Wednesday, 30 November 2016

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 4 - ಸ್ವಾರ್ಥ ಮನಸ್ಸಿನ ಈ ಬದಕು ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’

ನನ್ನ ಸ್ವಾರ್ಥ ಮನಸ್ಸಿನ ಈ ಬದಕು ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’

ನನ್ನ ಸ್ವಾರ್ಥ ಮನಸ್ಸಿನ ಈ ಬದಕು ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’, ಸಂವೇದ್ಯದ ಮತ್ತೊಂದು ಸುಂದರ ಗೀತೆ. ಫಾ.ಚಸರಾರವರ ಅತ್ಯಂತ ಭಾವನಾತ್ಮಕ ಗೀತೆಗಳಲ್ಲಿ ಒಂದು. ಮರಿಯಾಪುರದ ಮಹಿಮೆಯಲ್ಲಿನ ಸಂದರ್ಭದ ಹಿನ್ನಲೆಯಿಂದ ಪ್ರತ್ಯೇಕಿಸಿ  ನೋಡಿದಾಗಲೂ ಇದು ಮನಮುಟ್ಟುವಂತ ಗೀತೆ. ಗೀತೆಯ ಮೊದಲ ಸಾಲಿನಲ್ಲೇ ಒಂದು ಸೆಳೆತವಿದೆ. ಸಾಮಾನ್ಯವಾಗಿ ತಪಸ್ಸು ಕಾಲದ ಈ ರೀತಿಯ ಹಾಡುಗಳಲ್ಲಿ, ’ ನಮ್ಮ ಪಾಪಗಳಲಿಂದಲೇ ಯೇಸು ಮರಣ ಹೊಂದಿದರು, ಕೊಲ್ಲಲ್ಪಟ್ಟರು’ ಎಂಬ ಭಾವವಿರುತ್ತದೆ. ಅದು ನಡೆದು ಹೋದ ಅಂದಿನ ಘಟನೆಯ ದಿವ್ಯ ನೆನಪಾಗಿರುತ್ತದೆ.  

ಅದರೆ ಈ ಹಾಡಿನಲ್ಲಿ ಬರುವ ’ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’ ಎಂಬ ಸಾಲುಗಳು ಯೇಸುವಿನ ಆ ಸಾವನ್ನು, ನೋವನ್ನು ವರ್ತಮಾನಕ್ಕೆ ತಂದು ಇಳಿಸಿ ಬಿಡುತ್ತದೆ. ’ಕ್ರಿಸ್ತ ಇತಿಹಾಸದವನ್ನಲ್ಲ, ನಮ್ಮ ನಿಮ್ಮೊಡನೆ ಇಂದಿಗೂ ಸ್ಪಂದಿಸುತ್ತಿರುವವನು’ ಎಂಬ ಚಸರಾರವರ ಇನ್ನೆಲ್ಲಿಯದೋ ಸಾಲುಗಳು ಇಲ್ಲಿ ಮತ್ತೆ ನೆನಪಿಗೆ ಬರುತ್ತದೆ.

ಕ್ರಿಸ್ತನ ಸಾವು, ನೋವು, ಅದರ ಕಾರಣ ಇತಿಹಾಸದ ದೃಷ್ಟಿಯಿಂದ ನೋಡಿದಾಗ ನಾವು ನಮ್ಮ ಇಂದಿನ ಜವಬ್ದಾರಿಯಿಂದ ಮೆಲ್ಲಗೆ ನುಣಿಚಿಕೊಳ್ಳುವ ಸಾಧ್ಯತೆಯಿದೆ. ಅಂದಿನ ಜನರು, ಪರಿಸ್ಥಿತಿ ಯೇಸುವಿನ ಸಾವಿಗೆ ಕಾರಣ ಎಂಬದು ಆ ನುಣಿಚಿಕೆಯ ಭಾಗವಾಗಿಬಿಡುತ್ತದೆ. ಆದರೆ ಆದೇ ’ ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’ ಎಂಬುದು ಯೇಸುವಿನ  ಆ ಕೊಲ್ಲುವಿಕೆಯಲ್ಲಿ ನಮ್ಮನೂ ಭಾಗಿಯಾಗಿಸಿ ಬಿಡುತ್ತದೆ, ಅದರಲ್ಲಿ ನಮ್ಮ ಸ್ವಾರ್ಥವನ್ನು ಮುಖ್ಯ ಆರೋಪಿಯನ್ನಾಗಿಸುತ್ತದೆ. ಆ ನಿಟ್ಟಿನಲ್ಲಿ ನೋಡಿದಾಗ ಅದು ಅದ್ಭುತವಾದ  ಆರಂಭಿಕ ಸಾಲುಗಳು.

ಹಾಡಿನ ಬಗ್ಗೆ ಬರೆಯುವ ಮುನ್ನ ಒಂದು ಘಟನೆಯ ಬಗ್ಗೆ ಹೇಳಬೇಕು. ೨೦೧೪ರಲ್ಲಿ ಚಿಗುರು ಬಳಗವು ಬೈಬಲ್ ಚಿತ್ರ ಪ್ರರ್ದಶನವೊಂದನ್ನು ಬೆಟ್ಟದ ಹಲಸೂರಿನಲ್ಲಿ ಆಯೋಜಿಸಿತ್ತು. ಹಳೆಯ  ಒಡಂಬಡಿಕೆಯಿಂದ ಹೊಸ ಒಡಂಬಡಿಕೆಯ ವಿವಿಧ ಘಟನೆಗಳ ಸುಮಾರು ೨೫೦ಕ್ಕೆ ಹೆಚ್ಚು ಚಿತ್ರಗಳನ್ನು ಒಟ್ಟುಗೂಡಿಸಿದ ಸುಮಾರು ೩೦ ಭಿತ್ತಿ ಚಿತ್ರಗಳ ಸಂಗ್ರಹಗಳ ಪ್ರದರ್ಶನವದು. 

ಅಂದು ಹಬ್ಬದ ಪೂಜೆಗೆ ಬಂದಿದ್ದ  ಫಾ.ಚಸರಾ, ಪೂಜೆಯ ನಂತರ ನಮ್ಮ ಪ್ರದರ್ಶನಕ್ಕೂ ಬಂದರು. ಬಂದವರೇ, ಎಲ್ಲಾ ಚಿತ್ರಗಳನ್ನು ಸಾವಕಾಶವಾಗಿ ನೋಡುತ್ತಾ ಬಂದರು. ಪ್ರತಿಯೊಂದನ್ನು ಗಮನಿಸಿದ ನಂತರ ಮತ್ತೆ ಒಂದು ಚಿತ್ರದತ್ತ ಹೋಗಿ ನಿಂತು ನೋಡಿದರು. ನಾವೂ ಸಹಾ ಆ ಚಿತ್ರದತ್ತ ಹೋಗಿ ನಿಂತೆವು. ಅದು ಯೇಸು ಬಂಧನಕ್ಕೆ ಒಳಗಾದ ನಂತರದ ಸುಮಾರು ಐದಾರು ಘಟನೆಯ ಕೊಲಾಜ್ ಚಿತ್ರ. ಯೇಸುವಿಗೆ ಜೂದಾಸ್ ಮುದ್ದಿಡುವುದು, ಸೈನಿಕರ ಛಾಟಿ ಏಟು, ಪೇತ್ರನ ನಿರಾಕರಣೆ, ಕೋಳಿಗಳು, ಯೇಸು ಪೇತ್ರನತ್ತ ನೋಡುತ್ತಿರುವುದು, ಪಿಲಾತ ಯೇಸುವನ್ನು ಜನರ ಮುಂದೆ ನಿಲ್ಲಿಸಿರುವುದು, ಜನ ಕೂಗುತ್ತಿರುವುದು, ರಾಣಿಯ ಬೇಸರ ಎಲ್ಲವೂ ಅದರಲ್ಲಿತ್ತು.

ಆ ಚಿತ್ರವನ್ನು ನೋಡಿದ ಫಾ.ಚಸರಾ ಪ್ರದರ್ಶನದ ಎಲ್ಲಾ ಚಿತ್ರಗಳಲ್ಲಿ ತಮಗೆ ಅತ್ಯಂತ  ಇಷ್ಟವಾದ ಚಿತ್ರ ಅದು ಎಂದು ನಮ್ಮ ಬಳಿ ಹೇಳಿದರು. ನಂತರ ಚಿತ್ರದ ಒಂದೊಂದು ಭಾಗವನ್ನು ನಮಗೆ  ವಿವರಿಸಲಾರಂಭಿಸಿ, ಕೊನೆಗೆ ನಮ್ಮನ್ನು ಅಭಿನಂದಿಸಿದರು. ಆ ಕೊಲಾಜಿಗೆ ಚಿತ್ರಗಳನ್ನು ಆಯ್ಕೆ ಮಾಡಿದ್ದ ನನಗೂ, ಅದನ್ನು ಡಿಸೈನ್ ಮಾಡಿದ್ದ ಬಳಗದ ಜ್ಞಾನ ಪ್ರಕಾಶ್‍ರವರಿಗೆ ಸಹಜವಾಗಿಯೇ ಖುಷಿಯಾಯಿತು. ಯೇಸು ಕ್ರಿಸ್ತನ ಜೀವನದ  ಕೊನೆಯ ಕೆಲವು ಘಂಟೆಗಳ ಕಾಲದ ಘಟನೆಗಳ ಬಗ್ಗೆ ಅವರಿಗೆ ಒಂದು ವಿಶೇಷವಾದ ಭಾವವಿತ್ತು ಎಂಬುದು ಅವರ ಮಾತಿನಲ್ಲಿ ನಮಗೆ ತಿಳಿಯಿತು.

ಕ್ರಿಸ್ತನ ಕೊನೆಯ ಕೆಲವು ಘಂಟೆಗಳು ನಿಜಕ್ಕೂ ಮನಕಲಕುವಂಥದ್ದು. ತಮ್ಮ ಬಹಿರಂಗ ಜೀವನದ ಮೂರು ವರ್ಷಗಳಲ್ಲಿ ಯೇಸು ಅನೇಕ ರೀತಿಯ ವಿರೋಧಗಳನ್ನು ಎದುರಿಸುತ್ತಾರೆ.ಆದರೂ ಸಾವಿನ ಭಯವಿಲ್ಲದೆ ಮುನ್ನುಗ್ಗುತ್ತಾರೆ.  ಆದರೆ ಬಂಧನದ ನಂತರ ಯೇಸುವನ್ನು ಅತ್ಯಂತ ಹೀನವಾಗಿ ನಡೆಸಿಕೊಳ್ಳಲಾಗುತ್ತದೆ. ಒಬ್ಬ  ಮನುಷ್ಯನಿಗೆ  ನೀಡಬಹುದಾದ ಅತ್ಯಂತ ಹೇಯ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ಯೇಸು ಅನುಭವಿಸುತ್ತಾರೆ. ಯೇಸುವಿನ ಆ ಪರಿಸ್ಥಿತಿಯನ್ನು ಕಂಡು ಮರುಗುವ ಹಿನ್ನಲೆಯ ಗೀತೆ ’ನನ್ನ ಸ್ವಾರ್ಥ ಮನಸ್ಸಿನ ಈ ಬದುಕು.’

ಹಾಡಿನ ಪಲ್ಲವಿ ಹಾಗೂ ಮೊದಲ ಚರಣ ಕೇಳಿದಾಗಲ್ಲೆಲ್ಲ ನನಗೆ ಪೇತ್ರನ ಚಿತ್ರವೇ ನೆನಪಿಗೆ ಬರುತ್ತದೆ. ಶಿಷ್ಯರ ಕಾಲುಗಳನ್ನು ಯೇಸು ತೊಳೆಯಲು ಬಂದಾಗ, ಮೊದಲ ಪ್ರತಿರೋಧ ಬರುವುದೇ ಪೇತ್ರನಿಂದ. ’ಗುರುವಾಗಿರುವ ನೀವು ನಮ್ಮ ಪಾದ ತೊಳೆಯುವುದೇ’ ಎನ್ನುವ ಪೇತ್ರನ ಭಾವ ಈ ಹಾಡಿನಲ್ಲಿ ಕಾಣಿಸುತ್ತದೆ. ಹಾಗೆ ನೋಡಿದರೆ, ಶಿಷ್ಯರೆಲ್ಲಾ ದಿಕ್ಕಾಪಾಲಾಗಿ ಓಡಿಹೋದ ಮೇಲೆ ಪೇತ್ರ ಮಾತ್ರ ಯೇಸುವನ್ನು ಹಿಂಬಾಲಿಸುತ್ತಾನೆ. ಅದಕ್ಕೂ ಮುಂಚೆ ಗೆತ್ಸೆಮನಿಯಲ್ಲಿ ಸೈನಿಕರಿಗೆ ತಡೆಒಡ್ಡಿ ಒಬ್ಬನ ಕಿವಿ ಕತ್ತರಿಸುತ್ತಾನೆ. ಮುಂದೆ ಯೇಸುವನ್ನು ಮೂರು ಬಾರಿ ನಿರಾಕರಿಸುತ್ತಾನೆ, ಹಾಗೆಂದ ಮರುಕ್ಷಣವೇ  ಪಶ್ಚಾತ್ತಾಪದಿಂದ ಒದ್ದಾಡುತ್ತಾನೆ.

ಈ ಹಿನ್ನಲೆಯಲ್ಲಿ ’ನನ್ನ ಸ್ವಾರ್ಥ ಮನಸ್ಸಿನ ಈ ಬದುಕು’ ಎಂಬ ಸಾಲುಗಳು ಪೇತ್ರನ ಪಶ್ಚಾತ್ತಾಪದ ಸ್ವಗತವೇನೋ ಎಂದು ಹಾಡು ಕೇಳಿದಾಗಲೆಲ್ಲಾಅನಿಸುತ್ತದೆ. ಪೇತ್ರನೊಂದಿಗೆ ಸೇರಿ ನಾವೆಲ್ಲಾ ಹಾಡಿದಂತೆ.  ’ಪ್ರಭುವೇ ನನ್ನ ಓ ಪ್ರಭುವೇ ಏಕೆ ನಿಮ್ಮ ಸೇವೆ’ ಎಂಬ ಸಾಲುಗಳು ಪೇತ್ರನ ಪಾದ ತೊಳೆಯುವಿಕೆಯ ಸಂದರ್ಭದ ಮಾತುಗಳನ್ನು ನೆನಪಿಸುತ್ತದೆ. ಹಾರೋಬೆಲೆಯ ಮಹಿಮೆ ಹಾಗೂ ಪಳ್ಳಿಪಟ್ಟಿಯಲ್ಲಿನ ಮಹಿಮೆ ನಾಟಕದಲ್ಲಿ ಪೇತ್ರ ಯೇಸುವನ್ನು ನಿರಾಕರಿಸಿದ ನಂತರ ದೀರ್ಘವಾದ ದು:ಖಮಯ ಸನ್ನಿವೇಶವಿದೆ, ಹಾಡಿದೆ. ಇಲ್ಲಿ ಈ ಹಾಡಿನಲ್ಲಿ ಪೇತ್ರನಲ್ಲದಿದ್ದರೂ , ಆ ರೀತಿಯ ಭಾವ ಅಡಕವಾಗಿದೆ.

ಇಂದಿಗೂ ಈ ಹಾಡು ಕೇಳಿದಾಗಲೆಲ್ಲಾ ಒಂದು ವಿಷಾದ ಭಾವ ಆವರಿಸಿಕೊಳ್ಳುತ್ತದೆ. ಅದು ಪಶ್ಚಾತ್ತಾಪದ ಸುಳಿ ಮಿಂಚನ್ನು ಹರಿಸುತ್ತದೆ. ನಮ್ಮ ಸ್ವಾರ್ಥದ ಮನಸ್ಸು ಇಂದಿಗೂ ಯೇಸುವನ್ನು ಇಂಚು ಇಂಚಾಗಿ ಕೊಲ್ಲುತ್ತಿದೆ ಎಂಬ ಭಾವ ನಿಲ್ಲುತ್ತದೆ.  ಒಂದೇ ಸಾರಿ ಕೊಂದು ಬಿಡುವುದಕ್ಕಿಂತ ಕೊಲ್ಲುತ್ತಲೇ ಇರುವುದು ದೊಡ್ಡ ಹಿಂಸೆ, ಆದರಿಂದಲೇ ’ಕೊಲ್ಲುತ್ತಿದೆ’ ಎಂಬ ಇನ್ನೂ ವರ್ತಮಾನದ ಸಂಗತಿ ನಮ್ಮನು ಎಚ್ಚರಿಸುತ್ತಲೇ ಇರುತ್ತದೆ. ಸಾಯುತ್ತಿರುವ ವ್ಯಕ್ತಿಯ ಬಳಿ ’ಕ್ಷಮಿಸು  ಹಾಗೂ ’ಪರ ಸೇವೆ ಮಾಡಲು ಕಲಿಸು’  ಎನ್ನುವ ಪ್ರಾರ್ಥನೆಯೂ ಇಲ್ಲಿದೆ.

ಧಾರ್ಮಿಕ ಗೀತೆಗಳಿಗೆ ತೀರ ಭಿನ್ನವೆನಿಸುವ ವಾದ್ಯ ಸಂಯೋಜನೆ  ಹಾಡಿಗೆ ಒದಗಿ ಬಂದಿದೆ. ಕ್ರಿಸ್ತನ ಯಾತನೆಯನ್ನು ಕಣ್ಣಿನ ಮುಂದೆ ತರುವಲ್ಲಿ ಹಿನ್ನಲೆ ಸಂಗೀತ ಯಶಸ್ವಿಯಾಗಿದೆ. ಯೇಸುವಿನ ಭಾರವಾದ ಹೆಜ್ಜೆಗಳ ಪ್ರತೀಕವೋ ಎಂಬಂತೆ ತಾಳ ವಾದ್ಯಗಳು ಆಳವಾಗಿ, ಪರಿಣಾಮಕ್ಕಾರಿಯಾಗಿದೆ. ಇದಕ್ಕೆ ಕಳಶವಿಟ್ಟಂತ್ತಿರುವುದು ರಾಜೇಶ್ ಕೃಷ್ಣನ್‍ನವರ ಗಾಯನ.

 ’ನನ್ನೇಸು ಪ್ರಭುವನ್ನು ಕೊಲ್ಲುತ್ತಿದೆ’ ಎಂಬ ಸಾಲುಗಳು ಮನಸಾಕ್ಷಿಯ ಧ್ವನಿಯಂತೆ, ’ಪ್ರಭುವೇ ನನ್ನ ಕ್ಷಮಿಸು’ ಎನ್ನುವ ಸಾಲುಗಳು ಪಕ್ಕದ ಕಳ್ಳನ ಕ್ಷೀಣ ದನಿಯಂತೆ, ’ಏಕೆ ನಿಮ್ಮ ಸೇವೆ’ ಎಂಬುದು ಪೇತ್ರನ ಅಳುವಂತೆ, ’ಗುರುವು ನೀವು ದಾಸರು ನಾವು’ ಎಂಬುದು ಶಿಷ್ಯರ ಒಕ್ಕೊರಲಿನ ಮಾತಂತೆ, ’ಸ್ವಾರ್ಥ ತೊರೆದು ನೀ ಬಾಳು’ ಎಂಬುದು ನಮ್ಮದೇ ಅಂತರಾಳದಂತೆ, ಹೀಗೆ ವಿವಿಧ ಪಾತ್ರಗಳ ಭಾವ  ಹಾಡಿನಲ್ಲಿ ಕೇಳಿಸುವುದರಲ್ಲಿ ರಾಜೇಶರ ದನಿ ಮೋಡಿ ಮಾಡುತ್ತದೆ. ಆಗಿನ್ನೂ ವೃತ್ತಿನಿರತ ಗಾಯನಕ್ಕೆ ಕಾಲಿಡುತ್ತಿದ್ದ ರಾಜೇಶ್‍ರವರ ಕಂಠದಲ್ಲಿನ ಪಕ್ವತೆ ಎದ್ದು ಕಾಣುತ್ತದೆ.

ಹಾಡು ಮುಗಿದರೂ, ಆರಂಭದಲ್ಲಿನ  ಗಾಯಕಿಯ ಆಲಾಪನೆ ಮನದಲ್ಲಿ ಗುನುಗುಟ್ಟುತ್ತಾ ಸಾಗುತ್ತದೆ. ಹಾಡುಗಳು ಅಮರವಾಗುವುದೇ ಹೀಗೆ.

Friday, 30 September 2016

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 3 - ’ನನ್ನ ತಂದೆಯ ಈ ಆಲಯ’

ಕಳೆದ ಸಂಚಿಕೆಯಲ್ಲಿ ’ಸ್ಫೂರ್ತಿಯಾಗಲಿ ಕ್ರಿಸ್ತ’ ಬಗೆಗಿನ ಬರಹವನ್ನು ಓದಿದ ಒಂದಿಬ್ಬರು ಯುವಮಿತ್ರರು ಬರಹ ಇನ್ನಷ್ಟು ಸರಳವಾಗಿದ್ದರೆ ಓದಲು, ಅರ್ಥ ಮಾಡಿಕೊಳ್ಳಲು ಸುಲಭವಾಗಿರುತ್ತದೆ, ಓದಿಸಿಕೊಂಡು ಹೋಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮುಗಳ್ನಕ್ಕು ಸುಮ್ಮನಾದೆ. ಆ ಹಾಡಿನ ಪ್ರತಿ ಸಾಲಿನ ಬಗ್ಗೆ ವಿವರವಾಗಿ ಬರೆದ ಕಾರಣಕ್ಕೆ ಹಾಗೆನಿಸಿತೇನೋ. ಆದರೆ ಎಲ್ಲಾ ಹಾಡುಗಳ ಬಗ್ಗೆ ಅಷ್ಟು ದೀರ್ಘವಾಗಿ, ವಿವರವಾಗಿ ಬರೆಯಲು ಸಾಧ್ಯವಾಗುವುದಿಲ್ಲ. ’ಸ್ಪೂರ್ತಿಯಾಗಲಿ ಕ್ರಿಸ್ತ’ ನಿಜಕ್ಕೂ ಒಂದು ಅಪರೂಪದ ಗೀತೆ ಹಾಗೂ ವಿವರವಾದ ಬರಹಕ್ಕೆ ಯೋಗ್ಯವಾದಂತ ಗೀತೆ. ನಿಧಾನವಾಗಿ ಓದಿದಾಗ ಮುಂದೆ ಎಂದಾದರೂ ಆ ಲೇಖನ ಆ ಗೆಳೆಯರಿಗೆ  ಇಷ್ಟವಾಗಬಹುದೇನೋ.

ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಈ ಭಾಗದಲ್ಲಿ ನಾನು ಬರೆಯಲು ಆರಿಸಿಕೊಂಡ ಚಸರಾರವರ ಮುಂದಿನ ಗೀತೆ ’ನನ್ನ ತಂದೆಯ ಈ ಆಲಯ’. ಕಾಕತಾಳೀಯವೆಂಬಂತೆ ಚಸರಾರವರ ಗೀತೆಗಳಲ್ಲಿ ಸಾಹಿತ್ಯಿಕವಾಗಿ, ಸಂಗೀತದ ದೃಷ್ಠಿಯಿಂದ ಅತ್ಯಂತ ಸರಳವಾದ ಗೀತೆ ಇದು ಎಂದೇ ಹೇಳಬಹುದು.  ಸರಳವಾದರೂ ನನ್ನ ಅತ್ಯಂತ ಇಷ್ಟವಾದ ಗೀತೆಗಳಲ್ಲಿ ಇದೂ ಒಂದು. ಏಕೆ ಇಷ್ಟ ಎಂದು ಹೇಳಲು ಕಷ್ಟವಾದರೂ, ಪ್ರಾಯಶ: ಈ ಗೀತೆಗೆ ಇರುವ ಹಿನ್ನಲೆ, ಗೀತೆಯನ್ನು ಕೇಳಿದ ಮೊದಲ ಸಂದರ್ಭ, ಗೀತೆಗೆ ಅಂಟಿಕೊಂಡಿರುವ ದೃಶ್ಯ ಸ್ವರೂಪವೆಲ್ಲವೂ ಇದಕ್ಕೆ ಕಾರಣವೇನೋ.

’ನನ್ನ ತಂದೆಯ ಈ ಆಲಯ’ ಗೀತೆಯನ್ನು ನಾ ಮೊದಲು ಕೇಳಿದ್ದು 1995ರಲ್ಲಿ, ಮರಿಯಾಪುರದ ಮಹಿಮೆಯ ಮೊದಲ ಪ್ರದರ್ಶನದಲ್ಲಿ. ಆ ಮೊದಲ ಪ್ರದರ್ಶನದಲ್ಲಿನ ಬೆಳಕು, ರಂಗ ಸಜ್ಜಿಕೆ, ಧ್ವನಿ ವ್ಯವಸ್ಥೆ, ಜನ ಸಾಗರ ಎಲ್ಲವನ್ನೂ ನೋಡಿ ಮೂಕವಿಸ್ಮಿತನಾಗಿ ಹೋಗಿದ್ದ ನಾನು, ಕನ್ನಡದಲ್ಲಿಯೂ ಇಂತಹ ಕಾರ್ಯಕ್ರಮ ಸಾಧ್ಯವಾಯಿತಲ್ಲ ಎಂಬ ಆಲೋಚನೆಯಿಂದ ರೋಮಾಂಚಿತನಾಗಿದ್ದೆ. 

ಕೇವಲ ಬೆಳಕು, ಥಳಕು, ಜಾತ್ರೆ ಮಾತ್ರವಲ್ಲದೆ ಅಂದು ನನ್ನನ್ನು ಸೆಳೆದದ್ದು ಮಹಿಮೆ ನಾಟಕದ ಅದ್ಭುತವೆನಿಸುವಂತ ಸಾಹಿತ್ಯ, ಸಂಗೀತ ಹಾಗೂ ಹಿನ್ನಲೆ ಸಂಗೀತ. ಮಹಿಮೆಯ ಮೂಲ ಆವೃತ್ತಿ ಏನಿತ್ತೋ ಅದು ಇಂದಿಗೂ world class. ಈ ಮಹಿಮೆಯ ಹಾಡುಗಳನ್ನೊಳಗೊಂಡ ಧ್ವನಿಸುರಳಿಯೇ ’ಸಂವೇದ್ಯ’.

ಕಳೆದ ಸಂಚಿಕೆಯಲ್ಲಿ ನಾವು ಚರ್ಚಿಸಿದ ’ಸ್ಪೂರ್ತಿ’ ಧ್ವನಿಸುರಳಿ ಕನ್ನಡ ಕ್ರೈಸ್ತ ಸಂಗೀತದ ಅತ್ಯುತ್ತಮ ಧ್ವನಿಸುರಳಿಗಳಲ್ಲಿ ಒಂದಾದರೆ, ’ಸಂವೇದ್ಯ’ ಒಂದು ಮಹತ್ವದ ಧ್ವನಿಸುರಳಿ ಎಂದರೆ ತಪ್ಪಾಗಲಾರದು. ’ಸ್ಪೂರ್ತಿ’ ಕನ್ನಡ ಭಕ್ತಿಗೀತೆಗಳ ಒಂದು ಸಿದ್ಧ ಸೂತ್ರಕ್ಕಿಂತ ಭಿನ್ನವಾದ ಸೃಜನಾಶೀಲತೆಯನ್ನು ಒಳಗೊಂಡಿದ್ದರೆ, ’ಸಂವೇದ್ಯ’ ದ ಗೀತೆಗಳು ಇಡೀ ಬೈಬಲ್ ನ ಸಾರವನ್ನು ವಿಶಿಷ್ಠ ರೀತಿಯಲ್ಲಿ ಅಭಿವ್ಯಕ್ತಿಗೊಳಿಸಿದ ಕೃತಿ. 

ಬೈಬಲ್ ಆಧಾರಿತ ಮಹಿಮೆ ನಾಟಕದ ಹಾಡುಗಳು ಎಂದಾಕ್ಷಣ ಒಂದು ರೀತಿಯ ಚೌಕಟ್ಟಿನಲ್ಲಿ ಹಾಡುಗಳನ್ನು ರಚಿಸುವ, ಸಾಹಿತ್ಯವನ್ನು ಮಿತಿಗೊಳಿಸುವ ಅನಿವಾರ್ಯತೆ, ಸೀಮಿತ ಅವಕಾಶ ತಾನಾಗಿಯೇ ಏರ್ಪಡುತ್ತದೆ.  ಆದರೆ ಬೈಬಲ್ ನ ನಾವು ನೀವು ಕೇಳಿದ, ಓದಿದ ಘಟನೆಗಳಿಗೆ ಹೇಗೆ ಹೊಸ ಸ್ಪರ್ಶವನ್ನು ನೀಡಬಹುದು ಎಂಬುದಕ್ಕೆ ’ಸಂವೇದ್ಯ’ದ ಗೀತೆಗಳು ಸಾಕ್ಷಿಯಾಗಿದೆ.

ಯೇಸು ಜೆರುಸಲೇಮ ನಗರದ ಮಹಾದೇವಾಲಯದಲ್ಲಿನ ವರ್ತಕರನ್ನು ಅಲ್ಲಿಂದ ಓಡಿಸುವ ಸಂದರ್ಭದಲ್ಲಿ ’ನನ್ನ ತಂದೆಯ’ ಹಾಡು ಬರುತ್ತದೆ. ’ಸಂವೇದ್ಯ’ ಆರಂಭಿಕ ನಿರೂಪಣೆಯ ಬಗ್ಗೆ ಮತ್ತೆ ಒಂದೆರೆಡು ಮಾತು. ಫಾ.ಚಸರಾರವರ ಧ್ವನಿಯಲ್ಲಿಯೇ ಇರುವ ಈ ನಿರೂಪಣೆಯ ಆರಂಭದಲ್ಲಿ ಸುಂದರವಾದ ಸಾಲುಗಳು ಈ ರೀತಿಯಲ್ಲಿವೆ -
"ಬಿರುಗಾಳಿಯ ಅಬ್ಬರ ತಂಗಾಳಿಗಿಲ್ಲ, ಆದರೆ ಮಾಧುರ್ಯತೆ ಮಿನುಗುವುದೇ ಈ ಮಂದಹಾಸದ ಮೆಲ್ಲುಡಿಯಲ್ಲಿಎಲ್ಲಿಂದಲೋ ಬಂದು ಅಂತರಾಳದ ಭಾವನೆಗಳನ್ನು ನವಿರಾಗಿ ತಟ್ಟಿ ತಂಪಾಗಿಸುವ ಈ ಸಂವೇದನೆ ಸೃಷ್ಟಿಯ ಶ್ರೇಷ್ಠತೆಯಷ್ಟೇ ಸೌಮ್ಯ"

ಒಂದು ತಂಗಾಳಿ ಎಷ್ಟು ನವಿರಾಗಿ ನಮ್ಮನ್ನು ತಟ್ಟಬಲ್ಲದು ಎಂಬುದರ ವರ್ಣನೆ ಇಲ್ಲಿದೆ. ಇದಕ್ಕೆ ಇನ್ನಷ್ಟು ವಿವರಣೆ ಬೇಡ. ’ನನ್ನ ತಂದೆಯ ಹಾಡು ಕೇಳಿದಾಗಲೆಲ್ಲಾಈ ಮೇಲಿನ ನಿರೂಪಣೆಯ ಸಾಲುಗಳು ನೆನಪಿಗೆ ಬರುತ್ತದೆ. ಅನೇಕ ವೈವಿಧ್ಯಮಯ, ಸಂಗೀತ ಪ್ರಧಾನ, ಸಾಹಿತ್ಯ ಪೂರ್ಣ, ಭಾವಪೂರ್ಣ ಹಾಡುಗಳ ನಡುವೆಯೂ ಅತ್ಯಂತ ಸರಳ ಗೀತೆಗಳಿಗೆ ತಮ್ಮದೇ ಆದ ನವಿರಾದ ಸೌಂದರ್ಯವಿದೆ.

ಅಂತಹ ಹಾಡುಗಳಲ್ಲಿ ’ನನ್ನ ತಂದೆಯ’ ಒಂದು. ಒಂದು ಮಂದಹಾಸದ ಮೆಲ್ಲುಡಿಯಂಥ ಸ್ವಭಾವ ಈ ಹಾಡಿಗಿದೆ. ಸರಳ ವಾದ್ಯ ಸಂಯೋಜನೆಯಿಂದಾಗಿ ಇಲ್ಲಿ ಮಾಧುರ್ಯ ಮಿನುಗುತ್ತದೆ. ಇಡೀ ಹಾಡು ತನ್ನ ಸೌಮ್ಯತೆಯಿಂದ ನಮ್ಮ ಅಂತರಾಳದ ಭಾವನೆಗಳನ್ನು ತಟ್ಟುತ್ತದೆ. ಸಂವೇದ್ಯ ಧ್ವನಿಸುರಳಿಯನ್ನು ಗಮನವಿಟ್ಟು ಕೇಳಿದಾಗ , ಅಲ್ಲಿನ ಇನ್ನಿತರ ಹಾಡುಗಳಿಗಿರುವಷ್ಟು prelude, ಅಂದರೆ ಗಾಯನಕ್ಕಿಂತ ಮುಂಚೆ ಬರುವ ವಾದ್ಯ ಹಿನ್ನಲೆ ಸಂಗೀತ ಇಲ್ಲಿ ಬಹಳ ಚಿಕ್ಕದಾಗಿದೆ. ಮೊದಲ ಐದು ಸೆಂಕೆಂಡ್ ಗಳಲ್ಲಿಯೇ ಗಾಯನ ಪ್ರಾರಂಭವಾಗುತ್ತದೆ. ಯಾವುದೇ ಮುನ್ಸೂಚನೆ ಇಲ್ಲದೆ ಪ್ರಾರಂಭ ವಾಗುವ ಈ ಹಾಡು ’ ಎಲ್ಲಿಂದಲೋ ಬಂದು ಅಂತರಾಳದ ಭಾವನೆಗಳನ್ನು...’ ಎಂಬ ನಿರೂಪಣೆಯ ಮೇಲಿನ ಸಾಲುಗಳನ್ನು ನೆನಪಿಸುತ್ತದೆ.

ಮತ್ತಾಯನ ಶುಭ ಸಂದೇಶದ 21: 12-14ರಲ್ಲಿ ಬರುವ ಜೆರುಸಲೇಮ ಮಹಾದೇವಾಲಯದಲ್ಲಿನ ಘಟನೆಯ ಹಿನ್ನಲೆ ಈ ಹಾಡಿಗಿದೆ. ವ್ಯಾಪಾರ ಹಾಗೂ ಹಣ ವಿನಿಮಯಯದ ತಾಣವಾಗಿ ಮಾರ್ಪಟ್ಟ ಮಹಾದೇವಾಲಯವನ್ನು ಕಂಡು ಯೇಸು ಅಕ್ರೋಶಗೊಳ್ಳುತ್ತಾರೆ, ಮರಗುತ್ತಾರೆ ಹಾಗೂ ತಾವೇ ಅವರನ್ನು ಓಡಿಸುತ್ತಾರೆ. ಕೊನೆಯಲ್ಲಿ ತಮ್ಮತನಕ್ಕೆ ಮರಳುತ್ತಾರೆ. ಬೈಬಲ್ ಪಂಡಿತರು ಈ ಘಟನೆಯ ಬಗ್ಗೆ ಸುವಿಸ್ತಾರವಾಗಿ ಬರೆದಿದ್ದಾರೆ. ಆಗ ಮಹಾದೇವಾಲಯಕ್ಕೆ ಬರುತ್ತಿದ್ದವರು ಬಲಿ ಅರ್ಪಣೆಯನ್ನು ಅನೇಕ ಕಾರಣಗಳಿಂದ ಮಾಡಬೇಕಾಗುತಿತ್ತು. 

ಅದಕ್ಕಾಗಿ ಪ್ರಾಣಿ ಪಕ್ಷಿಗಳ ಮಾರಾಟ ಮಹಾದೇವಾಲಯದ ಒಳಗೂ, ಹೊರಗೂ ಬಹಳ ಜೋರಾಗಿಯೇ ನಡೆಯುತ್ತಿತ್ತು.  ಈ ಮಾರಾಟ ಮಹಾದೇವಾಲಯದ ಹೊರಗಡೆಯಲ್ಲಿಯೂ ನಡೆಯುತ್ತಿದ್ದರೂ, ದೇವಾಲಯದಲ್ಲಿ ಮಾರಾಟವಾಗುತ್ತಿದ್ದ ಬಲಿ ಅರ್ಪಣೆಯ ಪ್ರಾಣಿ ಪಕ್ಷಿಗಳು ಶ್ರೇಷ್ಠ ಎಂಬ ಭಾವನೆಯನ್ನು ದೇವಾಲಯದ ಯಾಜಕರೇ ತೇಲಿಬಿಟ್ಟಿದ್ದರು. ಏಕೆಂದರೆ ದೇವಾಲಯದ ಒಳಗಡೆಯ ವ್ಯಾಪಾರದಲ್ಲಿ ಅವರದೂ ಪಾಲುದಾರಿಕೆ ಇರುತಿತ್ತು. ಮಹಾದೇವಾಲಯದಲ್ಲಿನ ಈ  ಬಲಿ ಅರ್ಪಣೆಯ ಪ್ರಾಣಿ ಪಕ್ಷಿಗಳ ಬೆಲೆ ಹೊರಗಡೆಯದಕ್ಕಿಂತ ಎಷ್ಟೋ ಪಟ್ಟು ಹೆಚ್ಚಾಗಿದ್ದರೂ ಜನ ಅಲ್ಲಿಯೇ ದುಬಾರಿ ಬೆಲೆಯಲ್ಲಿ ಕೊಂಡುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದೊಂದು ರೀತಿಯ ಶೋಷಣೆ, ದಬ್ಬಾಳಿಕೆ.

ಹಾಗೆಯೇ ಮಹಾದೇವಾಲಯಕ್ಕೆ ಜನ ದೂರ ದೂರದ ದೇಶಗಳಿಂದ ಬರುತ್ತಿದ್ದರು. ಸಹಜವಾಗಿಯೇ ಹಣ, ನಾಣ್ಯಗಳು ಬೇರೆಯದಾಗಿರುತ್ತಿತ್ತು. ಈ ಹಣವನ್ನು ಸ್ಥಳೀಯ ಹಣವಾಗಿ ಪರಿವರ್ತಿಸುವ ವಿನಿಮಯ ಕೇಂದ್ರವೂ ಮಹಾದೇವಲಯದಲ್ಲೇ ಇದ್ದೂ ಅದು ಕೂಡ ಸಾಮಾನ್ಯಕ್ಕಿಂತ  ಹೆಚ್ಚಿನ ವಿನಿಮಯ ಶುಲ್ಕವನ್ನು ದೇವಾಲಯದ ಅಭಿವೃದ್ಧಿ ಹೆಸರಿನಲ್ಲಿ ವಸೂಲಿ ಮಾಡುತ್ತಿತ್ತು. ಇದೂ ಕೂಡ ಒಂದು ರೀತಿಯ ಹಗಲು ದರೋಡೆಯೇ. ಇದರಿಂದ ಶೋಷಿತರಾಗುತ್ತಿದ್ದವರು  ಬಡವರು ಹಾಗೂ ದೂರದ ಅಮಾಯಕ ಜನರು. ಯೇಸು ಈ ಶೋಷಣೆ, ದಬ್ಬಾಳಿಕೆಯ ವಿರೋಧಿಯಾಗಿದ್ದರು. ಬಡವರ ಪರವಾದ ಕಾಳಜಿ ಅವರಲ್ಲಿತ್ತು. ಮಹಾದೇವಾಲಯಕ್ಕೆ ಬಂದಾಗ, ಅಲ್ಲಿನ ವ್ಯಾಪಾರ, ಅನಾಚಾರ  ಅವರ ಅಕ್ರೋಶಕ್ಕೆ ಕಾರಣವಾಯಿತು.

ಜೆರಸಲೇಮಿನಲ್ಲಿ ಯೇಸುವಿನ ಬಗ್ಗೆ ಯಾಜಕವರ್ಗಕ್ಕೆ ಸಿಟ್ಟು, ಮತ್ಸರವಿದ್ದೂ ಅವರ ವಿರುದ್ಧ ಕುತಂತ್ರ ನಡೆಯುತ್ತಿದ್ದರೂ, ಯೇಸು ಜೆರುಸಲೇಮ್ ನಗರವನ್ನು, ಮಹಾದೇವಾಲಯವನ್ನು ಅಪಾರವಾಗಿ ಪ್ರೀತಿಸುತ್ತಿದ್ದದ್ದನ್ನು, ಆ ನಗರದ ಮುಂದಿನ ದುರ್ಗತಿಗಾಗಿ ದು:ಖಗೊಂಡಿದ್ದನು ನಾವು ಶುಭಸಂದೇಶದಲ್ಲಿ ಕಾಣಬಹುದು. ಆದರಿಂದಲೇ ಮಹಾದೇವಾಲಯದ ಪಾವಿತ್ರತೆ, ಶಾಂತತೆ ಹಾಗೂ ಇತಿಹಾಸ, ಹಾಗೂ ಪ್ರಾರ್ಥನೆಯ ವಾತಾವರಣಕ್ಕೆ ಧಕ್ಕೆ, ಭಂಗ ಬಂದಾಗ ಅವರು ಕೋಪಗೊಳ್ಳುತ್ತಾರೆ. ಯೆರೆಮೀಯಾ ಪ್ರವಾದಿಯ  7:11 ಮಾತುಗಳನ್ನು,  ಯೆಶಾಯ ಪ್ರವಾದಿಯ 56:7ರ ಮಾತುಗಳನ್ನು ಇಲ್ಲಿ ಉಲ್ಲೇಖಿಸುತ್ತಾ ವರ್ತಕರನ್ನು, ವ್ಯಾಪಾರಿಗಳನ್ನು ಓಡಿಸುತ್ತಾರೆ. ಕೊನೆಗೆ ತಮ್ಮ ಬಳಿಗೆ ಬಂದ ಕುಂಟರು, ಕುರುಡರನ್ನು ಸ್ವಸ್ಥಪಡಿಸುತ್ತಾರೆ ಎಂಬ ಮಾತು ಶುಭಸಂದೇಶದಲ್ಲಿದೆ. 

ಈ ಹಿನ್ನಲೆಯಲ್ಲಿ ಈ ಹಾಡನ್ನು ಕೇಳಿದಾಗ ಈ ಇಡೀ ಘಟನೆಯ ಸಾರವನ್ನು ಹಾಡು ಅದ್ಭುತವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ ಎಂದು ನನಗನಿಸುತ್ತದೆ. ಯೇಸು ಕೋಪಗೊಂಡು, ನಂತರ  ಶಾಂತ ಚಿತ್ತರಾದ ಮೇಲಿನ ಶಾಂತ ವಾತಾವರಣದ ಸಂದರ್ಭದ ಸಂಕೇತವೋ ಎಂಬಂತೆ ಹಾಡು ಮಧುರವಾಗಿ ಆರಂಭಗೊಳ್ಳುತ್ತದೆ. ತಮ್ಮ ಕೋಪಕ್ಕೆ ಕಾರಣವೇನು, ಮಹಾದೇವಾಲಯದ ಪಾವಿತ್ರ್ಯತೆಯ ಮಹತ್ವವೇನು ಎಂಬುದನ್ನು ಸ್ವತ: ಯೇಸುವೇ ಹೇಳುವಂತೆ ಹಾಡು ಕೇಳಿಸುತ್ತದೆ.

 ’ಶುದ್ಧ ಮನಸ್ಸಿನ ಗುಡಿಯು ದೇವರ ಮಂದಿರವು’ ಎಂಬ ಸಾಲುಗಳು ಅನೇಕ ಅರ್ಥಗಳನ್ನು ನೀಡಬಲ್ಲದು. ದೇವರ ಗುಡಿ, ಮಂದಿರ ಎನ್ನುವುದು ಯಾವುದೇ ಗೊಂದಲವಿಲ್ಲದ ವಾತಾವರಣದಿಂದ ಕೂಡಿರಬೇಕೆಂಬ ಆಶಯ ಇಲ್ಲಿದೆ. ಅಂತೆಯೇ ನಮ್ಮ ಮನಸ್ಸುಗಳು ದೇವರ ಮಂದಿರವಾಗಬೇಕಾದರೆ ಅದು ಶುದ್ಧವಾಗಿರಬೇಕು ಹಾಗೂ ಎಲ್ಲಾ ರೀತಿಯ ಗೊಂದಲ, ಮೋಸ ವಂಚನೆಯ ಲೆಕ್ಕಚಾರಗಳಿಂದ ಮುಕ್ತವಾಗಿರಬೇಕೆಂಬ ಸಂದೇಶವೂ ಇಲ್ಲಿದೆ.

ದೇವಾಲಯವನ್ನು, ದೈವ ಕಾರ್ಯಗಳಿಗೆ  ಸಂಬಂಧಪಟ್ಟ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವ  , ತಮ್ಮ ಮೋಸದ ಕಾರ್ಯಗಳನ್ನು ದೇವರ ಹೆಸರಿನಲ್ಲಿ ಮಾಡುವ ಗೋಮುಖವ್ಯಾಘ್ರಗಳನ್ನು ನಾವು ಕಾಣಬಹುದಾಗಿದೆ.  ದೇವಾಲಯವನ್ನು, ದೈವ ಅಧಿಕಾರವನ್ನು ಕಳ್ಳರ ಗುಹೆಯನ್ನಾಗಿ ಮಾಡಿಕೊಂಡ ಜನರು ಯೇಸುವಿನ ಕಾಲದಲ್ಲಿಯೂ, ಇಂದಿನ ಸಮಯದಲ್ಲೂ ಇರುವಾಗ , ಅದೆಲ್ಲವನ್ನು ತ್ಯಜಿಸಿ, ದೇವರ ಮಂದಿರವನ್ನು ಹೃದಯದ ಗುಡಿಯಾಗಿಸಿರಿ ಎಂಬ ಕರೆ ಈ ಹಾಡಿನಲ್ಲಿದೆ. 

ಕೇವಲ ಐದೇ ಸಾಲಿರುವ, 2.30 ನಿಮಿಷದೊಳಗೆ ಮುಗಿದು ಹೋಗುವ ಈ ಗೀತೆ, ಈ ಧ್ವನಿಸುರಳಿಯ ಅತ್ಯಂತ ಮಧುರ ಗೀತೆಗಳಲ್ಲಿ ಒಂದು ಎಂದರೆ ತಪ್ಪಾಗಲಾರದು. ಸಾಧು ಕೋಕಿಲರವರ ವಾದ್ಯ ಸಂಯೋಜನೆ ಈ ಸಾಹಿತ್ಯದ ಭಾವಕ್ಕೆ ಬೇಕಾದ ಮನಸ್ಥಿತಿ,mood ಅನ್ನು ಹಿಡಿದಿಟ್ಟಿದೆ. ಅದಕ್ಕಿಂತ ಮುಖ್ಯವಾಗಿ ಒಂದು ರೀತಿಯ ಮೌನ ಹಾಡಿನಲ್ಲಿ ನಡುವೆ ಇದ್ದಂತೆ ಭಾಸವಾಗುತ್ತದೆ. ಆ ಮೌನ ಇಣುಕಿರುವುದು ಕೆಲವೇ ಪದಗಳ ಸಾಹಿತ್ಯದಿಂದಾಗಿಯೋ ಅಥವಾ ಸಂಯಮದ ವಾದ್ಯ ಸಂಯೋಜನೆಯಿಂದಾಗಿಯೋ ಹೇಳುವುದು ಕಷ್ಟ.  

ಗಾಯನವೂ ಅಷ್ಟೇ ಸುಂದರವಾಗಿ ಮೂಡಿಬಂದಿದೆ.  ಮಹಿಮೆ ನಾಟಕದಲ್ಲಿ ಸಹಾ ಯೇಸುವಿನ ಕೊನೆಯ ದಿನಗಳ ಮನಮುಟ್ಟುವ ದೃಶ್ಯಗಳಲ್ಲಿ ಈ ಹಾಡಿನ ದೃಶ್ಯವೂ ಒಂದು. ಅಂತೆಯೇ ಚಸರಾರವರ ಗೀತೆಗಳಲ್ಲಿ ’ನನ್ನ ತಂದೆಯ’ ನನ್ನ ಮೆಚ್ಚಿನ ಗೀತೆಗಳಲ್ಲಿ ಒಂದಾಗಿ ಉಳಿದುಕೊಂಡಿದೆ.  ಇಂದಿಗೂ ನಮ್ಮ ಅನೇಕ ದೇವಾಲಯಗಳಲ್ಲಿ ಪ್ರವೇಶ ಗೀತೆಯಾಗಿ ಈ  ಹಾಡನ್ನು ಹಾಡಲಾಗುತ್ತಿದ್ದು, ಹಾಡಿನ ನಿಜ ಅರ್ಥ ಇಂದಿಗೂ ಪ್ರಸ್ತುತವಾಗಿದೆ.



ಮುಂದೆ, ಇದೇ ಸಂವೇದ್ಯ ಧ್ವನಿಸುರಳಿಯ ಇನ್ನೊಂದೆರೆಡು ಹಾಡುಗಳ ಬಗ್ಗೆ ಬರೆಯಬೇಕಾಗಿದೆ. 

Tuesday, 30 August 2016

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 2 - ಸ್ಪೂರ್ತಿಯಾಗಲಿ ಕ್ರಿಸ್ತ

ಫಾ.ಚಸರಾರವರ ಸ್ಪೂರ್ತಿಯಾಗಲಿ ಕ್ರಿಸ್ತದ ಬಗ್ಗೆ ಕಳೆದ ಸಂಚಿಕೆಯಲ್ಲಿ ಬರದು ಅದನ್ನು ಮುಂದುವರಿಸುವ ನಡುವೆ ಡಾ.ಜಿ.ಎಸ್.ಶಿವರುದ್ರಪ್ಪನವರ ’ಕಾವ್ಯಾರ್ಥ ಚಿಂತನ’ ಎಂಬ ಪುಸ್ತಕದ ಒಂದೆರೆಡು ಅಧ್ಯಾಯಗಳನ್ನು ಓದುವ ಅವಕಾಶ ಆಕಸ್ಮಿಕವಾಗಿ ಸಿಕ್ಕಿತು. ಒಬ್ಬ ಕವಿಯ ಕಾವ್ಯ ಕೃಷಿಯಲ್ಲಿ ಅಥವಾ ಒಂದು ಕಾವ್ಯ ಸೃಷ್ಟಿಯಲ್ಲಿ ಯಾವ ಯಾವ ಅಂಶಗಳು ಒಳಗೊಂಡಿರುತ್ತವೆ ಎಂಬುದರ ಬಗ್ಗೆ ಅಧ್ಯಯನಶೀಲವಾದ ಲೇಖನಗಳ ಸರಮಾಲೆ ಪುಸ್ತಕದಲ್ಲಿದೆ. ಜಿ.ಎಸ್.ಎಸ್ ಎಂದಿನಂತೆ ಅತ್ಯಂತ ಗಂಭೀರ ಹಾಗೂ ಆಳವಾದ ವಸ್ತುವನ್ನು ಅಪಾರವಾದ ಅಧ್ಯಯನದಿಂದ ಸರಳವಲ್ಲದಿದ್ದರೂ ಸುಲಲಿತವಾಗಿ ಬರೆದಿದ್ದಾರೆ. ಕಾವ್ಯ ಸೃಷ್ಟಿಯ ವಿವಿಧ ಮಜಲುಗಳಲ್ಲಿ ’ಪ್ರತಿಭೆ’ಯ ಬಗ್ಗೆ ಮೊದಲ ಅಧ್ಯಾಯವಿದ್ದರೆ, ಎರಡನೆಯ ಅಧ್ಯಾಯ ’ಸ್ಪೂರ್ತಿ’ಗೆ  ಮೀಸಲು.  ಕವಿಯೊಬ್ಬನಿಗೆ ಪ್ರತಿಭೆ ಹೇಗೆ ಮುಖ್ಯವೋ  ಹಾಗೆಯೇ ಆತ ಪಡೆಯುವ ಸ್ಪೂರ್ತಿ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಸುವಿಸ್ತಾರವಾಗಿ ಬರೆದಿದ್ದಾರೆ ಜಿ.ಎಸ್.ಎಸ್.



 ’ಸ್ಪೂರ್ತಿಯಾಗಲಿ ಕ್ರಿಸ್ತ’ ಗೀತೆಯನ್ನು ಒಬ್ಬ ಕಾವ್ಯ ವಿಮರ್ಶಕ ಅದೊಂದು ಕಾವ್ಯವೆಂದು ಪರಿಗಣಿಸಲಾರನೇನೋ, ಆದರೆ ಸಾಮಾನ್ಯ ಕೇಳುಗನಿಗೆ ಅದೊಂದು ಸುಂದರವಾದ ಕವಿತೆಯೇ. ಜಿ.ಎಸ್.ಎಸ್ ರವರ ಆ ಮೊದಲೆರೆಡು ಅಧ್ಯಾಗಳನ್ನು ಓದುತ್ತಾ ಹೋದಂತೆ, ಈ ಹಾಡಿನ ರಚನೆಯಲ್ಲಿ ಫಾ.ಚಸರಾರವರ ಪ್ರತಿಭೆಯ ಪಾಲೆಷ್ಟು, ಅವರ ಪಡೆದುಕೊಂಡ ಸ್ಪೂರ್ತಿಯ ಪಾಲೆಷ್ಟಿರಬಹುದು ಎಂಬ ಪ್ರಶ್ನೆ ಮನದಲ್ಲಿ ಮೂಡಿ ಬಂತು. ಫಾ ಚಸರಾ ಇದ್ದಿದ್ದರೆ ಕೇಳಬಹುದಿತ್ತೇನೋ? ಇದ್ದಾಗ ಕೇಳಿದ್ದರೂ ಹಾರಿಕೆಯ ಉತ್ತರವೇ ಸಿಗುತ್ತಿತ್ತೇನೋ?




ಚಸರಾರವರ ಅಪಾರ ಪ್ರತಿಭೆ, ಪದ ಬಂಢಾರ, ಸಂಗೀತ ಬಳಕೆ ಬಗ್ಗೆ ಎರೆಡು ಮಾತಿಲ್ಲ. ಅವರ ಲೇಖನಗಳಲ್ಲೇ ಒಮ್ಮೊಮ್ಮೆ ಕವಿತೆಯ ಸ್ಪರ್ಶವಿದೆ. ಈ ಹಾಡಿನಲ್ಲಿ ಅವರ ಪ್ರತಿಭೆಗಿಂತ ಅವರ ಮನದಾಳದ ಭಾವಗಳೇ ಹಾಡಾಗಿ ಮೂಡಿ ಬಂದಿದೆ ಎನಿಸುತ್ತದೆ. ಇಲ್ಲಿ ಎರೆಡು ರೀತಿಯ ಸ್ಪೂರ್ತಿಯ ಸೆಲೆ ಹಾಡಿಗೆ ಪ್ರೇರಣೆಯಾಗಿದೆ. ಕ್ರಿಸ್ತ, ಆತನ ಮಾನವ ಪ್ರೇಮ, ಮಾನವತೆ ಒಂದು ಸ್ಪೂರ್ತಿಯಾದರೆ, ತನ್ನ ಜನರ ನೋವು, ಭಾರ, ಆ ನೋವಿಗೆ ದನಿಯಾಗುವ, ಹೆಗಲಾಗುವ, ಭಾರವನ್ನು ಹಗುರಾಗಿಸುವ ವ್ಯಕ್ತಿಯೊಬ್ಬನ ಆಸೆ ಮತ್ತೊಂದು ಸ್ಪೂರ್ತಿ. ಹಾಡು ಹಂತ ಹಂತವಾಗಿ ಸ್ಪೂರ್ತಿಯನ್ನು  ಬೇಡುತ್ತಾ, ಸ್ಪೂರ್ತಿ ಪಡೆಯುತ್ತಾ ಕೊನೆಗೆ ತಾನೇ ಮತ್ತೊಬ್ಬರಿಗೆ ಸ್ಪೂರ್ತಿಯಾಗುವ ಬಯಕೆಯನ್ನು ತೋಡಿಕೊಳ್ಳುತ್ತದೆ. 




ಮೊದಲ ಸಾಲುಗಳಲ್ಲಿ ಕ್ರಿಸ್ತನ ಭಾವವು, ಆತನ ಪ್ರೇಮವು ಸ್ಪೂರ್ತಿಯಾಗಲಿ ಎಂಬ ಪ್ರಾರ್ಥನೆ ಇದೆ. ಕ್ರಿಸ್ತನ ಯಾವ ಭಾವಗಳು ಎಂಬ ವಿವರಗಳು ಇಲ್ಲಿಲ್ಲ. ಅದು ಕ್ರಿಸ್ತನ, ಕ್ಷಮಾ ಭಾವವಿರಬಹುದು, ಸಹನೆ, ಕ್ರಾಂತಿಕಾರಕ ಧೋರಣೆಯ ಭಾವವೂ ಇರಬಹುದು.  ಇನ್ನೂ ’ಕ್ರಿಸ್ತನ ಪ್ರೇಮವು’ ಎಂಬುದು ಆತನ  ಮಾನವತಾ ಪ್ರೇಮ, ದಲಿತರ, ನೊಂದವರ, ಜೀವನದ ಜಂಜಾಟದಿಂದ ಬಳಲುವವರ ಪರವಾದ ಕಾಳಜಿಯ ಭಾವವೂ ಇರಬಹುದು.  ಅದೆಲ್ಲವೂ ’ನನ್ನ ಪ್ರೇಮದ ಕಾವ್ಯಕ್ಕೆ ಸ್ಪೂರ್ತಿಯಾಗಲಿ’ ಎನ್ನುವಾಗ ಅಲ್ಲಿ ರಚನಾಕಾರರ ಉದ್ದೇಶಗಳ ಪರಿಚಯವೂ ಆಗಿ, ಅದಕ್ಕೆ ಕ್ರಿಸ್ತ ಸ್ಪೂರ್ತಿಯಾಗಲಿ ಎನ್ನುವುದರೊಂದಿಗೆ ಪ್ರಾರ್ಥನೆಗೊಂದು ಪೂರ್ಣತೆ ದೊರೆಯುತ್ತದೆ. 




ಇನ್ನೂ ಹಾಡಿನ ಮೊದಲ ಚರಣದಲ್ಲಿ, ’ಭಾವರಹಿತ ಹೃದಯಗಳ’ ಬಗ್ಗೆ ಪ್ರಾರ್ಥನೆ ಇದೆ. ಗೆತ್ಸೆಮನಿ ತೋಪಿನಲ್ಲಿ ಯೇಸು ಪ್ರಾರ್ಥಿಸುವಾಗ ಬಹಳವಾಗಿ ನೊಂದುಕೊಂಡಿದ್ದು ಇದೇ ಭಾವರಹಿತರ ಬಗ್ಗೆಯೇ. ನಿಜ ದೇವರನ್ನು, ದೇವರ ಆಶಯವನ್ನು ತಿಳಿಯದ ನಿರ್ಲಿಪ್ತ ಜನರ ಬಗ್ಗೆ ಯೇಸು ಅನೇಕ ಕಡೆ ಬೇಸರ ವ್ಯಕ್ತಪಡಿಸುವುದನ್ನು ಬೈಬಲ್ ನಲ್ಲಿ ಕಾಣಬಹುದಾಗಿದೆ. ಸದಯ ಸಮಾರಿತನ ಸಾಮತಿಯಲ್ಲಿ ಸಹಾ ಗಾಯಾಳುವಿಗಾಗಿ ಮರುಗದ ಭಾವರಹಿತ ಯಾಜಕ ಹಾಗೂ ಲೇವಿಯವನಿಗಿಂತ ಸಮಾರಿತನ ಹೃದಯ ವೈಶಾಲ್ಯದಿಂದಾಗಿ ಆತನೇ ನೆರೆಯವನು ಎಂದು ಯೇಸು ಹೇಳುತ್ತಾರೆ. ನಿಜ ದೇವರನ್ನು ಅರಿಯದವರು ’ಭಾವರಹಿತರಾದರೆ’ , ಪರರ ಕಷ್ಟಗಳಿಗೆ ಸ್ಪಂದಿಸದವರೂ  ಅದೇ ಸಾಲಿಗೆ ಸೇರುತ್ತಾರೆ.  ಜಗತ್ತಿನಲ್ಲಿ ನಡೆಯುವ ಅನೇಕ ತಪ್ಪುಗಳಿಗೆ ದುಷ್ಟರ  ದುಷ್ಟತನ ಎಷ್ಟು ಕಾರಣವೋ, ಒಳ್ಳೆಯವರ ಮೌನವೂ ಅಷ್ಟೇ ದೊಡ್ಡ ಕಾರಣ ಎಂಬರ್ಥದ ಮಾತುಗಳನ್ನು ಮಾರ್ಟಿನ್ ಲೂಥರ್ ಹೇಳುತ್ತಾರೆ.ಇಂತಹ ಭಾವರಹಿತರಲ್ಲಿ ಕ್ರಿಸ್ತನ ಸ್ಪೂರ್ತಿ ಹರಿಯಲಿ ಎಂಬ  ಸಾಲು ನಿಜಕ್ಕೂ ಅರ್ಥಗರ್ಭಿತ.




ಮುಂದಿನ ಸಾಲು  ದುಡಿದು ಬೆಂದ ಜನರನ್ನು  ಕ್ರಿಸ್ತನ ಸ್ಪೂರ್ತಿ ತಣಿಸಲಿ ಎನ್ನುತ್ತದೆ. ಇದೂ ಕೂಡ ಕ್ರಿಸ್ತನ ಆಶಯವೇ. ’ದುಡಿದು ಬಳಲಿದ ಜನರೇ, ಬನ್ನಿ ನನ್ನ ಬಳಿಗೆ ನಾ ನೀಡುವೆ ನಿಮಗೆ ವಿಶ್ರಾಂತಿಯ’ ಎಂಬ ಯೇಸುವಿನ ಕರೆ ಈ ಸಾಲಿಗೆ ಸ್ಪೂರ್ತಿಯೇನೋ. ವಿಶ್ರಾಂತಿಯ ಸ್ಪೂರ್ತಿ ನಿಜಕ್ಕೂ ದುಡಿದ ಜನರ ಮನವನ್ನು ತಣಿಸಬಲ್ಲದು ಹಾಗೂ ಅನಿವಾರ್ಯವಾದ ದುಡಿತದ ಶ್ರಮವನ್ನುಸಹನೀಯಗೊಳಿಸಬಹುದು. ಇನ್ನೂ, ಬಿತ್ತಿದ ಬೀಜ ಚಿಗುರಲು, ಬೆಳೆಯಲು, ಹೆಮ್ಮರವಾಗಲು ಬೆಳಕು, ಬೆಳಕಿನ ಕಾವು ಅವಶ್ಯ. ಅಂತೆಯೇ ಭರವಸೆ, ಆಸೆ, ಕನಸುಗಳು ಚಿಗುರಲು, ಬೆಳೆಯಲು ಕ್ರಿಸ್ತನ ಪ್ರೇಮದ ಬೆಚ್ಚನೆಯ ಸ್ಪರ್ಶ, ಕಾವು ಅವಶ್ಯ. ಆ ಪ್ರೀತಿಯ ಕಾವಿನಲ್ಲಿ ಎಲ್ಲವೂ ಚಿಗುರಲಿ ಎಂಬ ಆಶಯದೊಂದಿಗೆ ಮೊದಲ ಚರಣ ಮುಗಿಯುತ್ತದೆ.




ಮುಂದೆ ಹಾಡಿನ ಗಮನ ಹರಿಯುವುದು ’ತುಳಿತದಿಂದ ನರಳುತ್ತಿರುವ ಜನರತ್ತ’.  ಎಲ್ಲಾ ರೀತಿಯ ಶೋಷಣೆಗೆ ಒಳಗಾದ ಜನರು ಇಲ್ಲಿ ನೆನಪಾಗುತ್ತಾರೆ. ಜಾತಿಯ ಶೋಷಣೆಗೊಳಗಾದ ದಲಿತ, ಸಂಖ್ಯಾಬಲದ ಕಾರಣ ನಿರ್ಲಕ್ಷ್ಯಕ್ಕೊಳಗಾಗುವ  ಅಲ್ಪಸಂಖ್ಯಾತ, ಕೌಟಂಬಿಕ ದೌರ್ಜನ್ಯ ಎದುರಿಸುವ ಮಹಿಳೆ, ತನ್ನದೇ ನೆಲದಲ್ಲಿ ಪರಕೀಯನಾದ ಕನ್ನಡ ಕ್ರೈಸ್ತ ಎಲ್ಲರಿಗೂ ಈ ಸಾಲಿನಲ್ಲಿ ಪಾಲಿದೆ. ಅಂತಹ ಜನತೆಗೆ ಒಳ್ಳೆಯ ದಿನಗಳು ಬರಲಿ, ಆ ದಿನಗಳಿಗೆ ಆಸೆಯಿಂದ ಕಾಯುವ , ನಿರೀಕ್ಷಿಸುವ ಸಹನೆಗೆ ಬೇಕಾದ ಸ್ಪೂರ್ತಿಯನ್ನು ಅವರಿಗೆ ನೀಡು ಎಂದು ಈ ಸಾಲುಗಳು ಬೇಡಿಕೊಳ್ಳುತ್ತದೆ. ಅಲ್ಲಿಯವರೆಗೂ ಅವರ ನೋವನ್ನು ನೀಗಿಸು ಎಂಬ ಬೇಡಿಕೆಯೂ ಅಲ್ಲಿದೆ.




'Helping hands are better than praying lips'  ಎಂಬ ಮಾತನ್ನು ನೆನಪಿಸುವ ಸಾಲುಗಳು ಮುಂದೆ ಬರುತ್ತವೆ. ಪ್ರಾರ್ಥನೆಗಿಂತ ಸಹಾಯ ನೀಡುವ ಕರಗಳು ಉತ್ತಮ ಎಂಬುದು ಇದರ ಅರ್ಥವಾದರೂ, ಪ್ರಾರ್ಥನೆಯೊಂದಿಗೆ ನಮ್ಮ ಕ್ರಿಯಾಶೀಲ ಪ್ರಯತ್ನವೂ ಆಗಬೇಕು ಎನ್ನುವುದು ಅದರ ವಿಶಾಲ ಅರ್ಥ. ಭಾವರಹಿತ ಹೃದಯಗಳಿಗೆ, ಬೆಂದ ಜನರಿಗೆ, ಶೋಷಣೆಗೊಳಗಾದ ಜನರಿಗೆ ಬೇಡಿಕೊಂಡ ರಚನಾಕಾರರು ಇಲ್ಲಿ ತಮ್ಮ ಪಾತ್ರದ ಬಗ್ಗೆ ಯೋಚಿಸತೊಡುಗುತ್ತಾರೆ. ಇಲ್ಲಿ ಚಸರಾರವರ ನಿಲುವು, ನೈಜ ಕಾಳಜಿ, ಭಾವ ತೆರೆದುಕೊಳ್ಳುತ್ತದೆ. ಎಲ್ಲಾ ಜನರಿಗಾಗಿ ಕ್ರಿಸ್ತ ನೀನು ಸ್ಪೂರ್ತಿಯಾಗುವುದರ ಜೊತೆಗೆ ಅವರ ನೆರವಿಗೆ ನನ್ನ ದನಿಯು ಸೇರಲಿ ಎಂಬ ಆಶಯ ಈ ಸಾಲಿನಲ್ಲಿದೆ. ಕೇವಲ ಪಾರ್ಥಿಸುವುದು ಮಾತ್ರವಲ್ಲದೆ ನಮ್ಮ ಕೊಡುಗೆಯೂ ಇರಬೇಕು ಎನ್ನುವುದು ಇಲ್ಲಿದೆ. ನೊಂದವರ, ಬಳಲಿದವರ, ಶೋಷಿತರ ಪರವಾಗಿ ನಿಲ್ಲುವುದೆಂದರೆ ಅವರಿಗಾಗಿ ದನಿ ಎತ್ತುವುದು, ಅವರ ಜೊತೆ ಬಳಲುವುದು, ಅವರಿಗಾಗಿ ನರಳವುದು ಎಲ್ಲವೂ ಸೇರಿಕೊಳ್ಳುತ್ತದೆ. ನಮ್ಮ ತೊಡಗುವಿಕೆ ಅವರಿಗೆ ಸಾಂತ್ವನ ನೀಡಲಿ, ಅವರ ಜಂಜಾಟದ ಬದುಕಿಗೆ ನಮ್ಮ ನೆರವು ಸ್ಪೂರ್ತಿಯಾಗಲಿ ಎಂಬ ಉದಾತ್ತ ಆಶಯದೊಂದಿಗೆ ಹಾಡು ಪದಗಳಲ್ಲಿ, ಶಬ್ದಗಳಲ್ಲಿ ಮುಕ್ತಾಯಗೊಂಡರೂ ಅಂತರಂಗದ ಆಲಾಪವಾಗಿ ಮುಂದುವರಿಯುತ್ತದೆ. 




ಏಳೆಂಟು ಸಾಲುಗಳ ಈ ಹಾಡಿನಲ್ಲಿ ಫಾ ಚಸರಾರವರ ಅಶಯ ಇನ್ನೇನಿತ್ತೋ? ನನಗೆ ಗೋಚರವಾದ  ಭಾವಗಳು ಇವು.  ಒಮ್ಮೆ ಒಂದು ಗೀತೆ ಕೇಳುಗನನ್ನು ಮುಟ್ಟುತ್ತಿದ್ದಂತೆ ಅದು ರಚನಾಕಾರ, ಸಂಗೀತ ನಿರ್ದೇಶಕನ ಸ್ವತ್ತಲ್ಲ, ಇನ್ನೇನ್ನಿದ್ದರೂ ಕೇಳುಗನಿಗೆ ಸೇರಿದ್ದೂ ಎನ್ನುತ್ತಾರೆ ಕನ್ನಡದ ಕವಿಯೊಬ್ಬರು. ಆ ಮಾತಂತೆ ರಚನಾಕಾರರ ಆಶಯಕ್ಕೆ ಕೇಳುಗರಿಗೆ ಗೋಚರಿಸುವ ಅರ್ಥಗಳೂ ಸೇರಿಕೊಂಡಾಗ ಒಂದು ಗೀತೆ ಅಮರವಾಗುತ್ತದೆ.  ಕಳೆದ ಇಪ್ಪತ್ತು ವರ್ಷಗಳಲ್ಲಿ ’ಸ್ಫೂರ್ತಿಯಾಗಲಿ ಕ್ರಿಸ್ತ’ ಕನ್ನಡ ಕ್ರೈಸ್ತ ಜನಪದ ಭಾಗವಾಗಿ ಉಳಿದು ಹೋಗಿದೆ ಎಂದರೆ ತಪ್ಪಾಗಲಾರದೇನೋ.




ಮೊದಲೇ ಹೇಳಿದಂತೆ ಈ ಹಾಡಿನ ಭಾವ ತೀವ್ರತೆಯನ್ನು ಅತ್ಯಂತ ಸಮರ್ಥವಾಗಿ ಹಿಡಿದಿಟ್ಟಿರುವುದು ಹಾಡಿನ ವಾದ್ಯ ಸಂಯೋಜನೆ ಹಾಗೂ ಗಾಯನ. ಸಾಧು ಕೋಕಿಲರವರ ಸಂಗೀತದ ನೈಪುಣ್ಯ ಇಲ್ಲಿ ಉತ್ಕೃಷ್ಟ ಮಟ್ಟದಲ್ಲಿ ಹೊರ ಹೊಮ್ಮಿದೆ. ಯಾವ ಸಂಗೀತದ ಮಟ್ಟಿಗೆ ಯಾವ ವಾದ್ಯ ಬಳಕೆಯಾಗಬೇಕು ಎಂಬ ಆಯ್ಕೆಯಲ್ಲಿ ಸಾಧುರವರು ಯಾವಾಗಲೂ master class. ಚಸರಾರವರ ಸಾಹಿತ್ಯದಲ್ಲಿನ ಅಷ್ಟೂ ತನ್ಮಯತೆಯನ್ನು, ಆಳವನ್ನು ತಮ ಕಂಠದೊಳಗೆ ಬರಮಾಡಿಕೊಂಡಂತೆ ಗಾಯಕ ವಿಷ್ಣು ದನಿ ನೀಡಿದ್ದಾರೆ. ಒಬ್ಬ ಸಹೃದಯ ಕವಿಯ ಅಂತರಾಳದ ಭಾವಗಳಿಗೆ ಹೃದಯಸ್ಪರ್ಶಿ ಸಾಹಿತ್ಯ ಒದಗಿ ಬಂದು ಮನಮುಟ್ಟುವ ಸಂಗೀತ ಕೂಡಿಕೊಂಡು, ಹೃದಯದಿಂದ ಹೊಮ್ಮಿದಂತ ಗಾಯನ ಸೇರಿದರೆ ಏನಾಗಬಹುದೋ ಅದು ’ಸ್ಪೂರ್ತಿಯಾಗಲಿ ಕ್ರಿಸ್ತ’ ಹಾಡಿನಲ್ಲಿ ಆಗಿದೆ.



 ಇಂತಹ ಇನ್ನಷ್ಟು ಗೀತೆಗಳಿಗೆ ಕ್ರಿಸ್ತ ಸ್ಪೂರ್ತಿಯಾಗಲಿ.

Thursday, 30 June 2016

ನನ್ನ ಮೆಚ್ಚಿನ ಫಾ.ಚಸರಾ ಹಾಡುಗಳು - ಭಾಗ 1 - ಸ್ಪೂರ್ತಿಯಾಗಲಿ ಕ್ರಿಸ್ತ

ನಾನು ಹೇಳಿ ಕೇಳಿ ಫಾ.ಫೆಲಿಕ್ಸ್ ನೊರೋನ್ಹ ಹಾಡುಗಳ ಅಭಿಮಾನಿ. ಬಾಲ್ಯದಲ್ಲಿ ಅವರ ಗೀತೆಗಳನ್ನೇ ಕೇಳುತ್ತಾ ಬೆಳೆದವರು ನಾವೆಲ್ಲಾ. ಅವರ ಗೀತೆಗಳ ಮಾಧುರ್ಯಕ್ಕೆ, ಅವರ ಕಂಠಕ್ಕೆ, ಅವರ ಹಾಡುವ ಶೈಲಿಗೆ  ಮಾರುಹೋಗಿದ್ದ ನಾನು ಇಂದಿಗೂ ಅವರ ಹಾಡನ್ನು ಕೇಳಿದಾಗ ಉಲ್ಲಾಸಿತನಾಗುತ್ತೇನೆ. ಅವರ ಹಾಡುವ ಶೈಲಿಯನ್ನು ಅನುಸರಿಸಲು ಹೋಗಿ ಸೋತಿದ್ದೇನೆ. ಇಡೀ ೮೦ರ ದಶಕದಲ್ಲಿ ನಾವು, ಅಂದರೆ ನನ್ನ ವಯಸ್ಸಿನವರು, ಫಾ.ಫೆಲಿಕ್ಸ್, ಫಾ.ಮರಿಜೋ, ಸರಾ ಡಾಮನಿಕ್, ವಿನ್ಸೆಂಟ್, ಡೇವಿಡ್ ರವರ ಗೀತೆಗಳನ್ನು ಕೇಳುತ್ತಾ  ಹಾಗೂ ಇನ್ನೂ ಹಳೆಯ ಹಾಡುಗಳನ್ನು ಪೂಜೆಗಳಲ್ಲಿ ಹಾಡುತ್ತಾ ಬೆಳೆದವರು.

ಅದಕ್ಕಿಂತ ಮುಂಚೆ ೭೦ ದಶಕದಲ್ಲಿ  ಫಾ.ಫೆಲಿಕ್ಸ್, ಫಾ. ಫಾತಿರಾಜ್, ಫಾ.ಜಯನಾಥನ್ ಒಬ್ಬರಿಗಿಂತ ಒಬ್ಬರು ಅತ್ಯ್ತುತ್ತಮ ಎನ್ನುವಂತ ಹಾಡುಗಳನ್ನು ಕೊಟ್ಟರು ಎಂದು ನಮ್ಮ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಅವೆಲ್ಲಾ ಇಂದಿಗೂ ನಮ್ಮ ಪೂಜೆಗಳಲ್ಲಿ ಜನಪ್ರಿಯ ಗೀತೆಗಳೇ. ಅದಕ್ಕಿಂತ ಮುಂಚಿನ ಹಾಡುಗಳ ರಚನಾಕಾರರ ಪರಿಚಯ ನನಗಷ್ಟಿಲ್ಲ. ಮೊದಲು ಅಮೃತ, ಈಗ ಚೇತನ ಈ ಎಲ್ಲಾ ಗೀತೆಗಳನ್ನು ತನ್ನ ಒಡಲಾಳದಲ್ಲಿಟ್ಟುಕೊಂಡು ಕನ್ನಡ ಕ್ರೈಸ್ತ ಭಕ್ತಿಗೀತೆಗಳ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ೮೦ರ ದಶಕದ ಕೊನೆಯಲ್ಲಿ ಬ್ರದರ್ ಚಿನ್ನು ಚೇತನ, ಅಭಿಷೇಕದಂತ ಕ್ಯಾಸೆಟ್ ಮೂಲಕ ಅತ್ತ್ಯುತ್ತಮ ಎನ್ನಬಹುದಾದ ಗೀತೆಗಳಿಂದ ಗಮನಸೆಳೆದರೂ ಅಕಾಲಿಕವಾಗಿ ನಮ್ಮನ್ನು ಅಗಲಿದರು.

ಈ ಎಲ್ಲದರ ನಡುವೆ ಕನ್ನಡ ಕ್ರೈಸ್ತಲೋಕಕ್ಕೆ ಫಾ.ಚಸರಾ ತಂದ ಹೊಳಪು ’ಮಿಂಚಿನಂತೆ ಮಿನುಗಿ ಬಂದ’ ಎಂಬ ಅವರದೇ ಸಾಲನ್ನು ನೆನಪಿಸುತ್ತದೆ. ಕನ್ನಡ ಭಕ್ತಿಗೀತೆಗಳ ಲೋಕಕ್ಕೆ ಫಾ.ಚಸರಾರ ಸಾಹಿತ್ಯ ಸಂಗೀತದ ಬಗ್ಗೆ ಬರೆಯುತ್ತಾ ಹೋದರೆ ಅದೇ ಒಂದು ದೊಡ್ಡ ಅಧ್ಯಾಯವಾದೀತು. ಕನ್ನಡ ಕ್ರೈಸ್ತ ಸಂಗೀತದ ಅಷ್ಟೂ ಇತಿಹಾಸ, ಸತ್ವವನ್ನು ಹೀರಿಕೊಂಡು, ತಮ್ಮದೇ ಆದ ಹೊಸ ಬಗೆಯ ಸಾಹಿತ್ಯವನ್ನು ಪರಿಚಯಿಸುತ್ತಾ, ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿ, ಅಳತೆಗೋಲಾಗಿ ನಿಂತ ಅವರ ಕೊಡುಗೆ ನಿಜಕ್ಕೂ ಅಧ್ಯಯನಕ್ಕೆ ಯೋಗ್ಯವಾಗಿದೆ.

ಅದಿನ್ನೂ ನೆನಪಿದೆ ’ಸ್ಪಂದನ’ ಕ್ಯಾಸೆಟ್ ಬಿಡುಗಡೆ ಆದ ಸಂದರ್ಭ. ಅದೊಂದು ಹಬ್ಬದ ವಾತಾವರಣ. ಸರಾ, ವಿನ್ಸೆಂಟ್, ಡೇವಿಡ್, ಬ್ರದರ್ ಚಿನ್ನುರವರ ಕ್ಯಾಸೆಟ್ ಗಳೂ ಅದೇ ಸಮಯದಲ್ಲಿ ಬಂದಿತ್ತು. ಅದೊಂದು  ಕನ್ನಡ ಭಕ್ತಿ ಗೀತೆಗಳ ಭರ್ಜರಿ ಬೆಳೆಯ ಕಾಲ. ಅಗ ಬಂದ ’ಸ್ಪಂದನ’ವನ್ನು ಕನ್ನಡಿಗರು  ಆತ್ಮೀಯವಾಗಿಯೇ ಬರಮಾಡಿಕೊಂಡರು. ಫಾ.ಐ.ಚಿನ್ನಪ್ಪ ಸುಮಾರು ೩೦ ಕ್ಯಾಸೆಟ್‍ಗಳಿದ್ದ ಬಾಕ್ಸ್ ವೊಂದನ್ನು ನನ್ನ ತಂದೆಗೆ ಕೊಟ್ಟು, " ಚಸರಾ ಸಾಮೇರು ಮಾಡಿರೋ ಕ್ಯಾಸೆಟ್, ಮಾರಿಕೊಡು" ಎಂದು ಹೇಳಿದ್ದು ನನಗಿನ್ನು ನೆನಪಿದೆ.  ಪರಿಚಿತರಿಗೆ ಮಾರುವಷ್ಟು ಮಾರಿ, ಮದುವೆ ಸಮಾರಂಭಗಳಲ್ಲಿ ಕವರಿನ ಜೊತೆಗೆ ಒಂದು ಕ್ಯಾಸೆಟ್‍ನ್ನು ಉಡುಗೊರೆಯಾಗಿ ಕೊಡುತ್ತಿದ್ದರು ನನ್ನ ತಂದೆ.

ಇತ್ತೀಚಿನ ’ಮಾತುಕತೆ’ಯ ಸಂಚಿಕೆಯಲ್ಲಿ ಫಾ.ಕಾಂತರಾಜ್ ರವರು ಫಾ.ಚಸರಾವರ ಆಪ್ತವಲಯದ ಒಬ್ಬರಾಗಿ ಅವರ  ಸಂಗೀತ ಕೃಷಿಯ ಬಗ್ಗೆ ತಾವು ಕಂಡ ಘಟನೆಗಳೊಂದಿಗೆ ಸವಿಸ್ತಾರವಾಗಿ ಬರೆದಿದ್ದು ಬಹಳ ಚನ್ನಾಗಿತ್ತು. ಅದು ಒಂದು ರೀತಿಯ insider view. ಒಬ್ಬ ಸಾಮಾನ್ಯ ಕೇಳುಗನಾಗಿ, ಸಂಗೀತದ ಅಭಿಮಾನಿಯಾಗಿ ಫಾ.ಚಸರಾರವರ  ನನ್ನ ಮೆಚ್ಚಿನ ಕೆಲವು ಗೀತೆಗಳ ಬಗ್ಗೆ ಬರೆಯುವ ಮನಸ್ಸು ನನ್ನದು. ತೀರ ನನ್ನದೇ ಆದ ಕಾರಣಗಳಿಂದ ಇಷ್ಟವಾಗುವ  ಐದಾರು ಹಾಡುಗಳ ಬಗ್ಗೆ ಸಾರ್ವತ್ರಿಕವಾಗಿ ಬರೆಯಬಹುದೇ ಎಂಬ ಗೊಂದಲವಿದ್ದರೂ, ಬರೆಯುತ್ತಾ ಹೋಗಲು ಪ್ರಯತ್ನಿಸುತ್ತೇನೆ. ಸಂಗೀತ ಕುಟುಂಬದ ಹಿನ್ನಲೆಯಿದ್ದರೂ, ನಾನೇನು ಉತ್ತಮ ಸಂಗೀತಗಾರನಲ್ಲ, ಗಾಯಕನಲ್ಲ. ಆದರೆ ಉತ್ತಮ ಕೇಳುಗನಂತೂ ಹೌದು. ಇದೇ ಅನುಭವದಿಂದ ಮಾತ್ರ ಬರೆಯಬಲ್ಲೆ.

ಮೊದಲಿಗೆ,  ನಾನು ಬರೆಯಬೇಕೆಂದಿರುವುದು ’ಸ್ಪೂರ್ತಿ’ ಕ್ಯಾಸೆಟ್ಟಿನ ’ಸ್ಪೂರ್ತಿಯಾಗಲಿ ಕ್ರಿಸ್ತ ಎಂಬ ಗೀತೆ. ೨೦೦ಕ್ಕೂ ಹೆಚ್ಚಿನ ಚಸರಾ ಹಾಡುಗಳಲ್ಲಿ "ನಿಮ್ಮಗ್ಯಾವುದು ಇಷ್ಟ"? ಎಂದು ಕೇಳಿದರೆ, ಉತ್ತರಿಸುವುದು ಕಷ್ಟವೇನೋ. ಆದರೆ ನನಗೆ ಮಾತ್ರ ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಯಾವ ಸಮಯದಲ್ಲಿ, ಎಲ್ಲೇ ಕೇಳಿದರೂ ಚಸರಾರವರ ನನ್ನ ಮೆಚ್ಚಿನ ಗೀತೆ ’ಸ್ಪೂರ್ತಿಯಾಗಲಿ ಕ್ರಿಸ್ತ’ ಎಂದೇ ಹೇಳುತ್ತೇನೆ. ಈ ಗೀತೆ ನನಗ್ಯಾಕಷ್ಟು ಇಷ್ಟ ಎಂದು ಹೇಳುವುದು ಸ್ವಲ್ಪ ಕಷ್ಟವೇ. ಆದರೂ ಪ್ರಯತ್ನಿಸುತ್ತೇನೆ.

(ಮುಂದುವರಿಯುವುದು)
Read more!

Friday, 27 May 2016

ಆಡಿಯೋ ಅನಿಸಿಕೆ - ಸಂತೆಯಲ್ಲಿ ನಿಂತ ಕಬೀರ

ಕನ್ನಡ ಚಿತ್ರಗಳ ಇತಿಹಾಸದಲ್ಲಿ ಭಕ್ತಿ ಪ್ರಧಾನ ಚಿತ್ರಗಳ ಪಾಲು ಬಹು ದೊಡ್ಡದು. ಆ ಭಕ್ತಿ ಪ್ರಧಾನ ಚಿತ್ರಗಳಲ್ಲಿನ ಹಾಡುಗಳು ಸಹಾ ಬಹು ದೊಡ್ಡ ಪಾತ್ರವಹಿಸಿರುವುದನ್ನು ನಾವು ನೋಡಿದ್ದೇವೆ.  ’ಸಂತೆಯಲ್ಲಿ ನಿಂತ ಕಬೀರ’ ಚಿತ್ರ ಪ್ರಕಟವಾದಗಲೇ ಚಿತ್ರದ ಸಂಗೀತದ ಬಗ್ಗೆ ನಿರೀಕ್ಷೆಗಳಿದ್ದವು. ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಎಂಬ ಮಾತೇ ಆ ನಿರೀಕ್ಷೆಯನ್ನು ಅಕಾಶದೆತ್ತರಕ್ಕೆ ಏರಿಸಿತು. ಆಡಿಯೋ ಬಿಡುಗಡೆಯಾಗಿದೆ. ನಿರ್ದೇಶಕ ನರೇಂದ್ರ ಬಾಬು ಖುಷಿಯಾಗಿರಬೇಕು, ಏಕೆಂದರೆ ಇಸ್ಮಾಯಿಲ್ ಸಂಗೀತದ ರಸದೌತಣವನ್ನು ಬಡಿಸಿದ್ದಾರೆ. ಸಂಗೀತ ಪ್ರಿಯರೂ ಅಷ್ಟೇ ಖುಷಿಯಲ್ಲಿ ಗೀತೆಗಳನ್ನು ಸವಿಯುತ್ತಿದ್ದಾರೆ. ಇಂದಿನ fast foodನಂಥ ಗೀತೆಗಳ ಮಧ್ಯೆ ಸಂಗೀತ ಸುಧೆ ಹರಿದು ಬಂದಿದೆ. ಯುವ ಸಂಗೀತ ಕೇಳುಗರು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಷ್ಟೆ.


















ಅವನೇ ಮಹಾದೇವ
ಗಾಯನ - ರಾಮಚಂದ್ರ ಹಡ್‍ಪದ್ 
ಉತ್ತಮವಾದ ವಾದ್ಯ ಸಂಯೋಜನೆ ಹಾಗೂ ಆಲಾಪನೆಯಿಂದ ಪ್ರಾರಂಭವಾಗುವ ಗೀತೆ ಉತ್ತಮ ಗಾಯನದಿಂದ ಕೇಳುಗರನ್ನು ಸೆಳೆಯುತ್ತದೆ.  ಮೃದುವಾಗಿ ಆರಂಭವಾಗಿ ಕ್ರಾಂತಿಕಾರಿಯಾಗಿ ಸಾಗುತ್ತಾ ವಿಷಾದದಿಂದ ಮುಗಿಯುವ ಗೀತೆಯ ಎಲ್ಲಾ ಭಾವಕ್ಕೂ ಅತ್ತ್ಯುತ್ತಮವಾಗಿ ದನಿ ನೀಡಿದ್ದಾರೆ ಗಾಯಕ ರಾಮಚಂದ್ರ ಹಡ್‍ಪದ್.


ಬಾರೇ ನಿನಗೆ ನಾನು 
ಗಾಯನ - ಸೋನು ನಿಗಮ್ ಹಾಗೂ ಅನ್ವೇಷ
ಇಸ್ಮಾಯಿಲ್ ದರ್ಬಾರ್‍‍ರವರ ಮಧುರವಾದ ಸಂಯೋಜನೆಯಿಂದ ಆರಂಭಗೊಳ್ಳುವ ಗೀತೆಯನ್ನು ಸೋನು ನಿಗಮ್ ಮತ್ತಷ್ಟು ಮಧುರಗೊಳಿಸುತ್ತಾರೆ. ಗಾಯಕಿ ಅನ್ವೇಷಾ ಹಿಂದೆ ಬೀಳದೆ ಗೀತೆಯನ್ನು ಎತ್ತರಕ್ಕೆ ಕೊಂಡೊಯ್ಯುತ್ತಾರೆ. ಪ್ರೇಮಿಗಳಿಬ್ಬರ ಪಿಸುಮಾತಿನ ಆಪ್ತತೆ ಇಡೀ ಗೀತೆಯಲ್ಲಿದೆ. ಸಾಹಿತ್ಯ ಅತ್ಯುತ್ತಮವಾಗಿದ್ದೂ, ಗಾಯನದಲ್ಲಿ ಪದಗಳು ಇನ್ನಷ್ಟು ಸ್ಪಷ್ಟತೆ ಪಡೆಯಬಹುದಾಗಿತ್ತು.

ಧಾರ್ಮಿಕನಲ್ಲ ಅಧಾರ್ಮಿಕನಲ್ಲ:
ಗಾಯನ - ರಾಮಚಂದ್ರ ಹಡ್‍ಪದ್ 
ರಾಮಚಂದ್ರ ಹಡ್‍ಪದ್‍ರವರ ಗಾಯನದ ಗೀತೆ ಅತ್ಯುತ್ತಮ ಸಾಹಿತ್ಯವನ್ನು ಹೊಂದಿದೆ.  ಯಾವುದಕ್ಕೂ ಬಂಧಿತನಲ್ಲ ಎಂಬ  ನಿರ್ಲಿಪ್ತತನ್ನು ತೋಡಿಕೊಳ್ಳುವ
ಗೀತೆಗೆ ಅತ್ಯುತ್ತಮ ಸಂಗೀತ ಹಾಗೂ ವಾದ್ಯ ಸಂಯೋಜನೆ ಒದಗಿ ಬಂದಿದೆ. ಎರಡೂವರೆ ನಿಮಿಷದಲ್ಲಿ ಮುಗಿದು ಹೋಗುವ ಗೀತೆ ಇನ್ನೂ ಕೇಳಬೇಕು ಎಂಬ ಭಾವ ಉಳಿಸುತ್ತದೆ.

ಕಲ್ಲ ಪೂಜೆಗೆ
ಗಾಯನ - ರಾಮಚಂದ್ರ ಹಡ್‍ಪದ್
"ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ" ಎಂಬ ಕುವೆಂಪುರವರ ಕವಿತೆಯನ್ನು ನೆನೆಪಿಸುವ ಗೀತೆ. ಜಾನಪದ ಶೈಲಿಯಲ್ಲಿರುವ ಸಂಗೀತ ಮನಸೆಳೆಯುತ್ತದೆ. ಸಾಹಿತ್ಯಕ್ಕೆ ತಕ್ಕ ಗಾಯನ ರಾಮಚಂದ್ರ ಹಡ್‍ಪದ್‍ರವರಿಂದ ಬಂದಿದೆ.  ಇನ್ನಷ್ಟು ಕೇಳಬೇಕು ಎನಿಸುವ ಗೀತೆ

ಲೀಲಾಮಯನ ಲೀಲೆಯು
ಗಾಯನ - ಸುಖವಿಂದರ್ ಸಿಂಗ್
ಸಾಹಿತ್ಯ ಸಂಗೀತ ಅತ್ತ್ಯುತ್ತಮವಾಗಿದ್ದರೂ ಇಡೀ ಗೀತೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಆವರಿಸಿಕೊಳ್ಳುವುದು ಗಾಯಕ ಸುಖವೀಂದರ್ ಸಿಂಗ್.  ಶಾಸ್ತ್ರೀಯ ಸಂಗೀತದ ಎಲ್ಲಾ ಸಾಧ್ಯತೆಗಳನ್ನು ಅದರ ಸೀಮಿತ ಮಿತಿಯಲ್ಲಿ ಬಳಸಿಕೊಂಡು ಕೇಳುಗನಿಗೆ ಸಂಗೀತದ ರಸದೌತಣವನ್ನು ಸುಖವೀಂದರ್ ಕೊಡುತ್ತಾರೆ.  ಉತ್ತಮ ಸಂಗೀತ ಹಾಗೂ ಉತ್ಕೃಷ್ಟ ಮಟ್ಟದ ಗಾಯನದ ರಸದೌತಣ. ಪದಗಳ ಉಚ್ಚಾರಣೆಯ ಸಣ್ಣ ಕಿರಿಕಿರಿಯನ್ನು ಮೀರುವ ಸಂಗೀತ ಗಾಯನ ಸುಧೆ.

ಮನೆಯೆಂಬುದು
ಗಾಯನ - ಮಹಮದ್ ಇರ್ಫಾನ್ ಹಾಗೂ ಅನ್ವೇಷ
ಲೀಲಾಮಯನ ಗೀತೆಯ ಗುಂಗಿನಿಂದ ಒಮ್ಮೆಲೇ ಬಿಡಿಸಿ ಕೈ ಹಿಡಿದು  ಮತ್ತೆ ಯಥಾಸ್ಥಿತಿಗೆ ತರುವ ಮತ್ತೊಂದು ಮಧುರ ಗೀತೆ.  ಹರಿಕೃಷ್ಣ, ಭಟ್, ಸೋನುನಿಗಮ್ ಪಾಲುದಾರಿಕೆಯ ಮಧುರ ಗೀತೆಗಳಂತೆ ಕೇಳುವ ಈ ಗೀತೆ ಮಹಮದ್ ಇರ್ಫಾನ್ ಹಾಗೂ ಅನ್ವೇಷಾರವರ ಭಾವಪೂರ್ಣ ಗಾಯನದಿಂದ ಇಷ್ಟವಾಗುತ್ತದೆ. ಪೈಪೋಟಿಯಲ್ಲಿ ಕೊನೆಗೆ ಗೆಲುವು ಇಸ್ಮಾಯಿಲ್‍ರವರ ಸಂಗೀತ ಸಂಯೋಜನೆಗೆ.


ನಾವು ಪ್ರೇಮದ ಹುಚ್ಚರು
ಗಾಯನ - ಅನ್ವೇಷ ಹಾಗೂ ಕವಿತಾ ಸೇಠ್
ಹಾಡಿನ ಪ್ರಾರಂಭದಲ್ಲಿ ಮಳೆ ಸಿಡಿಲು, ಗುಡುಗುಗಳು ಹಿನ್ನಲೆಯಲ್ಲಿ ಕೇಳುತ್ತದೆ. ಮುಂದೆ ಕೇಳ ಸಿಗುವುದು ಸಹಾ ಸಂಗೀತದ ಮಳೆಯ ಸಿಂಚನ, ವಾದ್ಯ ಸಂಯೋಜನೆಯ ಮಧುರ ಗುಡುಗುಗಳು  ಎದೆಯಲ್ಲಿ ಸಂತಸದ ಕಂಪನಗಳನ್ನು ಎಬ್ಬಿಸುವುದರಲ್ಲಿ ಸಂದೇಹವಿಲ್ಲ. ಸಂಪೂರ್ಣ ಸಂಗೀತಮಯವಾದ ಇಂಥ ಗೀತೆಯನ್ನು ಕನ್ನಡದಲ್ಲಿ ಕೇಳಿ ಬಹಳ ದಿನಗಳೇ ಆಗಿತ್ತೇನೋ. ಅನ್ವೇಷಾ ಹಾಗೂ ಕವಿತಾ ಸೇಟ್ ರವರ ಗಾಯನದ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಸಂಯೋಜನೆಯೊಡನೆ ಹಾಡಿದರಷ್ಟೇ ಸಾಕು ಎನ್ನಬಹುದೇನೋ.

ಶಾಸ್ತ್ರವನೋದಿ
ಗಾಯನ - ರಾಮಚಂದ್ರ ಹಡ್‍ಪಡ್ 
ಮತ್ತೊಂದು ರಾಮಚಂದ್ರ ಹಡ್‍ಪದ್ ಗಾಯನದ, ಮತ್ತೊಂದು 2.30ನಿಮಿಷದೊಳಗೆ ಮುಗಿಯುವ ಕಿರುಗೀತೆ. ಮತ್ತೊಂದು ಹೃದಯ ಹೊಕ್ಕು ಸಂಗೀತದ ತರಂಗಗಳನ್ನು ಎಬ್ಬಿಸುವ ಗೀತೆ. ಹೆಚ್ಚೇನು ಹೇಳದೆ ಸುಮ್ಮನೆ ಕೂತು ಅಸ್ವಾದಿಸಬಹುದಾದ ಗೀತೆ.

ವಿಶ್ವಾಸದಲ್ಲಿ
ಗಾಯನ : ಜಾವೇದ್ ಆಲಿ
ಜಾವೇದ್ ಆಲಿ ಗಾಯನದಲ್ಲಿ ಮೂಡಿ ಬಂದಿರುವ ಗೀತೆ ಅರ್ಥಪೂರ್ಣ ಸಾಹಿತ್ಯದಿಂದ ಗಮನ ಸೆಳೆಯುತ್ತದೆ. ಮಾಧುರ್ಯ ಹಾಗೂ ಶಕ್ತಿಯುತವಾದ ಸಂಗೀತ ಸಂಯೋಜನೆಯಿಂದ ಲವಲವಿಕೆ ತುಂಬಿದ ಗೀತೆ. ಸಂಗೀತ ಪ್ರಿಯರಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ.

Monday, 14 December 2015

ಆಡಿಯೋ ಅನಿಸಿಕೆ - ಮಾಸ್ಟರ್‍ಪೀಸ್


ಈ ಡಿಸೆಂಬರ್ ನಿಜಕ್ಕೂ ಕನ್ನಡ ಚಿತ್ರರಂಗ ಕಾತುರದಿಂದ ನೋಡುತ್ತಿರುವ ತಿಂಗಳಾಗಿದೆ. ಅನೇಕ ದೊಡ್ಡ ಚಿತ್ರಗಳು ಬಿಡುಗಡೆಗೆ ಕಾದಿವೆ. ಅದರಲ್ಲಿ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರ ಕೂಡಾ ಒಂದು. ಕಳೆದ ವರ್ಷ ಬಿಡುಗಡೆಗೊಂಡು ಅಪಾರ ಯಶಸ್ಸು ಪಡೆದ 'ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ' ಚಿತ್ರದ ಗುಂಗಿನಿಂದ ಕನ್ನಡ ಚಿತ್ರರಂಗ ಇನ್ನೂ ಹೊರಬಂದಿಲ್ಲ. ಅಂತಹ ಯಶಸ್ಸು ಪಡೆದ ಚಿತ್ರದ ನಾಯಕನ ಮುಂದಿನ ಚಿತ್ರ ಎಂದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಸಹಜವೇ. ಅದರಲ್ಲೂ ಮಂಜು ಮಾಂಡವ್ಯರಂತಹ ಬರಹಗಾರ, ನಿರ್ದೇಶನದ ಕುರ್ಚಿಯಲ್ಲಿ ಕೂತಾಗ ಚಿತ್ರದ ಅಭಿರುಚಿಯ ಬಗ್ಗೆಯೂ ಭರವಸೆ ಮೂಡುತ್ತದೆ.  ಇವುಗಳ ನಡುವೆ ಚಿತ್ರದ ಹಾಡುಗಳು ಬಿಡುಗಡೆಗೊಂಡು ಜನರನ್ನು ತಲುಪಿವೆ. ಮತ್ತೊಮ್ಮೆ ಹರಿಕೃಷ್ಣ, ಯಶ್ ಚಿತ್ರದ ಹಾಡುಗಳ ಸಾರಥ್ಯವಹಿಸಿಕೊಂಡಿದ್ದಾರೆ.

ಅಣ್ಣಂಗ್ ಗೆ ಲವ್ ಆಗಿದೆ 
ಹಾಡಿರುವವರು : ಯಶ್, ಚಿಕ್ಕಣ್ಣ 
ಸಾಹಿತ್ಯ : ಮಂಜು ಮಾಂಡವ್ಯ
ರಾಮಾಚಾರಿ ಚಿತ್ರದಲ್ಲಿ ಹಾಡಿದ ಹಾಡು ಸಿಕ್ಕಾಪಟ್ಟೆ ಜನಪ್ರಿಯ ಆಗಿದ್ದಕ್ಕೋ ಏನೋ, ಯಶ್‍ಗೆ ಮತ್ತೆ ಹಾಡೋಕೆ ಲವ್ ಆದಂಗಿದೆ. ಮಂಜುರವರ ಸಾಹಿತ್ಯದಲ್ಲಿ ಕನ್ನಡ ಪದಗಳ ಜೊತೆ ಇಂಗ್ಲಿಷ್ ಪದಗಳು ಪೈಪೋಟಿಗೆ ಬಿದ್ದು ಗೆದ್ದಿವೆ. ಸಾಹಿತ್ಯದ ಮೇಲೆ ಹರಿಕೃಷ್ಣರವರ ಸಂಗೀತವೂ ಅಬ್ಬರಿಸಿದೆ. ಇವುಗಳ ನಡುವೆ ಯಶ್ ಮತ್ತು ಚಿಕ್ಕಣ್ಣ ಗಾಯನ ಬಂದು ಹೋಗುತ್ತಿದೆ. ಚಿಕ್ಕಣ್ಣ ಅಭಿನಯದತ್ತ ಗಮನಕೊಟ್ಟರೆ ಒಳ್ಳೆಯದು ಅನ್ನೋದು ಸಲಹೆ. ನೂರಾರು ಸಹ ಕಲಾವಿದರನ್ನು ಬಳಸಿಕೊಂಡು ಅಭಿಮಾನಿಗಳಿಗೆ ಭರ್ಜರಿ ನೃತ್ಯದ ರಸದೌತಣ ನೀಡುವ ಮುನ್ಸೂಚನೆ ಈ ಹಾಡಿನ ಮೂಲಕ ಕಾಣುತ್ತಿದೆ.

ಐ ಕಾಂಟ್ ವೇಟ್ ಬೇಬಿ 
ಹಾಡಿರುವವರು : ಟಿಪ್ಪು, ಇಂದು ನಾಗರಾಜ್ 
ಸಾಹಿತ್ಯ : ನರ್ತನ್ 
ನೃತ್ಯಕ್ಕೆ ಹೇಳಿ ಮಾಡಿಸಿದ ಸಂಗೀತಕ್ಕೆ ನರ್ತನ್ ರವರ ಕನ್ನಡ ಸಾಹಿತ್ಯವಿದೆ, ಜೊತೆಗೆ ಇಂಗ್ಲಿಷ್ ಪದಗಳೂ ಸರಿಸಮಾನವಾಗಿವೆ. ಟಿಪ್ಪು ಇಂತಹ ಗಾಯನದಲ್ಲಿ ಎತ್ತಿದ ಕೈ. ಇಂದು ನಾಗರಾಜ್ ಕೂಡಾ ಹಿಂದೆ ಬಿದ್ದಿಲ್ಲ. ಇಷ್ಟು ಬಿಟ್ಟರೆ ಅಂತಹ ವಿಶೇಷತೆ ಏನೂ ಇಲ್ಲ.

KD ನಂ. 1 
ಹಾಡಿರುವವರು : ಟಿಪ್ಪು, ಸಂಗೀತ ರವೀಂದ್ರನಾಥ್ 
ಸಾಹಿತ್ಯ : ಮಂಜು ಮಾಂಡವ್ಯ
ನಾ ಅಲೆಕ್ಸಾಂಡರಾ.. ನಾ ನಿನ್ನ ಲವರಾ.. ಎಂಬ ಸಾಲುಗಳಿರುವ ಸಾಹಿತ್ಯದ ಹಾಡು. ಸಾಮಾನ್ಯ ಸಾಹಿತ್ಯದ ನಡುವೆ ಹರಿಕೃಷ್ಣರ ಎಂದಿನ ಬೀಟ್ಸ್. ಕೋರಸ್ ಎಲ್ಲವೂ ಇದೆ. ಟಿಪ್ಪು ಮತ್ತು ಸಂಗೀತ ಇಬ್ಬರ ಧ್ವನಿಯಲ್ಲೂ ಲವಲವಿಕೆ ಇದೆ. ಸಾಹಿತ್ಯ ಕೇಳುವಂತಹ ಸಂಯಮದ ಸಂಗೀತವಿದೆ. ಕೇ..ಡಿ ನಂ ಒನ್ ಎಂಬ ಕೋರಸ್ ಇಡೀ ಗೀತೆಯನ್ನು ತುಂಬಿಕೊಂಡಿದೆ

ಜಾಗೋರೆ.. ಜಾಗೋರೆ 
ಹಾಡಿರುವವರು : ಕುನಾಲ್ ಗಾಂಜಾವಾಲ 
ಸಾಹಿತ್ಯ : ಗೌಸ್ ಪೀರ್ 
ಮಲಗಿರುವ ಸಿಂಹದಂತಹ ವೀರನನ್ನು ಹೋರಾಟಕ್ಕೆ ಕರೆ ನೀಡುವ ಆಶಯದ ಈ ಗೀತೆ ಚಿತ್ರದ ಇತರ ಗೀತೆಗಳಿಗಿಂತ ಭಿನ್ನವಾಗಿದೆ. ಕುನಾಲ್ ರವರ ಗಾಯನ ಹಾಗೂ ಹರಿಕೃಷ್ಣರ ಸಂಗೀತದಲ್ಲಿ ರಭಸವಿದೆ. ಗೌಸ್ ಪೀರ್ ಆವರ ಸಾಹಿತ್ಯದಲ್ಲಿ ಗಾಂಭೀರ್ಯವಿದ್ದು, ಚಿತ್ರದಲ್ಲಿ ಮತ್ತು ಕಥೆಯಲ್ಲಿ ಈ ಹಾಡಿನ ಪಾತ್ರವೇನು ಎಂದು ಕೆರಳಿಸಿರುವ ಗೀತೆ.

ಅಟೆನ್ಸನ್ ಪ್ಲೀಸ್ 
ಹಾಡಿರುವವರು : ರಂಜಿತ್, ರಾಹುಲ್ ನಂಬಿಯಾರ್, ನವೀನ್ ಮಾಧವ್ 
ಸಾಹಿತ್ಯ : ನರ್ತನ್
ನರ್ತನ್ ಅವರ ಸಾಹಿತ್ಯದ ಪ್ರತಿ ಪದವೂ ನಾಯಕನ ಗುಣಗಾನದಿಂದ ತುಂಬಿ ಹೋಗಿದೆ. ಗೀತೆ ಮುಂದುವರಿಯುತ್ತಿದ್ದಂತೇ, ಗುಣಗಾನಕ್ಕಿಂತ ಎದುರಾಳಿಗೆ ಎಚ್ಚರಿಕೆ ನೀಡುತ್ತಾ "Attention Please" ಎನ್ನುತ್ತದೆ ಗೀತೆ. ಹರಿಕೃಷ್ಣರ ಸಂಗೀತದಲ್ಲಿ ಈ ರೀತಿಯ ಗೀತೆಗೆ ಬೇಕಾದ ಶಕ್ತಿಯಿದೆ. ರಂಜಿತ್, ರಾಹುಲ್, ನವೀನ್ ಸುಂದರವಾಗಿ ಹಾಡಿ ಮೆರುಗು ತಂದಿದ್ದಾರೆ.

- ಪ್ರಶಾಂತ್ ಇಗ್ನೇಷಿಯಸ್

http://kannada.filmibeat.com/music/audio-review-of-yash-starer-manju-mandavya-directed-master-piece-020261.html

Monday, 27 April 2015

ಆಡಿಯೋ ಅನಿಸಿಕೆ - ವಜ್ರಕಾಯ

’ಭಜರಂಗಿ’ಯ ಭರ್ಜರಿ ಜೋಡಿ ಮತ್ತೆ ಒಂದಾಗಿ ಬರುತ್ತಿದೆ.  ಶಿವಣ್ಣನ ಪ್ರತಿಭೆ, ಹುರಿಗೊಳಿಸಿದ ದೇಹ ಎಲ್ಲವನ್ನು ಭರ್ಜರಿಯಾಗಿ ತೆರೆಯ ಮೇಲೆ ಅನಾವರಣಗೊಳಿಸಿದ ನಿರ್ದೇಶಕ ಹರ್ಷ, ವಜ್ರಕಾಯದಲ್ಲೂ ಅದೇ ಜಾದೂ ಮುಂದುವರಿಸುತ್ತಾರೆಯೇ ಎಂದು ಕಾತುರದಲ್ಲಿದೆ ಚಿತ್ರರಂಗ. ಚಿತ್ರದ ಟ್ರೈಲರ್ ಹಾಗೂ ಸ್ಥಿರ ಚಿತ್ರಗಳು ಸಕ್ಕತ್ತಾಗಿಯೇ ಮೂಡಿ ಬಂದಿದೆ. ನಿರ್ದೇಶಕನೇ ನೃತ್ಯ ಸಂಯೋಜಕನಾದಾಗ ಅಥವಾ ನೃತ್ಯ ಸಂಯೋಜಕನೇ ಚಿತ್ರದ ನಿರ್ದೇಶಕನಾಗಿರುವಾಗ ಚಿತ್ರದ ಹಾಡುಗಳಿಗೆ ವಿಶೇಷವಾದ ಮೆರಗು ಒದಗಿ ಬರುತ್ತದೆ. ಅಲ್ಲದೆ ಹಾಡುಗಳಲ್ಲಿಯೂ ವಿಶೇಷತೆ ಇರುತ್ತದೆ ಎಂಬ ಕುತೂಹಲ ಇರುತ್ತದೆ. ಕನ್ನಡದ ಅಗ್ರಗಣ್ಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅರ್ಜುನ್ ಜನ್ಯರ ನಿರ್ದೇಶನದ ಹಾಡುಗಳು ಹೇಗಿವೆ ನೋಡೋಣವೇ?

ವಜ್ರಕಾಯ
ಗಾಯನ - ಶಂಕರ್ ಮಹಾದೇವನ್ 
ಸಾಹಿತ್ಯ - ನಾಗೇಂದ್ರ ಪ್ರಸಾದ್ 
ಶಂಕರ್ ಮಹಾದೇವನ್ ಹಾಗೂ ನಾಗೇಂದ್ರ ಪ್ರಸಾದ್ ಒಟ್ಟಾಗಿ ಸೇರಿದೊಡನೆ ಒಂದು ಶಕ್ತಿಶಾಲಿ ಹಾಡು ಸಿದ್ಧವಾದಂತೆಯೇ. ಅರ್ಜುನ್ ಜನ್ಯರ ಭರ್ಜರಿ ಸಂಗೀತಕ್ಕೆ, ಸಾಹಿತ್ಯ ಗಾಯನವೆಲ್ಲವೂ ರಭಸದಿಂದಲೇ ಕೂಡಿಕೊಂಡು ಬಂದಿದೆ. ತೆರೆಯ ಮೇಲೆ ನೃತ್ಯವೂ ಅದೇ ರೀತಿಯಲ್ಲಿ ಇರುವುದರಲ್ಲಿ ಸಂಶಯವಿಲ್ಲ. ಅಬ್ಬರದ ನಡುವೆ ಕೇಳಿಸಿಕೊಂಡು ಹೋಗುವ ಗೀತೆ. 

ನೋ ಪ್ರಾಬ್ಲಮ್
ಗಾಯನ - ಧನುಷ್ 
ಸಾಹಿತ್ಯ - ಮೋಹನ್ ಕುಮಾರ್
ಕೊಲವೇರಿ ಹಾಡಿನಿಂದ ಗಾಯಕನಾಗಿಯೂ ಹೆಸರು ಮಾಡಿದ ತಮಿಳಿನ ಧನುಷ್ ಹಾಡಿರುವ ಗೀತೆ. ಅವರ ಕಂಚಿನ ಕಂಠಕ್ಕೆ ತಕ್ಕುದ್ದಾದ ಸಂಗೀತ ಒದಗಿ ಬಂದಿದ್ದೂ, ಸಾಹಿತ್ಯವೂ ಲವಲವಿಕೆಯಿಂದ ಇರುವುದರಿಂದ ಇಷ್ಟವಾಗುವ ಗೀತೆ. ಸರಳವಾದ ವಾದ್ಯ ಸಂಯೋಜನೆ ಇಷ್ಟವಾಗುತ್ತದೆ. ಮೋಹನ್ ಕುಮಾರರ ಸಾಹಿತ್ಯ ಯುವ ರಸಿಕರನ್ನು ಮೆಚ್ಚಿಸುವಂತಿದೆ. ಎಲ್ಲಕ್ಕಿಂತ ಮಿಗಿಲಾಗಿ ಧನುಷ್ ರ ಕನ್ನಡ ಉಚ್ಛರಣೆ ಹಾಗೂ ಸ್ಪಷ್ಟತೆ ಈಗಿನ ಎಷ್ಟೋ ಪರಭಾಷಾ ಗಾಯಕರಿಗಿಂತ ಚೆನ್ನಾಗಿದೆ. ಕೇಳುತ್ತಾ ಕೇಳುತ್ತಾ ಇಷ್ಟವಾಗುವಂತ ಸಂಗೀತವನ್ನು ಅರ್ಜುನ ನೀಡಿದ್ದಾರೆ.

ಕಂದಮ್ಮ ಮುದ್ದಮ್ಮ
ಗಾಯನ - ಕಾರ್ತಿಕ್ 
ಸಾಹಿತ್ಯ - ಕೆ ಕಲ್ಯಾಣ್ 
ಕಲ್ಯಾಣ್ ರ  ಸಾಹಿತ್ಯ ಎಂದೆಡೊನೆ ಒಂದು ನಿರೀಕ್ಷೆ ಕನ್ನಡ ಚಿತ್ರ ರಸಿಕರಲ್ಲಿ ಇದ್ದೇ ಇದೆ. ಕಲ್ಯಾಣ್ ನಿರಾಸೆ ಮೂಡಿಸುವುದಿಲ್ಲ. ಸಂಗೀತ ಕೂಡ ಮಾಧುರ್ಯದ ಗಡಿ ದಾಟದೆ ಇಷ್ಟವಾಗುತ್ತದೆ. ನಡುವೆ ಬರುವ ಕೋರಸ್ ವಿಭಿನ್ನವಾಗಿದೆ. ಕೊಳಲಿನ ಧ್ವನಿ ನೆನಪಿನಲುಳಿಯುತ್ತದೆ. ಕಾರ್ತಿಕರ ಗಾಯನ ಎಂದಿನಂತೆ ಇದೆಯಷ್ಟೆ.  ಉತ್ತಮವಾದ ಗೀತೆ.

ತುಕತು ಗಡಬಡ
ಗಾಯನ - ಶರಣ್ ಹಾಗೂ ಸುನಿತಾ  
ಸಾಹಿತ್ಯ - ಯೋಗಾನಂದ ಮುದ್ದನ್

ಶರಣ್ ಗಾಯನದ ಹಾಡೆಂಬ ಉತ್ಸಾಹಕ್ಕೆ ಭರಪೂರವಾದ ಹಿಂದಿಯ ಸಾಹಿತ್ಯ ತಣ್ಣೀರೆರೆಚುತ್ತದೆ. ಯೋಗಾನಂದರವರ ಸಾಹಿತ್ಯದಲ್ಲಿ ಕನ್ನಡ ಪದಗಳು ಸಮಾಧಾನಕರ ಬಹುಮಾನದಂತೆ ಅಲ್ಲಲ್ಲಿ ಕೇಳ ಸಿಗುತ್ತದೆ. ಕನ್ನಡ ಹಾಡೊಂದರಲ್ಲಿ ಅಷ್ಟು ಪರಭಾಷಾ ಸಾಹಿತ್ಯದ ಅವಶ್ಯಕತೆ ಚಿತ್ರದ ಸನ್ನಿವೇಶದಲ್ಲಿ ನಿಜಕ್ಕೂ ಇದೆಯೇ ಎಂಬುದನ್ನು ಪರದೆ ಮೇಲೆಯೇ ನೋಡಬೇಕು. ಹರ್ಷರವರ ನೃತ್ಯ ಸಂಯೋಜನೆಗೆ ಒಳ್ಳೆಯ ಅವಕಾಶವಿರುವ ಸಂಗೀತ, ವಾದ್ಯ ಸಂಯೋಜನೆ ಇದೆ. 

ಉಸಿರೆ 
ಗಾಯನ - ಸಂತೋಷ್   
ಸಾಹಿತ್ಯ - ಕೆ ಕಲ್ಯಾಣ್

ಬಹುಶ: ಚಿತ್ರದ ಅತ್ಯುತ್ತಮ ಗೀತೆ. ಒಳ್ಳೆಯ ಸಾಹಿತ್ಯಕ್ಕೆ, ಉತ್ತಮವಾದ ಸಂಗೀತ, ಗಾಯನ ಎಲ್ಲವೂ ಮಿಳಿತಗೊಂಡು ಉತ್ತಮವಾಗಿ ಕೇಳಿಸಿಕೊಂಡು ಹೋಗುವ ಗೀತೆ. ತಾಯಿಯನ್ನು ಕಾಣುವ ಕಾತುರದಲ್ಲಿ ಹೊರಟ ನಾಯಕನ ಸದಾಶಯ ಸಾಹಿತ್ಯದಲ್ಲಿ ಇದ್ದರೆ, ಅದರ ಉತ್ಸಾಹ ಗಾಯನದಲ್ಲಿ ಇದೆ. ಈ ಹಾಡಿನಲ್ಲೂ ಅರ್ಜುನ್ ಜನ್ಯ ಮಾಧುರ್ಯದಿಂದ, ಸಂಯಮದಿಂದ ಗಮನ ಸೆಳೆಯುತ್ತಾರೆ. 

ವಜ್ರಕಾಯ ಥೀಮ್
ಮೆಲುದನಿಯ ಕೋರಸ್ ನಿಂದ ಆರಂಭವಾಗಿ ಅಬ್ಬರದಿಂದ ಕೊನೆಗೊಳ್ಳುವ ಥೀಮ್ ಸಾಂಗ್ ಎಂದಿನ ಥೀಮ್ ಗೀತೆಗಳಂತೆಯೇ ಇದ್ದೂ, ಅದಕ್ಕೆ ಬೇಕಾದ ಅದಕ್ಕೆ ಬೇಕಾದ ರಭಸವೂ ಸಂಗೀತದಲ್ಲಿದೆ.

-ಪ್ರಶಾಂತ್ ಇಗ್ನೇಷಿಯಸ್

ಆಡಿಯೋ ಅನಿಸಿಕೆ - ರನ್ನ

ವಿಕ್ಟರಿ, ಅಧ್ಯಕ್ಷದಂಥ ಯಶಸ್ವಿ ಚಿತ್ರಗಳನ್ನು ಕೊಟ್ಟ  ನಂದ ಕಿಶೋರ್ ಈ ಬಾರಿ ಸೂಪರ್ ಸ್ಟಾರ್ ಸುದೀಪ್ ರವರ ಜೊತೆ ರನ್ನದ ಮೂಲಕ ತೆರೆಗೆ ಅಪ್ಪಳಿಸಲು ತಯಾರಾಗಿ ಬರುತ್ತಿದ್ದಾರೆ. ಬಹು ದಿನಗಳ ನಂತರ ಬರುತ್ತಿರುವ ಕಿಚ್ಚ ಸುದೀಪ್ ಚಿತ್ರ ಇದಾಗಿರುವುದರಿಂದ ಅಭಿಮಾನಿಗಳ ಕಾತರ ನಿರೀಕ್ಷೆ ಸಹಾ ಮುಗಿಲು ಮುಟ್ಟಿದೆ. ಚಿತ್ರದ ಟೀಸರ್, ಟ್ರೈಲರ್ ಗಳು ಈ ನಿರೀಕ್ಷಯನ್ನು ದ್ವಿಗುಣಗೊಳಿಸಿರುವ ಬೆನ್ನಲ್ಲೇ ಹಾಡುಗಳು ಚಿತ್ರ ರಸಿಕರ ಮುಂದಿದೆ. ಹರಿಕೃಷ್ಣರ ಸಾರಥ್ಯದ ಹಾಡುಗಳು ಹೇಗಿವೆ ಎಂದು ನೋಡೋಣ -

ಬಬ್ಬರ್ ಶೇರ್
ಗಾಯನ - ಶ್ರೀ ದೇವಿ ಪ್ರಸಾದ್
ಸಾಹಿತ್ಯ - ನಾಗೇಂದ್ರ ಪ್ರಸಾದ್ 
ಉತ್ತಮವಾದ ಕನ್ನಡ ಸಾಹಿತ್ಯದೊಂದಿಗೆ ಆರಂಭವಾಗುವ ಗೀತೆ ಇದ್ದಕ್ಕಿದ್ದಂತೆ ಹಿಂದಿಗೆ ಹೊರಳಿ ಇಂಗ್ಲಿಷ್ ಪದಗಳ ನಡುವೆ ಸಾಗುವುದು ನಿರಾಸೆ ಮೂಡಿಸಿದರೂ, ಉತ್ತಮ ಸಂಗೀತ ಹಾಗೂ ವಾದ್ಯ ಸಂಯೋಜನೆ ಗೀತೆಯನ್ನು ಎತ್ತಿ ಹಿಡಿಯುತ್ತದೆ.ನಾಗೇಂದ್ರ ಪ್ರಸಾದರ ಸಾಹಿತ್ಯದಲ್ಲಿ ನಾಯಕ ಗುಣಗಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರಕಿದೆ.


ಸೀರೆಲಿ ಹುಡುಗೀನ 
ಗಾಯನ - ವಿಜಯ್ ಪ್ರಕಾಶ್  
ಸಾಹಿತ್ಯ - ಯೋಗರಾಜ್ ಭಟ್
ಸರಳ ಸುಮಧುರ ಸಂಗೀತ ಸಂಯೋಜನೆ ಇರುವ ಗೀತೆ, ಖುದ್ದು ಸುದೀಪರೇ ಹಾಡಿದಾರೇನೋ ಎನ್ನುವಷ್ಟು ಮಟ್ಟಿಗೆ ವಿಜಯ್ ಪ್ರಕಾಶರ ಧ್ವನಿ ಹೊಂದಿಕೆಯಾಗಿದೆ. ಯೋಗರಾಜ್ ಭಟ್ಟರ ಸಾಹಿತ್ಯವನ್ನು ಹೇಗೆ ಹಾಡಿದರೆ ಚೆಂದ ಎಂಬುದನ್ನು ಕರಗತ ಮಾಡಿಕೊಂಡಿರುವ ವಿಜಯ್ ಸೊಗಸಾಗಿ ಹಾಡಿದ್ದಾರೆ. ಭಟ್ಟರ ಸಾಹಿತ್ಯ ಎಂದಿನಂತೆ ಇದೆ.

ತಿಥಲಿ  ತಿಥಲಿ 
ಗಾಯನ - ಟಿಪ್ಪು, ಸಂಗೀತ ರವೀಂದ್ರನಾಥ್ 
ಸಾಹಿತ್ಯ - ಕೆ ಕಲ್ಯಾಣ್ 
ಟಿಪ್ಪು ಹಾಗೂ ಸಂಗೀತರವರು ಹಾಡಿರುವ ಈ ಗೀತೆ ಆರಕ್ಕೇರದೆ ಮೂರಕ್ಕಿಳಿಯದಂತಿದೆ. ಕಲ್ಯಾಣರ ಸಾಹಿತ್ಯವೂ ಬದಲಾದ ಇಂದಿನ ಹವಾಗುಣಕ್ಕೆ ಹೊಂದಿಕೊಂಡಂತಿದೆ.ಸಾಧಾರಣ ಯುಗಳ ಗೀತೆಯಾಗಿದ್ದೂ ತೆರೆಯ ಮೇಲೆ ಹೇಗೆ ಇರಬಹುದು ಎಂದು ಕಾದು ನೋಡ ಬೇಕಾಗಿದೆ.

What to do? 
ಗಾಯನ - ವಿಜಯ್ ಪ್ರಕಾಶ್  
ಸಾಹಿತ್ಯ - ಯೋಗರಾಜ್ ಭಟ್
ಹರಿ, ವಿಜಯ್ ಹಾಗೂ ಭಟ್ಟರ ಸಮಾಗಮದ ಮತ್ತೊಂದು ಗೀತೆ. ಗುಂಡು ಹಾಕುತ್ತಾ, ಹುಡುಗೀರ ಬಗೆಗಿನ ಹುಡುಗರ  ವಿರಹದ ಗೀತೆಗಳ ಸಾಲಿಗೆ ಮತ್ತೊಂದು ಸೇರ್ಪಡೆ. ನೃತ್ಯಕ್ಕೆ, ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಗೀತೆ.

ಜಗದೋದ್ಧಾರನ
ಗಾಯನ - ಕಾರ್ತಿಕ್ , ವಾಣಿ ಹರಿಕೃಷ್ಣ 
ಸಾಹಿತ್ಯ - ಪುರಂದರ ದಾಸರು 
ಪುರಂದರ ದಾಸರ ಪ್ರಸಿದ್ಧ ಗೀತೆಗಳಲ್ಲಿ ಒಂದಾದ, ಮೈ ಆಟೋಗ್ರಾಫ್ ಚಿತ್ರದಲ್ಲಿ ಬಳಕೆಯಾದ ಗೀತೆ ಮತ್ತೆ ಇಲ್ಲಿ ಕೇಳ ಸಿಗುತ್ತದೆ. ಈ ಬಾರಿ ಕಾರ್ತಿಕ್ ಹಾಗೂ ವಾಣಿ ಹರಿ ಕೃಷ್ಣರ ಧ್ವನಿಯಲ್ಲಿ ಮೂಡಿ ಬಂದಿರುವ ಗೀತೆ ಹಿಂದಿಗಿಂತಲೂ ಹೆಚ್ಚು ಆಪ್ತವಾಗುತ್ತದೆ. ಚಿತ್ರದಲ್ಲಿ ಹೇಗೆ ಎಲ್ಲಿ ಮೂಡಿ ಬಂದಿರಬಹುದೆಂಬ ಕುತೂಹಲ ಮೂಡಿಸುತ್ತದೆ.

ರನ್ನ ಥೀಮ್ 
ಕೊನೆಯಲ್ಲಿ ಬರುವ ರನ್ನ ಥೀಮ್ ಹರಿ ಕೃಷ್ಣರ ಹಳೆಯ ಥೀಮ್ ಗೀತೆಗಳನ್ನು ನೆನಪಿಸುತ್ತದೆ. ನಾಯಕನ ಎಂಟ್ರಿ ಅಥವಾ ಅವನ ಕಾರ್ಯ ವೈಖರಿಯನ್ನು ಪರಿಚಯಿಸುವ ಎಂದಿನ ಥೀಮ್ ಗೀತೆಗಳಂತೆ ಇಲ್ಲಿಯೂ ಲವಲವಿಕೆ ಇದೆ.

-ಪ್ರಶಾಂತ್ ಇಗ್ನೇಷಿಯಸ್

Thursday, 5 March 2015

ಈ ಸಂಭಾಷಣೆ….ಇದು ಮೊಬೈಲುಗಳ ಸಂಭಾಷಣೆ

(ಸುಮಾರು ರಾತ್ರಿ 2ರ  ಸಮಯ. ಮನೆಯೊಂದರಲ್ಲಿ ಎಲ್ಲರೂ ಮಲಗಿದ್ದಾರೆ. ಆಗ ಮನೆಯ ಮೊಬೈಲ್ ಗಳೆಲ್ಲಾ ಸಭೆ ಸೇರಿವೆ, ಎಲ್ಲಾ ಮೊಬೈಲುಗಳ ಮುಖವೂ (Display) ಸೊರಗಿ ಹೋಗಿವೆ. ನಿದ್ದೆ ಇಲ್ಲದೆ ಬಾಡಿ ಹೋದ ಮುಖದ ತುಂಬೆಲ್ಲಾ ಗೀರು, ಏಟು.. ರಾತ್ರಿ ಆಗಿರೋದರಿಂದ ಕೈ ಕೋಳದಂತೆ ಪ್ರತಿ ಮೊಬೈಲ್ ಗೂ chargerಗಳ ವೈಯರನ್ನು ನೇತು ಹಾಕಲಾಗಿದೆ. ಆದರೂ ಹೇಗೋ ಸಮಯ ಮಾಡಿಕೊಂಡು ಕಷ್ಟ ಸುಖ ಹಂಚಿಕೊಳ್ಳುತ್ತಿವೆ ಮೊಬೈಲುಗಳು.....)

ಸ್ಮಾರ್ಟ್ ಫೋನ್ 1: 
ಏನಪ್ಪ ತುಂಬಾ Tired ಆದಂಗಿದೆ....

ಸ್ಮಾರ್ಟ್ ಫೋನ್ 2:
Tired ಏನ್ ಬಂತು.....ಸಾಯೋದೊಂದು ಬಾಕಿ, ಆಗಲಪ್ಪ ಈ ಕಷ್ಟ ತಡೆಯೋಕೆ ಆಗೊಲ್ಲ......

ಸ್ಮಾರ್ಟ್ ಫೋನ್ 1:
ಅದು ಸರಿ ಅನ್ನು, ನಮ್ಮೆಲ್ಲರದೂ ಅದೇ ಪಾಡು.  ಸ್ವಲ್ಪ ಆದ್ರು ಮನಷತ್ವ ಬೇಡ್ವ ಈ ಮನುಷ್ಯರಿಗೆ?
                                   
ನಾರ್ಮಲ್ ಫೋನ್ :
ಸ್ವಲ್ಪ ಮೆತ್ತಗೆ ಮಾತಾಡಪ್ಪ, ನಿದ್ದೇಲ್ಲಿ ಇದ್ದು ಮತ್ತೆ ನಮ್ಮನ್ನ ಇಟ್ಕೊಂಡು ಒತ್ತಕ್ಕೆ ಶುರು ಮಾಡ್ತಾರೆ

ಸ್ಮಾರ್ಟ್ ಫೋನ್ 1:
ಹೌದಪ್ಪ, ಎದ್ದ್ ತಕ್ಷಣ first ಮುಟ್ಟ್ ನೋಡ್ಕೊಳೋದೆ ನಮ್ಮನ್ನ!!!

ಸ್ಮಾರ್ಟ್ ಫೋನ್ 2: 
ನನಗಂತೂ ಜ್ವರ ಬಂದಂಗೆ ಹಾಗಿದೆ, ಮಾತಾಡಿ ಮಾತಾಡಿ ನಮ್ಮ್ ಹಿಂದೆ ಎಲ್ಲಾ ಬಿಸಿ ಮಾಡಿಬಿಡ್ತಾರೆ. ಸ್ವಲ್ಪ ತಣ್ಣಗೆ ಮಾಡ್ಕೊಳೋಣ ಅಂದ್ರೆ ರಾತ್ರಿ ಎಲ್ಲಾ charger ಬೇರೇ ಹಾಕಿರ್ತಾರೆ....

ನಾರ್ಮಲ್ ಫೋನ್:         
ಥೂ ಇವರ ಬೆರೆಳ್ ಸವದೋಗಾ.....

ಸ್ಮಾರ್ಟ್ ಫೋನ್ 1:
ಹೂ.. ಸವ್ದೋಗುತ್ತೆ…ನಮ್ಮ screen ಸವ್ದೋಗುತ್ತೆ ಅಷ್ಟೆ… factoryಇಂದ ಬಂದಾಗ ಹೇಗಿದ್ದೆ  ನಾನು , ಇವರ ಕೈ ಸೇರಿ ಹೆಂಗಾಗಿದ್ದೀನಿ ನೋಡು ನಾರ್ಮಲ್ ಫೋನ್ ನಾನು ಅಷ್ಟೇ, ಬಂದಾಗ ಎಷ್ಟು ಚೆನ್ನಾಗಿದ್ದೆ, ಈಗ ಮೈ ಮೇಲಿನ ನಂಬರೆಲ್ಲಾ ಅಳ್ಸೋಗಿದೆ

ಸ್ಮಾರ್ಟ್ ಫೋನ್ 2:

ಲೇ ನೀನು ಮಾಮೂಲಿ ಫೋನು,  ನಿನಗೇ ಅಷ್ಟು ಕಷ್ಟ ಇರೋವಾಗ , ಸ್ಮಾರ್ಟ್ ಫೋನ್ ನಮಗೆ ಹೆಂಗೆ ಆಗಬೇಡ?

ಸ್ಮಾರ್ಟ್ ಫೋನ್ 1:      

ಅದೇ ಮತ್ತೆ.. ನಿನ್ನ ಬರೀ ಫೋನು ಮೆಸ್ಸೇಜ್ ಗೇ ಉಪಯೋಗಿಸ್ತಾರೆ, ನಮ್ನ ಯಾವ್ ಯಾವ್ದಕ್ಕೆ ಉಪಯೋಗಿಸ್ತಾರೆ ಅಂತೆ ಈ ಬಾಯಲ್ಲಿ ಹೇಳೋಕೆ ಆಗೊಲ್ಲ ಬಿಡು

ನಾರ್ಮಲ್ ಫೋನ್ : 

ಆಹಾ     ನನ್ನ್ ಮಕ್ಳಾ … ಮೊದಲು ಬಂದಾಗ ನಮ್ನ ನೋಡಿ ರೇಗಿಸ್ತಿದ್ರಿ.. ನೀವೇ ದೊಡ್ಡು ಸ್ಮಾರ್ಟ್ ಅಂತಾ ..ಈಗ ಅನುಭವಿಸಿ

ಸ್ಮಾರ್ಟ್ ಫೋನ್ 2:    

ಹೌದಪ್ಪ ಏನ್ ಮಾಡೋದು, ನೀವುಗಳು ಮಾತ್ರ ಇದ್ದಾಗ ಫೋನು, ಮೆಸ್ಸೇಜು ಸ್ವಲ್ಪ ಹಾಡು ಇದಕ್ಕೆ ಮಾತ್ರ ಮೊಬೈಲ್ ಗಳನ್ನ ಉಪಯೋಗಿಸ್ತಿದ್ರು, ಕಂಪನಿಗಳು ನಮ್ಮನ್ನ ತಯಾರು ಮಾಡೋಕೆ ಶುರು ಆದ್ಮೇಲೆ ಆಯ್ತು ನೋಡಪ್ಪ….

ಸ್ಮಾರ್ಟ್ ಫೋನ್ 1: 

ಈ ವಾಟ್ಸ್ ಆಪ್ಪ್ ಬಂದ ಮೇಲಂತೂ ನಮ್ಮ ಪಾಡು ಯಾಕೆ ಹೇಳ್ತೀಯಾ. ರಾತ್ರಿ ಹಗಲು ಬಿಡದೆ ನಮ್ಮ ಮುಖ ತಿವಿತ್ತಾರೆ.

ಸ್ಮಾರ್ಟ್ ಫೋನ್ 2:      

ಮೊದಲು ಮೆಸೇಜ್ ಮಾಡೋವಾಗ ಭಯ ಭೀತಿ ಇತ್ತು ಬಿಲ್ಲು ಜಾಸ್ತಿ ಬರುತ್ತೆ ಅಂತಾ, ಈಗ ನೋಡ್ರಪ್ಪ ಭಯನೂ ಇಲ್ಲ , ಭೀತಿನೂ ಇಲ್ಲ. ಸಮಯ ಸಂದರ್ಭ ಅಂತೂ ಇಲ್ವೇ ಇಲ್ಲ ನಾರ್ಮಲ್ ಫೋನ್ ಯಾವಾಗ್ ನೋಡಿದ್ರೂ ಕುಟ್ಟ್ತಾ ಇರೋದೇ ಕೆಲ್ಸ

ಸ್ಮಾರ್ಟ್ ಫೋನ್ 1:

ಸರಿ ಯಾವ್ದಾದ್ರೂ ಒಳ್ಳೆ ವಿಚಾರ ಮಾತಾಡಿದ್ರೆ ಅಂತೂ ಪರವಾಗಿಲ್ಲ, ಬರೀ ಕೆಲ್ಸಕ್ಕೆ ಬಾರದೆ  ಇರೋದೆ….

ಸ್ಮಾರ್ಟ್ ಫೋನ್ 1:

ಆಗೇನಿಲ್ಲ , ನಿಜಕ್ಕೂ ಒಳ್ಳೆ ಕೆಲ್ಸಗಳಿಗೂ ಉಪಯೋಗ ಮಾಡ್ಕೊಬಹುದು ನಮ್ಮನ್ನ, ಆದರೆ ಮಂಗನ ಕೈಗೆ ಸಿಕ್ಕ ಮಾಣಿಕ್ಯ ಆಗೋಗಿದ್ದೀವಿ ನಾವು

ನಾರ್ಮಲ್ ಫೋನ್ :

ನೀವು ಬಂದ ಮೇಲೆ ಸಾಮಾನ್ಯ ಫೋನಾದ ನಮಗಂತೂ ಮರ್ಯಾದೆನೇ ಇಲ್ಲ ಬಿಡು. ಅಯ್ಯೋ ಮೊನ್ನೆ ಒಂದು ಹುಡುಗಿ         ನನ್ನ ನೋಡಿ ಇದರಲ್ಲಿ ಕಲರಿಲ್ಲ, ಫೇಸ್ ಬುಕ್ ಇಲ್ಲ, ವಾಟ್ಸ್ಅಪ್ಪ್ ಇಲ್ಲ, ಇದೂ ಒಂದು ಫೋನಾ ಅಂತಾಳೆ…ಕಾಲ್ ಮಾಡೋದು ಬಿಟ್ಟು ಎಲ್ಲಾ ಬೇಕು ಅವಳಿಗೆ ಫೋನಲ್ಲಿ

ಸ್ಮಾರ್ಟ್ ಫೋನ್ 1:

ಇನ್ನು ಸ್ವಲ್ಪ ದಿನ ಬಿಟ್ರೆ, ಇದರಲ್ಲಿ ಬಟ್ಟೆ ಒಗಿಬಹುದಾ? ಮಸಾಲೆ ಅರಿಬಹುದಾ ಅಂತನೂ ಕೇಳ್ತವೆ

ಸ್ಮಾರ್ಟ್ ಫೋನ್ 2:

ಹುಡುಗ್ರುದಂತೂ ಇನ್ನೂ ಮೋಸಪ್ಪ, ಈ ಗಾಡೀಲಿ ಹೋಗೊವಾಗ ಕೆನ್ನೆ, ಭುಜ ಮಧ್ಯೆ ನಮ್ಮನ್ನಾಕ್ಕೊಂಡು ಮಾತಾಡ್ಕೊಂಡು ಹೋಗ್ತಾವೆ




ಸ್ಮಾರ್ಟ್ ಫೋನ್ 1:

ಸರಿಯಾಗಿ ಮುಖ ತೊಳ್ದಿರಲ್ಲಾ, ಗಡ್ಡ ಶೇವ್ ಮಾಡ್ಕೊಂಡಿರಲ್ಲ…ಥೂ..ನಮ್ಮ ಸ್ಪೀಕರ್ ಒಳೆಗೆಲ್ಲಾ ಸಣ್ಣ ಸಣ್ಣ ಕೂದಲು…..

ಸ್ಮಾರ್ಟ್ ಫೋನ್ 2:

ಮೊನ್ನೆ ಹಿಂಗೇ ಕತ್ತು ವಾಲ್ಸ್ ಕೊಂಡು ಹೋಗಿ ಯಾರೋ   ರೋಡಲ್ಲಿ ನಡ್ಕೊಂಡು ಹೋಗ್ತಿರೋರಿಗೆ ಗುದ್ದ್ ಬಿಟ್ಟ ನಮ್ಮ ಓನರ್ರು. ಗುದ್ದಿದ್ದ ಆ ಯಮ್ಮನೂ ಫೋನಲ್ಲಿ ಮಾತಾಡ್ಕೊಂಡು ಹೋಗ್ತಿದ್ಲು, ಒಂದು ನಿಮಿಷ ಅಂತಾ ಫೋನಲ್ಲಿ ಹೇಳಿ ಇವನಿಗೆ ಬಾಯಿಗೆ ಬಂದಂಗೆ ಬೈದು ಮತ್ತೆ ಮಾತಾಡ್  ಕೊಂಡು ಹೋದ್ಲು. ಪೋಲಿಸ್ ಬಂದು “ಎಲ್ಲಾ ಈ ಹಾಳಾದ್ ಫೋನಿಂದ” ಅಂತ ನನ್ನ ಬೈದ
       
ಸ್ಮಾರ್ಟ್ ಫೋನ್ 1:
ಇವರು ಮಾಡೋ ತಪ್ಪಿಗೆ ನಾವು ಬೈಸ್ಕೋಬೇಕು

ಸ್ಮಾರ್ಟ್ ಫೋನ್ 2:
ಆಹಾ ನನ್ನ ಓನರ್ರು ಇದ್ದಾಳಲ್ಲ ಹುಡುಗಿ, ಅವರಪ್ಪ ಇವಳ ಹುಟ್ಟು ಹಬ್ಬಕ್ಕೆ ಅಂತಾ ನನ್ನ ತಕ್ಕೊಟ್ರು.  ಅವಳ ಇನ್ನೊಂದು ಹುಟ್ಟು ಹಬ್ಬ ನಾನು ನೋಡಲ್ಲ ಬಿಡು.. ಹಂಗೆ ಮಾಡಾಕಿದ್ದಾಳೆ ನನ್ನ.

ಸ್ಮಾರ್ಟ್ ಫೋನ್ 1:
ಅದೇನು ಮಾತಾಡ್ತಾರೋ…ದಿನ ಎಲ್ಲಾ ಜೊತೆಗೆ ಇರ್ತಾರೆ, ಆ ಕಡೆ ಹೋಗ್ತಾ ಇದ್ದಂಗೆ ಮತ್ತೆ                                          ಶುರು ಮಾಡ್ಕೋತಾರೆ ಊಟ ಆಯ್ತಾ, ನಿದ್ದೆ ಆಯ್ತಾ ಅಂತ. ಕಿವಿ ಕಚ್ಚ್ ಬಿಡ್ಬೇಕು ಅನ್ಸುತ್ತೆ.

ಸ್ಮಾರ್ಟ್ ಫೋನ್ 2:
ಈ ಹಾಡುಗಳನ್ನ ಕೇಳೋದ್ ಬೇರೆ …ಆ ಹಾಡುಗಳನ್ನ ಜೋರಾಗಿ ಹಾಕಿ ಹಾಕಿ ನನ್ನ ಸ್ಪೇರ್ ಪಾರ್ಟ್ಸ್ ಎಲ್ಲಾ ಹಾಳಾಗ್ ಹೋಗಿದೆ.

ಸ್ಮಾರ್ಟ್ ಫೋನ್ 1:
ನಮ್ದೂ ಅದೇ ಗೋಳಪ್ಪ. ಮೊನ್ನೆ ಹಾಡ್ ಹಾಕ್ಕೊಂಡು ಹಂಗೆ ನಡ್ಕೊಂಡು ಹೋಗ್ತಿದ್ದ ನಮ್ಮ್ ಯಜಮಾನ. ಮುಂದೆ ಮೋರಿ ಕಲ್ಲು ತೆಗೆದಿದ್ರು. ಜನ ಎಲ್ಲಾ ಕೂಗ್ತಿದ್ರು ’ಮೋರಿ ಮೋರಿ’ ಅಂತಾ, ಹಂಗೆ ಡ್ಯಾನ್ಸ್ ಮಾಡ್ಕೊಂಡು ಬಿದ್ದೇ ಬಿಟ್ಟ ಮೋರಿಗೆ. ಸಂತೋಷ ಏನೂಂದ್ರೆ ಬಿದ್ದು ಮೈ ಕೈ ಎಲ್ಲಾ ರಕ್ತ ಬಂದ್ರೂ, “ನನ್ನ್ ಫೋನ್ ಎಲ್ಲಿ ಎಲ್ಲಿ “ ಅಂತ ನನ್ನ ಬಗ್ಗೆ ಕೇಳ್ತಿದ್ದ

ನಾರ್ಮಲ್ ಫೋನ್ :
ನಾನಿದಿದ್ರೆ ಕೇಳ್ತಾ ಇರಲಿಲ್ಲ ಪಾಪಿಗಳು, ನಾರ್ಮಲ್ ಫೋನ್ ಬಿಡು ಅಂತ ಮೋರಿಲೇ ಬಿಟ್ಟು ಬರ್‍ತಿದ್ರು.

ಸ್ಮಾರ್ಟ್ ಫೋನ್ 1:
ನಿಂದೆ ಸ್ವಲ್ಪ ಆರಾಮ್ ಬಿಡಪ್ಪ.. ನಮಷ್ಟು ಕೆಲ್ಸ ಇಲ್ಲ.

ನಾರ್ಮಲ್ ಫೋನ್:
ಏನ್ ಆರಾಮು? ನಮ್ಮಂತವರನ್ನೆಲ್ಲಾ ಈ ವಯಸ್ಸಾದವರಿಗೆ ಕೊಟ್ಟು ಬಿಟ್ಟಿರ್‍ತಾರೆ. ಅವರು ನಮ್ಮ ನಂಬರ್ ಗಳನ್ನು  ಒತ್ತದ್ದು ನೋಡಬೇಕು ನೀನು. ಒಳಗೆ ಇರೋ circuit ಎಲ್ಲಾ ಕೈಗೆ ಬರಬೇಕು ಹಂಗೆ ಒತ್ತುತ್ತಾರೆ. ಸೈಲಂಟ್ ಮೋಡಲ್ಲಿ ಇಡೋಕೆ ಬರೋಲ್ಲ, ಒಂದು ಫೋನು ಬಂದ್ರೆ ಸಾಕು ಇಡೀ ಏರಿಯಾಗೆ ಕೇಳಿಸ್ ಬೇಕು. ಮೊನ್ನೆ ನಮ್ಮ ಬಾಸು ನನ್ನ ಯಾವ್ದೋ ಭಾಷಣಕ್ಕೆ ಕರ್ಕೊಂಡು ಹೋಗಿದ್ದ. ಮನೆಯಿಂದ ದೊಡ್ಡ ಬಾಸ್, ಅವರ ಹೆಂಡ್ತಿ ಫೋನ್ ಬಂತು ನೋಡು, ಎಲ್ಲಾ ನನ್ನ ಬಯ್ಯೋಕೆ ಶುರು ಮಾಡಿದ್ರು, ಬಿಸಾಕ್ರಿ ಫೋನು ಅಂತಾ.. “ಮುಚ್ರಯ್ಯ ಸಾಕು ಅನಿಸ್ತು” ಯಾಕೆ ಅಂತ ಸುಮ್ನೆ ಆದೆ. ಇನ್ಮೇಲೆ ಯಾವ್ದಾದ್ರು important ಕಾಲ್ ಬರಲಿ, ನಾನೇ dead ಆಗ್ ಬಿಡ್ತೀನಿ.

ಸ್ಮಾರ್ಟ್ ಫೋನ್ 1:
ನಿನಗೆ ದೊಡ್ಡೋರಾ ಕಾಟ, ನಮ್ಗೆ ಮಕ್ಕಳ ಕಾಟ ಬೇರೆ. ನಮ್ಮ ಯಜಮಾನ office ಯಿಂದ ಬರ್‍ತಾ ಇದ್ದ ಹಾಗೆ ಫೋನ್ ಎತ್ತಿ ಮಕ್ಕಳಿಗೆ ಕೊಡ್ತಾನಪ್ಪ. ಅವು ಮಕ್ಕಳೇನಯ್ಯಾ? ರಾಕ್ಷಸರು ..ಥೂ... ನನಗ್ ಬೇಕು ನನಗ್ ಬೇಕು ಅಂತಾ ಕಿತ್ಲಾಡ್ತವೆ. ಮೊನ್ನೆ ಹಂಗೆ ಜಗಳ ಆಡ್ಕೊಂಡ್ ಆಡ್ಕೊಂಡು ಮನೆ ಸೊಪ್ಪು ಸಾರಲ್ಲಿ ನನ್ನ ಬೀಳಿಸ್ ಬಿಟ್ವು. ಥೂ ಮೈಯೆಲ್ಲಾ ಸೊಪ್ಪು. ಕೋಪ ಬಂದು ಕೆಲ್ಸ ಮಾಡೋದೆ ನಿಲ್ಲಿಸ್ ಬಿಟ್ಟೆ. ಅಮೇಲೆ ರಿಪೇರಿ ಮಾಡಿಸ್ದ ನನ್ನ..

ಸ್ಮಾರ್ಟ್ ಫೋನ್ 2:
ಹೌದಪ್ಪ, ನಮ್ಮ್ ಒಳಗೆ ಇರೋ ಗೇಮ್ಸೆಲ್ಲಾ ಗೊತ್ತು ಅವಕ್ಕೆ. ಮನೆಯಿಂದ ಹೊರಕ್ಕೆ ಹೋಗೊಲ್ಲ, ಯಾವಾಗ್ಳೂ ನಮ್ಮನ್ನ ಹಾಕ್ಕೊಂಡು ಉಜ್ಜ್ ತಿರೋದೆ…. ಸರಿಯಾಗಿ ಆಡೋಲ್ಲ ಆಮೇಲೆ ಗೇಮಲ್ಲಿ ಸೋತ್ರೆ.. ಅಪ್ಪ ಮೊಬೈಲ್ ಚೆನ್ನಾಗಿಲ್ಲ ಬೇರೆ ತಗೋ ಅನ್ನೋದು

ಸ್ಮಾರ್ಟ್ ಫೋನ್ 1:
ಗೇಮ್ಸ್ ಆಡೋಕೆ ಬಿಟ್ರೆನೇ ಊಟ ಮಾಡೋದು. ನಮ್ಮನ್ನ ಇಟ್ಕೋಂಡ್ ಊಟ ಮಾಡೋದು. ಒಂದೊಂದ್ ಸಲ ಅನ್ನ ನೀರು ಎಲ್ಲಾ ನನ್ನೊಳಗೆ ಹೋಗಿ ಬಿಡುತ್ತಪ್ಪ. ನಾರ್ಮಲ್ ಫೋನ್ ನಮಗೂ ರೆಸ್ಟ್ ಬೇಡ್ವಾ, ನಾವೇನ್ charge ಅಗೋದು ಬೇಡ್ವಾ? ಒಂದು ಸಲ ತಗೊಂಡ್ ಮೇಲೆ ಪೂರ್ತಿ ಇವರ ಗುಲಾಮ್ರಾ?

ಸ್ಮಾರ್ಟ್ ಫೋನ್ 1:
ನಾವ್ ಇವರಿಗೆಲ್ಲಿ ಗುಲಾಮ್ರು? ಇವ್ರು ನಮ್ಮ ಗುಲಾಮ್ರು, ಮಾಡೋ ಕೆಲ್ಸ ಎಲ್ಲ ಬಿಟ್ಟು ನಮ್ಮ್ ಹಿಂದೆನೇ ಬಿದಿರ್‍ತಾರೆ

ಸ್ಮಾರ್ಟ್ ಫೋನ್ 2:
ಈಗಂತೂ, ಪಿಚ್ಚರ್ರು, ಗ್ಯಾಸ್, ಬ್ಯಾಂಕು, ಲೈಟು ಬಿಲ್ಲು ಎಲ್ಲದಕ್ಕೂ ನಾವೇ ಬೇಕು ನಾರ್ಮಲ್ ಫೋನ್ ಏನ್ ನಮ್ಮನ್ನ ಬಿಟ್ರೆ ಜೀವನನೇ ಇಲ್ಲ ಅನ್ನೋ ಹಾಗೆ. ಮಧ್ಯೆದಲ್ಲಿ ಕರೆನ್ಸಿ ಮುಗ್ದೋಬೇಕು ಅವಾಗ ಇವರ ಮುಖ ನೋಡ್ಬೇಕು..

ಸ್ಮಾರ್ಟ್ ಫೋನ್ 1:
ನಮ್ಮನ್ನ charge ಮಾಡೋವಾಗ್ಲೂ ಏನಪ್ಪ ಇವರ ಗೋಳು,ಆವಗ್ಲೂ ಮಾತಾಡ್ ಬೇಕಾ? ನಾರ್ಮಲ್ ಫೋನ್ ಅದಕ್ಕೆ ನಮ್ಮವನೊಬ್ಬ ಮೊನ್ನೆ ಒಳ್ಳೆ ಕೆಲ್ಸ ಮಾಡಿದ್ದಾನೆ. Charge ಮಾಡ್ಕೋಂಡು ಮಾತಾಡ್ತಿನಂತೆ ಒಬ್ಬ, ಕೆನ್ನೆಗೆ ಸರಿಯಾಗಿ ಕರೆಂಟ್ ಹೊಡಿಯೋ ಹಾಗೇ ಮಾಡಿದ್ದಾನೆ.. ಸುಟ್ಟೋಯ್ತೋಂತೆ ಮುಖ

ಸ್ಮಾರ್ಟ್ ಫೋನ್ 1:
ಏನೋಪ್ಪ ಜಗತ್ತು ಎಷ್ಟು ಚೆನ್ನಾಗಿದೆ, ನೋಡ್ರೋ ಅಂದ್ರೆ ನೋಡಲ್ಲ, ಎಲ್ಲಾ ಫೋಟೋನೇ ಹಿಡಿಬೇಕು. ನನ್ನೊಳಗಂತೂ ಅದೆಷ್ಟು ಫೋಟೊಗಳು ತುಂಬಿಸಿದ್ದಾರೆ ಅಂದ್ರೆ ನಾನು ಎಷ್ಟು ಭಾರ ಇದ್ದೀನೋ ನನಗೆ ಗೊತ್ತಿಲ್ಲ

ಸ್ಮಾರ್ಟ್ ಫೋನ್ 2:
ಅದರಲ್ಲಿ ಈ Selfieಗಳು ಬೇರೆ. ಎಲ್ಲಿ ಹೋದ್ರೂ ಎಲ್ಲರಿಗೂ ಗೊತ್ತಾಗ್ ಬೇಕಲ್ಲಾ?angle angle ನಲ್ಲಿ ಹಿಡಿಯೋದು ಆ ಫೇಸ್ ಬುಕ್ಕಿಗೆ ಹಾಕೋದು. ಈಗೀಗ ನಾವು ಕನ್ನಡಿ ಬೇರೆ ಆಗೋಗಿದ್ದೀವಿ. ವಿಡಿಯೋ ಆನ್ ಮಾಡ್ಕೋಳೋದು ಮೇಕಪ್ಪ್ ಮಾಡ್ಕೋಳೊದು. ಸರಿ ಹೋಯ್ತು.

ಸ್ಮಾರ್ಟ್ ಫೋನ್ 1:
ಹಿಂಗೆ ಮಾಡ್ಕೊಳ್ಳೋವಾಗ್ಲೇ ನನ್ನ ಯಾರೋ ಕದ್ದು ಮಾರಿಕೊಂಡಿದ್ದು, ಈಗ ನಾನು ಇರೋದು ಮೂರನೇ ಬಾಸ್ ಹತ್ರ.

ನಾರ್ಮಲ್ ಫೋನ್ ಹೋಗ್ಲಿ ಬಿಡ್ರಪ್ಪ, ಯಾರತ್ರ ಹೇಳ್ಕೊಳಣ್ಣ ನಮ್ಮ problem. ನಂದಂತೂ ಮುಗಿತಾ ಬಂತು ಜೀವನ, ಇನ್ನೊಂದು ಎರಡು ನಂಬರ್ ಅಳಿಸೋದ್ರೆ , ನೆಮ್ಮದಿಯಿಂದ ಕಣ್ಣ್ ಮುಚ್ಚ್ಕೋತ್ತೀನಿ.

ಸ್ಮಾರ್ಟ್ ಫೋನ್ 2:   
ಆಯ್ಯೋ ನಮ್ದುನೂ ಅಷ್ಟೇ ಬಾರಪ್ಪ.ಮೊದಲಿನ ಥರ ನಾಲ್ಕೈದು ವರ್ಷ ಎಲ್ಲಾ ಬರೋಲ್ಲ ನಾವು. ಬರೋವಾಗ್ಲೇ ಕಂಪನಿಯವರು ಹೇಳಿ ಕಳ್ಸಿದ್ದಾರೆ ಎರಡು ವರ್ಷ ಆದ್ ಮೇಲೆ ನಾಟಕಗಳು ಶುರು ಮಾಡ್ಕೊಳ್ಳಿ ಅಂತಾ

ಸ್ಮಾರ್ಟ್ ಫೋನ್ 1: 
ನನಗೂ ಅಷ್ಟೆ.ಅದಕ್ಕೆ ನಾನು ಒಳ್ಳೆ ಟೈಮ್ ನೋಡ್ಕೊಂಡು ಸ್ವಿಚ್ಚ್ ಆಫ್ ಆಗೋದು, ನೆಟ್ ವರ್ಕ್ ಕೆಡಿಸ್ಕೊಳ್ಳೋದು ಎಲ್ಲಾ ಮಾಡ್ತಿನಿ. ಅವರಿಗೇ ಬೇಜಾರ್ ಆಗಿ ನಮಗೆ ಮುಕ್ತಿ ಕೊಡ್ಲಿ ಅಂತ ನಾರ್ಮಲ್ ಫೋನ್ ನಮಗೇನೋ ಮುಕ್ತಿ ಬಿಡು, ಪಾಪ ಅವರ ಕತೆ ಹೇಳು, ನಮ್ಮಿಂದ ಯಾವಾಗ ಅವರಿಗೆ ಮುಕ್ತಿ?

ಸ್ಮಾರ್ಟ್ ಫೋನ್ 2: 
ನಮ್ಮನ್ನ ಪಕ್ಕಕ್ಕಿಟ್ಟು, ಎಷ್ಟು ಬೇಕೋ ಅಷ್ಟು ಉಪಯೋಗಿಸಿಕೊಂಡು ಕಣ್ಣ್ ಮುಂದೆ ಇರೋ ಪ್ರಕೃತಿ ಪರಿಸರ, ಜನ, ಪ್ರಾಣಿ ವಾತವಾರಣ ಎಲ್ಲಾ ಪ್ರೀತಿಸಿ  ಮನುಷತ್ವ ಕಾಪಾಡ್ ಕೊಂಡ್ರೆ ಉಳಿತ್ತಾರೆ. Selfieಗಳನ್ನ ಕ್ಲಿಕ್ ಮಾಡ್ಕೋಂಡು selfish ಆಗಿ ಮುಂದುವರಿದರೆ ನಮ್ಮ ಥರನೇ ಯಂತ್ರಗಳಾಗ್ತಾರೆ ಅಷ್ಟೆ. ಎಲ್ಲಾ ಅವರ ಕೈಲೇ ಇದೆ.

ಸ್ಮಾರ್ಟ್ ಫೋನ್ 1: 
ಸರಿ .. ಬನ್ರಪ್ಪ ಬೆಳಗಾಯ್ತು ಇನ್ನೂ ಶುರು ನಮ್ಮ ವನವಾಸ…….ದಿನಾ ಎಲ್ಲಾ ಏನೇನು ಕಾದಿದ್ಯೋ?

-ಪ್ರಶಾಂತ್ ಇಗ್ನೇಶಿಯಸ್

Friday, 13 February 2015

ವಿಶ್ವಕಪ್ ಕ್ರಿಕೆಟ್ ಹಾಗೂ ಭಾರತ

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಬರುವ ಕ್ರಿಕೆಟ್ ವಿಶ್ವ ಕಪ್ ಬಂದಿದೆ. ಕ್ರಿಕೆಟ್ ಹುಚ್ಚಿನ ಭಾರತದ ಜನರ ದಿನಚರಿ ಕ್ರಿಕೆಟ್ ಮ್ಯಾಚಿನ ವೇಳಾಪಟ್ಟಿಗೆ ಅನುಗುಣವಾಗಿ ಬದಲಾಗುವುದರಲ್ಲಿ ಸಂಶಯವೇ ಇಲ್ಲ. ಮುಂದಿನ ಒಂದೆರೆಡು ತಿಂಗಳು ಈ ರೀತಿಯ ಮಾತುಗಳನ್ನು ಕೇಳಬಹುದು :

 ತಂದೆ: ಹೇ ಏನೋ ಇನ್ನೂ ಮಲಗಿದ್ದಿಯಾ, ನಡಿ ನಡಿ ದೇವಸ್ಥಾನಕ್ಕೆ ಹೋಗಿ ಬರೋಣ, ಜವಬ್ದಾರಿ ಇಲ್ಲ, ದೇವರು ದಿಂಡರು ಭಯ ಭಕ್ತಿ ಇಲ್ಲ
ಮಗ : ಅಯ್ಯೋ ಹೋಗಪ್ಪ ನಾನು ದೇವಸ್ಥಾನಕ್ಕೆ ಸಾಯಂಕಾಲ ಹೋಗೀನಿ, ಇವತ್ತು ಇಂಡಿಯಾ ಪಾಕಿಸ್ತಾನ್ ಮ್ಯಾಚ್ ಇದೆ
ತಂದೆ : ಹೌದ??? ಸರಿ ನಾನೂ ಸಾಯಂಕಾಲನೇ ಹೋಗ್ತಿನಿ ಬಿಡು..ದೇವಸ್ಥಾನ ರಾತ್ರಿ ತನಕ ತೆಗ್ದಿರುತ್ತೆ

ತಾಯಿ ಮಗಳಿಗೆ : ಅದೇನು ಓದ್ಕೋಬೇಕೋ ಎಲ್ಲಾ ಇವತ್ತೇ ಓದ್ಕೋ ನಾಳೆ ಮ್ಯಾಚ್ ಇದೆ. ಅದಿದ್ರೆ ಬುಕ್ಕ್ ಮುಟ್ಟೋಲ್ಲ ನೀನು.

ಗಂಡ ಹೆಂಡತಿಗೆ : ಅದೇನ್ ಮಾಡ್ತಿಯೋ ಗೊತ್ತಿಲ್ಲ, ಎಲ್ಲಿ ಟೀವಿ ನೋಡ್ತಿಯೋ ಗೊತ್ತಿಲ್ಲಮ್ಯಾಚ್ ಬಿಟ್ಟು ನಾನು ಬೇರೆ ಚಾನೆಲ್ಲ್ , ಸೀರಿಯಲ್ ಹಾಕೊಲ್ಲ
ಹೆಂಡತಿ ಗಂಡನಿಗೆ : ನೀವು ಅದೇನು ಮಾಡ್ತೀರೋ ಗೊತ್ತಿಲ್ಲ, ಎಲ್ಲಿ ತಿಂತಿರೋ ಗೊತ್ತಿಲ್ಲ, ನಾನೂ ಮ್ಯಾಚ್ ನೋಡ್ಕೊಂಡ್, ಉಪ್ಪಿಟ್ಟು ಬಿಟ್ಟು ಬೇರೆ ಅಡುಗೆ ಮಾಡೊಲ್ಲ

ವೃದ್ಧ ಹೆಂಡತಿ : ರೀ ನೋಡ್ರಿ ನಿಮ್ಮ ಫೋನ್ ಹೊಡ್ಕೊತ್ತಿದೆ, ಮಗ ಅಮೆರಿಕಾ ಇಂದ ಫೋನ್ ಮಾಡಿದ್ದಾನೆ
ವೃದ್ಧ ಗಂಡ   : ಅಯ್ಯೋ ಇರ್‍ಲಿ ಇರೆ, ಒಳ್ಳೆ Power Play ನಡಿವಾಗ್ಲೇ ಯಾವಾಗ್ಲೂ ಫೋನ್ ಮಾಡ್ತಾನೆ, ಅಪ್ಪ ಮಲ್ಗಿದ್ದಾರೆ ಅಂತ ಹೇಳ್ಬಿಡೆ.

ಪಕ್ಕದ ಮನೆಯವರು : ರೀ ಸುಜಾತ , ನೋಡ್ರಿ ನಿಮ್ಮ ಪಾಪು ಮಣ್ಣಲ್ಲಿ ಆಟ ಆಡ್ತಿದೆ, ಮೈಯೆಲ್ಲಾ ಮಣ್ಣ್ ಮಾಡ್ಕೊಂಡಿದೆ
ಸುಜಾತ : ಅಯ್ಯೋ ಆಡ್ಲಿ ಬಿಡ್ರಿ, ನೀರು ಕಾಯ್ಸೋಕ್ಕೆ ಇಟ್ಟಿದ್ದೀನಿ, last 5 overs ನೋಡ್ಕೊಂಡು ಸ್ನಾನ ಮಾಡಿಸ್ತೀನಿ. ಮಕ್ಕಳಿಗೆ ಮಣ್ಣ್ ಒಳ್ಳೆದೇ.

ಇವೆಲ್ಲಾ ತಮಾಷೆ ಅನಿಸಿದರೂ ಭಾರತದ ಮಟ್ಟಿಗೆ ಸ್ವಲ್ಪ ಮಟ್ಟಿಗೆ ನಿಜವೂ ಹೌದು. ಕ್ರಿಕೆಟ್ ಆಡುವುದು ಕೆಲವೇ ದೇಶಗಳು ಮಾತ್ರ ಎನ್ನುವುದು ನಿಜವಾದರೂ ಕಳೆದ ವರ್ಷಗಳಲ್ಲಿ ಅದು ಪಡೆದಿರುವ ಜನಪ್ರಿಯತೆ ಅಗಾಧ. ನೂರಾರು ದೇಶಗಳಲ್ಲಿ ಕ್ರಿಕೆಟ್ ಹುಚ್ಚು ಈಗಾಗಲೇ ಹರಡಿ ನಿಂತಿದೆ. ಇನ್ನೂ ಭಾರತಕ್ಕೂ ಕ್ರಿಕೆಟ್ಟಿಗೂ ದಶಕಗಳ ನಂಟಿದ್ದರೂ ಕಳೆದ 30  ವರ್ಷಗಳಲ್ಲಿ ಅದು ಬೆಳೆದು ನಿಂತಿರುವ ಪರಿ ಅಚ್ಚರಿ ಮೂಡಿಸುತ್ತದೆ.

ಅದು 1983ರ ಜೂನ್ 25 ರ ಭಾನುವಾರ. ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ವಿಶ್ವ ಕಪ್ ಫೈನಲ್ ಪಂದ್ಯ. ಭಾರತ ಫೈನಲಿಗೆ ಬಂದಿರುವುದೇ ಅಚ್ಚರಿ, ಅದೃಷ್ಟ ಎಂಬ ಹಿಯಾಳಿಕೆಯ ಮಾತುಗಳು ಕೇಳಿ ಬರುತ್ತಿದ್ದವು. ತನ್ನಗಿಂತ ಬಲಿಷ್ಠವಾದ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ , ಪಾಕಿಸ್ತಾನ ತಂಡಗಳನ್ನು ಹಿಂದಿಕ್ಕಿ ಭಾರತ ಫೈನಲ್ ತಲುಪಿತ್ತು. ಎದುರಾಳಿಯಾಗಿದ್ದು ಆ ಕಾಲದ ದೈತ್ಯ ತಂಡವಾದ ವೆಸ್ಟ್ ಇಂಡೀಸ್. ಸೋಲ್ಲಿಲ್ಲದ ಸರದಾರರಂತೆ ಮೆರೆಯುತ್ತಿದ್ದ ವಿಂಡೀಸ್ ಆಗಾಗಲೇ ಹಿಂದಿನ ಎರಡೂ ವಿಶ್ವಕಪ್ಪನ್ನು ಗೆದ್ದು ಮೂರನೆಯದತ್ತ ದಾಪುಗಾಲಿಕ್ಕಿತ್ತು. ಎಲ್ಲರೂ ಭಾರತ ಧೂಳಿಪಟವಾಗುತ್ತದೆ ಎಂದು ನಿರೀಕ್ಷಿಸಿದಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ಕೇವಲ 183ಕ್ಕೆ ಔಟಾಗಿತ್ತು.


ಇದನ್ನು ಬೆನ್ನೆತ್ತಿ, ಕೇವಲ 27 ಚೆಂಡುಗಳಲ್ಲಿ 33 ರನು ಚಚ್ಚಿದ್ದ ಅಂದಿನ ಮಿಂಚಿನ ಬ್ಯಾಟ್ಸ್ ಮೆನ್ ವಿವಿಯನ್ ರಿಚರ್ಡ್ಸ್ ಸಿಕ್ಸರ್ ಹೊಡೆಯುವ ಭರದಲ್ಲಿ ಗಾಳಿಯಲ್ಲಿ ಎತ್ತಿದ್ದ ಚೆಂಡು ಮೇಲೆ ಸಾಗುತ್ತಿದ್ದಂತೆ ಎಲ್ಲರ ಕಣ್ಣು ಬೌಂಡರಿಯತ್ತ. ಆದರೆ ನೆಲದ ಮೇಲೆ ಸುಮಾರು 30 ಮೀಟರಿನಷ್ಟು ದೂರ ಚೆಂಡಿನ ಮೇಲೆಯೇ ಕಣ್ಣಿಟ್ಟು ಹಿಂದೆ ಹಿಂದೆ ಓಡಿ ಬರುತ್ತಿದ್ದದ್ದು ಭಾರತದ ನಾಯಕ ಕಪಿಲ್ ದೇವ್. ಅತನೊಬ್ಬ ಅದ್ಭುತ ಫೀಲ್ಡರ್. ಚೆಂಡು ಬೌಂಡರಿ ದಾಟದೇ ಸುರಕ್ಷಿತವಾಗಿ ಕಪಿಲ್ ಕೈ ಸೇರಿತು. ಕ್ರೀಡಾಂಗಣದಲ್ಲಿ ಮಿಶ್ರ ಪ್ರತಿಕ್ರಿಯೆ. ವಿಂಡೀಸ್ ನ  ಪ್ರೇಕ್ಷಕರ ಮುಖದಲ್ಲಿ ದಿಗ್ಭ್ರಮೆ, ಭಾರತದ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಾ, ಮೈದಾನದೊಳಗೆ ನುಗ್ಗಿ , ಸಿಕ್ಕ ಸಿಕ್ಕವರನ್ನು ಅಪ್ಪಿ ಮುದ್ದಾಡಿದರು.  ತಟಸ್ಥ ಅಭಿಮಾನಿಗಳ ಮನದಲ್ಲಿ ಕಾತರ.
ಮುಂದೆ ಭಾರತ ಪಂದ್ಯ ಗೆದ್ದೇ ಬಿಡುತ್ತದೆ. ಇತಿಹಾಸವೊಂದು ನಿರ್ಮಾಣವಾಗಿ, ಮುಂದೆ ಕ್ರಿಕೆಟ್ ಜಗತ್ತಿನಲ್ಲಾದ ಅನೇಕ ಚಾರಿತ್ರಿಕ
ಬದಲಾವಣೆಗಳಿಗೆ ಈ ಗೆಲುವು ಮುನ್ನುಡಿಯಾಗುತ್ತದೆ. ಮೊದಲೇ ಕ್ರಿಕೆಟ್ ಹುಚ್ಚಿದ್ದ ದೇಶದ ಗಲ್ಲಿ ಗಲ್ಲಿಯಲ್ಲೂ ಆಟಗಾರರು ಹುಟ್ಟಿಕೊಳ್ಳುತ್ತಾರೆ. ಟಿ.ವಿ ಪ್ರೇಕ್ಷಕ ವೃಂದ ದುಪ್ಪಟ್ಟಲ್ಲ ಹತ್ತರಷ್ಟಾಗುತ್ತದೆ.

ಭಾರತ್ದ ಈ ಜಯಭೇರಿ ಅನೇಕ ಬದಲಾವಣೆಗಳನ್ನು ತಂದಿತು. ಇಂಗ್ಲೆಂಡ್ ಬಿಟ್ಟು ಎಂದೂ ಹೊರಗೆ ನಡೆಯದ ವಿಶ್ವಕಪ್ 1987ರಲ್ಲಿ ಭಾರತದ ಉಪಖಂಡದಲ್ಲಿ ನಡೆಯುತ್ತದೆ. ಭಾರತ, ಶ್ರೀಲಂಕಾ, ಪಾಕಿಸ್ತಾನದಲ್ಲಿ ನಡೆದ ಆ ಟೊರ್ನಿ ದೊಡ್ಡ ಮಟ್ಟದ ಯಶಸ್ಸು ಪಡೆದು ಈ ವಿಶ್ವ ಮಟ್ಟದ ಸರಣಿಗಳು ಆಸ್ಟ್ರೇಲಿಯಾ, ಇಂಗ್ಲೆಂಡ್ ಗೆ ಮಾತ್ರ ಸಾಧ್ಯ ಎಂಬ ನಂಬಿಕೆಯನ್ನು ಅಳಿಸಿ ಹಾಕುತ್ತದೆ. ಒಂದು ದಿನದ ಕ್ರಿಕೆಟ್ಟಿನಲ್ಲಿ ವೆಸ್ಟ್ ಇಂಡೀಸ್ ನ ಆಧಿಪತ್ಯವನ್ನು ಅಳಿಸಿದ ಭಾರತ, ಕ್ರಿಕೆಟ್ ಆಡಳಿತದಲ್ಲೂ ತಾವು ಸಮರ್ಥರು ಎಂಬುದನ್ನು ಸಾಬೀತು ಪಡಿಸುತ್ತದೆ.

ಮುಂದೆ ಕೇಬಲ್ ಹಾಗೂ ಸ್ಯಾಟಲೈಟ್ ಟಿ.ವಿ ಬಂದ ಮೇಲಂತೂ ಟಿ.ವಿ ಪ್ರೇಕ್ಷಕರಿಂದಾಗಿ ಭಾರತ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗುತ್ತದೆ. ಇಂದು ವಿಶ್ವ ಕ್ರಿಕೆಟ್ ಮೇಲೆ ಭಾರತದ ಪ್ರಭಾವ ಎಷ್ಟಿದೆ ಎಂದರೆ, ಭಾರತ ಕ್ರಿಕೆಟ್ ಪ್ರೇಕ್ಷಕರ ಮೇಲೆಯೇ ಒಂದು ಇಡೀ ಟೋರ್ನಿ ಅವಲಂಬಿತವಾಗಿದೆ. ವಿಶ್ವ ಕ್ರಿಕೆಟ್ ಅನ್ನು ನಡೆಸುತ್ತಿರುವ ಐ.ಸಿ.ಸಿ ಯ ಆದಾಯದಲ್ಲಿ ಸುಮಾರು 60ಕ್ಕಿಂತಲೂ ಹೆಚ್ಚು ಪಾಲು ಭಾರತದ ಪ್ರಾಯೋಜಕರಿಂದಲೇ ಬರುತ್ತಿದ್ದೂ, ಭಾರತ ತಂಡದ ಭಾಗವಹಿಸುವಿಕೆಯ ಮೇಲೆ ಅದು ನಿಂತಿದೆ. 2007ರಲ್ಲಿ ಲೀಗ್ ಹಂತದಲ್ಲೇ ಭಾರತ ಸೋತು ಮರಳಿದ ಮೇಲೆ, ವಿಶ್ವಕಪ್ ನ ಮುಂದಿನ ಪಂದ್ಯಗಳು ತನ್ನ ಕಳೆಯನ್ನೇ ಕಳೆದುಕೊಂಡಿದ್ದು ಮಾತ್ರವಲ್ಲದೆ ಟಿ.ವಿ ಪ್ರಾಯೋಜಕರ ನಿರುತ್ಸಾಹವನ್ನು ವಿಶ್ವ ಕ್ರಿಕೆಟ್ ಪ್ರಿಯರು ಮರೆತಿರಲಾರರು.

ಇದು ವ್ಯವಹಾರದ ಮಾತಾದರೆ, ವಿಶ್ವಕಪ್ ಅಂಗಳದ ಆಟದಲ್ಲಿ ಸಹಾ ಭಾರತದ್ದು ಮಿಂಚಿನ ಸಾಧನೆಯೇ. ವೆಸ್ಟ್ ಇಂಡೀಸ್ ನ ಪಾರಪತ್ಯ ಮುರಿದಂತೆ, ಹಿಂದಿನ ಮೂರು ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಗಲೋಟವನ್ನು ಕಳೆದ ವಿಶ್ವಕಪ್ಪಿನ ಕ್ವಾಟರ್ ಫೈನಲ್ಲಿನಲ್ಲಿ ತಡೆದದ್ದು ಸಹಾ ಭಾರತವೇ. ತನ್ನದೇ ನೆಲದಲ್ಲಿ ವಿಶ್ವಕಪ್ ಗೆದ್ದ ಏಕಮೇವ ದೇಶ ಭಾರತ. ಅಷ್ಟು ಮಾತ್ರವಲ್ಲದೆ ಭಾರತದ ಸಚಿನ್ ತೆಂಡೂಲ್ಕರ್ ರದು ವಿಶ್ವಕಪ್ಪಿನಲ್ಲಿ ಅಚ್ಚರಿಯ ಸಾಧನೆ. ಅತಿ ಹೆಚ್ಚು ರನ್ನು, ಅತಿ ಹೆಚ್ಚು ಶತಕ, ಅತಿ ಹೆಚ್ಚು ಅರ್ಧ ಶತಕ, ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ, ಒಂದು ಸರಣಿಯಲ್ಲಿ ಅತಿ ಹೆಚ್ಚು ರನ್ನ್ ಹೀಗೆ ಸಾಗುತ್ತದೆ ಸಚಿನ್ ಸಾಧನೆ. ಆದರಿಂದಲೇ ಈ ವರ್ಷವೂ ಸೇರಿದಂತೆ ಸಚಿನ್ ವಿಶ್ವಕಪ್ಪಿನ ರಾಯಭಾರಿಯಾಗಿ ಸತತವಾಗಿ ಎರಡನೆಯ ಬಾರಿ ಆಯ್ಕೆಯಾಗಿದ್ದಾರೆ. ಇನ್ನೂ ಭಾರತದ ಸೆಹ್ವಾಗ್, ಯುವರಾಜ್, ಗಂಗೂಲಿ, ಡ್ರಾವಿಡ್, ದೋನಿ ಯಾವಾಗಲೂ ಕ್ರಿಕೆಟ್ ಪ್ರಿಯರ ಅಚ್ಚು ಮೆಚ್ಚಿನ ಆಟಗಾರರು ಎಂದು ಅಂಕಿ ಅಂಶಗಳು ಹೇಳುತ್ತದೆ. ಈ ಬಾರಿ ವಿರಾಟ್ ಕೊಹ್ಲಿ ವಿಶ್ವವು ಅತ್ಯಂತ ಭರವಸೆಯಿಂದ ನೋಡುತ್ತಿರುವ ಆಟಗಾರನಾಗಿ ಹೊರ ಹೊಮ್ಮಿದ್ದಾರೆ.

ಈ ಬಾರಿಯ ವಿಶ್ವಕಪ್ಪ್ ನಿಜಕ್ಕೂ ಅತ್ಯಂತ ಸ್ಪರ್ಧಾತ್ಮಕವಾದ ಸರಣಿಯಾಗುವುದರಲ್ಲಿ ಸಂಶಯವಿಲ್ಲ. ಎಲ್ಲಾ ತಂಡಗಳಲ್ಲಿಯೂ ಪ್ರತಿಭಾವಂತ ಯುವ ಆಟಗಾರರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳಲು ತುದಿಗಾಲಿನಲ್ಲಿ ಇದ್ದಾರೆ. ತನ್ನದೇ ನೆಲದಲ್ಲಿ ಆಡುತ್ತಿರುವ ಅಸ್ಟ್ರೇಲಿಯಾ, ಯುವ ತಂಡವಾದ ನ್ಯೂಜಿಲೆಂಡ್ ಬಲಿಷ್ಠ ತಂಡಗಳೆನಿಸಿಕೊಂಡರೂ, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನವನ್ನು ಎಂದಿಗೂ ಸ್ಪರ್ಧೆಯಿಂದ ಹಿಂದೆಗೆಯುವಂತಿಲ್ಲ. ವೆಸ್ಟ್ ಇಂಡೀಸ್ ಕೂಡ ಉತ್ತಮವಾದ ತಂಡವೇ. ಆಸ್ಟ್ರೇಲಿಯಾದ ಪುಟಿದೇಳುವ ಪಿಚ್ ಗಳಲ್ಲಿ ತಂಡಗಳು ಹೇಗೆ ತಮ್ಮನ್ನೇ ಒಗ್ಗಿಸಿಕೊಂಡು ಆಡುತ್ತವೆ ಎನ್ನುವುದರ ಮೇಲೆ ಅವುಗಳ ಯಶಸ್ಸು ಇದೆ.

ಒಟ್ಟಿನಲ್ಲಿ ಮುಂದಿನ ಒಂದು ತಿಂಗಳು ಕ್ರಿಕೆಟ್ ಹಬ್ಬ. ಈ ನಡುವೆ ನಮ್ಮ ವಿದ್ಯಾರ್ಥಿಗಳ ಪರೀಕ್ಷೆಯೂ ಬರುತ್ತದೆ. ಪೋಷಕರಿಗೆ, ಶಾಲೆಯ ಶಿಕ್ಷಕರಿಗೆ ಇದು ಇಕ್ಕಟಿನ ಪರಿಸ್ಥಿತಿ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಕೊಟ್ಟು ಸಮತೋಲನ ಕಾಪಾಡಿಕೊಳ್ಳಬೇಕಾಗುತ್ತದೆ.

ಕೊನೆಯಲ್ಲಿ, ಈ ಬಾರಿ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ನಮ್ಮ ಕರ್ನಾಟಕದ ಆಲ್ರೌಂಡರ್ ಸ್ಟುವರ್ಟ್ ಬಿನ್ನಿಗೆ ವಿಶೇಷವಾಗಿ ಹಾರೈಸೋಣ. ಅವರು ಸಹಾ ತಮ್ಮ ತಂದೆ ರೋಜರ್ ಬಿನ್ನಿಯವರ ರೀತಿಯಲ್ಲಿಯೇ ಯಶಸ್ವಿಯಾಗಲಿ ಎಂಬುದು ನಮ್ಮ ಹಾರೈಕೆ. 1983 ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ, ಆ ಸರಣಿಯಲ್ಲಿ ರೋಜರ್ ಬಿನ್ನಿಯವರೇ ಅತ್ಯಂತ ಯಶಸ್ವಿ ಬೌಲರ್ ಎಂಬುದನ್ನು ಮರೆಯಲು ಸಾಧ್ಯವೇ?


-ಪ್ರಶಾಂತ್ ಇಗ್ನೇಶಿಯಸ್