆ.

ಆದರೆ ಸಂಬಂಧಗಳಿಗೆ ಸಮಯ, ಮನಸ್ಸಿನಲ್ಲಿ ಜಾಗ ಪೂರಕವಾದ ವಾತಾವರಣ ನಿಧಾನವಾಗಿ ಕರಗುತ್ತಿರುವುದು ನಮ್ಮ ಅರಿವಿಗೆ ಬರುತ್ತಿಲ್ಲ. ಬಂದರೂ ಸುಧಾರಿತ ಜೀವನಮಟ್ಟ ನಮ್ಮನ್ನು ಜಾಣ ಕುರುಡರನ್ನಾಗಿಸುತ್ತಿದೆ. ನಂಟಿಗಿಂತ ನಾವು ಮಾಡುತ್ತಿರುವ, ಮಾಡಬೇಕಾಗಿರುವ ಗಂಟು ಮುಖ್ಯವಾಗುತ್ತಿದೆ.

ಗಂಟಿನ ಬಗ್ಗೆ ಗುರುರಾಜುಲು ನಾಯ್ಡು ಅವರ ಹರಿಕಥೆಯೊಂದರಲ್ಲಿ ಒಂದು ಸುಂದರ ಪ್ರಸಂಗವಿದೆ ವಯಸ್ಸಾದ ಅಜ್ಜಿಗೆ ಗಂಡನಿಲ್ಲ. ಇಬ್ಬರು ಗಂಡುಮಕ್ಕಳು ಸೊಸೆಯಂದಿರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಜೀವನ ಬೇಸರವಾಗಿ ಆಶ್ರಮ ಸೇರಿಕೊಳ್ಳಲು ಒಬ್ಬ ಗುರುವಿನ ಬಳಿ ಅಜ್ಜಿ ಹೋಗುತ್ತಾರೆ. ಗುರು ಇಬ್ಬರು ಮಕ್ಕಳಿರುವಾಗ ಆಶ್ರಮವೇಕೆ ಸೇರಬೇಕು” ಎಂದು ಹೇಳಿ ಅಲ್ಲಿಯೇ ಬಳಿಯಲ್ಲಿದ್ದ ಒಂದಷ್ಟು ಮಣ್ಣಿನ ದೀಪಗಳನ್ನು ಹೊಡೆದು ಕೊಡುತ್ತಾರೆ. ಅವುಗಳನ್ನು ಕಟ್ಟಿ ಗಂಟು ಮಾಡಿ ಸೀರೆಗೆ ಕಟ್ಟಿಕೊ ಎಂದು ಸಲಹೆ ನೀಡುತ್ತಾರೆ. ಮಕ್ಕಳ ಮನೆಗೆ ಹೋದಾಗ ಬಂದಾಗ ಅದರ ಮೇಲೆ ಕೈಯಾಡಿಸುತ್ತಾ ಇರು, ಶಬ್ದ ಮಾಡುತ್ತಿರು ಸಹಾ ಎಂದು ಹೇಳುತ್ತಾರೆ. ಮನೆಗೆ ಹೋದಾಗ ಅಜ್ಜಿ ಇದನ್ನೆಲ್ಲಾ ಚಾಚು ತಪ್ಪದೆ ಮಾಡುತ್ತಾರೆ ಇದನ್ನು ಕಂಡ ಮಕ್ಕಳು, ಸೊಸೆಯಂದಿರು ಅಜ್ಜಿ ಒಂದಷ್ಟು ಬಂಗಾರ ಇಟ್ಟುಕೊಂಡಿದ್ದಾರೆ, ಚೆನ್ನಾಗಿ ನೋಡಿಕೊಂಡರೆ ನಮಗೆ ಕೊಡುತ್ತಾರೆ ಎಂದುಕೊಳ್ಳುತ್ತಾ. ಅಂದಿನಿಂದ ಇಬ್ಬರು ಮಕ್ಕಳು ಸೊಸೆಯರು ಪೈಪೋಟಿಗೆ ಬಿದ್ದಂತೆ ಅಜ್ಜಿಯನ್ನು ಉಪಚರಿಸುತ್ತಾರೆ.
ಮುಂದೆ ಅಜ್ಜಿ ಸತ್ತಾಗ ಏನಾಗುತ್ತದೆ ಎಂಬುದು ಇನ್ನೂ ತಮಾಷೆಯ ಸಂಗತಿ. ಇದನ್ನು ಮತ್ತೆ ಹಾಸ್ಯಕ್ಕಾಗಿ ನಾಯ್ಡು ಅವರು ಬಳಸಿಕೊಂಡರೂ ಮಾನವ ಸಂಬಂಧಗಳ ಮೂಲ ಸ್ವರೂಪ ಬದಲಾಗುತ್ತಿರುವ ಬಗ್ಗೆ ಬೆಳಕು ಚೆಲ್ಲುತ್ತಾರೆ.

ಇಂದು ಸಂಬಂಧಗಳು ಹಣದಿಂದ ಮಾತ್ರ ಸಡಿಲವಾಗುತ್ತಿಲ್ಲ. ನಮ್ಮ ಆಧುನಿಕ ಜೀವನ ಶೈಲಿಗೆ ಸಂಬಂಧಿಸಿದ ಅನೇಕ ಆಯಾಮಗಳು  ಇದಕ್ಕೆ ಕಾರಣವಾಗಿವೆ. ಟಿ.ವಿ ಪ್ರಾರಂಭವಾದಾಗ ಕೇವಲ ಕೆಲವೇ ಗಂಟೆಗಳಿದ್ದ ಕಾರ್ಯಕ್ರಮಗಳು ಕೇಬಲ್ ಟಿವಿಯಿಂದ ದಿನವೆಲ್ಲಾ ವಿಸ್ತಾರವಾಯಿತು.  ಇದರಿಂದ ಕೌಟುಂಬಿಕ ಸ್ನೇಹ ಸಮಯಗಳು ಹಂಚಿ ನೀರಾದವುಕನಿಷ್ಟ ಜೊತೆಗಾರಿಕೆಯ ವೀಕ್ಷಣೆಯಾದರೂ ಇದ್ದ ಈ ಸಮಯವನ್ನೂ ಕಸಿದುಕೊಂಡಿದ್ದು ಮೊಬೈಲ್ ಹಾಗೂ ಆಪ್ ಗಳು. ಇದರಿಂದ ಪ್ರತಿಯೊಬ್ಬರ ಸಮಯವು ಖಾಸಗಿಯಾಗಿ ವೈಯಕ್ತಿಕವಾಗಿ ಮಾರ್ಪಟ್ಟುಗೊಂಡು ಸಂಬಂಧಗಳು ನಿಂತ ನೀರಾದವು.

ಇದರಲ್ಲಿ ತಾಂತ್ರಿಕತೆ, ಯಂತ್ರಗಳು ಅವಿಷ್ಕಾರಗಳನ್ನು ದೂರಿ ಪ್ರಯೋಜನವಿಲ್ಲ. ನಮ್ಮ ಹಿಡಿತದಲ್ಲಿ ಇಟ್ಟುಕೊಂಡು ಅದನ್ನು ಬಳಸಿಕೊಂಡು ಅದರ ಪ್ರಯೋಜನ ಪಡೆಯುವುದು ನಮ್ಮ ವಿವೇಚನೆ ವಿವೇಕಕ್ಕೆ ಬಿಟ್ಟಿದ್ದು. ಆದರೆ ವಿವೇಕ ವಿವೇಚನೆ ಗಳೆಲ್ಲವೂ ಈಗ ದೂರದ ಬುತ್ತಿಯಾಗಿದೆ.

ದಿನದ ಸಮಯವೆಲ್ಲ ನುಂಗುವ ಉದ್ಯೋಗ ಅನಿವಾರ್ಯ. ಅದರಿಂದ ಬರುವ ಸಾವಿರ, ಲಕ್ಷಗಳ ಸಂಬಳ ಇನ್ನೂ ಅನಿವಾರ್ಯ, ಅವಶ್ಯ. ಅವುಗಳ ನಡುವೆ ಸಿಗುವ ಸಮಯದಲ್ಲಿ ಮೊಬೈಲ್, ಟಿವಿ, ರ್ಚು, ಮೋಜುಗಳೆಲ್ಲವೂ ಮನಸ್ಸಿಗೆ ಸಾಂತ್ವನ. ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿಕೊಳ್ಳುವ ಪೋಸ್ಟ್ ಗಳಿಂದ ಸಾಮಾಜಿಕ ಮನ್ನಣೆ. ಇವುಗಳ ನಡುವೆ ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳುವುದು ಹೇಗೆ ಎಂಬುದೇ ಪ್ರಶ್ನೆ.

ದಂಡಿಯಾಗಿ ಸಿಗುತ್ತಿದ್ದ ನೀರು, ಮರ, ಗಾಳಿಯನ್ನು, ಪರಿಸರವನ್ನು ಉಪೇಕ್ಷಿಸಿದ ಫಲವನ್ನು ಈಗಾಗಲೇ ಅನುಭವಿಸುತ್ತಿದ್ದೇವೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ಏಪ್ರಿಲ್ ನಿಂದ ನೀರಿಲ್ಲ. ದೆಹಲಿ ವಾಸಿಸಲು ಯೋಗ್ಯವಾಗಿ ಉಳಿದಿಲ್ಲ ಎನ್ನುತ್ತಿದೆ ಕೋರ್ಟ್. ಬೆಂಗಳೂರು ಸಹ ನಿಟ್ಟಿನಲ್ಲಿ ದೂರವೇನಿಲ್ಲ.  ಇದಕ್ಕೆಲ್ಲ ಪರಿಹಾರವೇನು ವುದು ಮೇಲುನೋಟಕ್ಕೆ ಕಷ್ಟ ಎಂಬಂತೆ ಕಂಡರೂ ತೀರ ಕಷ್ಟವೇನಲ್ಲ

ಇಂತಹುದರಲ್ಲಿ ಸಂಬಂಧಗಳನ್ನು ಉಪೇಕ್ಷಿಸಿದರೆ ಪರಿಸರದ ರೀತಿಯ ಕೆಟ್ಟ ಪರಿಣಾಮಗಳನ್ನು ಸಂಬಂಧಗಳಲ್ಲಿ ಸಹಾ ನಾವು ಅನುಭವಿಸಬೇಕಾಗುತ್ತದೆ. ಪ್ರತಿಯೊಂದು ಧರ್ಮವು, ಪ್ರೀತಿ, ಸಹನೆ ಸಾರುತ್ತದೆ. ನಿನ್ನನ್ನು ನೀನು ಪ್ರೀತಿಸುವಂತೆ ಪರರನ್ನು ಪ್ರೀತಿಸು’ ಎಂಬ ಯೇಸುವಿನ ವಾಕ್ಯ ಎರಡು ಸಾವಿರ ವರ್ಷಗಳಲ್ಲಿ ಪ್ರಸ್ತುತವಾಗಿ ನಿಂತಿರುವುದು ಸಂಬಂಧಗಳ ಮೌಲ್ಯ ದಿಂದಲೇ. ಪ್ರತಿ ಮನಸ್ಸಿನಲ್ಲಿ ಪ್ರತಿ ಮನೆಯಲ್ಲಿ ಪರಸ್ಪರ ಮಾನವೀಯ ಸಂಬಂಧಗಳು ತಮ್ಮ ಅರ್ಥಗಳನ್ನು ಹುಡುಕುತ್ತಾ, ಬೆಳೆಯುತ್ತಾ ಸಾಗಿದರೆ  ಸಂಬಂಧಗಳ ಪುನಶ್ಚೇತನ ಸಾಧ್ಯ. ಹೀಗಾದಾಗ ನಮ್ಮನ್ನು ಕಾಡುತ್ತಿರುವ ಒಬ್ಬಂಟಿತನ, ಅನಾಥ ಪ್ರಜ್ಞೆ ಅಥವಾ ಹತಾಶ ಭಾವ ಕಡಿಮೆಯಾಗುತ್ತ ತಾಂತ್ರಿಕ ಆವಿಷ್ಕಾರಗಳನ್ನು ಮೀರಿ ಬೆಳೆಯುವಂತಹ ಸಾಧನಗಳಾಗುವುದರಲ್ಲಿ ಅನುಮಾನವಿಲ್ಲ.
Read more!