ಬೆಂಗಳೂರಿನಂತಹ
ಕಾಸ್ಮೊಪಾಲಿಟನ್ ನಗರಗಳಲ್ಲಿನ
ತಾಯ್ತಂದೆಯರು ತಮ್ಮ
ಮಗು ಇಂಗ್ಲಿಷಿನಲ್ಲಿ
ಮಾತಾಡುತ್ತಿದ್ದರೆ ಒಂದು ರೀತಿಯ ಪರಮಾನಂದ
ಅನುಭವಿಸುತ್ತಾರೆ. ಅವರ
ಮಕ್ಕಳು ತಮಗೆ
ತಮ್ಮದೇ ತಾಯ್ನುಡಿ
ಗೊತ್ತಿಲ್ಲ ಎಂದು
ಬಲು ಹೆಮ್ಮೆಯಿಂದ
ಹಾಗೂ ಯಾವುದೇ
ಮುಜುಗರವಿಲ್ಲದೆ ಹೇಳುವುದನ್ನು
ಕಂಡಾಗ ಅಥವಾ
ನಾವು ಕನ್ನಡಾನ
ಮನೇಲಷ್ಟೇ ಮಾತಾಡ್ತೀವಿ,
ಓದೋಕೆ ಬರೆಯೋಕಂತೂ
ಬರೊಲ್ಲ ಬಿಡಿ
ಎಂದಾಗ ಪಿಚ್ಚೆನಿಸಿದರೂ
ಆ ಕಠೋರ
ಸತ್ಯವನ್ನು ಅರಗಿಸಿಕೊಳ್ಳದೇ
ಇರಲಾಗದು. ಕೆಲ
ಶಾಲೆಗಳಲ್ಲಿ ಅಳವಡಿಸಿಕೊಂಡಿರುವ
ನೀತಿನಿಯಮಾವಳಿಗಳು ತಾಯ್ನುಡಿಯನ್ನು
ಮಕ್ಕಳು ಉಪೇಕ್ಷಿಸುವುದಕ್ಕೆ
ಪೂರಕವಾಗಿವೆ. ಮಕ್ಕಳು
ಇಂಡಿಯನ್ ಭಾಷೆಗಳಲ್ಲಿ
ಮಾತಾಡುತ್ತಿದ್ದರೆ ಐರೋಪ್ಯ
ನುಡಿಯಾದ ಇಂಗ್ಲಿಷನ್ನು
ಕಲಿಯುವುದಕ್ಕೆ ತೊಡಕಾಗುತ್ತದೆ
ಎಂಬುದು ಶಿಕ್ಷಕರ
ವಾದ. ಅವರ
ವಾದ ಸರಿಯಾದುದೇ.
ಏಕೆಂದರೆ ನಮ್ಮ
ದೇಶದ ನುಡಿಗಳ
ವಾಕ್ಯರಚನೆಗೂ ಐರೋಪ್ಯ
ನುಡಿಗಳ ವಾಕ್ಯರಚನೆಗೂ
ಅಗಾಧ ವ್ಯತ್ಯಾಸವಿದೆ.
ಅಷ್ಟಕ್ಕೂ ಐರೋಪ್ಯ
ಭಾಷೆಗಳಲ್ಲಿ ನುರಿತಿರಬೇಕಾದರೆ
ಮನಸ್ಸು ಆ
ನುಡಿಯಲ್ಲೇ ಯೋಚಿಸಬೇಕಾಗುತ್ತದೆ.
ವಾಸ್ತವವಾಗಿ ನಾವು
ನೀವೆಲ್ಲ ಏನು
ಮಾತನಾಡಬೇಕು ಎಂಬುದನ್ನು
ನಮ್ಮ ತಾಯ್ನುಡಿಯಲ್ಲಿ
ಯೋಚಿಸಿ ಆಮೇಲೆ
ಅದನ್ನು ಇಂಗ್ಲಿಷ್
ಮುಂತಾದ ಪರಕೀಯ
ನುಡಿಗಳಲ್ಲಿ ವ್ಯಕ್ತಪಡಿಸುತ್ತೇವೆ.
ತಾಯ್ನುಡಿಯನ್ನೇ ಇಂಗ್ಲಿಷ್
ಮಾಡಿಬಿಟ್ಟರೆ, ಇಂಗ್ಲಿಷಿನಲ್ಲೇ
ಯೋಚಿಸಬಹುದಲ್ಲವೇ?
ಈ
ವಾದವನ್ನು ವಿಶ್ಲೇಷಿಸುವ
ಮುನ್ನ ತಾಯ್ನುಡಿ
ಎಂದರೇನೆಂದು ತಿಳಿದುಕೊಳ್ಳೋಣ.
ಒಂದು ಮಗು
ತಾನು ಹುಟ್ಟಿದಾಗಿನಿಂದ
ಬುದ್ದಿ ಬೆಳವಣಿಗೆಯಾಗುವವರೆಗೆ
ತನ್ನ ಅಮ್ಮನಿಂದ,
ತನ್ನ ಆಪ್ತರಿಂದ
ಹಾಗೂ ಸುತ್ತಲಿನ
ಪರಿಸರದಿಂದ ವ್ಯಕ್ತಿಗಳನ್ನು
ಮತ್ತು ವಸ್ತುಗಳನ್ನು
ಗುರುತಿಸುತ್ತಾ, ನುಡಿಯನ್ನು
ಕಲಿಯತೊಡಗುತ್ತದೆ. ಆ
ನುಡಿಯ ಮೂಲಕ
ಸಿಹಿ-ಕಹಿ,
ಬೇಕು-ಬೇಡ,
ಇಷ್ಟಾನಿಷ್ಟ, ನೋವು-ನಲಿವು,
ಬಿಸಿ-ತಂಪು
ಮುಂತಾದವುಗಳನ್ನು ತಾನಾಗಿ
ಅರಿತು ಬೌದ್ಧಿಕವಾಗಿ
ಬೆಳೆಯತೊಡಗುತ್ತದೆ. ನುಡಿಕಲಿಕೆಯ
ಈ ಪ್ರಾಥಮಿಕ
ಹಂತದಿಂದ ಶಾಲಾ
ಹಂತಕ್ಕೆ ಬಂದಾಗಲೂ
ಕೂಡ ಅದು
ತನಗೊದಗಿದ ಪ್ರಪ್ರಥಮ
ನುಡಿಯಲ್ಲೇ ಯೋಚಿಸುತ್ತದೆ
ಹಾಗೂ ಎದುರಾದ
ವ್ಯಕ್ತಿಯೊಂದಿಗೆ ಸಂಭಾಷಿಸಲಾರಂಭಿಸುತ್ತದೆ.
ಈ ಪ್ರಾಥಮಿಕ
ಚಿಂತನಾ ನುಡಿಯನ್ನೇ
ಮೂಲನುಡಿ, ಬೇರುನುಡಿ
ಅಥವಾ ತಾಯ್ನುಡಿ
ಎನ್ನುತ್ತೇವೆ.
ಈ
ಒಂದು ಬುನಾದಿಯಲ್ಲಿ
ನಾವು ಚಿಂತಿಸಿದಾಗ
ಯಾರಾದರೂ ತಮ್ಮ
ತಾಯ್ನುಡಿಯಲ್ಲಿ ಮಾತಾಡೋದಿಲ್ಲ
ಎಂದರೆ ಅವರು
ತಮ್ಮ ಅಸ್ತಿತ್ವದ
ಬೇರುಗಳನ್ನು ಕಡಿದುಕೊಳ್ಳುತ್ತಿದ್ದಾರೆಂದು
ತಿಳಿಯಬೇಕಾಗುತ್ತದೆ. ಏಕೆಂದರೆ
ನಮ್ಮ ಅನಿಸಿಕೆ,
ನೋವು ನಲಿವು,
ಪ್ರೀತಿ ಮಮತೆ
ಇತ್ಯಾದಿಗಳನ್ನು ನಾವು
ಆಂತರ್ಯದಿಂದ ಅಭಿವ್ಯಕ್ತಿಸಬೇಕಾದಲ್ಲಿ
ಹೃದಯದ ಮಾತೇ
ಮುಖ್ಯವಾಗುತ್ತದೆ ಹೊರತು
ಇತರೆಲ್ಲ ಮಾತುಗಳು
ಶುಷ್ಕವಾದ ಅಭಿನಯವಾಗುತ್ತದಷ್ಟೆ.
ಆದರೂ ಕೆಲವರು
ತಮ್ಮ ತಾಯ್ನುಡಿಗಿಂತಲೂ
ತಾವು ವ್ಯವಹರಿಸುವ
ನುಡಿಯಲ್ಲೇ ತಾದಾತ್ಮ್ಯ
ಗಳಿಸಿಕೊಂಡು ಅದನ್ನೇ
ತಮ್ಮ ಹೃದಯಕ್ಕೆ
ಹತ್ತಿರಾಗಿಸಿಕೊಂಡಿರುತ್ತಾರೆ.
ಅಯ್ಯಂಗಾರ, ತಿಗುಳ,
ಸಂಕೇತಿ ಮುಂತಾದ
ಜನಾಂಗದವರು ತಮ್ಮ
ಮೂಲನುಡಿಗಿಂತಲೂ ಕನ್ನಡದಲ್ಲೇ
ತಾದಾತ್ಮ್ಯ ಹೊಂದಿರುವುದನ್ನು
ಕಂಡಿದ್ದೇವೆ. ಇನ್ನು
ಕೆಲವರು ತಾಯ್ನಾಡಿನಿಂದ
ಹೊರಗೆ ನೆಲೆಗೊಂಡು
ಅಲ್ಲಿನವರನ್ನೇ ಮದುವೆಯಾಗಿ
ಅಲ್ಲಿನ ನುಡಿಯನ್ನೇ
ತಮ್ಮ ನುಡಿಯನ್ನಾಗಿ
ಅಳವಡಿಸಿಕೊಂಡಿರುವುದನ್ನೂ ಕಂಡಿದ್ದೇವೆ.
ಈ ನಿಟ್ಟಿನಲ್ಲಿ
ಚಿಂತಿಸಿದಾಗ ತಾಯ್ನುಡಿಯು
ವಂಶವಾಹಿಯಾಗಿ ಬರದೆ
ಬಾಲ್ಯದ ನುಡಿಗಲಿಕೆಯ
ಸಂದರ್ಭದಲ್ಲಿ ಹೆಚ್ಚಾಗಿ
ಕಿವಿ ಮೇಲೆ
ಬಿದ್ದ ನುಡಿಯೇ
ತಾಯ್ನುಡಿ ಎಂದು
ಭಾವಿಸಬೇಕಾಗುತ್ತದೆ. ಮಗು
ಆ ಪದಸಂಪತ್ತನ್ನು
ಪಡೆದು ಅದರಲ್ಲೇ
ತನ್ನ ಭಾವನೆಗಳನ್ನು
ಹೊರಹಾಕುತ್ತದೆ.
ಕೊಸರು:
ಎಷ್ಟೇ ನುಡಿಗಳನ್ನು
ರೂಢಿಸಿಕೊಂಡು ಎಷ್ಟೇ
ನಿರರ್ಗಳವಾಗಿ ಮಾತನಾಡಿದರೂ
ಮನುಷ್ಯನ ಸುಷುಪ್ತಿಯ
ನುಡಿಯೇ ಬೇರೆಯಾಗಿರುತ್ತದೆ.
ಅದು ಅಂತರಾತ್ಮಕ್ಕಷ್ಟೇ
ಗೊತ್ತು. ಅದೇ
ಮನುಷ್ಯನನ್ನು ನಿರಂತರ
ಮುನ್ನಡೆಸುತ್ತದೆ. ಆ
ನುಡಿಗೆ ಧ್ವನಿಯಿಲ್ಲ,
ಲಿಪಿಯಿಲ್ಲ, ವ್ಯಾಕರಣವಂತೂ
ಇಲ್ಲವೇ ಇಲ್ಲ.
ಕಿವುಡ ಮೂಕರಿಗೂ
ಆ ನುಡಿ
ಗೊತ್ತು. ಆತ್ಮವಿದ್ದವರೆಲ್ಲ
ಆ ನುಡಿಗೆ
ಸ್ಪಂದಿಸುತ್ತಾರೆ.
-ಮರಿಜೋಸೆಫ್











