Friday, 1 March 2013

ನಾನೊಂದು ಸಣ್ಣ ನೆಪವಷ್ಟೇ


ನಿನ್ನ ಕೈಯಿಂದ ಜಾರಿ ಬಿದ್ದು
ಮಣ್ಣ ಹಾಸುಹೊಕ್ಕಿ
ಮೊಳಕೆಯೊಡೆಯುವ ತೀವ್ರತೆಯಿಂದ
ಹಾಕಿದ ಅಷ್ಟು ಇಷ್ಟುನೀರಲ್ಲಿ 
ಮಿಂದು ಮೊಳೆತ
ಕ್ರಿಯಾಶೀಲ ಪ್ರತೀಕ
ಒಂದು ಬೀಜ ನಾನು

ಋತುಗಳ ಬೆಚ್ಚನೆಯ ಶಾಖಕ್ಕೆ
ಜಗವು ಕೊಟ್ಟ ಬಗೆಬಗೆಯ ರದ್ದಾಂತಕ್ಕೆ
ಸೋಲ್ಲದೇ ಬಿದ್ದು ಎದ್ದು
ಎದ್ದು ಬಿದ್ದು ಎಲೆಗಳ ಸಮೃದ್ಧಿಯಲ್ಲಿ
ಮರವಾಗಲು ಬಯಸಿ ನಿಂತ
ಮನೋಭಿಲಾಷೆಯ
ಒಂದು ಸಸಿ ನಾನು

ಕಾಲಚಕ್ರವ ಕೂಡಿ
ಬೆಳೆದೆ ದಿನೇ ದಿನೇ ನೋಡಿ
ಬೇರು ಕಾಂಡ ರೆಂಬೆ ಕೊಂಬೆ ಎಲೆಗಳ
ಸಮೃದ್ಧಿಯ ಹಣ್ಣಿನ ರಸಸ್ಥಿತಿಯಲ್ಲಿ
ಪರಮಾಭಿವ್ಯಕ್ತಿಯಾದ
ಒಂದು ಮರ ನಾನು

ಯಾರೋ ಚಪಲಕ್ಕೆ
ನನ್ನನ್ನೇ ಮೈಯೊಡ್ಡಿ
ನೀಡಿ ಹಣ್ಣುಗಳ
ಕಣ್ಮರೆಯಾಗಿಬಿಡುವಷ್ಟೇ ನನ್ನ ಬದುಕಲ್ಲ
ಕೊಡುವಾತ ಮನಸ್ಸಿನ
ಪ್ರಕಟಾಭಿವ್ಯಕ್ತಿಗೆ ಉದರತೆಯ ಮನೋಭಿಲಾಷೆಯ
ಕ್ರಿಯಾಶೀಲ ರಸಸ್ಥಿತಿಯ ಪರಮಾಭಿವ್ಯಕ್ತಿಗೆ
ವಿಶ್ವಸೃಷ್ಠಿಯ ನಾನೊಂದು ಸಣ್ಣ ನೆಪವಷ್ಟೇ!!!

-ಜೋವಿ

Read more!

Wednesday, 6 February 2013

ಪೂರ್ವದಿಂದ ಬಂದ ರಾಯರು ಹಳ್ಳಿಗಳಲ್ಲೇ ಉಳಿದುಬಿಟ್ಟರು!

ಈ ಹಬ್ಬಕ್ಕೆ ಮೂರು ಅಂಶಗಳಿದ್ದರು ಮೂರು ರಾಯರದ್ದೇ ಪ್ರಧಾನ.  ಕ್ರಿಸ್ಮಸ್ ಹಬ್ಬಕ್ಕೆಂದು ಗೊದಲಿಯನ್ನು ಕಟ್ಟಿ ಮೂಲೆಯಲ್ಲಿಡುತ್ತಿದ್ದ  ೩ ರಾಯರನ್ನು ಅಂದು ತಂದು ಬಾಲಯೇಸುವಿನ ಬಳಿ ಇಡುವ ಮೂಲಕ ಇದು ಮೂರು ರಾಯರು ಸಂದರ್ಶಿಸಿದ ಹಬ್ಬವೆಂದೇ ನಮ್ಮ ಮನಗಳಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ವಿಶೇಷವೇನೆಂದರೆ ಮೂರೂರಾಯರು ಯೇಸುವನ್ನು ಸಂಧಿಸುವುದಕ್ಕೂ ಹಳ್ಳಿಗಳಲ್ಲಿ  ಆಚರಣೆಯಲ್ಲಿರುವಂತೆ ಜಾನುವಾರುಗಳನ್ನು ತೀರ್ಥದಿಂದ ಪ್ರೋಕ್ಷಿಸಿ ಆಶೀರ್ವದಿಸುವ ಅದೇ ದಿನಕ್ಕೂ ಅದ್ಯಾವ ಸಂಬಂಧ ಬೆಸೆದಿದೆಯೋ ಗೊತ್ತಿಲ್ಲ.


ದು ಜಾತ್ರೆ ಜಾತ್ರೆಯಂತಹ ಜನ ಜಂಗುಳಿ. ಊರಿಗೆ ಊರೇ ತಮ್ಮ ತಮ್ಮ ಮನೆ ಬಾಗಿಲ ಬಳಿ ನಿಂತು ತಮ್ಮ ಜಾನುವಾರುಗಳನ್ನೂ ಸಾಲಾಗಿ ನಿಲ್ಲಿಸಿ ಗುರುಗಳಿಂದ ಪ್ರೋಕ್ಷಿಸಲ್ಪಡುವ ತೀರ್ಥಕ್ಕೆ ಮೈಯೊಡ್ಡಿ ನಿಲ್ಲುವ ವಿಶ್ವಾಸನೀಯ ಗಳಿಗೆ. ಇದೊಂದು ಆಚರಣೆ ಕೂಡ. ಕೇವಲ ಹಳ್ಳಿಗಳಲ್ಲಿ ಮಾತ್ರವೇ ಕಂಡುಬರುವ ಹಬ್ಬದ ಸಂಪ್ರಾದಾಯಿಕ ಆಚರಣೆ. ಕ್ರಿಸ್ಮಸ್ ಹಬ್ಬದ ನಂತರ ಬರುವ ಮೊದಲ ವಾರ್ಷಿಕ ಹಬ್ಬ. ಇದುವೇ ಮೂರು ರಾಯರ ಹಬ್ಬ. ಕ್ರಿಸ್ತ ಜಯಂತಿಯ ೧೨ ನೇ ದಿನಕ್ಕೆ ಸರಿಯಾಗಿ ಈ ಹಬ್ಬ ಬರುತ್ತದೆಯಾದರೂ ಆ ದಿನದ ಮುಂದಿನ ಭಾನುವಾರದಂದು ಆಚರಿಸುವುದು ವಾಡಿಕೆ. ಈ ಹಬ್ಬವನ್ನು ಪೂರ್ವ ಕ್ರೈಸ್ತ ದೇಶಗಳು ಅತಿ ವಿಜ್ರಾಂಭಣೆಯಿಂದ ಆಚರಿಸುತ್ತವೆ ಎಂದು ಕೇಳಿದ್ದೇವೆ. ೩ ರಾಜರು ಪೂರ್ವದೇಶದಿಂದ ಬಂದರು ಎಂಬ ಉಲ್ಲೇಖಗಳೆ ಅದಕ್ಕೆ ಕಾರಣಗಳು ಇದ್ದಾವು. ಏನೇ ಆಗಲಿ ಇದು ಕ್ರಿಸ್ತನ ಆನೇಕ ಪ್ರಥಮಗಳ ಸಂಗಮದ ಹಬ್ಬ ಅಥವಾ ಕ್ರಿಸ್ತರು ದೈವಿಕ ಪ್ರಕೃತಿಯ ಕುರುಹುವಿನೊಂದಿಗೆ ಹಠಾತ್ ಬಹಿರಂಗಗೊಂಡ ದಿನವೆಂತಲೂ ಅರ್ಥೈಸಬಹುದು. ಅವುಗಳನ್ನು ಪಟ್ಟಿಮಾಡುವುದೇ ಆದರೆ; ಮೊದಲನೆಯದು, ಲೋಕಕ್ಕೆ ಬೆಳಕಾಗುವ ರಾಜನು ಈ ಕ್ರಿಸ್ತ ಎಂಬ ಸಂಕೇತವಾಗಿ ೩ ರಾಜರು ತಾರೆಯ ಬೆಳಕನ್ನು ಅನುಸರಿಸಿ ಬಂದು ಕ್ರಿಸ್ತನನ್ನು ಸಂಧಿಸಿ ಕ್ರಿಸ್ತನೆ ಜಗತ್ತಿನ ಮಹಾರಾಜ ಎಂದು ಪರಿಚಯಿಸಿದ ಹಬ್ಬ. ಎರಡನೆಯದು, ಯೇಸು ಸ್ನಾನಿಕ ಅರಲಪ್ಪರಿಂದ ಸ್ನಾನಾದೀಕ್ಷೆ ಪಡೆದು ತನ್ನನೇ ಲೋಕಾರ್ಪಣೆಮಾಡಿಕೊಂಡ ದಿನ. ಮೂರನೆಯದು, ಕಾನಾ ಮದುವೆಯಲ್ಲಿ ನೀರನ್ನು ದ್ರಾಕ್ಷರಸವನ್ನಾಗಿ ಪರಿವರ್ತಿಸಿ ತನ್ನ ದೈವೀ ಗುಣವನ್ನುಪ್ರಚುರಪಡಿಸಿದ ದಿನ. ಹೀಗೆ ಕ್ರಿಸ್ತನ ಮಹತ್ತರ ಪ್ರಥಮ ಹೆಜ್ಜೆಗಳ ಸಲುವಾಗಿ ಧರ್ಮಸಭೆ ಈ ಹಬ್ಬವನ್ನು ದೈವ ದರ್ಶನದ ಹಬ್ಬವನ್ನಾಗಿ ಆಚರಿಸುತ್ತದೆ. ಈ ಹಬ್ಬಕ್ಕೆ ಮೂರು ಅಂಶಗಳಿದ್ದರು ಮೂರು ರಾಯರದ್ದೇ ಪ್ರಧಾನ.  ಕ್ರಿಸ್ಮಸ್ ಹಬ್ಬಕ್ಕೆಂದು ಗೊದಲಿಯನ್ನು ಕಟ್ಟಿ ಮೂಲೆಯಲ್ಲಿಡುತ್ತಿದ್ದ  ೩ ರಾಯರನ್ನು ಅಂದು ತಂದು ಬಾಲಯೇಸುವಿನ ಬಳಿ ಇಡುವ ಮೂಲಕ ಇದು ಮೂರು ರಾಯರು ಸಂದರ್ಶಿಸಿದ ಹಬ್ಬವೆಂದೇ ನಮ್ಮ ಮನಗಳಲ್ಲಿ ಗಟ್ಟಿಯಾಗಿ ನೆಲೆಯೂರಿದೆ. ವಿಶೇಷವೇನೆಂದರೆ ಮೂರೂರಾಯರು ಯೇಸುವನ್ನು ಸಂಧಿಸುವುದಕ್ಕೂ ಹಳ್ಳಿಗಳಲ್ಲಿ  ಆಚರಣೆಯಲ್ಲಿರುವಂತೆ ಜಾನುವಾರುಗಳನ್ನು ತೀರ್ಥದಿಂದ ಪ್ರೋಕ್ಷಿಸಿ ಆಶೀರ್ವದಿಸುವ ಅದೇ ದಿನಕ್ಕೂ ಅದ್ಯಾವ ಸಂಬಂಧ ಬೆಸೆದಿದೆಯೋ ಗೊತ್ತಿಲ್ಲ.. ಯೇಸು ಹುಟ್ಟಿದ್ದು ದನಕರುಗಳ ಮಧ್ಯೆ ಎಂದಾಗಲಿ ಮೂರು ರಾಯರು ಒಂಟೆಗಳ ಮೇಲೆ ಪ್ರಯಾಣಿಸಿ ಬಂದರು,  ಒಂಟೆಗಳು ನಮ್ಮಲ್ಲಿ ಇಲ್ಲದ್ದರಿಂದ ದನಕರುಗಳ ರೂಪದಲ್ಲಿ ಅವುಗಳನ್ನೂ ಆಶೀರ್ವದಿಸಲಾಗುವುದು ಎಂದಾಗಲಿ ನಮ್ಮದೇ ಕಲ್ಪನೆಯಲ್ಲಿ ಆ ಅಚರಣೆಯನ್ನು ಅರ್ಥೈಸಿಕೊಂಡಿದ್ದೇವೆ. ಈ ಕಲ್ಪನೆ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ತಿಳಿದಿಲ್ಲ. ಆದರೂ ಇದನ್ನು ಆಚರಿಸುವ ಆಸಕ್ತಿ ಮಾತ್ರ ಅಸಾಧಾರಣ.    


 
ಹಳ್ಳಿಗರಿಗೆ ವ್ಯವಸಾಯವೇ ಜೀವನಾಂಶವಾದ್ದರಿಂದ ದನಕರು ಕುರಿ ಮೇಕೆಗಳು ಅವರ ಅವಿಭಾಜ್ಯ. ವರ್ಷಕ್ಕೊಮ್ಮೆ ಅವುಗಳನ್ನು ಗೌರವಿಸಿ ಸತ್ಕರಿಸುವ ಹಬ್ಬವನ್ನು ಇನ್ನೆಷ್ಟು ಮುತುವರ್ಜಿಯಿಂದ ಮಾಡಿಯಾರು ಉಹಿಸಿ.  ಉಹಿಸುವುದೇನು? ಅಂತಹ ಪ್ರದೇಶದಿಂದ ಹುಟ್ಟಿ ಬಂದ ನನ್ನಂತವನಿಗೆ ಆ ಚಿತ್ರಣವನ್ನು ಕಟ್ಟಿಕೊಡುವುದು ಕಷ್ಟಕರವೇನಲ್ಲ. ವರ್ಷಪೂರ ಕಷ್ಟಪಟ್ಟು ಗೇಮೆ ಗೈಯುವ ಜಾನುವಾರುಗಳನ್ನು ಅಂದು ಆದಷ್ಟು ಚೆಂದವಾಗಿ ಶೃಂಗರಿಸಿ ಮೆರವಣಿಗೆಗೆ ತರಬೇಕು ಎಂದು ಎಂತಹ ಬಡವನಿಗೂ ಅನಿಸದೇ ಇರದು. ಇದು ಅವನ ಮತ್ತು ಜಾನವಾರುಗಳ ನಡುವಿನ ಭಾಂಧವ್ಯ; ಅವುಗಳ ಕೊಂಬನ್ನು ನುಣುಪಾಗಿ ಒರೆದು, ಕೊಂಬನ್ನು ಅಂದಗೊಳಿಸುವುದರಿಂದ ಆರಂಭಗೊಳ್ಳುವ ಕಾಳಜಿ, ಮನೆಮಂದಿಯೆಲ್ಲ ದನಕರುಗಳ ಒಂದಲ್ಲ ಒಂದು ಸೇವೆಗೆ ನಿಂತುಬಿಡುವಂತೆ ಮಾಡುತಿತ್ತು. ಒಬ್ಬರಿಂದ ಕೊಂಬನ್ನು ಮೊನಚುಗೊಳಿಸುವ ಮುತುವರ್ಜಿ. ಜೊತೆಯಲ್ಲೇ ಮೇವು ತಿನ್ನಿಸಿ ಹೊಟ್ಟೆ ಭರ್ತಿಮಾಡುವ ಮತ್ತೊಬ್ಬನ ಅವಸರ. ಅಳಿದುಳಿದ ಜಾಗವನ್ನು ತೊಳೆದು ಸ್ವಚ್ಚಗೊಳಿಸುವುದು ಉಳಿದೊಬ್ಬನಿಗೆ ಬಿಟ್ಟು ಕೆಲಸ. ಇದಕ್ಕೆ ಬೇಸರಿಸಿಕೊಂಡ ವರದಿಯಾಗಿಲ್ಲ. ಈ ವಿಷಯದಲ್ಲಿ "ಪಾಲಿಗೆ ಬಂದದ್ದೆ ಪಂಚ ಮೂತ್ರ".... ಪಾಪ ಅವುಗಳು ತಾನೇ  ಏನು ಮಾಡಿಯಾವು! ಅಷ್ಟು ಜನರ ಶೂಶ್ರುಷೆ ಒಟ್ಟಿಗೆ ನೋಡಿದ ಗಾಬರಿಗೆ ಆಗಾಗ ಮೂತ್ರ ಮಾಡುವುದು ಅವತ್ತಿನ ಸಾಮಾನ್ಯ. ಇದೆಲ್ಲ ಮುಗಿಯುವ ಹೊತ್ತಿಗೆ ಎಲ್ಲರೂ ದೌಡಾಯಿಸಿ ಊರಿನ ವೃತ್ತ(ಊರಿಗೆ ಇರುತ್ತಿದ್ದ ಒಂದೇ ಒಂದು Circle)ದಲ್ಲಿ ಅರವಿಕೊಂಡ ಅಂಗಡಿಗಳಿಗೆ ಮುತ್ತಿಗೆಹಾಕಿ ವ್ಯಾಪಾರಕ್ಕಿಳಿಯುವ ಜನರು, ಪರಸ್ಪರ ಏನೇನು ಅಲಂಕಾರಿಕ ವಸ್ತುಗಳನ್ನು ಕೊಂಡೆವು, ಆ ಅಂಗಡಿಯ ಬೆಲೆ ಈ ಅಂಗಡಿಯಲ್ಲಿನ ಬೆಲೆ ತಾಳೆ ಮಾಡಿ ತರುವಷ್ಟರಲ್ಲಿ ದೊಡ್ಡ ಡೀಲ್ ಮುಗಿದಂತೆ.

ಅಂಗಡಿಯವರೇನು ಸಾಮಾನ್ಯನೇ. ಬೆಲೆಗೆ ತಕ್ಕ ಸಭೂಬು ಉಚಿತವಾಗಿ ಕೊಡುತ್ತಿದ್ದ. ಇವರೆಲ್ಲರು ಅದೇ ಊರಿನವರಲ್ಲ ಅಕ್ಕ ಪಕ್ಕದ ಊರಿನಲ್ಲಿರುವ ವ್ಯಾಪಾರಸ್ಥರು. ಈ ವಾರ್ಷಿಕ ದಿನವನ್ನು ಮುಂಗಡವಾಗಿ ಗೊತ್ತುಪಡಿಸಿಕೊಂಡು ಎಲ್ಲ ಅಲಂಕಾರಿಕ ಸಾಮಾನುಗಳೊಂದಿಗೆ ಹಾಜರಾಗುತ್ತಿದ್ದರು. ರಸ್ತೆಯ ಬದಿಯಲ್ಲಿ, ಮನೆಯ ಜಗುಲಿಗಳಲ್ಲಿ ಮಾರಗಲ ಜಾಗಸಿಕ್ಕರೆ ಸಾಕು ಥೇಟ್ ಅಂಗಡಿಗಳಂತೆ ಮಾಡಿಬಿಡುತ್ತಿದ್ದರು. ಹಿಂಬದಿ ಗೋಡೆಗೆ ತರಾವರಿ ಬಣ್ಣದ ಮಾಲೆಗಳನ್ನು ನೇತುಹಾಕಿ ಅಂಗಡಿಗೊಂದು ಅಂದ ಕೊಡುತ್ತಿದ್ದರು. ತಾವು ಅರವಿಟ್ಟುಕೊಂಡ ಅಂಗಡಿಯ ಅಳತೆಗಾಗಿ ಆ ಬದಿ ಈ ಬದಿಯಲ್ಲಿ ದನಕರುಗಳಿಗೆ ಕಟ್ಟುವ ಮೂಗುದಾರಗಳು, ಕರಿಹಗ್ಗವನ್ನು ಸಿಕ್ಕಿಸಿಬಿಟ್ಟು, ತಮ್ಮ ಮುಂದೆ ವಿವಿಧ ಬಣ್ಣದ ಡಬ್ಬಗಳು, ಕುಂಚ,  ಬಲೂನು, ಚಿನಾರಿ ಕಾಗದ, ಮತ್ತು ಸೂರ್ಯಕಾಂತಿಯಂತೆ ಕಾಣುವ ಬಣ್ಣಬಣ್ಣ್ದ ವಿನ್ಯಾಸಗಳನ್ನು ಬಿಡಿಸಿಟ್ಟುಕೊಂಡು ಅಪ್ಪಂದಿ ರೊಂದಿಗೆ ಬರುವ ಮುದ್ದು ಮಕ್ಕಳನ್ನು ಆಕರ್ಷಿಸಲು ಸಣ್ಣ ಪುಟ್ಟ ಅಟಸಾಮಾನುಗಳನ್ನೂ ಇಟ್ಟುಕೊಂಡು ಗಲ್ಲಪೆಟ್ಟಿಯ ಮೇಲೆ ಕೂತುಬಿಟ್ಟರೆ ಭರ್ಜರಿ ವ್ಯಾಪಾರ ಶುರು. ಬಂದ ಅಷ್ಟು ಜನರ ಗುಂಪನ್ನು ಒಮ್ಮೆಲೇ ನಿಭಾಯಿಸಿ ಎಲ್ಲರಿಗೂ ಸಂಯಮ ದಿಂದ ಉತ್ತರಿಸಿ ವ್ಯವಹರಿಸುವ ಜಾಣ್ಮೆ ಈ ಶೆಟ್ಟರುಗಳಿಗೆ ಮಾತ್ರವೇ ಬಂದ ಜನ್ಮತ ಕಲೆ ಎಂದು ಭಾವಿಸುತ್ತೇನೆ.  ಇನ್ನೂ ಮುಂದಿನ ದೇನಿದ್ದರೂ ಆ ಊರಿನ ಸ್ಪರ್ಧಾ ಜಗತ್ತು.

ಊರಿಗೆ ಊರೇ ತಮ್ಮ ಮನೆಗಳ ಮುಂದೆ ದನಕರುಗಳ ಸಿಂಗಾರ  ಕಾರ್ಯದಲ್ಲಿ ನಿರುತರಾಗಿದ್ದರೆ, ಆಟವಾಡುವ ಮಕ್ಕಳ ಒಂದು ದಂಡು ಬೀದಿ ಬೀದಿ ಬೇಟಿಕೊಟ್ಟು ಯಾರ ಕೈಂಕರ್ಯ ಹೆಚ್ಚು ಎಂದು ಅಂದಾಜಿಸಿ ಬರುತ್ತಿದ್ದರು. ಕೆಲವರಂತೂ ಮನೆಯ ಒಳ ಹಿತ್ತಲಿನಲ್ಲೇ ಹಸುಗಳನ್ನು ಸಿಂಗರಿಸುತ್ತಿದ್ದರು. ಏಕೆಂದರೆ ಇಂತಹ ದಂಡಿನಲ್ಲಿ ಎದುರಾಳಿಯ ಮಕ್ಕಳೇನಾದರೂ ಬಂದು ನೋಡಿಬಿಟ್ಟಾರು ಎಂಬ ಭಯ. ಅದು ಸ್ಪರ್ಧೆಯ ಮೊದಲೇ ಗುಟ್ಟು ಬಿಟ್ಟುಕೊಡದ ಗಟ್ಟಿ ನಿರ್ಧಾರ. ಒಟ್ಟಾರೆ ಆ ಘಳಿಗೆಯವರೆಗೂ ಸಸ್ಪೆನ್ಸ್. ಅನಂತರದ ತೋರಿಕೆಯೇ ಬೇರೆ. ಅವರದು ಹೀಗಿತ್ತು, ಅವರದು ಹಾಗಿತ್ತು, ಇವರದ್ದು ಎಲ್ಲರಿಗಿಂತಲೂ ಜೋರಾಗಿತ್ತು ಎಂಬ ಊರವರ ಪ್ರಶಂಸೆಯನ್ನು ವಾರಗಟ್ಟಲೇ ಕೇಳುವ ಭಾಗ್ಯಕ್ಕೆ ತಾವು ಪಾತ್ರರಾಗಬೇಕು ಎಂಬುದೇ ಮೂಲ ಆಸೆ. ಸಾಕಷ್ಟು ಶಕ್ತಿಮೀರಿ ಇರುವ ಐಡಿಯಾನೆಲ್ಲ ಬಳಸಿ ಸಿದ್ದತೆಯಲ್ಲಿ ತೊಡಗುತ್ತಿದ್ದರು. ಸಮಯ ಮೀರಿತೆನೋ ಎಂಬ ಗಗಾಬರಿಗೆ ಕೊನೆಗಳಿಗೆಯಲ್ಲಿ ಕಟ್ಟುತ್ತಿದ್ದ ಬಲೂನು, ಪೇಪರ್ ಮಾಲೆಗಳು ಆಕಾರ ಕಳೆದುಕೊಂಡು ಆಭಾಸ ಎನಿಸಿದರೂ "ಎಲ್ಲರ ಮನೆ ದೋಸೆನೂ ತೂತೆ" ಎಂಬ ಗಾದೆ ಇದ್ದೇ ಇದೆಯಲ್ಲ.. 

ಸಂಜೆ ಆಗುತ್ತಿದ್ದಂತೆ ಸರಿಯಾಗಿ ೪ ಕ್ಕೆ ದೇವಾಲಯದ ಗಂಟೆ ಬಾರಿಸುವುದರೊಂದಿಗೆ ಹಬ್ಬ, ಜಾತ್ರೆ, ಸ್ಪರ್ಧೆ, ಸಾಹಸದ ನಾಡಿಮಿಡಿತ ಹೆಚ್ಚಾಗುವುದು. ಊರಿನ ಎಲ್ಲ ದನಕರುಗಳು ಬಂದು ರಸ್ತೆಯುದ್ದಕ್ಕೂ ಸಾಲಾಗಿ ನಿಂತು ಗುರುವಿನ ಬರುವಿಕೆಗೆ ಕಾಯುವ ಸರಧಿ. ರಸ್ತೆಯ ಆಜುಬಾಜಿನಲ್ಲಿ ನಿಲ್ಲುವ ಜಾನುವಾರುಗಳ ಸೌಂದರ್ಯದ ಲೆಕ್ಕಾಚಾರ ಆಗ ಶುರು. ತಮ್ಮ ಇಡೀ ದಿನದ ಶ್ರಮಾದಾನ ಇಲ್ಲಿ ಪ್ರದರ್ಶನಕ್ಕಿಡಬೇಕಾಗಿತ್ತು. ದನಗಳನ್ನು ಮಾತನಾಡಿಸುವ ಶಬ್ಧಗಳಿಂದ ನೆರೆದ ಜನರ ಗಮನವನ್ನು ತಮ್ಮ ಸಿಂಗಾರಗೊಂಡ ಎತ್ತುಗಳ ಮೇಲೆ ಸೆಳೆಯುವ ಮಂತ್ರ. ಬಲ್ಲವರಿಗೆ ಗೊತ್ತು ಅವರ ತಂತ್ರ. ನೆರೆದವರೆಲ್ಲರೂ ಒಂದೇ ಕಡೆ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳಿ, ಅಲ್ಲಾವುದೋ ಒಂದು ಬೆದರಿದ ಎತ್ತು ಗುಂಪನ್ನು ಚದುರಿಸಿ ಧೂಳೆಬ್ಬಿಸಿರುವುದು ಖಾತ್ರಿ. ಅದನ್ನು ಹಿಡಿದು ಹತೋಟಿಗೆ ತರುವಂತಹ ಸಾಹಸಮಯ ಪಟ್ಟುಗಳನ್ನು ಯುವಕರು ಮಾಡುತಿದ್ದರು. ಮಾಡಿ ಬೀಗುತ್ತಿದ್ದರು. ಆ ಹುಡುಗರು ಕಟ್ಟಿಕೊಳ್ಳುವ ಹೆಣೈಕಳು ಅತ್ತ ಸುಳಿದಾಡಿದರೋ ಆ ಪಟ್ಟುಗಳು ಇನಷ್ಟು ಖಚಿತ. ಇದು ಹಸು-ಎತ್ತುಗಳ ಕಥೆಯಾದರೆ, ಕುರಿಮೇಕೆಗಳನ್ನು ಕಟ್ಟಿಕೊಂಡವರ ಕಥೆನೆ ಬೇರೆ. ಕುರಿ ಮೇಕೆಗಳು ಒಂದುಕಡೆ ನಿಲ್ಲುವ ಜಾತಿಯವಲ್ಲ. ಗುರುಗಳು ಬಂದು ಹೋಗುವವರೆಗೆ ಅವುಗಳನ್ನು ನಿಭಾಯಿಸುವ ಸಾಹಸ ಸವಾಲಿನ ಕೆಲಸ. ತೀರ್ಥ ಪ್ರೋಕ್ಷಣೆ ಮುಗಿದ ಮೇಲೆ ವಾಪಾಸು ಮನೆ ಸೇರುವ ಗೊಂದಲದಲ್ಲಿ ಯಾರದೋ ಕುರಿ ಮತ್ಯಾರದೋ ಕುರಿ ಮಂದೆಯೊಂದಿಗೆ ಸೇರಿ  ತಪ್ಪಿಸಿಕೊಂಡಿರುತ್ತಿತ್ತು. ಅದನ್ನು ಹುಡುಕಿ ಎಳೆತರುವುದರೊಳಗೆ ಮೂರು ರಾಯರು ಸವೆದ ದಾರಿ, ದುಗುಡ ಎಲ್ಲ ಪರಿಚಯವಾಗಿಬಿಟ್ಟಿರುತ್ತದೆ. ಈ ಎಲ್ಲ ಸಂದಣೀಯ ಮದ್ಯೆ ಎಮ್ಮೆಗಳ ದಂಡು ಬಂದು ಊರಿನ ಪ್ರಮುಖ ವೃತ್ತದ ಸುತ್ತ ನಿಂತು ಅರಚುತಿದ್ದರೆ ಯಮಧರ್ಮನಿಗೆ ಕೇಳಿಸದೇ ಇದ್ದಿತೇ?. ಅವನ ಪ್ರತಿನಿಧಿಯಾಗಿ ಎಮ್ಮೆಕಾಯುವ ಹುಡುಗ ಎಮ್ಮೆಯ ಮೇಲೇ ಕೂತು ಅವುಗಳನ್ನು ಸಮಾದಾನ ಪಡಿಸುವ ವಿದಿಯೇ ಯಮಯಾತನೆ. ಆದರೂ ಬೇಸರಿಸದ ಅವನು ಎಮ್ಮೆಗಳಂತೆ ನಿಧಾನವಾಗಿ ಬಂದ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದ. ಎಮ್ಮೆಗಳೆನು ಉಚಿತವಾಗಿ ಬಂದು ಹೋಗುವಂತವಲ್ಲ. ಇಡೀ ಊರನ್ನು ಗುಡಿಸಿ ಸಾರಿಸುವಷ್ಟು ಸಗಣಿ ಬಿಟ್ಟುಹೋಗುತ್ತಿದ್ದವು. ಈ ಹಬ್ಬಕ್ಕೆ ಅವುಗಳ ಬಳುವಳಿ ಅದು.

ಈ ಶೋ ನ ಕಡೆಗೆ ನಡೆಯುತ್ತಿದುದೆ 'ಹೋರಿ' ಆಟ. ಅದು ಒಂಟಿ. ಒಂಟಿ ಸಲಗವೇ ಸರಿ!. ಅದರ ನೋಟ ಭಯಂಕರ. ಹೋರಿಯನ್ನು ಎಡ ಮತ್ತು ಬಲ ಎರಡು ಕಡೆ ಮೂಗುದಾರಕ್ಕೆ ಕಟ್ಟಿ ದಾರ ಹಿಡಿದ ಇಬ್ಬರ ನಡುವೆ ಬರುತ್ತಿದ್ದರೆ, ನೋಡಲು ನಿಂತ ಜನ ಹೆದರಿ ಓಡಿಹೊಗುತ್ತಿದರು. ಕಟ್ಟುಮಸ್ತಾದ ಮೈಕಟ್ಟು, ಬಿರ್ಗಣ್ಣಿನ ನೋಟ , ಊರಿನ ಎಲ್ಲ ಜಾನುವಾರುಗಳು ಆಲಂಕಾರಗೊಂಡು ಹಬ್ಬ ಆಚರಿಸಿದರೆ, ಹೋರಿ ಮಾತ್ರ ಚೂಪಾದ ತನ್ನ ಒಂದು ಕೊಂಬಿನ ತುದಿಗೆ ಕೇವಲ ನಿಂಬೆಹಣ್ಣನ್ನು ಸಿಕ್ಕಿಸಿಕೊಂಡು ಠೀವಿಯಿಂದ ಬರುವುದೇ ಅದಕ್ಕೆ ಅಲಂಕಾರ ಮತ್ತು ಅದರ ಅಹಂಕಾರ. ಹೆಚ್ಚೆಂದರೆ ಕತ್ತಿಗೊಂದು ಹಾರ. ಕುಸ್ತಿ ಅಂಕಣದತ್ತ ಜಟ್ಟಿಯನ್ನು ಕರೆತರುವಂತೆ ಬಾಸವಾಗುತ್ತಿತ್ತು. ಇದಕ್ಕೆ ತದ್ವಿರುದ್ಧ ನೋಡಿ ಜೋಡಿ ಎತ್ತುಗಳ ಆಟ. ಹೆಥೆಚ್ಚವಾಗಿ ಖರ್ಚುಮಾಡಿ ಸಿಂಗಾರಗೊಂಡಿರುತ್ತವೆ. ಅವು ಮೈಬೆನ್ನ ಮೇಲೆ ಕುಪುಸ ಹೊದ್ದು, ಕಾಲ್ಗೆಜ್ಜೆಗಳನ್ನು ಕಟ್ಟಿಕೊಂಡು, ಕಟ್ಟಿಗೆ ಕೊರಳ್ಗೆಜ್ಜೆ, ಸರ ಹಾಕಿಕೊಂಡು ಯಕ್ಷಗಾನ ಆಡುವವರಂತೆ ಹೆಜ್ಜೆಗಳನ್ನಾಕುತಾ ಬರುವ ಪರಿಯೇ ಪರಮಾನಂದ. ಥೇಟ್ ಪ್ಯಾಶನ್ ಶೋ. ವ್ಯಾಪಾರೀ ಶೆಟ್ಟರ ಊಟ್ಟಕ್ಕೆ ಪಾಯಸ, ಪಲ್ಯ ಆದವರೆ ಈ ಎತ್ತುಗಳ ಧಣಿಗಳು. ಇಲ್ಲಿಗೆ ಆಟ ಮುಗಿಯಿತು ಅಂದುಕೊಳ್ಳುತ್ತೇವೆ, ಆದರೆ ಕ್ಲೈಮಾಕ್ಸ್ ಬೇರೆನೆ ಇದೆ. ಅದೇನೆಂದರೆ, ಎಲ್ಲವನ್ನು ನೋಡಿ ಉನ್ಮಾದಗೊಂಡ ಕೆಲವು ಕುಡುಕ ಮಹಾಶಯರು ಸಿಕ್ಕ ಬೀದಿ ನಾಯಿಯೋ, ಸಾಕಿದ ಬೆಕ್ಕಿಗೋ ಅಲ್ಲಿ ಇಲ್ಲಿ ಉದುರಿ ಬಿದಿದ್ದ ಬಲೂನು, ಪೇಪರ್ ಅನ್ನು ಕಟ್ಟಿ ಗುರುಗಳ ಬಳಿ ಎಳೆದುತಂದು ಇವಕ್ಕೂ ನೀವು ತೀರ್ಥ ಪ್ರೋಕ್ಷಿಸಬೇಕೆಂದು ಆಗ್ರಹಿಸಿ, ನಾಯಿ ಜೊತೆ ತಾನು ಮಂಡಿಯೂರಿ ಆಶೀರ್ವಾದ ಪಡೆದು ಖುಷಿಪಡುತ್ತಿದ್ದರು. ಅಲ್ಲಿಗೆ ಎಲ್ಲವೂ ಶುಭಂ.!

-ಸಂತೋಷ್ ಇಗ್ನೇಷಿಯಸ್ 

ಕನ್ನಡ ಚಿತ್ರರಂಗದ ಹೊಸ ಸಂಚಲನ - ಅಂದರ್ ಬಾಹರ್


ಪ್ರಕಟಣೆ ಆದ ದಿನದಿಂದಲೂ ಅಭಿಮಾನಿಗಳನ್ನು ಆಕರ್ಷಿಸುತ್ತಲೇ ಬಂದಿರುವ ಈ ಚಿತ್ರ  ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿ ನಿಂತಿದೆ. ಆಂದರ್ ಬಾಹರ್ ಎಂಬ ನಮ್ಮದಲ್ಲದ ಶೀರ್ಷಿಕೆಯ ಬಗ್ಗೆ ಮೊದಮೊದಲು ಇದ್ದ ಅಸಮಾಧಾನವೆಲ್ಲಾ, ಪೂರ್ವಭಾವಿ ಸ್ಟಿಲ್ಸ್ ಗಳಿಂದಲೇ ಮೆಲ್ಲಗೆ ಕರಗತೊಡಗಿದಂತೆ, ಆ ಚಿತ್ರಗಳಲ್ಲಿ ಶಿವಣ್ಣ ಕಾಣಿಸಿಕೊಂಡ ಬಗೆ ಶಿವಣ್ಣನ ಅಭಿಮಾನಿಗಳಿಗೆ ಮಾತ್ರವಲ್ಲದೆ ಎಲ್ಲ ವರ್ಗದವರಿಗೂ ಮೆಚ್ಚುಗೆ ವ್ಯಕ್ತವಾಯಿತು. ಅಲ್ಲಿಂದ ಪ್ರಾರಂಭವಾದ ಚಿತ್ರದ ಬಗೆಗಿನ ಕ್ರೇಜ್ ಇದೀಗ ಹೊಸ ಭರವಸೆಯೊಂದಿಗೆ ಒಂದು ರೀತಿಯ ಸಂಚಲನವಾಗಿ ಮಾರ್ಪಟ್ಟಿದೆ. 

 ಈ ಭರವಸೆ, ಸಂಚಲನ, ನಿರೀಕ್ಷೆಗೆ ತನ್ನದೇ ಆದ ಕಾರಣಗಳಿವೆ. ಎಲ್ಲಕ್ಕಿಂತ ಮೊದಲಿಗೆ ಇದು ಅಪ್ಪಟ ಶಿವಣ್ಣನ ಅಭಿಮಾನಿಗಳಿಂದ ನಿರ್ಮಾಣಗೊಳ್ಳುತ್ತಿರುವ ಸಿನಿಮಾ.ರಾಜ್ ಕುಟುಂಬದ ಮೇಲಿನ ಅಭಿಮಾನವನ್ನೇ ಉಸಿರಾಗಿಸಿಕೊಂಡಿರುವ ಈ  ನಿರ್ಮಾಪಕರುಗಳಿಗೆ ಒಬ್ಬ ಸಾಮಾನ್ಯ ಅಭಿಮಾನಿಯ ಆಸೆ, ನಿರಾಸೆ, ನಿರೀಕ್ಷೆ, ತವಕ, ಕಾತುರ, ಸಂಭ್ರಮ, ದುಗುಡ ಎಲ್ಲವೂ ಅಂಗೈಯಷ್ಟೇ ಪರಿಚಿತ. ಈ ಚಿತ್ರಕ್ಕೆ ನಿರ್ಮಾಪಕರುಗಳಾದರೂ ಹಿಂದಿನ ಚಿತ್ರದವರೆಗೂ ಅಭಿಮಾನಿಗಳಾಗಿ ಎಲ್ಲವನ್ನೂ ಅನುಭವಿಸಿರುವವರೇ. ಅದರಲ್ಲೂ ಡಾ.ರಾಜ್ ಚಿತ್ರಗಳ, ಆ ಸುವರ್ಣ ಯುಗವನ್ನು ಸವಿದವರೇ, ಅದೇ ರೀತಿಯ ಒಂದು ಉತ್ತಮ ಸಧಭಿರುಚಿ ಚಿತ್ರದ ಕನಸೂಂದಿಗೆ ಚಿತ್ರ ನಿರ್ಮಿಸುತ್ತಿರುವ ರಜನೀಶ್, ಪ್ರಸಾದ್ ರಾವ್, ಅಂಬರೀಶ್, ಭಾಸ್ಕರ್, ಶ್ರೀನಿವಾಸ್, ಅವಿನಾಶ್ ಅವರನ್ನು ಒಳಗೊಂಡ ಸಹೃದಯ ನಿರ್ಮಾಪಕ ಬಳಗ, ಒಂದು ಉತ್ತಮವಾದ ಚಿತ್ರವನ್ನೇ ನೀಡುತ್ತದೆ ಎಂಬ ಸಹಜ ನಿರೀಕ್ಷೆ  ಕನ್ನಡ ಪ್ರೇಕ್ಷಕರದು.

ಇನ್ನೂ ದಿನದಿಂದ  ದಿನಕ್ಕೆ ಹೊಸ ಅಚ್ಚರಿಗಳನ್ನೇ ನೀಡುತ್ತಲೇ ಬಂದ ಚಿತ್ರ ತಂಡ, ಅಭಿಮಾನಿಗಳಿಗೆ ಮೊದಲ ಸಿಹಿ ನೀಡಿದ್ದು ಚಿತ್ರದ ತಾರಬಳಗದಿಂದ. ಮಿಲನದಂಥ ಒಂದು ಚಿತ್ರದಿಂದಲೇ ನಮ್ಮವರೇ ಆಗಿ ಹೋದ ಪಾರ್ವತಿ ಮೆನೆನ್ ನ ಆಯ್ಕೆ ಚಿತ್ರಕ್ಕೆ ಒಂದು ಕೌಟುಂಬಿಕ ಚೌಕ್ಕಟ್ಟನ್ನು ನೀಡಿದೆ. ಇನ್ನೂ ಜೋಗಿಯಲ್ಲಿ ಮೋಡಿ ಮಾಡಿದ  ಶಿವಣ್ಣ ಹಾಗೂ ಅರುಂಧತಿ ನಾಗ್ ಜೋಡಿ ಮತ್ತೆ ತೆರೆಯ ಮೇಲೆ ಜೊತೆಯಾಗಿ ಬರುತ್ತಿರುವುದು ಚಿತ್ರಕ್ಕೆ ಮಾಂತ್ರಿಕ ಸ್ಪರ್ಷವನ್ನು ನೀಡಿದೆ. ಮುಂದೆ ಮತ್ತೊಂದು ಸಿಹಿಯಾದ ಅಚ್ಚರಿ ಎಂಬಂತೆ ಚಿತ್ರದ ಸಂಗೀತದ ಹೊಣೆ ಪ್ರಖ್ಯಾತ ಗಾಯಕ ವಿಜಯ್ ಪ್ರಕಾಶ್ ಹೆಗಲಿಗೆ ಬಿದ್ದಿದ್ದು. ಚೊಚ್ಚಲ ಅವಕಾಶವನ್ನು ಮೈಸೂರಿನ ಮಧುರ ಕಂಠದ ಈ ಗಾಯಕ ಭರ್ಜರಿಯಾಗೇ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಈಗಾಗಲೇ ಕೇಳಿ ಬರುತ್ತಿವೆ. ಅಂತೆಯೇ ಶೇಖರ್ ಚಂದ್ರ, ಎಂ.ಸ್ ರಮೇಶ್, ಇಮ್ರಾನ್ ಮುಂತಾದವರ ದಂಡೇ ಇದೆ. ಅಲ್ಲಿಗೆ ತೆರೆಯ ಅಂದರ್ ಬಾಹರ್ ಎರಡೂ ಪ್ರತಿಭಾನ್ವಿತ ತಂತ್ರಜ್ಞರಿಂದ ಹೌಸ್ ಫುಲ್ ಆಗಿದೆ. 

ಇನ್ನೂ ಇವೆಲ್ಲಕ್ಕೂ ಕಳಶವಿಟ್ಟಂತೆ ಕಾಣುತ್ತಿರುವುದು ನವ ನಿರ್ದೇಶಕ ಫನೀಶ್ ಎಸ್ ರವರ ಕೈ ಚಳಕ.ಮೊದಲ ಸ್ಟಿಲ್ಸ್ ನಿಂದ ಹಿಡಿದು ಇಲ್ಲಿಯವರೆಗೂ ಅವರು ತೋರುತ್ತಿರುವ, ಆತ್ಮ ವಿಶ್ವಾಸ, ಶ್ರದ್ಧೆ, ಚಿತ್ರ ಪ್ರೀತಿ ಹಾಗೂ ಕಲಾತ್ಮಕತೆ ಎಲ್ಲರ ಮೆಚ್ಚುಗೆಗೊಳಿಸಿರುವುದು ಮಾತ್ರವಲ್ಲದೆ ಚಿತ್ರದ ಬಗ್ಗೆ ಅಪಾರವಾದ ನಿರೀಕ್ಷೆಯನ್ನು ಮೂಡಿಸಿದೆ. ಇಲ್ಲಿಯವರೆಗಿನ ಚಿತ್ರದ ಸ್ಟಿಲ್ಸ್ ಗಳನ್ನು ನೋಡುತ್ತಿದ್ದರೆ, ಚಿತ್ರ ಎಲ್ಲಾ ರೀತಿಯಲ್ಲೂ ಪ್ರೇಕ್ಷಕರಿಗೆ ಇಷ್ಟವಾಗುವ, ಹತ್ತಿರವಾಗುವ ಶುಭ ಸೂಚನೆಗಳು ಕಾಣುತ್ತಿವೆ.

ಇನ್ನೂ ಶಿವಣ್ಣನ ಬಗ್ಗೆ, ಈ ವಯಸ್ಸಿನಲ್ಲೂ ಬತ್ತದ ಅವರ ಉತ್ಸಾಹದ ಬಗ್ಗೆ ಹೇಳುವಿದೇನಿದೆ. ಚಿತ್ರದ ಪೋಸ್ಟರ್ ಒಂದರಲ್ಲಿ ಕೈಯಲ್ಲಿ ಕಾರ್ಡನ್ನು ಹಿಡಿದಿರುವ ಭಂಗಿಯೊಂದೇ ಸಾಕು...simply superb.

ಈ ವಾರ ಆಡಿಯೋ ಬಿಡುಗಡೆ ಇದೆ...ಅಭಿಮಾನಿಗಳ ಹೃದಯದಲ್ಲಿ ಈಗಾಗಲೇ ಸಂತಸದ ತಕಧಿಮಿ......


- ಪ್ರಶಾಂತ್ 

ಕಸವೆಂಬ ನಿತ್ಯ ಸತ್ಯ


ಕಸದಿಂದ ರಸ ಎಂಬದು ಹಳೆಯ ಮಾತು.  ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ತಲೆದೋರಿದ ಈ ಕಸದ ಸಮಸ್ಯೆ ನಿಜಕ್ಕೂ ಎಲ್ಲರ ತಲೆ ಕೆಡಿಸಿತು.ಮೂಗಗಳನ್ನು ಸಹಾ. ಈ ಸಮಯದಲ್ಲಿ ಈ ರಸ್ತೆಯಲ್ಲಿ ಉಳಿದು ಬಿದ್ದಿದ್ದ ಕಸದಿಂದ ಉಕ್ಕಿದ ರಸಗಳು ಅನೇಕ. ರಸ್ತೆಯ ಅರ್ಧ ಭಾಗಕ್ಕೆ ಹರಡಿಕೊಂಡಿದ್ದ ಕಸದ ನಡುವೆ ನಡೆದೋ ವಾಹನಗಳಲ್ಲಿ ಹೋಗುತ್ತಿದ್ದ ಜನರು, 
ತಮ್ಮ ಮೂಗುಗಳನ್ನು ಮುಚ್ಚಿಕೊಂಡು, ಕಸವನ್ನು ದಾಟಿ, ಒಮ್ಮೊಮ್ಮೆ ಹಾರಿ, ಕೆಲವೊಮ್ಮೆ ಜಾರಿ ಮುಂದೆ ಹೋಗುತ್ತಿದ್ದದ್ದನ್ನು ನೋಡಿದಾಗ ಎಂಥವರಿಗೂ ಕರುಣಾ ರಸ ಉಕ್ಕಿ ಬರುತ್ತಿತ್ತು. ಇನ್ನು ಹಾರಲು ಆಗದೆ,  ಜಾರಲೂ ಒಪ್ಪದೇ ಕಸದ ಮೇಲೇ ನಡೆದುಕೊಂಡು ಹೋಗಬೇಕಾದವರ ಮುಖದಲ್ಲಿ  ಕಾಣುತ್ತಿದ್ದ ಕೋಪವನ್ನು ಕಂಡಾಗ ರೌದ್ರ ರಸದ ನೆನಪು ಬೇಡವೆಂದರೂ 
ಬರುತ್ತಿತ್ತು. ಜನ ಹೇಗಾದರೂ ಒದ್ದಾಡಲಿ ಕಾದು ನೋಡುವ ಎಂಬಂತೆ ಎಲ್ಲವನ್ನು ಸಹನೆಯಿಂದ ನೋಡುತ್ತಿದ್ದ ಸರ್ಕಾರ, ಮಹಾನಗರ ಪಾಲಿಕೆಗಳು ಶಾಂತ ರಸವನ್ನು ಅಭ್ಯಾಸಿಸಿಕೊಂಡರೆ,ಕಸದ ರಾಶಿಯಲ್ಲಿ ಸತ್ತು ಬಿದ್ದಿದ್ದ ಪ್ರಾಣಿಗಳನ್ನು ಕುಕ್ಕಿ ತಿನ್ನುತ್ತಿದ್ದ ನಾಯಿ, ಕಾಗೆಗಳ ದೃಶ್ಯಗಳು ಭೀಭೀತ್ಸ್ಯ ರಸಕ್ಕೆ ಸಾಕ್ಷಿ. ಇನ್ನೂ ಕೆಲವೇ ದಿನಗಳಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ, ಆಲ್ಲಿಯವರೆಗೂ ಜನ ಸಹನೆಯಿಂದರಬೇಕು ಎಂದು ನಾಯಕರುಗಳು ನೀಡುತ್ತಿದ್ದ ಹೇಳಿಕೆಗಳು ಹಾಸ್ಯ ರಸಕ್ಕೆ ತಕ್ಕ ಉದಾಹರಣೆಗಳಾದರೆ, ತಮ್ಮ ಪಕ್ಷಕ್ಕೆ  ಅಧಿಕಾರ ಕೊಟ್ಟರೆ ಕ್ಷಣ ಮಾತ್ರದಲ್ಲಿ ಇದಕ್ಕೆ ಪರಿಹಾರ ಸಿದ್ಧ ಎಂಬ ವೀರರಸ ವಿರೋಧ ಪಕ್ಷಗಳದ್ದು. ಇದೆಲ್ಲಾದರ ನಡುವೆ ಕಸ ವಿಲೇವಾರಿಗಾಗಿ ಎತ್ತಿಟ್ಟ ಹಣ ಅದೆಲ್ಲಿ ಹೋಗುತ್ತಿದೆ ಎಂಬ ಆಶ್ಚರ್ಯ, ಅದ್ಭುತರಸ ಮಾತ್ರ ಜನ ಸಾಮಾನ್ಯರದು. 

ಸರ್ಕಾರಕ್ಕೂ ಇದರ ಕ(ಸ)ಸಿವಿಸಿ  ತಪ್ಪಲಿಲ್ಲ. ಮಹಾನಗರ ಪಾಲಿಕೆ ಸಹಾ ತಡವಾಗಿ ಎಚ್ಚೆತ್ತುಕೊಂಡು ಏನೆಲ್ಲಾ ಕಸರತ್ತು ಮಾಡಿದರೂ ಇನ್ನೂ ಶಾಶ್ವತ ಪರಿಹಾರವೆನ್ನುವುದು ದೊರಕಿಲ್ಲ. ಕಸವನ್ನು ಕೇವಲವಾಗಿ ನೋಡುವುದೇನೋ ಸರಿ ಆದರೆ ’ಕೇವಲ ಕಸ’ ಎನ್ನುವುದು ಇಂದಿನ ಪರಿಸ್ಥಿತಿಯಲ್ಲಿ ಬೇಜವಬ್ದಾರಿಯ ಮಾತಾಗುತ್ತದೆ. ಕಸದಿಂದ ರಸ ಮಾತ್ರವಲ್ಲ ಕಸದೊಂದಿಗೆ ಇಂದು ಹಣ,ಗುತ್ತಿಗೆ, ಪರಿಸರ ನಾಶವೆಂಬ ಅಪಸ್ವರ, ದಬ್ಬಾಳಿಕೆ, ಹೋರಾಟ, ಧರಣಿ ಎಲ್ಲವೂ ಸೇರಿಕೊಂಡಿವೆ. ಈಗ ಕಸ ಕೇವಲವಾಗಿ ಉಳಿದಿಲ್ಲ. ಅದರ ವಿಲೇವಾರಿಗೆ ನೂರಾರು ಕೋಟಿಗಳ ಯೋಜನೆಗಳು, ಒಪ್ಪಂದಗಳು, ಗುತ್ತಿಗೆಗಳು ಏರ್ಪಡುತ್ತಿವೆ. ಬೆಂಗಳೂರು ನಗರದ ಕಸದ ವಿಲೇವಾರಿ ಗುತ್ತಿಗೆಯ ಮೂತ್ತ ಸುಮಾರು ೩೦೦ ಕೋಟಿಗೂ ಅಧಿಕ ಎಂದರೆ ಕಸದ ಶಕ್ತಿ, ಸಾಧ್ಯತೆ ಅರ್ಥವಾಗುತ್ತದೆ. ಪ್ರತಿದಿನವು ಬೃಹತಾಕಾರದಲ್ಲಿ ಬೆಳೆಯುತ್ತಿರುವ ಕಸದ ಪ್ರಮಾಣದಿಂದ ನಮ್ಮ ಪರಿಸರದ ಮೇಲೆ ಆಗುತ್ತಿರುವ ಅಡ್ಡ  ಪರಿಣಾಮಗಳು, ಮಲೀನಗೊಳ್ಳುತ್ತಿರುವ ಅಂತರ್ಜಲ, ಜಾಗದ ಸಮಸ್ಯೆಗಳು ನಮ್ಮ ಭವಿಷ್ಯವನ್ನು ಭಯಾನಕವಾಗಿಸುವುದರಲ್ಲಿ ಸಂದೇಹವೇ ಇಲ್ಲ. ಪ್ರತಿ ಪ್ರಜೆಯೂ ಮತ ಹಾಕುತಾನೋ ಇಲ್ಲವೋ ಕಸವನ್ನು ಮಾತ್ರ ಉತ್ಪಾದಿಸುತ್ತಾನೆ, ಬೀದಿಗೆ ತಂದು ಹಾಕಿಯೇ ತೀರುತ್ತಾನೆ.

ಹಾಗೆಂದ ಮಾತ್ರಕ್ಕೆ ಇವೆಲ್ಲಕ್ಕೂ ಪರಿಹಾರವೇ ಇಲ್ಲವೇ ಎಂಬ ಪ್ರಶ್ನೆ ಮೂಡ ಬಹುದು. ಸಮಸ್ಯೆ ಎಷ್ಟೇ ಜಟಿಲವಾಗಿದ್ದರೂ ಅದಕ್ಕೆ ಪರಿಹಾರಗಳು ಖಂಡಿತ ಇರುತ್ತವೆ. ನಮ್ಮಂತೆ ದಟ್ಟ ಜನ ಸಂಖ್ಯೆಯ, ಅಗಾಧ ಕಸ ಹೊಮ್ಮಿಸುವ ಇತರ ದೇಶಗಳು ಇದಕ್ಕೆ ಕಂಡುಕೊಂಡಿರುವ ಪರಿಹಾರ ಮಾರ್ಗಗಳು ನಮಗೆ ಮಾದರಿಯಾಗಬಲ್ಲದು. ಮಾರಕವಾಗಬಲ್ಲ ಕಸವನ್ನು ಪರಿವರ್ತಿಸಿ ಅದನ್ನು ಶಕ್ತಿಯಾಗಿ ಖಂಡಿತ ಬಳಸಿಕೊಳ್ಳಬಹುದು. ಅದರೆ ಅದಕ್ಕೆ ಬೇಕಾದ ರಾಜಕೀಯ ಇಚ್ಛಾ ಶಕ್ತಿ, ಸಾಮಾಜಿಕ ಕಾಳಜಿ ಹಾಗೂ ಜನ ಸಾಮಾನ್ಯರ ಸಹಾಕರ ಕೊರತೆ ನಮ್ಮಲ್ಲಿ ಎದ್ದು ಕಾಣುತ್ತದೆ. ಇದರಿಂದಾಗಿ ಒಂದು ಸಣ್ಣ ಸಮಸ್ಯೆಯೂ ದೊಡ್ಡ ಪ್ರಮಾಣದಲ್ಲಿ ಬೆಳೆದು ಪರಿಹಾರವು ದೂರದ ಮಾತಾಗುವ ಪರಿಸ್ಥಿತಿ ನಮ್ಮದಾಗಿದೆ. ಕಸದ ಸಮಸ್ಯೆಯೂ ಇದಕ್ಕೆ ಹೊರತಲ್ಲ. ಮೇಲ್ನೋಟಕ್ಕೆ ಕಾಣುವ ಕಾರಣಗಳ ಜೊತೆಗೆ ಹಲವಾರು ಕಾಣದ ಕೈಗಳು, ಹಿತಾಸಕ್ತಿಗಳು ಸಮಸ್ಯೆಗೆ ತಮ್ಮದೇಆದ ರೀತಿಯಲ್ಲಿ ಕಾರಣವಾಗಿವೆ. ಇವೆಲ್ಲವೂ ದೊಡ್ಡ ಮಾತುಗಳು. ಆದರೆ ಒಂದು ಕಸದ ಸಮಸ್ಯೆ ಹೇಗೆ ಸರಳವೂ ಜೊತೆ ಜೊತೆಗೆ ಜಟಿಲವೂ ಎಂಬುದರ ಪರಿಚಯ ನಿಮ್ಮದಾಗಬೇಕಾದರೆ, ಖಾಲಿ ನಿವೇಶನವಿರುವ ಒಂದು ರಸ್ತೆಯನ್ನು ನೀವು ನೋಡಬೇಕು. ಅಲ್ಲಿ ನಿಮ್ಮ ಮನೆಯಿದ್ದು, ಅದರಲ್ಲೂ ನಿಮ್ಮ ಮನೆ ಆ ಖಾಲಿ ನಿವೇಶನದ ಪಕ್ಕದಲ್ಲೇ ಇದ್ದರೆ ಕಸದ ಸಮಸ್ಯೆಯು ನಿಮಗೆ ಇನ್ನಷ್ಟು ತಿಳಿ ತಿಳಿಯಾಗಿ ಅರ್ಥವಾಗುತ್ತದೆ. ಇಂದಿನ ಬೆಂಗಳೂರಿನ ಮಧ್ಯಮ, ಮೇಲ್ಮಧ್ಯಮ ವರ್ಗದ ಜನರಿರುವ ಬಡಾವಣೆಗಳಲ್ಲೂ ಒಂದು ಸಾಧಾರಣ ಸೈಟಿಗೆ ಎನ್ನಿಲ್ಲವೆಂದರೂ ಸುಮಾರು 30 ರಿಂದ 40 ಲಕ್ಷ ಬೆಲೆ. ಅಷ್ಟೊಂದು ಬೆಲೆಯಿದ್ದರೂ ಒಂದು ಖಾಲಿ ಸೈಟಿನ ಮೇಲೆ ನಡೆಯುವ ಶೋಷಣೆ ಮಾತ್ರ ಹೇಳತೀರದು.

ಮೊದಲು ಅದೇ ರಸ್ತೆಯಲ್ಲಿ ಮನೆ ಕಟ್ಟುತ್ತಿರುವವರು, ಖಾಲಿ ನಿವೇಶನದಲ್ಲಿ ತಮ್ಮ ಕೂಲಿಯವರಿಗೆ ಒಂದು ಶೆಡ್ ಹಾಕುವುದರೊಂದಿಗೆ ನಿವೇಶನಕ್ಕೆ ಸ್ವಲ್ಪ ಗೌರವ ದೊರಕುತ್ತದೆ. ನಿವೇಶನದ ಮಾಲೀಕನಿಗೂ ಕೊಂಚ ಗೌರವ ಧನ. ಈ ಸಮಯದಲ್ಲಿ ಅಲ್ಲಿ ಯಾರೂ ಕಸ ಹಾಕುವ ಧೈರ್ಯ ಮಾಡುವುದಿಲ್ಲ. ಕಸ ಹಾಕಿದರೆ ಅಲ್ಲಿನ ಕೂಲಿಯವನ ಹೆಂಡತಿಯ ಬಾಯಲ್ಲಿ ಬರುವ ಬಯ್ಗಳಕ್ಕಿಂತ ಕಸ ಮನೆಯಲ್ಲಿ ಇರುವುದೇ ಲೇಸು. ಮುಂದೆ ಕಟ್ಟಡದ ಕೆಲಸ ಮುಗಿದು, ಅದೇ ಮನೆಯ ಗೃಹ ಪ್ರವೇಶದ ಸಂದರ್ಭದಲ್ಲಿ ಈ ಖಾಲಿ ನಿವೇಶನ ಊಟದ ಮನೆಯಾಗಿ ಪರಿವರ್ತಿತವಾಗುತ್ತದೆ. ಅಲ್ಲಿಂದ ಪ್ರಾರಂಭ, ಕಸದೊಂದಿಗಿನ ಸ್ನೇಹ ಮಿಲನ. ಅತಿಥಿಗಳು ಹೊರಟರೂ ಊಟದ ಎಲೆ, ತರಕಾರಿ, ಮೂಳೆಗಳೆಲ್ಲಾ ಅಲ್ಲೇ ಉಳಿದು ಹೋಗುತ್ತದೆ. ಕೂಲಿಯವರ ಶೆಡ್ ಕೂಡ ಖಾಲಿ. ಒಂದೆರೆಡು ದಿನವಾದ ಮೇಲೆ ಹೊಸ ಮನೆಯ ಮುಂದೆ ಕಟ್ಟಿದ ಚಪ್ಪರದ ತೆಂಗಿನ ಗರಿಗಳು ಕೂಡ ಬಂದು, ಮೊದಲು ಒರಗಿಕೊಂಡಂತೆ ಮಾಡಿಕೊಂಡು ನಂತರ ಅಲ್ಲೇ ಮಲಗಿಕೊಳ್ಳುತ್ತವೆ. ಎಬ್ಬಿಸುವವರು ಯಾರು? ಹೊಸ ಮನೆ ಎಂದ ಮೇಲೆ ಒಡೆದು ಹೋದ ಟೈಲ್ಸ್ ಚೂರುಗಳು, ಪೇಯಿಂಟ್ ಡಬ್ಬಗಳು, ಎಲ್ಲವೂ  ಮೂಟೆಯೊಂದರಲ್ಲಿ ಸುಂದರವಾಗಿ ಜೋಡಿಸಲ್ಪಟ್ಟು ಇಲ್ಲೇ ಬಂದು ಸ್ಥಾಪಿತವಾಗುತ್ತದೆ. ಯಾರಾದರೂ ಧೈರ್ಯ ಮಾಡಿ ಇಲ್ಲಿ ಬಿಸಾಡಬೆಡಿ ಎಂದರೆ, ಉತ್ತರ ಸಿದ್ಧವಾಗಿರುತ್ತದೆ " ಎಲ್ಲಾ ಒಟ್ಟಿಗೆ ಕ್ಲೀನ್ ಮಾಡಿ ತೆಗೆದುಕೊಂಡು ಹೋಗುತ್ತೇವೆ ಸಾರ್"

ಅವರು ಮುಂದೆ ಅದನ್ನು ನಿಜಕ್ಕೂ ಕ್ಲೀನ್ ಮಾಡುತ್ತಾರೋ ಇಲ್ಲವೋ, ಅದರೆ ಸುತ್ತಮುತ್ತಲಿನ ಜನರ ಮನಸ್ಸಿನಲ್ಲಿ ಅಲ್ಲಿ ಒಂದು ಕಸದ ತೊಟ್ಟಿ ಹುಟ್ಟಿಕೊಂಡು, ಅದು ಎಲ್ಲರನ್ನೂ ತನ್ನತ್ತ ಆಕರ್ಷಿಸಲು ಪ್ರಾರಂಭಿಸುತ್ತದೆ. ಮೊದ ಮೊದಲಿಗೆ ಸುತ್ತಮುತ್ತಲಿನವರು ಅದನ್ನು ಗಮನಿಸಿದರೂ ಕಸ ಹಾಕದೆ ಮತ್ತಷ್ಟು ಕಸ ಸೇರುವ ತನಕ ಸಹನೆವಹಿಸುತ್ತಾರೆ. ನಂತರದ ದಿನಗಳಲ್ಲಿ ಹಳೆಯ ಟ್ಯೂಬ್ ಲೈಟ್ ಗಳು, ಹಲಗೆಗಳು, ಪ್ಲಾಸ್ಟಿಕ್ ಡಬ್ಬಗಳು ಹಳೆಯ ಒಡೆದ ಕಿಟಕಿ ಗಾಜುಗಳು ಎಂಟ್ರಿ ಕೊಟ್ಟು ತೊಟ್ಟಿಗೆ ಬಣ್ಣ ಕೊಡುತ್ತವೆ.  ಇವೆಲ್ಲಾ ಬಂದ ಮೇಲೆ ಚಿಂದಿ ಹಾಯುವವರು ವಾರಕ್ಕೆ ಒಮ್ಮೆಯೋ ಎರೆಡು ಬಾರಿಯೋ ಬಂದು ಚಟುವಟಿಕೆ ಆರಂಭಿಸುತ್ತಾರೆ. ಇಷ್ಟೆಲ್ಲಾ ಆಗಿ ಆಲ್ಲಿಗೆ ನಿಜಕ್ಕೂ ಒಂದು ಕಸದ ತೊಟ್ಟಿಯ ಕಳೆ ಬರುತ್ತಿದ್ದಂತೆ ಅಲ್ಲಿ ಅನೇಕ ವಸ್ತುಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ತುರಿದ ಸೌತೆಕಾಯಿ ಸಿಪ್ಪೆ, ಸುಲಿದ ಬಾಳೆ ಹಣ್ಣಿನ ಸಿಪ್ಪೆ, ಅವರೆಕಾಯಿಯ ಸಿಪ್ಪೆ, ಮಾವಿನಹಣ್ಣಿನ ವಾಟೆ, ಕೊಳೆತ ಟೊಮೆಟೊ, ಟೂತ್ ಬ್ರಷ್, ಪೇಸ್ಟಿನ ಟ್ಯೂಬು ಇತ್ಯಾದಿಗಳು. ಇನ್ನು ಅಲ್ಲಿ ಕಸ ಹಾಕಲು ಯಾರಿಗೂ ಹಿಂಜರಿಕೆಯಿಲ್ಲ. ಹಗಲಿನಲ್ಲಿ ಸ್ವಲ್ಪ ಸಂಕೋಚ. ಕತ್ತಲಿನಲ್ಲಿ ರಭಸ, ತಮ್ಮ ಮನೆಯಿಂದಲೇ ತೂರಾಟ. 

 ( ಮುಂದುವರಿಯುತ್ತದೆ)

-ಪ್ರಶಾಂತ್ ಇಗ್ನೇಷಿಯಸ್

ಕಸವೆಂಬ ನಿತ್ಯ ಸತ್ಯ - ಭಾಗ 2


(ಮುಂದುವರಿದ ಭಾಗ)

ಇವುಗಳ ನಡುವೆ ಪಕ್ಕದಲ್ಲಿರುವ ಮನೆಯವರ ಕಷ್ಟ ಹೇಳತೀರದು. ಇಲ್ಲದ ಸೊಳ್ಳೆಯ ಕಾಟ ಪ್ರಾರಂಭವಾಗಿ ಮಕ್ಕಳ ಕೈ ಕಾಲು, ಕೆನ್ನೆ, ಮೂಗುಗಳ ಮೇಲೆಲ್ಲಾ ಅವುಗಳದ್ದೇ ಹೆಜ್ಜೆ ಗುರುತು. ಕಸದ ರಾಶಿಯಿಂದ ಹೊರಡುವ ವಾಸನೆಗೆ ಆ ಕಡೆಯ ಕಿಟಕಿ ತೆರೆಯುವಂತಿಲ್ಲ, ಒಮ್ಮೊಮ್ಮೆ ಬೆಂಕಿ ಬಿದ್ದಾಗ ಏಳುವ ಹೊಗೆಗೆ ದಿನವೆಲ್ಲಾ ಬಾಗಿಲೂ ತೆರೆಯುವಂತಿಲ್ಲ. ಮನೆಯ ಕಾಪೌಂಡಿಗೆ ಅಂಟಿಕೊಂಡಂತೆ ದೊಡ್ಡ ರಂಧ್ರಗಳು ಕಾಣಿಸಿಕೊಳ್ಳತೊಡಗುತ್ತವೆ. ಅಲ್ಲಿಗೆ ಸಣ್ಣದಾಗಿ ಹುಟ್ಟಿಕೊಳ್ಳುತ್ತದೆ ಪ್ರಾಣಿಗಳ ಪ್ರಪಂಚ. ಎಲ್ಲವೂ ಮೌನವಾಗಿರುವ ಸಮಯದಲ್ಲಿ ಆ ರಂಧ್ರದಿಂದ ಮೊದಲು ತಲೆಯನ್ನು ಚಾಚಿ ನಂತರ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ನಿವೇಶನವನ್ನು ಸರ್ವೇ ಮಾಡುವ ಇಲಿಗಳೂ ಅವುಗಳ ದೊಡ್ಡಣ್ಣಗಳು ತಮ್ಮ ಕೆಲಸ ಮುಗಿದ ಮೇಲೆ ಮತ್ತೆ ತಮ್ಮ ಗೂಡು ಸೇರಿಕೊಳ್ಳುತ್ತವೆ. ಸೈಟುಗಳು ಬೇಜಾರಾದಾಗ ಪಕ್ಕದ ಮನೆಗಳತ್ತ ಅವುಗಳ ಪಯಣ. ಒಮ್ಮೊಮ್ಮೆ ಸೈಟಿನಲ್ಲಿ ಕಾಣಿಸಿಕೊಂಡ ರಂಧ್ರಗಳು ಮನೆಯ ಸ್ಕ್ರೀನು, ಬಟ್ಟೆ, ಪುಸ್ತಕಗಳಲ್ಲೂ ಕಾಣಿಸಿಕೊಳ್ಳ ತೊಡಗುತ್ತವೆ. ಈ ಇಲಿಗಳ ಭೇಟಿ ಮಾಡಲು ಬರುವ ಬೆಕ್ಕುಗಳದ್ದು ಅಲ್ಲೇ ವಾಸ್ತವ್ಯ. ಒಮ್ಮೊಮ್ಮೆ ಮನೆಯ ಹಾಲಿಗೂ (ನಂದಿನಿ ಹಾಲು) ಅವುಗಳ ದಾಳಿ. ಅವುಗಳಿಗೆ ಗಂಟೆ ಕಟ್ಟುವವರಾರು. ಇಲ್ಲದ ಸೊಳ್ಳೆಯ ಕಾಟ ಪ್ರಾರಂಭವಾಗಿ ಮನೆಯಲ್ಲಿನ ಮಕ್ಕಳ ಕೈ ಕಾಲು, ಕೆನ್ನೆ, ಮೂಗುಗಳ ಮೇಲೆಲ್ಲಾ ಅವುಗಳದ್ದೇ  ಹೆಜ್ಜೆ ಗುರುತು. ಕಸದ ರಾಶಿಯಿಂದ ಹೊರಡುವ ವಾಸನೆಗೆ ಆ ಕಡೆಯ ಕಿಟಕಿ ತೆರೆಯುವಂತಿಲ್ಲ,  ಒಮ್ಮೊಮ್ಮೆ ಬೆಂಕಿ ಬಿದ್ದಾಗ ಏಳುವ ಹೊಗೆಗೆ ದಿನವೆಲ್ಲಾ ಬಾಗಿಲೂ ತೆರೆಯುವಂತಿಲ್ಲ.ಇನ್ನೂ ಚಿಂದಿ ಆಯುವವರು ಬಂದ ಮೇಲೆ ನಾಯಿಗಳು ಸುಮ್ಮನಿರಲು ಸಾಧ್ಯವೇ. ಅವು ಆದಷ್ಟು ಮಟ್ಟಕ್ಕೆ ಬೊಗಳಿ ಚಿಂದಿಯವರನ್ನು ಓಡಿಸಿ, ಅವರು ಹೋದ ಮೇಲೆ, ಅವರ ಕೆಲಸವನ್ನು ಇವು ಮುಂದುವರಿಸುತ್ತವೆ. ಅದು ಮುಗಿಯದ ಹುಡುಕಾಟ, ಇತ್ತ ರಸ್ತೆಯಲ್ಲಿನ ಪ್ರಾಣಿ ಪ್ರಿಯರು ಬಂದು ನಾಯಿಗಳಿಗೆ ಹಿಂದಿನ ದಿನದ ಅಳಸಿದ ಅನ್ನ, ಚಿತ್ರಾನ್ನ, ಮೊಸರನ್ನ, ಕೆಲವೊಮ್ಮೆ ಮೂಳೆಗಳನ್ನು ಅರ್ಪಿಸುತ್ತಾರೆ. ನಾಯಿಗಳಿಗೆ ಅದು ಇಷ್ಟವಾದರೆ ತಿನ್ನುತ್ತವೆ, ಇಲ್ಲವೇ ಅದು ಒಣಗಿ ಕಸವಾದಗಲೇ ಮುಕ್ತಿ. ಇವುಗಳನ್ನು ತಿನ್ನಲು ನಾಯಿಗಳಲ್ಲೇ ಸ್ಪರ್ಧೆ ಪ್ರಾರಂಭವಾಗಿ, ರಾತ್ರಿಯೆಲ್ಲಾ ಗೊರ್ರ್ ಗೊರ್ರ್ ಶಬ್ದ ರಸ್ತೆಯ ಅವಿಭಾಜ್ಯ ಅಂಗವಾಗುತ್ತದೆ. ಇವೆಲ್ಲದರ ನಡುವೆ ಹಸುಗಳು ಸಹಾ ಬಂದು ಅಳಿದುಳಿದ ಹುಲ್ಲು ತಿನ್ನುತ್ತಾ ತಮ್ಮ ಪಾಲಿನ ಸಗಣಿಯನ್ನು ಅಲ್ಲೇ ಹಾಕುತ್ತವೆ.

ಇಷ್ಟೆಲ್ಲಾ ಹೇಗಾಯಿತು, ಏಕಾಯಿತು ಎಂದು ನೋಡಲು ಹೊರಟರೆ ಉತ್ತರಗಳು ಸರಳ. ಯಾರೋ ಒಬ್ಬರು ಹಾಕಿದ ಕಸಕ್ಕೆ ಎಲ್ಲರದ್ದೂ ತಮ್ಮ ಕೈಲಾದ ಸಹಾಯ. ಹಾಗೆ ನೋಡಿದರೆ ದಿನವೂ ತಪ್ಪದೆ ಕಸದ ಆಟೋ, ಗಾಡಿ ಬಂದು ಮನೆಯ ಮುಂದೆಯೇ ಕಸ ಹಾಕಿಸಿಕೊಳ್ಳುತ್ತದೆ. ಆದರೆ ಕೆಲವರು ಬೆಳಿಗ್ಗೆಯ ತನಕ ಕಸ ತಮ್ಮ ಮನೆಯಲ್ಲಿರುವುದು ಬೇಡವೆನ್ನುವಷ್ಟು ಶುದ್ಧ ಹಸ್ತರು. ಅವರಿಂದ ರಾತ್ರಿಯೇ ಖಾಲಿ ಸೈಟಿಗೆ ಕಸ ರವಾನೆ. ಇನ್ನೂ ಕೆಲವರದು ಬೆಳಗ್ಗೆ  ಗಾಡಿ ಬರುವ ಸಮಯದಲ್ಲಿ ಇನ್ನೂ ಗಾಡ ನಿದ್ದೆ. ಅದಕ್ಕೆ ಕೆಲಸಕ್ಕೆ ಹೋಗುವಾಗ ಕವರಿನ್ನಲ್ಲಿ ಕಸವನ್ನು ತುಂಬಿಕೊಂಡು ಎಸೆದು ಹೋಗುವ ಚಾಣಾಕ್ಷ್ಯತನ. ಮತ್ತೆ  ಕೆಲವರು ಮುಂಜಾನೆಯ ಕೆಲಸಕ್ಕೆ ಹೋಗುವುದರಿಂದ ಕಸದ ಗಾಡಿಗೆ  ಕಾಯಲು ಆಗುವುದಿಲ್ಲ. ಹೇಗೂ ಖಾಲಿ ನಿವೇಶನ, ಮುಂಜಾನೆಯೇ ಆದರೆ ಯಾರೂ ನೋಡುವುದೂ ಇಲ್ಲ. ಇನ್ನೂ ಜಾಗಿಂಗ್, ವಾಕಿಂಗ್ ಹೋಗುವವರಲ್ಲಿ ಕೆಲವರಿಗೆ ಕಸ ಸುರಿಯುವುದು ಹವ್ಯಾಸ. 

ಇಷ್ಟೆಲ್ಲಾ ಆಗುತ್ತಿದ್ದರೂ ಇದರ ಬಗ್ಗೆ ಯೋಚಿಸುವುದು ಅದೇ ಸೈಟಿನ ಪಕ್ಕದ ಮನೆಯವರು ಮಾತ್ರ. ಇದನ್ನು ತಡೆಗಟ್ಟ ಬೇಕಾದರೆ ತಡ ರಾತ್ರಿಯಲ್ಲಿ ಜಾಗರಣೆ ಇದ್ದು ಇಲ್ಲವೇ ಮುಂಜಾನೆ ಬೇಗನೆ ಎದ್ದು ಯಾರು ಹಾಕುತ್ತರೆಂದು ನೋಡಬೇಕು. ನೋಡಿದರೂ ಕೆಲವೊಮ್ಮೆ ಅದು ತಮ್ಮ ನೆರಯವರೇ ಅದರಿಂದ ಏನೂ ಹೇಳಲೂ ಆಗದ ಸಂದಿಗ್ದತೆ. ಹಾಗೇನಾದರು ಕಸ ಹಾಕುವವರನ್ನು ಕಂಡು ಕೇಳಿದರೂ ಇಲ್ಲಿ ಮೊದಲೇ ಕಸವಿತ್ತು ಅದಕ್ಕೆ ಹಾಕಿದೆ ಎಂಬ ಉತ್ತರ. ಕಸದಿಂದ ತೊಟ್ಟಿಯೋ , ತೊಟ್ಟಿಯಿಂದ ಕಸವೋ ಎಂಬ ಗೊಂದಲದಿಂದಲೇ ತಮ್ಮದಲ್ಲದ ಜಾಗವನ್ನು ಹೊತ್ತಲ್ಲದ ಹೊತ್ತಿನಲ್ಲಿ ಕಾಯಬೇಕಾದ ಹಣೆಬರಹ ತಮಗೇಕೆ ಎಂದು ಕೊಳ್ಳುತ್ತಾ ಮೂಗು ಮುಚ್ಚಿಕೊಂಡು, ಸೊಳ್ಳೆ ಕಚ್ಚಿಸಿಕೊಂಡು ಬಾಳುವುದನ್ನೇ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇನ್ನು ಗುಡಿಸುವವರನ್ನು, ಕಸ ಸಂಗ್ರಹಿಸುವವರನ್ನು ಅಲ್ಲಿಂದ ಕಸ ಎತ್ತಲು ಹೇಳಿದರೆ, ಅದು ಅವರ ಕಾರ್ಯ ವ್ಯಾಪ್ತಿಗೆ ಬರುವುದಿಲ್ಲವೆಂಬ ಸಿದ್ಧ ಉತ್ತರ. ಅವರೇನಿದ್ದರೂ ರಸ್ತೆಯ ಮೇಲಿನ ಕಸ ತೆಗೆಯುವ ಪರಿಣಿತರು. "ನಾವು ದಿನವೂ ಮನೆಯ ಮುಂದೆಯೇ ತಪ್ಪದೆ ಕಸ ಸಂಗ್ರಹಿಸಿದರೂ ಸೈಟಿನಲ್ಲಿ ಕಸ ಯಾಕೆ ಹಾಕಬೇಕು" ಎಂಬ ಪರಿಣಿತ ಪ್ರಶ್ನೆಗೆ ಎಲ್ಲಿದೆ ಉತ್ತರ? ಕಸ ಹಾಕುವವರನ್ನು ಕೇಳೋಣ ಎಂದರೆ ಮತ್ತೆ ತಡ ರಾತ್ರಿಯ ತನಕ ಕಾಯಬೇಕು ಇಲ್ಲ ಮುಂಜಾನೆ ಚಳಿಯಲ್ಲಿ ಎದ್ದು ಕೇಳಬೇಕು. ಇನ್ನೂ ಸೈಟಿನ ಯಜಮಾನನನ್ನು ಕೇಳಿದರೆ "ಕಸ ಹಾಕ್ತಾರೆಂತ ಕಾಸಿಲ್ಲದಿದ್ದರೂ ಸಾಲ ಮಾಡಿ ಅರ್ಜೆಂಟ್ ಅರ್ಜೆಂಟಾಗಿ ಮನೆ ಕಟ್ಟೋಕೆ ಆಗುತೇನಣ್ಣ ಎನ್ನುತ್ತಾನೆ". ಕಾಪೌಂಡ್ ಹಾಕಿಸಿದರೆ ಅದರ ಮೇಲೆಯೇ ಕಸ ಹಾಕಿರುವ ಭೂಪರ ಉದಾಹರಣೆಗಳೂ ಸಿಗುತ್ತವೆ. ಇನ್ನೂ ಆಗಿದ್ದಾಗಲಿ ಎಂದು ಸೈಟನ್ನು ಆಗ್ಗಿಂದಾಗೆ ಶುದ್ಧಗೊಳಿಸಿದರೆ, ಹೇಗೂ ಶುದ್ಧವಾಗುತ್ತದೆ ಎಂಬ ಭರವಸೆಯಲ್ಲಿ ಅದು ಮತ್ತಷ್ಟು ಅಶುದ್ಧವಾಗುವ ವೇಗ ಆರ್ಶ್ಚಯಗೊಳಿಸುತ್ತದೆ.

ಕೇವಲ ಒಂದು, ರಸ್ತೆ, ಒಂದು ಖಾಲಿ ಜಾಗದಲ್ಲಿ ಇಷ್ಟೆಲ್ಲಾ ಸಮಸ್ಯೆ, ತೊಡಕಿರುವಾಗ ಇಡೀ ನಗರವನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಗೆ ಮೊದಲ್ಲೆಲ್ಲಿ ಕೊನೆಯೆಲ್ಲಿ. ತಮ್ಮ ಊರಲ್ಲಿ ಕಸ ಹಾಕಬೇಡಿ ಎನ್ನುವ ಕೂಗು ಸಹಾ ಸಮರ್ಥನೀಯವಾಗಿ ಕಾಣುತ್ತದೆ.
Charity begins from home ಎನ್ನುವುದು ಕಸದ, ಸ್ವಚ್ಛತೆಯ ವಿಷಯದಲ್ಲಿ ಮನೆಯಿಂದ ಆರಂಭವಾಗಿ ಮನೆಯಲ್ಲೇ ಕೊನೆಗೊಳ್ಳದೇ ಬೀದಿಗೆ, ಬಡಾವಣೆಗೆ, ನಗರಕ್ಕೆ, ಸಮಾಜಕ್ಕೆ ಹರಡಬೇಕಾಗಿರುವುದು ಇಂದಿನ ಅವಶ್ಯಕತೆ. ಇದರಿಂದ ಸಂಬಂಧಪಟ್ಟ ಇಲಾಖೆಗಳಿಗೂ, ಅಧಿಕಾರಿಗಳಿಗೂ ಜವಬ್ದಾರಿ ಮೂಡಿ ಜನರ ಸಹಾಕರದೊಂದಿಗೆ ಸಮಸ್ಯೆಗೆ ಪರಿಹಾರ ದೊರಕಬಹುದು. ಇದು ಇತರ ಎಲ್ಲಾ ಸಮಸ್ಯೆಗಳಿಗೂ ಮಾದರಿಯಾಗಬಹುದು. ಆಗಲಿ. 

-ಪ್ರಶಾಂತ್ ಇಗ್ನೇಷಿಯಸ್ 

Tuesday, 29 January 2013

ಹೊಸವರ್ಷದ ಆಚರಣೆ


ಮೊನ್ನೆ Newbilis ಎಂಬ ಪುಟ್ಟಿಯ ಹುಟ್ಟಿದ ದಿನದಾಚರಣೆಗೆ ಹೋಗಿದೆ. ಅವಳು ಹೊಸವರ್ಷದ ದಿನದಂದು ಹುಟ್ಟಿದ್ದರಿಂದ ಅವಳಿಗೆ Newbilis ಎಂದು ಹೆಸರಿಟ್ಟಿದ್ದರು. Newbilis ಎಂದರೆ ಹೊಸವರ್ಷ ಎಂದಾರ್ಥ. ಅವಳ ನೋಡಿ ಸೂರೆಗೊಂಡು ಬರೆದ ಸಾರವೇ ಸಾಲುಗಳು.

ಯಾರೋ ಕರೆದ
‘ಹೊಸವರ್ಷ ಪುಟ್ಟಿಯ ಹುಟ್ಟಿದಾಚರಣೆಗೆ
ಹೋದೆ ಒಲ್ಲದ ಮನಸ್ಸಿನಿಂದ
ಆಗಲೇ ಸೋಪಾಧಿಕವಾಗಿಬಿಟ್ಟಿದ್ದ
ಆಚರಣೆಗಳ ಬಗೆಗಿದ್ದ ಸಿಡುಕಿನಿಂದ

ಹೋಗಿದಾಕ್ಷಣ ಕಂಡಿದ್ದು
ಕೇಳದೆ ಕೂಡಿದು
ಪುಟ್ಟ ಮಗು 'ಹೊಸವರ್ಷ
ನವಿರಾದ ನಗು
ತೀವ್ರತೆಯ ಸೆಲೆಯಾಗಿದ್ದ  ಮಗು
ಯಾರೋದೋ ಕಟ್ಟುಪಾಡಿನ ಜಾಲ್ರಿ
ಸೂಸಿಗೆ ಸಿಗದ ಅವಳ ಹವಾಭಾವ
ನನ್ನ ನಿಖರ ಮಾತಿನ ಗಾಣದ ಎರೆಗೆ
ತುತ್ತಾಗಲು ನಿರಾಕರಿಸಿತ್ತಿದ್ದರೂ
 ಮಾತು ಕೈಬಿಡದೆ ಪ್ರಯತ್ನಿಸುತಿತ್ತು…

ಅವಳು ಮಾತ್ರ
ದಿಟ್ಟಿಸಿದಳು
ನಕ್ಕಳು..
ಏನನ್ನೋ ಪ್ರಶ್ನಿಸಿ ಬೆನ್ನೆಟ್ಟಿದಳು
ಕಂಡು ಹೊಸಬರ ಬೆಚ್ಚಿಬೆರಗಾದಳು
ಅಮ್ಮನ ಟಾರ್ಚಬೇಕೆಂದು ಹಠ ಹಿಡಿದು
ಕೊಟ್ಟಿದು ಬಿಸಾಡಿದಳು
ಬೇಡದು ಅಪ್ಪಿಕೊಂಡಳು
ಓಡಲು ಹೋಗಿ ಬಿದ್ದು ಎದ್ದಳು
ಎದ್ದು ಬಿದ್ದಳು
ಅಂಬೆಗಾಲಿಡುತ್ತಾ ಮನೆಯನೆಲ್ಲಾ ಸುತ್ತಾಡಿ
ಬಂದು ಕೂತಳು
ಕೂತು ಚೆಲ್ಲಾಡಿದಳು
ಬೆಲೆಯ ಹಂಗಿರಲಿಲ್ಲ ಅವಳಿಗೆ
ಅಂಟಿಕೊಳ್ಳುವ ದುರಾಸೆ ಅವಳಲ್ಲಿ ಹುಟ್ಟಿರಲಿಲ್ಲ
ನಾ ಗಂಡೆನ್ನಲಿಲ್ಲ
ನಾ ಹೆಣ್ಣೆನ್ನಲಿಲ್ಲ
ಜಗತ್ತಿನ ಬೇದವೆಂಬ ವ್ಯಾಕರಣ ಅವಳಿಗೆ ತಿಳಿದಿರಲಿಲ್ಲ
ಲಾಭನಷ್ಟಗಳನ್ನು ಪಕ್ಕಕಿಟ್ಟು
ಸಿಕ್ಕಿದು ಸಿಗದಿದ್ದ
ಪ್ರತಿ ಕ್ಷಣದ ಪ್ರತಿ ಕಣವನ್ನು
ಅಮ್ಮನ ಎದೆಹಾಲು ಹೀರಿದಂತೆ
ಅನುಭೋಗಿಸುತ್ತಾ ಕುಣಿದು ತೊದಲಿತ್ತಿದ್ದಳು
ಮಂದಹಾಸ
ಹೊಸತನ
ಪರಮಾನಂದಗಳ ಜೊತೆಯಾಗಿ

ಅವಳ ಅನನ್ಯಕ್ಕೆ
ನನ್ನ ಬರವಣಿಗೆಯ ಬಲೆ ಹಾಕಿ
ಬಂಧಿಸುತ್ತಿರುವ ನನ್ನ ಮನಸ ನೋಡಿ
ವಿಕೃತ್ತಗೊಂಡೆ.

ಕೊನೆಗೆ,
ಪುಟ್ಟ ಹೊಸವರ್ಷಳನ್ನು ನೋಡಿ
ನನ್ನ ಕಟ್ಟುಪಾಡಿನ ಬದುಕಿಗೆ ಅವಳ ತೋರಿಸಿ
ನಾನೇ ಅವಳಾಗಿ
ಅವಳೇ ನಾನಾಗಿ
ವರ್ಷವಿರಲ್ಲಿ
ಇಡೀ ಬದುಕೇ ಅವಳಂತೆ ನಾನು ಕಳೆಯಬೇಕೆನುವಷ್ಟರಲ್ಲಿ
ಆಚರಣೆ ಮುಗಿಸಿ ಮರಳಿದೆ ನನ್ನ ಮನೆಗೆ
ಹೊಸತನವಿಲ್ಲದ ಯಾರೋದೋ ಕಟ್ಟುಪಾಡಿಗೊಳಪಟ್ಟ
ಮನೆಯೊಡೆಯನಿಲ್ಲದ ನನ್ನ  ದರ್ವೆಸಿ ಬದುಕಿಗೆ

ಜೋವಿ ಯೇ.
Read more!

Monday, 14 January 2013

ಹುಡುಗ ಸಿಬಿಯುಸ್…



ಮದುವೆಯ
ಸಮಾರಂಭದಲ್ಲಿ
ಇರುವುದೆಲ್ಲಾ ಸಗಡರ ಸಂಭ್ರಮ ಎಂಬ ನನ್ನ ಭ್ರಮೆಗೆ
ಸಿಕ್ಕಿಕಾಡಿದ್ದು ಹುಡುಗ ಸಿಬಿಯುಸ್ !!!

ವಯಸ್ಸನ್ನು ಮೀರಿದ ಹವಾಭಾವ
ಅಪ್ಪನ ಗಾಂಭಿರ್ಯದ ಒರಟು ಜೀವ
ಒಣ ಎಲೆಯ ಮುಖದ
ಏನನ್ನೋ ಸಾಲ ಕೇಳುವಂತಿದ್ದ ಆ ಹುಡುಗ
ಚಿಂತೆಬಾವಿಯ ಆಳಕಿಳಿದಿದ್ದ ಅವನ ಮನಸ್ಸು
ವಿಧಿಗೆ ಆಟಕ್ಕೆ ಬರಿದಾದಂತೆ ಅವನ ಕನಸ್ಸು
ದಿಕ್ದೆಸೆಗಳು ತಪ್ಪಿ ಕಂಗೆಟ್ಟವನಂತೆ
ಶಬ್ದದಾಚೆಗಿನ ಶೂನ್ಯದಲ್ಲಿ ಕರಗಿ ಹೋದವನಂತೆ ಕಂಡ
ಸಿಬಿಯುಸ್…

ತಮ್ಮನ ಕೈಗೆ ಕೈಯನಿಟ್ಟು
ನಡೆಯುತ್ತಿದ್ದ ಸಡಗರಕ್ಕೆ ಕೈಕೊಟ್ಟು
ಅಲ್ಲಿ ಇಲ್ಲಿ ಕೂತು ಕೇಳುತ್ತಿರುವುದನು ಕೂಡಿಟ್ಟು
ಹಸಿದ ಕಣ್ಣುಗಳಲ್ಲಿ ಕಾಣುವುದೆಲ್ಲಾವ ಹಿಡಿದಿಟ್ಟು
ಅವರನು ಇವರನು ದಿಟ್ಟಿಸುತ್ತಾ
ಏನೇನೋ ತನಗೆ ತಾನೆ ಹೇಳಿಕೊಳ್ಳುತ್ತಾ
ಕಂಡ ಜನಜಂಗುಳಿಯಲ್ಲಿ ಅಪರೂಪ ತಾತ್ವಿಕನಂತೆ

ಆಮೇಲೆ
ಅನಾಥ ಅವನೆಂದು ತಿಳಿದು
ನನ್ನ ಮನಸ್ಸು ದಿಟ್ಟಿಸಿ
ಕೇಳಿತು
ಸಮಾರಂಭದಲ್ಲಿ
ಅವನು ನೋಡುತ್ತಿರುವುದಾದರೂ ಏನು ಎಂದು…

ಅಮ್ಮಂದಿರ ಜತೆಗೆ ಆಟವಾಡುತ್ತಿದ್ದ ಮುದ್ದು ಮಕ್ಕಳ ನಗುವಿತ್ತು
ಸಂಭ್ರದಲ್ಲಿ ಮೈ ಮರೆತ ಕೊಟುಬೂಟಿನ ಜನರ ಕೂಗಾಟವಿತ್ತು
ಅಮಲಿನ ಅರ್ಭಟವಿತ್ತು
ಕದ್ದು ಇಣುಕುತ್ತಿದ್ದ ಹುಡುಗ ಹುಡಿಗಿಯರ ಮೈಮಾಟವಿತ್ತು
ಕಷ್ಟದಲ್ಲೂ ಸುಖದಲ್ಲೂ ಸದಾ ಜತೆಗಿರುವೆ ಎಂದೇಳುತ್ತಿದ್ದ ಜೋಡಿಗಳ ಕಂಗಳಲ್ಲಿ
ನಾಳಿನ ಭಯವಿತ್ತು
ಖರ್ಚಿನಲ್ಲಿ ಮುಳುಗಿದ ಮದುವೆಯ ಲೆಕ್ಕಚಾರವಿತ್ತು
ವೈಯಾರವಿತ್ತು..ವೈಭವವಿತ್ತು
ಆಲಂಕಾರ ತುಂಬಿ ತುಳುಕಿತ್ತು
ಮೃಷ್ಟಾನ ಭೋಜನದ ಸುವಾಸನೆಯಲ್ಲಿ
ಅಪ್ಪ ಅಮ್ಮರ ನಿಟ್ಟುಸಿರು
ನವದಂಪತಿಗಳ ಬಿಸಿ ಉಸಿರು ಹೆಪ್ಪುಗಟ್ಟಿ ನಿಂತಿತ್ತು

ಹೀಗೆ
ಇವುಗಳಲ್ಲಿ
ಅವನು ನೋಡಬೇಕೆಂದಿರುವುದಾದರೂ ಏನು?
ಅವನ ಅಂತರಾಳಕ್ಕೆ ಕನ್ನಡಿ ಹಿಡಿಯಲು
ನನದಲ್ಲದ ಅವನ ಮನಸ್ಸನು ಮಾತಿಗಿಳಿಸಲು
ಅಕ್ಷರಗಳ ತಡಕಾಟದಲ್ಲಿ
ತೂಗಿ ಕೊಡುವ ಯಾರದೋ ಅಂಗಡಿಯಲ್ಲಿ
ಖರೀದಿಸಿದ ಅಕ್ಷರಗಳ ಮೊರೆಹೋಗಿ
ಕೊನೆಗೆ
ಭಗ್ನಗೊಂಡು ಹೇಳಿತ್ತು ಮನಸ್ಸು ಮಾಗಿ
“ಅವನ ಒಟ್ಟು ಭಾವಸಮುದ್ರವನ್ನು ತೂಗಿ
ತನ್ನ ಅಂಗೈನಲ್ಲಿ ಹಿಡಿದಿಡಲು ಹೆಣಗಾಡುತ್ತಿರುವ ಹುಚ್ಚ ತಾನೆಂದು…”
ಸುಮ್ಮನಾದೆ
ಹುಟ್ಟಿಸಿದ ದೇವರ ಬೈಯುತ್ತಾ....!!!
ಜೋವಿ ಯೇ.ಸ

Monday, 7 January 2013

ಸ್ಕೂಲ್ ಸಂತೆ

ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ ಹಾಡು ಕೇಳಿ
ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು
ಎಂಬ ದಾಸರ ಪದದ ಗೀತೆ ಕೇಳುತ್ತಿದ್ದಂತೆ ಮನಸ್ಸು ಉಲಾಸಗೊಳ್ಳುತ್ತದೆ. ದೇವರ ನಾಮವನ್ನು ಕಲ್ಲು ಸಕ್ಕರೆಗೆ ಹೋಲಿಸಿ ಅದರ ಸವಿಯನ್ನು ಬಲ್ಲವರೇ ಧನ್ಯರು, ಎಲ್ಲರೂ ಆ ಸವಿಯನ್ನು ಅನುಭವಿಸಿರಿ ಎಂದು ಕರೆ ನೀಡುವಾ ಆಧ್ಯಾತ್ಮ ಗೀತೆಯಿದು. ಹಾಗೆಯೇ ಮುಂದಿನ ಸಾಲುಗಳಲ್ಲಿ ದಾಸರು ಸಂತೆಯ ಚಿತ್ರಣವನ್ನು ನೀಡುತ್ತಾರೆ. ಈ ದೇವರ ನಾಮವೆಂಬ ಕಲ್ಲು ಸಕ್ಕರೆಯನ್ನು ಸಂತೆಯಲ್ಲಿ ಇಟ್ಟು ಮಾರಬೇಕಾಗಿಲ್ಲ, ಸಂತೆ ಸಂತೆಗೆ ಹೋಗಿ ಶ್ರಮ ಪಡಬೇಕಾಗಿಲ್ಲ ಎಂಬ ಸಾಲುಗಳು ಬರುತ್ತವೆ. ಅಂತೆಯೇ ಒಂದು ಎತ್ತಿನ ಗಾಡಿಯಲ್ಲಿ ಹೊತ್ತುಕೊಂಡು ಹೋಗಬೇಕಾಗಿಲ್ಲದ, ಗೋಣಿಯಲ್ಲಿ ತುಂಬ ಬೇಕಾಗಿಲ್ಲದ ಉತ್ತಮ ಸರಕಿದು ಎಂದು ದೈವ ನಾಮ ಸ್ಮರಣೆಯನ್ನು ಲೋಕದ ವ್ಯಾಪಾರ, ಜಂಜಾಟಗಳೊಂದಿಗೆ ಉದಹರಿಸುತ್ತಾ ಸಾಗುತ್ತಾರೆ ದಾಸರು. ಈ ರೀತಿಯ ಉದಹರಣೆಗಳೊಂದಿಗೆ ಸಾಮಾನ್ಯ ಜನರನ್ನು ಯಶಸ್ವಿಯಾಗಿ ತಲುಪಿದ ಹೆಗ್ಗಳಿಕೆ ಈ ದಾಸ ಸಾಹಿತ್ಯದ್ದು.  ಹಾಗೆಯೇ ಬದುಕಿನ ಜಂಜಾಟಗಳೆಲ್ಲಾ ಕ್ಷಣಿಕ ಎಲ್ಲವೂ ಮುಗಿದ ಮೇಲೆ ಶಾಶ್ವತವಾಗಿ ಉಳಿಯುವುದು  ಭಗವಂತನೊಂದಿಗಿನ ಅನುಬಂಧವೊಂದೇ ಎಂಬರ್ಥದ ಮತ್ತೊಂದು ಪದವೂ ದಾಸ ಸಾಹಿತ್ಯದಲ್ಲಿ ಇದೆ. ಬದುಕನ್ನು ಒಂದು ಸಂತೆಗೆ ಹೋಲಿಸಿ, ಸಂತೆಯಲ್ಲಿ ಕಾಣ ಸಿಗುವ ವಸ್ತುಗಳು, ಘಟನೆಗಳು, ಆಗು ಹೋಗುಗಳು, ವ್ಯಾಪರದ ದೃಶ್ಯಗಳು ನಂತರ ಸಂಜೆ ಎಲ್ಲವೂ ಖಾಲಿಯಾದಾಗ ಉಳಿಯುವ ಮೌನ, ಖಾಲಿತನ, ನಿರಾಳತೆಯನ್ನು ನಮ್ಮ ಬದುಕಿನ ನಶ್ವರತೆಗೆ ಈ ದಾಸರಪದ ಸುಂದರವಾಗಿ ಹೋಲಿಸಿ ವರ್ಣಿಸುತ್ತದೆ. ಅಕ್ಕ ಮಹಾದೇವಿಯ 'ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯ?' ಸಾಲಂತೂ ಸರ್ವಕಾಲೀಕ. 

ಸಂತೆಯೆಂಬುದು ಒಂದು ವ್ಯಾಪಾರದ ಚಟುವಟಿಕೆಯಾದರೂ ಈ ಅಧ್ಯಾತ್ಮದ ಬರಹಗಳಲ್ಲಿ ಅದು ನುಸುಳಿರುವುದನ್ನು ಕಂಡಾಗ ಸಂತೆಗಳು ನಮ್ಮ ಜನರ ಜೀವನ, ಸಂಸ್ಕೃತಿಯ ಪ್ರಮುಖ ಭಾಗವಾಗಿತ್ತು ಎಂಬುದನ್ನು ಗಮನಿಸಬಹುದು. ಮೇಲಿನ ಅಧ್ಯಾತ್ಮದ ಸಾಲುಗಳು ಅರ್ಥವಾಗಬೇಕಾದರೆ ನಮಗೆ ಒಂದು ಸಂತೆಯ ಸಮಗ್ರವೂ ಅತ್ಯಗತ್ಯ. ಈ ಸಾಲುಗಳಲ್ಲಿ ಬರುವ ಈ ಸಂತೆಗಳ ವೈವಿಧ್ಯತೆ, ಸಡಗರ, ಗಿಜಿಗಿಜಿ,ಸಂಭ್ರಮ, ಜಂಜಾಟದ  ಸ್ಪಷ್ಟ ಚಿತ್ರಣ ನಮಗೆ ದೊರಕಬೇಕಾದರೆ ಹಳ್ಳಿಗಳಲ್ಲಿ ನಡೆಯುವ ಸಂತೆಗಳಿಗೊಮ್ಮೆ ಭೇಟಿ ಕೊಡಲೇಬೇಕು. ಕೆಲವೇ ವರ್ಷಗಳ ಹಿಂದಿನವರೆಗೂ ನಮ್ಮ ಬೆಂಗಳೂರಿನ ಹೊರವಲಯದ ಹಳ್ಳಿಗಳಲ್ಲೇ ಈ ರೀತಿಯ ಹಲವಾರು ಸಂತೆಗಳನ್ನು ಕಾಣಬಹುದಿತ್ತು. ಆದರೆ ಯಾವಾಗ ಬೆಂಗಳೂರು ಕೇವಲ ಬೆಂಗಳೂರಾಗಿ ಉಳಿಯದೇ ಬೃಹತ್ತ್ ಬೆಂಗಳೂರಾಯಿತೋ, ಸಂತೆಗಳು ಮಾಯವಾಗಿ ಹೋಗಿವೆ. ಆ ಜಾಗಗಳಲ್ಲಿ ಈಗ ನೈಸಾದ ರೋಡುಗಳು, ಗಿಡ ಮರವಿಲ್ಲದ ಟೆಕ್ನಾಲಜಿ ಪಾರ್ಕುಗಳು, ನಮೋ ವೆಂಕಟೇಶವಿಲ್ಲದೆ ಪ್ರಾರಂಭವಾಗುವ ಮಲ್ಟಿಪ್ಲೆಕ್ಸುಗಳು, ಆಧುನಿಕ ಜಾತ್ರೆಗಳಾದ ಮಾಲುಗಳು, ಹುಟ್ಟು ಸಾವು ಎರಡಕ್ಕೂ ಕಟ್ಟುವ ಬಣ್ಣದ ಬ್ಯಾನರ್ ಗಳು, ಫ್ಲೆಕ್ಸುಗಳು ಎದ್ದು ನಿಂತಿವೆ.  ಇವೆಲ್ಲದರ ಮಧ್ಯೆ ನಮ್ಮ ಮಕ್ಕಳಿಗೆ ಸಂತೆಗಳನ್ನು ತೋರಿಸುವುದೆಲ್ಲಿಂದ, ಮೇಲಿನ ದಾಸರ ಪದವನ್ನು ಅರ್ಥ ಮಾಡಿಸುವುದು ಹೇಗೆ ಎಂದು ನಿರಾಸೆ ಪಡಬೇಕಾಗಿಲ್ಲ. ಒಂದು ಸಂತೆಯ ಗಿಜಿಗಿಜಿ, ಸಂಭ್ರಮ, ತಲ್ಲಣ, ಅವಸರ, ಫಜೀತಿಗಳೆಲ್ಲಾ ನೋಡಬೇಕಾದರೆ ಬೆಂಗಳೂರಿನ ಯಾವುದಾದರೂ ಪ್ರತಿಷ್ಠಿತ ಶಾಲೆಯ ಮುಂದೆ ಬೆಳಿಗ್ಗೆ ಶಾಲೆ ಪ್ರಾರಂಭವಾಗುವ ಸಮಯದಲ್ಲಿ ಹೋಗಿ ನಿಂತರೆ ಸಾಕು. ರಸ್ತೆ ವಿಶಾಲವಾಗಿರದೆ ಕಿರಿದಾಗಿದ್ದರೆ,ನೂಕು ನುಗ್ಗುಲು, ಟ್ರಾಫಿಕ್ಕ್ ಜ್ಯಾಮ್ ಆಗುವ ಶಾಲೆಯಾದರೆ ಇನ್ನೂ ಉತ್ತಮ. ಆ ಬೆಳಗ್ಗಿನ ಒಂದು ಅರ್ಧ ಗಂಟೆ ಅದು ಹಳ್ಳಿಯ ಸಂತೆಯೇ. ಎಲ್ಲರಿಗೂ ಅವಸರ. ಇಲ್ಲಿ ಅವರಸವೇ ಅನುಕೂಲಕ್ಕೆ ಕಾರಣ. 

ಮೊದಲಿಗೆ ಒಂದು ಕಡೆಯಿಂದ ಬರುವ ಸ್ಕೂಲ್ ವ್ಯಾನಿಗೆ ಎಲ್ಲರೂ ಜಾಗ ಬಿಡಲೇ ಬೇಕು. ಏಕೆಂದರೆ ಅದು ಆ ಸ್ಕೂಲಿನ ವ್ಯಾನು. ಆ ವ್ಯಾನಿನ ಡ್ರೈವರ್‌ದು, ಸಂತೆ ನಡೆಯುತ್ತಿರುವ ಊರಿನ ಗೌಡರ ಎತ್ತಿನ ಗಾಡಿ ಓಡಿಸುವವನ ಭಂಗಿ, ಠೀವಿ.  ನಿಂತ ವ್ಯಾನಿನಿಂದ ಇಳಿಯುತ್ತಿರುವ ಅಥವಾ ಇಳಿಸುತ್ತಿರುವ ಮಕ್ಕಳನ್ನು ನೋಡಿದ ಕ್ಷಣ ಸಂತೆಗಳಲ್ಲಿ ಲಾರಿ ಮೆಟಡೋರ್‌ನಿಂದ ಇಳಿಸಿಕೊಳ್ಳುತ್ತಿರುವ ಮೂಟೆಗಳ ಚಿತ್ರಣ ಸಿಗದಿದ್ದರೆ ಕೇಳಿ. ಇದಕ್ಕೆ ಮಕ್ಕಳ ಬ್ಯಾಗುಗಳು ಒಂದು ಕಾರಣವಾದರೆ ಮಕ್ಕಳ ನಿರ್ಭಾವುಕ ಮುಖ ಭಾವ ಮತ್ತೊಂದು ಕಾರಣ. ಒಂದು ಮೂಟೆ ಎಳೆದ ತಕ್ಷಣ ಅದಕ್ಕೆ ಒರಗಿಕೊಂಡಿದ್ದ ಇನ್ನೊಂದು ಮೂಟೆ ತಾನಾಗಿಯೇ ಬೀಳುವಂತೆ, ವ್ಯಾನ್ ನಿಂತ ಮೇಲೆ ಮಕ್ಕಳು ನಿಂತುಕೊಂಡರೆ ಸಾಕು, ವ್ಯಾನಿನ ಕ್ಲೀನರ್ ತಾನೇ ಮಕ್ಕಳನ್ನು ಎಳೆದು ಎಳೆದು ಕೆಳೆಗ ಬಿಡುತ್ತಾನೆ. ಅದೇ ವೇಗದಲ್ಲೇ ಮಕ್ಕಳು ತಮ್ಮ ತಮ್ಮ ತರಗತಿ ಸೇರಿಕೊಳ್ಳುತ್ತವೆ. ಇನ್ನೂ ಮಕ್ಕಳನ್ನು ತುಂಬಿಕೊಂಡು ಬರುವ ಆಟೋಗಳಂತೂ ಥೇಟ್ ಎತ್ತಿನ ಗಾಡಿಗಳೇ. ಗಾಡಿಯ ಗಾತ್ರವನ್ನು ದಾಟಿ ಚಾಚಿಕೊಳ್ಳುವ ಕಬ್ಬು, ಕಾಯಿಯಂತೆ, ಚಾಚಿ ಕೊಂಡಿರುವ ಮಕ್ಕಳ ಬ್ಯಾಗುಗಳ ಮುಂದೆ ಆಟೋದ ನಿಜ ಸ್ವರೂಪ ಕಾಣುವುದು ಕಷ್ಟವೇ.ಸ್ಕೂಲ್ ವ್ಯಾನಿಗೆ ಸಿಕ್ಕ ಹಾಗೇ ಸುಲಭದಲ್ಲಿ ಆಟೋಗೆ ದಾರಿ ಸಿಗಿವುದಿಲ್ಲ. ಜನರೂ ದಾರಿ ಬಿಡುವುದಿಲ್ಲ. ಆದರೆ ಡ್ರೈವರ್ ಇದಕ್ಕೆಲ್ಲಾ ಬೇಸರ ಮಾಡಿಕೊಳ್ಳುವುದೇ ಇಲ್ಲ. ಏಕೆಂದರೆ ಅವನಿಗಾಗಲೇ ಕೋಪ ಬಂದಿರುತ್ತದೆ. ಕೋಪ ಹಾಗೂ ಬೇಸರ ಎರಡೂ ಭಾವಕ್ಕೆ ಅಲ್ಲಿ ಸಮಯವೂ ಇಲ್ಲ, ಜಾಗವಂತೂ ಇಲ್ಲವೇ ಇಲ್ಲ. ಹಾಗೆ ಬೇಸರ ಮಾಡಿಕೊಂಡರೆ ಯಾರೂ ದಾರಿ ಬಿಡುವುದಿಲ್ಲ. ಆ ಸಮಯದಲ್ಲಿ ಕೋಪ ಉಪಯೋಗಕ್ಕೆ ಬರುತ್ತದೆ. ಕೋಪದಲ್ಲಿ ಬಯ್ದರೆ ಮಾತ್ರ ಮುಂದೆ ಇರುವ ಜನ  ಸೈಡ್ ಬಿಡುವುದು. ಆಟೋ ಒಳಗಿನ ಮಕ್ಕಳ ಶಬ್ದ ಭಂಡಾರಕ್ಕೂ ಅದು ಉಪಯುಕ್ತ. ಸಂತೆಯಲ್ಲಿ ತನ್ನ ವಸ್ತು ಮಾರಲು ವ್ಯಾಪರಿ ಕೂಗುವಂತೆ, ಇಲ್ಲಿ ಎಲ್ಲವನ್ನು ಕೂಗಿ ತೂಗಿಯೇ ಹೇಳಬೇಕು. ಬಯ್ಗುಳಗಳನ್ನು ಕೂಡ.  

ಇನ್ನೂ ಮಕ್ಕಳನ್ನು ಬಿಡಲು ಕಾರಿನಲ್ಲಿ ಬರುವವರ ಕಷ್ಟ ಸುಖ ಅವರಿಗೇ ಪ್ರೀತಿ. ಮೊದಲೇ ಸಣ್ಣ ರಸ್ತೆ.  "ಇಷ್ಟ್ ಚಿಕ್ಕ್ ರೋಡಲ್ಲಿ ಕಾರ್ ತಂದ್ ಬಿಡ್ತಾರೆ, ಏನ್ ಇವರೊಬ್ರತ್ರನೇ ಕಾರ್ ಇರೋದು" ಎಂದು ಕಾರಿನ ಹಿಂದೆ ಇರುವವರು ಬಯ್ದುಕೊಂಡರು ಕಾರನ್ನು ಸಾಗಿ ಮುಂದೆ ಹೋಗುತ್ತಿದ್ದಂತೆ ಏನೂ ಹೇಳುವುದಿಲ್ಲ. ಸಾಧ್ಯವಾದರೇ ಒಂದು ಹಾಯ್ ರೀತಿಯ ನಗು. ಜನ ಇಷ್ಟೆಲ್ಲಾ ಬಯ್ದದ್ದು ಗೊತ್ತಾದರೂ ಕಾರನಲ್ಲಿ ಬಂದವರು ಏನೂ ಆಗದಂತೆ ನಟಿಸುತ್ತಾರೆ. ದಿನವೂ. ಸಂತೆಯಲ್ಲಿ ಎರಡಷ್ಟು ಬೆಲೆ ನಿಗದಿ ಮಾಡಿ ಜನರಿಂದ ತೆಗಳಿಸಿಕೊಂಡರು ಜಗ್ಗದ ದುರುಳ ವ್ಯಾಪಾರಿಯಂತೆ. ಇದ್ದುದರಲ್ಲಿ ಈ ದ್ವಿಚಕ್ರ ವಾಹನಗಳಲ್ಲಿ ಬರುವವರು ಅಲ್ಪ ತಪ್ತರು. ಮಕ್ಕಳನ್ನು ಗೇಟಿನ ಬಳಿಯೇ ಬಿಟ್ಟು ಹುಷಾರು ಎಂದು ಹೇಳಿ ಫ್ಲೈಯಿಂಗ್ ಕಿಸ್ ( ತಮ್ಮ ಮಕ್ಕಳಿಗೇ) ಕೊಡುವಷ್ಟರಲ್ಲಿ ಹಿಂದಿನಿಂದ ಬಂದ ಬೈಕೊಂದು ಹಿಂದಿನ ನೇಮ್ ಪ್ಲೇಟಿಗೆ ಸಣ್ಣಗೆ ಮುತ್ತಿಟ್ಟಿರುತ್ತದೆ.  ಕೋಪ ಮಾಡಿಕೊಳ್ಳೋಣ ಎಂದರೆ ಕಳೆದ ವಾರ ಅದೇ ಜಾಗದಲ್ಲಿ ಅದೇ ರೀತಿ ತಾನು ಇನ್ನೊಂದು ವಾಹನಕ್ಕೆ ಮುತ್ತಿಟ್ಟ ನೆನಪಾಗಿ ಸುಮ್ಮನಾಗಬೇಕಾಗುತ್ತದೆ.ಶಾಲೆಯ ಒಳಗೆ ಹೋಗಬೇಕಾದವರು ಅಲ್ಲೇ ಯಾವುದಾದರೂ ನೋ ಪಾರ್ಕಿಂಗ್ ಬೋರ್ಡ್ ಹುಡುಕಿ ಅದರ ಕೆಳಗೆ ಗಾಡಿ ನಿಲ್ಲಿಸಿ ಹೋಗುತ್ತಾರೆ.ಸಂತೆಯಲ್ಲಿನ "ಇಲ್ಲಿ ಗಲೀಜು ಮಾಡಬಾರದು" ಎಂದು ಬರೆದ ಗೋಡೆಯೇ ಹೆಚ್ಚು ಗಲೀಜು ಆಗಿರುವಂತೆ. ಅಲ್ಲಿ ಜಾಗ ಸಿಗದಿದ್ದವರು ವಾಚ್ ಮ್ಯಾನ್ ಕಣ್ಣ್ತಪ್ಪಿಸಿ ಶಾಲೆಯ ಗೇಟಿನ ಮುಂದೆಯೇ ನಿಲ್ಲಿಸಿ ಹೋಗುತ್ತಾರೆ. 

ಇದೆಲ್ಲದರ ಮಧ್ಯೆ ಕಾಲು ನಡಿಗೆಯಲ್ಲಿ ಬರುವವರ ಕಷ್ಟ ಹೇಳ ತೀರದು. ಇಷ್ಟೆಲ್ಲಾ ವಾಹನಗಳ ಮಧ್ಯೆ ನಡೆಯಲು ಜಾಗವಿಲ್ಲದೆ ಪುಟ್ ಪಾತಿನ ಕಡೆ ಹೋದರೆ, ಅಲ್ಲಿ ವಿಲೇವಾರಿ ಆಗದ ಕಸ ತನ್ನ ಸಾಮ್ರಾಜ್ಯವನ್ನು ದಿನೇ ದಿನೇ ವಿಸ್ತರಿಸುತ್ತಲೇ ಇರುತ್ತದೆ. ಶಾಲೆಗೆ ಬಂದವರೂ ಸಹ ಅದಕ್ಕೆ ತಮ್ಮ ಕಪ್ಪ ಕಾಣಿಕೆ ಅರ್ಪಿಸುತ್ತಾ ತಾಜ್ಯ ವಿಸ್ತರಣೆಯಲ್ಲಿ ಸಹಾಯ ಮಾಡುತ್ತಾರೆ. ಆಡ್ದ ನಿಂತ ದ್ವಿಚಕ್ರ ವಾಹನಗಳ ಸುಡುತ್ತಿರುವ ಸೈಲೆನ್ಸ್ ರ್ ಗಳ ಮಧ್ಯೆ ನುಸುಳಿಕೊಂಡು ಹೋಗುವಾಗಿನ ಮಕ್ಕಳ ಮುಖಭಾವಕ್ಕೂ  ಸಂತೆಯ ಗಿರಗಿಟ್ಟಲೆಯಲ್ಲಿ ಕೂತು ತಲೆಸುತ್ತಿಸಿಕೊಂಡ ಹಳ್ಳಿಗನ ಮುಖ ಭಾವಕ್ಕೂ ಅಂತ ವ್ಯತ್ಯಾಸವೇನು ಇರುವುದಿಲ್ಲ. ಈ ಮಧ್ಯೆ ಸಂತೆಯಲ್ಲಿ ಮಾರಾಟವಾಗ ಬೇಕಿರುವ ಕುರಿಯೊಂದು ನಡೆಯದೆ ಮೊಂಡಾಟ ಮಾಡಿದಾಗ ಕತ್ತಿಗೆ ಕಟ್ಟಿದ ಹಗ್ಗವನ್ನು ಹಿಡಿದು ದರದರನೆ ಎಳೆದು ತರುವ ಕಟುಕನಂತೆ, ಶಾಲೆಗೆ ಬರಲು ಹಠ ಮಾಡುವ ಮಗನನ್ನೋ ಮಗಳನ್ನೋ ಎಳೆದು ತರುವ ಪೋಷಕರ ದೃಶ್ಯವೂ ಕಾಣ ಸಿಗುತ್ತದೆ. ಕುರಿಯ "ಮ್ಯಾ ಮ್ಯಾ" ಸದ್ದಿಗಿಂತ ಹೃದಯವಿದ್ರಾವಕ ಆ ಮಗುವಿನ ಅಳು. ಒಮ್ಮೆ ಶಾಲೆಯ ಬೆಲ್ಲ್ ಹೊಡೆದು ಪ್ರಾರ್ಥನಾ ಗೀತೆ ಪ್ರಾರಂಭವಾಗುತ್ತಿದ್ದಂತೆ ಇಡೀ ರಸ್ತೆ ನಿರಾಳತೆಗೆ ಹಿಂದಿರುಗುತ್ತದೆ. ತಡವಾಗಿ ಬಂದವರು ಓಡಿ ಬರುತ್ತಿದ್ದರೆ, ಪೆನ್ ಮರೆತ ಹುಡುಗ ಹತ್ತಿರದ ಅಂಗಡಿಗೆ ಓಡುತ್ತಿರುವುದು, ಮಕ್ಕಳನ್ನು ಬಿಟ್ಟ ತಾಯಿ ತನ್ನ ಕೆದರಿದ ಕೂದಲನ್ನು ಸರಿ ಮಾಡಿಕೊಳ್ಳುತ್ತಿರುವುದು, ಗಾಡಿಯ ಕನ್ನಡಿಯಲ್ಲಿ ಕಣ್ಣೊರೆಸಿಕೊಳ್ಳುತ್ತಿರುವ ತಂದೆ, ಗುಡ್ ಮಾರ್ನಿಂಗ್ ಹೇಳಿದ ವಾಚ್ ಮ್ಯಾನ್‌ಗೆ ಪ್ರತಿಕ್ರಯಿಸದೆ ಪ್ರೆಯರ್ ಮುಗಿಯಿತೇ ಎಂದು ಕೇಳುತ್ತಾ ಓಡುವಾ, ಇಲ್ಲವೇ ಓಡುತ್ತಾ ಕೇಳುವ ತಡವಾಗಿ ಬಂದ ಟೀಚರ್,  ಮನೆ ಮುಂದೆ ಯಾರೂ ಗಾಡಿ ನಿಲ್ಲಿಸಲು ಬಿಡದೆ ಗೆದ್ದ ಸ್ಕೂಲ್ ಎದುರು ಮನೆಯ ಅಂಕಲ್  .. ಹೀಗೆ ಒಂದೆರೆಡು ಕೊಸರು ದೃಶ್ಯಗಳು ಕಾಣುತ್ತವೆ.

ಮುಂದಿನ 5 ನಿಮಿಷದಲ್ಲಿ ಎಲ್ಲವೂ ಪ್ರಶಾಂತ. ದಾಸರು ಹೇಳಿದ ಬದುಕೆಂಬ ಸಂತೆ ಮುಗಿದ ಮೇಲೆ ಎಲ್ಲವೂ ನಿರಾಳ ಎಂಬ ನಶ್ವರದ ಮಾತಂತೆ ಇಡೀ ರಸ್ತೆ ಏನೂ ಆಗಿಲ್ಲದಂತೆ ತನ್ನ ಮೂಲ ಸ್ವರೂಪಕ್ಕೆ ಮರಳಿರುತ್ತದೆ. ಎಲ್ಲವೂ ಮುಗಿಯಲಿ ಎಂಬಂತೆ ಕಾದು ಕುಳಿತ್ತಿದ್ದ ಕೋಗಿಲೆಯೊಂದು ಮತ್ತೆ ಕುಹೂ ಕುಹೂ ಎನ್ನುತ್ತಿದಂತೆ ಹಿಮ್ಮೇಳದಲ್ಲಿ ತರಗತಿಯೊಂದರ ಕಿಟಕಿಯಲ್ಲಿ ಮಕ್ಕಳು ಮಗ್ಗಿ ಹೇಳುತ್ತಿರುವ ಸದ್ದು  ಗಾಳಿಯಲ್ಲಿ ತೇಲಿ ಬರುತ್ತದೆ. 

ಇನ್ನೂ ಸಂಜೆ ಶಾಲೆ ಬಿಡುತ್ತಿದ್ದಂತೆ ಆದು ಬೇರೆಯದೇ ಆದ ಮತ್ತೊಂದು ಜಗತ್ತು . . . . . . .ಅದರ ಬಗ್ಗೆ ಇನ್ನೊಮ್ಮೆ ಬರೆದೇನು...

 -ಪ್ರಶಾಂತ್ ಇಗ್ನೇಷಿಯಸ್


ಚಿತ್ರಗಳು : ದಿ ಹಿಂದು ಹಾಗೂ ಡೆಕ್ಕನ್ ಹೆರಾಲ್ಡ್

Tuesday, 1 January 2013

ಹೊಸ ವರ್ಷದ ನನ್ನ ಹೊಸ ಬಯಕೆ


ನನ್ನ ಗೆಳೆಯರೊಬ್ಬರು ಸಿಡಿಮಿಡಿಯಿಂದಲೇ ನನ್ನ ಜತೆಗೆ ಮಾತಿಗಿಳಿದರು. ಮಾತು ಮಾತಿಗೂ ಹತ್ತಾಶೆ,..ಅತೃಪ್ತಿ. ಅವರ ಬಾಯಿಂದ ಅಗಾಗ ಮೋಟರ್ ಸೈಕಲ್ಗಳಿಂದ ದುತ್ತನೆ ಹೊರಬರುವ ಬಿಸಿ ಬಿಸಿ ಹೊಗೆಯಂತೆ ಹೊರ ಬರುತ್ತಿತ್ತು. ಎಷ್ಟೋ ವರ್ಷಗಳಿಂದ ಭ್ರಷ್ಟ, ಅನ್ಯಾಯ ಹಾಗು ದಬ್ಬಾಳಿಕೆಯ ವಿರುದ್ಧ ಪಣತೊಟ್ಟು  ಹೋರಾಡಿದ ಜೀವ  ಇಂದು ಯುದ್ಧದ ಮಧ್ಯದಲ್ಲೇ ಸೋಲಿಗೆ ಶರಣಾದ ಸೈನಿಕನಂತೆ ಕಂಡರು. ಮೊದಲಿನಷ್ಟ ತೀಕ್ಷ್ಣವಾಗಿರದ ಅವರ ಮಾತುಗಳು, ತನ್ನ ಜೀವಮಾನದ ಕಡು ವೈರಿನೊಡನೆ ರಾಜಿಮಾಡಿಕೊಂಡಂತಿತ್ತು. ಹತ್ತಾಶ ರಕ್ತದಲ್ಲಿ ತೊಯ್ದಂತಹ ಅವರ ವಿಚಾರಗಳು ಗುರಿ ಮುಟ್ಟುವ ಮೊದಲೇ ತನ್ನ ಹೋರಾಟಕ್ಕೆ ಗುಡ್ ಬೈ ಹೇಳಿದಂತಿತ್ತು.

ಹೌದು, ಅನ್ಯಾಯ ದಬ್ಬಾಳಿಕೆಯ ಮತ್ತು ಭ್ರಷ್ಟ ವ್ಯವಸ್ಥೆಯ ವಿರುದ್ಧ ನಿದ್ದೆ, ನೀರು ಊಟ ಬಿಟ್ಟು ಹೋರಾಡಿದ ಎಷ್ಟೋ ಸಾತ್ವಿಕರ ಅನುಭವವಿದು. ಆದರೆ, ಇವರೆಲ್ಲರು ತಾವು ಸೋಲುತ್ತೇವೆ ಎಂದು ಮುಂಚಿತವಾಗಿ ಗೊತ್ತಿದ್ದರೂ ಒಂದು ಒಳ್ಳೆಯ ಸಂಪ್ರದಾಯವನ್ನು, ನ್ಯಾಯವಾದ ವ್ಯವಸ್ಥೆಯನ್ನು ರೂಪಿಸಲು ದೊಡ್ಡ ಗಂಡಾಂತರದ ಚಪಡಿಗಳನ್ನೇ ತಮ್ಮ ಮೇಲೆ ಎಳೆದುಕೊಂಡವರು.. ಅವರಿಗೆ ಗೊತ್ತು, ತನ್ನ ಜೀವಮಾನದಲ್ಲೇ ತಾನು ಕೈಗೊಂಡಿರುವ ಕೆಲಸದಲ್ಲಿ, ಹೋರಾಟದಲ್ಲಿ ಯಶಸ್ಸು ಕಾಣುವುದು ಅನಿಶ್ಚಿತವೆಂದು. ಆದರೂ ಊಟ, ನೀರು ನಿದ್ದೆಯನ್ನು ಬಿಟ್ಟು ಅಂತಹ ವ್ಯವಸ್ಥೆಯ ಸಕಾರಕ್ಕೆ ಶಕ್ತಿ ಮೀರಿ ದುಡಿಯುತ್ತಾರೆ. ಅವರಿಗೆ ಸೋಲು ಸೋಲಾಗುವುದಿಲ್ಲ. ತಮ್ಮ ಕನಸ್ಸಿನ ಮತ್ತು ಸ್ಥಾಪಿಸ ಹೋರಟಿರುವ ವ್ಯವಸ್ಥೆಯ ಪಯಣಕ್ಕೆ ಮೆಟ್ಟಿಲುಗಳಾಗುತ್ತವೆ. ಕ್ರಿಸ್ತ, ಬಸವಣ್ಣ, ಅಬೆಂಡ್ಕರ್, ಗಾಂಧಿ, ಮಾರ್ಟಿನ್ ಲೂತರ್ ಕಿಂಗ್, ನೆಲ್ಸನ್ ಮಂಡೇಲಾ… ಇವರೆಲ್ಲರೂ ನಮ್ಮಲ್ಲಿ ಚಿರಸ್ಥಾಯಿಯಾಗಿರುವುದು ಈ ಕಾರಣಕ್ಕಾಗಿಯೇ. ಇವರಿಗೆ ಗೊತ್ತಿತ್ತು ಅನ್ಯಾಯದ ವಿರುದ್ಧ ಹೋರಾಡುವುದೆಂದರೆ ತಮ್ಮನ್ನೇ ಸೋಲಿನ ಸಮಾಧಿಯಲ್ಲಿ ಹೂಳುವುದೆಂದು. ಆದರೂ ಅನ್ಯಾಯದ ವ್ಯವಸ್ಥೆಯ ವಿರುದ್ಧ ಎದೆ ತಟ್ಟಿ ಹೋರಾಡಿದರು.  ಇಂತಹ ಹೋರಾಟ ಹಾದಿಯಲ್ಲಿ ತಲೆದೋರಿದ ಸಾವಿರಾರು ಸಂಕಷ್ಟಗಳಿಗೆ ಅವರು ಎದೆಗುಂದಲಿಲ್ಲ. ಅನ್ಯಾಯದ ಬಗೆಗಿನ ಅವರ ಸಾತ್ವಿಕ ಸಿಟ್ಟು ಬರಿದಾಗಲಿಲ್ಲ. ಬಂದ ಹತ್ತಾರು ಅಮಿಷಗಲಿಗೆ ತಲೆಬಾಗಲಿಲ್ಲ. ಅಧಿಕಾರದ ಲಾಲಾಸೆಗೆ ನಂಬಿರುವ ತತ್ವ ಆದರ್ಶಗಳನ್ನು ಬಲಿಕೊಡಲಿಲ್ಲ. ಮನೆಮಠವನ್ನು, ಸ್ವಹಿತಗಳ ಗಡಿಯನ್ನು ದಾಟಿ ಬೀದಿಗಿಳಿದು ಪೋಲಿಸ್ ಲಾಠಿಗಳ ರುಚಿಕಂಡು ಜೈಲು ಸೇರಿದವರು. ಸರ್ಕಾರಗಳ ಕೆಂಗೆಣ್ಣಿ ಗುರಿಯಾದವರು. ತಮ್ಮ ವಿರುದ್ಧ  ಸರ್ಕಾರಗಳು ಕೈಗೊಂಡ ’ಬಾಯಿಮುಚ್ಚಿಸು” ಕಾರ್ಯಚರಣೆಯನ್ನು ನಿರ್ಭಯದಿಂದ ಎದುರಿಸಿದವರು. ತಮ್ಮ ಭವಿಷ್ಯದ ಬಗ್ಗೆ ಕಿಂಚತ್ತೂ ತಲೆಕೆಡಿಸಿಕೊಂಡವರಲ್ಲ. ತಮ್ಮ ಹಿಂಬಾಲಕರು ನಡು ನೀರಿನಲ್ಲೇ ಕೈಕೊಟ್ಟು ಹೋದರೂ ಕೊರಗದೆ ಏಕಾಂಗಿಯಾಗಿ ಹೋರಾಡಿದವರು. ಅವರಲ್ಲಿ ಮೋಸತನವಿರಲಿಲ್ಲ. ಕಪಟತನವೆಂಬುದಿರಲಿಲ್ಲ. ರಕ್ಷಣೆಗೆ ಮುಖವಾಡಗಳ ಮೊರೆಹೋಗಲಿಲ್ಲ. ಅವರದು ಬೆರೆಕೆಯಲ್ಲದ ಅಪ್ಪಟ ಹೋರಾಟವಾಗಿತ್ತು. ನ್ಯಾಯ ಮತ್ತು ಮಾನವ ಹಕ್ಕುಗಳ ಮರು ಸ್ಥಾಪನೆಯೇ ಅವರ ಹೋರಾಟದ ಬುನಾದಿಯಾಗಿತ್ತು.

ಕಳೆದ ವರ್ಷದ ಸೋಲು ಗೆಲ್ಲುವುಗಳ ನೋವು ನಲಿವುಗಳ  ಗಾಢ ನೆನಪುಗಳಲ್ಲಿ  ಹೂಸ ವರ್ಷವನ್ನು ಸ್ವಾಗತಿಸುತ್ತಿದ್ದೇವೆ. ಇಂತಹ ಸೋಲು ಗೆಲ್ಲುವುಗಳ ಗಾಢ ನೆನಪುಗಳಲ್ಲಿ ಮುಖ್ಯವಾಗಿ ನನ್ನನ್ನು ಕಾಡಿದ್ದು  ಕಳೆದ ವರ್ಷದಲ್ಲಿ ನಡೆದ  ನೂರಾರು ಸಾರ್ವತ್ರಿಕ ಪ್ರತಿಭಟನೆಗಳು ಮತ್ತು ಹೋರಾಟಗಳು. ವ್ಯವಸ್ಥಿತವಾಗಿ ಹಾಗೂ ಸುದೀರ್ಘ‌ವಾಗಿ ನಡೆಸಿದ ಅನೇಕ ಹೋರಾಟಗಳು ನಿರೀಕ್ಷಿತ ಫಲ ಕೊಡಲಿಲ್ಲ. ಕೆಲವೊಂದು  ಹೋರಾಟಗಳಿಗೆ ಉದ್ದೇಶದ ಸ್ಪಷ್ಟತೆಯಿರಲಿಲ್ಲ. ಹೋರಾಟ, ಪ್ರಟಿಭಟನೆಗಳನ್ನು ಹುಟ್ಟು ಹಾಕಿದ ಅನೇಕರಲ್ಲಿ ಸಾತ್ವಿಕತೆಯಿರಲಿಲ್ಲ; ಪ್ರಾಮಾಣಿಕತೆಯಿರಲ್ಲ. ಕೆಲವೊಂದಂತು ಅಪ್ಪಟ ರಾಜಕೀಯ ಪ್ರೇರಿತವಾಗಿದ್ದವು. ಹಣೆಪಟ್ಟಿಗಳನ್ನು ಕಟ್ಟಿಕೊಂಡು ರಾತ್ರಿಹೊತ್ತು ಕ್ಯಾಂಡಲ್ ಹಚ್ಚುತ್ತಾ ಘೋಷಣೆ ಕೂಗುತ್ತಾ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಿದ್ದ ಜನಸಮೂಹಕ್ಕೆ ಇರಬೇಕಾದ ಬದ್ಧತೆಯಿರಲಿಲ್ಲ. ಹೀಗೆ ಅಬ್ಬರದೊಂದಿಗೆ ಸುರುವಾದ ಹಲವಾರು ಹೋರಾಟಗಳು ಉದ್ದೇಶದ ಸಫಲತೆ ಕಾಣುವುದು ಇರಲ್ಲಿ ಅವು ಕಣ್ಣುತೆರೆಯುವ ಮೊದಲೇ ನೆಲಕಚ್ಚಿದವು. ಇಂತಹ ಪರಿಸ್ಥಿತಿಯಲ್ಲಿ ನನ್ನ ಮನಸ್ಸಿಗೆ ಬಂದಿದ್ದು ಕ್ರಿಸ್ತ ಮತ್ತು ಬಸವಣ್ಣ.

ಕ್ರಿಸ್ತ ಬಸವಣ್ಣ ಕೂಡ ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆಯ ವಿರುದ್ಧ ಹೋರಾಡಿದ ಹಠ ಯೋಗಿಗಳು. ಧಾರ್ಮಿಕ ಗಣ್ಯರನ್ನು ಸುಣ್ಣ ಬಳಿದ ಸಮಾಧಿಯೆಂದು ಬಹಿರಂಗವಾಗಿ ವ್ಯವಸ್ಥೆಯ ಬಂಡೆಗೆ ತಲೆ ಬಡಿದುಕೊಂಡವರು. ಅವರಿಗೆ ಗೋತ್ತಿತ್ತು, ತಾವು ಕೈಗೊಂಡಿರುವ ಹೋರಾಟದಲ್ಲಿ ಸೋಲು ಕಟ್ಟಿಟ್ಟ ಬುತ್ತಿಯೆಂದು. ಆದರೂ ಹಾವಿದ್ದ ಹುತ್ತಕ್ಕೆ ಕೈಹಾಕಿದರು. ಕೊನೆಗೆ ಧಾರ್ಮಿಕ ಅಧಿಕಾರಿಗಳ ಉಗ್ರ ಕೋಪಕ್ಕೆ ಸುಟ್ಟು ಭಸ್ಮವಾದರು. ಪ್ರಪಂಚದ ಸಂಕುಚಿತ ದೃಷ್ಟಿಯಲ್ಲಿ ಅವರು ಸೋತ ಯೋಧರಾದರು. ತಾವು ಕಂಡ ಕನಸ್ಸಿನ ರಾಜ್ಯವನ್ನು ಕಾಣದೆ, ಹತ್ತಾಶರಾಗಿ ಸತ್ತವರಾದರು. ಅವರ ಕನಸುಗಳು ಚಾಲ್ತಿಯಲ್ಲಿಲ್ಲದ್ದ ನಾಣ್ಯಗಳಾದವು. ಆದರೂ ಅನ್ಯಾಯದ ವ್ಯವಸ್ಥೆಯ ಜತೆ ರಾಜಿ ಮಾಡಿಕೊಳ್ಳಲಿಲ್ಲ. ಅವರು ಕ್ಷಣಿಕ ಸೋಲಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಅವರ ಸೋಲೇ ಇಂದು ನೂರಾರು ಜನರಲ್ಲಿ ನ್ಯಾಯದ ತುಡಿತವನ್ನು ಹುಟ್ಟಿಸಿದ್ದು. ನಿಸ್ಪಾರ್ಥ ಬದುಕಿಗೆ ಪ್ರೇರಣೆಯಾಗಿದ್ದು, ಸಾವಿರಾರು ಜನರಲ್ಲಿ ಅವರು ಮತ್ತೆ ಹುಟ್ಟಿ ಬಂದಿದ್ದು. ಅವರಂತಹ ಹೋರಾಟ ನಮ್ಮದಾಗಲಿ. ಅವರಲ್ಲಿದ್ದ ಬದ್ಧತೆ, ಪ್ರಾಮಾಣಿಕತೆ, ಸಂಕಲ್ಪ ನಮ್ಮ ಕೈಗಳ ಹಿಡಿಯಲಿ. ಕುಗ್ಗದ ಅವರ ಜೀವಪೂರಕ ಸಿದ್ಧಾಂತಗಳ ಚೈತನ್ಯ ನಮ್ಮ ಲ್ಲಿ ತುಂಬಿತುಳುಕಲಿ. ಆಗ ನಮ್ಮ ಹೋರಾಟ ನಡು ದಾರಿಯಲೇ  ಹಳಿ ತಪ್ಪಿದ ಹೋರಾಟವಾಗದೆ ಬದಲಾವಣೆಯ ಸಾಧನಗಳಾಗುತ್ತದೆ. ಇಂತಹ ಹೋರಾಟಗಳು ೨೦೧೩ ವರ್ಷವನ್ನು ತುಂಬಿಕೊಳಲಿ; ದಬ್ಬಾಳಿಕೆ ಅನ್ಯಾಯಗಳ ವಿರುದ್ಧ ದನಿ ಎತ್ತಲಿ., ಜಗತ್ತನ್ನು ಇನ್ನಷ್ಟ್ಟುಮಾನವೀಕರಣಗೊಳಿಸಲಿ ಎಂಬುವುದೇ ಹೊಸ ವರ್ಷದ ನನ್ನ ಹೊಸ ಬಯಕೆ ಮತ್ತು ಹಾರೈಕೆ.

ಜನವಿರೋಧಿ, ಜೀವ ವಿರೋಧಿಗಳ ವಿರುದ್ಧ ಹೋರಾಡುತ್ತಿರುವ ಸಾವಿರಾರು ಸಾತ್ವಿಕ ಜನರಿಗೆ ನಮಸ್ಕರಿಸಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ.
ಜೋವಿ.Read more!