Friday, 23 September 2011

ವಿಮೋಚನೆ..


ಹಲೋ ಅನು…
ವಿಮೋಚನೆ ಬಗ್ಗೆ ಮೂಡಿದ ಕೆಲವು ಸಾಲುಗಳು

ಬುದ್ಧ ಹೇಳಿದ,..
ಆಸೆಗಳಿಗೆ ತಳವಿಲ್ಲದಂತಾಗಲಿ
ನಿನ್ನ ಬದುಕಿನ ಪಾತ್ರೆ…
ಕಾಣುವುದು ಆಗ ಬದುಕು ವಿಮೋಚನೆಯ ಸವಿನಿದ್ರೆ

ಇನ್ನೊಬ್ಬ ಗುರು ಹೇಳಿದ,..
ಅಜ್ಞಾನದ ಕೋಣೆಯ ಬಿಟ್ಟು
ಜ್ಞಾನ ಕೋಣೆಯ ಕಡೆಗೆ ಗುರಿಯಿಟ್ಟು
ನಡೆದು ಸೇರುವುದೇ ವಿಮೋಚನೆಯ ಗುಟ್ಟು..

ವಿಮೋಚನೆಯ ಪ್ರತಿಪಾದಕ ದೈವಶಾಸ್ತ್ರಜ್ಞ ಹೇಳಿದ..
ಅಸಮಾನತೆ, ಶೋಷಣೆ ಜಗತ್ತು ಕೊನೆಗೊಂಡು
ಹೂಸ ಜಗತ್ತು ಸೃಷ್ಟಿಗೊಂಡು
ದೇವರಾಜ್ಯದ ಪ್ರತಿಬಿಂಬವಾಗುವುದೇ ವಿಮೋಚನೆಯ ಒಗಟ್ಟು..

ನಾನು ನನ್ನನೇ ಕೇಳಿದೆ…
ವಿಮೋಚನೆ ಎಂದರೇನು?
ನನ್ನ ಮರೆತು ಇನ್ನೊಬ್ಬನಿಗೆ ಸಹಾಯ ಹಸ್ತಚಾಚುವಾಗ..
ಭಯ ಮರೆತು ದಬ್ಬಾಳಿಕೆಯ ವಿರುದ್ಧ ದನಿ ಎತ್ತುವಾಗ
ಕಳವಳ ಬಿಟ್ಟು ಇನ್ನೊಬ್ಬನಲ್ಲಿ ವಿಶ್ವಾಸವಿರುಸುವಾಗ..
ಹೀಗೆ ಬದುಕಿನ ಪ್ರತಿಕ್ಷಣದ ದಂದ್ವದಲ್ಲಿ..
ಕೆಟ್ಟತನ ಬಳಲಿ ಸೋತು ತನ್ನಲ್ಲಿ
ಒಳ್ಳೆತನ ಗೆಲ್ಲುವುದೇ ವಿಮೋಚನೆ… ಅದೇ ನಿಸ್ವಾರ್ಥ.. ನ್ಯಾಯ…ವಿಶ್ವಾಸ… ಮಾನವೀಯತೆ
ಆದ್ದರಿಂದ ವಿಮೋಚನೆಂಬುವುದು….
ದೂರದ ಮಾತಲ್ಲ.. ತಲುಪುವ ಸ್ಥಳವಲ್ಲ
ಅದು ಪ್ರತಿಕ್ಷಣದ ಗೆಲ್ಲುವು..ಕ್ಷಣ ಹೆಜ್ಜೆಯ ಒಲವು…

ಜೋವಿ
Read more!

Wednesday, 3 August 2011

ಸ್ವಾತಂತ್ರ್ಯ ನಡಿಗೆಗೆ ಆದರ್ಶ ಹೆಜ್ಜೆಗಳ ಸಾರಥ್ಯ..!


              ಸುಮಾರು ಎರಡು ಸಾವಿರಕ್ಕೂ ಅಧಿಕ ಇತಿಹಾಸ ಹೊಂದಿರುವ ದೇಶಕ್ಕೆ ಈಗ 63 ನೇ ಸ್ವಾತಂತ್ರ್ಯೋತ್ಸವ. ಇದು ಯಾವ ರೀತಿಯಲ್ಲಿ ತಾಳೆ ಆದೀತು!? ದ್ವಾಪರಯುಗದ ಪುರಾಣಗಳು ನಡೆದಿರುವ ಭರತಖಂಡದಲ್ಲಿ. ಹರಪ್ಪ-ಮಹೇಂಜೋಧಾರೋ ನಾಗರಿಕತೆ ಇದ್ದ ಸಿಂಧೂಬಯಲಿನಲ್ಲಿ. ಭೂಖಂಡದಲ್ಲಿ ಅತೀಹೆಚ್ಚು ದೇವಾನುದೇವತೆಗಳಿರುವ ತವರೂರಿನಲ್ಲಿ, ಈ ಸ್ವಾತಂತ್ರ್ಯದ ಕಹಳೆ ಊದಿದ್ದು ಯಾವ ಉದ್ದೇಶಕ್ಕಾಗಿ? ಅಷ್ಟಕ್ಕೂ ಈ ಸ್ವಾತಂತ್ರ್ಯ ಅಂದರೇ ಏನು? ಎಂಬ ಗೊಜಲುಗೊಜಲು ಪ್ರಶ್ನೆಗಳಿಗೆ  ಇತಿಹಾಸ ಓದಿಕೊಂಡಿರುವ ಒಬ್ಬ ವಿಧ್ಯಾರ್ಥಿಯಿಂದ ವಿವರವಾದ ಉತ್ತರ ಸಿಗಬಹುದು!. ಆದರೆ, ಇಲ್ಲಿ "ಸ್ವಾತಂತ್ರ್ಯ" ದ ಆಂತರ್ಯ ಅಧ್ಯಯನವಾಗಬೇಕಾಗಿದೆ. ಅದು ಯಾವುದೆ ವಿಶ್ವವಿದ್ಯಾಲಯದಿಂದಾಗಲಿ, ವಿಧ್ಯಾಸಂಸ್ಥೆಗಳಿಂದಾಗಲಿ ಅಲ್ಲ. ಅದಕ್ಕೆ ಬದಲು ನಮ್ಮೊಳಗೆ, ನಮ್ಮ ನಡುವೆ, ನಮ್ಮ ವೃತ್ತಿಯಲ್ಲಿ, ನಮ್ಮಕ್ರಿಯೆಗಳಲ್ಲಿ, ನಮ್ಮಭಾವನೆಗಳಲ್ಲಿ, ಮನೆಗಳಲ್ಲಿ, ಊರಿನಲ್ಲಿ, ನಮ್ಮನ್ನಾಳುವ ನಾಯಕರುಗಳಲ್ಲಿ ಈ ಸ್ವಾತಂತ್ರ್ಯದ ಅರ್ಥ ಹುಡುಕಬೇಕಾಗಿದೆ. ಬಂಧಿತರಿಗೆ ಬಿಡುಗಡೆ, ಬಂಧನದಿಂದ ಮುಕ್ತಿ ಇಂತಹ ಹಲವು ಉಕ್ತಿಗಳು ಈ ಸ್ವಾತಂತ್ರ್ಯಕ್ಕೆ ಅರ್ಥಕೊಡಬಲ್ಲವಾದರು, ಇಲ್ಲಿ ನಾವು ಅರ್ಥೈಸಿಕೊಳ್ಳಬೇಕಾಗಿರುವುದೇ ಬೇರೆ!. ಸ್ವಾತಂತ್ರ್ಯ ಎಂಬ ಪದಕ್ಕೆ ಅರ್ಥ ಹುಡುಕುತ್ತಾ ಹೋದರೆ ಈ ರಾಜಕೀಯ ನೆಲೆಗಟ್ಟಿನಲ್ಲಿ, ಸಾಮಾಜಿಕ ನೆಲೆಗಟ್ಟಿನಲ್ಲಿ ಮಾತ್ರವಲ್ಲ ಅಧ್ಯಾತ್ಮಿಕ ನೆಲೆಗಟ್ಟಿನಲ್ಲೂ ತನ್ನ ಗಾತ್ರ ಹೆಚ್ಚಿಸಿಕೊಂಡಿರುವುದ್ದನು ನೋಡಬಹುದು.
 
          ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ  ಮಹನೀಯರನ್ನೆ ವಿಶ್ಲೇಷಿಸಿ ನೋಡುವುದಾದರೆ ಅವರಲ್ಲಿ ಅಗ್ರಗಣ್ಯರಾಗಿ ನಿಲ್ಲುವುದು ಮಹಾತ್ಮ ಗಾಂಧೀಜಿ. ಎಲ್ಲರ ಗುರಿ ಒಂದೇ ಆಗಿತ್ತು.  ಅದು ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಡುವುದು, ಆದರೆ ಅದಕ್ಕೂ ಮೊದಲು ಕೆಲವು ಸಿದ್ದಾಂತಗಳನ್ನು ರೂಢಿಸಿಕೊಂಡು ಶಿಸ್ತು, ಶ್ರಮ, ಸಂಯಮ, ಪ್ರಾಮಾಣಿಕತೆ  ಮತ್ತು ಸ್ವಾವಲಂಬನೆಯಂತಹ ಮೌಲ್ಯಧಾರಿತ ಮಾರ್ಗದಿಂದ ದೇಶದ ಬಿಡುಗಡೆಯ ಬಗ್ಗೆ ಸ್ಪಷ್ಟ ಪರಿಕಲ್ಪನೆ ಹೊಂದಿದ್ದವರು ಮಾತ್ರ ಕೇವಲ ಗಾಂಧೀಜಿ.
 
        ಇವರೊಬ್ಬ ದಿಟ್ಟ ಹೊರಟಗಾರ, ತಮ್ಮ ಹೋರಾಟದ ಅವಿಭಾಜ್ಯವಾಗಿ, ಸತ್ಯ, ನಿಷ್ಟೆ, ಅಹಿಂಸೆಯಂತಹ ಸದ್ಗುಣಗಳಿಗೆ ತಮ್ಮಲ್ಲಿ ಜಾಗಮಾಡಿಕೊಟ್ಟರು. ಅಂದರೆ ಸುಳ್ಳುಕಟ್ಟುಪಾಡುಗಳಿಂದ ಸತ್ಯಕ್ಕೆ ಸ್ವಾತಂತ್ರ್ಯ, ಒತ್ತಡ, ಸ್ವಾರ್ಥಗಳಿಂದ, ಪ್ರಾಮಾಣಿಕತೆಗೆ ಸ್ವಾತಂತ್ರ್ಯ, ಕೌರ್ಯ, ಮತ್ಸರಗಳಿಂದ, ಶಾಂತಿಗೆ ಸ್ವಾತಂತ್ರ್ಯಗಳಿಸಿಕೊಂಡರು. ಇಂತಹ ಗುಣಗಳಿಂದ ದಿಟ್ಟತನ ಬೆಳೆಸಿಕೊಂಡರು. ಇಂಥ ಗುಣಗಳನ್ನೊಂದಿರುವ ನಾಯಕನಿದ್ದರೆ ಯಾವ ಕುತಂತ್ರಿಗಳು ತಾನೆ ಎದುರು ನಿಲ್ಲಲು ಸಾಧ್ಯ. ಒಂದು ಯುದ್ಧವನ್ನು ಕತ್ತಿ ಕಠಾರಿ, ಬಾಂಬು ಬಂಧೂಕುಗಳಿಲ್ಲದೇ ಗೆದ್ದು ಬಂದ ಏಕೈಕ ವ್ಯಕ್ತಿ ಗಾಂಧೀಜಿ. ಅದು ಸಾಧ್ಯಾವಾದದ್ದು ತನ್ನೊಳಗೆ ಆದ ಸ್ವಾತಂತ್ರ್ಯದಿಂದ.  ಈ ದೇಶದ ಸಾತಂತ್ರ್ಯೋತ್ಸವ   ಸಂಭ್ರಮದ ಜೊತೆಗೆ, ಆ ಎಲ್ಲ ಆದರ್ಶ ಗುಣಗಳಿಗೂ ನಮ್ಮೊಳಗೆ ಸ್ವಾತಂತ್ರ್ಯವನ್ನು ದಕ್ಕಿಸಿಕೊಟ್ಟರೆ ಅದು ನಿಜ ಅರ್ಥದಲ್ಲಿ ಸ್ವಾತಂತ್ರ್ಯ...!
ಯೇಸು ಸಹ ತನ್ನ ಗತಕಾಲದಲ್ಲಿ ಇದೆ ಸ್ವಾತಂತ್ರ್ಯಕ್ಕಾಗಿ ಹಂಬಲಿಸಿದ್ದರು. ಕೇವಲ ಸಮಾಜದ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ತಮ್ಮ ಜೀವನವನ್ನು ಬಂಧಿಸಿಕೊಂಡಿದ್ದ ಜನರಿಗೆ, ಈ ಸಂಕುಚಿತ ಬದುಕಿನಿಂದ ಹೊರಬನ್ನಿ ಎಂದು ಕರೆನೀಡಿದರು. ಅಜ್ಞಾನ ಶಾಪವಲ್ಲ ಅದು ನಿಮ್ಮ ಮುಗ್ಧತನವನ್ನು ಮುಚ್ಚಿಕೊಂಡಿರುವ ಕರಿ ಕಂಬಳಿ. ಬರಿ ಕಣ್ಣಿಗೆ ಕಾಣದ ಸ್ವಾತಂತ್ರ್ಯ ಬದುಕನ್ನು ಜ್ಞಾನ ಎಂಬ ದೀವಿಗೆ ಸಹಾಯದಿಂದ ನೋಡಿ ಎಂದು ಸಾರಿದರು.
 
ಇನ್ನೇನು ಬರುವ ಸ್ವಾತಂತ್ರ್ಯ ದಿನಾಚರಣೆಯ ರಜೆಗಾಗಿ ಕಾಯುತಿದ್ದೇವೆ. ದೇಶದೆಲ್ಲೆಡೆ ಸ್ವಾತಂತ್ರ್ಯ ದಿನವನ್ನು ಆಚರಿಸುವಾಗ ಅದನು ಗಳಿಸಿಕೊಳ್ಳಲ್ಲು ಬಳಕೆಯಾದ ಮೌಲ್ಯಗಳನ್ನು ನಮ್ಮೊಳಗೆ ಆಚರಿಸೋಣ ಹಾಗೂ ಅಳವಡಿಸಿಕೊಳ್ಳೋಣ.

-ಸಂತೋಷ್ ಇಗ್ನೇಷಿಯಸ್
Read more!

Thursday, 12 May 2011

ಹಾರೋಬೆಲೆಯ ಶತಮಾನದ ನಾಟಕ ‘ಮಹಿಮೆ’





‘ಯೇಸು ಹೃದಯವೇ.. ದಾಸರ ಮೇಲೆ ನೀಡಿ ನಿಮ್ಮ ವರವ

ದೋಷಭರಿತ ನಮ್ಮಗಳಿಗೆ ...ನೀಡಿ ನಿಮ್ಮಾಶೀರ್ವಾದವ’ 

ಈ ನಾಂದಿ ಪದ್ಯ ಪ್ರಾರಂಭವಾಗುತ್ತಿದ್ದಂತೆ ಊರ ಜನರಲ್ಲಿ ಒಂದು ಬಗೆಯ ಸಂಚಲನ ಸೃಷ್ಟಿಯಾಗುತ್ತದೆ. ಹೆಂಗಸರು, ಮಕ್ಕಳು, ಹಿರಿಯರು, ಕಿರಿಯರು ತಮ್ಮ ಕೆಲಸಗಳನ್ನು ಮುಗಿಸಿ ನಾಟಕ ನೋಡಲು ಮೈದಾನದತ್ತ ಧಾವಿಸುತ್ತಾರೆ. ಮಕ್ಕಳು ಸಾಕಷ್ಟು ಮೊದಲೇ ರಂಗಸ್ಥಳದ ಮುಂದಿನ  ಬಯಲಲ್ಲಿ ಚಾಪೆಹಾಸಿ ತಮ್ಮ ಜಾಗ ಕಾದಿರಿಸುತ್ತಾರೆ. 


ಊರಿನ ಯುವಕರಲ್ಲಿ ಸಂಭ್ರಮ. ಪಟಾಕಿ ಸಿಡಿಸಿ ಅದನ್ನು ವ್ಯಕ್ತಪಡಿಸುವ ಕಾತರ. ಹಿರಿಯರಿಗೆ ಹಳೆಯ ನೆನಪುಗಳು ನುಗ್ಗಿ ಬರುತ್ತವೆ. ಪಾತ್ರಧಾರಿಗಳಿಗೆ ಮೇಕಪ್ ಸರಿ ಪಡಿಸಿಕೊಂಡು ರಂಗದ ಮೇಲೆ ಬರುವ ಕಾತರ.... ಹೀಗೆ ಎಲ್ಲರಲ್ಲೂ ಒಂದು ಬಗೆಯ ಚಡಪಡಿಕೆ.  ಇದು ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ‘ಯೇಸು ಕ್ರಿಸ್ತರ ಪೂಜ್ಯ ಪಾಡುಗಳ ಹಾಗೂ ಪುನರುತ್ಥಾನದ ಮಹಿಮೆ’ಯನ್ನು ಸಾರುವ ನಾಟಕದ ಆರಂಭದ ಸಂದರ್ಭ.


ಶತಮಾನ ದಾಟಿರುವ ಈ ನಾಟಕ ಜನರ ಬಾಯಲ್ಲಿ ‘ಮಹಿಮೆ’ ಎಂದೇ ಹೆಸರಾಗಿದೆ. ಯೇಸು ಕ್ರಿಸ್ತರ ಜೀವನ, ಬೋಧನೆ, ವಿಶೇಷವಾಗಿ ಅವರು ಶಿಲುಬೆಗೇರುವ ಸಂದರ್ಭದ ಯಾತನಾಮಯ ಘಟನೆಗಳು ಹಾಗೂ ನಂತರದ ಪುನರುತ್ಥಾನದ ಬಗೆಗೆ ಬೈಬಲ್‌ನಲ್ಲಿ ಉಲ್ಲೇಖವಾಗಿರುವ ವೃತ್ತಾಂತಗಳೇ ಈ ನಾಟಕದ ಕಥಾವಸ್ತು. 1906ರಲ್ಲಿ ಈ ನಾಟಕ ರಂಗದ ಮೇಲೆ ಮೊದಲು ಪ್ರದರ್ಶನವಾಯಿತು. ಆ ನಂತರ ಇದು ಪ್ರತಿ ವರ್ಷ ಒಂದೇ ರಂಗ ಮಂಟಪದ ಮೇಲೆ ‘ಶುಭ’ ಶುಕ್ರವಾರದಂದು ಪ್ರದರ್ಶನಗೊಳ್ಳುತ್ತ ಬಂದಿದೆ! ನಾಟಕದ ಕಥಾ ವಸ್ತು ಹಾಗೂ ಅದು ನಡೆದ ಸಂದರ್ಭ 2000 ವರ್ಷಗಳ ಹಿಂದಿನ ಜೆರುಸಲೇಮೀನದ್ದಾದರೂ ನಾಟಕದ ಸಂಭಾಷಣೆ, ಸಂಗೀತ, ವೇಷ ಭೂಷಣ, ರಂಗ ವಿನ್ಯಾಸ ಇತ್ಯಾದಿಗಳು  ಕನ್ನಡ ನಾಡಿನ ಸಂಸ್ಕೃತಿ ಹಾಗೂ ಜಾನಪದದ ಪ್ರತೀಕವಾಗಿವೆ.

 ಹಾರೋಬೆಲೆ ಗ್ರಾಮ ಪೂರ್ವಕ್ಕೆ ಅರ್ಕಾವತಿ ನದಿ, ಪಶ್ಚಿಮಕ್ಕೆ ಪಾದ್ರಿಕೆರೆ, ಉತ್ತರಕ್ಕೆ ಕಪಾಲ ಬೆಟ್ಟ, ದಕ್ಷಿಣಕ್ಕೆ ಹೊಂಗೆ ಹಳ್ಳದ ಸುಂದರ ಪರಿಸರದಲ್ಲಿದೆ. 16ನೇ ಶತಮಾನದಿಂದ ಇಲ್ಲಿ ಕ್ರೈಸ್ತರು ನೆಲೆಸಿದ್ದಾರೆ. 1900ರಲ್ಲಿ ವಂದನೀಯ ಸ್ವಾಮಿ ಲಾಜರಸ್ ಅವರು ಮೊದಲ ಬಾರಿಗೆ ಈ ನಾಟಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದರು. ಹಾಡುಗಳ ರಚನೆಯಲ್ಲಿ ಪರಿಣಿತರಾದ ಲಾಜರಸ್ ಬಹು ಭಾಷಾ ಪರಿಣಿತರು.1906ರ ಏಪ್ರಿಲ್ 13ರ ಶುಭ ಶುಕ್ರವಾರ ಆರು ಮಂದಿ ಪಾತ್ರಧಾರಿಗಳು ಈ ನಾಟಕ ಪ್ರದರ್ಶಿಸಿದ್ದರು. ಆಗ ನಾಟಕದ ಸಮಯ ಒಂದು ಗಂಟೆಯಾಗಿತ್ತು.

1925ರ ವೇಳೆಗೆ (ಲಾಜರಸ್ ಅವರು ನಿಧನರಾದ ವರ್ಷ) ಅರವತ್ತು ಮಂದಿ ಪಾತ್ರಧಾರಿಗಳು ಇಡೀ ರಾತ್ರಿ ಪ್ರದರ್ಶಿಸುವ ವಿಸ್ತಾರಕ್ಕೆ ನಾಟಕ ಬೆಳೆದಿತ್ತು. ಆನಂತರ ಊರಿನ ಶಿಕ್ಷಕ ಸಿ.ಇನ್ನಾಸಪ್ಪ ಅವರ ಸಾರಥ್ಯದಲ್ಲಿ ಪರಿಷ್ಕರಣೆಗೊಂಡು ಪ್ರದರ್ಶನವಾಗುತ್ತ ಬಂದಿದೆ.

ಆರಂಭದಲ್ಲಿ ಹೊಂಗೆಸೊಪ್ಪಿನ ಚಪ್ಪರದಲ್ಲಿ ಪಂಜುಗಳ ಬೆಳಕಿನಲ್ಲಿ  ನಾಟಕ ಪ್ರದರ್ಶನವಾಗುತ್ತಿತ್ತು. ಈಗ ಝಗಮಗಿಸುವ ಬೆಳಕಿನ ರಂಗ ಮಂಟಪದಲ್ಲಿ ನಡೆಯುತ್ತದೆ. ಈ ನಾಟಕದಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಕಂಡುಬರುವ ಬಯಲಾಟದ ಎಳೆಗಳನ್ನು ಗುರುತಿಸಬಹುದು. ಈಟಿ, ಕತ್ತಿ, ಗುರಾಣಿ ಹಿಡಿದ ಸೈನಿಕರ ಆರ್ಭಟದ ಕುಣಿತಗಳೆಲ್ಲ ನಮ್ಮ ಪೌರಾಣಿಕ ನಾಟಕಗಳಲ್ಲಿ ಇರುವಂತೆಯೇ ಇವೆ. ಆಧ್ಯಾತ್ಮ ಹಾಗೂ ಜಾನಪದ ಸಂಸ್ಕೃತಿಗಳು ನಾಟಕದಲ್ಲಿ ಹದವಾಗಿ ಬೆರೆತಿವೆ.

ನಾಟಕದಲ್ಲಿ ಮನರಂಜನೆಗಿಂತ ಭಕ್ತಿಯೇ ಪ್ರಧಾನ. ನಾಟಕದ ತಾಲೀಮು ನೋಡುತ್ತಲೇ ಸಂಭಾಷಣೆ,  ಹಾಡುಗಳನ್ನು ಕಂಠ ಪಾಠ ಮಾಡಿದ ಗ್ರಾಮಸ್ಥರ ಸಂಖ್ಯೆ ಗಣನೀಯ ವಾಗಿದೆ. ಹೊಲ ಗದ್ದೆಗಳಲ್ಲಿ ದುಡಿಯುವಾಗ, ಕುರಿ, ದನಕರುಗಳನ್ನು ಮೇಯಿಸುವಾಗ, ಗಾಡಿ ಹೊಡೆಯುವ ಸಮಯದಲ್ಲಿ ನಾಟಕದ ಹಾಡುಗಳನ್ನು ಗಟ್ಟಿಯಾಗಿ ಮೆಲಕು ಹಾಕುವ ಜನರನ್ನು ಇಲ್ಲಿ ನೋಡಬಹುದು.
ಹಾರೋಬೆಲೆ ಗ್ರಾಮ ಅನೇಕ ಧರ್ಮ ಗುರುಗಳು, ಸಮಾಜ ಸೇವಕರು, ಲೇಖಕರು, ಕಲಾವಿದರು, ಸಂಗೀತಗಾರರನ್ನು ನೀಡಿದೆ. ಅದೇ ಹಾರೋಬೆಲೆಯ ಹೆಗ್ಗಳಿಕೆ.


ಗರಿಗಳ ಭಾನುವಾರ



ತೆಂಗಿನ ಗರಿಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗುತ್ತಿರುವ ಕ್ರೈಸ್ತ ಬಾಂಧವರು.

 ಅಥವಾ ಏಪ್ರಿಲ್ ತಿಂಗಳಲ್ಲಿ ಒಂದು ಭಾನುವಾರದಂದು ಕ್ರೈಸ್ತ ಬಾಂಧವರು ಕೈಯಲ್ಲಿ ತೆಂಗಿನ ಗರಿಗಳನ್ನು ಹಿಡಿದುಕೊಂಡು ಹೋಗುವುದನ್ನು ಕಂಡು ನೀವು ಆಶ್ಚರ್ಯ ಪಟ್ಟಿರಬಹುದು. ಆ ಗರಿಗಳು ಹಿರಿಯರಿಗೆ ಭಕ್ತಿಯ ಸಂಕೇತವಾದರೆ ಪುಟ್ಟಮಕ್ಕಳಿಗೆ ಅದನ್ನು ಆಡಿಸುತ್ತಾ ನಿಲ್ಲುವ ಸಂಭ್ರಮ. ಬೆಳೆದ ಮಕ್ಕಳಿಗಂತೂ ಅದರಲ್ಲೆೀ ಶಿಲುಬೆ ಅಥವಾ ಇತರ ಆಕಾರಗಳನ್ನು ಮಾಡಿಕೊಂಡು ತಮ್ಮ ಕಲಾ ನೈಪುಣ್ಯವನ್ನು ವ್ಯಕ್ತಗೊಳಿಸುವ ತವಕ. ಇದೆಲ್ಲ ನಡೆಯುವುದು ಗರಿಗಳ ಹಬ್ಬ ಅಥವಾ ಗರಿಗಳ ಭಾನುವಾರದಂದು.

ಏನಿದು ಗರಿಗಳ ಭಾನುವಾರ?
ಇದನ್ನು ಶುಭ ಶುಕ್ರವಾರಕ್ಕೆ ಮುಂಚಿನ ಭಾನುವಾರ ಅಂದರೆ, ಕ್ರೈಸ್ತರ 40 ದಿನಗಳ ತಪಸ್ಸು ಕಾಲದ (ಲೆಂಟ್) ಕೊನೆಯ ಭಾನುವಾರ ಅಚರಿಸಲಾಗುತ್ತದೆ. ಅಂದು ಚರ್ಚಿನಲ್ಲಿ ಸೇರುವ ಕ್ರೈಸ್ತ ಬಾಂಧವರೆಲ್ಲರ ಬಳಿಯಲ್ಲಿ ಗರಿಗಳನ್ನು ಕಾಣಬಹುದು.

ಚರ್ಚ್ ಆವರಣದಲ್ಲಿ ಪೂಜಾವಸ್ತ್ರಗಳನ್ನು ಧರಿಸಿದ ಗುರುಗಳು ಪವಿತ್ರ ಗ್ರಂಥವನ್ನು ಪಠಿಸಿ ಗರಿಗಳನ್ನು ಮಂತ್ರಿಸಿದ ನಂತರ ಎಲ್ಲರೂ ಒಂದೊಂದು ಗರಿಯನ್ನು ಕೈಯಲ್ಲಿ ಹಿಡಿದು ಶಿಸ್ತಾಗಿ ಮೆರವಣಿಗೆಯಲ್ಲಿ ಯೇಸುವಿನ ಸ್ತುತಿಗೀತೆಯನ್ನು ಹಾಡುತ್ತಾ ದೇವಾಲಯದ ಒಳಗೆ ಹೋಗುವ ದೃಶ್ಯ ಮನಮೋಹಕ.

ಆಬಾಲವೃದ್ಧರಾದಿಯಾಗಿ ಎಲ್ಲರೂ ಪಾಲ್ಗೊಳ್ಳುವ ಈ ಆಚರಣೆಯಿಂದ ಪವಿತ್ರ ವಾರಕ್ಕೆ ಚಾಲನೆ ದೊರೆತು ಅದು ಗುಡ್ ಫ್ರೈಡೆ ಹಾಗೂ ಈಸ್ಟರ್ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ. ಅಂದು ನಳನಳಿಸುವ ಹರಿದ್ವರ್ಣದ ಗರಿಗಳು ಶಿಲುಬೆಯಾಕಾರ ತಳೆದು ಮನೆಗಳ ಬಾಗಿಲನ್ನು ಅಲಂಕರಿಸುತ್ತವೆ. ಮುಂದಿನ ವರ್ಷದ ಬೂದಿ ಬುಧವಾರದಂದು ಅವು ಬೆಂಕಿಗೆ ಆಹುತಿಯಾಗುವುದರಲ್ಲಿ ಏನೋ ಒಂದು ಸಾರ್ಥಕತೆ ಇದೆ.

ಹಿನ್ನೆಲೆ: 2000 ವರ್ಷಗಳ ಹಿಂದೆ ಯೇಸುಕ್ರಿಸ್ತನ ನಾಡಿನಲ್ಲಿ ಸ್ವದೇಶಿಯರು ಪರಕೀಯರ ದಬ್ಬಾಳಿಕೆಯಿಂದ ನಲುಗಿದ್ದರು. ರೋಮನ್ ಚಕ್ರಾಧಿಪತ್ಯದ ಸಿಕ್ಕಾಪಟ್ಟೆ ಸುಂಕ, ದರ್ಪ ಮತ್ತು  ಶೋಷಣೆ ಒಂದೆಡೆಯಾದರೆ ತಮ್ಮ ದೇಶಸ್ಥರೇ ಆದ ಪುರೋಹಿತ ವರ್ಗದವರಿಂದ ಗೊಡ್ಡು ಸಂಪ್ರದಾಯಗಳ ಬಲವಂತ ಹೇರಿಕೆ, ಸಾಮಾಜಿಕ ಬಹಿಷ್ಕಾರ, ಭ್ರಷ್ಟಾಚಾರಗಳಿಂದ ಅಮಾಯಕ ಜನ ಬಲು ನೊಂದಿದ್ದರು.

ತಮ್ಮನ್ನು ಈ ಸಂಕೋಲೆಗಳಿಂದ ಬಿಡಿಸುವ ಒಬ್ಬ ವಿಮೋಚಕನಿಗಾಗಿ ಕಾದಿದ್ದ ಅವರಿಗೆ ಯೇಸುಕ್ರಿಸ್ತ ಆಶಾಕಿರಣವಾಗಿ ಕಂಡುದರಲ್ಲಿ ಅಚ್ಚರಿಯಿಲ್ಲ. ಒಮ್ಮೆ ಯೇಸು ಜೆರುಸಲೆಂ ನಗರವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಭಾರೀ ಜನಸಾಗರವೇ ಸೇರಿತ್ತು. ಆ ಜನರೆಲ್ಲ ಕೈಯಲ್ಲಿ ಗರಿಗಳನ್ನು ಹಿಡಿದದ್ದು ಮಾತ್ರವಲ್ಲದೆ ದಾರಿಯಲ್ಲಿ ಮಡಿ ಹಾಸಿ ಸಂಭ್ರಮ, ಹರ್ಷೋದ್ಗಾರದ ಗೀತೆಗಳೊಂದಿಗೆ ಯೇಸುವನ್ನು ಮೆರವಣಿಗೆಯಲ್ಲಿ ಕರೆದೊಯ್ದಿದ್ದರು ಎಂಬ ಉಲ್ಲೆೀಖ ಬೈಬಲ್ ಗ್ರಂಥದಲ್ಲಿ ಇದೆ. ಆದರೆ ಜೆರುಸಲೆಂ ಒಳಹೊಕ್ಕ ಮೇಲೆ ನಡೆದುದೇ ಬೇರೆ. ಯಾವ ಜನ ಜಯಕಾರ ಹಾಕಿ ಯೇಸುವನ್ನು ಸ್ವಾಗತಿಸಿದರೋ ಅದೇ ಜನ ಧಿಕ್ಕಾರ ಹಾಕಿ ಶಿಲುಬೆಗೆ ಏರಿಸಿದರು.

ಈ ಹಿನ್ನೆಲೆಯಲ್ಲಿ ನಡೆಯುವುದೇ ಗರಿಗಳ ಹಬ್ಬ. ಈ ವರ್ಷ ಇದನ್ನು  ಭಾನುವಾರ (ಏಪ್ರಿಲ್ 17) ಆಚರಿಸಲಾಗುತ್ತದೆ. ಈ ಆಚರಣೆಯು ದೊಡ್ಡ ಗುರುವಾರ, ಶುಭ ಶುಕ್ರವಾರ, ಪವಿತ್ರ ಶನಿವಾರಗಳ ಶೋಕ ಭರಿತ ಸಪ್ತಾಹಕ್ಕೆ ನಾಂದಿ ಹಾಡುತ್ತದೆ. ಮೃತ್ಯುಂಜಯ ಯೇಸುವಿನ ಪಾಸ್ಕ ಭಾನುವಾರದ ಶುಭೋದಯಕ್ಕೆ ಮತ್ತು ಎಲ್ಲಕ್ಕೂ ಮಿಗಿಲಾದ ಸಂತಸ ಸಂಭ್ರಮಕ್ಕೆ ಕಾಯುವಂತೆ ಪ್ರೇರೇಪಿಸುತ್ತದೆ

ಹೊಸ ಬೆಳಕಿನ ಈಸ್ಟರ್






ಕ್ರೈಸ್ತರ ಹಬ್ಬ ಎಂದರೆ ಮೊಟ್ಟ ಮೊದಲು ನೆನಪಿಗೆ ಬರುವುದು ಕ್ರಿಸ್‌ಮಸ್. ಏಸು ಕ್ರಿಸ್ತರ ಜನನದ  ಸಂಭ್ರಮದ ಹಬ್ಬವಾಗಿರುವುದರಿಂದ ಸಹಜವಾಗಿಯೇ ಧರ್ಮ, ಜಾತಿ ಮೀರಿದ ಮನ್ನಣೆ ಜನಪ್ರಿಯತೆ ಕ್ರಿಸ್‌ಮಸ್‌ಗಿದೆ.

ಆದರೆ ಕ್ರಿಸ್‌ಮಸ್ ರಂಗು ರಂಗಿನ ಹಬ್ಬವಾದರೆ ಪವಿತ್ರ ವಾರದ ಭಾನುವಾರದಂದು ಬರುವ ‘ಈಸ್ಟರ್’ ಕ್ರೈಸ್ತರಿಗೆ ನಿಜಕ್ಕೂ ಮಹತ್ವದ ಹಬ್ಬ. ಶನಿವಾರ ರಾತ್ರಿಯಿಂದಲೇ ಚರ್ಚ್‌ಗಳಲ್ಲಿ ನಡೆಯುವ ಅರ್ಥಗರ್ಭಿತ ಪ್ರಾರ್ಥನೆ ಹಾಗೂ ವಿಧಿವಿಧಾನಗಳನ್ನು ಒಳಗೊಂಡ ‘ಪಾಸ್ಕ’ ಜಾಗರಣೆಯಲ್ಲಿ ಭಾಗವಹಿಸುವುದರೊಂದಿಗೆ  ಕ್ರೈಸ್ತರು ಭಾನುವಾರ ಈಸ್ಟರ್ ಹಬ್ಬವನ್ನು ಸ್ವಾಗತಿಸುತ್ತಾರೆ.

 ಅಂತೆಯೇ ಇದರೊಂದಿಗೆ 40 ದಿನಗಳ ತಪಸ್ಸು ಕಾಲದ ತ್ಯಾಗ, ದೇಹ ದಂಡನೆಯ ವ್ರತ ಮುಕ್ತಾಯಗೊಳ್ಳುತ್ತದೆ.

ಆನಂದ ಸಂಭ್ರಮದ ವಾತಾವರಣ ಮೂಡುತ್ತದೆ. ಇದನ್ನು ಪಾಸ್ಕ ಹಬ್ಬ ಹಾಗೂ ಪುನರುತ್ಥಾನದ ಹಬ್ಬ ಎಂದೂ ಕರೆಯಲಾಗುತ್ತದೆ.

ದುಷ್ಟ ಜನರ ಒಳಸಂಚಿನಿಂದ ಅನ್ಯಾಯದ ತೀರ್ಪಿಗೆ ಒಳಗಾಗಿ ಶಿಲುಬೆಯಲ್ಲಿ ಘೋರವಾದ ಮರಣವನ್ನು ಹೊಂದಿದ ಏಸು ಕ್ರಿಸ್ತ ಮೂರನೆಯ ದಿನ ಮತ್ತೆ ಜೀವಂತವಾಗಿ ಎದ್ದು ಬಂದು ತಮ್ಮ ದೈವತ್ವವನ್ನು ತೋರ್ಪಡಿಸಿದರು ಎಂಬುದರ ಸಂಭ್ರಮದ ಆಚರಣೆಯೇ ಈಸ್ಟರ್.

ಏಸುವಿನ ಸಾವಿನಿಂದ ಭಯಪಟ್ಟು, ಅಧಿಕಾರಸ್ಥರ  ದರ್ಪದಡಿ ಎಲ್ಲಾ ಭರವಸೆಯನ್ನು ಕಳೆದುಕೊಂಡ ಶಿಷ್ಯರು ಹಾಗೂ ಹಿಂಬಾಲಕರಲ್ಲಿ ಸ್ವಾಮಿಯ ಈ ಪುನರುತ್ಥಾನ ಹೊಸ ಚೈತನ್ಯ, ಅಭಯವನ್ನು ನೀಡಿತು. ಅಲ್ಲದೆ ಕ್ರಿಸ್ತನ ಪ್ರೀತಿ ಶಾಂತಿಯ ಸಂದೇಶವನ್ನು ಎಲ್ಲೆಡೆ ಸಾರುವ ಸ್ಫೂರ್ತಿ ತುಂಬಿತ್ತು.

 ಬೈಬಲ್‌ನ ವಿಮೋಚನಾ ಕಾಂಡವೆಂಬ ಅಧ್ಯಾಯದಲ್ಲಿ  ದಾಸ್ಯತ್ವದಿಂದ ಬಳಲುತ್ತಿದ್ದ ತನ್ನ ಜನರನ್ನು ದೇವರು ಬಿಡಿಸಿ ಅವರನ್ನು ಹೊಸ ನಾಡಿಗೆ ಹೊಸ ಬದುಕಿನೆಡೆಗೆ ಕರೆದೊಯ್ದ ಸಂಗತಿಯ ನೆನಪಿನ ಅಚರಣೆಯೂ ಈ ಹಬ್ಬಕ್ಕೆ ತಳಕು ಹಾಕಿಕೊಂಡಿದೆ. ಹೀಗಾಗಿ ಈಸ್ಟರ್ ದೈವತ್ವದ ಪ್ರತಿಪಾದನೆ ಮಾತ್ರವಲ್ಲದೆ, ಹೊಸ ಜೀವನ, ಹೊಸ ಸೃಷ್ಟಿ, ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ  ಸಾವೇ ಅಂತಿಮ ಅಲ್ಲ ಎಂಬುದರ ಸಂಕೇತವೂ ಹೌದು ಎಂದು ವ್ಯಾಖ್ಯಾನಿಸುತ್ತದೆ ಕ್ರೈಸ್ತ ಸಿದ್ಧಾಂತ. ಈ ಎಲ್ಲಾ ಕಾರಣಗಳಿಂದ  ಮಹತ್ವದ ಹಬ್ಬ ಈಸ್ಟರ್.

ಕ್ರೈಸ್ತ ಜನಮನದಲ್ಲಿ ದೊಡ್ಡ ಹಬ್ಬ ಅಥವಾ ದೊಡ್ಡಬ್ಬ ಎಂದೇ ಪರಿಚಿತ. ಈ ಹಬ್ಬಕ್ಕೆ ನಿರ್ದಿಷ್ಟ ದಿನಾಂಕವಿಲ್ಲ. ಆದರೆ ಸಾಮಾನ್ಯವಾಗಿ ಮಾರ್ಚ್ ತಿಂಗಳ 20ರ  ತರುವಾಯ ಬರುವ ಪೌರ್ಣಿಮೆಯ ನಂತರದ ಭಾನುವಾರ ಆಚರಿಸಲಾಗುತ್ತದೆ. ಈ ಹಬ್ಬದ ನಂತರದ 50 ದಿನಗಳ ಅವಧಿಯನ್ನು ಪಾಸ್ಕ ಕಾಲವೆಂದು ಕರೆಯಲಾಗುತ್ತದೆ.

ಭರವಸೆಯ ಹಬ್ಬ
ಈಸ್ಟರ್ ಎಂದರೆ ಬೆಳಕಿನ ಹಬ್ಬ, ಅದಕ್ಕಿಂತಲೂ ಹೆಚ್ಚಾಗಿ ಅದು ಹೊಸ ಭರವಸೆಯ ಹಬ್ಬ.

ನಲವತ್ತು ದಿನಗಳ ‘ತಪಸ್ಸು ಕಾಲ’ದ ಬಳಿಕ ಈಸ್ಟರ್ ಸಂಭ್ರಮಕ್ಕೆ ಜನ ಚರ್ಚ್‌ಗಳಲ್ಲಿ ಸೇರುತ್ತಾರೆ ಶನಿವಾರ ರಾತ್ರಿ ದಿವ್ಯ ಬಲಿಪೂಜೆಗೆ ಮುಂಚಿತವಾಗಿ ಚರ್ಚ್‌ನ ಅಂಗಳದಲ್ಲಿ ಹಾಕಿದ ಹೊಸ ಬೆಂಕಿಯ ಸುತ್ತ ಜಮಾಯಿಸುತ್ತಾರೆ. ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸುತ್ತಾ ಆ ಬೆಂಕಿಯಿಂದ ತಮ್ಮ ಕೈಯಲ್ಲಿರುವ ದೊಡ್ಡ ಮೇಣದಬತ್ತಿಯನ್ನು ಬೆಳಗಿಸುತ್ತಾರೆ. ಅಲ್ಲಿರುವ ಭಕ್ತಾದಿಗಳು ಅದರಿಂದ ಮೇಣದಬತ್ತಿಯನ್ನು ಹೊತ್ತಿಸಿ ಚರ್ಚ್‌ನ ಒಳಗೆ ಪ್ರವೇಶಿಸುತ್ತಾರೆ. ಅಲ್ಲಿಯವರೆಗೆ ಚರ್ಚ್‌ನ ಒಳಗೆ ಗಾಢಾಂಧಕಾರ ನೆಲೆಸಿರುತ್ತದೆ. ಹೊಸ ಬೆಳಕಿನೊಂದಿಗೆ ಜನ  ಒಳಪ್ರವೇಶಿಸಿದ ಬಳಿಕವೇ ಚರ್ಚ್‌ನ ದೀಪಗಳನ್ನು ಉರಿಸಲಾಗುತ್ತದೆ. ಬಳಿಕ ಸಂಭ್ರಮದ ಈಸ್ಟರ್ ಬಲಿಪೂಜೆ ನಡೆಯುತ್ತದೆ. ಜನ ಹೊಸ ಭರವಸೆಯೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಾ ಬೆಳಕಿನ ಹಬ್ಬಕ್ಕೆ ಸ್ವಾಗತ ಕೋರುತ್ತಾರೆ.

Wednesday, 9 March 2011

ಅವರ ಸಾಧನೆಯ ಹಿಂದೆ ಕನ್ನಡದ ಭಾವ ಇತ್ತೆ ಎನ್ನುವುದೊಂದೇ ಪ್ರಶ್ನೆ!

ಇನ್ಫೋಸೀಸ್ ಎಂಬ ಸಾಫ್ಟ್‌ವೇರ್ ದೈತ್ಯ ಇಂದಿಗೂ ಅಚ್ಚರಿಯೇ. ಕೇವಲ ವ್ಯವಹಾರ/ ವ್ಯಾಪಾರ / ವಾಹಿವಾಟುವಾಗಿರದೆ, ಶಿಸ್ತು, ಸಂಕಲ್ಪ, ಸೌಹಾರ್ಧತೆ ಮತ್ತು ದಿಟ್ಟ ಪರಿಶ್ರಮದ ಫಲ ಇನ್‌ಫೋಸೀಸ್. ಮಾಹಿತಿ ತಂತ್ರಜ್ಞಾನದ ಜಾಗತಿಕ ಅಂಕಣದಲ್ಲಿ ಸ್ಪರ್ಧೆಗೆ ಎದೆ ಏರಿಸಿ ಸಾಧಿಸಿ ಸಾವರಿಸಿಕೊಂಡು ನಿಂತ ಬಹು ದೊಡ್ಡ ಸಂಸ್ಥೆ. ಇದರ ಹುಟ್ಟು -ಒಬ್ಬ ಹುಟ್ಟು ಹಟವಾದಿ ಎನ್ ಆರ್ ನಾರಾಯಣಮೂರ್ತಿಯಿಂದ ಆದದ್ದು ಮತ್ತು ಇವರು ಕನ್ನಡಿಗರು. 
ಆನೇಕಾನೇಕ ದೇಶಗಳಲಿ ಮಾಹಿತಿ ತಂತ್ರಜ್ಞಾನ ಎಂಬುದು ಆದಾಗಲೇ ಬೆಳೆದು ಕವಲೊಡೆದು ಆ ದೇಶಗಳ ಆರ್ಥಿಕತೆಗೆ ನೆರಳಾಗಿತ್ತು. ಆದರೆ ಇತ್ತ ಭಾರತದಲ್ಲಿ "ಜಾಗತಿಕರಣ"ವೆಂಬುದೇನೆಂದೆ ಪರಿಚಯವಿರದ ಕಾಲದಲ್ಲಿ "ಹೊರಗುತ್ತಿಗೆ"ಗೆ (outsourcing) ನಮ್ಮ ನೆಲವನ್ನು ಸಿದ್ಧ ಮಾಡಿಟ್ಟೂಕೊಂಡಿದ್ದರು ಶ್ರೀ ನಾರಾಯಣಮೂರ್ತಿರವರು. ಸಾಫ್ಟ್‌ವೇರ್ ತಂತ್ರಜ್ಞಾನವನ್ನು ತೊಡೆಮೇಲೆ (Laptop) ಇಟ್ಟು ಪೋಷಿಸಿದರು. IT ಜಗತ್ತಿನ ಭೂಪಟದಲಿ ಇಂದು ಬೆಂಗಳೂರು ಒಂದು ದೊಡ್ಡ ಬಿಂದು (ಕೇಂದ್ರ). ಇದು ನಿಜಕ್ಕೂ ನಮ್ಮವರು ಹೆಮ್ಮೆಪಡುವಂತಹ ವಿಷಯವೇ ಸರಿ. ಮಾತ್ರವಲ್ಲ ಈ ಬೆಳವಣಿಗೆ ದೇಶದ ಆರ್ಥಿಕ ಬೆಳವಣಿಗೆಗೆ ಪೂರಕ. ಇದಕ್ಕೆಲ್ಲ ಕಾರಣಿಭೂತರು ಶ್ರೀ ನಾರಾಯಣಮೂರ್ತಿರವರು ಎಂದು ಮತ್ತೊಮ್ಮೆ ತಿಳಿಯಪಡಿಸಲು ಇಚ್ಛಿಸುತೇನಾದರೂ ಇಂಥ ಸಾಧನೆಯ ಹಿಂದೆ ಅವರಿಗೆ ಕಿಂಚಿತ್ತಾದರೂ ಕನ್ನಡತನದ ಭಾವವಿತ್ತೆ ಎಂಬುವುದೊಂದೇ ಪ್ರಶ್ನೆ!.
ಆ ಸಾಧಕನ ಗೆಲುವಿನಲ್ಲಿ ಎಲ್ಲೂ ನಮ್ಮ ನೆಲ ನಮ್ಮ ಜನ ನಮ್ಮ ಭಾಷೆ ಅನ್ನುವ ಸಣ್ಣ ಸೆಳವು ಇರಲ್ಲಿಲ್ಲ..........:).  
ಮೊದಲನೆಯದಾಗಿ ನಮ್ಮ ನೆಲ : ಇನ್‌ಫೋಸೀಸ್ ಕಛೇರಿಯನ್ನು ಮೊದಲು ಪ್ರಾರಂಭಿಸಿದ್ದು ಪುಣೆಯಲ್ಲಿ. ಆಗ ಕಂಪನಿಯ ಮೊದಲ client ಆಗಿ ಮೈಕೋ -ಬೆಂಗಳೂರು ಆಯ್ಕೆಯಾದ ಕಾರಣಕ್ಕೆ ಕಂಪನಿಯ ಕಛೇರಿಯನ್ನು ಬೆಂಗಳೂರಿಗೆ ವರ್ಗಾಯಿಸುತ್ತಾರೆ ಇನ್ಫಿ ನಾಣಿ. ಇಲ್ಲಿ ತವರಿನ ಬಗ್ಗೆ ಇರಬಹುದಾದ ಯಾವ ವಾತ್ಸಲ್ಯವೂ ಕಾಣುವುದಿಲ್ಲ.  
ನಮ್ಮ ಜನ : ಇನ್ನೂ ಬೆಂಗಳೂರಿನಲ್ಲೇ ತನ್ನ ಸಾಮ್ರಾಜ್ಯವನ್ನು (head quarters) ವಿಸ್ತರಿಕೊಂಡ ಇನ್‌ಫೋಸೀಸ್ ಸಂಸ್ಥೆಯಲ್ಲಿ, ಕನ್ನಡಿಗರು ಭಾಷವಾರು ಶೇಕಡ ಹೆಚ್ಚು ಇರಬಹುದೆಂದು ಭಾವಿಸೋಣ. ಅದರಲ್ಲೂ 25% ಮಾತ್ರ. ಆದರೆ ಅದು ಸ್ಥಳೀಯರು ತನ್ನ ನೆಲದಲ್ಲೇ ಉದ್ಯೋಗ ಬೇಕು ಎಂದು ಕೆಲಸ ಅರಸಿ ಪಡೆದಿರಬಹುದಾದದ್ದು, ಇದು ಸರ್ವೇಸಾಮಾನ್ಯ. ಇಲ್ಲಿ ನಮ್ಮವರು ಎನ್ನುವ ಪ್ರೀತಿ ಎಲ್ಲಿದೆ?  
ನಮ್ಮ ಭಾಷೆ : ಕನ್ನಡಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂದ ಕವಿ ಕುವೆಂಪು ಕನ್ನಡದ ಕಟ್ಟಾಳುವಾಗಿದ್ದರು. ನಾರಾಯಣಮೂರ್ತಿಯವರು ಕನ್ನಡವನ್ನು ಮೂಟೆಕಟ್ಟಿ ಮೂಲೆಗಿಟ್ಟೂಬಿಟ್ಟರು. ಜಾಗತಿಕ ವಲಯದಲ್ಲಿ ಕನ್ನಡದಿಂದ ಏನೇನು ಮಾಡಲು ಸಾಧ್ಯವಿಲ್ಲ ಎಂದು ಬಿಟ್ಟರು. ಕಡೆಯಪಕ್ಷ ತಾನು ಕರ್ನಾಟಕ ಮಾತೆಯ ಕೂಸು, ಭಾರತ ಜನನಿ ನನ್ನ ಅವ್ವ ಎಂದು ಅಲ್ಲಿ ಇಲ್ಲಿ ಹೇಳಿಕೊಂಡಿದ್ದರೂ ಸಾಕಿತ್ತು ಹೊತ್ತ ತಾಯಿಗೆ ಸಂತೋಷವಾಗುತ್ತಿತು.  
ಕರ್ನಾಟಕ ಸರ್ಕಾರ ಸರಿಯಾದ ಸೌಲಭ್ಯ ಕಲ್ಪಿಸಿಕೊಡದಿದ್ದರೆ ನಮ್ಮ ಸಾಮ್ರಾಜ್ಯವನ್ನು ಇನ್ನೆಲಿಗೋ ವರ್ಗಾಯಿಸಿಬಿಡುತ್ತೇನೆ ಎಂದು ಗುಟುರಿದ್ದರು ಒಮ್ಮೆ. ಇಲ್ಲೆಲಿದೆ ಕನ್ನಡ ನೆಲದ ಮೇಲಿನ ಕಾಳಜಿ?. 
ಇಷ್ಟಾದರೂ 25 ವರ್ಷಗಳ ನಂತರ ನಡೆಯುತಿರುವ ವಿಶ್ವ ಕನ್ನಡ ಸಮ್ಮೇಳನ ಮಹೋತ್ಸವವನ್ನು ನಿಮ್ಮಿಂದ ಉದ್ಘಾಟಿಸಲು ಕನ್ನಡಿಗರು ಒಪ್ಪಿಕೊಂಡಿದ್ದಾರೆ. ಅವರ ಔದಾರ್ಯಕ್ಕೆ ಮನ್ನಣೆ ಕೊಟ್ಟು, ಮುಂದಾದರು ಕನ್ನಡಿಗರಾಗಿ ಎಂದು ನಿಮ್ಮಲಿ ನಮ್ಮ ಕಳಕಳಿ. 

- ಸಂತೋಷ್ ಇಗ್ನೇಷಿಯಸ್

Thursday, 16 December 2010

ಕಾವ್ಯ - ಕ್ರಿಸ್ಮಸ್ ದೀಪ

ದೀಪ ಹಚ್ಚಿದವರ್ಯಾರು?
ಈ ಕೂಪ ಬೆಳಕಾಗಲೆಂದೂ....!

ಕಿಚ್ಚು ಹತ್ತಿಸಿ ಕರುಬುತ್ತಿದ್ದ ಜನಕ್ಕೆ ಶಾಂತಿ ತಂದ ದೂತನಾರು?
ಕಿಲುಬಿದ್ದ ಮನಗಳಿಗೆ ಚೈತನ್ಯ ತುಂಬಿದ್ದವರ್ಯಾರು?
ತಾರುಣ್ಯ  ಚಿತ್ತದೆಡೆಗೆ ............
ಕಾರ್ಗತ್ತಲ ಮಬ್ಬು ತುಂಬಿ
ತಬ್ಬಿಬಾದ ಕುಲದ ನಡುವೆ
ದೀಪ ಹಚ್ಚಿದವರ್ಯಾರು? ಈ ಕೂಪ ಬೆಳಕಾಗಲೆಂದು....!
ಆಚಾರವಿಲ್ಲದ ಅನಾಚಾರ, ಕಾಟಚಾರ ಭ್ರಷ್ಟಾಚಾರಗಳನ್ನು
ಹಿಡಿದು ಹೊಸೆದು ಉರಿಗೊಳಿಸಿ
ಸತ್ಯ ತ್ಯಾಗ ಪ್ರೀತಿ ಪಸರಿಸುವ ಎಣ್ಣೆಯಿಂದ
ನಿತ್ಯ ಉರಿಯುವ ದೀಪ ಹಚ್ಚಿದವರ್ಯಾರು?
ಈ ಕೂಪ ಬೆಳಕಾಗಲೆಂದು....!
ಮಿಂಚಿನಾರ್ಭಾಟದ ಸಂಚಿನ ನಡೆಗೆ
ಕ್ಷುದ್ರ ಮನುಜನ ಛಿದ್ರ ಪರಿಗೆ ಅಂಜುತ್ತಿದ್ದ
ಮುಗ್ದ ಸ್ನಿಗ್ದ ದೀನರ ನಡುವೆ
ದೀನನಾಗಿ ಹುಟ್ಟಿದ ಈ ದೀಪ
ಹಚ್ಚಿದವರ್ಯಾರು? ಈ ಕೂಪ ಬೆಳಕಾಗಲೆಂದು....!

-ಸಂತೋಷ್
Read more!

Tuesday, 26 October 2010

"ಯಕ್ಕ ರಾಜ ರಾಣಿ ನನ್ನ ಕೈಯೊಳಗೆ ಹಿಡಿ" -ರಾಜಕೀಯದ ಹಾಡು

ಇತಿಚೆಗಷ್ಟೇ ಬಿಡುಗಡೆಗೊಂಡ ಬಿಡುಗಡೆಗೊ೦ಡು ಭರ್ಜರಿಯಾಗಿ ಪ್ರದರ್ಶನ ಕಾಣುತಿರುವ ಜಾಕಿ ಚಲನಚಿತ್ರ ದ "ಯಕ್ಕ ರಾಜ ರಾಣಿ ನನ್ನ ಕೈಯೊಳಗೆ ಹಿಡಿ" ಎಂಬ ಗೀತೆಗೆ ಹೊಸ ಸಾಹಿತ್ಯವನ್ನು ಬರೆಯಲಾಗಿದೆ. ಇದು ಕರ್ನಾಟಕ ರಾಜ್ಯ ರಾಜಕೀಯದ ಪ್ರಸ್ತುತ ವಿದ್ಯಮಾನದಲ್ಲಿ ರಾಜ್ಯದ ಮಾನ ಕಳೆಯುತಿರುವ ಮೂರು ಅಪವಿತ್ರ ಪಕ್ಷಗಳ ವಿಡಂಬನ ಪರಿಚಯವಾಗಿದೆ. ಈ ಕಾವ್ಯವನ್ನು "ಯಕ್ಕ ರಾಜ ರಾಣಿ ನನ್ನ ಕೈಯೊಳಗೆ ಹಿಡಿ"   ಗೀತೆ ಗೆಅನುಗುಣವಾಗಿ ಹಾಡಿಕೊಂಡು ಹೋದರೆ ಮತ್ತೂ ರುಚಿಕಟ್ಟಾಗಿರುತದೆ ಎಂದು ಭಾವಿಸುತೇವೆ.

ನಮ್ಮ ರಾಜ್ಯ ಕಮಲ ದಳ ಕೈ ಯೊಳಗೆ
ಹಿಡಿ ಮಣ್ಣು ಜನ್ರ ಬಾಯೊಳಗೆ
ರಾಜಕೀಯಕೆ ಥೂ ಅಂದು ಬಿಡು (೨)
ರಾಜ್ಯದ ಹರಾಜು ನೋಡಿಬಿಡು

ನೀತಿಯಲ್ಲಿ ದೊಡ್ಡವರು ನಿಯತ್ನಲ್ಲಿ ನೇತಾರರು
ಹೇಳಿಕೊಂಡು ಮಾಡಿದೆಲ್ಲ ದ್ರೋಹವನ್ನೇ
ಜೊತೆಲಿದವರು ಬಿಟ್ಟುಹೋದ್ರು ಪಕ್ಷವನ್ನೇ
ಮೂವತ್ತಿದ್ದರೂ ಪಕ್ಷದಲಿ
ನಡೆಯೊದ್ ಮಾತ್ರ ಮೂವರಲಿ

ಯಾರೊ ಇಲ್ಲಿ ಅಂದರ್ ಆದ್ರು
ಯಾರೊ ಇಲ್ಲಿ ಬಾಹ್ಯರ್ ಆದ್ರು (೨)
ಯಾರು ಕೇಳೋದಿಲ್ಲ ಅಂತ ಪಕ್ಷಬಿಟ್ಟು
ಇದನ್ ಕೇಳೋರಿಗೂ ಇಲ್ಲವಲ್ಲ ಮಾನಮಟ್ಟು
ಸಿಂಪಲ್ ಜನ ನಾವು ಸ್ಯಾಂಪಲ್ ಗ೦ತ ಓಟು ಕೊಟ್ಟು
ಸೀಮೆಗಿಲ್ದ ಪಕ್ಷವನ್ನು ತಂದುಬಿಟ್ವೀ
ಬರಿ ರೆಸಾರ್ಟ್ ರಾಜಕೀಯ ಮಾಡಿಬಿಟ್ರು
ಅಭಿವೃದ್ದಿ ನಮ್ಮ ಮಂತ್ರ ಎನ್ನುತಲಿ
ಅಪಾರ ಆಸ್ತಿ ಪಾಸ್ತಿ ನುಂಗಿಬಿಟ್ರು

ನಾಯಕತ್ವ ಬೇಕು ಅಂತ ನಾಯಿತರ ಕಚ್ಚಾಡ್ ಕೊಂಡು
ಗಲ್ಲಿಗೊಬ್ಬ ಲೀಡರ್ ಅಂತ ಮೆರಿತಾವ್ರೆ
ಆ ದಿಲ್ಲಿಗೋಗಿ ಚಾಡಿಯನ್ನ ಚುಚ್ಚುತಾವ್ರೆ
ಮಾತಿಗ್ಮುಂಚೆ ಪಾದಯಾತ್ರೆ ಮಾಡುತ್ತಾರೆ
ಮೈ ಕೈ ನೋವಂತ ಮಲಗ್ಬಿಡತಾರೆ

ಬಹಿರಂಗ ಸಭೆ ಮಾಡಿ ಬಡವ್ರನ್ ಮುಂದೆ ಕೂರಿಸ್ಕೊಂಡು
ಕುರಿ ಕೋಳಿ ಕಥೆಯನ್ನು ಊದುತಾರೆ
ಎಲ್ಲ ಹಗರ್ಣನು ಬಿಚ್ಚುತ್ತಿವಿ ಅನ್ನುತಾರೆ
ಹರ ಹರ ಎಂದರು ಬಿಚ್ಚೋದಿಲ್ಲ
ಮೂರು ಕಾಸಿಗೂ ಇವ್ರು ಬಾಳೋದಿಲ್ಲ 

ಇಂದ:  ಸಂತೋಷ್

Sunday, 5 September 2010

ಹಸಿವು

ಪ್ರೀತಿಯ ಅನು


ಹಸಿವಿಗೆ ಅನೇಕ ಮುಖಗಳಿವೆ... ಅದರ ಒಂದು ಮುಖ ಈ ಕಥೆಯಲ್ಲಿ ಕಾಣಬಹುದು...

ವಿಶ್ವಕಪ್ ಕ್ರಿಕೆಟ್ನ ಗಾಳಿ ಭಾರತದ ಮೂಲೆ ಮೂಲೆಗಳಿಗೆ ಬೀಸಿ, ತೊಟ್ಟಲಿನಿಂದ ಆಗತಾನೆ ಹೊರಬಂದ ಪೋರನ ಕೈಯಲ್ಲಿ ಕೂಡ ಬ್ಯಾಟ್ ಇರುವಂತೆ ಮೋಡಿ ಮಾಡಿ “Cricket is our religion, Sachin is our God”, ಎಂಬ ವಾಕ್ಯ ಎಲ್ಲೆಲ್ಲೂ ರಾರಾಜಿಸುವಂತೆ ಮಾಡಿತ್ತು. ಅದೇ ಸಮಯಕ್ಕೆ ಭಾರತದ ಕ್ರಿಕೆಟ್ ತಂಡವು ಪಾಕಿಸ್ಥಾನದ ಕ್ರಿಕೆಟ್ ತಂಡವು ಪಾಕಿಸ್ಥಾನದ ಕ್ರಿಕೆಟ್ ತಂಡದ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ, ಅದರ ವಿರುದ್ಧ ಗೆಲುವು ಸಾಧಿಸಿ ವಿಶ್ವಕಪ್ ಗೆದ್ದಷ್ಟೇ ಖುಶಿಯಲ್ಲಿತ್ತು ಯಾವ ತಂಡಕ್ಕಾದರೂ ಸೋಲಲಿ ನಮ್ಮ ಭಾರತ, ಆದರೆ ಪಾಕಿಸ್ತಾನದ ತಂಡಕ್ಕೆ ಮಣ್ಣು ಮುಕ್ಕಿಸಿದರೆ ಸಾಕು ಎನ್ನುವವರ ಬಾಯಿಗಳಿಗೆ ಈ ಗೆಲುವು ಆಹಾರವಾಗಿತ್ತು. ನನ್ನ ಹುಟ್ಟೂರಿಗೂ ಈ ಬಿಸಿ ತಾಗದೆ ಇರಲಿಲ್ಲ. ಊರಿನಲ್ಲಿ ಪ್ರತಿವರ್ಷನಡೆದು ಬಂದಂತೆ ಈ ಬಾರಿಯೂ ಒಂದು ಕ್ರಿಕೆಟ್ ಟೂರ್ನಮೆಂಟ್ ಪ್ರಾರಂಭವಾಗಿ, ಆಗಾಗಲೇ ಮೂರು ಪಂದ್ಯಗಳು ಮುಗಿದಿದ್ದವು. ಆ ಟೂರ್ನಮೆಂಟ್ನ ನಿಯಮದಂತೆ ಯಾವುದೇ ತಂಡ ಸೆಮಿಪೈನಲಿಗೆ ಅರ್ಹತೆ ಪಡೆಯಬೇಕಾದರೆ ಆಡುವ ಒಟ್ಟು ಮೂರು ಪದ್ಯಗಳಲ್ಲಿ ಎರಡು ಪದ್ಯಗಳ ಗೆಲುವು ಕಡ್ಡಾಯವಾಗಿತ್ತು.ನನ್ನ ಹುಟ್ಟೂರಿನ ತಂಡದವರು ಚೊಚ್ಚಲ ಪಂದ್ಯದಲ್ಲೇ ಸೋಲನ್ನನುಭವಿಸಿ ಇನ್ನುಳಿದ ಎರಡು ಪಂದ್ಯಗಳಲ್ಲಿ ಗೆಲ್ಲಲೇ ಬೇಕಾದ ಸಂದಿಗ್ದ ಪರಿಸ್ಥಿತಿಯಲ್ಲಿ ಸಿಲುಕಿ ಮಾಡು ಇಲ್ಲವೇ ಮಡಿ ಎಂಬ ಸಿದ್ದಾಂತಕ್ಕೆ ಬದ್ದರಾಗಿ ಗೆಲುವಿಗೆ ಕತ್ತನು ಕೊಯ್ದಿಡಲು ಸಿದ್ದರಿತುವಂತೆ ಕಣಕ್ಕಿಳಿದರು. ಈ ಎರಡನೆಯ ಪಂದ್ಯವನ್ನು ನಮ್ಮ ಊರಿನ ತಂಡದವರು ಪಕ್ಕದ ಹಳ್ಳಿಯ ವಿರುದ್ಧ ಆಡಬೇಕಾಗಿದ್ದುದು ಇನ್ನೊಂದು ವಿಪರ್ಯಾಸದ ಸಂಗತಿಯಾಗಿತ್ತು. ಇದಕ್ಕೆ ಮೂಲ ಕಾರಣ ಈ ಹಳ್ಳಿಗಳ ನಡುವೆ ಇದ್ದ ಹಾವು ಮುಂಗಿಸಿಯಂತಹ ಸಂಬಂಧ. ಸದಾ ಈ ಹಳಿಗಳ ನಡುವೆ ಘರ್ಷಣೆ ತಿಕ್ಕಾಟಗಳು ನಡೆಯುತ್ತಿದ್ದವು. ಈ ಕಾರಣಕ್ಕಾಗಿ ನನ್ನ ಹುಟ್ಟೂರನ್ನು ಭಾರತಕ್ಕೆ ಹೋಲಿಸಿ ಪಕ್ಕದ ಹಳ್ಳಿಯನ್ನು ಪಾಕಿಸ್ತಾನಕ್ಕೆ ಹೋಲಿಸುವ ವಾಡಿಕೆ ಜನರಲ್ಲಿ ಬೆಳೆದಿತ್ತು. ಈ ಎಲ್ಲಾ ಕಾರಣಗಳಿಂದ ಈ ಪ್ರಸ್ತುತ ಪಂದ್ಯ ಊರಿನ ಒಣ ಪ್ರತಿಷ್ಠೆಯನ್ನು ಉಳಿಸುವ ಪೈಪೋಟಿಯ ಪಂದ್ಯವಾಗಿತ್ತು.

ನನ್ನ ಹೂಟ್ಟೂರಿನ ತಂಡದ ನಾಯಕ ರಾಜು ಟಾಸು ಗೆದ್ದು ಫಿಲ್ಡಿಂಗ್ ಆರಿಸಿಕೊಂಡು ತೊಡೆ ತಟ್ಟಿ ಭೀಮನನ್ನು ಗದಾಯುದ್ಧಕ್ಕಾಗಿ ಅಹ್ವಾನಿಸಿದ ದುರ್ಯೋಧನನಂತೆ ಎದೆ ತಟ್ಟಿ ಮೈದಾನದಲ್ಲಿ ನಿಂತಿದ್ದನು.ಈ ಪಂದ್ಯದ ನಿರ್ಣಾಯಕನಾಗಿ ನಾನು ಮೂರು ವಿಕೆಟ್ಗಳ ನಡುವೆ ಕಣ್ಣರಳಿಸಿಕೊಂಡು ನಿಂತಿದ್ದೆ. ಪಾಕಿಸ್ಥಾನದ ಹೆಸರನ್ನು ಪಡೆದಿದ್ದ ಪಕ್ಕದ ಹಳ್ಳಿಯ ತಂಡ ೧೫ ನಿರ್ಧಿಷ್ಟ ಓವರ್ ಗಳಲ್ಲಿ ೭೯ ಓಟಗಳನ್ನು ಸಂಪಾದಿಸಿ ೮೦ ರನ್ನುಗಳನ್ನು ಮಾಡುವಂತೆ ನಮ್ಮ ಊರಿನ ತಂಡಕ್ಕೆ ಸವಾಲು ಎಸೆದಿತ್ತು. ಪದ್ಯ ನಡೆಯುವಾಗ ಜನರ ಕೂಗಾಟ ಮುಗಿಲು ಮುಟ್ಟಿತ್ತಿತ್ತು. ಈ ಪದ್ಯದ ಪ್ರೇಕ್ಷಕರು ಮೈಯೆಲ್ಲಾ ಕಣ್ಣಾಗಿಸಿಕೊಂಡು ಒಂಟಿ ಕಾಲುಗಳಲ್ಲಿ ನಿಂತು ಪಂದ್ಯವನ್ನು ವೀಕ್ಷಿಸುತ್ತಿದ್ದರು. ನಮ್ಮ ತಂಡದವರೂ ಕೂಡ ತೋಳಿನ ತೀಟೆ ತೀರಿಸಲು ಹತ್ತು ಓವರ್ ಗಳ್ಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ೫೦ ರನ್ ಗಳನ್ನು ಪಡೆದು, ಇನ್ನುಳಿದ ೫ ಓವರ್ಗಳಲ್ಲಿ ೩೦ ರನ್ಗಳನ್ನು ಮಾಡಬೇಕಾದ ಒತ್ತಡದ ಪರಿಸ್ಥಿಯಲ್ಲಿತ್ತು. ಇದರಿಂದ ಪಂದ್ಯವು ಇನಷ್ಟು ರೋಮಾಂಚಕವಾಗಿ ಜನರ ಕೂದಲು ನೆಟ್ಟಗೆ ನಿಲ್ಲುವಂತೆ ಮಾಡಿತ್ತು ಒಂದು ಮಾತಿನಲ್ಲಿ ಹೇಳಬೇಕಾದರೆ ನಮ್ಮ ತಂಡ ಜಾತಕ ಪಕ್ಷಿಯಂತೆ ಹಸಿದು ಕಾದಿತ್ತು.

ನನ್ನಲ್ಲೂ ನನ್ನ ಊರಿನ ತಂಡದವರು ಗೆಲ್ಲಬೇಕೆಂಬ ಆಸೆ ಹುಟ್ಟಿತಾದರೂ ನಿರ್ಣಾಯಕನಾಗಿ ಇನ್ನೊಬ್ಬರ ಕಣ್ಣಿಗೆ ಮಣ್ಣೆರಚುವ ಕೆಲಸ ಸರಿಯಲ್ಲ ಎಂದು ನನ್ನ ಮನಸ್ಸು ಪಿಸುಗುಟ್ಟಿತ್ತು.ಆದರೆ ಗೆಲುವಿನ ಹಸಿವು ಕಾಳ್ಗಿಚ್ಚಿನಂತೆ ವ್ಯಾಪಿಸಿ ನನ್ನ ಮನಸ್ಸನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಿತ್ತು. ನಮ್ಮೂರಿನ ತಂಡದವರು ೧೪ ಓವರ್ ಗಳಲ್ಲಿ ೭೫ ರನ್ ಗಳನ್ನು ಸಂಪಾದಿಸಿ ಇನ್ನುಳಿದ ಒಂದು ಓವರ್ ನಲ್ಲಿ ೫ ರನ್ ಗಳನ್ನು ಮಾಡಬೇಕಾದ ಪರಿಸ್ಥಿತಿ ಕುತ್ತಿಗೆಗೆ ಬಂದಿತ್ತು.
ನನ್ನಲ್ಲಿದ್ದ ಗೆಲುವಿನ ಹಸಿವು ಬೆನ್ನು ಹತ್ತಿದ ಬೇತಾಳನಂತೆ ಬಾಯ್ತೆರೆದು ನನ್ನ ಮನಸ್ಸನ್ನು ಗೊಂದಲಕ್ಕೆ ಸಿಲುಕಿಸಿತ್ತು. ಗೆದ್ದ ನಂತರ ಸಂಭವಿಸುವ ಘಟನೆಗಳನ್ನು ಮನಸ್ಸು ತೆರೆ ತೆರೆಯಾಗಿ ಕಣ್ಣ ಮುಂದೆ ಬಿಚ್ಚಿಸತೊಡಗಿತ್ತು. ವಿಜೇತ ನಾಯಕನ ಮೆರವಣಿಗೆ, ಜಯಘೋಷದ ಅಬ್ಬರ,ಊರ ಪ್ರತಿಷ್ಠೆ ಎಲ್ಲವೂ ಕ್ಷಣಮಾತ್ರದಲ್ಲಿ ನನ್ನನ್ನು ಮೋಡಿ ಮಾಡಿ ಕಲ್ಪನಾ ಲೋಕದಲ್ಲಿ ಮೈ ಮೆರೆಸಿ ಗೆಲುವಿನ ಹಸಿವಿನ ತೀವ್ರತೆಯನ್ನು ಹೆಚ್ಚಿಸಿತು. ಹೀಗೆ ಕಟ್ಟಿಕೊಂಡ ಆಸೆಗಳು ಹೊತ್ತುಕೊಂಡ ಕನಸುಗಳು ನನ್ನ ಮನಸ್ಸನ್ನು ಕಲುಕಿ, ನನ್ನ ಊರಿನ ತಂಡದವರನ್ನು ಗೆಲ್ಲಿಸುವ ಅಮಲಿನಲ್ಲಿರಿಸಿತ್ತು.

ಕಿವಿ ಕಿವುಡಾಗುವಂತಹ ಚಪ್ಪಾಳೆಗಳ, ಕೂಗಾಟಗಳ ಮಧ್ಯೆ ಪಂದ್ಯ ಮುಂದುವರೆಯಿತು. ನಮ್ಮೂರಿನ ತಂಡದವರು ೭೮ ರನ್ನುಗಳನ್ನು ಮಾಡಿ ಕೇವಲ ಒಂದು ಎಸೆತದಲ್ಲಿ ಎರಡೂ ರನ್ನುಗಳನ್ನು ಮಾಡಬೇಕಾದ ಸ್ಥಿತಿ ಕುತ್ತಿಗೆಗೆ ಬಂದಿತು. ಛೇ ಒಂದು ಎಸೆತದಲ್ಲಿ ನನ್ನ ಊರಿನ ತಂಡದವರು ಎರಡು ರನ್ ಮಾಡುವುದು ಆಕಾಶಕ್ಕೆ ಏಣಿ ಹಾಕುವಂತೆ ಎಂದು ಮನಸ್ಸು ಹೇಳತೊಡಗಿತ್ತು. ೬ನೇ ಎಸೆತ ಮಾಡುವ ಮುನ್ನವೇ ನೋ ಬಾಲ್ ಕೊಡಲು ನಿರ್ಧರಿಸಿದೆ.

ವಿರುದ್ಧ ತಂಡದವರು ಗುಂಪು ಕಟ್ತಿ ಏನೋ ಗೆಲ್ಲುವ ತಂತ್ರ ಮಾಡುತ್ತಿದ್ದರು. ನನ್ನ ಹುಟ್ಟೂರಿನ ತಂಡದ ಬ್ಯಾಟ್ ಮಾಡುತ್ತಿದ್ದ ಆಟಗಾರ ಸ್ವಲ್ಪ ಟೆನ್ಸ್ ಆಗಿದ್ದರೂ, ಎರಡು ರನ್ ಗಳಿಸುವ ಧೈರ್ಯ ಮತ್ತು ಅತ್ಮವಿಶ್ವಾಸ ಅವನ ಮುಖದಲ್ಲಿ ಎದ್ದುಕಾಣುತ್ತಿತ್ತು. ನನ್ನ ಎದೆ ಭಾರವಾಗಿ , ಗೆಲುವು ಎಲ್ಲಿ ನಮ್ಮ ತಂಡದವರ ಕೈ ಜಾರುತ್ತದೆಯೋ ಎಂಬ ಭಯ, ಅತಂಕ, ಅಪನಂಬಿಕೆ ನನ್ನ ಎದೆಯನ್ನು ಕೊರೆಯುತ್ತಿತ್ತು. ನನ್ನ ಗೆಲುವಿನ ಹಸಿವು ನನ್ನನ್ನು ತಪ್ಪು ದಾರಿಗೆ ಎಳೆದೊಯ್ಯುತ್ತಿದ್ದರೂ ನಾನು ಅದನ್ನು ತಪ್ಪೆಂದು ಭಾವಿಸಲಿಲ್ಲ. ಪ್ರೇಕ್ಷಕರೆಲ್ಲಾ ಪಿಟಿಕ್ ಅನ್ನದೆ ತಮ್ಮ ತಮ್ಮ ಕೈಗಳನ್ನು ಹಿಸುಕಿಕೊಳ್ಳುತ್ತಿದ್ದರು.ಪಕ್ಕದ ಹಳ್ಳಿಯ ತಂಡದವರೆಲ್ಲಾ ಚಾಣಾಕ್ಷರಂತೆ ಕೊನೆಯ ಚೆಂಡಿನ ಬಗ್ಗೆ ತಂತ್ರ ಹೂಡುತ್ತಿರಬೇಕಾದರೆ ನಾನು ಮೌನವಾಗಿ ‘ಏ ಮೂರ್ಖರೇ, ನಾನು ಈಗ ನೋಬಾಲ್ ಕೊಟ್ಟು ನನ್ನ ತಂಡದವರನ್ನು ಗೆಲ್ಲಿಸಲು ನಿರ್ಣಯಿಸಿರುವಾಗ ನಿಮ್ಮದೇನು ತಂತ್ರ?' ಎಂದು ನನಗೆ ಹೇಳಿಕೊಂಡೆ.

ಕೊನೆಯ ಬಾಲ್ ಹಾಕುವ ಮುನ್ನ ಎದುರು ತಂಡದ ನಾಯಕ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದ.ಆ ನೋಟ ಸಾಧಾರಣ ನೋಟವಾಗಿರಲಿಲ್ಲ. ಅದು ನನ್ನ ಹೃದಯದ ಸ್ವಾರ್ಥವೆಂಬ ಜ್ವಾಲಾಮುಖಿಯನ್ನು ಸ್ಫೋಟಿಸುವಂತಹ ಸಾಮರ್ಥ್ಯ ಹೊಂದಿತ್ತು. ತಕ್ಷಣ ಮನಸ್ಸು ಬೇರೊಂದು ಸಮಸ್ಯೆಯ ಬಲೆಗೆ ಸಿಲುಕಿ ಮೀನಿನಂತೆ ಒದ್ದಾಡುತ್ತಿತ್ತು. ಛೇ ಗೆಲುವಿನ ಹಸಿವಿಗಾಗಿ ಮೌಲ್ಯಗಳನ್ನು ಬಲಿಕೊಡುವುದೇ?॒ ನನ್ನ ಹಸಿವನ್ನು ನಿವಾರಿಸಲು ಇನ್ನೊಬ್ಬರ ಹೊಟ್ಟೆಗೆ ಕಲ್ಲು ಹಾಕುವುದೇ..? ಇದು ತಪ್ಪು.. ಎಂದು ಕೂಗಿ ಹೇಳತೊಡಗಿತ್ತು. ಮನಸ್ಸು ಸರಿ ತಪ್ಪುಗಳ ಘರ್ಷಣೆ, ತಿಕ್ಕಾಟದಲ್ಲಿ ಒಂದು ಮಹಾಭಾರತವೇ ಆಗಿ ರೋಸಿ ಹೋಗಿತ್ತು

“ದೇವರೇ, ನಾನು ಕೊನೆಯ ಬಾಲನ್ನು ನೋ ಬಾಲ್ ಎಂದು ಹೇಳಲೇ... ಬೇಡವೇ. . .” ಎಂಬ ಸಮಸ್ಯೆಯ ಬಿರುಗಾಳಿಗೆ ಸಿಕ್ಕಿ ತಬ್ಬಿಬ್ಬಾಗಿ ಏನೂ ತೋಚದೆ ಗ್ರಹಣ ಬಡಿದಂತವನಾದೆ

ಪಕ್ಕದ ಹಳ್ಳಿಯ ಬೌಲರ್ ಬಲ ತುದಿಯಿಂದ ಕೊನೆಯ ಚೆಂಡನ್ನು ಹಾಕಲು ಓಡಿ ಬರುತ್ತಿದ್ದಂತೆ, ನಾನು ಅವನನ್ನು ನೋಡಿದೆ. ನನ್ನ ಹೃದಯದ ಬಡಿತ ಹೆಚ್ಚಾಯಿತು. . . ಚೆಂಡನ್ನು ಹಾಕಿದಾಕ್ಷಣ... ನಾನು. . . ನನ್ನ ಆತ್ಮಸಾಕ್ಷಿಯಂತೆ ನಡೆದುಕೊಂಡೆ. ನನ್ನ ಊರಿನ ತಂಡದವನು ಒಂದು ರನ್ ಮಾಡಿ ಪಂದ್ಯವನ್ನು ಡ್ರಾದೊಂದಿಗೆ ಮುಕ್ತಾಯಗೊಳಿಸಿದ. . . ನನ್ನಲ್ಲಿ ಒಂದು ರೀತಿಯ ಶಾಂತಿ ಸಂತೂಷ ತೃಪ್ತಿ ನೆಲೆಸಿತು ಪ್ರೇಕ್ಷಕರಲ್ಲಿ ಮಿಶ್ರ ಭಾವನೆ ರೂಪುಗೊಂಡಿತ್ತು. ಆಟಗಾರರು ಅತೃಪ್ತಿಯಿಂದ ಹೆಜ್ಜೆಹಾಕಿದರು

ತಕ್ಷಣ ನನ್ನ ಮನಸ್ಸು ಹೇಳಿತು “ಹಸಿವು.. ಈ ಹಸಿವು ಯಾವ ರೀತಿಯದೇ ಇರಲಿ ನಮ್ಮನ್ನು ಏನೆಲ್ಲಾ ಮಾಡಿಸುತ್ತದೆ. ಹಣ ಆಸ್ತಿಯ ಹಸಿವು ಕೊಲೆ ಸುಲಿಗೆ ಮಾಡಿಸುತ್ತದೆ... ಗೌರವ ಪ್ರತಿಷ್ಟೆಯ ಹಸಿವು ಇನ್ನೊಬ್ಬರನ್ನು ತುಳಿದು ಬಿಡುತ್ತದೆ. ಕಾಮದ ಹಸಿವು ಎಷ್ಟೋ ಹೆಂಗಳೆಯರನ್ನು ಹಿಂಸಿಸುತ್ತದೆಯಲ್ಲಾ ಹೀಗೆ ಹಸಿವು. . . ಹಸಿವು.. .. ”
ಜೋವಿ

Wednesday, 16 June 2010

ತಮಸ್ಸು - ಕಾಡುವ ಚಿತ್ರ



ಇತ್ತೀಚೆಗೆ ತಾನೇ ’ಪೃಥ್ವಿ’ ಚಿತ್ರ್ರದಿಂದ ಕಂಡ ಭರವಸೆಯ ಬೆಳಕು ’ತಮಸ್ಸು’ವಿನಲ್ಲಿ ಮತ್ತಷ್ಟು ಪ್ರಕಾಶಮಾನವಾಗಿದೆ ಎಂದೇ ಹೇಳಬಹುದು.’ನಾನು ನನ್ನ ಕನಸು’ ನೋಡಿ ಇಂಥಹ ಕನಸುಗಳು ಇನ್ನಷ್ಟು ಬೀಳಲಿ ಎಂದು ಬಯಸುತ್ತಿದ್ದವರಿಗೆ ’ತಮಸ್ಸು’ ಎಂಬುದು ಒಂದು ಸ್ವಾಗತಾರ್ಹ ನನಸಾಗಿದೆ. ಇದೇನು ಅತ್ತ್ಯುತ್ತಮ ಚಿತ್ರವಿಲ್ಲದಿರಬಹುದು. ಅಲ್ಲಲ್ಲಿ ತನ್ನ ನಿಧಾನಗತಿಯಿಂದಾಗಿ flow ಕಳೆದ ಅನುಭವ ಕೊಡಬಹುದು, ಕೆಲವು ಸೂಕ್ಷ್ಮ ಸಂಗತಿಗಳನ್ನು ದಾಖಲಿಸುವಲ್ಲಿ ವಿಫಲವಾಗಿರಬಹುದಾದರೂ ಇದೊಂದು ವಿಭಿನ್ನವಾದ ಪ್ರಯತ್ನ ಹಾಗೂ ಕನ್ನಡದ ಮಟ್ಟಿಗೆ ನೆನಪಿನಲ್ಲಿ ಉಳಿಯುವಂಥ  ಚಿತ್ರವಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ.

ಚಿತ್ರದ ಕಥಾವಸ್ತು,concept  ಹಾಗೂ ಅಗ್ನಿ ಶ್ರೀಧರ್ ರವರ ಚಿಂತನೆಯೇ ಚಿತ್ರದ ದೊಡ್ಡ plus point. ಅದನ್ನು ಸಮರ್ಥವಾಗಿ ತೆರೆಗೆ ತರುವಲ್ಲಿ ಚಿತ್ರದ ಇತರ ವಿಭಾಗಗಳು ಶ್ರೀಧರ್ ರವರ ಕೈ ಜೋಡಿಸಿರುವ ರೀತಿ ಶ್ಲಾಘನೀಯ. ಚೊಚ್ಚಲ ಪ್ರಯತ್ನದಲ್ಲೇ ಶ್ರೀಧರ್ ತಾವೊಬ್ಬ ಸಮರ್ಥ ನಿರ್ದೇಶಕನಾಗುವ ಎಲ್ಲಾ ಲಕ್ಷಣಗಳನ್ನೂ ತೋರಿದ್ದಾರೆ. ಅವರದೇ ತಂಡದ ನಿರ್ಮಾಣಗಳಲ್ಲಿನ ತೊಡಗಿಸುವಿಕೆ ಹಾಗೂ ಅವರ ಅಪಾರವಾದ ಓದು ಅವರ ನಿರ್ದೇಶನಕ್ಕೆ ಸಹಾಯ ಮಾಡಿದೆ ಎಂದರೆ ತಪ್ಪಾಗಲಾರದೇನೋ. ಹಿಂದು-ಮುಸ್ಲಿಂ ಗಲಭೆಗಳ ಹಿನ್ನಲೆಯ ಕಥಾವಸ್ತುವಿದ್ದರೂ ನಿರ್ದೇಶಕರು ತೋರಿರುವ ಸಂಯಮ ಹಾಗೂ ವಿವಾದಾತೀತವಾದ ಕಸುಬುದಾರಿಕೆ ಮೆಚ್ಚತಕ್ಕದು.

ಇನ್ನೂ ಅಭಿನಯದ ವಿಭಾಗ ಚಿತ್ರವನ್ನು ಮತ್ತೊಂದು ಹಂತಕ್ಕೆ ಏರಿಸಿರುವುದು ಸ್ಪಷ್ಟವಾಗುತ್ತದೆ. ಪದ್ಮಪ್ರಿಯ, ಲೋಹಿತಾಶ್ವ, ಶೋಭರಾಜ್, ನಾಗರಾಜ್ ಮೂರ್ತಿ,ಆಸಿಫ್ ಮುಂತಾದವರ ಅಭಿನಯ ನಿಜಕ್ಕೂ top class.ನಾಜರ್ ತಮ್ಮ ಮೌನದಲ್ಲೇ ಮನ ಗೆಲ್ಲುತ್ತಾರೆ. ಇವೆಲ್ಲಕ್ಕೂ ಕಳವವಿಟ್ಟಂತ ಅಭಿನಯ ಶಿವಣ್ಣನದು. ಪ್ರಾರಂಭದ ಶೀರ್ಷಿಕೆಯಲ್ಲಿ ಬರುವ ’ಮಹಾನ್ ಕಲಾವಿದ’ ಎಂಬ ಬಿರುದನ್ನು ಸಮರ್ಥಿಸಲೋ ಎಂಬಂಥ ಅಭಿನಯ ನೀಡಿರುವ ಶಿವಣ್ಣ, ಎ.ಸಿ.ಪಿ. ಶಂಕರ್ ಆಗಿ ರೌದ್ರ, ಕ್ರೌರ್ಯ, ಸರಸ, ಪಶ್ಚಾತ್ತಾಪ ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಳ್ಳುತ್ತಾರೆ. ಅದರಲ್ಲೂ ನಾಜರ್ ಮನೆಯ ಕಿಟಕಿಯ ಸರಳುಗಳ ಹಿಂದೆ ಸುದೀರ್ಘವಾದ ಸಂಭಾಷಣೆಯಲ್ಲಿನ ಅಭಿನಯ, ಅವರು ನಟನೆಯಲ್ಲಿ ಬೆಳೆದು ನಿಂತಿರುವ ಪರಿಗೆ ಸಾಕ್ಷಿಯಾಗಿದೆ. ಈ ಚಿತ್ರದಿಂದ ಶಿವಣ್ಣನ ಮುಂದಿನ ದಿನಗಳೆಡೆಗಿನ ಜವಬ್ದಾರಿ ಮತ್ತಷ್ಟು ಹೆಚ್ಚಿದೆ.

ಚಿತ್ರದ ಹಾಡು ಹಾಗೂ ಹಿನ್ನಲೆ ಸಂಗೀತ ಉತ್ತಮವಾಗಿದ್ದೂ ನಿರ್ದೇಶಕ ಸಂದೀಪ್ ಚೌಟ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಆದರೆ ವಿರಾಮದ ನಂತರದ ಒಂದೆರೆಡು ಹಾಡು ಚಿತ್ರದ ಓಟವನ್ನು ಕುಂಠಿತಗೊಳಿಸುತ್ತದೆ ಎಂಬುದೂ ಅಷ್ಟೇ ನಿಜ. ಶೀರ್ಷಿಕೆ ಗೀತೆ ಹಾಗೂ ಅದರ ಚಿತ್ರಣವಂತೂ ಅದ್ಭುತ.ಸಂಭಾಷಣೆ ಶ್ರೀಧರ್ ರವರದೇ ಆಗಿರುವುದರಿಂದ ಚಿತ್ರದ ಒಟ್ಟು ಪರಿಕಲ್ಪನೆಗೆ ತಕ್ಕದಾಗಿದ್ದು, ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಛಾಯಾಗ್ರಹಣ ಇನ್ನಷ್ಟು ಪರಿಣಾಮಕಾರಿಯಾಗಿರಬಹುದಿತ್ತು ಎನಿಸಿದರೂ ಕೊರತೆಯಂತೂ ಕಾಣುವುದಿಲ್ಲ.

ಒಟ್ಟಿನಲ್ಲಿ ಒಂದು ಉತ್ತಮವಾದ ಚಿತ್ರವನ್ನು ಕೊಡುವಲ್ಲಿ ಚಿತ್ರಕ್ಕೆ ಸಂಬಂಧಪಟ್ಟ ಎಲ್ಲರ ಶ್ರಮ ಹಾಗೂ ಪ್ರೀತಿ ’ತಮಸ್ಸು’ವಿನಲ್ಲಿ ಎದ್ದು ಕಾಣುತ್ತದೆ ಎಂದರೆ ತಪ್ಪಾಗಲಾರದು ಹಾಗೂ ಅದಕ್ಕೆ ಅವರೆಲ್ಲರೂ ಅಭಿನಂದನೆಗೆ ಆರ್ಹರು.

Friday, 29 January 2010

ಅಭಿನಂದನೆ

ಭಾರತ ತಂಡಕ್ಕೆ ಆಯ್ಕೆಯಾದ ಕನ್ನಡ ಕುವರ
ಅಭಿಮನ್ಯು ಮಿಥುನ್ ಗೆ
ಸ್ವರಚಿತ್ತಾರ ಬಳಗದ ಅಭಿನಂದನೆ ಹಾಗೂ ಶುಭ ಹಾರೈಕೆಗಳು

Friday, 1 January 2010

ಹೊಸ ವರ್ಷದ ಶುಭಾಷಯಗಳು

ಸ್ವರಚಿತ್ತಾರದ ಓದುಗ ಬಳಗಕ್ಕೆ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಅಕ್ಷರ ಪ್ರೀತಿ ಮುಂದುವರೆಯಲಿ.