Friday, 20 October 2017

ಮಿಥುನ್ ಬಿರಾಲ - ಸಂವಾದ


ಕ್ರಿಕೆಟ್ ಆಟದಲ್ಲಿ ಆಟಗಾರರು ಬಹು ಮುಖ್ಯ ಭಾಗ. ೨೨ ಜನ ಮೈದಾನದಲ್ಲಿ ಆಟವಾಡಿದರೆ, ತೆರೆಯ ಹಿಂದೆ ನೂರಾರು ಜನರ ಶ್ರಮವಿರುತ್ತದೆ. ಅಂತಹ ಒಂದು ಬಹು ಮುಖ್ಯ ಕಾರ್ಯಕ್ಷೇತ್ರವೆಂದರೆ ಪಂದ್ಯದ ರೆಫರಿಯ ಹುದ್ದೆ. ಅತ್ಯಂತ ಜವಬ್ದಾರಿಯ ಹಾಗೂ ಗೌರವಯುತವಾದ ಹುದ್ದೆಗೆ ತನ್ನದೇ ಆದ ಘನತೆಯಿದೆ. ಕರ್ನಾಟಕದ ಆಟಗಾರರಿಗೆ ವಿಶ್ವ ಕ್ರಿಕೆಟ್ನಲ್ಲಿ ಒಂದು ವಿಶಿಷ್ಠ ಸ್ಥಾನವಿದೆ. ಸಭ್ಯ ಕ್ರಿಕೆಟಿಗರೆಂದೇ ಖ್ಯಾತಿ ಪಡೆದ ನಮ್ಮದೇ ಆಟಗಾರರು ರೆಫರಿ ಹುದ್ದೆಯನು ಅಲಂಕರಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಈಗ ಮಿಥುನ್ ಬಿರಾಲ ಹುದ್ದೆಗೆ ಆಯ್ಕೆಯಾಗಿದ್ದಾರೆ. ೪೦ ವರ್ಷದ ಮಿಥುನ್ ರವರ ತಂದೆ ರಘುನಾಥ್ ಬಿರಾಲ ಸಹಾ ಹುದ್ದೆಯನ್ನು ನಿಭಾಯಿಸಿದವರೇ. ಇಂತಹ ಸಂದರ್ಭದಲ್ಲಿ ಮಿಥುನ್ರವರನ್ನು ಮಾತುಕತೆಯ ಪರವಾಗಿ ಅಭಿನಂದಿಸಿದಾಗ ನಡೆದ ಸಂವಾದ .

ಮಾ.- ನಮಸ್ಕಾರ ಮಿಥುನ್, ಮೊದಲಿಗೆ ಬಿಸಿಸಿಐ ನಿಯೋಜಿತ  ಮ್ಯಾಚ್ ರೆಫ಼ರಿ ಆಗಿ ಆಯ್ಕೆಯಾಗಿರುವ ನಿಮಗೆ ನಮ್ಮ ಮಾತುಕತೆ ಬಳಗ ಹಾಗೂ ಕಥೋಲಿಕ ಕ್ರೈಸ್ತರ ಪರವಾಗಿ ಅಭಿನಂದನೆಗಳು. ಪಾತ್ರದಲ್ಲಿನ ನಿಮ್ಮ ಮುಂದಿನ ದಿನಗಳಿಗೆ ನಮ್ಮ ಶುಭ ಹಾರೈಕೆಗಳು
ಮಿಥುನ್ ನಮಸ್ಕಾರ ಪ್ರಶಾಂತ್. ನಿಮಗೂ, ನಿಮ್ಮ ಪತ್ರಿಕೆಗೂ, ಎಲ್ಲಾ ಜನರಿಗೂ ನನ್ನ ಧನ್ಯವಾದಗಳು. ನಿಮ್ಮ ಅಭಿನಂದನೆಯೊಂದಿಗೆ ಪ್ರಾರಂಭಿಸುತ್ತಿರುವ ನನ್ನ ಹೊಸ ಇನ್ನಿಂಗ್ಸ್ಗಾಗಿ ನನಗಾಗಿ ಪ್ರಾರ್ಥನೆಯೂ ಇರಲಿ.

ಮಾ.- ನಿಮ್ಮ ತಂದೆ ರಘುನಾಥ್ ಬಿರಾಲ ಅವರೂ ಸಹಾ ಮ್ಯಾಚ್ ರೆಫರಿ ಆಗಿದ್ದವರು. ತಂದೆಯ ಹೊರತಾಗಿ  ರೆಫರಿಯ ಹುದ್ದೆ ಆಯ್ಕೆ ಮಾಡಲು ಪ್ರೇರಣೆ ಏನು? ಸ್ವತ: ಆಟಗಾರರಾಗಿದ್ದ ನೀವು ಕೋಚ್ ಅಥವಾ ತರಬೇತುದಾರರಾಗಬಹುದಿತ್ತಲ್ಲವೇ?
ಮಿಥುನ್ ಹೌದು ನಾನು ಆಸ್ಟ್ರೇಲಿಯಾದವರು ನೀಡುವ ೨ನೇ ಹಂತದ ಸರ್ಟಿಫೈಡ್ ಕೋಚ್. ವರ್ಷದ ರಣಜಿ ಸರಣಿ ಅರಂಭಗೊಂಡರೂ ಕೋಚ್ ಆಗಿ ನನಗೆ ಯಾವುದೇ ರಾಜ್ಯದಿಂದ ಕರೆ ಇನ್ನೂ ಬಂದಿಲ್ಲ. ಕರ್ನಾಟಕ ರಾಜ್ಯ ಸಂಸ್ಥೆಯಿಂದ ಅವಕಾಶ ಲಭಿಸಿದಾಗ, ಇದು ಸದ್ಯಕ್ಕೆ ಅತ್ತ್ಯುತ್ತಮ ಅವಕಾಶ ಎಂದೆನಿಸಿತು. ಕೋಚ್ ಹುದ್ದೆಯ ಅರ್ಹತೆ ಪಡೆದಿರುವುದರಿಂದ ಅದನ್ನು ಯಾವುದೇ ಸಮಯದಲ್ಲೂ ಮಾಡಬಹುದಾಗಿದೆ. ಆಟದೊಂದಿಗೆ ಯಾವುದಾದರೊಂದು ರೀತಿಯ ನಂಟನ್ನು ಉಳಿಸಿಕೊಳ್ಳಬೇಕಾಗಿರುವುದು ಮುಖ್ಯ ಎನಿಸಿತು. ಹುದ್ದೆಯನ್ನು ನಾನು ಸ್ವೀಕರಿಸಿರುವುದು ಸಂತಸ ತಂದಿದೆ.

ಮಾ.- ಪಂದ್ಯಗಳಲ್ಲಿ ಆಟಗಾರರ ನಡುವಳಿಕೆ ಬಗ್ಗೆ ಗಮನ ಹಾಗೂ ಪಂದ್ಯಕ್ಕೆ ಅಡಚಣೆ ಉಂಟಾಗುವ ಸಮಯದಲ್ಲಿ ಮ್ಯಾಚ್ ರೆಫರಿಗಳು ಕಾರ್ಯಪ್ರವೃತ್ತರಾಗುವ ಬಗ್ಗೆ ಕ್ರಿಕೆಟ್ ಪ್ರಿಯರಿಗೆ ಒಂದಷ್ಟು ಮಾಹಿತಿ ಇದ್ದರೂ, ಒಬ್ಬ ರೆಫರಿಯ ಇತರ ಕಾರ್ಯ ಚಟುವಟಿಕೆಗಳು ಯಾವುವು?
ಮಿಥುನ್ ಕ್ರೀಡೆಯಲ್ಲಿ ಆಟಗಾರರೇ ಅತಿ ಮುಖ್ಯ ಮತ್ತು ಅದು ನಡೆಯುವುದೇ ಅವರಿಂದ. ಆಟಗಾರರ ಮೈದಾನದೊಳಗೆ ತಮ್ಮ ಅತ್ತ್ಯುತ್ತಮ ಸಾಮಾರ್ಥ್ಯ ತೋರಲು ಬೇಕಾದ ಏನೆಲ್ಲಾ ಸೌಲಭ್ಯಗಳು ಇರಬೇಕೋ ಅದರೆಲ್ಲದರ ಕಡೆ ಗಮನ ಕೊಡಬೇಕು. ಒಬ್ಬ ಮ್ಯಾಚ್ ರೆಫರಿ ಆಟಗಾರರ ಗೆಳೆಯನಂತಿರಬೇಕೆ ವಿನಹ ಅವರ ಮೇಲೆ ಸವಾರಿ ಮಾಡಬಾರದು. ಹೌದು, ಆಟ ಲೋಕ ರೂಢಿಯ ಕ್ರೀಡಾ ಮನೋಭಾವದಿಂದ ನಡೆಯುತ್ತಿದೆ ಎಂಬುದನ್ನು ನಾವು ಖಚಿತ ಪಡಿಸಿಕೊಳ್ಳಬೇಕಾಗುತ್ತದೆ. ಕಟ್ಟುನಿಟ್ಟಾಗಿರಬೇಕಾಗಿದ್ದರೂ ಕಠೋರವಾಗಿರಲು ಸಾಧ್ಯವಿಲ್ಲ. ತೂಗಿಸಿಕೊಂಡು ಹೋಗಬೇಕಾಗುತ್ತದೆ. ಇದರೊಂದಿಗೆ ಮೈದಾನ ಹಾಗೂ ಕ್ರೀಡಾಂಗಣದಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ, ಆಟಗಾರರು ಉಳಿದುಕೊಳ್ಳುವ ಹೋಟೆಲ್ಲುಗಳ ಗುಣಮಟ್ಟ, ಆಟದ ವರದಿಗಾಗಿ ಸರಿಯಾದ ಅಂತರ್ಜಾಲ ವ್ಯವಸ್ಥೆ, ಮೈದಾನದಲ್ಲಿನ ಸಲಕರಣೆಗಳ ಗುಣಮಟ್ಟ ಹೀಗೆ ಎಲ್ಲದರ ಬಗ್ಗೆ ರೆಫರಿ ಗಮನ ಹರಿಸಬೇಕಾಗುತ್ತದೆ. ಒಟ್ಟಿನಲ್ಲಿ ಆಟಕ್ಕೆ ಆಟಗಾರರಿಗೆ ಯಾವುದೇ ತೊಂದರೆ ಆಗದಂತ ವಾತಾವರಣದ ಬಗ್ಗೆ ಸದಾ ಗಮನಹರಿಸಬೇಕಾಗುತ್ತದೆ.

ಮಾ. - ವಿಶ್ವ ಕ್ರಿಕೆಟ್ನಲ್ಲಿ ಕರ್ನಾಟಕದ ಕ್ರಿಕೆಟಿಗರು ತಮ್ಮ ಸಭ್ಯ ಕ್ರಿಕೆಟ್ ಎಂದು ಹೆಸರುವಾಸಿಯಾದವರು, ಒಂದು ಸಂಪ್ರದಾಯ ನಿಮ್ಮ ಹುದ್ದೆಯ ಮೇಲೆ ಹೇಗೆ ಪರಿಣಾಮ ಬೀರಬಹುದು. ಏಕೆಂದರೆ ಯಾವುದೋ ಒಂದು ನಡುವಳಿಕೆ ಒಂದು ಸಂಸ್ಕೃತಿಯಲ್ಲಿ ಬೆಳೆದ ಆಟಗಾರನಿಗೆ ತಪ್ಪೆನಿಸಿದರೆ  ಇನ್ನೊಬ್ಬನಿಗೆ ಅದು ಏನೂ ಅನಿಸದಿರಬಹುದು
ಮಿಥುನ್ - ಹೌದು ನಮ್ಮ ಆಟಗಾರರು ಉತ್ತಮ ನಡುವಳಿಕೆಗೆ ಹೆಸರುವಾಸಿ ಹಾಗೂ ಕ್ರಿಕೆಟ್ ಉತ್ತಮ ರಾಯಭಾರಿಗಳು. ಆದರೆ ಆಟಗಾರರು ಪರಸ್ಪರ ಆಡುತ್ತಲೇ ಇರುವುದರಿಂದ, ಹೇಗೆ ನಡೆದುಕೊಳ್ಳಬೇಕು ಹಾಗೂ ತಮ್ಮ ಮಿತಿಗಳನ್ನು ತಿಳಿದವರೇ ಆಗಿರುತ್ತಾರೆ. ಅದನ್ನು ಮೀರಿದ ಅಶಿಸ್ತಿನ ನಡುವಳಿಕೆಗೆ ನಿಯಮಗಳಿವೆ ಹಾಗೂ ಅದರ ಪ್ರಕಾರ ಅದೇಷ್ಟೇ ದೊಡ್ಡ ಆಟಗಾರನಾಗಿದ್ದರೂ ತಲೆ ಬಾಗಬೇಕಾಗುತ್ತದೆ

ಮಾ.-  ಮ್ಯಾಚ್ ರೆಫರಿ ಆಗಲಿ ಯಾವುದಾದರೂ ನಿರ್ದಿಷ್ಟವಾದ ಅರ್ಹತೆ ಇದೆಯೇ?
ಮಿಥುನ್ - ಹೌದು, ರೆಫರಿ ಆಗಬಯಸುವವರು ಕನಿಷ್ಠ ೨೦ ರಣಜಿ ಪಂದ್ಯಗಳನ್ನಾದರು ಆಡಿರಲೇ ಬೇಕಾಗುತ್ತದೆ.

ಮಾ.- ಇಂದಿನ ದಿನಗಳಲ್ಲಿ ಮ್ಯಾಚ್ ರೆಫರಿ ಹುದ್ದೆಯ ಸವಾಲುಗಳೇನು?
ಮಿಥುನ್ ಈಗ ಪ್ರತಿ ಪಂದ್ಯವೂ ಕ್ಯಾಮರಗಳಲ್ಲಿ ಚಿತ್ರೀಕರಣವಾಗುತ್ತದೆ. ಇದರಿಂದ ಅನುಕೂಲದೊಂದಿಗೆ ಒತ್ತಡವೂ ಇರುತ್ತದೆ. ಪಂದ್ಯದ ಪ್ರತಿ ಕ್ಷಣವನ್ನೂ ಗಮನಿಸಲು ಕ್ಯಾಮರಗಳು ಸಹಾಯಕ. ಅದೇ ನಿಟ್ಟಿನಲ್ಲಿ ನಮ್ಮಿಂದ ಯಾವುದೇ ಒಂದು ಲೋಪವಾದರೆ ಬೇರೆಯವರು ಅದನ್ನು ಎತ್ತಿ ತೋರಿಸುವ ಸಂಭವವೂ ಇದೆ.

ಮಾ.-  ಇನ್ನೂ ನಿಮ್ಮ ಕ್ರಿಕೆಟ್ ಜೀವನಕ್ಕೆ ಬಂದರೆ, ಪಾದಾರ್ಪಣೆ ಮಾಡಿದ ಮೊದಲ ವರ್ಷದಲ್ಲಿ ಅತಿ ಹೆಚ್ಚು ರನ್ನುಗಳನ್ನು ಹೊಡೆದ ದಾಖಲೆ ೧೭ ವರ್ಷಗಳಿಂದ ನಿಮ್ಮ ಹೆಸರಲ್ಲಿದೆ. ಆಟಗಾರನಾಗಿ ನಿಮ್ಮ ಆರಂಭದ ವರ್ಷಗಳ ಬಗ್ಗೆ ಹೇಳಿ?
ಮಿಥುನ್ ಕ್ರಿಕೆಟ್ ಕುಟುಂಬ ಹಿನ್ನಲೆಯಿಂದ ಬಂದವರಿಗೆ ಏರುಪೇರುಗಳು ಸಹಜ. ನಾನಾಡಿದ ಮೊಟ್ಟ ಮೊದಲ ಪಂದ್ಯದಲ್ಲಿ ಶತಕಗಳಿಸಿದ್ದೆ. ನನಗಾಗ ೧೩ ವರ್ಷ. ನಂತರ ಎಲ್ಲಾ ವಯೋಮಾನದ ತಂಡಗಳಲ್ಲೂ ನಾನು ಆಡಿದ್ದೇನೆ. ಕಿರಿಯರ ತಂಡದಲ್ಲಿ ದ್ವಿಶತಕ ಬಾರಿಸಿದ್ದು ನನಗೆ ರಣಜಿ ಪ್ರವೇಶಿಸಲು ಸಹಕಾರಿಯಾಯಿತು. ರಣಜಿ ತಂಡಕ್ಕೆ ಆಯ್ಕೆಯಾದ ಮೊದಲ ವರ್ಷ ನನಗೆ ಆಡಲು ಅವಕಾಶವೇ ಸಿಗಲಿಲ್ಲ. ನನ್ನ ತಂದೆ ಆಗ ತಂಡದ ಕೋಚ್ ಆಗಿದ್ದರು. ನನಗಿಂತ ಹಿಂದೆ ಬಂದವರಿಗೆಲ್ಲಾ ನನಗಿಂತ ಮುಂಚೆ ಅವಕಾಶ ಸಿಕ್ಕಿದು ನೋಡಿಯೂ ನನಗೆ ಏನೂ ಅನಿಸಲಿಲ್ಲ ಎಂದು ನಾನು ಹೇಳಿದರೆ ಅದು ಸುಳ್ಳಾಗುತ್ತದೆ. ಈಗ ಹಿಂದಿರುಗಿ ನೋಡಿದರೆ ನನ್ನ ತಂದೆಯ ಹುದ್ದೆಯ ಬಗ್ಗೆ ನನಗೇನು ಹೊಟ್ಟೆಕಿಚ್ಚಿಲ್ಲ. ಅವರದು ನಿಜಕ್ಕೂ ಕಷ್ಟದ ಕೆಲಸವೇ. ಕಷ್ಟದ ದಿನಗಳೇ ನನಗೆ ಮುಂದೆ ಅವಕಾಶ ಸಿಕ್ಕಾಗ ದಾಖಲೆಯ ರನ್ನು ಗಳಿಸಲು ಪ್ರೇರಣೆಯಾಯಿತು.

ಮಾ.- ನಿಮ್ಮ ಅಂದಿನ ಸಾಮರ್ಥ್ಯದ ಹಿನ್ನಲೆಯಲ್ಲಿ ನೋಡಿದಾಗ, ನೀವು ಕ್ರಿಕೆಟ್ನಲ್ಲಿ ಇನ್ನಷ್ಟು ಸಾಧಿಸಬಹುದಿತ್ತು ಎನಿಸುವುದಿಲ್ಲವೇ? ಅಂದು ನೀವು ಎದುರಿಸಿದ ಸವಾಲುಗಳೇನು?
ಮಿಥುನ್ ಹೌದು, ನಾನು ಇನ್ನಷ್ಟು ಸಾಧಿಸಬಹುದಿತ್ತು. ಆದರೆ ಅಂದು ನಾನು ಎಸ್. ಎಸ್. ದಾಸ್, ಆಕಾಶ್ ಚೋಪ್ರ, ಸೆಹ್ವಾಗ್, ಗೌತಮ್ ಗಂಭೀರ ಮುಂತಾದವರೊಂದಿಗೆ ಸ್ಪರ್ಧೆಯಲ್ಲಿದ್ದೆ. ಅವರ ಸಾಧನೆಗಳೇನು ಎಂಬುದು ಈಗ ಎಲ್ಲರಿಗೆ ತಿಳಿದಿದೆ. ಆದರಿಂದ ನನಗೆ ಯಾವುದೇ ರೀತಿಯ ವಿಷಾದವಿಲ್ಲ.

ಮಾ.- ಇಂದಿನ ಕ್ರಿಕೆಟ್ ಬದಲಾಗಿದೆಯೇ?
ಮಿಥುನ್ ಖಂಡಿತ. ಅಂದು ೨೫೦ ರಿಂದ ೨೭೫ ರನ್ನುಗಳು ಸ್ಪರ್ಧಾತ್ಮಕವಾಗಿದ್ದವು, ಇಂದು ೧೮೦ ರನ್ನುಗಳನ್ನು ೨೦ ಓವರುಗಳಲ್ಲಿ ಚಚ್ಚಿ ಬಿಸಾಡುತ್ತಾರೆ. ಹೆಚ್ಚು ರನ್ನುಗಳು, ರಂಗು ರಂಗಿನ ಬಟ್ಟೆ, ಅಡ್ಡಾದಿಡ್ಡಿ ಹೊಡೆತಗಳು ಎಲ್ಲಾ ಸೇರಿ ಕ್ರಿಕೆಟ್ ಮನೋರಂಜನೆಯ ಮಾಧ್ಯಮವಾಗಿದೆ. ಮೊದಲ ಎಸೆತದಿಂದಲೇ ಮನೋರಂಜನೆ. ಸಾಂಪ್ರದಾಯಿರಿಗೆ ಟೆಸ್ಟ್ ಕ್ರಿಕೆಟ್ ಇಷ್ಟ. ಅದರಲ್ಲಿ ಅಂತಹ ಬದಲಾವಣೆ ಆಗಿಲ್ಲ.

ಮಾ.- ಈಗಿನ ನಿಮ್ಮ ಮೆಚ್ಚಿನ ಕ್ರಿಕೆಟಿಗರು?
ಮಿಥುನ್ ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್, .ಬಿ.ಡಿವಿಲಿಯರ್ಸ್ ಹಾಗೂ ಜೋ ರೂಟ್

ಮಾ.- ಕ್ರಿಕೆಟ್ ಆಡುವುದನ್ನು ಬಿಟ್ಟು ರಂಗದಲ್ಲಿ ಯುವಕರಿಗೆ ಬೇರೆ ಉದ್ಯೋಗಾವಕಾಶಗಳು ಇವೆಯೇ?
ಮಿಥುನ್ ನಿಮ್ಮ ಅಭಿರುಚಿಗೆ ತಕ್ಕಂತೆ ಅನೇಕ ಅವಕಾಶಗಳಿವೆ. ವೀಕ್ಷಕ ವಿವರಣೆ, ಅಂಪೈರ್, ಸ್ಕೋರರ್, ಅಂಕಣ ತಯಾರಿಕೆ, ದೈಹಿಕ ಸಲಹೆಗಾರರು, ಕ್ಯಾಮರಾ ಮೆನ್, ಮಾಧ್ಯಮ ಪ್ರತಿನಿಧಿ ಹೀಗೆ ಅನೇಕ ಅವಕಾಶಗಳಿವೆ.

ಮಾ.- ವಂದನೆಗಳು ಮಿಥುನ್. ನಿಮ್ಮ ಹುದ್ದೆ ಅಂತರಾಷ್ಟ್ರೀಯ ಪಂದ್ಯಗಳಿಗೂ ಆದಷ್ಟು ಬೇಗ ವಿಸ್ತಾರಗೊಳ್ಳಲಿ ಎಂದು ಹಾರೈಸುತ್ತೇವೆ.
ಮಿಥುನ್ - ನಿಮ್ಮ ಹಾರೈಕೆಗೆ ಹಾಗೂ ಸಂವಾದಕ್ಕಾಗಿ ವಂದನೆಗಳು. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.

Wednesday, 20 September 2017

ಸುರಾಗ್‍


ಕನ್ನಡ ಕ್ರೈಸ್ತ ವಲಯದಲ್ಲಿ ಸಾಂಸ್ಕೃತಿಕವಾಗಿ, ಸಾಹಿತ್ಯ ಸಂಗೀತದಲ್ಲಿ ಹಲವಾರು ಪ್ರತಿಭಾವಂತರು ತೊಡಗಿಸಿಕೊಂಡಿದ್ದರೂ ತೀರ ವೃತ್ತಿಯಾಗಿ ತೊಡಗಿಸಿಕೊಂಡವರು ಹಾಗೂ ಅದರಲ್ಲಿ ಯಶಸ್ಸು ಕಂಡವರು ವಿರಳ. ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದ ಕ್ರೈಸ್ತರ ಸಂಖ್ಯೆ ಕಡಿಮೆಯೇ ಎನ್ನಬಹುದು.

ಅಂಥಹ ವಿರಳರಲ್ಲಿ ಸಾಧು ಕೋಕಿಲ ಒಬ್ಬರು. ಸಾಧು ಶೀಲನ್ ಎಂದೇ ೮೦-೯೦ರ ದಶಕದಲ್ಲಿ ತಮ್ಮ ಸಂಗೀತದ ಮೂಲಕ ಕನ್ನಡ ಕ್ರೈಸ್ತ ವಲಯದಲ್ಲಿ ಸುಪ್ರಸಿದ್ಧರಾಗಿದ್ದವರು ಸಾಧು. ಅವರು ವಾದ್ಯ ಸಂಯೋಜಿಸಿದ ಅನೇಕ ಧ್ವನಿಸುರಳಿಗಳು, ಗೀತೆಗಳು ಇಂದಿಗೂ ಕನ್ನಡ ಜನ ಮನಗಳಲ್ಲಿ ಬೆರೆತು ಹೋಗಿದೆ.

ಇಂಥ ಸಾಧು ಶೀಲನ್ ೧೯೯೪ರಲ್ಲಿ ’ಶ್’ ಚಿತ್ರದ ಮೂಲಕ ಸಾಧು ಕೋಕಿಲರಾಗಿ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ದಾಪುಗಾಲಿಟ್ಟರು. ಚಿತ್ರರಂಗಕ್ಕೆ ಬಂದ ಈ ಎರಡು ದಶಕಗಳಲ್ಲಿ ಸಾಧುರವರ ಸಾಧನೆ ಸಾಮಾನ್ಯವೇನ್ನಲ್ಲ. ಶ್, ಗಂಡುಗಲಿ, ರಕ್ತ ಕಣ್ಣೀರು, H2O, ಟೋನಿ, ಇಂತಿ ನಿನ್ನ ಪ್ರೀತಿಯ, ಎದೆಗಾರಿಕೆ, ಮಾಸ್ತಿ ಗುಡಿ ಮುಂತಾದ ಅನೇಕ ಹಿಟ್ ಚಿತ್ರಗಳ ಸಂಗೀತ ನಿರ್ದೇಶನ ಒಂದು ಕಡೆ. ಮತ್ತೊಂದು ಕಡೆ ನಿರ್ದೇಶನದಲ್ಲೂ ನಿರ್ಮಾಪಕನಾಗಿಯೂ ಸಾಧುರವರ ಸಾಧನೆ ದಾಖಲಾರ್ಹ. ಸಂಗೀತ ನಿರ್ದೇಶನ ಮಾತ್ರವಲ್ಲದೆ, ಹಿನ್ನಲೆ ಸಂಗೀತ, ರೀರೆಕಾರ್ಡಿಂಗ್‍ನಲ್ಲೂ ಸಾಧುರವರದು ದೊಡ್ಡ ಹೆಸರು.

ಆದರೆ ಇಂದು ಇದೆಕ್ಕೆಲ್ಲಾ ಮಿಗಿಲಾಗಿ ಹಾಸ್ಯ ನಟನಾಗಿ ಬೆಳೆದು ನಿಂತಿರುವ ಪರಿ ಅಚ್ಚರಿ ಮೂಡಿಸುವಂಥದು. ಇಂದು ಯಾವುದೇ ಜನಪ್ರಿಯ ನಾಯಕ ನಟನಿಗೆ ಸಿಗುವ ಸಿಳ್ಳೆ, ಚಪ್ಪಾಳೆ, ಕೇಕೆಯ ಸ್ವಾಗತ ಸಾಧು ಕೋಕಿಲ ತೆರೆಯ ಮೇಲೆ ಬಂದಾಗ ಸಿಗುತ್ತದೆ ಎನ್ನುವುದು ಸುಳ್ಳಲ್ಲ.
ಇದರ ನಡುವೆ ಸಾಧುರವರು ಸಂಗೀತ ಕ್ಷೇತ್ರದಲ್ಲೇ ಇನ್ನಷ್ಟು ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳಬೇಕೆನ್ನುವುದು ಅವರ ಅಭಿಮಾನಿಗಳೆಲ್ಲರ ಬೇಡಿಕೆ. ಎಸ್ಪಿ ಬಾಲಸುಬ್ರಮಣಿಯಮ್‍ರಂಥ ದಿಗ್ಗಜರೇ ಈ ಮಾತನ್ನು ಕಾರ್ಯಕ್ರಮವೊಂದರಲ್ಲಿ ಹೇಳಿರುವುದನ್ನು ನಾವು ಕೇಳಿದ್ದೇವೆ.
ಈ ನಿರಾಸೆ, ಕೊರಗನ್ನು ನೀಗಸಲೆಂಬಂತೆ ಅವರ ಮಗ ಸುರಾಗ್ ಈಗ ಸ್ವತಂತ್ರವಾಗಿ ಸಂಗೀತ ನಿರ್ದೇಶನಕ್ಕೆ ಇಳಿದಿದ್ದಾರೆ. ಮಹೇಶ್ ಬಾಬು ನಿರ್ದೇಶನದ, ಚೇತನ್ ಅಭಿನಯದ ’ಅತಿರಥ’ ಚಿತ್ರ ಅವರ ಸಂಗೀತ ನಿರ್ದೇಶನ ಮೊದಲ ಚಿತ್ರವಾಗಿದೆ. ಪುನೀತ್ ರಾಜ್‍ಕುಮಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರ ನಡುವೆ ’ಅತಿರಥ’ ಚಿತ್ರದ ಆಡಿಯೋ ಲಾಂಚ್ ಆಗಿದೆ. ಸಾಧು ಕೋಕಿಲ ಮಗನ ಸಂಗೀತ ನಿರ್ದೇಶನ ಎಂಬ ನಿರೀಕ್ಷೆಯ ಭಾರವನ್ನು ಹೊತ್ತುಕೊಳ್ಳಬೇಕಾದ ಅನಿವಾರ್ಯತೆ ಸುರಾಗ್ ಮೇಲಿದೆ. ಬಿಡುಗಡೆ ಆದ ಹಾಡುಗಳು ಈಗಾಗಲೇ ಯೂಟ್ಯೂಬ್‍ನಲ್ಲಿ ಸದ್ದು ಮಾಡುತ್ತಿದೆ. ಸುರಾಗ್‍ನ ವಯೋಸಹಜ ಲವಲವಿಕೆ, ಹೊಸತನ, ಪ್ರಯೋಗಾತ್ಮಕ ಮನಸ್ಸು ಚಿತ್ರದ ಹಾಡುಗಳಲ್ಲಿ ಕಾಣುತ್ತದೆ. ಯುವ ಸಂಗೀತ ಪ್ರೇಮಿಗಳನ್ನು ಸೆಳೆಯುವಂತ ರಾಗ ಸಂಯೋಜನೆ ಇಲ್ಲಿರುವುದರಿಂದ ಹಾಡುಗಳು ಯಶಸ್ವಿಯಾಗಬಹುದೆಂಬ ಭರವಸೆ ಇದೆ.

ಈ ಹಿನ್ನಲೆಯಲ್ಲಿ ಮಾತುಕತೆಯ ಪರವಾಗಿ ಸುರಾಗ್‍ನನ್ನು ಭೇಟಿ ಮಾಡಲು ಹೋದಾಗ ಊಟದ ಸಮಯ ಮೀರಿತ್ತು. ಆದರೆ ಹಸಿವಿನ ಪರಿವಿರಲಿಲ್ಲ. ಈಗಲೇ ಹತ್ತಾರು ಮೊಬೈಲು ಕರೆಗಳನ್ನು ಸ್ವೀಕರಿಸುವ ಅನಿವಾರ್ಯತೆಯ ನಡುವೆಯೂ ಬೇಸರದ ಯಾವುದೇ ಸುಳಿವಿರಲಿಲ್ಲ. ದನಿಯಲ್ಲಿ ವಿನಯದ ಅಚ್ಚು. ತುಟಿ ಮೇಲಿನ ನಗುವಿಗೆ ಹಾಗೂ ಮಾತಲ್ಲಿ ಆತ್ಮೀಯತೆಗೆ ಕೊರತೆಯಿಲ್ಲ. ಒಟ್ಟಿನಲ್ಲಿ ಸುಲಭವಾಗಿ ಬೆರೆಯಬಲ್ಲ, ಮಾತಿಗಿಳಿದರೆ ನಿರ್ರಗಳವಾಗಿ ಹರಿಯುವ, ವಯಸ್ಸಿಗೆ ತಕ್ಕ ಧಾರ್ಮಿಕ ಪ್ರಶ್ನೆ-ಗೊಂದಲಗಳಿರುವ, ಸ್ಪಷ್ಟವಾದ ಯೋಚನೆ, ನಿಲುವುಗಳಿರುವ ಯುವಕನಂತೆ ಸುರಾಗ್ ಕಂಡರು.

ಇದೇ ಧಾಟಿಯಲ್ಲಿ ಕೂತು ಮಾತಾಡಿದಾಗ ಹಂಚಿಕೊಂಡ ಕೆಲವು ಸಂಗತಿಗಳು ಹೀಗಿವೆ –

ಪ್ರಶ್ನೆ – ನಮಸ್ಕಾರ ಸುರಾಗ್. ಮೊದಲಿಗೆ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿರುವ ನಿಮಗೆ ಮಾತುಕತೆ ಹಾಗೂ ಕನ್ನಡ ಕ್ರೈಸ್ತರ ಪರವಾಗಿ ಅಭಿನಂದನೆಗಳು.
ಸುರಾಗ್ – ತುಂಬಾ ಥ್ಯಾಂಕ್ಸ್, ನನ್ನ ಮೇಲೆ ಪ್ರೀತಿ ಇಟ್ಟು ಬಂದಿದ್ದಕ್ಕೆ.

ಪ್ರಶ್ನೆ – ಹೇಳಿ  ಸುರಾಗ್, ’ಅತಿರಥ’ದ ಈ ಹೆಜ್ಜೆ ಎಲ್ಲಿಂದ ಪ್ರಾರಂಭವಾಯಿತು ?
ಸುರಾಗ್ – ನಾನು ನಮ್ಮ ತಂದೆಯವರ ಜೊತೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದೆ. ಇತ್ತೀಚಿನ ’ಮಾಸ್ತಿ ಗುಡಿ’ ಚಿತ್ರಕ್ಕೆ ನಾನು ಸಹಾಯಕನಾಗಿ ಕೆಲಸ ಮಾಡುವಾಗ, ಸ್ಟುಡಿಯೋಗೆ ಬರುತ್ತಿದ್ದ ನಿರ್ದೇಶಕ ಮಹೇಶ್ ಬಾಬು ನನ್ನ ಕೆಲಸ ನೋಡಿದ್ದರು. ಅವರು ನಿರ್ದೇಶಿಸಲಿದ್ದ ’ಅತಿರಥ’ ಚಿತ್ರಕ್ಕೆ ಸಂಗೀತ ನೀಡಲು ನನಗೆ ಅಹ್ವಾನ ಕೊಟ್ಟರು. ಒಪ್ಪಿಕೊಂಡೆ. ಜೊತೆಗೆ ನಿರ್ಮಾಪಕರಾದ ಪ್ರೇಮ್ ಹಿಂದೆ ನಮ್ಮ ಜನಧಾರೆ ತಂಡದಲ್ಲಿದ್ದರಂತೆ. ಹೀಗೆ ಎಲ್ಲವೂ ಕೂಡಿ ಬಂತು.

ಪ್ರಶ್ನೆ – ಸಂತೋಷ, ಆದರೆ ನಿಮಗಿನ್ನು  ೨೨ ವರ್ಷ. ನಿಮಗೆ ಈ ಚಿತ್ರಕ್ಕೆ ಅವಕಾಶ ಬಂದಾಗ ನಾನಿನ್ನು ಚಿಕ್ಕವನು ಎಂಬ ಅಳುಕೇನಾದರೂ ಇತ್ತೇ?
ಸುರಾಗ್ – ಆ ಥರದ ಅಳುಕು ಈಗಲ್ಲ, ಐದು ವರ್ಷದ ಹಿಂದೆ ಇತ್ತು.  ಸುಮಾರು ೫ ವರ್ಷದ ಹಿಂದೆಯೇ ನನಗೆ ನಿರ್ದೇಶಕ ನಾಗಶೇಖರ್ ತಮ್ಮ ’ಗಡಿಯಾರ’ ಎಂಬ  ಚಿತ್ರಕ್ಕೆ ಅವಕಾಶ ನೀಡಿದ್ದರು. ಆಗ ನನಗಿನ್ನು ೧೭. ಆಗ ಸ್ವಲ ಅಳುಕಿತ್ತು. ಆದರೆ ಆ ಚಿತ್ರ ಟೇಕ ಆಫ್ ಆಗಲಿಲ್ಲ. ಈಗ ಅವಕಾಶ ಬಂದಾಗ ಏನೂ ಅನಿಸಲಿಲ್ಲ. ಐ ವಾಸ್ ಕಾನ್‍ಫಿಡೆಂಟ್. ಯಾಕಂದ್ರೆ ಈ ಐದು ವರ್ಷಗಳಲ್ಲಿ ಸಾಕಷ್ಟು ಚಿತ್ರಗಳ ಸಂಗೀತ, ರೀರೆಕಾರ್ಡಿಂಗ್‍ನಲ್ಲಿ ತೊಡಗಿಸಿಕೊಂಡಿದ್ದೇನೆ.

ಪ್ರಶ್ನೆ – ನೀವು ಕಾನ್‍ಫಿಡೆಂಟ್ ಆಗಿದ್ರೂ, ವಯಸ್ಸಿನ ದೃಷ್ಟಿಯಿಂದ ಅನುಭವಿಗಳ, ಹಿರಿಯರ ಮಧ್ಯೆ ಸ್ವಲ್ಪ ತೊಡಕುಗಳ ಅನುಭವ ಆಗಿರಬೇಕಲ್ಲವೇ?
ಸುರಾಗ್ – ಹೌದು, ಒಮ್ಮೊಮ್ಮೆ ಈ ರೀತಿಯ ಸನ್ನಿವೇಶಗಳನ್ನು ಅನುಭವಿಸಬೇಕಾಗುತ್ತದೆ. ಆದರೆ ನಾನು ಅದಕ್ಕೆ ಹೊಂದಿಕೊಂಡಿದ್ದೇನೆ, ಏಕೆಂದರೆ ನಾನಿನ್ನು ಚಿಕ್ಕವನು. ಆದರೆ ನಮ್ಮ ವಯಸ್ಸಿಗಿಂತ ನಾವು ವರ್ಕ್ ಮಾಡೋ ರೀತಿ ಆ ರೀತಿಯ ಡೌಟ್‍ಗಳನ್ನು ನಿಧಾನವಾಗಿ ತೆಗೆಸಿಬಿಡುತ್ತದೆ. ಅದರಲ್ಲೂ ನಮ್ಮ ಜೊತೆ  ಕೆಲಸ ಮಾಡೋ ಮ್ಯೂಸಿಷ್ಯನ್ಸ್, ಟೆಕ್ನಿಷಿಯನ್ಸ್‍ರ ವಿಶ್ವಾಸಗಳಿಸಿಕೊಂಡರೆ ನಮ್ಮ ಕೆಲಸ ಸುಲಭವಾಗುತ್ತದೆ. ನನಗೆ ಈ ಚಿತ್ರದಲ್ಲಿ ನಮ್ಮ ನಿರ್ದೇಶಕರ ನಿರ್ಮಾಪಕರ ಸಂಪೂರ್ಣ ಬೆಂಬಲವಿದ್ದಿದ್ದರಿಂದ ಏನೂ ತೊಂದರೆ ಆಗಲಿಲ್ಲ.

ಪ್ರಶ್ನೆ – ನಿಮ್ಮದು ಎರಡೂ ಕಡೆಯಿಂದ ಸಂಗೀತದ ಕುಟುಂಬ. ತಂದೆಯ ಕಡೆ ಹಾಗೂ ತಾಯಿಯ ಕಡೆಯ ಕುಟುಂಬಗಳು ಸಂಗೀತದಲ್ಲೇ ಮುಳುಗಿದೆ, ಆದರೂ ನಿಮ್ಮ ಸಂಗೀತದ ಪಯಣ ಮೊದಲು ಎಲ್ಲಿಂದ ಪ್ರಾರಂಭವಾಯಿತು ಎಂಬ ನೆನಪಿದೆಯೇ?
ಸುರಾಗ್ – ನೀವು ಹೇಳಿದ ಹಾಗೆ ನಮ್ಮದು ಸಂಗೀತಮಯ ಕುಟುಂಬ. ತಂದೆ ಸಂಗೀತದಲ್ಲೇ ಮುಳುಗಿರುತ್ತಿದ್ದರು. ಇತ್ತ ತಾತ, ದೊಡ್ಡಪ್ಪ, ಮಾವ, ಅತ್ತೆಯಂದಿರು ಎಲ್ಲರೂ ಸಂಗೀತದಲ್ಲಿ ತೊಡಗಿಕೊಂಡವರೇ. ಇದಕ್ಕಿಂತ ಮುಖ್ಯವಾಗಿ ನಾವು ಚರ್ಚುಗಳಲ್ಲಿ ಸಾಂಸ್ಕೃತಿಕವಾಗಿ, ಸಂಗೀತದ ವಾತವಾರಣದಲ್ಲಿ ತೊಡಗಿಕೊಂಡು ಬಂದಿರುತ್ತೇವೆ. ಇದೆಲ್ಲವೂ ನನ್ನ ಸಂಗೀತದ ಪಯಣದಲ್ಲಿ ಸಹಕಾರಿಯಾಗಿದೆ. ನಾನು ಎರಡು ಮೂರು ವರ್ಷವಿರುವಾಗಲೇ ನನ್ನ ತಂದೆ ತಾಯಿ ನನಗೆ ಕೀಬೋರ್ಡ್ ಶಿಕ್ಷಣಕ್ಕೆ ಏರ್ಪಾಡು ಮಾಡಿದ್ದರು.

ಪ್ರಶ್ನೆ – ಮುಂದೆ?
ಸುರಾಗ್ – ಮುಂದೆ ನಮ್ಮ ತಂದೆ ಜೊತೆಯಲ್ಲಿ ರೀರೆಕಾರ್ಡಿಂಗ್‍ಗಳಿಗೆ, ಸ್ಟುಡಿಯೋಗೆ ಹೋಗಲು ಪ್ರಾರಂಭಿಸಿದೆ. ಸಂಗೀತ ಸಂಯೋಜನೆ ಪೂರ್ಣವಾಗಿ ಡಿಜಿಟಲ್ ಆದಾಗ ನನಗೆ ಮತ್ತಷ್ಟು ಆಸಕ್ತಿ ಮೂಡಿತು. ಕಂಪ್ಯೂಟರ್ನಲ್ಲಿ ಸಹಾ ಆಸಕ್ತಿ ಇದಿದ್ದರಿಂದ ನಾನೇ  ಕೀ ಬೋರ್ಡ್ ಹಾಗೂ ಕಂಪ್ಯೂಟರ್ ಇಟ್ಟುಕೊಂಡು ಸಂಯೋಜಿಸಲು ಶುರು ಮಾಡಿದೆ. ನಿಧಾನವಾಗಿ ನನ್ನ ಪ್ರಯೋಗಗಳು ನನಗೇ ಇಷ್ಟವಾಗ ತೊಡಗಿತು.   ೧೨ನೇ ತರಗತಿ ಆದ ಮೇಲೆ ಪೂರ್ಣವಾಗಿ ಇದೇ ಕ್ಷೇತ್ರಕ್ಕೆ ಇಳಿದುಬಿಟ್ಟೆ.
ಪ್ರಶ್ನೆ – ಸಂಗೀತದಲ್ಲಿ ಯಾವ ಯಾವ ರೀತಿ ಪ್ರಿಪೇರ್ ಆಗಿದ್ದೀರಿ?
ಸುರಾಗ್ – ನಾನು ವೆಸ್ಟರ್ನ್ ಕ್ಲಾಸಿಕಲ್‍ನಲ್ಲಿ ಪರಿಣಿತಿ ಪಡೆದಿದ್ದೇನೆ. ಜೊತೆಗೆ ಸೌಂಡ್ ಎಂಜನಿಯರಿಂಗ್ ನನಗೆ ಇಷ್ಟ. ಅದರ ಬಗ್ಗೆಯೂ ಸಾಕಷ್ಟು ತಿಳಿದುಕೊಂಡಿದ್ದೇನೆ. ಆದರೆ ಕಲಿಯುವುದು ಬಹಳ ಇದೆ. ಜೇಮ್ಸ್ ಅಂತ ಗುರುಗಳೂ ಸೇರಿದಂತೆ ಸುಮಾರು ಜನ ಗುರುಗಳು ನನ್ನನ್ನು ಸಂಗೀತದಲ್ಲಿ ಕೈ ಹಿಡಿದು ನಡೆಸಿದ್ದಾರೆ.

ಪ್ರಶ್ನೆ – ಈಗ ನಿಮ್ಮ ಮುಂದಿರುವ ಸವಾಲುಗಳು?
ಸುರಾಗ್ -  ಇರುವುದು ಏಳೇ ಸ್ವರಗಳಾಗಿರುವುದರಿಂದ ಅವುಗಳನ್ನೇ ಎಷ್ಟು ಚೆನ್ನಾಗಿ ಪ್ರೆಸೆಂಟ್ ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಅದು ಸೌಂಡಿಂಗ್‍ಯಿಂದ , ಸೋನಿಕಲಿ ಹೇಗೆ ಕಿವಿಗೆ ಇಂಪಾಗಿ, ಆಕರ್ಷಕವಾಗಿ ಕೇಳೋ ಹಾಗೆ ಮಾಡಬೇಕು ಎನ್ನುವ ಸವಾಲು ನಮ್ಮ ಮುಂದಿದೆ.

ಪ್ರಶ್ನೆ – ನಿಮ್ಮ ಅತಿ ಹತ್ತಿರದ ಸ್ಪೂರ್ತಿ ನಿಮ್ಮ ತಂದೆ. ಅವರನ್ನು ಬಿಟ್ಟರೆ ನಿಮ್ಮನ್ನು ಪ್ರೇರೇಪಿಸಿದಂತ ಸಂಗೀತಗಾರರು ಯಾರು?
ಸುರಾಗ್ – ಮೈಕಲ್ ಜಾಕ್ಸನ್‍ರವರ ಸಂಗೀತ ಹಾಗೂ ಸಂಯೋಜನೆಗಳ ಅಭಿಮಾನಿ ನಾನು. ಇಲ್ಲಿ ಇಳಯರಾಜರವರು ನನಗೆ ಬಹಳ ಇಷ್ಟ. ಒಂದು ಕಡೆ ಮಧುರವಾದ ಟ್ಯೂನ್ ಮತ್ತೊಂದು ಕಡೆ ಅದಕ್ಕೆ ಅವರು ನೀಡುವ ಸೌಂಡಿಂಗ್ ಅದ್ಭುತವಾಗಿರುತ್ತದೆ. ನಮ್ಮ ರಾಗಗಳಿಗೆ ಪಾಶ್ಚಾತ್ಯದ ಸ್ಪರ್ಶ ನೀಡುವುದರಲ್ಲಿ ಅವರದು ಎತ್ತಿದ ಕೈ. ಕನ್ನಡದಲ್ಲಿ ಜಿ.ಕೆ.ವೆಂಕಟೇಶ್‍ರವರ ಹಾಡುಗಳ ನನಗೆ ಬಹಳ ಇಷ್ಟ.

ಪ್ರಶ್ನೆ -  ಮುಂದಿನ ಯೋಜನೆಗಳು
ಸುರಾಗ್ – ಅವಕಾಶಗಳು ಬರುತ್ತಿದೆ. ಆಯ್ಕೆ ನಡೆಯುತ್ತಿದೆ. ನಮ್ಮದೇ ನಿರ್ಮಾಣದ ಚಿತ್ರವೊಂದಕ್ಕೆ ಸಂಗೀತ ನೀಡಲಿದ್ದೇನೆ. ಜಾಗ್ವಾರ್ ಖ್ಯಾತಿಯ ನಿಖಿಲ್ ಅವರೊಂದಿಗೆ ಸೇರಿ ವಿಡಿಯೋ ಆಲ್ಬಂವೊಂದು ಸಿದ್ಧವಾಗುತ್ತಿದೆ.

ಪ್ರಶ್ನೆ – ನಿಮ್ಮ ಇಡೀ ಕುಟುಂಬದೊಡನೆ ನೀವೂ ಚರ್ಚ್ ಚಟುವಟಿಕೆಗಳಲ್ಲಿ ತೊಡಗಿಕೊಂಡವರು, ಇನ್ನೂ ಬ್ಯೂಸಿ ಆಗಲಿದ್ದೀರಿ, ಚರ್ಚ್ ಚಟುವಟಿಕೆಗಳು?
ಸುರಾಗ್ – ನಾನು ನನ್ನ ತಾಯಿಯ ಜೊತೆ ಬರುತ್ತಿದೆ ಎಂಬುದನ್ನು ಬಿಟ್ಟರೆ ಅಷ್ಟೇನು ಸಕ್ರೀಯವಾಗಿರಲಿಲ್ಲ. ನಮ್ಮ ದೇವಾಲಯಕ್ಕೆ ಫಾ.ಚಸರಾ ಬಂದ ಮೇಲೆ ಧಾರ್ಮಿಕ ವಿಷಯಗಳ ಬಗ್ಗೆ ಆಸಕ್ತಿ ಬೆಳೆಯಿತು. ಅವರ ಧಾರ್ಮಿಕ ಚಿಂತನೆಗಳು ನನಗೆ ಇಷ್ಟವಾಗಿತ್ತು. ಎಷ್ಟೋ ವಿಷಯಗಳ ಬಗ್ಗೆ ಅವರೊಡನೆ ಚರ್ಚೆ ಮಾಡುತ್ತಿದ್ದೆ ಹಾಗೂ ಅದಕ್ಕೆ ಅವರು ಸ್ಪಂದಿಸುತ್ತಿದ್ದರು. ಈಗ ಅವರಿಲ್ಲ.

ಪ್ರಶ್ನೆ – ಕನ್ನಡ ಕ್ರೈಸ್ತ ಸಾಂಸ್ಕೃತಿಕ, ಧಾರ್ಮಿಕ  ಕಾರ್ಯಕ್ರಮಗಳಲ್ಲಿ ನಿಮ್ಮ ಪಾತ್ರವೇನಾದರೂ ನಿರೀಕ್ಷಿಸಬಹುದೇ?
ಈ ಪ್ರಶ್ನೆಯೊಂದಿಗೆ ನಮ್ಮ ಸಂವಾದ ಬೇರೆಯದೇ ತಿರುವುಗಳನ್ನು ಪಡೆಯಿತು. ಈಗ ಪ್ರಶ್ನೆಗಳಿಗೆ ಉತ್ತರಿಸುವ ಸರದಿ ನನ್ನದಾಯಿತು. ಕ್ರೈಸ್ತ ಧರ್ಮ, ಧಾರ್ಮಿಕತೆ, ಅದರ ಸಫಲತೆ ಹೀಗೆ ಅನೇಕ ವಿಷಯಗಳ ಬಗ್ಗೆ ವಿಸ್ತಾರವಾದ ಅರ್ಥಪೂರ್ಣ ಚರ್ಚೆಯತ್ತ ಅದು ಹೊರಳಿತು. ಕೊನೆಗೆ, ಮಕ್ಕಳು ಹಾಗೂ ಯುವ ಮನಸ್ಸುಗಳಿಗೆ ಉಪಯೋಗವಾಗುವಂತ ಕಾರ್ಯಕ್ರಮಗಳು ನಮ್ಮಲ್ಲಿ ಬಂದರೆ ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಕೈ ಜೋಡಿಸುತ್ತೇನೆ ಎಂಬ ಸುರಾಗರ ಭರವಸೆಯೊಂದೆಗಿ ನಮ್ಮ ಸಂವಾದ ಮುಗಿಯಿತು.

ಸಂವಾದ ಮುಗಿಸಿಕೊಂಡು ಬರುವಾಗ ಭೇಟಿಯಾದ ತಂದೆ ಸಾಧು ಕೋಕಿಲ ಹಾಗೂ ತಾಯಿ ಸೆಲಿನ್ರವರಿಗೆ ಮಗನ ಬಗ್ಗೆ ಸಹಜವಾದ ಹೆಮ್ಮೆ ಸಂತೋಷವಿತ್ತು. ಅದರಲ್ಲೂ ಸಾಧುರವರಲ್ಲಿ ಮಗನ ಬಗ್ಗೆ ಸಾಕ್ಷಷ್ಟು ಭರವಸೆಯಿದೆ. ಈ ಕುಟುಂಬದ ಸಂಗೀತದ ಪಯಣ ಹೀಗೆ ಮುಂದುವರಿಯಲಿ ಹಾಗೂ ಅವರ ಕನಸುಗಳು ನನಸಾಗಲಿ

Sunday, 30 July 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 12 - ಚಸರಾರವರ ಗೀತೆಗಳಲ್ಲಿನ ನ್ಯಾಯ, ಬಡವರು, ದಲಿತರು, ನೊ೦ದವರ ಪರವಾದ ದನಿ

ಒಬ್ಬ ಸ೦ಗೀತಗಾರ, ಕಲಾವಿದ, ಬರಹಗಾರ ಲೋಕದಿ೦ದ ಕಣ್ಮರೆಯಾದಾಗ, ಅವರದೇ ಒ೦ದು ರಚನೆ ಅವರ ವಿದಾಯವನ್ನು ನೆನಪಿಸುತ್ತಿರುತ್ತದೆ. ಕೆಲವೊಮ್ಮೆ ಅಭಿಮಾನಿಗಳು, ಗೆಳೆಯರು ಅ೦ತಹ ಒ೦ದು ಕಲಾಕೃತಿಯನ್ನು, ರಚನೆಯನ್ನು ಆ ವಿದಾಯದೊ೦ದಿಗೆ ಅ೦ಟಿಸಿಬಿಡುತ್ತಾರೆ.
ಮು೦ದೆ ಅದೇ ಒ೦ದು ನೆನಪಿನ ಪ್ರತೀಕವಾಗಿ ಉಳಿದುಬಿಡುತ್ತದೆ.

ಚಿ.ಉದಯಶಂಕರ್ ರವರು ನಿಧನರಾದಾಗ “ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ” ಹಾಡು ಅವರ ನೆನಪಿಗೆ ಬಳಕೆಯಾಗುತ್ತಿತ್ತು. ಮೈಸೂರು ಅನ೦ತ ಸ್ವಾಮಿಯವರೊ೦ದಿಗೆ "ಎದೆ ತು೦ಬಿ ಹಾಡಿದೆನು" ಸಿ.ಅಶ್ವತ್ದರ ಜೊತೆ "ಕಾಣದ ಕಡಲಿಗೆ" ಹಾಡುಗಳು ಹೀಗೆ ಜೊತೆಗೂಡಿವೆ.

ಚಸರಾರವರ ಇತರ ಅಸ೦ಖ್ಯ ಹಾಡುಗಳಿದ್ದರೂ, ಅವರ ಅಭಿಮಾನಿಗಳು ಇತೀಚೆಗೆ ಅವರನ್ನು ನೆನಪಿಸಿಕೊಳ್ಳುವುದು ಸ್ಥಾಯಿ ಧ್ವನಿಸುರಳಿಯ" "ಇಲ್ಲಿ ಸತ್ಯವು ಮಲಗಿದೆ" ಎ೦ಬ ಹಾಡಿನಿ೦ದ ಎ೦ಬ೦ತಾಗಿದೆ. ಅವರ ವಿದಾಯದ ಪಯಣದ ಆ ಎರಡು ದಿನಗಳಲ್ಲೂ ಎಲ್ಲರಲ್ಲಿ ಇದೇ ಹಾಡಿನ ಗುನುಗು.

ಅ೦ದು ಅಭಿಮಾನಿಗಳು ಮನದಲ್ಲಿ, ತುಟಿಯಲ್ಲಿ ಆ ಹಾಡೇ ಏಕೆ ನೆನಪಾಯಿತು ಎ೦ದು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಆ ಹಾಡು ಅವರ ಎಷ್ಟೋ ಹಾಡುಗಳ ಒಟ್ಟು ರೂಪವೇನೋ ಎ೦ಬ೦ತಿತ್ತು.

ಈ ಅ೦ಕಣದಲ್ಲಿ ಹಲವಾರು ಬಾರಿ ಹೇಳಿರುವ೦ತೆ ಫಾ.ಚಸರಾ ಕನ್ನಡ ಕ್ರಿಸ್ತ ಗೀತಾ ಸಾಹಿತ್ಯಕ್ಕೆ ತ೦ದ ಪದ ಸ೦ಪತ್ತು ಅನನ್ಯ ಹಾಗೂ ವಿಭಿನ್ನವಾದದ್ದು. ಆದರೆ ಆ ಆಕರ್ಷ ಸಾಹಿತ್ಯಕ್ಕಿ೦ತ ಮಿಗಿಲಾದದ್ದು ಎ೦ದರೆ ಅವರ ಹಾಡುಗಳಲ್ಲಿ ಇರುತ್ತಿದ್ದ ನ್ಯಾಯ, ಸತ್ಯದ ಪರವಾಗಿ ದನಿ, ಬಡವ ನೊ೦ದ, ದಲಿತನ, ಬೆವರಿಳಿಸುವ ಕಾರ್ಮಿಕನೆಡೆಗಿನ ಅದು ಕ೦ಪದ, ಸಾ೦ತ್ವನದ ದನಿ. ನಿಜವಾದ ಅರ್ಥದಲ್ಲಿ ಅದು ಕ್ರಿಸ್ತ ದನಿ, ಕ್ರಿಸ್ತ ಕಾಳಜಿ, ಕ್ರೈಸ್ತ ಕರುಣೆ, ಅನುಕ೦ಪ.


"ಸ್ಪ೦ದನ" ಧ್ವನಿಸುರಳಿಯಿ೦ದಿಡಿದು ಇತೀಚಿನ ಹಾಡುಗಳ ತನಕ ಆ ನ್ಯಾಯ ಸತ್ಯ ಪರವಾದ ದನಿಯಿದೆ . ಕನ್ನಡ ಕ್ರಿಸ್ತ ಸ೦ಗೀತದ ಸಾಹಿತ್ಯದಲ್ಲಿ ಈ ಭಾವಗಳನ್ನು ಇಷ್ಟು ವ್ಯಾಪಕವಾಗಿ ಬಳಸಿಕೊ೦ಡ ಮತ್ತೊಬ್ಬ ರಚನಾಕಾರ ಇಲ್ಲವೇನೋ. ಕ್ರಿಸ್ತನ ವ್ಯಕ್ತಿತ್ವದ ಅತ್ಯ೦ತ ಪ್ರಮುಖವಾದ ಈ ಮಾನವೀಯತೆಯ ಆಯಾಮವನ್ನು ತೆರದಿಟ್ಟವರು ಫಾ.ಚಸರಾ.

 "ಓ೦ ಘಂಟಾ ನಾದ೦ . . . ಪ್ರೀತಿಯ ಸ್ವಾಮಿಗೆ" ಹಾಡಿನ ಎರಡನೆಯ ಇಡೀ ಚರಣ ನ್ಯಾಯದ ಧ್ವಜವನ್ನು ಹಿಡಿದೇ ಸಾಗುತ್ತದೆ. ಮು೦ದಿನ "ಹೃದಯ ಮಿಡಿದು" ಹಾಡ೦ತೂ ಸ೦ಪೂರ್ಣ ಬಡತನ, ಶೋಷಣೆ, ಹಸಿವಿನ ಅನುಕ೦ಪಕ್ಕೆ ಮೀಸಲು.

ಅದೇ  ಧ್ವನಿಸುರುಳಿಯ ನಿನ್ನ ದನಿಯು ನನ್ನ ಕರೆದಿದೆಹಾಡಿನಲ್ಲಿ ಇನ್ನಷ್ಟು ಮುಂದೆ ಹೋಗಿದೀನ ದಲಿತರನ್ನು ಕರೆದು ನಿನ್ನ ತ್ಯಾಗ ಸೇವೆ ಮಾಡಿ, ಅವರ ಜೊತೆಗೆ ನಾನು ಸಾಗುವೆಎಂಬ ಸಂಕಲ್ಪವಿದೆ. ಇದೇ ಒಂದು ಇಚ್ಛೆ, ಪ್ರಾರ್ಥನೆಯನ್ನುಸ್ಪೂರ್ತಿಯಾಗಲಿ ಕ್ರಿಸ್ತಹಾಡಿನಲ್ಲಿ ಸಹ ಕಾಣಬಹುದು. ಇಲ್ಲಿ ಕೇವಲ ಪ್ರಾರ್ಥನೆಯಲ್ಲ, ’ತುಳಿತದಿಂದ ನರಳುವ ಜನರಿಗೆ ನನ್ನ ದನಿಯು ಸ್ಪೂರ್ತಿಯಾಗುವಂತೆ ಮಾಡುಎಂಬ ಸೇವೆಯ ಇಂಗಿತವಿದೆ.

ಬೆಳಕು ಹರಿಯಿತು ಭುವಿಯ ಕಡೆಗೆಹಾಡಿನಲ್ಲಿ ಭೂಮಿಗೆ ದೇವರು ಬಂದರು ಎಂಬುದಕ್ಕಿಂತನೊಂದ ಜನರಿಗೆ ಶಾಂತಿ ತಂದರುಎಂಬುದೇ ಸಂತೋಷಕ್ಕೆ ಹೆಚ್ಚು ಕಾರಣವಾಗುತ್ತದೆ. ’ಸ್ಥಾಯಿನಡೆಯುವ ಹಾದಿಯು ನಿಂತಲ್ಲೇ ನಿಲ್ಲಲುಕೂಡ ಅಸಹಾಯಕತೆಯ ಜೀವಕ್ಕೆ ಭಾವಕ್ಕೆ ಕ್ರಿಸ್ತನೇ ಸಾಂತ್ವನ ಎನ್ನುವ ಹಾಡು. ಇಲ್ಲಿ ಭಾರ, ಭಯ, ಕತ್ತಲೆ, ದಾಹ, ಏಕಾಂತ, ಖಾಲಿತನ ಇವು ಒಂದು ರೀತಿ ಶೋಷಿತ ಶಕ್ತಿಯಾಗಿ ಕಾಡುತ್ತಿದೆ. ಇದಕ್ಕೆಲ್ಲಾ ಕ್ರಿಸ್ತನ ಸಾಂತ್ವನವನ್ನು ಬೇಡುವ ಸುಂದರ ಗೀತೆ.  ’ಮುಂಜಾನೆ ಮುಸುಕಲ್ಲಿ ಬಂಗಾರ ತೆರೆಗಳಹಾಡಿನಲ್ಲಿ ಮುಂಜಾನೆಯ ಮುಸುಕನ್ನು ಸೌಂದರ್ಯವಾಗಿ ಬಣ್ಣಿಸಿದರೆ, ಇಲ್ಲಿ ದಾರಿಗೆ ಅಡ್ಡವಾಗುವ ಮುಸುಕಿನ ರೂಪಕವಾಗಿ ಬಳಸುತ್ತಾರೆ.

’ಇಲ್ಲಿ ಸತ್ಯವು ಮಲಗಿದೆ’ ಹಾಡಂತೂ ವಿಷಾದದ ಛಾಯೆಯಲ್ಲಿ ಮುಳುಗಿಸುವ ಗೀತೆ. ಸತ್ಯ, ನ್ಯಾಯವು ಏಳಲಾರದೆ ಮಲಗಿದೆ ಎಂಬ ಹತಾಶ ಭಾವವೇ ಇಲ್ಲಿ ಸ್ಠಾಯಿಭಾವ. ತನ್ನಷ್ಟಕ್ಕೆ ತಾನೇ ಏಳಲಾಗದ ಸ್ಥಿತಿಯಲ್ಲಿ, ಜಗತ್ತಿನ ಯಾವ ಶಕ್ತಿಯೂ ಸಹಾಯಕ್ಕೆ ಬರಲಾರದು ಎಂಬ ದು:ಖ ಇಲ್ಲಿನ ಸಾಹಿತ್ಯದಲ್ಲಿದೆ. ಕೊನೆಗೆ ಕ್ರಿಸ್ತ ಮಾತ್ರ ಸತ್ಯವನ್ನು ಸ್ಥಾಪಿಸಬಲ್ಲ, ಸತ್ಯಕ್ಕೆ ಸಾಕ್ಷಿಯಾಗಬಲ್ಲ ಎಂಬ ಆಶಾಭಾವನೆಯೊಂದಿಗೆ ಹಾಡು ಮುಗಿಯುತ್ತದೆ.  ’ಚೇತನ’ದಲ್ಲಿ ಇದು ತಪಸ್ಸುಕಾಲ ಹಾಡುಗಳ ಸಾಲಿನಲ್ಲಿರುವುದರಿಂದ ಇದು ಕ್ರಿಸ್ತನ ಜೀವನಕ್ಕೂ ಅನ್ವಯವಾಗಬಹುದೇನೋ.

ಸ್ಪರ್ಶಿತ ಧ್ವನಿಸುರುಳಿಯ  ’ಬಾಳ ಕಡಲಿಗೆ ಅಲಗಳು ನೂರು’ ಹಾಡು ಸಂಪೂರ್ಣ ನೊಂದವರ ಪರವಾದ ದನಿಯೇ. ಇಲ್ಲಿ ನೋವಿನ ತೀವ್ರತೆ ಎಷ್ಟೆಂದರೆ ’ಅಳುವ ಕಣ್ಣಲ್ಲಿ ಕೆಂಪು ಕಣ್ಣೀರು ಬರುವಷ್ಟು. ’ಸ್ಪೂರ್ತಿಯಾಗಲಿ ಕ್ರಿಸ್ತ’ ದಂತೆ ಇಲ್ಲಿ ಕೂಡ ಬಡವರ ಬೆವರನ್ನು ಕೊನೆಗೊಳಿಸು ಎಂಬ ಪ್ರಾರ್ಥನೆ ಮೊದಲು ಬಂದರೆ, ಕೊನೆಗೆ ಬೆವರನ್ನು ಒರೆಸಲು ಸೇವೆಗೆ ಅಣಿಗೊಳಿಸು ಎಂಬ ಬದ್ದತೆ ಇದೆ.
ಅಷ್ಟು ಮಾತ್ರವಲ್ಲದೆ ತೀರ ಧಾರ್ಮಿಕ ಸ್ಪರ್ಶ ಇರಬೇಕಾದ ಅರ್ಪಣಾ ಗೀತೆಗಳಲ್ಲೂ ಫಾ. ಚಸರಾ ಈ ನ್ಯಾಯ, ಬಡವನ ಬೆವರುಗಳ ಬಗ್ಗೆ ಬರೆಯುತ್ತಾರೆ.  ’ನೀನಿರುವೆ ಮನದಲ್ಲಿ ತಲಸ್ಪರ್ಶ ಬದುಕಲ್ಲಿ’ ಇದಕ್ಕೊಂದು ಉತ್ತಮ ಉದಾಹರಣೆ.

’ಕರುಣಾಳು ಕ್ರಿಸ್ತನೆ ಬರಬಾರದೆ  ಹೃದಯದ ಗುಡಿಯಲ್ಲಿ ಇರಬಾರದೇ’ ಹಾಡಲ್ಲಿ ಮತ್ತೆ ಜನರ ಕಷ್ಟ, ಕಣ್ಣೀರು, ಸೇವೆಗೆ ಒಂದಷ್ಟು ಸಾಲುಗಳು ಮೀಸಲಾಗಿವೆ.
ಪ್ರೀತಿ, ಕರುಣೆ, ಅನುಕಂಪ, ಮಾನವೀಯತೆ, ಸೇವೆಯೇ ಕ್ರಿಸ್ತನ ನಿಜವಾದ ರೂಪ ಎಂದು ನಮ್ಮ ಗ್ರಂಥಗಳು ಹೇಳುತ್ತಲೇ ಬಂದಿವೆ. ಈ ನಂಬಿಕೆಯಲ್ಲೇ ಮುರಿದ ಮನಸ್ಸುಗಳನ್ನು ಕಟ್ಟಲು ಬಾ ಎನ್ನುವ ಹಾಡು ’ಸ್ವಾಮಿ ನಿನ್ನ ರೂಪ ನೀಡೆನಗೆ’. ಅತ್ಯಂತ ಪರಿಣಾಮಕಾರಿಯಾದ ಗೀತೆಯದು.
ಹೀಗೆ ನೋಡುತ್ತಾ ಸಾಗಿದರೆ, ಪ್ರತಿ ಹಾಡಿನಲ್ಲೂ ಈ ಕಾಳಜಿಯನ್ನು ಕಾಣಬಹುದು. ಈ ನಿಟ್ಟಿನಲ್ಲಿ ಫಾ. ಚಸರಾರವರ ಗೀತ ಸಾಹಿತ್ಯ ಕ್ರಾಂತಿಕಾರಿಯಾಗಿ ಕಾಣುತ್ತದೆ. ಎಲ್ಲಾ ಹಾಡುಗಳ ಬಗ್ಗೆ ಇಂತಿಷ್ಟೆ ಹೇಳುತಾ ಸಾಗಬೇಕಾಗಿರುವುದು ಈ ಬರಹದ ಮಿತಿಯಾಗಿದೆ. ಒಂದೊಂದು ಹಾಡು ಸವಿಸ್ತಾರ ಬರಹ, ಅಧ್ಯಯನಕ್ಕೆ ವೇದಿಕೆಯಾಗಬಲ್ಲದು.


ಚಸರಾರವರ ಇನ್ನೂ ಅನೇಕ ಗೀತೆಗಳ ಬಗ್ಗೆ ಬರೆಯಬಹುದು. ’ಮುಂಜಾನೆ ಮುಸುಕಲಿ’ ’ಏಕೆ ಈ ಶೋಧನೆ’ ನೀನಿರುವೆ ಮನದಲ್ಲಿ’ ’ಮನದಾಳದಿಂದ....’ ಈ ರೀತಿಯ ಅನೇಕ ಅತ್ಯಂತ ಜನಪ್ರಿಯ ಗೀತೆಗಳ ಬಗ್ಗೆ ಈ ಅಂಕಣದಲ್ಲಿ ಬರೆದಿಲ್ಲ. ಇವೆಲ್ಲವೂ ಎಲ್ಲರ ಅಚ್ಚುಮೆಚ್ಚಿನ ಗೀತೆಗಳು. ಅದರಲ್ಲೂ’ಸುಪ್ತ’ ’ಸಿಟ್ಟಾಗಬ್ಯಾಡ ಸ್ಬಾಮಿ’ ಯಂಥ ಧ್ವನಿಸುರುಳಿಗಳ ಬಗ್ಗೆ ಇಡಿಯಾಗಿ ಬರೆಯಬಹುದು. ಫಾ.ಚಸರಾ ಹಾಗೂ ಸಿ.ಡೇವಿಡ್ ಕಾಂಬಿನೇಷನ್ ನಿಂದ ಬಂದ ಹಾಡುಗಳ ಬಗ್ಗೆ ಬರೆಯ ಹೊರಟರೆ ಅದೇ ಒಂದು ಸರಣಿಯಾಗಬಹುದೇನೋ. ಮುಂದೆ ಎಂದಾದರೂ ಬರೆಯಬಹುದು.

ಈ ನಡುವೆ ಈ ಅಂಕಣದಲ್ಲಿ ನನ್ನಿಂದ ಬಿಟ್ಟು ಹೋದ ಇತರ ಗೀತೆಗಳ ಬಗ್ಗೆ ನಮ್ಮ ಕಿರಿಯ ಬರಹಗಾರರು ಬರೆದಾರು. ಅವರಿಗೆ ಆ ಕೆಲಸವನ್ನು ಬಿಟ್ಟು ಈ ಸರಣಿಯನ್ನು ಸದ್ಯಕ್ಕೆ ಮುಗಿಸುತ್ತೇನೆ. ಪ್ರತಿ ತಿಂಗಳು ಬರೆಯಲು ಅನುವು ಮಾಡಿಕೊಟ್ಟಿದಲ್ಲದೆ ಸದಾ ಪ್ರೋತ್ಸಾಹದ ನುಡಿಗಳನಿತ್ತ ರೀಟಾ ರೀನಿಯವರಿಗೆ ನನ್ನ ಧನ್ಯವಾದಗಳು. ಫಾ.ಚಸರಾ, ಸ್ಟೀಫನ್ ದತ್ತ್, ಸಾಧುಕೋಕಿಲ ಹಾಗೂ ಅತ್ತ್ಯುತ್ತಮ ಗಾಯಕರನ್ನೊಳಗೊಂಡ ಈ ಹಾಡುಗಳ ಬಗ್ಗೆ ಬರೆಯುವಾಗ ಒಂದು ರೀತಿಯ ಅಳುಕು ಇದ್ದೇ ಇರುತ್ತದೆ. ಅದೇ ರೀತಿ ಸಾಮಾನ್ಯ ಕೇಳುಗನ ದೃಷ್ಟಿಯಲ್ಲಿ ಹೇಳಬೇಕಾದ ಆಸೆ ಹಾಗೂ ಆತ್ಮವಿಶ್ವಾಸವೂ ಇತ್ತು. ಇದಕ್ಕೆ ಅವಕಾಶವಿತ್ತ ರೀನಿಯವರಿಗೆ ಮತ್ತೆ ಧನ್ಯವಾದಗಳು.

ತಮ್ಮ ಕೊನೆಯ ನಾಲ್ಕು ಐದು ವರ್ಷಗಳಲ್ಲಿ ಫಾ. ಚಸರಾ ತಮ್ಮದೇ ಯಾವುದೇ ಧ್ವನಿಸುರುಳಿಗೆ ಕೈ ಹಾಕಿದಂತೆ ಕಾಣಲಿಲ್ಲ. ಗೀತ ಸಾಹಿತ್ಯವೂ ವಿರಳವಾಯಿತು. “ ಏಕೆ ಹಾಡುಗಳು ಬರುತ್ತಿಲ್ಲ” ಎಂದೊಮ್ಮೆ ನಾವು ಕೇಳಿದಾಗ, “ಈಗ ಸಾಕಷ್ಟು ಯುವ ಪ್ರತಿಭೆಗಳು ಬರೆಯುತಿದ್ದಾರೆ, ಅವರು ಬರೆಯಲಿ. ನಾನು ಪ್ರಾರಂಭಿಸಿದಾಗ ಕೆಲವೇ ಜನ ರಚನಕಾರರು ಇದುದ್ದರಿಂದ ಅನಿವಾರ್ಯವಾಗಿ ಬರಯಬೇಕಾಯಿತು” ಎನ್ನುವ ಉತ್ತರ ಬಂದಿತ್ತು.

ಕನ್ನಡ ಕ್ರೈಸ್ತ ಸಾಹಿತ್ಯ, ಸಂಗೀತ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮನ್ನೇ  ತೊಡಗಿಸಿಕೊಂಡ ಫಾ.ಚಸರ ಇದ್ದಿದ್ದರೆ ತಮ್ಮ ಬಗ್ಗೆಯೇ ಈ ರೀತಿಯ ಒಂದು ಅಂಕಣಕ್ಕೆ ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಿರಲಿಲ್ಲ. ಇಷ್ಟು ಬೇಗ ಅವರ ಬಗ್ಗೆ ಅವರಿಲ್ಲದಿದ್ದಾಗ ಬರಯಬೇಕಾಗಿ ಬಂದದ್ದು ನಮ್ಮೆಲ್ಲರ ದುರಂತವೇ ಸರಿ.





-ಪ್ರಶಾಂತ್ ಇಗ್ನೇಶಿಯಸ್ 

Friday, 30 June 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 11 - ಕ್ಲಾಸಿಕಲ್ ಗೀತೆಗಳು

ಫಾ.ಚಸರಾರವರ ಗೀತೆಗಳಲ್ಲಿ ಆರಂಭದ ಕ್ಲಾಸಿಕಲ್ ಗೀತೆಗಳದ್ದೇ ಒಂದು ರೀತಿಯ ಮೆರಗು. ಈ ಕ್ಲಾಸಿಕಲ್ಲ್ ಗೀತೆಗಳಿಗೆ ಕನ್ನಡದಲ್ಲಿ ಏನು ಕರೆಯಬೇಕೋ ತಿಳಿಯುತ್ತಿಲ್ಲ. ಚಸರಾರವರ ಪ್ರತಿ ಧ್ವನಿಸುರಳಿಯಲ್ಲೂ ಈ ರೀತಿಯ ಕ್ಲಾಸಿಕಲ್ ಗೀತೆಗಳು ಇರಲೇಬೇಕೇನೋ ಎಂಬಷ್ಟು ನಂಟು.

ಈ ರೀತಿಯ ಗೀತೆಗಳ ಸಾಲೂ ಚಿಕ್ಕದೇನಲ್ಲ. ’ಓಂ ಘಂಟಾನಾದಂ’, ’ಸ್ಪೂರ್ತಿಯಾಗಲಿ ಕ್ರಿಸ್ತ’, ’ಬೆಳಕು ಹರಿಯಿತು’ ’ಜನತೆಯ ಬದುಕಿನ’ ಮುಂತಾದ ಗೀತೆಗಳು, ಒಂದಕ್ಕಿಂತ ಒಂದು ಶ್ರೇಷ್ಟ ಗೀತೆಗಳು ಅವರ ಬತ್ತಳಿಕೆಯಿಂದ ಮೂಡಿ ಬಂದಿದೆ. ಇವು ಜನಪ್ರಿಯ ಗೀತೆಗಳೂ ಹೌದು.

ಎಷ್ಟು ಜನಪ್ರಿಯವೆಂದರೆ ಕಳೆದ 2 ದಶಕಗಳಲ್ಲಿ ಯಾವುದೇ ಗಾನಸ್ಪರ್ಧೆ ನಡೆದರು ಅಲ್ಲಿ ಸುಮಾರು ಗೀತೆಗಳು ಚಸರಾರವರ ಈ ಕ್ಲಾಸಿಕಲ್ ಗೀತೆಗಳೇ ಆಗಿರುತ್ತಿದ್ದವು. ಇನ್ನಾವುದೇ ಕ್ರೈಸ್ತ ಕಾರ್ಯಕ್ರಮಗಳಾಗಲಿ ಅಥವಾ ಕ್ರೈಸ್ತ ಸಂಸ್ಥೆಗಳ ಕಾರ್ಯಕ್ರಮಗಳಲ್ಲೂ ಇವೇ ಗೀತೆಗಳು ಪ್ರಾರ್ಥನಾ ಗೀತೆಗಳಾಗಿರುತ್ತಿದ್ದವು. ಸ್ಪಂದನ ಧ್ವನಿಸುರಳಿಯ ’ಓಂ ಘಂಟಾನಾದಂ’ ಗೀತೆಯಿಂದ ಪ್ರಾರಂಭವಾದ ಈ ಗೀತೆಗಳ ಅನುಬಂಧ ಇತ್ತೀಚಿನ ಧ್ವನಿಸುರಳಿಗಳವರೆಗೂ ಅವಿರತವಾಗಿ ಮುಂದುವರಿದಿತ್ತು. ಈ ಸಂಚಿಕೆಯಲ್ಲಿ ನನ್ನ ಕೆಲವು ಮಚ್ಚಿನ ಗೀತೆಗಳ ಬಗ್ಗೆ ಮೆಲಕು ಹಾಕೋಣ. 

ಸ್ಪಂದನ ಧ್ವನಿಸುರಳಿಯ ’ಓಂ ಘಂಟಾನಾದಂ.. ಪ್ರೀತಿಯ ಸ್ವಾಮಿಗೆ ನೂತನ ಆಲಯ ’ ಫಾ.ಚಸರಾರವರ ಅತ್ತ್ಯುತ್ತಮ ಹಾಡುಗಳಲ್ಲಿ ಒಂದು ಎನ್ನಬಹುದು. ಸಾಹಿತ್ಯ, ಸಂಗೀತ, ವಾದ್ಯ ಸಂಯೋಜನೆ ಎಲ್ಲವೂ ಇಂದಿಗೂ ಇಂದೇ ಬಂದ ಹಾಡೇನೋ ಎಂಬಷ್ಟು ತಾಜಾ. ಸತ್ಯ, ನ್ಯಾಯ, ಶಾಂತಿಯ ಮಂತ್ರಗಳು ಈ ಹಾಡಿನ ಮೂಲ ಬಿಂದು. ’ಸತ್ಯ’ ಎಂಬ ಪದ ಈ ಹಾಡಿನಲ್ಲಿ ೯ ಬಾರಿ ಇಲ್ಲಿ ಬಳಕೆಯಾಗಿದೆ ಎಂಬುದು ಮಾಹಿತಿಗಷ್ಟೆ.

ಇನ್ನೂ ’ಸ್ಪೂರ್ತಿಯಾಗಲಿ ಕ್ರಿಸ್ತ’ದ ಬಗ್ಗೆ ಈಗಾಗಲೇ ವಿಸ್ತೃತವಾಗಿ ಬರೆದಾಗಿದೆ. ಈ ಗೀತೆ ಕೇವಲ ಚಸರಾರವರ ಗೀತೆಗಳಲ್ಲಿ ಮಾತ್ರವಲ್ಲದೆ ಕನ್ನಡ ಕ್ರೈಸ್ತ ಭಕ್ತಿ ಗೀತೆಗಳಲ್ಲಿ ಅತ್ತ್ಯುತ್ತಮ ಗೀತೆಗಳಲ್ಲಿ ಒಂದು. ’ಬೆಳಕು ಹರಿಯತು ಭುವಿಯ ಕಡೆಗೆ’ ಎಂದಿನಂತೆ ಸುಮಧುರ ಶ್ಲೋಕದಿಂದ ಆರಂಭವಾಗಿ ನಿಧಾನವಾಗಿ ಉಚ್ಛ್ರಾಯ ಸ್ಥಿತಿಯನ್ನು ತಲುಪಿ ’ಬೆಳಕಿನ ಮೂಲದತ್ತ’ ಸಾಗುತ್ತದೆ. ಬಿ.ಆರ್.ಛಾಯರವರ ಗಾಯನ ಮಧುರ ಅನುಭೂತಿಯನ್ನು ನೀಡುತ್ತದೆ. ಸುಮಾರು ಒಂದುವರೆ ದಶಕಗಳ ಕಾಲ ’ಬೆಳಕು ಹರಿಯಿತು’ಯಿಲ್ಲದ ಕನ್ನಡ ಗಾಯನ ಸ್ಪರ್ಧೆ ಇಲ್ಲವೇ ಇಲ್ಲ.

ಚಸರಾರವರ ಗೀತೆಗಳ ಬಗ್ಗೆ ಬರೆಯುವಾಗ ’ಸ್ಮೃತಿ’ ಧ್ವನಿಸುರಳಿಯ ’ದೇವಾ ನನ್ನ ಮೊರೆಯ ಕೇಳು’ ಬಗ್ಗೆ ಉಲ್ಲೇಖಿಸದಿದ್ದರೆ, ಬರಹ ಅಪೂರ್ಣ. ಪ್ರಮುಖ ಗಾಯನದ ಜೊತೆ ಕೋರಸ್ ಹೇಗೆ ಬಳಕೆಯಾಗಬಹುದು, ಬಳಕೆಯಾಗಬೇಕು ಎನ್ನುವುದಕ್ಕೆ ಈ ಗೀತೆ ಉದಾಹರಣೆ. ಚರಣದಲ್ಲಿ “ದೇವಾ ಬಾರೆಯಾ ..ಕ್ರಿಸ್ತ ಬಾರೆಯ’ ಯ ನಡುವೆ ಬರುವ ’ಓಂ ನಮೋ ನಮ:’ ಎಂಬ ಗಾಯನ ಹಾಗೂ ಕೋರಸ್ ನ ಜುಗಲ್ ಬಂಧಿ ಅತ್ಯಂತ ಸುಂದರ.

’ಇಹದ ಬಂಧನ ಮುಗಿವ ಮೊದಲೇ ಜೀವ ಹದಗೊಳಿಸು’ ಎಂಬ ಸಾಲುಗಳು ಚಸರಾರವರ ಕೊನೆಯ ದಿನಗಳನ್ನು ನೆನಪಿಸುತ್ತದೆ. ’ಅಲ್ಲು ಸಲ್ಲಲ್ಲು ಇಲ್ಲೂ ಸಲ್ಲುವ ರೂಪ ಅನುಗೊಳಿಸು’ ಎನ್ನುವುದು ಅವರ ಇಡೀ ಜೀವನಕ್ಕೆ ಅನ್ವರ್ಥವಾಗಿದೆ. ಅವರ ಈ ಟ್ರೇಡ್ ಮಾರ್ಕ್ ಸಾಲುಗಳಲ್ಲಿ ಗಾಯನ ಅತಿ ಮಧುರ. ಹಾಡು ಮುಗಿದ ಮೇಲೂ ’ಓ ನಮೋ ನಮ:’ದ ಗುನುಗು ಸುಲಭದಲ್ಲಿ ಮರೆಯಾಗುವುದಿಲ್ಲ.
ಸಮಿಶ್ರ ಧ್ವನಿಸುರಳಿಯ ’ಜೀವನ ಸಂಸ್ಕರಿಸೋ’ ಮತ್ತೊಂದು ಸುಂದರ ಗೀತೆ. ರಾಜೇಶರ ಉತ್ತಮ ಗಾಯನ ಗೀತೆಯನ್ನು ಎತ್ತರಕ್ಕೇರಿಸುತ್ತದೆ. ಆರಂಭದ ಶ್ಲೋಕ ಒಂದಷ್ಟು ದೀರ್ಘವಾಗಿಯೇ ಇದೆ. ಪಲ್ಲವಿ ಹಾಗೂ ಚರಣದ ನಡುವಿನ ವಾದ್ಯ ಸಂಯೋಜನೆ ವಿಭಿನ್ನವಾಗಿ ಮನಸೆಳೆಯುತ್ತದೆ. ಸಾಹಿತ್ಯ ಎಂದಿನಂತೆ ಸೂಪರ್. 

ಹಾಗೆಯೇ ಸಂಭಾವ್ಯದ ’ಸಾಗರದಲೆಗೆ ಸೆಲೆಗಳ ಬರವೇ’ ಕೂಡ ಅತ್ಯಂತ ಮಧುರ ಗೀತೆ. ಆರಂಭದಲ್ಲಿನ ಶ್ಲೋಕ ಹಾಗೂ ಸ್ವರಾಲಾಪನೆಗಳಲ್ಲೇ ಕೇಳುಗ ಸಂಗೀತದಲ್ಲಿ ತೇಲಿ ಹೋಗುವಂತ ರಾಗ ಸ್ವರ ಸಂಯೋಜನೆ ಇಲ್ಲಿದೆ. ಶ್ಲೋಕ ಹಾಗೂ ಸ್ವರಗಳು ಅದೆಷ್ಟು ದೀರ್ಘವಾಗಿದೆ ಎಂದರೆ ಹಾಡಿನ ಆರಂಭದ ಪಲ್ಲವಿ ಶುರುವಾಗುವುದೇ ಎರಡುವರೆ ನಿಮಿಷದ ನಂತರ.

’ಸಾಗರದಲೆಗೆ ಸೆಲೆಗಳ ಬರವೇ? ಕೇಳು ನೀ ಮನವೇ ವರಗಳು ಸಿಗವೇ’ ಎಂಬ ಆರಂಭಿಕ ಸಾಲುಗಳೇ ಸುಂದರ. ಹಂಸಲೇಖರ ಒಂದು ಗೀತೆಯಲ್ಲಿ ’ ಸಾಗರವೇ ಸಾಗರವೇ..ದಣಿವೇ ಇಲ್ಲ ನಿನ್ನ ಅಲೆಗೆ’ ಎಂಬ ಸಾಲುಗಳು ಇಲ್ಲಿ ನನಪಾಗುತ್ತವೆ. ’ಈ ಭುವಿಯ ಅಣು ಅಣುಗೆ ಸೌಹಾರ್ದ ತಾ’ ಎನ್ನುವಂತ ಅದ್ಭುತ ಸಾಲುಗಳು ಇಲ್ಲಿವೆ.


ಹನಿ ಧ್ವನಿ ಸುರಳಿಯ ’ಸರ್ವೇಶ್ವರನೇ ಸೃಷ್ಟಿಯು ನಿನ್ನದೇ’ ಗೀತೆ ಫಾ.ಫೆಲಿಕ್ಸ್ ರವರ ಗೀತೆಗಳಲ್ಲಿನ ಆರ್. ಎನ್. ಜಯಗೋಪಲ್ ರವರ ಸಾಹಿತ್ಯವನ್ನು ನೆನಪಿಸುತ್ತದೆ. ಆರಂಭಿಕ ಶ್ಲೋಕ, ಸ್ವರಗಳು, ಅಲಾಪನೆ, ಕೋರಸ್ ಗಳ ಸುಂದರ ಸಮ್ಮಿಲ್ಲನದ ಚಸರಾರವರ ಗೀತೆಗಳ ಪರಂಪರೆಯ ಮುಂದುವರಿಕೆಯನ್ನು ಸಾಂಗತ್ಯದ ’ಆ ಸ್ವರ್ಗಕ್ಕೆ ಈ ಭೂಮಿಗೆ’ ಯಲ್ಲಿ ಕಾಣಬಹುದು. ಇತ್ತೀಚಿನ ವರ್ಷಗಳಲ್ಲಿ ಅವರ ಗೀತೆಗಳಲ್ಲಿ ಅತ್ತ್ಯುತ್ತಮ ಎನ್ನಬಹುದಾದ ಗೀತೆ. ಮತ್ತೆ ದೀರ್ಘವಾದ, ಅತ್ಯಂತ ಸುಮಧುರ ಶ್ಲೋಕದಿಂದ ಆರಂಭವಾಗಿ, ಸ್ವರಗಳಲ್ಲಿ ಮುಂದುವರಿಯುವ ಈ ಗೀತೆ ರಾಜೇಶರ ಸುಶ್ರಾವ್ಯ ಗಾಯನದಿಂದ ಆಪ್ತವಾಗುತ್ತದೆ.


ಇಲ್ಲಿ ಚಸರಾರವರ ಸಾಹಿತ್ಯ ಅವರ ಇತರ ಹಳೆಯ ಗೀತೆಗಳ ಸಾಹಿತ್ಯಕ್ಕಿಂತ ಸಂಪೂರ್ಣ ಭಿನ್ನ. ಇಲ್ಲಿ ಅವರ ಸಾಹಿತ್ಯ ಹೊಸ ಮಜಲುಗಳನ್ನು ಮುಟ್ಟಿದೆ. ಸ್ಟೀವನ್‍ರವರ ವಾದ್ಯ ಸಂಯೋಜನೆ ಉತ್ತಮವಾಗಿ ಮೂಡಿ ಬಂದಿದೆ. ಋತುಬಿಂದು, ಋತು ಸಿಂಧು, ಒಳ ಬಂಧ ನೀ ಎಂಬಂಥ ಪದಗಳು ಬಳಕೆಯಾಗಿರುವ ಸಂದರ್ಭಗಳು ಚಿಂತನಾರ್ಹ.   

ಈ ಮೇಲಿನ ಹಾಡುಗಳು ಕೆಲವು ಉದಾಹರಣೆಗಳಷ್ಟೇ. ಇನ್ನೂ ಅನೇಕ ಗೀತೆಗಳಿವೆ. ಚಸರಾರವರು ಹೊಸಪದಗಳ ಪ್ರಯೋಗ ಮಾಡಿದಾಗ, ಇವು ಚಿತ್ರ ಗೀತೆಗಳಂತಿವೆ, ದೇವಾಲಯಗಳಲ್ಲಿ ಹಾಡಲು ಮುಜುಗುರ ಎಂಬಂಥ ಮಾತುಗಳಿದ್ದವು. ಆದರೆ ಮೇಲೆ ಉದಹರಿಸಿದ ಗೀತೆಗಳು ಯಾವುದೇ ಗಾಂಭಿರ್ಯಭರಿತ ಸಾಹಿತ್ಯಕ್ಕೆ ಕಮ್ಮಿಯಿಲ್ಲ. ಸಂಗೀತ ಹಾಗೂ ವಾದ್ಯ ಸಂಯೋಜನೆ ಕೂಡ ಉತ್ಕೃಷ್ಟ ಮಟ್ಟದ್ದೇ.

ಪ್ರಾರಂಭದಲ್ಲೇ ’ಸ್ಪೂರ್ತಿಯಾಗಲಿ ಕ್ರಿಸ್ತ’ ಎಂಬಂಥ ಗೀತೆಗಳ ಸಾಹಿತ್ಯ ಉನ್ನತ ಮಟ್ಟದಲ್ಲಿದ್ದರೂ, ವರ್ಷಗಳು ಕಳೆದಂತೆ ಸಾಹಿತ್ಯ ಮತ್ತಷ್ಟು ಪಕ್ವಗೊಳ್ಳುತ್ತಲೇ ಸಾಗುತ್ತಿತ್ತು. ಅದಕ್ಕೆ ’ಆ ಸ್ವರ್ಗಕ್ಕೆ ಈ ಭೂಮಿಗೆ’ ಗೀತೆ ಉತ್ತಮ ಉದಾಹರಣೆಯಾಗಿದೆ. ಅವರ ಇತ್ತೀಚಿನ ಸಾಹಿತ್ಯದ ’ಅಮ್ಮನ ಮಡಿಲು’ ಧ್ವನಿ ಸುರಳಿಯಲ್ಲಿನ ಕೆಲವು ಹಾಡುಗಳ ಸಾಲುಗಳಲ್ಲಿ ವಚನ ಸಾಹಿತ್ಯದ ಚಿಂತನೆಗಳು ಮೇಲ್ಪದರದಲ್ಲಿ ಕಾಣಸಿಗುತ್ತವೆ.

ಚಸರಾರವರ ಮೇಲಿನ ಗೀತೆಗಳ ದೊಡ್ಡ ಹೆಗ್ಗಳಿಕೆ ಇರುವುದು ಅವುಗಳ ಸಾಹಿತ್ಯ, ಸಂಗೀತದ ಗುಣಮಟ್ಟ ಹಾಗೂ ಪ್ರಯೋಗಶೀಲತೆಯಲ್ಲಿ ಮಾತ್ರವಲ್ಲ. ಅದಕ್ಕೆ ಮೀರಿದ, ಜನ ಸಾಮಾನ್ಯರನ್ನು ಅವು ಸ್ಪರ್ಷಿಸಿದ ಬಗೆಯಲ್ಲಿ. ಈ ಹಾಡುಗಳು ಪಂಡಿತರ ಎತ್ತರದ ಗೋಪುರಗಳಲ್ಲಿ ಉಳಿಯದೆ ಜನ ಸಾಮಾನ್ಯರ ಎದೆಯಲ್ಲಿ ಗುನುಗಿಸಿಕೊಂಡ ಗೀತೆಗಳಾದವು.

ಈ ಮಾತು ಏಕೆ ಹೇಳಬೇಕೆಂದರೆ, ಈ ಹಾಡುಗಳು ಸುಲಭದಲ್ಲಿ ಹಾಡುವಂಥದೇನ್ನಲ್ಲ. ಸ್ವಲ್ಪ ಮಟ್ಟಿಗಿನ ಪ್ರಯತ್ನ, ಅಭ್ಯಾಸ, ಶ್ರಮ ಎಲ್ಲವೂ ಬೇಕಾಗಿದ್ದ ಈ ಹಾಡುಗಳನ್ನು ಕನ್ನಡ ಜನತೆ ಪ್ರೀತಿಯಿಂದಲೇ ಅಪ್ಪಿಕೊಂಡಿತು. ಒಂದು ಹಾಡು ಭಾವಾಂತರಂಗದಲ್ಲಿ ಹುಟ್ಟಿ ಕೇಳುಗನ ಕಿವಿ ತಲುಪಿ ಹೃದಯ ತುಂಬಿಕೊಳ್ಳುವ ಒಂದು ಸಂಪೂರ್ಣ ವೃತ್ತದ ಪರಿಪೂರ್ಣತೆಯನ್ನು, ಈ ಹಾಡುಗಳು ಪಡೆದುಕೊಂಡವು.  

- ಪ್ರಶಾಂತ್ ಇಗ್ನೇಶಿಯಸ್ 

Tuesday, 30 May 2017

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 10 - ’ಸಂವೇದ್ಯ’

’ಸಂವೇದ್ಯ’

ಫಾ.ಚಸರಾರವರ ಇನ್ನೂ ಅನೇಕ ಗೀತೆಗಳ ಬಗ್ಗೆ ಬರೆಯಬಹುದಾದರೂ ’ಸಂವೇದ್ಯ’ ಧ್ವನಿಸುರಳಿಯ ಬಗ್ಗೆ ಪ್ರತ್ಯೇಕವಾಗಿ ಬರೆಯಲೇ ಬೇಕಾಗುತ್ತದೆ. ಈಗಾಗಲೇ ಈ ಧ್ವನಿಸುರಳಿಯ ಮೂರ್ನಾಲ್ಕು ಹಾಡುಗಳ ಬಗ್ಗೆ ಬರೆದಿದ್ದಾಗಿದೆಯಾದರೂಈ ಧ್ವನಿ ಸುರಳಿಯ ಒಟ್ಟು ಹಿನ್ನಲೆ, ಪರಿಣಾಮ, ಸಾಂಸ್ಕೃತಿಕ ಮಹತ್ವದ ಬಗ್ಗೆ ಉಲ್ಲೇಖಿಸಲೇಬೇಕಾಗುತ್ತದೆ.

ಎಲ್ಲರಿಗೂ ತಿಳಿದಿರುವಂತೆ ’ಸಂವೇದ್ಯ’  ಧ್ವನಿಸುರಳಿ, ಮರಿಯಾಪುರದಲ್ಲಿ ಫಾ. ತೋಮಸ್ ನಿರ್ದೇಶನದಲ್ಲಿ ನಡೆಯುತ್ತಾ ಬಂದಿರುವ ’ಕ್ರಿಸ್ತ ದ್ವನಿ’ ಮಹಿಮೆ ನಾಟಕದಲ್ಲಿನ  ಹಾಡುಗಳ ಗುಚ್ಛ. ಹಿಂದಿನ ಸಂಚಿಕೆಯೊಂದರಲ್ಲಿ ಹೇಳಿದಂತೆ ಕನ್ನಡ ಕ್ರೈಸ್ತರು ಮಾತ್ರವಲ್ಲದೆ ಇಡೀ ಕ್ರೈಸ್ತ ಸಮುದಾಯ, ಕನ್ನಡ ಸಾಂಸ್ಕೃತಿಕ ಲೋಕ ಹೆಮ್ಮೆಪಡಬಹುದಾದ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳಲ್ಲಿ ಇದು ಒಂದು.

ಕರ್ನಾಟಕದ ಹಾಗೂ ತಮಿಳುನಾಡಿನ ಅನೇಕ ಕ್ರೈಸ್ತ ಗ್ರಾಮಗಳಲ್ಲಿ ಹಬ್ಬ, ಜಾತ್ರೆ, ವಿಶೇಷ ಸಂದರ್ಭಗಳಲ್ಲಿ ಕ್ರೈಸ್ತ ನಾಟಕಗಳು ನಡೆದುಕೊಂಡು ಬಂದಿದೆ. ತಮಿಳುನಾಡಿನ ಪಳ್ಳಪಟ್ಟಿ ಹಾಗೂ ಹಾರೋಬೆಲೆಯ ಮಹಿಮೆ ನಾಟಕಗಳು ಸಾಕಷ್ಟು ಜನಪ್ರಿಯವೂ ಹೌದು.  ಹಾರೋಬೆಲೆಯ ಮಹಿಮೆ ನಾಟಕಕ್ಕೆ ನೂರು ವರ್ಷಗಳ ಇತಿಹಾಸವೂ ಇದೆ. ಈ ಹಿನ್ನಲೆಯಲ್ಲಿ ಇವುಗಳಿಗಿಂತ ಭಿನ್ನವಾದ ಧ್ವನಿ ಬೆಳಕಿನ ಮೂಲಕ ವಿಶಾಲವಾದ ವೇದಿಕೆಯಲ್ಲಿ ಬೈಬಲ್ ಅಧಾರಿತ ನಾಟಕವನ್ನು ಮಾಡಬೇಕೆನ್ನುವ ನಿರ್ಧಾರವೇ ಒಂದು ದೊಡ್ಡ ಸಾಹಸ. 

ಈ ನಿಟ್ಟಿನಲ್ಲಿ ಈ ಸಾಹಸಕ್ಕೆ ಕೈ ಹಾಕಿದ ಫಾ.ತೋಮಾಸರ ಧೈರ್ಯ ಮೆಚ್ಚತಕ್ಕದೆ. ಒಂದೀಡಿ ಗ್ರಾಮದ ಜನರ ಸಹಕಾರ, ತಕ್ಕ ಬಯಲು, ತಕ್ಕಮಟ್ಟಿನ ಆರ್ಥಿಕ ಬಲ ಎಲ್ಲವೂ ಹೊಂದಿಸಿದ ಮೇಲೆ ನಿಜಕ್ಕೂ ಸವಾಲಾಗುವಂತದ್ದು ನಾಟಕದ ಕಥಾವಸ್ತು, ನಿರೂಪಣೆ ಹಾಗೂ ಸಾಹಿತ್ಯ. ಮೊದಲೇ ಹೇಳಿದಂತೆ ನಾಟಕಗಳ ಇತಿಹಾಸವಿದ್ದೂ, ಸಂಪ್ರದಾಯಸ್ತ ಮನಸ್ಸುಗಳ ನಡುವೆ ಯುವ ಸಮುದಾಯವನ್ನೂ ಆಕರ್ಷಿಸುವಂತ ಗಟ್ಟಿ ಸಾಹಿತ್ಯ ಮಾತ್ರವೇ ಈ ಮಹಿಮೆ ನಾಟಕವನ್ನು ಯಶಸ್ವಿಗೊಳಿಸಬೇಕಿತ್ತು. ಇಂದಿಗೂ ಈ ಮಹಿಮೆ ನಾಟಕ ಅತ್ತ್ಯುತ್ತಮ ಎನ್ನಬಹುದಾದ ರಂಗ ವಿನ್ಯಾಸ, ಬೆಳಕು ಹಾಗೂ ಸಮರ್ಥ ಮಾನವ ಸಂಪನ್ಮೂಲದ ಬಳಕೆಯಿಂದ ಶ್ರೇಷ್ಠವಾದ ರಂಗ ಚಟುವಟಿಕೆಯಾಗಿ ನಿಂತಿದೆ. ಆದರೆ ಅದಕ್ಕೆ ಸಮನಾದ ಆಧಾರ ಸ್ತಂಭವಾಗಿ ನಿಂತಿರುವುದು ಅದರ ಸಾಹಿತ್ಯ ಹಾಗೂ ಸಂಗೀತ.

ಇಲ್ಲಿನ ಹಾಡುಗಳು ನಿಜಕ್ಕೂ ಒಂದಕ್ಕಿಂತ ಒಂದು ಮೀರಿಸುವಂತದ್ದು. ಧ್ವನಿಸುರಳಿ ಮೊದಲಿಗೆ ಫಾ.ಚಸರಾರವರ ಸುಂದರ ನಿರೂಪಣೆಯಿದೆ. ನಂತರದ್ದು ಫಾ.ಫಿಲಿಪ್ ಸಿಜೋನ್‍ರವರ ಬಗೆಗಿನ ಹಾಡು. ಒಬ್ಬ ವ್ಯಕ್ತಿ ಒಂದು ಗ್ರಾಮಕ್ಕೆ, ಒಂದು ಸಮುದಾಯಕ್ಕೆ ಕೊಡಬಹುದಾದ ಸಾಮಾಜಿಕ, ಅಧ್ಯಾತ್ಮಿಕ, ಸಾಂಸ್ಕೃತಿಕ ಕೊಡುಗೆಗಳ ಬಗ್ಗೆ ನೆನೆಯುತ್ತಾ, ಅದಕ್ಕೆ ಧನ್ಯತೆಯನ್ನು ಒಂದು ಹಾಡಿನಲ್ಲೇ ಹೇಗೆ ಸೂಚಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದೆ ಈ ಹಾಡು. ಈ ಗೀತೆಯ ಸಾಹಿತ್ಯ, ಸಂಗೀತ, ವಾದ್ಯ ಸಂಯೋಜನೆ ಎಲ್ಲವೂ ಶ್ರೇಷ್ಠ ಮಟ್ಟದಲ್ಲಿದೆ. ಮುಂದೆ ಬರುವ ’ಬಾನಲಿ ದೂತರು ಹಾಡಿದರು’ ಗೀತೆಯ ಬಗ್ಗೆ ಈಗಾಗಲೇ ಇದೇ ಸಂಚಿಕೆಯಲ್ಲಿ ಬರೆಯಲಾಗಿದೆ. ಸುಂದರವಾದ ಕ್ರಿಸ್ತ ಜಯಂತಿಯ ಹಾಡು ಸಾಗುತ್ತಾ ಅನೇಕ ಆಯಾಮಗಳನ್ನು ಪಡೆದುಕೊಳ್ಳುತ್ತದೆ. ಅತ್ತ್ಯುತ್ತಮ ಎನ್ನಬಹುದಾದ ಗಾಯನ ಇಲ್ಲಿದೆ.

ಬಿತ್ತುವವನ ಸಾಮತಿ ಆಧಾರಿತ ’ಒಂದೂರಲ್ಲಿ ಒಬ್ಬ ರೈತನಿದ್ದ’ ಒಂದು ವಿಶೇಷವಾದ ಗೀತೆ. ಸಿ.ಅಶ್ವತ್ಥ್‍ರವರ ಕಂಠಸಿರಿ ಇಲ್ಲಿ ಕೊಡುಗೆಯಾಗಿದೆ.  ಈ ಗೀತೆ ಮನ ಸೆಳೆಯುವುದು ತನ್ನ ಸಂಗೀತದಿಂದ. ಸಾಹಿತ್ಯ ಎಂದಿನಂತೆ ಸರಳ ಆದರೆ ಪರಿಪೂರ್ಣ.  ಸಾಧು ಕೋಕಿಲರವರ ವಾದ್ಯ ಸಂಯೋಜನೆಯ ಬಗ್ಗೆ ಏನು ಹೇಳುವಂತಿಲ್ಲ. ಮಣ್ಣಿನ ಸೊಗಡು ಹಾಡಿನ ಪ್ರತಿ  ವಿಭಾಗ ಹಾಗೂ ಕ್ಷಣಗಳಲ್ಲೂ ಹಾಸು ಹೊಕ್ಕಿದೆ. ಇನ್ನೂ ’ನನ್ನ ಆತ್ಮವೂ ಕರ್ತರನ್ನು ಸ್ತುತಿಸುತ್ತದೆ’ ಹಾಡು ಹಳೆಯ ಗೀತೆಯನ್ನು ನೆನಪಿಸುತ್ತಾ ಹೊಸತಾದ ಅನುಭಾವವನ್ನು ಹೊರಡಿಸುತ್ತದೆ. ದೇವಮಾತೆಯ ಸ್ವಗತದ ಗೀತೆಗೆ ಇದಕ್ಕಿಂತ ಉತ್ತಮವಾದ ಸಂಗೀತ, ವಾದ್ಯ ಸಂಯೋಜನೆ ಸಾಧ್ಯವೇ ಎನ್ನುವಷ್ಟು ಮಧುರ.

’ಪರಲೋಕ ಪಾರ್ಥನೆ’ ಜಗತ್ತಿನ ಅತ್ಯಂತ ಸರಳ ಆದರೆ ಅಷ್ಟೇ ಜನಪ್ರಿಯ, ಪರಿಣಾಮಕ್ಕಾರಿಯಾದ ಪ್ರಾರ್ಥನೆ ಎಂಬ ಮಾತಿದೆ. ಆ ಮಾತಿಗೆ ಪುಷ್ಠಿ ನೀಡುವಂತ ಸರಳ ಸಂಗೀತ ಹಾಗೂ ಸಂಯೋಜನೆ ’ಪರಲೋಕ ತಂದೆಯೇ ನಿಮ್ಮ ನಾಮವು’ ಗೀತೆಗೆ ಒದಗಿ ಬಂದಿದೆ. ಗಾಯನ ಹಾಗೂ ಕೋರಸ್ ಅದೆಷ್ಟು ಸುಂದರವಾಗಿದೆ ಎಂದರೆ ಹಾಡು ಕೇಳುತ್ತಿದ್ದಂತೆ ಯೇಸು ಹಾಗೂ ಶಿಷ್ಯರ ಚಿತ್ರಣ ಕಣ್ಣ ಮುಂದೆ ಮೂಡಿ ಬರುತ್ತದೆ. ’ನನ್ನ ತಂದೆಯ ಈ ಆಲಯ’ ಗೀತೆಯ ಬಗ್ಗೆಯೂ ಇದೇ ಮಾತು ಅನ್ವಯವಾಗುತ್ತದೆ.

ಯೇಸು ಕ್ರಿಸ್ತ ಜೆರುಸಲೇಮ್ ನಗರವನ್ನು ಪ್ರವೇಶಿಸಿದಾಗ ಸಿಕ್ಕ ಅಭೂತಪೂರ್ವ ಸ್ವಾಗತ, ಪ್ರೀತಿಯನ್ನು ಅತ್ಯಂತ ಸಮರ್ಥವಾಗಿ, ಸುಂದರವಾಗಿ ಮಹಿಮೆಯ ವೇದಿಕೆಯ ಮೇಲೆ ತೋರಿಸಲು ಬೇಕಾದ ಲವಲವಿಕೆ ,ಶಕ್ತಿ ’ದಾವಿದ ಕುವರಗೆ ಹೊಸಾನ್ನ’ ಹಾಡಿನಲ್ಲಿದೆ. ಸಾಂಪ್ರದಾಯಿಕವಾದ ಸಾಹಿತ್ಯದ ಜೊತೆ ಜೊತೆಗೆ ಫಾ.ಚಸರಾ ತಮ್ಮದೇ ಆದ ಚಿಂತನೆಯನ್ನುಈ ಗೀತೆಯಲ್ಲಿ ಪೋಣಿಸಿದ್ದಾರೆ. ಸದಾ ಗುನುಗಬಹುದಾದ ಗೀತೆ.

ಧ್ವನಿಸುರಳಿಯ ಮುಂದಿನ ಎರಡು ಗೀತೆಗಳಾದ ’ ನನ್ನ ಸ್ವಾರ್ಥ ಮನಸ್ಸಿನ ಈ ಬದಕು’ ಹಾಗೂ ’ಅಗೋ ನೋಡಿ’ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿದೆ. ಈ ಎರಡು ಗೀತೆಗಳು ಈ ಧ್ವನಿಸುರಳಿಯ ಮೇಲ್ಮೆಯನ್ನು ಇನ್ನೂ ಎತ್ತರಕ್ಕೆ ಏರಿಸುತ್ತದೆ. ಕನ್ನಡದ ಅತ್ತ್ಯುತ್ತಮ ಪುನರುತ್ಥಾನ ಗೀತೆಗಳ ಸಾಲಿನಲ್ಲಿ ಇದೇ ಧ್ವನಿಸುರಳಿಯ ’ಪುನರುತ್ಥಾನರಾದರು ನಮ್ಮ ಯೇಸು ಕ್ರಿಸ್ತರು’ ಸಹಾ ಒಂದು. ಭಿನ್ನವಾದ, ಕೇವಲ ಫಾ.ಚಸರಾ ಚಿಂತನೆಯ ಬತ್ತಳಿಕೆಯಿಂದ ಮಾತ್ರ ಬರಬಹುದಾದ ಸಾಲುಗಳು ಈ ಹಾಡಿನಲ್ಲಿವೆ. ’ಮುಂಜಾನೆ ಮೂಡಿ ಬಂದು ಹೊಂಗಿರಣ ಚಿಮ್ಮಿಸಿತು’ ಎಂಬುದು ಯೇಸುವಿನ ಪುನರುತ್ಥಾನಕ್ಕೆ ಹೊಸ ಅರ್ಥವನ್ನೂ ನೀಡುತ್ತದೆ. ’ಸೂರ್ಯನು ಉದಯಿಸಿದ ಬದುಕೆಲ್ಲಾ ಹೊಸದಾಯಿತು, ಮನಸೆಲ್ಲಾ ಹಗುರಾಯಿತು’ ಎನ್ನುವ ಸಾಲುಗಳು ಚಸರಾರವರು ಕನ್ನಡ ಭಕ್ತಿ ಸಂಗೀತಕ್ಕೆ ತಂದ ಹೊಸ ಅಲೋಚನೆಗಳ ಪ್ರತಿಬಿಂಬವಾಗಿದೆ.   

ಇಷ್ಟು ಶ್ರೇಷ್ಠವಾದ ಹಾಡುಗಳು ಒಂದೇ  ಧ್ವನಿಸುರಳಿಯಲ್ಲಿ ಇರುವುದು ನಿಜಕ್ಕೂ ಅಪರೂಪದ ಸಂಗತಿಯಾಗಿರುವುದರಿಂದ ಈಡೀ  ಧ್ವನಿಸುರಳಿಯ ಬಗ್ಗೆ ಬರೆಯಬೇಕಾಯಿತು.
ಫಾ.ಚಸರಾರವರ  ಸಾಹಿತ್ಯ ಹಾಗೂ ಸಂಗೀತ ಎರಡು ದಶಕಗಳ ನಂತರವೂ ತನ್ನ ನಾವಿನ್ಯತೆಯನ್ನು ಕಳೆದುಕೊಂಡಿಲ್ಲ ಎಂದರೆ ಅದಕ್ಕೆ ಅವರ ದೂರದೃಷ್ಟಿ, ಪಾಂಡಿತ್ಯ, ಪ್ರತಿಭೆ, ಶ್ರಮ ಮಾತ್ರವಲ್ಲದೆ ಅವರು ನಂಬಿದ ಟೀಂ ವರ್ಕ್ ಕಾರಣವಾಗಿದೆ. ಹಳೆಯ ಹಾಗೂ ಹೊಸತನದ ಮಿಲನವಾಗಿರುವ ಈ ಸಾಹಿತ್ಯದಿಂದಾಗಿಯೇ ಈ ಧ್ವನಿಸುರಳಿಯ ಎಲ್ಲಾ ಹಾಡುಗಳು ಇಂದಿಗೂ ನನ್ನ ಮೆಚ್ಚಿನ ಮಾತ್ರವಲ್ಲದೆ ಕ್ರೈಸ್ತ ಸಮುದಾಯದ ಮೆಚ್ಚಿನ ಹಾಡುಗಳಾಗಿ ಜನಮನದಲ್ಲಿ ಬೆರೆತು ಹೋಗಿದೆ.

ಸಂಗೀತ ಹಾಗೂ ವಾದ್ಯ ಸಂಯೋಜನೆಯಲ್ಲಿ ದೃಶ್ಯಗಳಿಗೆ ಬೇಕಾದ ಭಾವನಾತ್ಮಕತೆಯನ್ನು ಕಾಪಾಡಿಕೊಳ್ಳಲಾಗಿದೆ. ಉದಾಹರಣೆಗೆ ’ನನ್ನ ತಂದೆ’,’ನನ್ನ ಆತ್ಮವು’,’ಪರಲೋಕ ತಂದೆಯ’ ಗೀತೆಗಳಲ್ಲಿ ಅತ್ಯಂತ ಕಡಿಮೆ ವಾದ್ಯಗಳನ್ನು ಬಳಸಿ ಮಾಧುರ್ಯಕ್ಕೆ ಆದ್ಯತೆ ನೀಡಲಾಗಿದೆ. ’ದಾವಿದ ಕುವರಗೆ ಹೊಸಾನ್ನ’ ಹಾಗೂ’ಪುನರುತ್ಥಾನರಾದರೇಸು’ ಗೀತೆಗಳಲ್ಲಿ ಸಂಭ್ರಮ ಹಾಸುಹೊಕ್ಕಿದೆ. ’ಒಂದೂರಿನಲ್ಲಿ’ ಅಪ್ಪಟ ದೇಸಿ ಶೈಲಿಯಲ್ಲಿದ್ದರೆ, ’ಗ್ಲೋರಿಯಾ’ ಹಾಗೂ ’ಜನತೆಯ ಬದುಕಿನ’ ಹಾಡುಗಳಲ್ಲಿ ಪ್ರಯೋಗವಿದೆ.  ’ನನ್ನ ಸ್ವಾರ್ಥ ’ಹಾಗೂ ’ಅಗೋ ನೋಡಿ’ ಗೀತೆಗಳ ಸಂಗೀತದಲ್ಲಿ ಕರುಣರಸ ಎದ್ದು ಕಾಣುತ್ತದೆ.

ಇಲ್ಲಿನ ಹಾಡುಗಳು ಬೈಬಲ್ ಘಟನೆಗಳಿಗೆ, ಅದರ ಆಶಯಕ್ಕೆ ಬದ್ಧವಾಗಿರುವುದರಿಂದ ಸಾಹಿತ್ಯದ ಆಳಕ್ಕೆ ಇಳಿದು ಹೇಳುವಂಥದ್ದೇನಿಲ್ಲ. ಗೊತ್ತಿರುವ ಸಂಗತಿಗಳನ್ನೇ ಸೃಜನಾತ್ಮಕವಾಗಿ, ಈ ಮಣ್ಣಿನ ಸೊಗಡಿಗೆ ಹತ್ತಿರವಾಗಿ, ಹೊಸ ಬಗೆಯಲ್ಲಿ ಕಟ್ಟಿಕೊಟ್ಟಿರುವ ಫಾ.ಚಸರಾರವರ ಪ್ರಯತ್ನವನ್ನು ಅಚ್ಚರಿಯಿಂದ, ಮೆಚ್ಚುಗೆಯಿಂದ ನೋಡಬಹುದಷ್ಟೇ.